ಕೆಲವೊಮ್ಮೆ ನಾವು ರಸ್ತೆಯಲ್ಲಿ ಓಡಾಡುವಾಗ ರಸ್ತೆ ಬದಿಗೆ ಹರಿಸುವ ಒಂದು ಸಣ್ಣ ಗಮನ ಕೆಲವೊಬ್ಬರ ಜೀವನದಲ್ಲಿ ಭಾರಿ ಬದಲಾವಣೆ ತರಬಹುದು. ಇದಕ್ಕೆ ಉದಾಹರಣೆಯಾಗಿ ರಸ್ತೆಬದಿಯಲ್ಲಿ, ಬಿಸಿಲಿನಲ್ಲಿ, ಇಳಿವಯಸ್ಸಿನಲ್ಲಿ ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದ ವೃದ್ಧರನ್ನು ಗಮನಿಸಿ ಬರೆದ ಫೇಸ್ಬುಕ್ ಪೋಸ್ಟ್ ಆವರ ಬದುಕನ್ನು ಬದಲಾಯಿಸಿದೆ.
ಹೌದು, ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿ ಇರುವ ಜಾಕಿ ಶೋರೂಮ್ ಮುಂದೆ ಒಬ್ಬ ಅಜ್ಜ ಚಿಕ್ಕ ಚಿಕ್ಕ ಪ್ಯಾಕೇಟ್ಗಳಲ್ಲಿ ಗಿಡಗಳನ್ನು ಮಾರುತ್ತಿರುತ್ತಾರೆ. ಇವರು ಮಾರುವುದು ಎಲ್ಲಾ ಔಷಧಿಯ ಸಸ್ಯಗಳು ಎಂಬುದು ಗಮನಾರ್ಹ. ಆದರೆ ರಸ್ತೆಯಲ್ಲಿ ಓಡಾಡುವವರು ಇತ್ತ ಕಡೆ ಗಮನ ಇವರೆಡೆಗೆ ಹರಿಸುತ್ತಿದ್ದುದ್ದು ತುಂಬಾ ಕಡಿಮೆ.
ಈಗಿರುವಾಗ ಸುಡು ಬಿಸಿಲಿನಲ್ಲಿ ರಸ್ತೆಯಲ್ಲಿ ಕುಳಿತು ಗಿಡ ಮಾರುವ ಅಜ್ಜ, ಫೇಸ್ಬುಕ್ ಬಳಕೆದಾರ ಶಿವರಾಜ್ ಬಾಬು ಎಂಬುವರ ಕಣ್ಣಿಗೆ ಬಿದ್ದಿದ್ದಾರೆ. ಅಜ್ಜನ ಕುರಿತು 2 ಚಿತ್ರಗಳ ಜೊತೆಗೆ, ಸಹಾಯ ಮಾಡುವಂತೆ ಒಂದು ಮನವಿ ಪೋಸ್ಟ್ ಹಾಕಿದ್ದರು. ಅಜ್ಜನ ಬಳಿ ಇರುವ ಗಿಡಗಳ ಕುರಿತು, ರಸ್ತೆಯಲ್ಲಿ ಓಡಾಡುವಾಗ ಗಿಡ ತೆಗೆದುಕೊಂಡು ಸಹಾಯ ಮಾಡಿ ಎಂದಿದ್ದರು.
“ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿ ಇರುವ ಜಾಕಿ ಶೋರೂಮ್ ಮುಂದೆ ಕೂತಿರುವ ಈ ವೃದ್ಧನ ಹೆಸರು ರೇವಣ್ಣಸಿದ್ದಪ್ಪ. ಈ ವಯಸ್ಸಿನಲ್ಲೂ ಭಿಕ್ಷೆ ಬೇಡದೆ ದುಡಿಯುವ ಹುಮ್ಮಸ್ಸು. ಇತನ ಬಳಿ ಇರುವುದು ಔಷಧಿ ಗಿಡಗಳು ಹಾಗೂ ವಿವಿಧ ರೀತಿಯ ಗಿಡಗಳು. ದೊಡ್ಡ ಪತ್ರೆ, ಅಲೋವೆರಾ, ಕಾಮ ಸಂಜೀವಿನಿ, ಬ್ರಹ್ಮ ಕಮಲ ಇತ್ಯಾದಿ ಗಿಡಗಳು. ಈ ರಸ್ತೆಯ ಬಳಿ ನೀವು ಹೋಗುವಾಗ ದಯವಿಟ್ಟು ಈ ವೃದ್ಧರ ಬಳಿ ಇರುವ ಗಿಡಗಳನ್ನು ತೆಗೆದುಕೊಂಡು ಹೋಗಿ ಈತನಿಗೆ ಸಹಾಯ ಮಾಡಿ. ಕೇವಲ 10 ರಿಂದ 30 ರೂಪಾಯಿ ಮಾತ್ರ” ಎಂದು ಫೋಸ್ಟ್ ಶೇರ್ ಮಾಡಿದ್ದರು.
ಜೊತೆಗೆ “ನಂಬಿಕಸ್ತರಿಂದ ಮೋಸ ಹೋದೆವು ಎಂದು ಪ್ರಾಮಾಣಿಕರು ಚಿಂತಿಸಬೇಕಾಗಿಲ್ಲ!!! ಏಕೆಂದರೆ ಇತಿಹಾಸದಲ್ಲಿ ಉಳಿದಿರುವುದು ಪ್ರಾಮಾಣಿಕರೆ ಹೊರತು ಮೋಸಗಾರರಲ್ಲ!!!” ಎಂದು ಶೀರ್ಷಿಕೆ ಕೂಡ ನೀಡಿದ್ದರು. ಈ ಪೋಸ್ಟ್ ಎರಡು ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದರು. ಇದರ ಪ್ರತಿಫಲ ಇಂದು ಅಜ್ಜನ ಸ್ವಂತ ಪುಟ್ಟ ಅಂಗಡಿ ಆರಂಭವಾಗಿದೆ.
