ಇನ್ನು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಹಸು ಮತ್ತು ದನಗಳನ್ನು ಸಾಕುವವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಕೆಎಸ್ಪಿಸಿಬಿ) ಅನುಮತಿ ಪತ್ರ ಪಡೆಯುವುದು ಕಡ್ಡಾಯ ಎಂದು ಅದು ಮಾರ್ಗಸೂಚಿ ಸಿದ್ಧಪಡಿಸಿರುವುದಾಗಿ ಪತ್ರಿಕೆಗಳು ವರದಿ ಮಾಡಿವೆ. ಅದರಂತೆ ಡೇರಿ ಫಾರಂಗಳು ಮತ್ತು ಗೋಶಾಲೆಗಳು ಸೆಗಣಿ, ಗಂಜಲ ಸಹಿತ ಘನತ್ಯಾಜ್ಯ ನಿರ್ವಹಣೆಗೆ ಜಲ ಕಾಯ್ದೆ 1974 ಮತ್ತು ವಾಯುಸಂರಕ್ಷಣೆ ಮಾಲಿನ್ಯ ನಿಯಂತ್ರಣ ಕಾಯ್ದೆ 1981ರ ಅನ್ವಯ ಡೇರಿ ಮತ್ತು ಗೋಶಾಲೆಗಳು ನಗರ, ಪಟ್ಟಣ, ಹಳ್ಳಿಗಳ ಸರಹದ್ದಿನಿಂದ ೨೦೦ ಮೀಟರ್ ದೂರದಲ್ಲಿರಬೇಕು, ಜಲಮೂಲಗಳಿಂದ ದೂರದಲ್ಲಿರಬೇಕು, ರಾಜ್ಯ ಮತ್ತು ರಾಷ್ಟ್ರ ಹೆದ್ದಾರಿಗಳಿಂದ ದೂರದಲ್ಲಿರಬೇಕೆಂಬ ಕಠಿಣ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಹೇಳಲಾಗಿದೆ.
ಈ ಹೊಸ ಮಾರ್ಗಸೂಚಿಗಳು ಈಗಾಗಲೇ ಕೃಷಿಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ರೈತರ ಮೇಲೆ ಮತ್ತಷ್ಟು ಹೊರೆಯಾಗಲಿವೆ. ಈ ಕುರಿತು ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿಯಲ್ಲಿ ಸಾವಯವ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಡಾ.ಮಹೇಂದ್ರ ಕೆ.ಆರ್ ಅವರ ಅನಿಸಿಕೆ ಇಲ್ಲಿದೆ.
ರಾಜ್ಯದಲ್ಲಿ ಡೈರಿ ಉದ್ಯಮವು ಸ್ವಾವಲಂಬನೆಯ ಕಲ್ಪವೃಕ್ಷವಾಗಿ ಬೆಳೆದಿದೆ.. ಬಹುತೇಕ ಡೈರಿಗಳು ಮಹಿಳಾ ಸ್ವ ಸಹಾಯ ಸಹಕಾರ ಸಂಘಗಳಿಂದ ನಡೆಯುತ್ತಿವೆ. ಜಾನುವಾರು ಸಾಕಣೆ ಮಹಿಳೆಯರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಡಗೊಳಿಸಿ ಎಲ್ಲರನ್ನು ಒಳಗೊಳ್ಳುವಂತೆ ಮಾಡಿದೆ.. ಸಾಮಾಜಿಕ ಸಹಬಾಳ್ವೆ ರೂಪಿಸುವಲ್ಲಿ ಡೈರಿ ಉದ್ಯಮದ ಮಾತ್ರ ಮಹತ್ವದ್ದು. ಜೊತೆಗೆ ಬರ, ನೆರೆ ಜೊತೆಗೆ ಸಮರ್ಪಕ ಬೆಲೆ ಸಿಗದೇ ಬಹಿಪಾಲು ನಷ್ಟವನ್ನೇ ಅನುಭವಿಸುವ ರೈತರಿಗೆ ದೈನಂದಿನ ಖರ್ಚು ಮತ್ತು ಮಕ್ಕಳ ವಿದ್ಯಾಭಾಸಕ್ಕೆ ಬಲ ತುಂಬುತ್ತಿರುವುದು ಕೂಡ ಇದೆ ಡೈರಿ ಉದ್ಯಮ.. ಭೂರಹಿತರು ಕೂಲಿ ಕಾರ್ಮಿಕರು ಕೂಡ ಜಾನುವಾರು ಸಾಕಣೆಯಿಂದ ತಮ್ಮ ಬದುಕು ಹಸನಾಗಿಸಿಕೊಂಡಿದ್ದಾರೆ..
ಆದರೆ ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ಅವೈಜ್ಞಾನಿಕ ಕಾನೂನು ಹೇರಿ ಸರ್ಕಾರ ಈ ಸ್ವಾವಲಂಬಿ ಜನರ ಬದುಕಿಗೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಲು ಹೊರಟಿದೆ. ವ್ಯವಸಾಯದ ಜೊತೆಗೆ ಹಸು ಎಮ್ಮೆ ಕೋಳಿ ಕುರಿ ಮೇಕೆ ಇನ್ನಿತರ ಜಾನುವಾರು ಸಾಕಿ ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದ ರೈತರ ಜೀವನಕ್ಕೆ ಅಂಕುಶ ಹಾಕಿ ಜನ ಸಾಮಾನ್ಯರಿಗೆ ಕಿರುಕುಳ ನೀಡಲು ಹೊರಟಿದೆ..
ಗೋಶಾಲೆ ಮತ್ತು ಡೈರಿಪಾರಂ ನಿಯಂತ್ರಿಸಲು ಸಾಧುವಲ್ಲದ ಅವೈಜ್ಞಾನಿಕ ಕಾನೂನು ರೂಪಿಸಿದೆ. ಆ ಕಾನೂನಿನ ಅನ್ವಯ ದನ ಜಾನುವಾರುಗಳನ್ನು ಸಾಕಾಣಿಕೆ ಮಾಡಬೇಕೆನ್ನುವ ಮಂದಿ ಸರ್ಕಾರದ ಕಠಿಣ ನಿಬಂಧನೆಗಳನ್ನ ಪೂರೈಸಲೇಬೇಕು. ಇದೆಲ್ಲ ಪೂರೈಸಲು ಹೊರಟರೆ ಜನರು ಡೈರಿ ಕಸುಬಿನಿಂದ ವಿಮುಖರಾಗುವ ಸಾಧ್ಯತೆಯೇ ಹೆಚ್ಚು.
ಇನ್ನು ಜಾನುವಾರುಗಳಿಂದ ಉಂಟಾಗುವ ಎಲ್ಲ ರೀತಿಯ ಘನ ದ್ರವ ತ್ಯಾಜ್ಯಗಳು ಸಾವಯವ ಸಂಯುಕ್ತಗಳಿಂದ ಪರಿಸರಕ್ಕೆ ಮಾರಕವೆನಿಸುವ ಹಾನಿಯಾಗುವುದಿಲ್ಲ. ಇವೆಲ್ಲ ವಿಘಟನೆ ಆಗುವ ಸಂಯುಕ್ತಗಳು. ಇನ್ನು ರಾಸುಗಳ ಗೊಬ್ಬರ ಮತ್ತು ಗಂಜಲವನ್ನ ಸಾವಯವ ವ್ಯವಸಾಯಕ್ಕೆ ಗೊಬ್ಬರದ ಮೂಲವನ್ನಾಗಿ ಬಳಸಬಹುದು ಮತ್ತು ಇವು ಪರಿಸರಕ್ಕೆ ಪೂರಕವಾದದ್ದು. ಇನ್ನು ಇಂತಹ ಗೊಬ್ಬರಗಳಿಂದ ಬೆಳೆದ ಬೆಳೆ, ಇನ್ನಿತರ ಮೂಲದಲ್ಲಿ ಬೆಳೆದ ಬೆಳೆಗಿಂತ ಹೆಚ್ಚಿನ ಗುಣಮಟ್ಟ ಹೊಂದಿರುತ್ತವೆ. ಇಷ್ಟೆಲ್ಲ ಅನುಕೂಲತೆ ಇದ್ದರು ಇದನ್ನ ನಿಯಂತ್ರಣ ಮಾಡಲು ಸರ್ಕಾರವೇ ಮುಂದಾಗಿರೋದು ಸಂಪೂರ್ಣ ಜನವಿರೋಧಿ ನಡವಳಿಕೆ.
ಜಾನುವಾರುಗಳಿಂದ ಉತ್ಪಾದನೆ ಆಗುವ ಹಾಲು, ಹಾಲಿನ ಪದಾರ್ಥಗಳು ಗಂಭೀರವೆನಿಸುವ ಯಾವುದೇ ಹಾನಿಕಾರಕ ರಾಸಾಯನಿಕ ಹೊಂದಿಲ್ಲ. ನಗರ ಪ್ರದೇಶಗಳಲ್ಲಿ ರಾಸಾಯನಿಕ ಔಷಧ ಆಟೋಮೊಬೈಲ್ ಮತ್ತು ಇ ತ್ಯಾಜ್ಯಗಳಿಂದ ಉಂಟಾಗುವ ವಿಷಪೂರಿತ ರಾಸಾಯನಿಕಗಳಾದ ಮರ್ಕ್ಯೂರಿ, ಅರ್ಸೆನಿಕ್, ಸಲ್ಪರ್ ನಂತಹ ವಿಷಪೂರಿತ ವಸ್ತುಗಳ ಬಿಡುಗಡೆ ಮತ್ತು ಹೊರಸೂಸುವಿಕೆಯನ್ನ ಪರಿಮಿತಿ ಪರಿಶೀಲಿಸದ, ಪರಿಶೀಲನೆ ನಾಟಕವಾಡಿ, ಪರಿಸರಕ್ಕೆ ಎಂತಹುದೇ ಅಪಾಯಕಾರಿ ರಾಸಾಯನಿಕ ಹೊರಸೂಸಿ ಜನರ ಜೀವಕ್ಕೆ ಎರವಾದರು ಕಾರ್ಪೊರೇಟ್ ಕುಳಗಳಿಂದ ಅಮೇದ್ಯ ತಿಂದು ಆ ಕಂಪನಿಗಳಿಗೆ ನಿರಪೇಕ್ಷ ಪ್ರಮಾಣ ಪತ್ರ ನೀಡಿ ಜೀವ ವೈವಿದ್ಯತೆಗೆ ಧಕ್ಕೆ ಉಂಟಾಗಿ ಮಾನವನು ಸಹ ಅಸ್ತಮಾ, ಶ್ವಾಸಕೋಶಕ್ಕೆ ಸಂಬಂದಿಸಿದ ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗುವ ಅವಕಾಶ ಇದ್ದರು ಕಣ್ಮುಚ್ಚಿ ಕುಳಿತಿರುವ ಮಾಲಿನ್ಯ ನಿಯಂತ್ರಣ ಮಂಡಳಿ, ರೈತರ ವಿಚಾರದಲ್ಲಿ ಮಾತ್ರ ರಾಕ್ಷಸೀಯ ಪ್ರವೃತ್ತಿ ಮೆರೆದಿದೆ..
ಇದಕ್ಕೆ ಅನುಗುಣವಾಗಿ ಕಳೆದ ಬಾರಿ ಪಾಲ್ಗೊಳ್ಳಲು ಉದ್ದೇಶಿಸಿದ್ದ RCEP ಒಪ್ಪಂದದ ಕುರಿತಾಗಿ ಏಷ್ಯದ ಇನ್ನಿತರ ದೇಶಗಳಾದ ಜಪಾನ್, ಮಲೇಷ್ಯಾ, ಥಾಯ್ಲೆಂಡ್ ಸಿಂಗಾಪುರ ಚೀನಾ, ಮಾರಿಷಸ್, ಕೊರಿಯಾ ಇನ್ನಿತರ ರಾಷ್ಟ್ರಗಳು ಭಾರತದ ಭಾಗವಹಿಸುವಿಕೆ ಬಗ್ಗೆ ಇನ್ನು ಮುಕ್ತ ಮನಸ್ಸು ಹೊಂದಿರುವದಾಗಿ ಹೇಳಿವೆ. ಇದಕ್ಕೆ ಪೂರಕವೆಂಬಂತೆ ಸಿಂಗಾಪುರ ಸಚಿವರು ಭಾರತದ ಭಾಗವಹಿಸುವಿಕೆ ಸ್ವಾಗತ ಮಾಡುವುದಾಗಿ ಹೇಳಿದ್ದಾರೆ.
ಈ ಒಪ್ಪಂದಕ್ಕೆ ಸಹಿ ಹಾಕುವ ಭಾಗವಾಗಿ ಸರ್ಕಾರ ರೈತರಿಗೆ ಅಂಕುಶ ಹಾಕಲು ಹೊರಟಿದೆಯೆ ಅನ್ನುವ ಅನುಮಾನ ಬಾರದೆ ಇರದು.
ಕೈಯಲ್ಲಿ ಶರಣು ಕಂಕುಳಲ್ಲಿ ದೊಣ್ಣೆ ಎನ್ನುವಂತೆ ಗೋಹತ್ಯೆ ನಿಷೇಧ ,ಗೋರಕ್ಷಣೆ ಬಗ್ಗೆ ಪುಂಖಾನುಪುಂಖವಾಗಿ ಬೊಗಳೆ ಬಿಡುವ, ಅದರಿಂದಲೇ ಅಧಿಕಾರದ ಸುಖ ಅನುಭವಿಸುತ್ತಿರುವ ಮಾರ್ಜಾಲ ವೇಷದ ಬಂಡವಾಳಶಾಹಿ ಪ್ಯಾಸಿಸ್ಟ್ ಸರ್ಕಾರ ಜನಸಾಮಾನ್ಯರ ಮೇಲೆ ಗಧಾ ಪ್ರಹಾರ ನಡೆಸಲು ಹೊರಟಿದೆ..
ಪ್ರಜಾಪ್ರಭುತ್ವ ಬೊಕ್ಕ ಬೋರಲು ಬಿದ್ದು ಫ್ಯಾಸಿಸಂ ಮೆರೆಯುತ್ತಿರುವ ಕಾಲದಲ್ಲಿ, ಜನವಿರೋಧಿ ರಾಕ್ಷಸೀಯ ಪ್ರವೃತ್ತಿ ಹೊಂದಿರುವ ಪ್ಯಾಸಿಸ್ಟ್ ಆಡಳಿತ ಕೋನೆಗಾಣಿಸಲು ಬೃಹತ್ ಜನಾಂದೋಲನ ರೂಪುಗೊಂಡು ಇಂತಹ ನೀತಿಗಳನ್ನು ವಿರೋಧಿಸಬೇಕಾದದ್ದು ಸದ್ಯದ ತುರ್ತು ಅಗತ್ಯಗಳಲ್ಲೊಂದು.
- ಡಾ. ಮಹೇಂದ್ರ ಕೆ.ಆರ್
(ತುಮಕೂರು ಜಿಲ್ಲೆಯ ಸಿರ ತಾಲೂಕಿನ ಗ್ರಾಮೀಣ ಪ್ರದೇಶದವರು, ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿಯಲ್ಲಿ ಸಾವಯವ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.. ವನ್ಯಜೀವಿ ಪರಿಸರ, ಕಾಡುಮೇಡಿನ ಅಲೆದಾಟ, ಹೊಸತನದ ಹುಡುಕಾಟ, ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಉಪಕಸುಬುಗಳು,ಕತೆ ಕಾದಂಬರಿ, ಮೂಲವಿಜ್ಞಾನದ ಕುರಿತಂತೆ ಇವರಿಗೆ ಹೆಚ್ಚಿನ ಆಸಕ್ತಿ.)
ಇದನ್ನೂ ಓದಿ: Explainer: ಕೃಷಿ ಮಸೂದೆಗಳಿಂದ ರೈತರಿಗೆ ಲಾಭವಾಗಲಿದೆಯೇ?



