ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ ರಾಜ್ಯಪಾಲರು ತಮ್ಮ ವಿರುದ್ಧದ ತನಿಖೆಗೆ ಪೊಲೀಸರಿಗೆ ಯಾವುದೇ ಸಹಕಾರ ನೀಡದಂತೆ ಮತ್ತು ಯಾವುದೇ ಹೇಳಿಕೆ ನೀಡದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.
ಆರೋಪದ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ ಮತ್ತು ರಾಜಭವನದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಕೇಳಿದ್ದಾರೆ. ಪೊಲೀಸರು ಈ ಕುರಿತು ನಡೆಸುವ ಯಾವುದೇ ಸಂವಹನವನ್ನು ನಿರ್ಲಕ್ಷಿಸುವಂತೆ ರಾಜ್ಯಪಾಲರು ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗುರುವಾರ ಕೋಲ್ಕತ್ತಾದ ಹೇರ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಲಾಗಿತ್ತು. ಇದರ ಬೆನ್ನಲ್ಲಿ ರಾಜ್ಯಪಾಲರು ಪೊಲೀಸರಿಗೆ ರಾಜಭವನಕ್ಕೆ ಪ್ರವೇಶವನ್ನು ನಿರ್ಬಂಧಿಸಿದ್ದರು. ಬೋಸ್ ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ. ಅವರ ವಿರುದ್ಧ ದೂರು ದಾಖಲಾದ ಒಂದು ದಿನದ ನಂತರ ಅವರು ರಾಜಭವನದಿಂದ ಕೇರಳದ ಕೊಚ್ಚಿಗೆ ತೆರಳಿದ್ದಾರೆ.
ರಾಜಭವನ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಭಾರತದ ಸಂವಿಧಾನದ 361(2) ಮತ್ತು (3)ರ ಪ್ರಕಾರ, ಭಾರತದ ರಾಷ್ಟ್ರಪತಿ ಮತ್ತು ಯಾವುದೇ ರಾಜ್ಯದ ರಾಜ್ಯಪಾಲರು ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಯಿಂದ ಸಾಂವಿಧಾನಿಕ ವಿನಾಯಿತಿಯನ್ನು ಅನುಭವಿಸುತ್ತಾರೆ. ಆದ್ದರಿಂದ ರಾಜ್ಯ ಸರಕಾರವು ರಾಜ್ಯಪಾಲರ ವಿರುದ್ಧ ಯಾವುದೇ ರೀತಿಯ ಕ್ರಿಮಿನಲ್ ಮೊಕದ್ದಮೆಗಳ ತನಿಖೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಲಾಗಿದೆ.
2019ರಿಂದ ರಾಜಭವನದಲ್ಲಿ ಗುತ್ತಿಗೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು, ಏಪ್ರಿಲ್ 24 ರಂದು ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯದ ಅರೋಪ ಮಾಡಿದ್ದರು. ರಾಜ್ಯಪಾಲರನ್ನು ತನ್ನ ಬಡ್ತಿ ಕುರಿತು ಚರ್ಚಿಸಲು ಭೇಟಿಯಾದಾಗ ಅವರು ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ಹರೇ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೂ ಮೊದಲು ರಾಜಭವನದ ಪೊಲೀಸ್ ಔಟ್ಪೋಸ್ಟ್ಗೆ ಮಹಿಳೆ ದೂರು ನೀಡಿದ್ದರು ಎನ್ನಲಾಗಿದೆ.
ತೃಣಮೂಲ ಕಾಂಗ್ರೆಸ್ ಈ ಬಗ್ಗೆ ಪ್ರತಿಕ್ರಿಯಿಸಿ, ರಾಜಭವನದ ಪಾವಿತ್ರ್ಯತೆ ಕಳಂಕವಾಗಿದೆ ಎಂದು ಹೇಳಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸರ್ಕಾರದ ಬಗ್ಗೆ ಬೋಸ್ ಆಗಾಗ್ಗೆ ಟೀಕೆಗಳನ್ನು ಮಾಡುತ್ತಿದ್ದರು. ಅವರು ಬಿಜೆಪಿಯ ಅಣತಿಯಂತೆ ವರ್ತಿಸುತ್ತಿದ್ದಾರೆ ಎಂದು ಟಿಎಂಸಿ ಆರೋಪಿಸಿತ್ತು.
ರಾಜ್ಯಪಾಲರ ವಿರುದ್ಧ ಮಹಿಳೆ ನೀಡಿದ ದೂರಿನ ಬಗ್ಗೆ ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತನಿಖಾ ತಂಡವನ್ನು ರಚಿಸಿದ್ದಾರೆ. ಈ ತಂಡವು ವಿಶೇಷವಾಗಿ ಸಂತ್ರಸ್ತ ಮಹಿಳೆಯಿಂದ ತನಿಖೆಯನ್ನು ಆರಂಭಿಸಲಿದೆ. ಕೋಲ್ಕತ್ತಾ ಪೊಲೀಸರು ರಾಜ್ಯಪಾಲರ ಸಾಂವಿಧಾನಿಕ ವಿನಾಯಿತಿ ಬಗ್ಗೆ ಕಾನೂನು ತಜ್ಞರ ಜೊತೆ ಸಮಾಲೋಚನೆಯನ್ನು ಕೂಡ ನಡೆಸುತ್ತಿದ್ದಾರೆ.
ಈಗಾಗಲೇ ತನಿಖೆಯ ಭಾಗವಾಗಿ ಹರೇ ಸ್ಟ್ರೀಟ್ ಪೊಲೀಸ್ ಠಾಣೆಯ ಅಧಿಕಾರಿಗಳು ರಾಜಭವನದ ಮೂವರು ಅಧಿಕಾರಿಗಳು ಮತ್ತು ರಾಜ್ಯಪಾಲರ ಭವನದಲ್ಲಿ ನಿಯೋಜನೆಗೊಂಡ ಪೊಲೀಸ್ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ. ಆದರೆ ಅವರು ವಿಚಾರಣೆಗೆ ಹಾಜರಾಗಿಲ್ಲ. ಇಂದು ಮತ್ತೆ ಪೊಲೀಸ್ ಠಾಣೆಗೆ ಬರಲು ನಾವು ಅವರನ್ನು ವಿನಂತಿಸುತ್ತೇವೆ ಎಂದು ಪ್ರಕರಣದ ತನಿಖಾಧಿಕಾರಿ ಹೇಳಿದ್ದಾರೆ.
— Raj Bhavan Kolkata (@BengalGovernor) May 5, 2024