ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ.
ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ರೂಪಮ್ ಬಲ್ಲವ್ (13) ಮತ್ತು ಸೌರವ್ ಚೌಧರಿ (8) ಗಾಯಗೊಂಡಿದ್ದಾರೆ.
ಪಾಂಡುವಾ ನೇತಾಜಿಪಲ್ಲಿ ಕಾಲೋನಿಯ ಕೊಳದ ಪಕ್ಕದಲ್ಲಿ ಮಕ್ಕಳ ಗುಂಪು ಆಟವಾಡುತ್ತಿದ್ದಾಗ ಗುಂಡಿಯೊಳಗೆ ಇದ್ದ ಸ್ಫೋಟಕ ಬ್ಲಾಸ್ಟ್ ಆಗಿದೆ. ಏಕಾಏಕಿ ಆ ಪ್ರದೇಶದಲ್ಲಿ ಭಾರೀ ಶಬ್ದ ಕೇಳಿ ಬಂದಿರುವ ಹಿನ್ನೆಲೆ ಸ್ಥಳಕ್ಕೆ ಜನರು ತೆರಳಿ ಪರಿಶೀಲಿಸಿದ್ದಾರೆ, ಈ ವೇಳೆ ಸ್ಥಳದಲ್ಲಿ ಕೆಲವು ಮಕ್ಕಳು ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡು ಬಂದಿದೆ. ಮೂವರು ಬಾಲಕರನ್ನು ಮೊದಲು ಪಾಂಡುವಾ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಬಿಸ್ವಾಸ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಇನ್ನಿಬ್ಬರು ಬಾಲಕರ ಸ್ಥಿತಿ ಗಂಭೀರವಾಗಿರುವ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಚುಂಚೂರ ಇಮಾಂಬರ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಇಂದು ಪಾಂಡುವಾದಲ್ಲಿ ಹೂಗ್ಲಿ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ರಚನಾ ಬ್ಯಾನರ್ಜಿ ಅವರನ್ನು ಬೆಂಬಲಿಸಿ ಚುನಾವಣಾ ರ್ಯಾಲಿಯನ್ನು ನಡೆಸಲಿದ್ದಾರೆ. ಈ ಮಧ್ಯೆ ಘಟನೆ ನಡೆದಿದೆ. ಈ ಕುರಿತು ಹೂಗ್ಲಿ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಿಜೆಪಿ ನಾಯಕ ಮತ್ತು ಹೂಗ್ಲಿಯ ಹಾಲಿ ಸಂಸದ ಲಾಕೆಟ್ ಚಟರ್ಜಿ ಅವರು ಪಾಂಡುವಾದಲ್ಲಿ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ್ದು, ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ ಭಾಗಿಯಾಗಿದೆ ಎಂದು ಆರೋಪಿಸಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಈ ಕಚ್ಛಾ ಬಾಂಬ್ ಸ್ಪೋಟ ಪ್ರಕರಣವು ಪ.ಬಂಗಾಳದಲ್ಲಿ ಆಡಳಿತರೂಡ ಟಿಎಂಸಿ ಮತ್ತು ವಿಪಕ್ಷ ಬಿಜೆಪಿ ನಡುವೆ ಅರೋಪ-ಪ್ರತ್ಯಾರೋಪಕ್ಕೆ ಸಾಕ್ಷಿಯಾಗುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಡೆಯಲಿದೆ. ಇದರಿಂದ ಮತಗಟ್ಟೆಗಳ ಸುತ್ತ ಬಿಗಿ ಭದ್ರತೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಇದನ್ನು ಓದಿ: ಹೇಮಂತ್ ಕರ್ಕರೆ ಆರೆಸ್ಸೆಸ್ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್