ಒಂದು ಕಾಲದಲ್ಲಿ ನರ್ಮದಾ ನದಿಯವರೆಗೆ ವ್ಯಾಪಿಸಿದ್ದ ಕನ್ನಡ ನಾಡು ಕುಗ್ಗಿ ಕುಗ್ಗಿ ಇವತ್ತಿನ ಮಟ್ಟಕ್ಕೆ ಬಂದು ತಲುಪಿದೆ. ಕನ್ನಡದ ಪ್ರಾಚೀನ ಕೃತಿ ಕವಿರಾಜ ಮಾರ್ಗ ಕೃತಿಯಲ್ಲಿ ಗೋದಾವರಿ ನದಿಯವರೆಗೆ ಕನ್ನಡ ನಾಡು ವ್ಯಾಪಿಸಿ ಕೊಂಡಿತ್ತು ಎಂಬ ಉಲ್ಲೇಖವಿದೆ. ಹೀಗಿದ್ದ ನಾಡನ್ನು ಬ್ರಿಟಿಷರು ಹರಿದು ಹಂಚಿ ಹಾಕಿದ್ದರು. ನಮ್ಮ ಹಿರಿಯರು ಜಾತಿ, ಧರ್ಮಗಳನ್ನು ಮೀರಿ ತ್ಯಾಗ ಬಲಿದಾನಗಳ ಮೂಲಕ ನಾಡು ಏಕೀಕೃತವಾಗಲು ಕಾರಣವಾದರು. ಭಾವನಾತ್ಮಕವಾಗಿ, ಆಡಳಿತಾತ್ಮಕವಾಗಿ ಒಗ್ಗೂಡಲು ಕಾರಣವಾದರು. ನಾಡಿಗಾಗಿ ಪ್ರಾಣವನ್ನು, ಬದುಕನ್ನು ತ್ಯಾಗ ಮಾಡಿದ ಎಲ್ಲ ಹಿರಿಯರನ್ನು ಹೃದಯದಾಳದಿಂದ ಸ್ಮರಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕನ್ನಡ ರಾಜ್ಯೋತ್ಸವದ ಕುರಿತು ಸುದೀರ್ಘ ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಂದು ಮಟ್ಟಿಗೆ ಮಾತ್ರ ಇಂದು ನಾವು ಒಗ್ಗೂಡಿದ್ದೇವೆ. ದೇಶದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಜ್ಞಾನಸೃಷ್ಟಿಯಲ್ಲಿ ಸರೀಕ ರಾಜ್ಯಗಳ ಜೊತೆ ತಲೆ ಎತ್ತಿ ಬದುಕುವಂಥ ಸ್ಥಿತಿಗೆ ತಲುಪಿದ್ದೆವು. ಕನ್ನಡಿಗರು ಎಂಬ ಆತ್ಮ ವಿಶ್ವಾಸ ನಮ್ಮೊಳಗೆ ಹುಟ್ಟಿ ಮೊರೆಯಲು ಸಾಧ್ಯವಾಗಿತ್ತು. ಇದಕ್ಕಾಗಿ ಶ್ರಮಿಸಿದ ಎಲ್ಲರನ್ನೂ ನೆನಪಿಸಿಕೊಂಡು, ಕನ್ನಡಕ್ಕೆ ಇಂದು ಏನಾಗಿದೆ ಎಂದು ತುಸು ದೀರ್ಘವಾಗಿ ಪ್ರಸ್ತಾಪಿಸುತ್ತೇನೆ. ಕನ್ನಡಿಗರ ಜೀವನ್ಮರಣದ ಸಂಗತಿಯಾದ ಈ ವಿಚಾರಗಳನ್ನು ಮಾಧ್ಯಮಗಳು ಜನರ ಮನಸ್ಸಿಗೆ ತಲುಪಿಸಬೇಕೆಂದು ಕೋರುತ್ತೇನೆ. ಕಾಳಜಿ ಇರುವವರೆಲ್ಲ ಪಕ್ಷಾತೀತವಾಗಿ, ಜಾತಿ, ಧರ್ಮಗಳನ್ನು ಮೀರಿ ನಾಡಿನ ಹಿತ ಬಯಸಬೇಕೆಂದು ವಿನಂತಿಸುತ್ತೇನೆ ಎಂದಿದ್ದಾರೆ.
