ರಾಜ್ಯಕ್ಕೆ 1,200 ಮೆಟ್ರಿಕ್ ಟನ್ ಆಮ್ಲಜನಕವನ್ನು ಕೇಂದ್ರ ಪೂರೈಸಬೇಕು ಎಂದು ಹೈಕೋರ್ಟ್ ಹೇಳುತ್ತದೆ. ಕೇಂದ್ರ ಸರ್ಕಾರ `ನಮ್ ಕಡೆಯಿಂದ ಆಗಲ್ಲ’ ಎಂದು ಸುಪ್ರೀಂಕೋರ್ಟ್ ಮೊರೆ ಹೋಗುತ್ತದೆ. ಸುಪ್ರೀಂಕೋರ್ಟ್ ಕೇಂದ್ರದ ಅರ್ಜಿಯನ್ನು ತಿರಸ್ಕರಿಸಿ ರಾಜ್ಯ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯುತ್ತದೆ. ಇದೆಲ್ಲ ನಡೆಯುವಾಗ ನಮ್ಮ ಸಂಸದರ್ಯಾರೂ ಆಮ್ಲಜನಕದ ಬಗ್ಗೆ ಮಾತು ಎತ್ತಲಿಲ್ಲ. ಕೇಂದ್ರ ಸರ್ಕಾರ ನಮ್ಮ ರಾಜ್ಯದ ವಿರುದ್ಧವೇ ಅರ್ಜಿ ಸಲ್ಲಿಸಿದಾಗ ಕೂಡಾ ಈ ಸಂಸದರು ಮೌನ ಮುರಿಯಲಿಲ್ಲ.
ಇನ್ನು ಇಲ್ಲಿಯ ಸಚಿವರ ಬಗ್ಗೆ….ಅಗತ್ಯ ಆಮ್ಲಜನಕ ಪಡೆಯಲು ಈಗಿರುವ ಮಾರ್ಗ ಕೈಗಾರಿಕಾ ಮೂಲಗಳಿಂದ ಪಡೆದುಕೊಳ್ಳುವುದು. ಆದರೆ ಈ ಕುರಿತಂತೆ ಕೈಗಾರಿಕಾ ಸಚಿವ ಹುಬ್ಬಳಿಯ ಜಗದೀಶ್ ಶೆಟ್ಟರ್ ಒಮ್ಮೆಯೂ ಧ್ವನಿ ಎತ್ತಿಲ್ಲ. ಈ ಸರ್ಕಾರಕ್ಕೆ ಆಮ್ಲಜನಕದ ತುರ್ತು ಅಗತ್ಯದ ಬಗ್ಗೆ ಅರಿವು ಇಲ್ಲವೋ ಅಥವಾ ಅದು ಮೋದಿ ಹೆಸರಿಗೆ ಧಕ್ಕೆ ಬರಬಾರದೆಂದು ಕೇಂದ್ರವನ್ನು ಒತ್ತಾಯಿಸುತ್ತಿಲ್ಲವೋ? ಆಮ್ಲಜನಕದ ವ್ಯವಸ್ಥೆ ಮಾಡಬೇಕಿದ್ದ ಇಲ್ಲಿನ ಕೈಗಾರಿಕಾ ಸಚಿವರು ಎಲ್ಲಿ ಮಾಯವಾದರೋ ಎಂಬ ಪ್ರಶ್ನೆ ಈಗ ಜನರನ್ನು ಕಾಡುತ್ತಿದೆ.
ಇದನ್ನೂ ಓದಿ: ‘ಬೆನ್ನೆಲುಬಿಲ್ಲದ ಮೋದಿ’ ‘ಡೈಪರ್ ಸೂರ್ಯ ಎಕ್ಸ್ಪೋಸ್ಡ್’- ಟ್ವಿಟರ್ನಲ್ಲಿ BJP ವಿರೋಧಿ ಹವಾ!
ಹುಬ್ಬಳ್ಳಿಯಲ್ಲಿ ಜಾಗತಿಕ ಬಂಡವಾಳ ಸಮಾವೇಶ ಎಂಬ ‘ನಾಟಕ’ ಆಡಿದ ನಂತರ ಅವರೆಂದೂ ಕೈಗಾರಿಕೆಗಳ ಕುರಿತು ಒಂದು ನಿರ್ದಿಷ್ಟ ನಿಲುವು ತೋರಿಲ್ಲ. ಈಗ ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಉದ್ಯಮಿಗಳನ್ನು ಒಂದು ಕಡೆ ಕಲೆ ಹಾಕಿ ಸಬೆ ನಡೆಸಿ, ‘ಆಮ್ಲಜನಕ ಒದಗಿಸಿವುದು ನಿಮ್ಮ ಕರ್ತವ್ಯ, ಅದಕ್ಕೆ ಸರ್ಕಾರ ಹಣ ಕೊಡುತ್ತದೆ’ ಎಂದು ಒಮ್ಮೆಯೂ ಅವರು ಹೇಳಿಲಿಲ್ಲ. ಆದರೆ, ಅವರ ಬೀಗರಾದ ಮಂಗಳಾ ಅಂಗಡಿಯವರು ಬೆಳಗಾವಿ ಕೇತ್ರದಲ್ಲಿ ಗೆಲ್ಲುವಂತೆ ಮಾಡಲು ಎಲ್ಲ ಶಕ್ತಿ ಬಳಸಿದರು ಎನ್ನಲಾಗಿದೆ.