ಒಟ್ನಲ್ಲಿ ಸರ್ಕಾರ ರೈತರ ತಿಪ್ಪೆಗೂ ಕಂದಾಯ ಕಟ್ಟಿಸಿಕೊಳ್ಳುವ ಹಾಗಿದೆ. ಒಂದು, ಊರು ನಗರ, ಹೆದ್ದಾರಿ, ರೈಲ್ವೆ ಇದಕ್ಕೆಲ್ಲ ತಮ್ಮ ಜಮೀನು ಕೊಟ್ಟಿದ್ದೇ ರೈತರು. ಅವರು ಹಣವನ್ನು ಪಡೆದಿರಬಹದು ಕೆಲವು ಸಲ ದಾನವಾಗಿಯೂ ಕೊಟ್ಟಿರಬಹುದು.ಸರ್ಕಾರದ ಕೆಲಸಗಳಿಗೆ ಜಮೀನು ಕೊಡಲು ಇಷ್ಟವಿಲ್ಲದವರೂ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗದೆ ಬಿಟ್ಟು ಕೊಟ್ಟಿರಬಹುದು. ಹೀಗೆ ದೇಶದ ಅಭಿವೃದ್ಧಿಯಲ್ಲಿ ಹೆಚ್ಚಿನ ಪಾಲು ರೈತರಿಂದಲೇ ಆಗಿರುವಾಗ ಕಾನೂನುಗಳು ರೈತರಿಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು. ಒಬ್ಬ ಡಾಕ್ಟರ್, ಇಂಜಿನಿಯರ್, ಶಿಕ್ಷಕರು ಹೀಗೆ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇವರಿಗೆ ಪ್ರಿಯವಾದ ಕಂಪನಿಗಳು ಅವರು ತಮ್ಮ ತಮ್ಮ ದೇ ಒಂದೇ ಕೆಲಸ ಕೆಲಸ ಮಾಡಿಕೊಂಡು ಸಮೃದ್ದವಾಗಿರುತ್ತಾರೆ. ಆದರೆ ರೈತನಿಗೆ ಅವನು ಒಂದೇ ಕೆಲಸ ಅಂತಿಲ್ಲ ವ್ಯವಸಾಯದ ಜೊತೆಗೆ ಹಸು ಕೋಳಿ ಕುರಿ ಸಾಕಾಣಿಕೆ ಅದರ ಜೊತೆ ಕೂಲಿಕೆಲಸ ಎಲ್ಲಾ ಮಾಡಿದರೂ ಒಂದರಲ್ಲಿ ಆದಾಯ ಬಂದರೆ ಇನ್ನೊಂದರಲ್ಲಿ ನಷ್ಟ ಅನ್ನುವ ಸ್ಥಿತಿ. ಅದರಲ್ಲೂ ಸರ್ಕಾರ ಕೊಡುವ ಸವಲತ್ತುಗಳನ್ನು ಪಡೆಯಬೇಕೆಂದರೆ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕಛೇರಿಗಳಿಗೆ ಅಲೆಯಬೇಕು. ಇನ್ನೂ ಸರ್ಕಾರ ಇಂತಹ ಕಾನೂನುಗಳನ್ನು ತಂದರೆ ರೈತ ಬೆಳೆ ಬೆಳೀಬೇಕೋ ಇಲ್ಲ ತನ್ನ ಕಸುಬಿಗೆ ಸರ್ಕಾರದ ಅನುಮತಿಯ ಮುದ್ರೆ ಪಡೆಯಲು ಅಧಿಕಾರಿಗಳ ಬಳಿ ಅಲೆಯಬೇಕೋ?. ಲಾಸೋ ಲಾಭವೋ ಪ್ರಾಮಾಣಿಕವಾಗಿ ದುಡಿಮೆಗೆ ಹೊಂದಿಕೊಂಡಿರುವ ರೈತನಿಗೆ ದುಡೀಲಿಕ್ಕಾದರೂ ಬಿಡಬೇಕು. ಸವಲತ್ತು ಹಾಗೂ ಕಾನೂನುಗಳ ಹೆಸರಿನಿಂದ ಅವನ ದುಡಿಮೆಗೆ ಕಲ್ಲು ಹಾಕಬಾರದು.