ನಾನು ಬದುಕಿರುವವರೆಗೂ ಪಶ್ಚಿಮ ಬಂಗಾಳದಲ್ಲಿ ಬಂಧನ ಕೇಂದ್ರಗಳು ಇರುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿಯನ್ನು ಅನುಷ್ಠಾನಕ್ಕೆ ತರುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಶಪಥ ಮಾಡಿದ್ದಾರೆ.
ದೇಶಾದ್ಯಂತ ವಿದ್ಯಾರ್ಥಿಗಳು ಎನ್ಆರ್ಸಿ, ಸಿಎಎ ವಿರುದ್ಧ ಕೈಗೊಂಡಿರುವ ಚಳವಳಿಯನ್ನು ಬೆಂಬಲಿಸಿ ಮಾತನಾಡಿರುವ ಮಮತ ಪೌರತ್ವ ಕಾಯ್ದೆ ಹೆಸರಲ್ಲಿ ದೇಶದ ಜನರ ಹಕ್ಕುಗಳನ್ನು ಯಾರೊಬ್ಬರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಇವರಿಗೆ ಮತ ನೀಡಿ ಆಯ್ಕೆ ಮಾಡಿದ್ದು ಏಕೆ? ಜನರ ಪ್ರತಿಭಟಿಸುವ ಹಕ್ಕು ಕಸಿದುಕೊಳ್ಳಲು ಇವರು ಯಾರು ಎಂದು ಪ್ರಶ್ನಿಸಿರುವ ಮಮತಾ ಬ್ಯಾನರ್ಜಿ ಪೌರತ್ವ ತಿದ್ದುಪಡಿ ಕಾಯ್ದೆಯ ಹಿನ್ನೆಲೆಯಲ್ಲಿ ಯಾರೊಬ್ಬರೂ ದೇಶವನ್ನು, ರಾಜ್ಯವನ್ನು ತೊರೆಯಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಕೇಂದ್ರದ ಹೊಸ ಕಾಯ್ದೆಗಳ ವಿರುದ್ದ ನಿರಂತರ ದನಿ ಎತ್ತಿಕೊಂಡು ಬರುತ್ತಿರುವ ಮಮತ, ಸರ್ಕಾರ ತನ್ನ ನಿಲುವು ಬದಲಿಸಿಕೊಳ್ಳಬೇಕು, ಅಲ್ಲಿಯವರೆಗೂ ನಮ್ಮ ರಾಜ್ಯದಲ್ಲಿ ಈ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.