ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ ‘ಪ್ರಿಸನರ್ ನಂ. 626710 ಈಸ್ ಪ್ರೆಸೆಂಟ್’ (Prisoner No. 626710 is Present) ಎಂಬ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಮುಂದೂಡಿದೆ. ಈ ಕಾರ್ಯಕ್ರಮವು ಸೆಪ್ಟೆಂಬರ್ 14ರಂದು ವಿಶ್ವವಿದ್ಯಾಲಯದಲ್ಲಿ ನಡೆಯಬೇಕಾಗಿತ್ತು ಮತ್ತು ಅದರ ನಂತರ ಮುಕ್ತ ಚರ್ಚೆಯನ್ನು ಹಮ್ಮಿಕೊಳ್ಳಲಾಗಿತ್ತು.
ಭಾನುವಾರ (ಸೆ.13) ರಾತ್ರಿ ತಡವಾಗಿ ಬಂದ ಅಪ್ಡೇಟ್ನಲ್ಲಿ, ವಿದ್ಯಾರ್ಥಿಗಳಿಗೆ ಇಮೇಲ್ ಕಳುಹಿಸಿರುವ ಲಾ ಅಂಡ್ ಸೊಸೈಟಿ ಕಮಿಟಿ, ‘ಸಾರಿಗೆ ಮತ್ತು ಭದ್ರತಾ ಕಾರಣಗಳನ್ನು’ ಉಲ್ಲೇಖಿಸಿ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಘೋಷಿಸಿದೆ. ಆದಾಗ್ಯೂ, ಇದೇ ತ್ರೈಮಾಸಿಕದಲ್ಲಿ ಈ ಕಾರ್ಯಕ್ರಮವನ್ನು ಖಂಡಿತವಾಗಿ ನಡೆಸಲಾಗುವುದು ಎಂದು ಸಮಿತಿಯು ಸ್ಪಷ್ಟಪಡಿಸಿದೆ ಎಂದು livelaw.in ವರದಿ ಮಾಡಿದೆ.
ಮತ್ತಷ್ಟು ಸ್ಪಷ್ಟನೆ ನೀಡಿರುವ ಕಮಿಟಿ, ಈ ಕಾರ್ಯಕ್ರಮವನ್ನು ಯಾರದ್ದೋ ‘ಒತ್ತಡಕ್ಕೆ ಮಣಿದು’ ಮುಂದೂಡುತ್ತಿಲ್ಲ ಎಂದು ತಿಳಿಸಿದೆ. ಈ ಮುಂದೂಡಿಕೆಯು ಕೇವಲ ಪ್ರದರ್ಶನವನ್ನು ‘ಸುರಕ್ಷಿತ ಮತ್ತು ಜವಾಬ್ದಾರಿಯುತ ರೀತಿಯಲ್ಲಿ’ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಂಡಿರುವ ಒಂದು ಕ್ರಮವಾಗಿದೆ ಎಂದು ಇಮೇಲ್ನಲ್ಲಿ ಸೇರಿಸಲಾಗಿದೆ.
ವಿದ್ಯಾರ್ಥಿ ಸಮೂಹದ ಹಿತರಕ್ಷಣೆಗೆ ಧಕ್ಕೆಯಾಗದಂತೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲು ತಾವು ಶ್ರಮಿಸುತ್ತಿರುವುದಾಗಿ ಸಮಿತಿಯು ಹೇಳಿಕೊಂಡಿದೆ. ಸಂವಿಧಾನಾತ್ಮಕ ಹಕ್ಕುಗಳು, ಕ್ರಿಮಿನಲ್ ಕಾನೂನು, ನಾಗರಿಕ ಸ್ವಾತಂತ್ರ್ಯಗಳು ಮತ್ತು ಸಾಂಸ್ಥಿಕ ಸ್ವಾತಂತ್ರ್ಯದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮರುನಿಗದಿಯಾಗಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಮಿಟಿಯು ಮನವಿ ಮಾಡಿದೆ.
ವಿದ್ಯಾರ್ಥಿಗಳನ್ನುದ್ದೇಶಿಸಿ ಕಳುಹಿಸಲಾಗಿರುವ ಇಮೇಲ್ ಪ್ರಕಾರ, ಸೆಪ್ಟೆಂಬರ್ 13ರಂದು ಆಚರಿಸುವ ‘ರಾಜಕೀಯ ಕೈದಿಗಳ ದಿನದ’ ಅಂಗವಾಗಿ ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು ಎಂದು livelaw.in ವರದಿ ಉಲ್ಲೇಖಿಸಿದೆ.
ಇಮೇಲ್ ಪ್ರಕಾರ, ವಿಚಾರಣಾ ಪೂರ್ವ ಬಂಧನ, ಜಾಮೀನು, ಭಿನ್ನಾಭಿಪ್ರಾಯ, ರಾಜಕೀಯ ಜೈಲುವಾಸ ಮತ್ತು ಕ್ರಿಮಿನಲ್ ಕಾನೂನು ಹಾಗೂ ಪ್ರಜಾಪ್ರಭುತ್ವದ ಸ್ವಾತಂತ್ರ್ಯಗಳ ನಡುವಿನ ಸಂಬಂಧದಂತಹ ವಿಶಾಲವಾದ ಕಾನೂನು ಪ್ರಶ್ನೆಗಳ ಕುರಿತು ಚರ್ಚೆಗಳನ್ನು ಉತ್ತೇಜಿಸಲು ಈ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಬಳಸಿಕೊಳ್ಳಲು ಸಮಿತಿಯು ಉದ್ದೇಶಿಸಿತ್ತು. ಅಲ್ಲದೆ, ಈ ಸೆಪ್ಟೆಂಬರ್ ತಿಂಗಳು ಉಮರ್ ಖಾಲಿದ್ ಅವರ ಜೈಲುವಾಸದ ಆರು ವರ್ಷಗಳನ್ನು ಪೂರೈಸುತ್ತದೆ ಎಂಬುದನ್ನು ಆಯೋಜಕರು ಕಳುಹಿಸಿದ ಇಮೇಲ್ನಲ್ಲಿ ಉಲ್ಲೇಖಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಪ್ರಸ್ತಾವಿತ ಈ ಕಾರ್ಯಕ್ರಮಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ತೀವ್ರ ವಿರೋಧ ವ್ಯಕ್ತಪಡಿಸಿದೆ. ನಿನ್ನೆ NLSIU ಕುಲಪತಿಗಳಿಗೆ ಪತ್ರ ಬರೆದಿರುವ ಎಬಿವಿಪಿ, ‘ರಾಜಕೀಯ ಅಥವಾ ಸೈದ್ಧಾಂತಿಕ ಪ್ರಚಾರಕ್ಕಾಗಿ’ ಶೈಕ್ಷಣಿಕ ಸಂಸ್ಥೆಯ ಆವರಣವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಬೇಕೆಂದು ಆಡಳಿತ ಮಂಡಳಿಯನ್ನು ಒತ್ತಾಯಿಸಿದೆ. ಅಷ್ಟೇ ಅಲ್ಲದೆ, ವಿಶ್ವವಿದ್ಯಾಲಯದ ಶೈಕ್ಷಣಿಕ ವಾತಾವರಣವು ರಾಜಕೀಯ ಧ್ರುವೀಕರಣಕ್ಕೆ ಒಳಗಾಗದಂತೆ ರಕ್ಷಿಸಲು ಈ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ನೀಡಲಾಗಿರುವ ಅನುಮತಿಯನ್ನು ರದ್ದುಪಡಿಸಬೇಕು ಎಂದು ಕುಲಪತಿಗಳಿಗೆ ಆಗ್ರಹಿಸಿದೆ.


