HomeದಿಟನಾಗರFACT CHECK : ಕೇರಳದ ಕಾಂಗ್ರೆಸ್ ನಾಯಕ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ರಾ?

FACT CHECK : ಕೇರಳದ ಕಾಂಗ್ರೆಸ್ ನಾಯಕ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ರಾ?

- Advertisement -
- Advertisement -

ಕೇರಳದ ಕಾಂಗ್ರೆಸ್ ನಾಯಕ ಪಿ.ಸಿ ಜಾರ್ಜ್ ಮುಸ್ಲಿಮರ ವಿರುದ್ದ ದ್ವೇಷ ಭಾಷಣ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಲ ಪಂಥೀಯ ಎಕ್ಸ್ ಬಳಕೆದಾರ ‘ಜಿತೇಂದ್ರ ಪ್ರತಾಪ್ ಸಿಂಗ್’ ವಿಡಿಯೋ ಹಂಚಿಕೊಂಡಿದ್ದು, ” ಮುಸ್ಲಿಂ ಉದ್ಯಮಿಗಳು ವಿವಿಧ ಬಗೆಯ ಔಷಧಗಳನ್ನು ಬೆರೆಸಿ ಹಿಂದೂ ಮತ್ತು ಕ್ರಿಶ್ಚಿಯನ್ನರನ್ನು ಬಲಹೀನರನ್ನಾಗಿಸಿ ಈ ದೇಶದ ಅಧಿಕಾರ ಹಿಡಿಯಲು ಯತ್ನಿಸುತ್ತಿರುವ ಕಾರಣ, ಕ್ರೈಸ್ತರು ಮತ್ತು ಹಿಂದೂಗಳು ಮುಸ್ಲಿಂ ರೆಸ್ಟೋರೆಂಟ್‌ಗಳಿಗೆ ಹೋಗಬಾರದು ಎಂದು ಕೇರಳ ಕಾಂಗ್ರೆಸ್ ಮುಖಂಡ ಪಿ.ಸಿ.ಜಾರ್ಜ್ ಹೇಳಿದ್ದಾರೆ. ಅವರು ಶ್ರೀಲಂಕಾದ ವೈದ್ಯರ ಹೆಸರನ್ನು ಸಹ ಹೇಳಿಕೆಗೆ ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ. ಅವರು ಹೇಳಿದ್ದರ ಬಗ್ಗೆ ಚರ್ಚೆಗೆ ಹೋಗದೆ, ಈ ವ್ಯಕ್ತಿ ಸಾಮಾನ್ಯ ವ್ಯಕ್ತಿಯಲ್ಲ, ಅವರು ಕೇರಳ ಸರ್ಕಾರದಲ್ಲಿ ಮಾಜಿ ಸಚಿವರಾಗಿದ್ದಾರೆ ಎಂಬುವುದನ್ನು ನೀವು ಯೋಚಿಸಬೇಕು” ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

ಪೋಸ್ಟ್ ಲಿಂಕ್ ಇಲ್ಲಿದೆ 

ಅನೇಕ ಎಕ್ಸ್‌ ಬಳಕೆದಾರರು ಇದೇ ರೀತಿಯ ಪೋಸ್ಟ್‌ಗಳನ್ನು ಹಾಕಿದ್ದಾರೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ಕೀ ವರ್ಡ್‌ಗಳನ್ನು ಬಳಸಿ ನಾವು ವಿಡಿಯೋ ಕುರಿತು ಮಾಹಿತಿ ಹುಡುಕಿದ್ದೇವೆ. ಈ ವೇಳೆ ಮೇ 1, 2022ರಂದು “PC George arrested for controversial remarks against muslims” ಎಂಬ ಶೀರ್ಷಿಕೆಯಲ್ಲಿ ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿ ಲಭ್ಯವಾಗಿದೆ.

ಈ ವರದಿಯಲ್ಲಿ, ಮುಸ್ಲಿಮರ ವಿರುದ್ದ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಕೇರಳದ ಹಿರಿಯ ರಾಜಕಾರಣಿ ಪಿ.ಸಿ ಜಾರ್ಜ್ ಅವರನ್ನು ಕೊಟ್ಟಾಯಂ ಜಿಲ್ಲೆಯ ಇರಟ್ಟುಪೆಟ್ಟದ ನಿವಾಸದಿಂದ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿತ್ತು.

ವರದಿಯ ಕೊನೆಯಲ್ಲಿ, “ಮುಸ್ಲಿಮರು ನಡೆಸುವ ರೆಸ್ಟೋರೆಂಟ್‌ಗಳಿಗೆ ಮುಸ್ಲಿಮೇತರರು ತೆರಳದಂತೆ ಹೇಳಿಕೆ ನೀಡುವ ಮೂಲಕ ಕೇರಳ ಕಾಂಗ್ರೆಸ್‌ನ ಮಾಜಿ ನಾಯಕ ಪಿ.ಸಿ ಜಾರ್ಜ್ ವಿವಾದ ಸೃಷ್ಟಿಸಿದ್ದಾರೆ. ಅನಂತಪುರಿ ಹಿಂದೂ ಮಹಾ ಸಮ್ಮೇಳನದ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಾರ್ಜ್ ಮುಸ್ಲಿಮರು ನಡೆಸುವ ರೆಸ್ಟೋರೆಂಟ್‌ಗಳ ಆಹಾರದಲ್ಲಿ ಔಷಧ ಹಾಕಿ ಮುಸ್ಲಿಮೇತರರನ್ನು ಬಲ ಹೀನರನ್ನಾಗಿ ಮಾಡುತ್ತಿದ್ದಾರೆ. ಈ ಮೂಲಕ ದೇಶವನ್ನು ತಮ್ಮ ವಶಕ್ಕೆ ಪಡೆಯಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಜಾರ್ಜ್ ಹೇಳಿದ್ದರು” ತಿಳಿಸಲಾಗಿತ್ತು.

ವರದಿ ಲಿಂಕ್ ಇಲ್ಲಿದೆ 

ಮೇ 1, 2022ರಂದು ‘ದಿ ಹಿಂದೂ’ “P.C. George arrested for hate speech, gets bail” ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ಸುದ್ದಿಯಲ್ಲಿ ಮುಸ್ಲಿಮರ ವಿರುದ್ದ ದ್ವೇಷ ಭಾಷಣ ಮಾಡಿದ್ದ ಹಿರಿಯ ರಾಜಕಾರಣಿ ಪಿ.ಸಿ ಜಾರ್ಜ್ ಅವರಿಗೆ ತಿರುವನಂತಪುರದ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ನೀಡಿದೆ ಎಂದು ತಿಳಿಸಿತ್ತು.

ಲಭ್ಯವಾದ ವರದಿಗಳ ಪ್ರಕಾರ ಮುಸ್ಲಿಮರ ವಿರುದ್ದ ಪಿ.ಸಿ ಜಾರ್ಜ್ ದ್ವೇಷ ಭಾಷಣ ಮಾಡಿರುವುದು ಹೌದು. ಅವರನ್ನು ಪೊಲೀಸರು ಬಂಧಿಸಿರುವುದು ಹೌದು. ಆದರೆ, ಇದು 2022ರಲ್ಲಿ ನಡೆದ ಘಟನೆಯಾಗಿದೆ.

ವರದಿ ಲಿಂಕ್ ಇಲ್ಲಿದೆ 

ಪಿ.ಸಿ ಜಾರ್ಜ್ ಕಾಂಗ್ರೆಸ್‌ ನಾಯಕರ?

ಪಿಸಿ ಜಾರ್ಜ್ ಅವರು 1982-87 ಮತ್ತು 1996-2021 ರವರೆಗೆ ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ಪೂಂಜಾರ್ ವಿಧಾನಸಭಾ ಕ್ಷೇತ್ರದಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕೊನೆಯದಾಗಿ 2016-2021 ರ ನಡುವೆ ಶಾಸಕರಾಗಿ ಅವರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಶಾಸಕರಾಗಿ ಸೇವೆ ಸಲ್ಲಿಸಿದ ಆರು ಅವಧಿಗಳಲ್ಲಿ, ಜಾರ್ಜ್ ಅವರು ಕೇರಳ ಕಾಂಗ್ರೆಸ್‌ನ ವಿವಿಧ ಬಣಗಳಿಂದ ಆಯ್ಕೆಯಾಗಿದ್ದರು.

2016ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪಿ.ಸಿ ಜಾರ್ಜ್ ಎಲ್‌ಡಿಎಫ್ ಮತ್ತು ಯುಡಿಎಫ್ ಅಭ್ಯರ್ಥಿಗಳನ್ನು 27,000 ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ, 2021ರ ವಿಧಾನಸಭೆ ಚುನಾವಣೆಯಲ್ಲಿ ಎಲ್‌ಡಿಎಫ್‌ ಅಭ್ಯರ್ಥಿ ಸೆಬಾಸ್ಟಿಯನ್‌ ಕುಳತುಂಕಲ್‌ ವಿರುದ್ಧ 16,000 ಮತಗಳ ಅಂತರದಿಂದ ಸೋತಿದ್ದರು. ಕೇರಳ ಕಾಂಗ್ರೆಸ್ (ಎಂ) ಸದಸ್ಯರಾಗಿ 2011 ರಿಂದ 2015 ರವರೆಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದ ಮುಖ್ಯ ಸಚೇತಕರಾಗಿಯೂ ಸೇವೆ ಸಲ್ಲಿಸಿದ್ದರು.

ಫೆಬ್ರವರಿ 2017ರಲ್ಲಿ, ರಾಜ್ಯ ವಿಧಾನಸಭೆಯ ಏಕೈಕ ಸ್ವತಂತ್ರ ಶಾಸಕರಾಗಿದ್ದ ಪಿಸಿ ಜಾರ್ಜ್, ಕೇರಳ ಜನಪಕ್ಷಂ ಎಂಬ ಹೊಸ ಪಕ್ಷವನ್ನು ಕಟ್ಟಿದ್ದರು. ಏಪ್ರಿಲ್ 2019ರಲ್ಲಿ ಕೇರಳ ಜನಪಕ್ಷಂ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು ಬೆಂಬಲಿಸಿತ್ತು. ಜಾರ್ಜ್ ಕಾಂಗ್ರೆಸ್ ಅಥವಾ ಸಿಪಿಎಂ ಜೊತೆ ಮೈತ್ರಿ ಮಾಡಿಕೊಂಡಿರಲಿಲ್ಲ.

ಜನವರಿ 2024 ರಲ್ಲಿ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಿ.ಸಿ ಜಾರ್ಜ್‌ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. ಜನವರಿ 31ರಂದು ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷ ವಿಲೀನಗೊಳಿಸಿ ಜಾರ್ಜ್ ಬಿಜೆಪಿ ಸೇರಿದ್ದರು.

ಇಲ್ಲಿ ಗಮನಾರ್ಹ ಸಂಗತಿಯೆಂದರೆ, ಕೇರಳದ ಕಾಂಗ್ರೆಸ್ ನಾಯಕ ಪಿ.ಸಿ ಜಾರ್ಜ್ ಎಂದು ಸುದ್ದಿ ಹರಡುತ್ತಿದೆ. ಆದರೆ, ಜಾರ್ಜ್ ಮುಸ್ಲಿಮರ ವಿರುದ್ದ ದ್ವೇಷ ಭಾಷಣ ಮಾಡಿದ್ದು 2022ರಲ್ಲಿ. ಆಗ ಅವರು ಕಾಂಗ್ರೆಸ್ ಪಕ್ಷದಲ್ಲಿ ಇರಲ್ಲಿ. ಕಾಂಗ್ರೆಸ್ ಮಾತ್ರವಲ್ಲ ಯುಡಿಎಫ್‌ ಮತ್ತು ಎಲ್‌ಡಿಎಫ್‌ ಒಕ್ಕೂಟಗಳಲ್ಲೇ ಇರಲಿಲ್ಲ. ಅವರ ಕೇರಳ ಜನಪಕ್ಷಂ 2019ರಲ್ಲೇ ಬಿಜೆಪಿ ನೇತೃತ್ವ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿದೆ. ಹಾಗಾಗಿ, ಕೇರಳದ ಕಾಂಗ್ರೆಸ್ ನಾಯಕ ಮುಸ್ಲಿಮರ ವಿರುದ್ದ ದ್ವೇಷ ಭಾಷಣ ಮಾಡಿದ್ದಾರೆ ಎಂಬುವುದು ತಪ್ಪು ಮಾಹಿತಿ.

ಇದನ್ನೂ ಓದಿ : FACT CHECK : ರಾಯಚೂರಿನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ಪತನ ಶುರು: ‘ಸೋನ್ ಪಾಪ್ಡಿ’ಯಿಂದ ಮೂವರಿಗೆ ಜೈಲು ಶಿಕ್ಷೆ

0
ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ...