Homeಮುಖಪುಟರಾಜ್ಯಕ್ಕೆ ಆಮ್ಲಜನಕ ನೀಡುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಆದೇಶ- ’ಬೆಡ್’ ವಿಚಾರದಲ್ಲೇ ಇರುವ BJP ಸಂಸದರು!

ರಾಜ್ಯಕ್ಕೆ ಆಮ್ಲಜನಕ ನೀಡುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಆದೇಶ- ’ಬೆಡ್’ ವಿಚಾರದಲ್ಲೇ ಇರುವ BJP ಸಂಸದರು!

ಪತ್ರಕರ್ತರ ಫೋನ್‌ ಕರೆಗೆ ಬಿಜೆಪಿ ಸಂಸದರು ಮತ್ತು ನಾಯಕರು ಹೇಳಿದ್ದೇನು?

- Advertisement -
- Advertisement -

“ರಾಜ್ಯಕ್ಕೆ ಆಮ್ಲಜನಕ ನೀಡುವ ಬಗ್ಗೆ ಕರ್ನಾಟಕ ಹೈಕೋರ್ಟ್ ಆದೇಶವು ಎಚ್ಚರಿಕೆಯಿಂದ ಕೂಡಿದ್ದು, ಎಲ್ಲ ಆಯಾಮ, ಅಂಕಿಸಂಖ್ಯೆಗಳನ್ನು ಒಳಗೊಂಡಿದೆ. ಇದರ ವಿರುದ್ಧದ ಕೇಂದ್ರದ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ” ಎಂದು ಸುಪ್ರೀಂಕೋರ್ಟ್ ಇಂದು ಶುಕ್ರವಾರ ಹೇಳಿದೆ. 1,200 ಮೆಟ್ರಿಕ್ ಟನ್ ಆಮ್ಲಜನಕವನ್ನು ಕರ್ನಾಟಕಕ್ಕೆ ಕಳುಹಿಸುವಂತೆ ಕೋರಿ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ನಿನ್ನೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ತಿರಸ್ಕರಿಸಿದೆ ಎಂದು ಲೈವ್ ಲಾ, ಬಾರ್ & ಬೆಂಚ್ ಮತ್ತು ಇತರೆಲ್ಲ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.

ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಕರ್ನಾಟಕದ ದೈನಂದಿನ ದ್ರವ ವೈದ್ಯಕೀಯ ಆಮ್ಲಜನಕದ ಹಂಚಿಕೆಯನ್ನು 965 ಮೆಟ್ರಿಕ್ ಟನ್ನಿಂದ 1,200 ಮೆಟ್ರಿಕ್ ಟನ್‌ಗೆ ಹೆಚ್ಚಿಸುವಂತೆ ಮೊನ್ನೆ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಈ ಆದೇಶದ ವಿರುದ್ಧ ಕೇಂದ್ರ ಸರ್ಕಾರವು ನಿನ್ನೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು

‘ರಾಜ್ಯಗಳ ಸಮಂಜಸವಾದ ಬೇಡಿಕೆಗಳಿಗೆ ಕೇಂದ್ರವು ಹಿಂಜರಿಯುವುದಿಲ್ಲ. ನಾವು ಹೈಕೋರ್ಟ್ ಆದೇಶದ ಬಗ್ಗೆ ಕಾಳಜಿ ವಹಿಸುತ್ತೇವೆ ಮತ್ತು ಪ್ರತಿ ಹೈಕೋರ್ಟ್ ನಿರ್ದೇಶಿಸಿದ ಎಲ್ಲವನ್ನೂ ಕಾರ್ಯಸಾಧ್ಯ ಮಾಡಲಾಗದು’ಎಂದು ಕೇಂದ್ರ ವಾದಿಸಿತ್ತು.

ದೆಹಲಿ ಸರ್ಕಾರದ ಮನವಿಯನ್ನೂ ಪರಿಗಣಿಸಿರುವ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್, ಆ ರಾಜ್ಯಕ್ಕೆ ನಿದಿಪಡಿಸಿದ ಬೇಡಿಕೆಯ ಆಮ್ಲಜನಕ ಪೂರೈಸಬೇಕು ಎಂದು ಆದೇಶ ಮಾಡಿದೆ.

ನಾಲ್ಕು ದಿನದ ಹಿಂದೆ, ರಾಜ್ಯದ ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯಲ್ಲಿ 24 ಕೋವಿಡ್ ರೋಗಿಗಳು ಆಮ್ಲಜನಕ ಕೊರತೆಯಿಂದ ಅಸು ನೀಗಿದ್ದು, ಬೇರೆ ಜಿಲ್ಲೆಗಳಿಂದಲೂ ಆಮ್ಲಜನಕ ಕೊರತೆಯಿಂದ ಸಾಚವುಗಳು ಸಂಭವಿಸಿರುವ ವರದಿಗಳು ಬರುತ್ತಿವೆ.

`ಬೆಡ್‌’ನಲ್ಲಿ ಹೊರಳಾಡುತ್ತಿರುವ ರಾಜ್ಯದ ಸಂಸದರು!

ರಾಜ್ಯದಲ್ಲಿ ಆಮ್ಲಜನಕ ಕೊರತೆ ಹೋಗಲಾಡಿಸಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದೊಂದಿಗೆ ಕೇಳುವ ಧೈರ್ಯವೆ ಇಲ್ಲ. ಕೊನೆಗೆ ಹೈಕೋರ್ಟ್ ಆ ಕೆಲಸ ಮಾಡಿ ರಾಜ್ಯದ ನೆರವಿಗೆ ಬಂದರೆ, ಅದನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸುವ ಮೂಲ ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಬಗೆಯಲು ಯತ್ನಿಸಿದೆ. ಹಾಗಾದರೆ ಬಿಜೆಪಿಯಂದ ಚುನಾಯಿತರಾದ 25 ಸಂಸದರು ಎಲ್ಲಿದ್ದಾರೆ? ಇವರ ಅಭಿಪ್ರಾಯ ಕೇಳದೇ ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದು ಏಕೆ?

ಇದನ್ನೂ ಓದಿ: ಮೋದಿ ದುರಂಹಕಾರವೇ ಕೋವಿಡ್ 2ನೆ ಅಲೆಯ ತೀವ್ರತೆಗೆ ಕಾರಣ: ಫ್ರೆಂಚ್ ಪತ್ರಿಕೆ ಸಂಪಾದಕೀಯ

ಈ ಕುರಿತಂತೆ, ನಿನ್ನೆ ಮತ್ತು ಇವತ್ತು ಹಲವು ಬಿಜೆಪಿ ಸಂಸದರು ಮತ್ತು ನಾಯಕರನ್ನು ನಾನುಗೌರಿ.ಕಾಂ ಸಂಪರ್ಕಿಸಲು ಯತ್ನಿಸಿದೆ. ಬಹುತೇಕರು ಫೋನ್ ರಿಸೀವ್ ಮಾಡಿತ್ತಿಲ್ಲ ಅಥವಾ ಅವರ ಸೆಕ್ರೆಟರಿಗಳು ರಿಸೀವ್ ಮಾಡಿ, ವಿಷಯ ಇದು ಎಂದು ಗೊತ್ತಾದ ತಕ್ಷಣ ಸಮಂದರ ಸಂಪರ್ಕ ನೀಡುತ್ತಿಲ್ಲ. ಇದು ಕೂಡ ಈ ಹೊಣೆಗೇಡಿ ಸಂಸದರ ಕುತಂತ್ರವಾಗಿದೆ. ‘ಬೆಡ್’ ಬಗ್ಗೆ ಹಾರಾಡಿದ್ದ ಸೂರ್ಯರಿಗೆ ಆಕ್ಸಿಜನ್ ಮುಖ್ಯವೇ ಆಗುವುದಿಲ್ಲ.

