ಉತ್ತರ ಪ್ರದೇಶದ ಆರು ಪಥಗಳ ಎಕ್ಸ್ಪ್ರೆಸ್ ವೇನಲ್ಲಿ ಹಿಂಡುಹಿಂಡಾಗಿ ಹಸುಗಳು ಅಡ್ಡಾಡುತ್ತಿರುವ ವೀಡಿಯೋ ಹಂಚಿಕೊಂಡಿರುವ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಿಜೆಪಿ ಸರ್ಕಾರವನ್ನು “ಆಕ್ಸ್ಪ್ರೆಸ್ ವೇ” ಎಂದು ಲೇವಡಿ ಮಾಡಿದ್ದು, ಹೆದ್ದಾರಿಯ ಗುಣಮಟ್ಟ ಮತ್ತು ಸುರಕ್ಷತೆಯ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ನೂರಾರು ಹಸುಗಳ ಗುಂಪು ಆರು-ಪಥದ ಎಕ್ಸ್ಪ್ರೆಸ್ ವೇನಲ್ಲಿ ವಾಹನಗಳ ಜೊತೆಜೊತೆಗೆ ಸಾಗುತ್ತಿರುವ ವೀಡಿಯೊ ಹಂಚಿಕೊಂಡಿದ್ದು, ‘ಇದು ಉತ್ತರ ಪ್ರದೇಶದಲ್ಲಿ ನಿರ್ಮಿಸಲಾದ ವಿಶ್ವದ ಮೊದಲ ‘ಎಕ್ಸ್ಪ್ರೆಸ್ ವೇ’… ಇದರ ಘೋಷಣೆ ಆಪ್ಕಿ ಜಾನ್, ಆಪ್ಕೆ ಹಾತ್’ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಸರ್ಕಾರವನ್ನು ಟೀಕಿಸುವ ಅವಕಾಶವನ್ನು ಬಳಸಿಕೊಂಡಿರುವ ಯಾದವ್ ಬೆಂಬಲಿಗರು ‘ಅಖಿಲೇಶ್ ಅವರು ವಿಶ್ವ ದರ್ಜೆಯ ಎಕ್ಸ್ಪ್ರೆಸ್ ವೇ ನೀಡಿದರು! ಯೋಗಿ ಜಿಯವರ ಆಳ್ವಿಕೆಯಲ್ಲಿ, ಇದು ಆಕ್ಸ್ಪ್ರೆಸ್ ವೇ ಮಾರ್ಗವಾಗಿದೆ’ ಎಂದು ಟೀಕಿಸಿದ್ದಾರೆ.
ये है उप्र में बना दुनिया का पहला ‘ऑक्सप्रेस वे’ (OXPRESS WAY)… जिसका उद्घोष है ‘आपकी जान, आपके हाथ’. pic.twitter.com/jrtvw6FdEd
— Akhilesh Yadav (@yadavakhilesh) January 20, 2024
ವೀಡಿಯೊ ವೈರಲ್ ಆದ ನಂತರದ ಸಾಮಾಜಿಕ ಮಾಧ್ಯಮ ಚರ್ಚೆ ತೀವ್ರಗೊಂಡಿದ್ದು, ಉತ್ತರ ಪ್ರದೇಶದ ಮೂಲಸೌಕರ್ಯ ಗುಣಮಟ್ಟ ಮತ್ತು ಸುರಕ್ಷತೆಯ ಕುರಿತು ಹಲವರು ಗಮನ ಸೆಳೆದಿದ್ದಾರೆ. ‘ಇಂತಹ ಘಟನೆಗಳು ರಾಜ್ಯದ ಎಕ್ಸ್ಪ್ರೆಸ್ ವೇಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಂತಹ ಅಸಾಂಪ್ರದಾಯಿಕ ಘಟನೆಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ’ ಎಂದು ಕೆಲವರು ಅಖಿಲೇಶ್ ಪೋಸ್ಟಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಹು ನಿರೀಕ್ಷಿತ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ರಾಜ್ಯವು ಸಜ್ಜಾಗುತ್ತಿರುವ ಸಮಯದಲ್ಲಿ ಈ ವಿವಾದವು ಬೆಳಕಿಗೆ ಬಂದಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್ಡಿಎ) ಸಾಮೂಹಿಕವಾಗಿ ಸವಾಲು ಹಾಕುವ ಗುರಿಯೊಂದಿಗೆ ವಿರೋಧ ಪಕ್ಷಗಳ ನಡುವೆ ಸೀಟು ಹಂಚಿಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವುದರಿಂದ ಈ ಘಟನೆ ಸಾಕಷ್ಟು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಇದನ್ನೂ ಓದಿ; ಒಡಿಶಾ: ಶಾಲಾ ಆವರಣದಲ್ಲೆ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಮುಖ್ಯ ಶಿಕ್ಷಕ