Homeಪುಸ್ತಕ ವಿಮರ್ಶೆನಾವೆಲ್ಲರು ಓದಲೇಬೇಕಾದ ಪುಸ್ತಕ: 'ಎಲ್ಲರಿಗಾಗಿ ಸ್ತ್ರೀವಾದ - ಆಪ್ತತೆಯ ರಾಜಕಾರಣ'

ನಾವೆಲ್ಲರು ಓದಲೇಬೇಕಾದ ಪುಸ್ತಕ: ‘ಎಲ್ಲರಿಗಾಗಿ ಸ್ತ್ರೀವಾದ – ಆಪ್ತತೆಯ ರಾಜಕಾರಣ’

ಮಹಿಳೆಯನ್ನು ‘ಅನ್ಯ’ಳನ್ನಾಗಿಸಿ ನೋಡುವ ಪರಿಪಾಠವನ್ನು ಭಂಜನ ಮಾಡಬೇಕಿದೆ ಎನ್ನುವ ಬೆಲ್ ಹುಕ್ಸ್ ಪುರುಷವಾದಿ ಧೋರಣೆಗಳನ್ನು ಹೇಗೆಲ್ಲ ನಿರಾಕರಿಸುವ ಅಗತ್ಯವಿದೆ ಎಂಬುದನ್ನು ಇಲ್ಲಿ ಚರ್ಚಿಸಿದ್ದಾರೆ.

- Advertisement -
- Advertisement -

ಅಮೆರಿಕದ ಕಪ್ಪು ಸಮುದಾಯದ ಪ್ರಖರ ಸ್ತ್ರೀವಾದಿ ಲೇಖಕಿ, ವಿಮರ್ಶಕಿ, ಚಿಂತಕಿ, ಹಾಗೂ ಮಹಿಳಾ ಚಳವಳಿಯಲ್ಲಿ ಸಕ್ರಿಯ ಹೋರಾಟಗಾರ್ತಿಯಾಗಿರುವ ಬೆಲ್ ಹುಕ್ಸ್ ಅವರು ‘ಫೆಮಿನಿಸಂ ಇಸ್ ಫಾರ್ ಎವೆರಿಬಡಿ: ಪ್ಯಾಶನೇಟ್ ಪಾಲಿಟಿಕ್ಸ್’ (2000) ಎಂಬ ಮಹತ್ವದ ಕೃತಿಯನ್ನು ಬರೆದಿದ್ದಾರೆ. ಇದು ಸ್ತ್ರೀವಾದವನ್ನು ಮರುಪರಿಶೀಲನೆಗೆ ಒಳಪಡಿಸುತ್ತಲೇ ಅನೇಕ ಸಾಂಪ್ರದಾಯಿಕ ಧೋರಣೆಗಳನ್ನು ಬದಲಿಸಿಕೊಳ್ಳುವಂತೆ ಮಾಡುತ್ತದೆ. ಅಮೆರಿಕದ ಸ್ತ್ರೀವಾದಿ ಚಳವಳಿಗೆ ಹೊಸ ದಾರ್ಶನಿಕತೆಯನ್ನು ನೀಡಿರುವ ಈ ಕೃತಿಯನ್ನು ಕನ್ನಡದ ಮುಖ್ಯ ಸ್ತ್ರೀವಾದಿ ಚಿಂತಕಿಯಾದ ಡಾ. ಎಚ್. ಎಸ್. ಶ್ರೀಮತಿಯವರು ಅತ್ಯಂತ ಲವಲವಿಕೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಅಮೆರಿಕದ ಒಂದು ಸಾಂಪ್ರದಾಯಿಕ ಮೂಲಭೂತವಾದಿ ಕುಟುಂಬದಲ್ಲಿ ಹುಟ್ಟಿದ ಬೆಲ್ ಹುಕ್ಸ್ ಬಾಲ್ಯದಿಂದಲೇ ವರ್ಗ, ಜನಾಂಗೀಯ ಹಾಗೂ ಲಿಂಗ-ಈ ಮೂರು ನೆಲೆಯಿಂದಲೂ ತಾರತಮ್ಯತೆಯನ್ನು ಸ್ವತಃ ಅನುಭವಿಸಿದರು. ತಾವು ಓದುವ ಕಾಲೇಜಿನಲ್ಲಿಯೂ ಒಬ್ಬಳೇ ಕಪ್ಪು ಮಹಿಳೆಯಾಗಿ ಅಪಮಾನಗಳನ್ನು ಎದುರಿಸಿದರು. ಅಸಮಾನತೆಯ ವ್ಯವಸ್ಥೆಯಲ್ಲಿಯೇ ಬೆಲ್ ಹುಕ್ಸ್ ತಮ್ಮ ಗಟ್ಟಿಯಾದ ಸ್ತ್ರೀವಾದಿ ನಿಲುವುಗಳನ್ನು ರೂಪಿಸಿಕೊಂಡರು. ಈ ಕೃತಿಯಲ್ಲಿ ಬೆಲ್ ಹುಕ್ಸ್‌ರವರ ಆತ್ಮಕಥಾನಕದ ಕೆಲವು ಎಳೆಗಳು ಸೇರಿಕೊಂಡಿದ್ದರೂ ಅವರೆಲ್ಲೂ ಭಾವುಕರಾಗುವುದಿಲ್ಲ. ಅವರು ಎದುರುಗೊಂಡ ಅವಮಾನಗಳನ್ನು ವೈಯಕ್ತಿಕವಾಗಿಯಷ್ಟೇ ಪರಿಭಾವಿಸಿಕೊಳ್ಳದೆ ಒಟ್ಟಾರೆ ಸ್ತ್ರೀವಾದಿ ಚಳವಳಿಯ ಹಾಸಿನಲ್ಲಿಟ್ಟು ನೋಡುವ ವ್ಯವಧಾನವನ್ನು ಪಡೆದುಕೊಂಡಿದ್ದಾರೆ. ಅವರ ಬದುಕು ಹೆಚ್ಚು ಸ್ತ್ರೀವಾದಿ ಚಳವಳಿಯೊಂದಿಗೆ ತಳುಕು ಹಾಕಿಕೊಂಡು ಸಾರ್ವಜನಿಕ ಆಯಾಮವನ್ನು ಪಡೆದುಕೊಂಡಿದೆ. ಈ ಕೃತಿಯು ಅಮೆರಿಕದಂತಹ ಅತ್ಯಾಧುನಿಕ ದೇಶದಲ್ಲಿ ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕಪ್ಪು ಮಹಿಳೆಯರ ಅಸ್ಮಿತೆಯನ್ನು ನಿರ್ಲಿಪ್ತವಾಗಿ ಶೋಧಿಸುತ್ತದೆ. ಅವರು ಎಲ್ಲಿಯೂ ಕೂಡ ಪುರುಷರ ಬಗ್ಗೆ ದ್ವೇಷವನ್ನು ಕಾರುವುದಿಲ್ಲ. ಪುರುಷ ಪ್ರಧಾನತೆಯ ಅಧಿಕಾರದಿಂದ ನಡೆಯುವ ಹಿಂಸೆ, ದಬ್ಬಾಳಿಕೆ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟುವ ಸಲುವಾಗಿ ಪರ್ಯಾಯ ಚಿಂತನಧಾರೆಗಳನ್ನು ಈ ಕೃತಿಯುದ್ದಕ್ಕೂ ಮಂಡಿಸುತ್ತ ಹೋಗಿದ್ದಾರೆ.

ಪಿತೃಪ್ರಧಾನತೆಯನ್ನು ಹೊಂದಿರುವ ಸಮಾಜದಲ್ಲಿ ಜಗತ್ತಿನ ಯಾವ ಮೂಲೆಯಲ್ಲಾದರು ಮಹಿಳೆಯರು ಬಲಿಪಶುಗಳಾಗಿರುತ್ತಾರೆ. ಆದ್ದರಿಂದಲೇ ಮಹಿಳೆಯರ ಸಮಾನತೆಯ ಹಕ್ಕುಗಳಿಗಾಗಿ ಸ್ತ್ರೀವಾದಿ ಚಳವಳಿಗಳು ಹುಟ್ಟಿಕೊಂಡವು. ಅದರಲ್ಲಿಯೂ ಮುಖ್ಯವಾಗಿ ಅಮೆರಿಕದ ಬಿಳಿಯ ಮಹಿಳೆಯರು ಶುರುವಿನಲ್ಲಿ ನಡೆಸಿದ ಸ್ತ್ರೀವಾದಿ ಹೋರಾಟಗಳು ಜನಾಂಗ, ವರ್ಗ ಹಾಗೂ ಲಿಂಗ ತಾರತಮ್ಯತೆಯ ವಿರುದ್ಧವಾಗಿ ಸೆಣಸುವ ಉದಾರವಾದಿ ಆಶಯಗಳನ್ನು ಹೊಂದಿದ್ದರು. ಆದರೆ ಆಳದಲ್ಲಿ ಅವರು ಪೂರ್ವಗ್ರಹಪೀಡಿತ ಮನಸ್ಥಿತಿಯವರಾಗಿದ್ದರು. ಯಾಕೆಂದರೆ ಅವರ ಚಿಂತನೆಗಳು ಸ್ವಹಿತಾಸಕ್ತಿಯಿಂದ ಮುಕ್ತವಾಗಿರಲಿಲ್ಲ. ಇಂತಹ ಹಲವು ಸಂಗತಿಗಳನ್ನು ಚರ್ಚೆಗೆ ಎತ್ತಿಕೊಳ್ಳುವ ಬೆಲ್ ಹುಕ್ಸ್‌ರವರು ಅಮೆರಿಕದ ಸ್ತ್ರೀವಾದಿ ಚಳವಳಿಯ ಸಂಕುಚಿತ ಮನೋಧರ್ಮವನ್ನು ನಿಷ್ಠುರವಾದ ವಿಮರ್ಶಾತ್ಮಕ ಧಾಟಿಯಲ್ಲಿ ಬಯಲಿಗೆಳೆದರು. ಅನುಕಂಪದ ‘ಸೋದರಿತ್ವ’ ತತ್ವದಡಿಯಲ್ಲಿ ಬಿಳಿಯ ಮಹಿಳೆಯರು ಕಪ್ಪು ಮಹಿಳೆಯರ ಪರವಾಗಿ ಸಮಾನತೆಯ ಮಾತುಗಳನ್ನಾಡುತ್ತಲೇ ಅವರನ್ನು ತಮ್ಮ ಅಧೀನತೆಗೆ ಪಳಗಿಸಿಕೊಂಡಿದ್ದ ರಾಜಕಾರಣವನ್ನು ನಿರ್ಭೀತಿಯಿಂದ ಬರೆದರು. ಒಂದು ಕಡೆಯಲ್ಲಿ ಅವರು ಪುರುಷ ಪ್ರಧಾನತೆಯ ದಬ್ಬಾಳಿಕೆಯನ್ನು ವಿರೋಧಿಸುತ್ತಿದ್ದರು ಹಾಗೂ ಮತ್ತೊಂದೆಡೆಯಲ್ಲಿ ಜನಾಂಗಿಯ ಭೇದಭಾವವನ್ನು ಪೋಷಿಸುತ್ತಿದ್ದ ವೈರುಧ್ಯವನ್ನು ದಿಟ್ಟವಾಗಿ ತಮ್ಮ ಕೃತಿಯಲ್ಲಿ ತೆರೆದಿಟ್ಟರು. ಕಪ್ಪು ಮಹಿಳೆಯ ದೃಷ್ಟಿಕೋನದಿಂದ ಸ್ತ್ರೀವಾದ ಚಳವಳಿಗೆ ವಿಸ್ಕೃತವಾದ ಆಯಾಮಗಳನ್ನು ಜೋಡಿಸಿದರು.

ಭಾರತದ ಸಂದರ್ಭದಲ್ಲಿ ಜಾತಿವ್ಯವಸ್ಥೆಯು ಎಲ್ಲ ಶೋಷಣೆಗಳ ಮೂಲವಾಗಿರುತ್ತದೆ. ನಮ್ಮಲ್ಲಿ ಎಲ್ಲ ವರ್ಗದ ಹೆಂಗಸರು ದಮನಿತರೇ ಆಗಿದ್ದಾರೆ. ಆದರೆ ದಲಿತ ಮಹಿಳೆಯರು ಜಾತಿ, ವರ್ಗ ಹಾಗೂ ಲಿಂಗದ ನೆಲೆಯಿಂದ ದಿನದಿತ್ಯವೂ ಪುರುಷ ದಬ್ಬಾಳಿಕೆಯನ್ನು ಅನುಭವಿಸುತ್ತಿರುತ್ತಾರೆ. ಇದನ್ನೆಲ್ಲ ಗಮನಿಸಿದರೆ ನಮ್ಮಲ್ಲಿ ಸ್ತ್ರೀವಾದಿ ಚಳವಳಿಯು ಇನ್ನೂ ಪ್ರಾಥಮಿಕ ಹಂತದಲ್ಲಿಯೇ ಉಳಿದುಕೊಂಡಿದೆ. ಸ್ತ್ರೀವಾದದ ಚರ್ಚೆಯೆಂದರೆ ಅದು ಕೇವಲ ಸಾಹಿತ್ಯ ಕೃತಿಗಳಿಗೆ ಹಾಗೂ ಅಕಾಡೆಮಿಕ್ ವಲಯಕ್ಕಷ್ಟೇ ಸೀಮಿತವಾಗಿದೆ. ಅಷ್ಟಿಷ್ಟು ನಡೆದ ಅಧ್ಯಯನಗಳು ಪ್ರಧಾನವಾಹಿನಿಗೆ ಬರುತ್ತಿಲ್ಲ. ಎಲ್ಲ ವರ್ಗದ ಜನಸಾಮಾನ್ಯರಿಗೆ ಸ್ತ್ರೀವಾದವನ್ನು ಕುರಿತು ಅರಿವನ್ನು ನೀಡುವ ಪುಸ್ತಕಗಳ ಕೊರತೆಯಿದೆ. ಈ ನಿಟ್ಟಿನಲ್ಲಿ ಎಚ್.ಎಸ್. ಶ್ರೀಮತಿಯವರು ಚಿಮಮಾಂಡ ನ್‍ಗೊಜಿ ಅಡಿಚಿಯವರ ‘ವಿ ಆಲ್ ಶುಡ್ ಬಿ ಫೆಮಿನಿಸ್ಟ್’ ಎಂಬ ಉಪನ್ಯಾಸವನ್ನು ಭಾಷಾಂತರಿಸಿ ‘ನಾವೆಲ್ಲರೂ ಸ್ತ್ರೀವಾದಿಗಳಾಗಬೇಕು’ ಎಂಬ ಪುಟ್ಟ ಕೃತಿಯನ್ನು ನೀಡಿದ್ದಾರೆ. ಇದೇ ದಾರಿಯಲ್ಲಿ ಬೆಲ್ ಹುಕ್ಸ್ ಅವರ ಕೃತಿಯು ಸ್ತ್ರೀವಾದಿ ಶಿಕ್ಷಣದ ತರಬೇತಿಯನ್ನು ನೀಡುತ್ತದೆ. ಇಂತಹ ಕೃತಿಗಳು ಹೆಚ್ಚೆಚ್ಚು ಕನ್ನಡದಲ್ಲಿ ಬರಬೇಕಾಗಿದೆ ಹಾಗೂ ಅವು ಸುಲಭವಾಗಿ ಓದುಗರಿಗೆ ಕೈಗೆಟಕುವ ವ್ಯವಸ್ಥೆಯಾಗಬೇಕಿದೆ.

ನಮ್ಮ ಶಾಲಾಕಾಲೇಜುಗಳ ಶೈಕ್ಷಣಿಕ ಪಠ್ಯಗಳು ಅತ್ಯಂತ ಸಾಂಪ್ರದಾಯಿಕ ರೀತಿಯಲ್ಲಿವೆ. ಇನ್ನು ಸ್ತ್ರೀವಾದಿ ಆಲೋಚನೆಗಳು ನಮ್ಮ ಶಿಕ್ಷಣ ವ್ಯವಸ್ಥೆಯ ಅಂಗವಾಗಿಲ್ಲ. ಮನೆಯಿಂದಲೇ ಹೆಣ್ಣುಮಕ್ಕಳನ್ನು ತರತಮ ಭಾವನೆಯಿಂದ ಬೆಳೆಸಲಾಗುತ್ತದೆ. ಶಾಲಾ ಕಾಲೇಜುಗಳು ಇದೇ ಲಿಂಗತಾರತಮ್ಯವನ್ನು ಪೋಷಿಸಿಕೊಂಡು ಹೋಗುತ್ತಿವೆ. ಇದರಿಂದಾಗಿ ಹೆಣ್ಣನ್ನು ಎರಡನೇ ದರ್ಜೆಯಲ್ಲಿಡುವ ಕೀಳು ಪ್ರಜ್ಞೆಯು ಜಾಗೃತವಾಗಿರುತ್ತದೆ. ಪಿತೃಪ್ರಧಾನ ಮೌಲ್ಯಗಳನ್ನು ಎತ್ತಿಹಿಡಿಯುವುದರಿಂದ ಮಹಿಳೆಯರ ಮೇಲಿನ ಯಜಮಾನಿಕೆಯು ಅವ್ಯಾಹತವಾಗಿ ಮುಂದುವರೆಯುತ್ತದೆ. ಅದಕ್ಕಾಗಿಯೇ ಸ್ತ್ರೀವಾದದ ಕನಿಷ್ಟ ಶಿಕ್ಷಣವಾದರು ಗಂಡು ಮಕ್ಕಳಿಗೂ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪರಸ್ಪರ ಹೆಣ್ಣು-ಗಂಡುಗಳ ನಡುವಿನ ಸಾಮರಸ್ಯದ ಅರಿವಿಗಾಗಿ ‘ಎಲ್ಲರಿಗಾಗಿ ಸ್ತ್ರೀವಾದ’ ಕೃತಿಯು ಒಂದು ಮುಖ್ಯವಾದ ಕೈಪಿಡಿಯಾಗಿದೆ.

