ನವದೆಹಲಿಯ ಜಮಾ ಮಸೀದಿಯಲ್ಲಿ ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ಘೋಷಣೆಗಳು ಮೊಳಗಿದವು. ನಾವು ಹಿಂಸೆ, ಗಲಭೆ ಬೆಂಬಲಿಸುವವರು ಅಲ್ಲ, ಪ್ರಚೋದಿಸುವವರೂ ಅಲ್ಲ. ನಾವು ಶಾಂತಿಪ್ರಿಯರು ಎಂದು ಗಾಂಧಿಯ ಮಾರ್ಗದಲ್ಲಿ ಪ್ರತಿಭಟನೆ ನಡೆಸಿದರು. ಹಿಂಸೆ, ವಿಭಜನೆ, ಆತಂಕ ಸೃಷ್ಟಿಸುವುದು ಮಹನೀಯರ ಲಕ್ಷಣವಾಗಿರಲಿಲ್ಲ ಎಂದು ಸಾರಿದರು.
ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಜನರನ್ನು ಕಾಡುತ್ತಿದೆ. ಈ ಸಮಸ್ಯೆ ಬಗೆಹರಿಸುವುದು ಬಿಟ್ಟು ಪ್ರಧಾನಿ ನರೇದ್ರ ಮೋದಿ ಮತ್ತೊಮ್ಮೆ ಜನರನ್ನು ಸರದಿಯ ಸಾಲಿನಲ್ಲಿ ನಿಲ್ಲುವಂತೆ ಮಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಎನ್ ಪಿಎ, ಎನ್ಆರ್ ಸಿ ಮತ್ತು ಸಿಎಎ ಇನ್ನೊಂದು ನೋಟು ಅಮಾನ್ಯೀಕರಣ. ಪ್ರಧಾನಿಗಳು ವಾಸ್ತವ ಪರಿಸ್ಥಿತಿಯ ಬಗ್ಗೆ ಮಾತನಾಡಲಿ. ಅದು ಬಿಟ್ಟು ಜನರನ್ನು ಕ್ಯೂನಲ್ಲಿ ನಿಲ್ಲುವಂತೆ ಮಾಡುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು, ಎನ್ಆರ್ ಸಿ, ಸಿಎಎ ಅವಶ್ಯಕತೆ ಇದೆಯೇ ಎಂಬ ಬಗ್ಗೆ ಪ್ರಶ್ನಿಸಬೇಕು. ದೊಡ್ಡ ದನಿಯಲ್ಲಿ ಕೇಳಬೇಕು. ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ವ್ಯಕ್ತಪಡಿಸಿರುವ ಆಶಯಗಳಿಗೆ ಧಕ್ಕೆ ಉಂಟಾಗುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೇಂದ್ರದ ಜನವಿರೋಧಿ ನೀತಿಗಳನ್ನು ಖಂಡಿಸಬೇಕು ಎಂದು ಕರೆ ನೀಡಿದರು.
ಜಮಾ ಮಸೀದಿಯಲ್ಲಿ ಕೇಂದ್ರ ಸರ್ಕಾರದ ಸಿಎಎ, ಎನ್ಆರ್ ಸಿ ಹೊಸ ಕಾಯ್ದೆಗಳ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಹಾಕಿದರು. ಯಾವುದೇ ಕಾರಣಕ್ಕೂ ಈ ಕಾಯ್ದೆಗಳನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು. ದೇಶಕ್ಕೆ ಎನ್ ಆರ್ ಸಿ, ಸಿಎಎ, ಎನ್ ಪಿಎ ಬೇಕಾಗಿಲ್ಲ. ಉದ್ಯೋಗ ಬೇಕು. ಜನರಿಗೆ ಶಾಂತಿ ನೆಮ್ಮದಿಯ ಅವಶ್ಯಕತೆ ಇದೆ. ಸಂವಿಧಾನ ಉಳಿಸಿ ಭಾರತ ವಿಭಿಸುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದರು.
ಮಾಜಿ ಶಾಸಕ ಶೋಯಿಬ್ ಇಕ್ಬಾಲ್ ಮಾತನಾಡಿ ನಮ್ಮದು ಅಹಿಂಸಾತ್ಮಕ ಹೋರಾಟ. ನಮಗೆ ಹಿಂಸಾ ವಾದದಲ್ಲಿ ನಂಬಿಕೆ ಇಲ್ಲ. ಅಹಿಂಸೆಯ ನೆಲೆಯಲ್ಲಿ ಶಾಂತಿಯುತ ಹೋರಾಟ ಮುಂದುವರಿಸುತ್ತೇವೆ. ಆದರೆ ಕೆಲವರು ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಕದಡುತ್ತಿದ್ದಾರೆ. ಶಾಂತಿ ಕದಡುವವರು ನಮ್ಮ ಸಂಘಟನೆಗೆ ಸೇರಿದವರಲ್ಲ. ಅವರು ಹೋರಾಟವನ್ನು ದಿಕ್ಕುತಪ್ಪಿಸುವವರು. ಅವರ ಬಗ್ಗೆ ಎಚ್ಚರ ಬೇಕು. ನಾವು ಹಿಂಸೆಯನ್ನು ಇಷ್ಟಪಡುವುದಿಲ್ಲ. ಗಲಭೆಯನ್ನು ಪ್ರಚೋದಿಸುವುದಿಲ್ಲ. ನಾವು ಶಾಂತಿಪ್ರಿಯರು ಎಂದು ತಿಳಿಸಿದರು.