ದೇಶವು ಸಂವಿಧಾನವನ್ನು ಅಳವಡಿಸಿಕೊಂಡು 70 ವರ್ಷಗಳು ಕಳೆದು ಹೋದವು. ನಮ್ಮ ಸಂವಿಧಾನದಲ್ಲಿ ಎಲ್ಲೂ ಕೂಡ ಕೇಂದ್ರ ಅಥವಾ ಕೇಂದ್ರ ಸರಕಾರ ಎಂಬ ಪದಗಳನ್ನು ಬಳಸಿಲ್ಲ. ಒಕ್ಕೂಟ, ಒಕ್ಕೂಟ ರಾಜ್ಯ ವ್ಯವಸ್ಥೆ ಎಂದು ಕರೆಯಲಾಗಿದೆ. ಹಲವು ರಾಜ್ಯಗಳು ಸೇರಿ ಪರಸ್ಪರ ಪೂರಕ ವಾತಾವರಣವನ್ನು ನಿರ್ಮಿಸಿಕೊಂಡು ವಿವಿಧತೆಯಲ್ಲಿ ಏಕವಾದ ಮತ್ತು ಸಾರ್ವಭೌಮವಾದ ಸಮಾಜವಾದಿ ವ್ಯವಸ್ಥೆಯ , ಸರ್ವ ಧರ್ಮಗಳನ್ನು ಒಳಗೊಂಡ ಪ್ರಜಾಸತ್ತಾತ್ಮಕವಾದ ಗಣರಾಜ್ಯ ಎಂದು ಹೆಸರಿಸಲಾಗಿದೆ. ಸಂವಿಧಾನವೇ ನಮ್ಮನ್ನು ಕೈ ಹಿಡಿದು ನಡೆಸುವ, ಕೈ ದೀವಿಗೆಯಂತಹ ಗ್ರಂಥ. ಯಾವ ಸಂದೇಹಗಳಿಗೂ, ಗೊಂದಲಗಳಿಗೂ ಅವಕಾಶವಿಲ್ಲದಂತೆ ಆಡಳಿತ ನಡೆಸುವ ಮತ್ತು ಜನರು ಬದುಕುವ ಕುರಿತು ಸ್ಪಷ್ಟ ತಿಳಿವಳಿಕೆಯನ್ನು ನೀಡುವ ನಕಾಶೆಯಂತಹ ಗ್ರಂಥವಾಗಿದೆ. ರಾಜ್ಯಗಳು ಸಂವಿಧಾನ ಬದ್ಧವಾಗಿ ರಚನೆಯಾಗಿವೆ. ನಮ್ಮ ರಾಜ್ಯವೂ 1956 ರಲ್ಲಿ ಅಧಿಕೃತವಾಗಿ ಏಕೀಕೃತಗೊಂಡು ರಚನೆಯಾಗಿದೆ ಎಂದಿದ್ದಾರೆ.
ತೆರಿಗೆ ಹಂಚಿಕೆಯಲ್ಲಿ ಪಾಲು ಪಡೆಯುವ ರಾಜ್ಯಗಳಲ್ಲಿ 14 ನೇ ಹಣಕಾಸು ಆಯೋಗದ ಪ್ರಕಾರ 7ನೇ ಸ್ಥಾನದಲ್ಲಿದ್ದ ಕರ್ನಾಟಕ 15 ನೇ ಹಣಕಾಸು ಆಯೋಗದ ಶಿಫಾರಸ್ಸುಗಳಲ್ಲಿ 10 ನೇ ಸ್ಥಾನಕ್ಕೆ ಕುಸಿಯಿತು. ಇಡೀ ದೇಶದಲ್ಲಿಯೆ ಶೇ.1.067 ರಷ್ಟು ತೆರಿಗೆ ಕಡಿಮೆಯಾದ ಏಕೈಕ ರಾಜ್ಯ ಕರ್ನಾಟಕ. ಅಂದರೆ 100 ರೂಪಾಯಿಯಲ್ಲಿ ನಮಗೆ ಇದುವರೆಗೆ ಹತ್ತತ್ತಿರ 4.8 ರೂಪಾಯಿ ಸಿಗುತ್ತಿತ್ತು. ಈಗ ಅದು 3.64 ರೂಗಳಿಗೆ ಇಳಿದಿದೆ. ನಮ್ಮ ರಾಜ್ಯದ ಜನರು ಒಂದು ರೂಪಾಯಿ ತೆರಿಗೆ ಕಟ್ಟಿದರೆ ನಮಗೆ ವಾಪಸ್ಸು ಸಿಗುವುದು ಸರಿ ಸುಮಾರಾಗಿ 45 ಪೈಸೆ. ಅದೇ ಉತ್ತರದ ಕೆಲವು ರಾಜ್ಯಗಳಿಗೆ 2.80 ರೂಪಾಯಿಗಳ ವರೆಗೂ ಪಾಲು ನೀಡಲಾಗುತ್ತಿದೆ. ಇದು ನಮ್ಮ ರಾಜ್ಯಕ್ಕೆ ಬಗೆದ ಬಹಳ ದೊಡ್ಡ ದ್ರೋಹವಲ್ಲವೆ? ಕಷ್ಟದಲ್ಲಿರುವ ನಮಗಿಂತ ಹೆಚ್ಚು ಬಡತನದಲ್ಲಿರುವ ರಾಜ್ಯಗಳಿಗೆ ತುಸು ಹೆಚ್ಚು ಅನುದಾನವನ್ನು ಕೇಂದ್ರವು ತನ್ನ ಪಾಲಿನಲ್ಲಿ ಕೊಟ್ಟು ಕಾಪಾಡಬಹುದಾಗಿದೆ. ಆದರೆ ನಮ್ಮ ತೆರಿಗೆ ಪಾಲನ್ನು ನಮಗೆ ಸಮರ್ಪಕವಾಗಿ ನೀಡಿದರೆ ಸಾಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
45 ವರ್ಷಗಳಲ್ಲೇ ಕೇಳಿ ಕಂಡರಿಯದ ಬರಗಾಲ 2017 ರಲ್ಲಿ ರಾಜ್ಯಕ್ಕೆ ಬಂದೆರಗಿತ್ತು. ಆದರೆ ರಾಜ್ಯಕ್ಕೆ ಕೇಂದ್ರ ಕೊಟ್ಟಿದ್ದು 1435.95 ಕೋಟಿ ಮಾತ್ರ. ಇದೇ ವೇಳೆಯಲ್ಲಿ ಮಹಾರಾಷ್ಟ್ರಕ್ಕೆ 8195 ಕೋಟಿ. ಗುಜರಾತಿಗೆ 3894 ಕೋಟಿ, ರಾಜಸ್ತಾನಕ್ಕೆ 2153 ಕೋಟಿ ಕೊಟ್ಟರು. ಪ್ರವಾಹ, ಬರಗಾಲ, ಜಿಎಸ್ಟಿ ಏನೇ ಇದ್ದರೂ ಎಲ್ಲದರಲ್ಲೂ ರಾಜ್ಯಕ್ಕೆ ನಿರಂತರ ಅನ್ಯಾಯ ಮಾಡುವುದನ್ನು ಬಿಜೆಪಿ ಪಕ್ಷ ಸಂಪ್ರದಾಯದಂತೆ ಪಾಲಿಸಿಕೊಂಡು ಬರುತ್ತಿದೆ.
2017 ರಲ್ಲಿ ವಿಪರೀತ ಬರ ಬಂದೆರಗಿದ ಕಾರಣಕ್ಕೆ ರಾಜ್ಯ ಸರಕಾರ ರೈತರು ಸಹಕಾರ ಬ್ಯಾಂಕ್ ಗಳಿಂದ ಪಡೆದಿದ್ದ 8165 ಕೋಟಿ ಸಾಲವನ್ನು ಮನ್ನಾ ಮಾಡಲಾಯಿತು. 50 ಸಾವಿರದ ವರೆಗಿನ ಪ್ರತಿಯೊಬ್ಬ ರೈತರ ಸಾಲವನ್ನು ಮನ್ನಾ ಮಾಡಿದ್ದರಿಂದ ಇದರ ಲಾಭ ರಾಜ್ಯದ 22,27,506 ರೈತರಿಗೆ ದೊರೆಯಿತು. ಇತರೆ ವಾಣಿಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಪಡೆದ ಸಾಲವನ್ನೂ ಮನ್ನಾ ಮಾಡಲು ರಾಜ್ಯ ಸರಕಾರ ಮುಂದಾಗಿ ಕೇಂದ್ರದ ಸಹಕಾರ ಕೋರಿತು. ಆದರೆ ಮೋದಿ ಅವರು ರಾಜ್ಯದ ಜನರಿಗೆ ವಂಚಿಸುವ ಪರಿಪಾಠವನ್ನು ಮುಂದುವರೆಸಿದರು. ಯಾವ ನೆರವನ್ನೂ ನೀಡಲಿಲ್ಲ. ಆದರೆ ಕೆಲವೆ ಬಂಡವಾಳಿಗ, ಕೈಗಾರಿಕೋದ್ಯಮಿಗಳಿಗೆ ಆರ್ಥಿಕವಾಗಿ ಅನುಕೂಲವಾಗುವ ನೀತಿಗಳನ್ನು ಮಾತ್ರ ನಿರಂತರವಾಗಿ ಜಾರಿ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಓವರ್ ಹೆಡ್ ಟ್ಯಾಂಕಿನಲ್ಲಿ ನೀರಿದ್ದರೆ ನಲ್ಲಿಗಳಲ್ಲಿ ಬರುವ ನೀರಿಗಾಗಿ ನಾವು ಒಂದಿಷ್ಟು ಚೌಕಾಸಿ, ಜಗಳ ಎಲ್ಲ ಮಾಡಿಕೊಳ್ಳಬಹುದು. ಆದರೆ ನೀರಿನ ಟ್ಯಾಂಕನ್ನು ಖಾಲಿ ಮಾಡಿ ನಲ್ಲಿಗಳಲ್ಲಿ ಹೂಸು ಬಿಡುತ್ತಾ ಕೂತವರನ್ನು ನಂಬುವ ದುರಂತಕ್ಕೆ ನಮ್ಮ ಯುವಕರನ್ನು ತಳ್ಳಿದ್ದಾರಲ್ಲ ಇವರನ್ನು ಏನನ್ನುವುದು?. ದಮನಿತ ಸಮುದಾಯಗಳ ಪರಿಸ್ಥಿತಿ ಇಂದು ತೋಳದ ಬಳಿಗೆ ನ್ಯಾಯ ಹೇಳಲು ಹೋದ ಕುರಿಗಳಂತಾಗಿದೆ. ಇವರು ಖಂಡಿತ ಮೀಸಲಾತಿಯ ಪರ ಇರುವವರಲ್ಲ. ಹಾಗಾಗಿ ದಲಿತ. ಓಬಿಸಿ, ಕನ್ನಡ ಮಾಧ್ಯಮದಲ್ಲಿ ಕಲಿತವರು, ಗ್ರಾಮೀಣ ಪ್ರದೇಶದಲ್ಲಿ ಕಲಿತವರು, ಮಹಿಳೆಯರು, ಹಿಂದುಳಿದವರು, ವಿಶೇಷ ಚೇತನರು, ಮುಂದುವರಿದ ಜಾತಿಗಳಲ್ಲಿದ್ದು ಶೇ 10 ರಷ್ಟು ಮೀಸಲಾತಿ ಪಡೆಯುತ್ತಿರುವ ಆರ್ಥಿಕವಾಗಿ ಹಿಂದುಳಿದವರು ಮುಂತಾದವರೆಲ್ಲ ಮೀಸಲಾತಿ ಪ್ರಯೋಜನ ಪಡೆಯುತ್ತಿದ್ದಾರೆ. ಇವರೆಲ್ಲ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ತಮ್ಮ ಉಳಿವಿಗಾಗಿ ಪ್ರಬುದ್ಧ ರೀತಿಯಲ್ಲಿ ಪ್ರಶ್ನೆಗಳನ್ನೆತ್ತಬೇಕಾಗಿದೆ ಮತ್ತು ಪ್ರತಿಭಟಿಸಲೇಬೇಕಾಗಿದೆ. ಮಕ್ಕಳು, ಯುವಕರು ವಾಟ್ಸಾಪುಗಳ ಮೂಲಕ ಹರಿದು ಬರುವ ಸುಳ್ಳು ಸುದ್ಧಿಗಳನ್ನು ನಂಬಿಕೊಂಡು ಅಭಿಪ್ರಾಯ ರೂಪಿಸಿಕೊಳ್ಳಬಾರದು. ನಾಡ ಹಿರಿಯರು, ಚಿಂತಕರು ಬರೆದ ಪುಸ್ತಕಗಳನ್ನು ಓದುವುದು, ಮಾತುಗಳನ್ನು ಕೇಳುವುದರ ಮೂಲಕ ಕತ್ತಲಿನಿಂದ ಹೊರಗೆ ಬರಬೇಕು. ಬಿಜೆಪಿಯು ಜ್ಞಾನದ್ವೇಷಿ ಪಕ್ಷ. ಸಹಬಾಳ್ವೆ, ಶಾಂತಿ, ಪ್ರೀತಿಯನ್ನು, ಸೌಹಾರ್ದವನ್ನು ಇಷ್ಟ ಪಡುವುದಿಲ್ಲ. ಇವ ನಮ್ಮವ ಎನ್ನದೆ ಇವನಾರವ ಎನ್ನುವುದು ಅದರ ತತ್ವ. ಬಡವರ, ರೈತರ, ಕಾರ್ಮಿಕರ, ಮಹಿಳೆಯರ, ದಮನಿತರ ಏಳಿಗೆ ಬಯಸುವುದು, ರಾಜ್ಯಗಳನ್ನು ಶಕ್ತಿಯುತಗೊಳಿಸುವುದು ಮೊದಲ ದೇಶಪ್ರೇಮ ಎನ್ನುದನ್ನದು ಒಪ್ಪುವುದಿಲ್ಲ. ಜನರನ್ನು ಭಾವನಾತ್ಮಕವಾಗಿ ಕಟ್ಟಿ ಹಾಕುತ್ತಾ ಹಿಟ್ಲರನ ಜೊತೆಯಲ್ಲಿದ್ದ ಗೊಬೆಲ್ಸ್ ನಂತೆ ಸುಳ್ಳುಗಳನ್ನು ಪದೇ ಪದೇ ಹೇಳಿ ಕಾಗೆ ಬೆಳ್ಳಗಿದೆ ಎಂದು ನಂಬಿಸುತ್ತಿದ್ದಾರೆ. ಅರ್ಥ ಮಾಡಿಕೊಳ್ಳಬೇಕಾದವರು ಈಗ ಮೌನವಾದರೆ ನಮ್ಮ ಮುಂದಿನ ತಲೆಮಾರುಗಳ ಬದುಕು ಶಾಶ್ವತ ನರಕದಲ್ಲಿರುವಂತಾಗುತ್ತದೆ. ಬಿಜೆಪಿಯವರು ನರಕವನ್ನೇ ಸ್ವರ್ಗ ಎಂದು ಹೇಳಲು ಪ್ರಾರಂಭಿಸುತ್ತಾರೆ. ಈಗಾಗಲೇ ಅದನ್ನು ಪ್ರಾರಂಭಿಸಿದ್ದಾರೆ ಎಂದಿದ್ದಾರೆ.
ಒಂದು ರಾಜ್ಯವೆಂದರೆ, ಒಂದು ಭಾಷೆಯೆಂದರೆ ಗಡಿ, ಭೂಪಟ, ಧ್ವಜ ಮಾತ್ರವಲ್ಲ. ಅಲ್ಲಿ ಬದುಕುತ್ತಿರುವ ಜನರ ಹಿತಾಸಕ್ತಿಯನ್ನು ಕಾಪಾಡುವುದೇ ನಿಜವಾದ ರಾಜ್ಯೋತ್ಸವ. ರಾಜ್ಯೋತ್ಸವದ ಈ ಸಂದರ್ಭದಲ್ಲಿ ಕೆಲವೇ ವಿಚಾರಗಳನ್ನು ಜನರ ಮುಂದೆ ಇಡುವುದು ನನ್ನ ಕರ್ತವ್ಯ. ಈ ಮಾತುಗಳನ್ನು ನೀವು ಸಂಪೂರ್ಣ ಪರಾಮರ್ಶಿಸಿ ನೋಡಿ. ವಿಚಾರ ಮಾಡಿ ಒಪ್ಪಿಗೆಯಾದರೆ ಮಾತ್ರ ಸರಿಯೆನ್ನಿ. ಜ್ಞಾನವೇ ನಮ್ಮನ್ನು ಪೊರೆವ ಬಹಳ ದೊಡ್ಡ ಶಕ್ತಿ. ನಾಡಿನ ಹಿತಾಸಕ್ತಿ ರಕ್ಷಿಸಿಕೊಳ್ಳುವ ಮೂಲಕ ಜ್ಞಾನ- ವಿಜ್ಞಾನಗಳಲ್ಲಿ ದೇದಿಪ್ಯಮಾನವಾದ ನಾಡು ಕಟ್ಟೋಣ. ಅತ್ಯುತ್ತಮವಾದುದನ್ನು ಕಲಿಯುವ, ಒಳ್ಳೆಯ ಉದ್ಯೋಗ ಮಾಡುವ, ನಾಡಿನ ಜನರೆಲ್ಲ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ನಿರ್ಮಿಸೋಣ. ಈಗ ಬಂದಿರುವ ಗಂಡಾಂತರವನ್ನು ಪರಿ ಹರಿಸಲು ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಒಗ್ಗೂಡೋಣ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಸಾಲ ಮಾಡಿ ತಾವೇ ಹೋಳಿಗೆ ತಿನ್ನುತ್ತಿರುವ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ


