Homeಪುಸ್ತಕ ವಿಮರ್ಶೆನಾವೆಲ್ಲರು ಓದಲೇಬೇಕಾದ ಪುಸ್ತಕ: 'ಎಲ್ಲರಿಗಾಗಿ ಸ್ತ್ರೀವಾದ - ಆಪ್ತತೆಯ ರಾಜಕಾರಣ'

ನಾವೆಲ್ಲರು ಓದಲೇಬೇಕಾದ ಪುಸ್ತಕ: ‘ಎಲ್ಲರಿಗಾಗಿ ಸ್ತ್ರೀವಾದ – ಆಪ್ತತೆಯ ರಾಜಕಾರಣ’

ಮಹಿಳೆಯನ್ನು ‘ಅನ್ಯ’ಳನ್ನಾಗಿಸಿ ನೋಡುವ ಪರಿಪಾಠವನ್ನು ಭಂಜನ ಮಾಡಬೇಕಿದೆ ಎನ್ನುವ ಬೆಲ್ ಹುಕ್ಸ್ ಪುರುಷವಾದಿ ಧೋರಣೆಗಳನ್ನು ಹೇಗೆಲ್ಲ ನಿರಾಕರಿಸುವ ಅಗತ್ಯವಿದೆ ಎಂಬುದನ್ನು ಇಲ್ಲಿ ಚರ್ಚಿಸಿದ್ದಾರೆ.

- Advertisement -
- Advertisement -

ಅಮೆರಿಕದ ಕಪ್ಪು ಸಮುದಾಯದ ಪ್ರಖರ ಸ್ತ್ರೀವಾದಿ ಲೇಖಕಿ, ವಿಮರ್ಶಕಿ, ಚಿಂತಕಿ, ಹಾಗೂ ಮಹಿಳಾ ಚಳವಳಿಯಲ್ಲಿ ಸಕ್ರಿಯ ಹೋರಾಟಗಾರ್ತಿಯಾಗಿರುವ ಬೆಲ್ ಹುಕ್ಸ್ ಅವರು ‘ಫೆಮಿನಿಸಂ ಇಸ್ ಫಾರ್ ಎವೆರಿಬಡಿ: ಪ್ಯಾಶನೇಟ್ ಪಾಲಿಟಿಕ್ಸ್’ (2000) ಎಂಬ ಮಹತ್ವದ ಕೃತಿಯನ್ನು ಬರೆದಿದ್ದಾರೆ. ಇದು ಸ್ತ್ರೀವಾದವನ್ನು ಮರುಪರಿಶೀಲನೆಗೆ ಒಳಪಡಿಸುತ್ತಲೇ ಅನೇಕ ಸಾಂಪ್ರದಾಯಿಕ ಧೋರಣೆಗಳನ್ನು ಬದಲಿಸಿಕೊಳ್ಳುವಂತೆ ಮಾಡುತ್ತದೆ. ಅಮೆರಿಕದ ಸ್ತ್ರೀವಾದಿ ಚಳವಳಿಗೆ ಹೊಸ ದಾರ್ಶನಿಕತೆಯನ್ನು ನೀಡಿರುವ ಈ ಕೃತಿಯನ್ನು ಕನ್ನಡದ ಮುಖ್ಯ ಸ್ತ್ರೀವಾದಿ ಚಿಂತಕಿಯಾದ ಡಾ. ಎಚ್. ಎಸ್. ಶ್ರೀಮತಿಯವರು ಅತ್ಯಂತ ಲವಲವಿಕೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಅಮೆರಿಕದ ಒಂದು ಸಾಂಪ್ರದಾಯಿಕ ಮೂಲಭೂತವಾದಿ ಕುಟುಂಬದಲ್ಲಿ ಹುಟ್ಟಿದ ಬೆಲ್ ಹುಕ್ಸ್ ಬಾಲ್ಯದಿಂದಲೇ ವರ್ಗ, ಜನಾಂಗೀಯ ಹಾಗೂ ಲಿಂಗ-ಈ ಮೂರು ನೆಲೆಯಿಂದಲೂ ತಾರತಮ್ಯತೆಯನ್ನು ಸ್ವತಃ ಅನುಭವಿಸಿದರು. ತಾವು ಓದುವ ಕಾಲೇಜಿನಲ್ಲಿಯೂ ಒಬ್ಬಳೇ ಕಪ್ಪು ಮಹಿಳೆಯಾಗಿ ಅಪಮಾನಗಳನ್ನು ಎದುರಿಸಿದರು. ಅಸಮಾನತೆಯ ವ್ಯವಸ್ಥೆಯಲ್ಲಿಯೇ ಬೆಲ್ ಹುಕ್ಸ್ ತಮ್ಮ ಗಟ್ಟಿಯಾದ ಸ್ತ್ರೀವಾದಿ ನಿಲುವುಗಳನ್ನು ರೂಪಿಸಿಕೊಂಡರು. ಈ ಕೃತಿಯಲ್ಲಿ ಬೆಲ್ ಹುಕ್ಸ್‌ರವರ ಆತ್ಮಕಥಾನಕದ ಕೆಲವು ಎಳೆಗಳು ಸೇರಿಕೊಂಡಿದ್ದರೂ ಅವರೆಲ್ಲೂ ಭಾವುಕರಾಗುವುದಿಲ್ಲ. ಅವರು ಎದುರುಗೊಂಡ ಅವಮಾನಗಳನ್ನು ವೈಯಕ್ತಿಕವಾಗಿಯಷ್ಟೇ ಪರಿಭಾವಿಸಿಕೊಳ್ಳದೆ ಒಟ್ಟಾರೆ ಸ್ತ್ರೀವಾದಿ ಚಳವಳಿಯ ಹಾಸಿನಲ್ಲಿಟ್ಟು ನೋಡುವ ವ್ಯವಧಾನವನ್ನು ಪಡೆದುಕೊಂಡಿದ್ದಾರೆ. ಅವರ ಬದುಕು ಹೆಚ್ಚು ಸ್ತ್ರೀವಾದಿ ಚಳವಳಿಯೊಂದಿಗೆ ತಳುಕು ಹಾಕಿಕೊಂಡು ಸಾರ್ವಜನಿಕ ಆಯಾಮವನ್ನು ಪಡೆದುಕೊಂಡಿದೆ. ಈ ಕೃತಿಯು ಅಮೆರಿಕದಂತಹ ಅತ್ಯಾಧುನಿಕ ದೇಶದಲ್ಲಿ ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕಪ್ಪು ಮಹಿಳೆಯರ ಅಸ್ಮಿತೆಯನ್ನು ನಿರ್ಲಿಪ್ತವಾಗಿ ಶೋಧಿಸುತ್ತದೆ. ಅವರು ಎಲ್ಲಿಯೂ ಕೂಡ ಪುರುಷರ ಬಗ್ಗೆ ದ್ವೇಷವನ್ನು ಕಾರುವುದಿಲ್ಲ. ಪುರುಷ ಪ್ರಧಾನತೆಯ ಅಧಿಕಾರದಿಂದ ನಡೆಯುವ ಹಿಂಸೆ, ದಬ್ಬಾಳಿಕೆ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟುವ ಸಲುವಾಗಿ ಪರ್ಯಾಯ ಚಿಂತನಧಾರೆಗಳನ್ನು ಈ ಕೃತಿಯುದ್ದಕ್ಕೂ ಮಂಡಿಸುತ್ತ ಹೋಗಿದ್ದಾರೆ.

ಪಿತೃಪ್ರಧಾನತೆಯನ್ನು ಹೊಂದಿರುವ ಸಮಾಜದಲ್ಲಿ ಜಗತ್ತಿನ ಯಾವ ಮೂಲೆಯಲ್ಲಾದರು ಮಹಿಳೆಯರು ಬಲಿಪಶುಗಳಾಗಿರುತ್ತಾರೆ. ಆದ್ದರಿಂದಲೇ ಮಹಿಳೆಯರ ಸಮಾನತೆಯ ಹಕ್ಕುಗಳಿಗಾಗಿ ಸ್ತ್ರೀವಾದಿ ಚಳವಳಿಗಳು ಹುಟ್ಟಿಕೊಂಡವು. ಅದರಲ್ಲಿಯೂ ಮುಖ್ಯವಾಗಿ ಅಮೆರಿಕದ ಬಿಳಿಯ ಮಹಿಳೆಯರು ಶುರುವಿನಲ್ಲಿ ನಡೆಸಿದ ಸ್ತ್ರೀವಾದಿ ಹೋರಾಟಗಳು ಜನಾಂಗ, ವರ್ಗ ಹಾಗೂ ಲಿಂಗ ತಾರತಮ್ಯತೆಯ ವಿರುದ್ಧವಾಗಿ ಸೆಣಸುವ ಉದಾರವಾದಿ ಆಶಯಗಳನ್ನು ಹೊಂದಿದ್ದರು. ಆದರೆ ಆಳದಲ್ಲಿ ಅವರು ಪೂರ್ವಗ್ರಹಪೀಡಿತ ಮನಸ್ಥಿತಿಯವರಾಗಿದ್ದರು. ಯಾಕೆಂದರೆ ಅವರ ಚಿಂತನೆಗಳು ಸ್ವಹಿತಾಸಕ್ತಿಯಿಂದ ಮುಕ್ತವಾಗಿರಲಿಲ್ಲ. ಇಂತಹ ಹಲವು ಸಂಗತಿಗಳನ್ನು ಚರ್ಚೆಗೆ ಎತ್ತಿಕೊಳ್ಳುವ ಬೆಲ್ ಹುಕ್ಸ್‌ರವರು ಅಮೆರಿಕದ ಸ್ತ್ರೀವಾದಿ ಚಳವಳಿಯ ಸಂಕುಚಿತ ಮನೋಧರ್ಮವನ್ನು ನಿಷ್ಠುರವಾದ ವಿಮರ್ಶಾತ್ಮಕ ಧಾಟಿಯಲ್ಲಿ ಬಯಲಿಗೆಳೆದರು. ಅನುಕಂಪದ ‘ಸೋದರಿತ್ವ’ ತತ್ವದಡಿಯಲ್ಲಿ ಬಿಳಿಯ ಮಹಿಳೆಯರು ಕಪ್ಪು ಮಹಿಳೆಯರ ಪರವಾಗಿ ಸಮಾನತೆಯ ಮಾತುಗಳನ್ನಾಡುತ್ತಲೇ ಅವರನ್ನು ತಮ್ಮ ಅಧೀನತೆಗೆ ಪಳಗಿಸಿಕೊಂಡಿದ್ದ ರಾಜಕಾರಣವನ್ನು ನಿರ್ಭೀತಿಯಿಂದ ಬರೆದರು. ಒಂದು ಕಡೆಯಲ್ಲಿ ಅವರು ಪುರುಷ ಪ್ರಧಾನತೆಯ ದಬ್ಬಾಳಿಕೆಯನ್ನು ವಿರೋಧಿಸುತ್ತಿದ್ದರು ಹಾಗೂ ಮತ್ತೊಂದೆಡೆಯಲ್ಲಿ ಜನಾಂಗಿಯ ಭೇದಭಾವವನ್ನು ಪೋಷಿಸುತ್ತಿದ್ದ ವೈರುಧ್ಯವನ್ನು ದಿಟ್ಟವಾಗಿ ತಮ್ಮ ಕೃತಿಯಲ್ಲಿ ತೆರೆದಿಟ್ಟರು. ಕಪ್ಪು ಮಹಿಳೆಯ ದೃಷ್ಟಿಕೋನದಿಂದ ಸ್ತ್ರೀವಾದ ಚಳವಳಿಗೆ ವಿಸ್ಕೃತವಾದ ಆಯಾಮಗಳನ್ನು ಜೋಡಿಸಿದರು.

