ಅಹಮದ್ನಗರ: ಮಹಾರಾಷ್ಟ್ರದ ಅಹ್ಮದ್ನಗರದಲ್ಲಿರುವ ಸಿವಿಲ್ ಆಸ್ಪತ್ರೆಯ ಐಸಿಯುನಲ್ಲಿ (ತೀವ್ರ ನಿಗಾ ಘಟಕ) ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಹತ್ತು ರೋಗಿಗಳು ಸಾವನ್ನಪ್ಪಿದ್ದಾರೆ. ಮತ್ತೋರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೋವಿಡ್ ವಾರ್ಡ್ನಲ್ಲಿ ಘಟನೆ ನಡೆದಿದ್ದು, 17 ರೋಗಿಗಳು ದಾಖಲಾಗಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಘೋಷಿಸಿದ್ದಾರೆ.
ಉಳಿದ ರೋಗಿಗಳನ್ನು ಮತ್ತೊಂದು ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್ಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭೋಸ್ಲೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣವನ್ನು ತಿಳಿಯಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಕಿಯ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಅಗ್ನಿಶಾಮಕ ಇಲಾಖೆಯ ಪ್ರಾಥಮಿಕ ತನಿಖೆಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಹೇಳಿರುವುದಾಗಿ ಭೋಸ್ಲೆ ತಿಳಿಸಿದ್ದಾರೆ.
ಆಸ್ಪತ್ರೆಯ ಕೆಳಗಿನ ಮಹಡಿಗಳಿಂದ ಹೊಗೆ ಹೊರಬರುತ್ತಿರುವ ದೃಶ್ಯಗಳನ್ನು ಕಾಣಬಹುದು. ಬೆಂಕಿಯನ್ನು ನಂದಿಸಿದ ನಂತರ ನಿಧಾನವಾಗಿ ಕೆಲವರು ವಾರ್ಡ್ಗೆ ಮರು ಪ್ರವೇಶಿಸಿದ್ದಾರೆ. ಬೆಂಕಿಯಲ್ಲಿ ಸಿಲುಕಿದ ಕೆಲವರನ್ನು ಉಳಿಸಲು ವೈದ್ಯರು ಯತ್ನಿಸುತ್ತಿರುವ ದೃಶ್ಯಗಳು ಹೃದಯ ಕಲಕುತ್ತಿವೆ.
ಕರೋನವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಹೊಸದಾಗಿ ಐಸಿಯು ನಿರ್ಮಿಸಲಾಗಿದೆ. ಆದರೆ ಬೆಂಕಿ ಕಾಣಿಸಿಕೊಂಡಿರುವುದು “ಬಹಳ ಗಂಭೀರ ಸಮಸ್ಯೆ” ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ.
ಎಲ್ಲಾ ಆಸ್ಪತ್ರೆಗಳಲ್ಲೂ ಮುನ್ನೆಚ್ಚರಿಕೆ ಕೈಗೊಳ್ಳಲು ತಿಳಿಸಲಾಗಿದೆ. ಬೆಂಕಿ ಅವಘಡ ಸಂಬಂಧ ಅಹ್ಮದ್ನಗರ ಸಿವಿಲ್ ಆಸ್ಪತ್ರೆಯನ್ನು ಪರಿಶೀಲಿಸಲಾಗುವುದು. ಸಮಗ್ರ ತನಿಖೆ ನಡೆಯಲಿದೆ ಎಂದು ಮಲಿಕ್ ಹೇಳಿದ್ದಾರೆ.
ಮುಖ್ಯಮಂತ್ರಿ ಠಾಕ್ರೆ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅವರಿಗೆ ಸಾಧ್ಯವಿರುವ ಎಲ್ಲ ಭರವಸೆ ನೀಡಿದ್ದಾರೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿರಿ: ಮನೆಗೆಲಸದ ಹೆಣ್ಣುಮಕ್ಕಳ ಫೋಟೋ ಪೋಸ್ಟ್ ಮಾಡಿ ವಿಕೃತಿ ಮೆರೆಯುವ ಹೆಲ್ಪ್ಚೆಕ್ಕರ್ ಗ್ರೂಪ್