‘ಎಲ್ಲರಿಗಾಗಿ ಸ್ತ್ರೀವಾದ’ವು ಬರಿ ಅಮೆರಿಕನ್ ಸ್ತ್ರೀವಾದಿ ಚಳವಳಿಯನ್ನಷ್ಟೆ ಗಮನದಲ್ಲಿಟ್ಟುಕೊಂಡು ರಚನೆಯಾದ ಕೃತಿಯಲ್ಲ. ಜಾಗತಿಕ ಸ್ತ್ರೀವಾದವನ್ನು ವಿಮರ್ಶಿಸುತ್ತಲೇ ಆಯಾ ಕಾಲಘಟ್ಟದ ಚಳವಳಿಯ ಮಿತಿಗಳನ್ನು ಕಾಣಿಸಲಾಗಿದೆ. ಸಾಮಾಜೀಕರಣದ ಭಾಗವಾಗಿ ಹೆಣ್ಣನ್ನು ಪಳಗಿಸಿ ಅಧೀನವಾಗಿಸಿಕೊಳ್ಳುವ ಲೈಂಗಿಕತಾವಾದದಿಂದ ಹೊರಬರುವುದರ ಬಗ್ಗೆ ಸಾಕಷ್ಟು ಒಳನೋಟಗಳಿವೆ. ಪುರುಷರ ಕಣ್ಣಳತೆಯಲ್ಲಿ ತಮ್ಮ ದೇಹ ಮತ್ತು ಸೌಂದರ್ಯವನ್ನು ಪರಿಭಾವಿಸಿಕೊಳ್ಳುವ ಮಹಿಳೆಯು ಪಿತೃಪ್ರಧಾನತೆಯನ್ನು ಒಪ್ಪಿಕೊಂಡವರೇ ಆಗಿರುತ್ತಾರೆ. ಸಮೂಹ ಮಾಧ್ಯಮಗಳು ಹಾಗೂ ಜಾಹಿರಾತುಗಳು ಹೆಣ್ಣಿನ ಬಳಕುವ ದೇಹವನ್ನೇ ಬಂಡವಾಳವಾಗಿಸಿಕೊಂಡು ಅವರಿಗೆ ಸೌಂದರ್ಯವರ್ಧಕ ಸಾಧನಗಳನ್ನು ಮಾರಾಟ ಮಾಡುವ ಜಾಲವನ್ನು ಸೃಷ್ಟಿಸಿಕೊಂಡಿವೆ. ಹೆಣ್ಣಿಗೆ ತನ್ನ ದೇಹ ಹಾಗೂ ಲೈಂಗಿಕತೆಯ ಮೇಲೆ ಅವಳದ್ದೇ ಹಕ್ಕುಗಳಿರಬೇಕು ಎಂಬುದನ್ನು ಎಲ್ಲ ಸ್ತ್ರೀವಾದಿಗಳು ಹೇಳುವ ಮಾತಾಗಿದೆ. ಆದರೆ ಅನೇಕ ಮಹಿಳೆಯರು ಕೂಡ ಪಿತೃಪ್ರಧಾನತೆಯ ಮೌಲ್ಯಗಳನ್ನು ಹಾಗೂ ಯಜಮಾನಿಕೆಯನ್ನು ಬೆಂಬಲಿಸುವವರಾಗಿರುತ್ತಾರೆ. ಇಂತಹ ಪುರುಷನಿಷ್ಠ ನಂಬಿಕೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಮಹಿಳೆಯರನ್ನು ಸ್ತ್ರೀವಾದಿಗಳೆಂದು ಕರೆಯಲಾಗದು. ಮಹಿಳೆಯರ ಮೂಲಕ ಮುಂದುವರೆಯುವ ಪುರುಷ ಪ್ರಧಾನತೆಯನ್ನು ಬೆಲ್ ಹುಕ್ಸ್ ತಮ್ಮ ಕೃತಿಯಲ್ಲಿ ಸಾಕಷ್ಟು ಕಟುವಾಗಿ ಮಿಮರ್ಶಿಸಿದ್ದಾರೆ.

