ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವವರು ನಿಜವಾದ ರೈತರಲ್ಲ ಅವರೆಲ್ಲರೂ ನಕಲಿಗಳು ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದ ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು, ರೈತ ಸಂಘಟನೆಗಳ ಆಕ್ರೋಶದ ಬೆನ್ನಲ್ಲೇ ರೈತರ ಕ್ಷಮೆ ಯಾಚಿಸಿದ್ದಾರೆ.
ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ಅಪ್ಪಟ ಮೋದಿ ಅಭಿಮಾನಿ ಎಂಬುದು ಆತನ ಫೇಸ್ಬುಕ್ ಪೋಸ್ಟ್ಗಳಿಂದಲೇ ಸಾಬೀತಾಗುತ್ತದೆ. ಈ ಕಲಾವಿದ ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ ಎಂದು ರೈತರ ಕ್ಷಮೆ ಕೇಳಿದ್ದಾನಾದರೂ, ರೈತ ಹೋರಾಟದ ಕುರಿತಾದ ಈ ಬಿಜೆಪಿ ಬೆಂಬಲಿಗನ ಹೇಳಿಕೆಗಳು ಮಾತ್ರ ಉದ್ದೇಶ ಪೂರ್ವಕ ಎಂಬುದು ಸ್ಪಷ್ಟ.
ಯಕ್ಷಗಾನ ರಂಗದಲ್ಲಿ ಮೂವರು ಕಲಾವಿದರು ರೈತರನ್ನು ಅಪಹಾಸ್ಯ ಮಾಡಿ ತುಳುವಿನಲ್ಲಿ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವೇದಿಕೆಯಲ್ಲಿ ಸಹ ಕಲಾವಿದದರೊಂದಿಗೆ ಹಾಸ್ಯ ಸಂಭಾಷಣೆ ನಡೆಸಿದ್ದ ದಿನೇಶ್, “ಹಲವು ತಿಂಗಳುಗಳಿಂದ ಹಸಿರು ಶಾಲು, ಟೊಪಿ ಧರಿಸಿ ದೆಹಲಿ ಗಡಿಗಳಲ್ಲಿ ಹೋರಾಟ ಮಾಡುತ್ತಿರುವವರು ನಿಜವಾದ ರೈತರಲ್ಲ, ಅವರೆಲ್ಲರು ನಕಲಿಗಳು, ಒಂದು ವೇಳೆ ರೈತರು ರಸ್ತೆಯಲ್ಲಿ ಕುಳಿತಿದ್ದರೆ ನಮಗೆ ತಿನ್ನಲು ಅಕ್ಕಿ ಎಲ್ಲಿಂದ ಸಿಗುತ್ತಿತ್ತು? ನಿಜವಾದ ರೈತರು ಇನ್ನೂ ಗದ್ದೆಯಲ್ಲೇ ಇದ್ದಾರೆ. ಈಗ ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವುದು ತಂತಿಯ ಮೇಲೆ ನಡೆಯುವ ಮಂಗನಂತಹ ವ್ಯಕ್ತಿಯಲ್ಲ. ಬದಲಿಗೆ ಸಿಂಹದಂತಹ ವ್ಯಕ್ತಿ ಅಧಿಕಾರದಲ್ಲಿದ್ದಾರೆ. ನೀವು 6 ತಿಂಗಳಲ್ಲ 6 ವರ್ಷ ಹೋರಾಟ ನಡೆಸಿದರೂ ಪ್ರಯೋಜನವಿಲ್ಲ. ಕೃಷಿ ಕಾಯ್ದೆಯಿಂದ ರೈತರಿಗೆ ದಲ್ಲಾಳಿಗಳ ಕಾಟ ಇಲ್ಲದಂತಾಗುತ್ತದೆ. ರೈತ ತಾನು ಬೆಳೆದ ಬೆಳೆಯನ್ನು ನೇರವಾಗಿ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಲು ಈ ಕಾಯ್ದೆ ಅವಕಾಶ ಮಾಡಿ ಕೊಡುತ್ತದೆ. ಇಂತಹ ಕಾಯ್ದೆಯನ್ನು ವಿರೋಧಿಸುತ್ತಿರುವವರು ನಿಜವಾದ ರೈತರಲ್ಲ. ಅವರೆಲ್ಲ ನಕಲಿ ರೈತರು” ಎಂದು ವ್ಯಂಗ್ಯವಾಡಿದ್ದರು.
ಇದನ್ನೂ ಓದಿ: ಸೆ.27ಕ್ಕೆ ಭಾರತ್ ಬಂದ್: ಕರ್ನಾಟಕದಲ್ಲಿ ಬಂದ್ ಸಿದ್ಧತೆ ಬಗ್ಗೆ ಸಂಯುಕ್ತ ಹೋರಾಟದ ಬಹಿರಂಗ ಸಭೆ
ರೈತರ ಕುರಿತಾದ ದಿನೇಶ್ ಅವರ ಅವಹೇಳನಕಾರಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ರಾಜ್ಯದ ರೈತ ಸಂಘಟನೆಗಳ ನಾಯಕರು ಹಾಗೂ ರೈತಪರರು ಹಾಸ್ಯ ಕಲಾವಿದನ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು.
ದಿನೇಶ್ ರೈತರ ಕುರಿತು ವ್ಯಂಗ್ಯವಾಡಿದ್ದ ಸಂದರ್ಭದ ವಿಡಿಯೋ ತುಣುಕನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ನೆಟ್ಟಿಗ ಫೈಜಲ್ ಪೆರಾಜೆ, “ಕೃಷಿ ಕಾಯ್ದೆ ವಿರುದ್ಧ ಹೋರಾಡುತ್ತಿರುವವರು ನಕಲಿ ರೈತರು : ದಿನೇಶ್ ಕೋಡಪದವು ದಿನೇಶ್ ಕೋಡಪದವು ಅನ್ನುವ ಕಲಾವಿದರೊಬ್ಬರು ಯಕ್ಷರಂಗದಲ್ಲಿ ರಾಜಕೀಯ ಪಕ್ಷವೊಂದರ ಪ್ರಚಾರ ಮಾಡಿ ‘ರೈತರನ್ನೇ’ ಅವಮಾನಿಸಿದ ಕ್ರಮ ಖಂಡನೀಯ” ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.
ಕೃಷಿ ಕಾಯ್ದೆ ವಿರುದ್ಧ ಹೋರಾಡುತ್ತಿರುವವರು ನಕಲಿ ರೈತರು : ದಿನೇಶ್ ಕೋಡಪದವು
ದಿನೇಶ್ ಕೋಡಪದವು ಅನ್ನುವ ಕಲಾವಿದರೊಬ್ಬರು ಯಕ್ಷರಂಗದಲ್ಲಿ ರಾಜಕೀಯ ಪಕ್ಷವೊಂದರ ಪ್ರಚಾರ ಮಾಡಿ 'ರೈತರನ್ನೇ' ಅವಮಾನಿಸಿದ ಕ್ರಮ ಖಂಡನೀಯ.#Mangaluru #FarmersProtest #Yakshagana #BJP #DineshKodapadavu pic.twitter.com/iCFEsldj5D
— Faizal Peraje ?? (@FaizalPeraje) September 22, 2021
ರೈತ ಚಳವಳಿಯ ಬಗ್ಗೆ ನಡೆಸುತ್ತಿರುವ ಅಪಪ್ರಚಾರಕ್ಕೆ ಯಕ್ಷಗಾನ ಕಲೆಯನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯ. ಆ ಮೂಲಕ ಯಕ್ಷಗಾನವನ್ನೂ ಕೆಡಿಸುವ ಹುನ್ನಾರ ನಡೆಯುತ್ತಿದೆ’ ಎಂದು ಕರ್ನಾಟಕ ಪ್ರಾಂತ ಪ್ರದೇಶ ರೈತ ಸಂಘದ ಉಪಾಧ್ಯಕ್ಷ ಯಾದವ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, “ಯಕ್ಷಗಾನದ ಬಗ್ಗೆ ಗೌರವ ಇದೆ. ಆದರೆ, ಜೀವನದ ಅನುಭವ ಇಲ್ಲದವರು ಕಲೆಯ ಮೂಲಕ ಅನ್ನದಾತರನ್ನೇ ಹೀಯಾಳಿಸುವುದು ನೋವುಂಟು ಮಾಡಿದೆ’ ಎಂದು ಬೇಸರ ವ್ಯಕ್ತ ಪಡಿಸಿದ್ದರು.
ಇದಾದ ಬೆನ್ನಲ್ಲೇ ರೈತರ ಕ್ಷಮೆ ಯಾಚಿಸಿರುವ ದಿನೇಶ್, “ಯಾವುದೇ ರಾಜಕೀಯ ಅಥವಾ ಯಾರನ್ನಾದರೂ ನೋಯಿಸುವ ಉದ್ದೇಶದಿಂದ ಯಕ್ಷಗಾನದಲ್ಲಿ ನಾನು ಈ ರೀತಿಯ ಹೇಳಿಕೆ ನೀಡಿಲ್ಲ. ಕಲಾವಿದನಾಗಿ ಸಾಂದರ್ಭಿಕವಾಗಿ ನನ್ನ ಸಹ ಕಲಾವಿದನೊಂದಿಗೆ ಸಂಭಾಷಣೆ ನಡೆಸಿದ್ದೇನೆ. ರೈತರನ್ನಾಗಲಿ ಅಥವಾ ರೈತ ಹೋರಾಟವನ್ನಾಗಲಿ ಅಪಹಾಸ್ಯ ಮಾಡುವ ಉದ್ದೇಶ ನನ್ನದಾಗಿರಲಿಲ್ಲ” ಎಂದಿದ್ದಾರೆ. ಮುಂದುವರೆದು ಮಾತನಾಡಿರುವ ಅವರು, “ನನ್ನನ್ನು ಒಳಗೊಂಡಂತೆ ಸುಮಾರು 2 ಸಾವಿರ ಮಂದಿ ಯಕ್ಷಗಾನ ಕಲಾವಿದರು ಕೋವಿಡ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ನಮ್ಮ ಅನ್ನದಾತರು ನನ್ನ ಹೇಳಿಕೆಯಿಂದ ರೈತರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.
ಕೃಪೆ: ಅನ್ನದ ಋಣ
ಇದನ್ನೂ ಓದಿ: ಭಾರತ್ ಬಂದ್: ರೈತರ ಕರೆಗೆ ಅಖಿಲ ಭಾರತ ವಕೀಲರ ಒಕ್ಕೂಟದ ಸಂಪೂರ್ಣ ಬೆಂಬಲ