ಭಾರತದ ಸಂದರ್ಭದಲ್ಲಿ ಜಾತಿವ್ಯವಸ್ಥೆಯು ಎಲ್ಲ ಶೋಷಣೆಗಳ ಮೂಲವಾಗಿರುತ್ತದೆ. ನಮ್ಮಲ್ಲಿ ಎಲ್ಲ ವರ್ಗದ ಹೆಂಗಸರು ದಮನಿತರೇ ಆಗಿದ್ದಾರೆ. ಆದರೆ ದಲಿತ ಮಹಿಳೆಯರು ಜಾತಿ, ವರ್ಗ ಹಾಗೂ ಲಿಂಗದ ನೆಲೆಯಿಂದ ದಿನದಿತ್ಯವೂ ಪುರುಷ ದಬ್ಬಾಳಿಕೆಯನ್ನು ಅನುಭವಿಸುತ್ತಿರುತ್ತಾರೆ. ಇದನ್ನೆಲ್ಲ ಗಮನಿಸಿದರೆ ನಮ್ಮಲ್ಲಿ ಸ್ತ್ರೀವಾದಿ ಚಳವಳಿಯು ಇನ್ನೂ ಪ್ರಾಥಮಿಕ ಹಂತದಲ್ಲಿಯೇ ಉಳಿದುಕೊಂಡಿದೆ. ಸ್ತ್ರೀವಾದದ ಚರ್ಚೆಯೆಂದರೆ ಅದು ಕೇವಲ ಸಾಹಿತ್ಯ ಕೃತಿಗಳಿಗೆ ಹಾಗೂ ಅಕಾಡೆಮಿಕ್ ವಲಯಕ್ಕಷ್ಟೇ ಸೀಮಿತವಾಗಿದೆ. ಅಷ್ಟಿಷ್ಟು ನಡೆದ ಅಧ್ಯಯನಗಳು ಪ್ರಧಾನವಾಹಿನಿಗೆ ಬರುತ್ತಿಲ್ಲ. ಎಲ್ಲ ವರ್ಗದ ಜನಸಾಮಾನ್ಯರಿಗೆ ಸ್ತ್ರೀವಾದವನ್ನು ಕುರಿತು ಅರಿವನ್ನು ನೀಡುವ ಪುಸ್ತಕಗಳ ಕೊರತೆಯಿದೆ. ಈ ನಿಟ್ಟಿನಲ್ಲಿ ಎಚ್.ಎಸ್. ಶ್ರೀಮತಿಯವರು ಚಿಮಮಾಂಡ ನ್‍ಗೊಜಿ ಅಡಿಚಿಯವರ ‘ವಿ ಆಲ್ ಶುಡ್ ಬಿ ಫೆಮಿನಿಸ್ಟ್’ ಎಂಬ ಉಪನ್ಯಾಸವನ್ನು ಭಾಷಾಂತರಿಸಿ ‘ನಾವೆಲ್ಲರೂ ಸ್ತ್ರೀವಾದಿಗಳಾಗಬೇಕು’ ಎಂಬ ಪುಟ್ಟ ಕೃತಿಯನ್ನು ನೀಡಿದ್ದಾರೆ. ಇದೇ ದಾರಿಯಲ್ಲಿ ಬೆಲ್ ಹುಕ್ಸ್ ಅವರ ಕೃತಿಯು ಸ್ತ್ರೀವಾದಿ ಶಿಕ್ಷಣದ ತರಬೇತಿಯನ್ನು ನೀಡುತ್ತದೆ. ಇಂತಹ ಕೃತಿಗಳು ಹೆಚ್ಚೆಚ್ಚು ಕನ್ನಡದಲ್ಲಿ ಬರಬೇಕಾಗಿದೆ ಹಾಗೂ ಅವು ಸುಲಭವಾಗಿ ಓದುಗರಿಗೆ ಕೈಗೆಟಕುವ ವ್ಯವಸ್ಥೆಯಾಗಬೇಕಿದೆ.

ನಮ್ಮ ಶಾಲಾಕಾಲೇಜುಗಳ ಶೈಕ್ಷಣಿಕ ಪಠ್ಯಗಳು ಅತ್ಯಂತ ಸಾಂಪ್ರದಾಯಿಕ ರೀತಿಯಲ್ಲಿವೆ. ಇನ್ನು ಸ್ತ್ರೀವಾದಿ ಆಲೋಚನೆಗಳು ನಮ್ಮ ಶಿಕ್ಷಣ ವ್ಯವಸ್ಥೆಯ ಅಂಗವಾಗಿಲ್ಲ. ಮನೆಯಿಂದಲೇ ಹೆಣ್ಣುಮಕ್ಕಳನ್ನು ತರತಮ ಭಾವನೆಯಿಂದ ಬೆಳೆಸಲಾಗುತ್ತದೆ. ಶಾಲಾ ಕಾಲೇಜುಗಳು ಇದೇ ಲಿಂಗತಾರತಮ್ಯವನ್ನು ಪೋಷಿಸಿಕೊಂಡು ಹೋಗುತ್ತಿವೆ. ಇದರಿಂದಾಗಿ ಹೆಣ್ಣನ್ನು ಎರಡನೇ ದರ್ಜೆಯಲ್ಲಿಡುವ ಕೀಳು ಪ್ರಜ್ಞೆಯು ಜಾಗೃತವಾಗಿರುತ್ತದೆ. ಪಿತೃಪ್ರಧಾನ ಮೌಲ್ಯಗಳನ್ನು ಎತ್ತಿಹಿಡಿಯುವುದರಿಂದ ಮಹಿಳೆಯರ ಮೇಲಿನ ಯಜಮಾನಿಕೆಯು ಅವ್ಯಾಹತವಾಗಿ ಮುಂದುವರೆಯುತ್ತದೆ. ಅದಕ್ಕಾಗಿಯೇ ಸ್ತ್ರೀವಾದದ ಕನಿಷ್ಟ ಶಿಕ್ಷಣವಾದರು ಗಂಡು ಮಕ್ಕಳಿಗೂ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪರಸ್ಪರ ಹೆಣ್ಣು-ಗಂಡುಗಳ ನಡುವಿನ ಸಾಮರಸ್ಯದ ಅರಿವಿಗಾಗಿ ‘ಎಲ್ಲರಿಗಾಗಿ ಸ್ತ್ರೀವಾದ’ ಕೃತಿಯು ಒಂದು ಮುಖ್ಯವಾದ ಕೈಪಿಡಿಯಾಗಿದೆ.

‘ಎಲ್ಲರಿಗಾಗಿ ಸ್ತ್ರೀವಾದ’ವು ಬರಿ ಅಮೆರಿಕನ್ ಸ್ತ್ರೀವಾದಿ ಚಳವಳಿಯನ್ನಷ್ಟೆ ಗಮನದಲ್ಲಿಟ್ಟುಕೊಂಡು ರಚನೆಯಾದ ಕೃತಿಯಲ್ಲ. ಜಾಗತಿಕ ಸ್ತ್ರೀವಾದವನ್ನು ವಿಮರ್ಶಿಸುತ್ತಲೇ ಆಯಾ ಕಾಲಘಟ್ಟದ ಚಳವಳಿಯ ಮಿತಿಗಳನ್ನು ಕಾಣಿಸಲಾಗಿದೆ. ಸಾಮಾಜೀಕರಣದ ಭಾಗವಾಗಿ ಹೆಣ್ಣನ್ನು ಪಳಗಿಸಿ ಅಧೀನವಾಗಿಸಿಕೊಳ್ಳುವ ಲೈಂಗಿಕತಾವಾದದಿಂದ ಹೊರಬರುವುದರ ಬಗ್ಗೆ ಸಾಕಷ್ಟು ಒಳನೋಟಗಳಿವೆ. ಪುರುಷರ ಕಣ್ಣಳತೆಯಲ್ಲಿ ತಮ್ಮ ದೇಹ ಮತ್ತು ಸೌಂದರ್ಯವನ್ನು ಪರಿಭಾವಿಸಿಕೊಳ್ಳುವ ಮಹಿಳೆಯು ಪಿತೃಪ್ರಧಾನತೆಯನ್ನು ಒಪ್ಪಿಕೊಂಡವರೇ ಆಗಿರುತ್ತಾರೆ. ಸಮೂಹ ಮಾಧ್ಯಮಗಳು ಹಾಗೂ ಜಾಹಿರಾತುಗಳು ಹೆಣ್ಣಿನ ಬಳಕುವ ದೇಹವನ್ನೇ ಬಂಡವಾಳವಾಗಿಸಿಕೊಂಡು ಅವರಿಗೆ ಸೌಂದರ್ಯವರ್ಧಕ ಸಾಧನಗಳನ್ನು ಮಾರಾಟ ಮಾಡುವ ಜಾಲವನ್ನು ಸೃಷ್ಟಿಸಿಕೊಂಡಿವೆ. ಹೆಣ್ಣಿಗೆ ತನ್ನ ದೇಹ ಹಾಗೂ ಲೈಂಗಿಕತೆಯ ಮೇಲೆ ಅವಳದ್ದೇ ಹಕ್ಕುಗಳಿರಬೇಕು ಎಂಬುದನ್ನು ಎಲ್ಲ ಸ್ತ್ರೀವಾದಿಗಳು ಹೇಳುವ ಮಾತಾಗಿದೆ. ಆದರೆ ಅನೇಕ ಮಹಿಳೆಯರು ಕೂಡ ಪಿತೃಪ್ರಧಾನತೆಯ ಮೌಲ್ಯಗಳನ್ನು ಹಾಗೂ ಯಜಮಾನಿಕೆಯನ್ನು ಬೆಂಬಲಿಸುವವರಾಗಿರುತ್ತಾರೆ. ಇಂತಹ ಪುರುಷನಿಷ್ಠ ನಂಬಿಕೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಮಹಿಳೆಯರನ್ನು ಸ್ತ್ರೀವಾದಿಗಳೆಂದು ಕರೆಯಲಾಗದು. ಮಹಿಳೆಯರ ಮೂಲಕ ಮುಂದುವರೆಯುವ ಪುರುಷ ಪ್ರಧಾನತೆಯನ್ನು ಬೆಲ್ ಹುಕ್ಸ್ ತಮ್ಮ ಕೃತಿಯಲ್ಲಿ ಸಾಕಷ್ಟು ಕಟುವಾಗಿ ಮಿಮರ್ಶಿಸಿದ್ದಾರೆ.

ಮಹಿಳೆಯನ್ನು ‘ಅನ್ಯ’ಳನ್ನಾಗಿಸಿ ನೋಡುವ ಪರಿಪಾಠವನ್ನು ಭಂಜನ ಮಾಡಬೇಕಿದೆ ಎನ್ನುವ ಬೆಲ್ ಹುಕ್ಸ್ ಪುರುಷವಾದಿ ಧೋರಣೆಗಳನ್ನು ಹೇಗೆಲ್ಲ ನಿರಾಕರಿಸುವ ಅಗತ್ಯವಿದೆ ಎಂಬುದನ್ನು ಚರ್ಚಿಸಿದ್ದಾರೆ. ಮಹಿಳೆಯನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾಗಬೇಕಾದರೆ ಗಂಡು ಪ್ರಧಾನ ನಿಲುವುಗಳಲ್ಲಿ ಪಲ್ಲಟವನ್ನು ತರಬೇಕಾಗುತ್ತದೆ. ಇದಕ್ಕಾಗಿ ವ್ಯಾಪಕವಾಗಿ ಸ್ತ್ರೀವಾದಿ ಪ್ರಜ್ಞಾ ತರಬೇತಿಯು ಬೇಕಾಗುತ್ತದೆ. ಸ್ತ್ರೀವಾದಿ ಚಿಂತನೆಗಳು ಎಲ್ಲರಿಗೂ ದಕ್ಕುವ ಹಾಗೆ ಮಾಡಬೇಕೆನ್ನುವ ಸಾಮಾಜಿಕ ಕಾಳಜಿಯು ಬೆಲ್ ಹುಕ್ಸ್‌ರವರ ಕೃತಿಯಲ್ಲಿ ಹರಡಿಕೊಂಡಿದೆ. ಬೆಲ್ ಹುಕ್ಸ್‌ರವರ ಸ್ತ್ರೀವಾದಿ ಆಲೋಚನೆಗಳನ್ನು ನಮ್ಮ ಪರಿಸರಕ್ಕೆ ಒಗ್ಗಿಸಿಕೊಂಡು ಚರ್ಚಿಸುವ ಅಗತ್ಯವಿದೆ. ಸದರಿ ಕೃತಿಯ ಅನುವಾದದಲ್ಲಿ ಬಳಕೆಯಾಗಿರುವ ಸ್ತ್ರೀವಾದಿ ಲೇಖಕಿಯರ ಬಗ್ಗೆ ಹಾಗೂ ಕೆಲವು ಪರಿಭಾಷೆಗಳ ಕುರಿತು ಅನುಬಂಧದಲ್ಲಿ ವಿವರಣೆಯನ್ನು ನೀಡಿದ್ದರೆ ಸಾಮಾನ್ಯ ಓದುಗರಿಗೆ ಹೆಚ್ಚು ಉಪಯುಕ್ತವಾಗುತ್ತಿತ್ತು.

ಎಲ್ಲರಿಗಾಗಿ ಸ್ತ್ರೀವಾದ: ಆಪ್ತತೆಯ ರಾಜಕಾರಣ
ಮೂಲ: ಬೆಲ್ ಹುಕ್ಸ್
ಕನ್ನಡಕ್ಕೆ: ಎಚ್.ಎಸ್. ಶ್ರೀಮತಿ
ಪ್ರಕಾಶಕರು: ಆಕೃತಿ ಪುಸ್ತಕ, ರಾಜಾಜಿನಗರ
ಪುಟ: 208 ಬೆಲೆ: 150 ರೂಪಾಯಿ

* ಡಾ. ಸುಭಾಷ್ ರಾಜಮಾನೆ

ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ ಇಂಗ್ಲಿಷ್ ಮರಾಠಿ, ಭಾಷೆಗಳನ್ನು ಬಲ್ಲ ಇವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಇಮೇಲ್ ವಿಳಾಸ [email protected]


ಇದನ್ನೂ ಓದಿ: ಸಾರಾ ಶಗುಫ್ತಾ: ‘ನೋವಿನ ಗಾಯಗಳಿಗೆ ಸಾಕ್ಷಿಯಾದ ಕಾವ್ಯ’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. It’s an interesting reading but one may have his or her differences. It’s neither easy nor difficult to reject the feminist perspective unless we seriously discuss alternate explanations to define the relationship between a male and a female

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...