ಮಹಿಳೆಯನ್ನು ‘ಅನ್ಯ’ಳನ್ನಾಗಿಸಿ ನೋಡುವ ಪರಿಪಾಠವನ್ನು ಭಂಜನ ಮಾಡಬೇಕಿದೆ ಎನ್ನುವ ಬೆಲ್ ಹುಕ್ಸ್ ಪುರುಷವಾದಿ ಧೋರಣೆಗಳನ್ನು ಹೇಗೆಲ್ಲ ನಿರಾಕರಿಸುವ ಅಗತ್ಯವಿದೆ ಎಂಬುದನ್ನು ಚರ್ಚಿಸಿದ್ದಾರೆ. ಮಹಿಳೆಯನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾಗಬೇಕಾದರೆ ಗಂಡು ಪ್ರಧಾನ ನಿಲುವುಗಳಲ್ಲಿ ಪಲ್ಲಟವನ್ನು ತರಬೇಕಾಗುತ್ತದೆ. ಇದಕ್ಕಾಗಿ ವ್ಯಾಪಕವಾಗಿ ಸ್ತ್ರೀವಾದಿ ಪ್ರಜ್ಞಾ ತರಬೇತಿಯು ಬೇಕಾಗುತ್ತದೆ. ಸ್ತ್ರೀವಾದಿ ಚಿಂತನೆಗಳು ಎಲ್ಲರಿಗೂ ದಕ್ಕುವ ಹಾಗೆ ಮಾಡಬೇಕೆನ್ನುವ ಸಾಮಾಜಿಕ ಕಾಳಜಿಯು ಬೆಲ್ ಹುಕ್ಸ್‌ರವರ ಕೃತಿಯಲ್ಲಿ ಹರಡಿಕೊಂಡಿದೆ. ಬೆಲ್ ಹುಕ್ಸ್‌ರವರ ಸ್ತ್ರೀವಾದಿ ಆಲೋಚನೆಗಳನ್ನು ನಮ್ಮ ಪರಿಸರಕ್ಕೆ ಒಗ್ಗಿಸಿಕೊಂಡು ಚರ್ಚಿಸುವ ಅಗತ್ಯವಿದೆ. ಸದರಿ ಕೃತಿಯ ಅನುವಾದದಲ್ಲಿ ಬಳಕೆಯಾಗಿರುವ ಸ್ತ್ರೀವಾದಿ ಲೇಖಕಿಯರ ಬಗ್ಗೆ ಹಾಗೂ ಕೆಲವು ಪರಿಭಾಷೆಗಳ ಕುರಿತು ಅನುಬಂಧದಲ್ಲಿ ವಿವರಣೆಯನ್ನು ನೀಡಿದ್ದರೆ ಸಾಮಾನ್ಯ ಓದುಗರಿಗೆ ಹೆಚ್ಚು ಉಪಯುಕ್ತವಾಗುತ್ತಿತ್ತು.

ಎಲ್ಲರಿಗಾಗಿ ಸ್ತ್ರೀವಾದ: ಆಪ್ತತೆಯ ರಾಜಕಾರಣ
ಮೂಲ: ಬೆಲ್ ಹುಕ್ಸ್
ಕನ್ನಡಕ್ಕೆ: ಎಚ್.ಎಸ್. ಶ್ರೀಮತಿ
ಪ್ರಕಾಶಕರು: ಆಕೃತಿ ಪುಸ್ತಕ, ರಾಜಾಜಿನಗರ
ಪುಟ: 208 ಬೆಲೆ: 150 ರೂಪಾಯಿ

* ಡಾ. ಸುಭಾಷ್ ರಾಜಮಾನೆ

ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ ಇಂಗ್ಲಿಷ್ ಮರಾಠಿ, ಭಾಷೆಗಳನ್ನು ಬಲ್ಲ ಇವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಇಮೇಲ್ ವಿಳಾಸ [email protected]


ಇದನ್ನೂ ಓದಿ: ಸಾರಾ ಶಗುಫ್ತಾ: ‘ನೋವಿನ ಗಾಯಗಳಿಗೆ ಸಾಕ್ಷಿಯಾದ ಕಾವ್ಯ’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. It’s an interesting reading but one may have his or her differences. It’s neither easy nor difficult to reject the feminist perspective unless we seriously discuss alternate explanations to define the relationship between a male and a female

LEAVE A REPLY

Please enter your comment!
Please enter your name here

- Advertisment -

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...