ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ನ ಭಾರತ್ ಜೋಡೋ ನ್ಯಾಯ ಯಾತ್ರೆ ಬಿಸ್ವನಾಥ್ ಜಿಲ್ಲೆಯ ರಾಜ್ಗಢದ ಮೂಲಕ ಎರಡನೇ ಬಾರಿಗೆ ಅಸ್ಸಾಂಗೆ ಪ್ರವೇಶಿದ್ದು, ಇಂದು ಯಾತ್ರೆ ನಾಗಾನ್ ಜಿಲ್ಲೆಯ ಕಡೆಗೆ ಸಾಗುತ್ತಿದೆ.
ನಿನ್ನೆ ರಾತ್ರಿ ಯಾತ್ರೆ ಸಾಗಿ ನೆರೆಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ವಾಸ್ತವ್ಯ ಹೂಡಲಾಗಿತ್ತು. ಅರುಣಾಚಲ ಪ್ರದೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದಿವಂಗತ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 1987ರಲ್ಲಿ ಅರುಣಾಚಲ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡಿದ್ದರು. ಆದರೆ ಬಿಜೆಪಿ ರಾಜ್ಯದ ಜನರಿಗೆ ನಿರುದ್ಯೋಗ, ಬೆಲೆ ಏರಿಕೆ ಮತ್ತು ಜಿಎಸ್ಟಿಯ ಒತ್ತಡವನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.
ದೋಯಿಮುಖ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಜಾತಿ, ಮತ, ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುತ್ತಿದೆ. ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ಜಗಳವಾಡಲು ಜನರನ್ನು ಪ್ರಚೋದಿಸುತ್ತದೆ. ಬಿಜೆಪಿಯು ಕೆಲವು ಉದ್ಯಮಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತದೆ. ಕಷ್ಟದಲ್ಲಿರುವ ಜನರ ಹಿತಾಸಕ್ತಿಗಾಗಿ ಅಲ್ಲ. ಆದರೆ ಕಾಂಗ್ರೆಸ್ ಜನರನ್ನು ಒಗ್ಗೂಡಿಸಲು ಕೆಲಸ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆಗೆ ಹೆಚ್ಚಳಕ್ಕೆ ಬಿಜೆಪಿ ಕಾರಣ. ಬಿಜೆಪಿ ಆಡಳಿತದಲ್ಲಿ ಸರ್ಕಾರವು ಜನರ ಕುಂದುಕೊರತೆಗಳನ್ನು ಆಲಿಸಲು ಸಿದ್ಧರಿಲ್ಲ. ಯಾತ್ರೆಯ ಸಮಯದಲ್ಲಿ ನಾನು ಬೆಳಿಗ್ಗೆಯಿಂದ ಸಂಜೆಯವರೆಗೆ ಹಲವಾರು ಗಂಟೆಗಳ ಕಾಲ ಪ್ರಯಾಣಿಸುತ್ತೇನೆ ಮತ್ತು ಜನರ ನೋವುಗಳಿಗೆ ಕಿವಿಯಾಗುತ್ತೇನೆ ಎಂದು ಹೇಳಿದ್ದಾರೆ.
ನಿನ್ನೆ ಸಂಜೆ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಅರುಣಾಚಲ ಪ್ರದೇಶವನ್ನು ಪ್ರವೇಶಿಸಿತ್ತು.
ಭಾರತ್ ಜೋಡೋ ನ್ಯಾಯ್ ಯಾತ್ರೆಯು ಕಾಲ್ನಡಿಗೆ ಮತ್ತು ಬಸ್ಸಿನಲ್ಲಿ ಸಾಗುತ್ತಿದ್ದು, ಗುರುವಾರದಿಂದ ಶನಿವಾರ ಮಧ್ಯಾಹ್ನದವರೆಗೆ ಅಸ್ಸಾಂನಲ್ಲಿ ಮೊದಲ ಹಂತದ ಪ್ರಯಾಣ ನಡೆದಿತ್ತು. ಆ ಬಳಿಕ ನೆರೆಯ ರಾಜ್ಯ ಅರುಣಾಚಲ ಪ್ರದೇಶವನ್ನು ಪ್ರವೇಶಿಸಿತ್ತು. ಅರುಣಾಚಲ ಪ್ರದೇಶದಲ್ಲಿ ರಾತ್ರಿ ವಾಸ್ತವ್ಯ ಹೂಡಲಾಗಿತ್ತು. ಅಸ್ಸಾಂ ರಾಜ್ಯಕ್ಕೆ ಎರಡನೇ ಬಾರಿ ಭೇಟಿ ನೀಡುತ್ತಿದ್ದಂತೆ ರಾಜ್ಯದಲ್ಲಿ ಯಾತ್ರೆಗೆ ಬೆಂಬಲ ನೀಡಿದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ಗುವಾಹಟಿ ಮೂಲಕ ತೆರಳಲು ಅನುಮತಿ ನಿರಾಕರಿಸಿದ್ದಾರೆ. ಮತ್ತು ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಲಖಿಂಪುರ ಜಿಲ್ಲೆಯ ಗೋಬಿಂದಾಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ನಾವು ಭಾರತ್ ಜೋಡೋ ಯಾತ್ರೆಗೆ ಸರಿಯಾದ ಮಾರ್ಗದಲ್ಲಿ ಅನುಮತಿಗಳಿಗಾಗಿ ಅರ್ಜಿ ಸಲ್ಲಿಸಿದ್ದೇವೆ, ಆದರೆ ಸರ್ಕಾರಿ ಅಧಿಕಾರಿಗಳು ಅಪ್ರಸ್ತುತ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಹೇಗಾದರೂ ಮಾಡಿ ನಮ್ಮನ್ನು ತಡೆಯುವುದು ಅವರ ಉದ್ದೇಶವಾಗಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಇತ್ತೀಚಿನ ಗುವಾಹಟಿ ಭೇಟಿಯ ಸಂದರ್ಭದಲ್ಲಿ ಅವರು ತೆರಳಿದ ಅದೇ ಮಾರ್ಗದಲ್ಲಿ ಪ್ರಯಾಣಿಸಲು ನಾವು ಅಸ್ಸಾಂ ಸರ್ಕಾರವನ್ನು ವಿನಂತಿಸಿದ್ದೇವೆ ಎಂದು ಹೇಳಿದ್ದಾರೆ.
ಶನಿವಾರ ಅಸ್ಸಾಂನಲ್ಲಿ ಯಾತ್ರೆಯಲ್ಲಿ ತೆರಳುತ್ತಿದ್ದ ವಾಹನಗಳ ಮೇಲೆ ದಾಳಿ ನಡೆಸಲಾಗಿದೆ ಮತ್ತು ಉತ್ತರ ಲಖಿಂಪುರದಲ್ಲಿ ಬ್ಯಾನರ್ಗಳನ್ನು ಹರಿದು ಹಾಕಲಾಗಿದೆ. ದೇಶದಲ್ಲಿ ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯಗಳು ಅಸ್ಸಾಂ ಸರ್ಕಾರದಂತೆ ಸಮಸ್ಯೆಗಳನ್ನು ಸೃಷ್ಟಿಸಿಲ್ಲ. ಜ.18ರಂದು ಯಾತ್ರೆಯು ಅಸ್ಸಾಂಗೆ ಪ್ರವೇಶಿಸಿದ ದಿನ ಜೋರ್ಹತ್ ಜಿಲ್ಲೆಯಲ್ಲಿ ಯಾತ್ರೆ ಮತ್ತು ಅದರ ಮುಖ್ಯ ಸಂಘಟಕರ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಸ್ಸಾಂನ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಅಸ್ಸಾಂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ ಹೇಳಿದ್ದಾರೆ.
ಅಸ್ಸಾಂ ಸರ್ಕಾರವು ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಭಾಗವಹಿಸದಂತೆ ಜನಸಾಮಾನ್ಯರಿಗೆ ಬೆದರಿಕೆ ಹಾಕುತ್ತಿದೆ. ಕೆಲವು ಕಾರ್ಡ್ಗಳ ವಿತರಣೆಯ ಹೆಸರಿನಲ್ಲಿ ಮಹಿಳೆಯರನ್ನು ಕರೆದು ಗಂಟೆಗಟ್ಟಲೆ ಕೊಠಡಿಗಳಲ್ಲಿ ಇರಿಸುತ್ತಾರೆ. ಪೆಟ್ರೋಲ್ ಪಂಪ್ಗಳು ನಮಗೆ ಇಂಧನವನ್ನು ನೀಡುತ್ತಿಲ್ಲ. ಯಾತ್ರೆಗೆ ಸೇರದಂತೆ ಬಿಜೆಪಿ ಕಾರ್ಯಕರ್ತರು ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಶನಿವಾರ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಪ್ರತಿಕ್ರಿಯಿಸಿ, ಅಸ್ಸಾಂ ಸರಕಾರದ ನಡೆಯನ್ನು ಖಂಡಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಬಿಜೆಪಿಯು ಭಾರತದ ಜನರಿಗೆ ಸಂವಿಧಾನವು ಖಾತರಿಪಡಿಸಿದ ಪ್ರತಿಯೊಂದು ಹಕ್ಕು ಮತ್ತು ನ್ಯಾಯವನ್ನು ಕೆಡವಲು ಪ್ರಯತ್ನಿಸಿದೆ. ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿರುವ ದಾಳಿ ಮತ್ತು ಬೆದರಿಕೆಯ ತಂತ್ರಕ್ಕೆ ಕಾಂಗ್ರೆಸ್ ಪಕ್ಷವು ಹೆದರುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸೇರಿ ಮೂವರು ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಕೋರ್ಟ್ ಆದೇಶ