ಇಲ್ಲಿರುವ ವಿಡಿಯೋ ನೋಡಿ. ಇದು ಕೆಪಿಸಿಸಿ ಸದಸ್ಯ , ಹುಬ್ಬಳ್ಳಿ-ಧಾರವಾಡ ಯುವ ಕಾಂಗ್ರೆಸ್ ನಾಯಕ ಶಾಕೀರ್ ಸನದಿಯವರ ವಿಡಿಯೋ.
ಇದನ್ನೂ ಓದಿ: FAQ’s: ಕೊರೊನಾ ವ್ಯಾಕ್ಸಿನ್: ನಿಮಗೆ ಗೊತ್ತಿರಬೇಕಾದ ಸಂಗತಿಗಳು
ಶೆಟ್ಟರ್ ತಮ್ಮ ಬೀಗತಿ ಮಂಗಳಾ ಅಂಗಡಿಯವರ ಗೆಲುವಿನ ನಂತರ ಹುಬ್ಬಳ್ಳಿಯಲ್ಲಿ ಒಂದು ಪ್ರೆಸ್ಮೀಟ್ ಮಾಡಿ, ಕೊರೊನಾ ನಿರ್ವಹಣೆಯ ಬಗ್ಗೆ ಮಾತನಾಡಿ, ಒಂದು ಸಹಾಯವಾಣಿ ಸಂಖ್ಯೆ ನೀಡುತ್ತಾರೆ. ಮರುದಿನ ಅದು ಎಲ್ಲ ಪತ್ರಿಕೆಗಳ ಹುಬ್ಬಳ್ಳಿ ಆವೃತ್ತಿಯಲ್ಲಿ ಪ್ರಕಟವಾಗಿತು.
ಶಾಕೀರ್ ಸನದಿಯವರ ಒಬ್ಬ ಮಿತ್ರ ( ಅವರು ಪೈಲ್ವಾನ್) ಚಿಕಿತ್ಸೆಗಾಗಿ ಪರದಾಡಿದಾಗ, ಶಾಕೀರ್ ಶೆಟ್ಟರ್ ಕೊಟ್ಟ ನಂಬರ್ಗೆ ಫೋನು ಮಾಡುತ್ತಾರೆ. ಆ ಅಧಿಕಾರಿ ಡಿಎಚ್ಒ ನಂಬರ್ ಕೊಡುತ್ತಾರೆ. ಅವರು ಇನ್ನೊಂದು ನಂಬರ್ ಕೊಡುತ್ತಾರೆ. ಈ ರೀಲೇ ಆಟ ರಾಜ್ಯದ ಎಲ್ಲ ಕಡೆಯೂ ನಡೆಯುತ್ತಿದೆ. ‘ವೈದ್ಯಕೀಯ ಶಿಕ್ಷಣ ಇಲಾಖೆ ನಮ್ಮದು, ನಮಗೆ ಆರೋಗ್ಯ ಇಲಾಖೆ ಸಂಬಂಧ ಪಡುವುದಿಲ್ಲ’ ಎಂದು ಕೆಲವರು ಹೇಳುತ್ತಾರೆ. ಸಮನ್ವಯವೇ ಇಲ್ಲದ ಈ ಕಾಲದಲ್ಲಿ ಶಾಕೀರ್ ಅವರ ಸ್ನೇಹಿತ ಪೈಲ್ವಾನ್ ನಿಧನ ಹೊಂದಿದ್ದಾರೆ.
‘ಇತ್ತೀಚೆಗೆ ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಸಮೀಪದ ಸ್ಲಂ ಒಂದರ ಮಹಿಳೆ ಪಾಸಿಟವ್ ಆಗಿ ಆಸ್ಪತ್ರೆ ಸೇರಿದ್ದರು. 14 ದಿನದ ನಂತರ ಅವರಿಗೆ ನೆಗೆಟಿವ್ ಎಂದು ವರದಿ ನೀಡಿ ಮನೆಗೆ ಕಳಿಸಿದರು. ಮರುದಿನವೇ ಅವರು ತೀರಿ ಹೋದರು. ಅದರ ಮರುದಿನ ಪಕ್ಕದ ಮನೆಯ ಒಬ್ಬರು ಕೊರೊನಾದಿಂದ ಅಸು ನೀಗಿದರು…ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತರನ್ನು ಭೇಟಿಯಾಗಿ ಕೇಳಿದರೆ, ಅವರು ವೈದ್ಯರ ಪರ ನಿಂತರೆ ಹೊರತು ರೋಗಿಗಳ ಪರವಲ್ಲ’ ಎಂದು ಶಾಕೀರ್ ನಾನುಗೌರಿ. ಕಾಂ ಗೆ ತಿಳಿಸಿದರು.
ಇದನ್ನೂ ಓದಿ: ‘ನಮ್ಮ ಮಾತನ್ನೂ ಕೇಳಿ’- ಪ್ರಧಾನಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಾರ್ಖಂಡ್ ಸಿಎಂ