ಉಳಿದೆಲ್ಲ ಬಿಜೆಪಿ ಸಂಸದರೂ ಈಗ ‘ಬೆಡ್’ ವಿಚಾರದಲ್ಲೇ ಇರುವುದರಿಂದ ಸುಪ್ರೀಂಕೋರ್ಟ್ ಆದೇಶದ ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಕರೆ ಮಾಡಿದರೆ, ತಾನೇ ‘ಜೋಶಿ’ ಎಂಬಂತೆ ಮಾತನಾಡಿದ ಅವರ ಪರ್ಸನಲ್ ಸೆಕ್ರೆಟರಿ, ಮೊದಲಿಗೆ ಪ್ರಶ್ನೆಯನ್ನು ಕೇಳಿಸಿಕೊಳ್ಳುತ್ತಾರೆ. ನಂತರ ನಾನುಗೌರಿ.ಕಾಂ ಕಡೆಯಿಂದ ಫೋನ್ ಎಂಬುದು ಗೊತ್ತಾಗುತ್ತಿದ್ದಂತೆ, ‘ಸರ್, ನಾನು ಜೋಶಿ ಸಾಹೇಬರು ಅಲ್ಲ, ಅವರ ಪಿ.ಎಸ್…ಆಮೇಲೆ ಅವರ ಕಡೆಯಿಂದ ಫೋನ್ ಮಾಡಿಸುತ್ತೇನೆ’ ಎಂದು ತಪ್ಪಿಸಿಕೊಳ್ಳುತ್ತಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನಿನ್ನೆ ಕರೆ ಸ್ವೀಕರಿಸಿದ್ದರು, ಆದರೆ ರಾಜ್ಯದ ಹಿತಾಸಕ್ತಿ ವಿರುದ್ಧ ಕೇಂದ್ರ ಸುಪ್ರೀಂಕೋರ್ಟಿಗೆ ಹೋಗಿದೆ ಎಂಬ ವಿಷಯ ಎತ್ತಿದ ಕೂಡಲೇ, ‘ಈಗ ತುರ್ತಾದ ಕೆಲಸದಲ್ಲಿ ಇದ್ದೇನೆ’ ಎಂದು ಕರೆ ಕಟ್ ಮಾಡಿದ್ದಾರೆ.

ಇದನ್ನೂ ಓದಿ: ಬೆಡ್‌ಬ್ಲಾಕ್‌ ದಂಧೆಯಲ್ಲಿ ಬಿಜೆಪಿ ಶಾಸಕ ಭಾಗಿ; ಸಂಬಂಧವಿಲ್ಲದ 17 ಸಿಬ್ಬಂದಿಗಳು `ಮುಸ್ಲಿಂ’ ಎಂಬ ಕಾರಣಕ್ಕೆ ವಜಾ

ಇಂದು ಮುಂಜಾನೆ ಕೂಡಾ ಸುಪ್ರೀಂ ಆದೇಶ ಬರುವ ಮುಂಚೆ ಅವರಿಗೆ ಮತ್ತೆ ಕರೆ ಮಾಡಿದಾಗ ಅವರ ಪಿಎಸ್ ತಾನೆ ಸಿ.ಟಿ. ರವಿ ಎಂಬಂತೆ ಮಾತನಾಡಿ, ಪ್ರಶ್ನೆ ತಿಳಿಯುತ್ತಿದ್ದಂತೆ, ‘ಸಾಹೇಬರು ಮೀಟಿಂಗಿನಲ್ಲಿ ಇದ್ದಾರೆ, ನಂತರ ಫೋನ್ ಮಾಡಿ ಕೊಡುವೆ’ ಎಂದರು.

ತೀರ್ಪು ಬಂದು 4 ತಾಸು ಆದರೂ ಅವರ ಫೋನ್ ಬಂದಿಲ್ಲ. ಕಲಬುರಗಿಯ ಸಂಸದ ಉಮೇಶ್ ಜಾಧವ್ ಅವರಿಗೆ ನಿನ್ನೆ ರಾತ್ರಿ ಕರೆ ಮಾಡಿ ಮಾತನಾಡಿದಾಗ, ಅವರು ವಿಷಯವೇ ಗೊತ್ತಿಲ್ಲ ಎಂಬಂತೆ ನುಣುಚಿಕೊಂಡರು. ಇವತ್ತು ಐದು ಫೋನ್ ಕರೆ ಮಾಡಿದರೂ ಅವರು ರಿಸೀವ್ ಮಾಡಿಲ್ಲ.

ಬಳ್ಳಾರಿ ಸಂಸದ ವೈ ದೇವೇಂದ್ರಪ್ಪ ಕೂಡ ಕಾಲ್ ರಿಸೀವ್ ಮಾಡುತ್ತಿಲ್ಲ. ಸಂದೇಶ ಕಳಿಸಿ ಎಂದು ಅವರು ಮೆಸೆಜ್ ಹಾಕಿದ್ದಾರೆ. ಪ್ರಶ್ನೆಗಳನ್ನು ಹಾಕಿ ನಾಲ್ಕು ತಾಸಾದರೂ ಉತ್ತರವಿಲ್ಲ.

ಪ್ರಶ್ನಿಸಿದ ಎಲ್ಲ ಸಂಸದರಲ್ಲೂ ಸರಿಯಾದ ಉತ್ತರವಿಲ್ಲ. ಎಲ್ಲರೂ ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಾ ಇಡೀ ರಾಜ್ಯದ ಜನರಿಗೆ ದ್ರೋಹ ಬಗೆಯುತ್ತಿದ್ದಾರೆಯೆ ಎಂಬ ಸಂಶಯ ವ್ಯಕ್ತವಾಗಿದೆ.

ಇದನ್ನೂ ಓದಿ: Explainer: ಸದ್ಯಕ್ಕೆ ಲಭ್ಯವಿರುವ ಲಸಿಕೆಗಳೆಷ್ಟು? ತಡವಾಗಲು ಕಾರಣವೇನು?

ಈ ಬಗ್ಗೆ ರಾಜ್ಯದ ಜನತೆ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಪರ ಹೋರಾಟಗಾರ ಜಾವಗಲ್ ಶ್ರೀನಾಥ್ ಸೇರಿದಂತೆ ಹಲವರು ಎತ್ತಿರುವ ಪ್ರಶ್ನೆಗಳನ್ನೆಲ್ಲಾ ಸಾರಾಂಶೀಕರಿಸಿ ನಾನುಗೌರಿ.ಕಾಂ ಓದುಗರಿಗಾಗಿ ನೀಡಿದ್ದೇವೆ, ಓದಿ:

“ರಾಜ್ಯಕ್ಕೆ ನಿತ್ಯ 1,700 ಟನ್ ಆಮ್ಲಜನಕದ ಅಗತ್ಯವಿದೆ. ಆದರೂ, 1,200 ಟನ್ ಆಮ್ಲಜನಕ ಇದ್ದರೆ ಪರಿಸ್ಥಿತಿ ಹೇಗೋ ನಿಭಾಯಿಸಬಹುದು. ಕರ್ನಾಟಕದಲ್ಲಿ ಹೆಚ್ಚು ಕಡಿಮೆ 1,200 ಟನ್‌ಗೂ ಅಧಿಕ ಪ್ರಮಾಣದ ಆಮ್ಲಜನಕವೂ ಉತ್ಪಾದನೆಯಾಗುತ್ತಿದೆ. ಆದರೆ, ನಮ್ಮಿಂದ ಆಮ್ಲಜನಕ ಕಿತ್ತುಕೊಳ್ಳುತ್ತಿರುವ ಕೇಂದ್ರ ಪೂರೈಸುತ್ತಿರುವುದು 895-965 ಟನ್ ಮಾತ್ರ!.

ಅನುದಾನದಲ್ಲಿ ತಾರತಮ್ಯ, ಜಿಎಸ್‌ಟಿ ಬಾಕಿಯಲ್ಲಿ ತಾರತಮ್ಯ, ನೆರೆ-ಬರ ಪರಿಹಾರದಲ್ಲಿ ಮಾಡಲಾದ ತಾರತಮ್ಯವನ್ನು ಕರ್ನಾಟಕ, ಕನ್ನಡಿಗರು ಹೇಗೋ ಸಹಿಸಿದ್ದಾರೆ. ಆದರೆ, ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಈ ಮಾರಕ ತಾರತಮ್ಯವನ್ನು ಸಹಿಸುವುದಾದರೂ ಹೇಗೆ? ಇದು ಕನ್ನಡಿಗರ ಜೀವ, ಜೀವನದ ಪ್ರಶ್ನೆ ಎಂಬುದನ್ನು ಕೇಂದ್ರ ಸರ್ಕಾರ ಅರಿಯುತ್ತಿಲ್ಲ ಏಕೆ?

ಇದನ್ನೂ ಓದಿ: ಅನ್ಯಾಯಕ್ಕೆ ಒಳಗಾದವರು ಇಲ್ಲದಿದ್ದಾಗ ತೆರಳಿ ಕ್ಷಮೆ ಯಾಚಿಸಿದ ತೇಜಸ್ವಿ ಸೂರ್ಯ

ಅಷ್ಟಕ್ಕೂ ನಾವು ಅಧಿಕವಾಗಿ ಏನೂ ಕೇಳುತ್ತಿಲ್ಲ. ನಮ್ಮಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕವನ್ನು ನಮಗೇ ನೀಡಿ ಎಂಬುದು ನಮ್ಮ ಬೇಡಿಕೆ. ನಮ್ಮವರ ಜೀವವನ್ನೇ ಕಿತ್ತು ಗುಜರಾತ್ ಮತ್ತಿತರ ರಾಜ್ಯಗಳ ಜನರ ಜೀವ ಉಳಿಸಬೇಕಾದ ಅನಿವಾರ್ಯತೆ, ತ್ಯಾಗ ಮಾಡಬೇಕಾದ ಸಂದಿಗ್ಧತೆಯಲ್ಲಿ ನಮ್ಮನ್ನು ಸಿಲುಕಿಸಬಾರದು. ಕೇಂದ್ರ ನಮ್ಮ ಪಾಲನ್ನು ನಮಗೆ ನೀಡಲಿ.

ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಕೇಂದ್ರದ ಇಂತಹ ತಾರತಮ್ಯವನ್ನು ಪ್ರಶ್ನಿಸಬೇಕು. ಇಲ್ಲಿವರೆಗೆ ಬಾಯಿಗೆ ಬೀಗ ಹಾಕಿಕೊಂಡಿರುವ ಬಿಜೆಪಿ ಸಂಸದರು ಈಗ ಜನರ ಜೀವ ಉಳಿಸುವುದಕ್ಕಾದರೂ ಬಾಯಿ ಬಿಡಲಿ. ರಾಜ್ಯದಿಂದ ಶಕ್ತಿ ಪಡೆದಿರುವ ಕೇಂದ್ರ ಅದೇ ಶಕ್ತಿಯನ್ನು ಬಳಸಿಕೊಂಡು ರಾಜ್ಯದ ಮೇಲೆ ಗದಾಪ್ರಹಾರ ನಡೆಸುತ್ತಿರುವುದನ್ನು ಜನ ಗಮನಿಸಲಿ.

25 ಬೇಜವಾಬ್ದಾರಿ, ಹೋಪ್‌ಲೆಸ್ ಸಂಸದರನ್ನು ಕಂಡಲ್ಲಿ ಪ್ರಶ್ನಿಸುವುದಷ್ಟೇ ಕೆಲಸ. ಅವರು `ಬೆಡ್’ ಆಚೆ ಬರದೇ ಇದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಸಂಸದ ಏನು ಮಾಡುತ್ತಿದ್ದಾರೆ ಅಥವಾ ಏನೂ ಮಾಡೇ ಇಲ್ಲ ಎಂಬುದನ್ನು ಬರೆಯುತ್ತ ಹೋಗಿ”

ಇದನ್ನೂ ಓದಿ: ಬೆಂಬಲಿಗರನ್ನು ಸೆಳೆಯಲು ‘ಪಾಕಿಸ್ತಾನಿ’ ಯುವತಿಯ ಫೋಟೊ ಬಳಸುತ್ತಿರುವ BJP ಐಟಿ ಸೆಲ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ನಮ್ಮ ರಾಜ್ಯದ ಸಂಸದರು ಜನಪ್ರತಿನಿಧಿಗಳಂತೆ ವರ್ತಿಸುವುದನ್ನು ಬಿಟ್ಟು, ಒಕ್ಕೂಟ ಸರ್ಕಾರದ ಗುಲಾಮರಾಗಿರುವುದು ಕಂಡನಾರ್ಹ.

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...