ಫೇಸ್ಬುಕ್ನಲ್ಲಿ ವಿಷಯ ತಿಳಿದ ಅನೇಕ ಮಂದಿ ವೃದ್ಧರ ಸಹಾಯಕ್ಕೆ ಮುಂದಾಗಿದ್ದಾರೆ. ನೆರಳಿಗಾಗಿ ಒಬ್ಬರು ದೊಡ್ಡ ಛತ್ರಿ ಒದಗಿಸಿದರೇ, ಇನ್ನೋಬ್ಬರು ಕುಳಿತುಕೊಳ್ಳು ಚೇರ್, ಗಿಡಗಳನ್ನು ಇಟ್ಟುಕೊಳ್ಳಲು ಟೇಬಲ್ ಹೀಗೆ ಅಜ್ಜನ ಹೊಸ ಪುಟ್ಟ ಅಂಗಡಿ ನಿರ್ಮಾಣವಾಗಿದೆ.
ನಟಿ, ಸಾಮಾಜಿಕ ಕಾರ್ಯಕರ್ತೆ ಸಂಯುಕ್ತ ಹೊರನಾಡು ತಮ್ಮ Change Makers of Kanakapura Road ತಂಡದ ಜತೆಗೂಡಿ ಆ ಅಜ್ಜನಿಗೆ ಒಂದು ಕೆನೊಪಿ, ಟೇಬಲ್ ಮತ್ತಿತರ ವಸ್ತುಗಳನ್ನು ಒದಗಿಸಿದ್ದಷ್ಟೇ ಅಲ್ಲದೇ ಸಂಯುಕ್ತ ಅವರು ಒಂದಷ್ಟು ಗಿಡಗಳನ್ನು ಖರೀದಿಸಿದ್ದಾರೆ. ನಾವು ಅಶ್ವಿನಿ ಎಂಬುವರ ಟ್ವೀಟ್ ಗಮನಿಸಿ ಸಹಾಯಕ್ಕೆ ಬಂದಿದ್ದಾಗಿ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ಅಜ್ಜ ಖುಷಿಯಲ್ಲಿದ್ದಾರೆ. ವೃದ್ಧರ ಬಗ್ಗೆ ಫೇಸ್ಬುಕ್ ಪೋಸ್ಟ್ ಮಾಡಿದ್ದ ಶಿವರಾಜ್ ಬಾಬು ಪೋಸ್ಟ್ ಶೇರ್ ಮಾಡಿ, ಅಜ್ಜನಿಗೆ ಸಹಾಯ ಮಾಡಿದ ಎಲ್ಲಾ ಬೆಂಗಳೂರು ಜನತೆಗೆ ಧನ್ಯವಾದ ಎಂದಿದ್ದಾರೆ.
ಇದನ್ನೂ ಓದಿ: ಗುಡ್ ನ್ಯೂಸ್: ಬೊಲಿವಿಯಾದಲ್ಲಿ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆ ಶೇ.50ಕ್ಕಿಂತಲೂ ಹೆಚ್ಚು!
“ಧನ್ಯವಾದ ಬೆಂಗಳೂರು…. ವೃದ್ದನಿಗೆ ಸಹಾಯ ಮಾಡಿದ ಪ್ರತಿಯೊಬ್ಬ ರಿಗೂ ಧನ್ಯವಾದಗಳು.. ಶೇರ್ ಮಾಡಿ. ಈ ವಿಷಯವನ್ನು ನಮ್ಮ ಬೆಂಗಳೂರು ಜನತೆಗೆ ತಲುಪಿಸಿ ಅವರಿಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು” ಎಂದಿದ್ದಾರೆ.
ಇಂತಹ ಪುಟ್ಟ ಪುಟ್ಟ ಪ್ರಯತ್ನಗಳು ಸಾಕು ನಮ್ಮ ನಡುವೆ ಇರುವ ಎಷ್ಟೋ ಜೀವಗಳಿಗೆ ಸಹಾಯ ಮಾಡಲು ಎನ್ನುತ್ತಾರೆ ನೆಟ್ಟಿಗರು. ನಮ್ಮೊಳಗೆ ಒಂದು ಮನಸ್ಸಿದ್ದರೇ, ಇನ್ನೊಬ್ಬರ ನೋವಿಗೆ ಆಸರೆಯಾಗುವ ಕೊಂಚ ಸಹನೆಯಿದ್ದರೇ ಸಾಕು, ನಾವು ದಾರಿಯಲ್ಲಿ ನೋಡುವ ಒಂದು ಚಿಕ್ಕ ಚಿತ್ರಪಟ ಕೂಡ ಮತ್ತೊಂದು ಆಯಾಮವನ್ನು ಸೃಷ್ಟಿಸುತ್ತದೆ.
ಫೇಸ್ಬುಕ್, ಟ್ವಿಟರ್ ಕೇವಲ ಮತ್ತೊಬ್ಬರನ್ನು ಟೀಕೆ ಮಾಡಲು, ಲೈಕ್, ಕಾಮೆಂಟ್ಗಳನ್ನು ಮಾಡಲು ಮಾತ್ರವಲ್ಲ ಈ ರೀತಿಯ ಜನಪರ ಕಾರ್ಯಗಳಿಗೂ ಬಳಕೆಯಾಗಲಿ ಎನ್ನುವುದೇ ವೃದ್ಧರಿಗೆ ಸಹಾಯ ಮಾಡಿದವರ ಅಭಿಪ್ರಾಯವಾಗಿದೆ.