Homeಅಂಕಣಗಳುಸಾರಾ ಶಗುಫ್ತಾ: ‘ನೋವಿನ ಗಾಯಗಳಿಗೆ ಸಾಕ್ಷಿಯಾದ ಕಾವ್ಯ’

ಸಾರಾ ಶಗುಫ್ತಾ: ‘ನೋವಿನ ಗಾಯಗಳಿಗೆ ಸಾಕ್ಷಿಯಾದ ಕಾವ್ಯ’

ಸಾರಾ 1984ರ ಒಂದು ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಾಗ ಆಕೆಗೆ ಮೂವತ್ತು ವರ್ಷವೂ ತುಂಬಿರಲಿಲ್ಲ. ಆಕಾಶದಲ್ಲಿ ಕೆಲವೇ ಕ್ಷಣಗಳ ಕಾಲ ಮಿಂಚಿ ಮಾಯವಾಗುವ ಉಲ್ಕಾಪಾತದಂತೆ ಉರಿದು ಹೋದವಳು ಸಾರಾ ಶಗುಫ್ತಾ.

- Advertisement -
- Advertisement -

ಪಾಕಿಸ್ತಾನದ ಕವಯಿತ್ರಿ ಸಾರಾ ಶಗುಫ್ತಾ ಒಂದು ವೇಳೆ ಬದುಕಿದ್ದರೆ ಈಗ ಅರವತ್ತು ವರ್ಷ ದಾಟಿರುತ್ತಿತ್ತು. ಸಾರಾ ಪಾಕಿಸ್ತಾನದ ಗುಜರಾಂವಾಲಾದ ಬರೋಜ್ ಮಂಗಲ್‍ದಲ್ಲಿ 1954ರಂದು ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದಳು. ಭಾರತದ ವಿಭಜನೆಯ ಸಂದರ್ಭದಲ್ಲಿ ಆಕೆಯ ಕುಟುಂಬವು ಪಂಜಾಬಿನಿಂದ ಕರಾಚಿಗೆ ವಲಸೆ ಹೋಗಿತ್ತು. ಸಾರಾಳ ಜೀವನವು ಬರಿ ಗಾಯಗಳಿಂದಲೇ ತುಂಬಿ ಹೋಗಿತ್ತು. ಸಾರಾ ತನ್ನ ಬದಕಿನಲ್ಲಿ ನಡೆದ ಘಟನೆಗಳಿಂದ ರೋಸಿ ಹೋಗಿ ಟಾಲ್‍ಸ್ಟಾಯ್‍ನ ‘ಅನ್ನಾ ಕರೆನೀನ’ ಕಾದಂಬರಿಯ ನಾಯಕಿ ಅನ್ನಾಳಂತೆ ಚಲಿಸುವ ಟ್ರೇನ್ ಎದುರು ಹಾರಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಸಾರಾ 1984ರ ಒಂದು ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಾಗ ಆಕೆಗೆ ಮೂವತ್ತು ವರ್ಷವೂ ತುಂಬಿರಲಿಲ್ಲ. ಆಕಾಶದಲ್ಲಿ ಕೆಲವೇ ಕ್ಷಣಗಳ ಕಾಲ ಮಿಂಚಿ ಮಾಯವಾಗುವ ಉಲ್ಕಾಪಾತದಂತೆ ಉರಿದು ಹೋದವಳು ಸಾರಾ ಶಗುಫ್ತಾ. ಸಾರಾಳ ಬದುಕನ್ನು ಕುರಿತು ಪಂಜಾಬಿ ಭಾಷೆಯ ಪ್ರಖ್ಯಾತ ಲೇಖಕಿ ಅಮೃತಾ ಪ್ರೀತಂ ಬರೆದ ‘ಏಕ್ ಥೀ ಸಾರಾ’ ಎಂಬ ಕೃತಿಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗದವರಾದ ಹಸನ್ ನಯೀಂ ಸುರಕೋಡ ಅವರು ‘ಸಾರಾ ಶಗುಫ್ತಾ: ಜೀವನ ಮತ್ತು ಕಾವ್ಯ’ (2016) ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ತಂದಿದ್ದಾರೆ. ಇದು ಲಡಾಯಿ ಪ್ರಕಾಶನದಿಂದ ಪ್ರಕಟವಾಗಿದೆ.

ಸಾರಾ ಪಂಜಾಬಿಯ ಪ್ರಖ್ಯಾತ ಕವಯಿತ್ರಿ ಮತ್ತು ಲೇಖಕಿಯಾದ ಅಮೃತಾ ಪ್ರೀತಂ ಅವರ ಅತ್ಯಂತ ಆಪ್ತ ಗೆಳತಿಯಾಗಿದ್ದಳು. ಸಾರಾ ಭಾರತಕ್ಕೆ ಬಂದು ಅಮೃತಾಳನ್ನು ಭೇಟಿಯಾಗಿದ್ದಳು. ಆಕೆ ಅಮೃತಾಳನ್ನು ನೆರಳು ನೀಡುವ ಮರದಂತೆ ಆಶ್ರಯಿಸಿದ್ದಳು. ಸಾರಾ ಯಾವುದೇ ಮುಜುಗರವಿಲ್ಲದೇ ಅಮೃತಾಳಿಗೆ ಪತ್ರಗಳನ್ನು ಬರೆದು ತನ್ನ ಒಡಲ ಬೇಗುದಿಯನ್ನು ತೋಡಿಕೊಂಡಿದ್ದಾಳೆ. ಸಾರಾ ಬರೆದ ಒಂದೊಂದು ಪತ್ರಗಳು ಆಕೆಯ ಬದುಕಿನ ದುರಂತಮಯ ಕತೆಯನ್ನು ಹೇಳುತ್ತವೆ. ಆ ಪತ್ರಗಳಲ್ಲಿದ್ದ ಒಂದೊಂದು ಕವಿತೆಗಳು ಕೂಡ ಆಕೆಯ ಜೀವನದ ಚರಮಗೀತೆಗಳಾಗಿವೆ. ಆಕೆಯ ಪತ್ರಗಳಲ್ಲಿ ಒಂಟಿತನ, ಹತಾಶೆ ಮತ್ತು ಮಾನಸಿಕ ಅಸ್ವಸ್ಥತೆಯ ಮುಖಗಳಿವೆ; ಸಾರಾಳ ಪ್ರಖರ ವೈಚಾರಿಕ ಆಕ್ರೋಶವಿದೆ. ಅಂದಿನ ಸಮಾಜವು ಸಾರಾಳ ಬಗ್ಗೆ ಎಷ್ಟೊಂದು ಅಮಾನುಷವಾಗಿ ನಡೆದುಕೊಂಡಿದೆ ಎಂಬುದರ ವಿವರಗಳಿವೆ. ಸಾರಾಳ ಗದ್ಯವು ಕೂಡ ಕಾವ್ಯದಷ್ಟೇ ಕಲಾತ್ಮಕವಾಗಿದೆ. ಆಕೆಯ ಪ್ರತಿಭೆ ತನ್ನ ಕಾಲಕ್ಕಿಂತ ಎಷ್ಟೋ ಮುಂದಿತ್ತು. ಆದರೆ ಸಮಾಜಿಕ ವ್ಯವಸ್ಥೆಯು ಆಕೆಯನ್ನು ಆಹುತಿ ತೆಗೆದುಕೊಂಡಿತು. ಆಕೆ ಅಮೃತಾಗೆ ಬರೆದ ಸರಣಿ ಪತ್ರಗಳ ಗುಚ್ಚವೇ ಈ ಪುಸ್ತಕವಾಗಿದೆ.

photo courtesy: Amar Ujala

ಸಾರಾ ಗಂಡು ಪ್ರಧಾನ ಸಾಮಾಜಿಕ ವ್ಯವಸ್ಥೆಯನ್ನು ಒಪ್ಪಿಕೊಳ್ಳಲಿಲ್ಲ. ಈ ವ್ಯವಸ್ಥೆಯು ಸಾರಾಳನ್ನು ಪಂಜರದ ಗಿಳಿಯನ್ನಾಗಿಸಲು ಇನ್ನಿಲ್ಲದಂತೆ ಪ್ರಯತ್ನಿಸಿತು. ಆಕೆ ತನ್ನನ್ನು ಬಂಧಿಸಿಡುವುದರ ವಿರುದ್ಧವಾಗಿ ಕೊನೆಯ ಉಸಿರಿನತನಕವು ದಿಟ್ಟವಾಗಿ ಸೆಣಸಾಡಿದಳು. ಬೊಗಸೆಯಷ್ಟು ಪ್ರೀತಿಗಾಗಿ ತನ್ನ ಜೀವನಪೂರ್ತಿ ಹಂಬಲಿಸಿದಳು; ಸಮಾಜವು ಇಲ್ಲಸಲ್ಲದ ಆಪಾದನೆಗಳ ಮೂಟೆಯನ್ನು ಆಕೆಯ ಮೇಲೆ ಹೊರಿಸಿತು. ಇದನ್ನೆಲ್ಲ ಮೌನವಾಗಿ ಸಹಿಸಿಕೊಳ್ಳುವ ಜಾಯಮಾನ ಅವಳದ್ದಾಗಿರಲಿಲ್ಲ. ಸಾರಾ ಎಷ್ಟೆಲ್ಲ ದಮನಕ್ಕೆ ಒಳಗಾದಳೋ ಅಷ್ಟೇ ತೀವ್ರವಾಗಿ ಕೆಂಡದಂತಹ ಕಾವ್ಯವನ್ನೇ ರಚಿಸಿದಳು. ಆಕೆಯ ಕಾವ್ಯದ ಕಾವು ಪುರುಷಪ್ರಧಾನ ವ್ಯವಸ್ಥೆಯ ತಳಪಾಯವನ್ನು ಅಲುಗಾಡಿಸಿತು. ಇದರಿಂದ ಆಕೆಯನ್ನು ವಿರೋಧಿಸುವವರ ಸಂಖ್ಯೆಯು ಹೆಚ್ಚಾಯಿತು. ಇದನ್ನೆಲ್ಲ ನಿರೀಕ್ಷಿಸಿದಂತೆಯೇ ಸಾರಾ ಎಲ್ಲವನ್ನು ತನ್ನ ಮೈಮೇಲೆ ಎಳೆದುಕೊಂಡು ಹೋರಾಟಕ್ಕೆ ಸಿದ್ಧಳಾಗಿದ್ದಳು.

ಸಾರಾಳಿಗೆ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಬುರ್ಖಾದ ಶಿಕ್ಷೆಗೆ ಒಳಪಡಿಸಲಾಯಿತು. ಮದುವೆಯಾದ ಮೂರು ವರ್ಷದಲ್ಲಿ ಮೂವರು ಮಕ್ಕಳಿಗೆ ಜನ್ಮ ನೀಡಿದಳು. ತಾನು ಹೆಂಡತಿಯಾಗಿರಲಿಲ್ಲ; ಅದೊಂದು ಶರಣಾಗತ ಬದುಕಾಗಿತ್ತು; ಒಂದು ರೂಪಾಯಿ ಖರ್ಚು ಮಾಡಲು ಕೂಡ ಗಂಡನ ಅನುಮತಿ ಪಡಯಬೇಕಾಗಿತ್ತು; ಗಂಡ ತನಗೆ ಬೇಕಾದಾಗ ಒಂದು ರಬ್ಬರ್ ಗೊಂಬೆಯಂತೆ ತನ್ನನ್ನು ಭೋಗಿಸುತ್ತಿದ್ದ; ಗಂಡನ ದೈಹಿಕ ಹಲ್ಲೆಗಳಿಂದ ತನ್ನ ದೇಹವೇ ಕಪ್ಪಿಟ್ಟು ಹೋಗುತ್ತಿತ್ತು; ಆತನ ಚಿತ್ರಹಿಂಸೆಗಳಿಂದ ಅನುಭವಿಸಿದ ಆಘಾತಗಳನ್ನು ದೀರ್ಘವಾಗಿಯೇ ಸಾರಾ ತನ್ನ ಪತ್ರಗಳಲ್ಲಿ ಬರೆದುಕೊಂಡಿದ್ದಾಳೆ. ಸಾರಾ ಇಂತಹ ದೌರ್ಜನ್ಯವನ್ನು ಖಂಡಿಸಿ ಗಂಡನಿಗೆ ತಲಾಕ್ ನೀಡುವಷ್ಟು ಧೈರ್ಯಗಾರ್ತಿಯಾಗಿದ್ದಾಳೆ. ಆದರೆ ಸಾರಾ ತನ್ನ ಮಕ್ಕಳನ್ನು ಪಡೆಯಲು ನ್ಯಾಯಾಲಯದ ಮೆಟ್ಟಿಲೇರುತ್ತಾಳೆ. ಕಟಕಟೆಯಲ್ಲಿ ನಿಂತು ಈ ಮಕ್ಕಳು ತನ್ನ ಗಂಡನಿಗೆ ಹುಟ್ಟಿದ್ದಲ್ಲವೆಂದು ಹೇಳುವಷ್ಟು ಬಂಡುಕೋರಳಾಗುತ್ತಾಳೆ. ಸಾರಾಳಿಗೆ ಮಕ್ಕಳು ಸಿಗುತ್ತಾರೆ. ಆದರೆ ಕೆಲವೇ ತಿಂಗಳಲ್ಲಿ ಪುನಃ ವಿಚ್ಛೇದಿತ ಗಂಡನ ಕಿರುಕುಳ ಶುರುವಾಗುತ್ತದೆ. ಸಾರಾಳ ಬದುಕು ಬೀದಿ ಪಾಲಾಗುತ್ತದೆ. ಆಕೆಯ ಎಷ್ಟೋ ಕವಿತೆಗಳಲ್ಲಿ ಮಕ್ಕಳ ಮೇಲಿನ ತಾಯ್ತನದ ಮಮಕಾರವೇ ಹೆಪ್ಪುಗಟ್ಟಿದೆ.

ಗಂಡನ ಸ್ನೇಹಿತನೊಬ್ಬ ಸಾರಾಳನ್ನು ಇಷ್ಟಪಡುತ್ತಾನೆ. ಸಾರಾ ಎರಡನೇ ಮದುವೆಯಾಗುತ್ತಾಳೆ. ಆಗ ಪುನಃ ಈ ಗಂಡನ ಕಾಟ ಶುರುವಾಗುತ್ತದೆ. ಮೊದಲ ಗಂಡನಿಗೆ ತಲಾಕ್ ನೀಡಿದಂತೆಯೇ ಸಾರಾ ಎರಡನೇ ಗಂಡನಿಂದಲೂ ಕಳಚಿಕೊಳ್ಳುತ್ತಾಳೆ. ಆಕೆ ತನ್ನ ತಾಯಿಯ ಒತ್ತಾಯಕ್ಕೆ ಮಣಿದು ನಾಲ್ಕನೆಯ ಮದುವೆಗೆ ಮನಸ್ಸಿಲ್ಲದ ಮನಸ್ಸಿಂದ ಒಪ್ಪಿಕೊಳ್ಳುತ್ತಾಳೆ. ಈ ಗಂಡನ ಶೋಷಣೆಯಿಂದಲೂ ಸಾರಾ ಜರ್ಜರಿತಳಾಗುತ್ತಾಳೆ; ಯಥಾಪ್ರಕಾರ ತಲಾಕ್ ನೀಡುತ್ತಾಳೆ. ಹೀಗೆ ಸಾರಾಳ ಜೀವನದಲ್ಲಿ ನಾಲ್ಕುಜನ ಗಂಡಂದಿರು ಬಂದು ಹೋಗುತ್ತಾರೆ. ಈ ಗಂಡಂದಿರು ಸಾರಾಳ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ಸಹಿಸಿಕೊಳ್ಳಲಿಲ್ಲ. ಸಾರಾ ತನ್ನ ಸಹೋದರ ಮತ್ತು ಸಹೋದರಿಯರಿಂದಲೂ ಹಿಂಸೆಯನ್ನು ಎದುರಿಸಬೇಕಾಯಿತು. ಆಕೆ ಪತ್ರಿಕೆಗಳಿಗೆ ಕವನ ಮತ್ತು ಲೇಖನಗಳನ್ನು ಬರೆಯುವುದನ್ನು ಇವರು ವಿರೋಧಿಸುತ್ತಿದ್ದರು. ಆಕೆಯ ಎಷ್ಟೋ ಕವಿತೆ ಮತ್ತು ಲೇಖನಗಳನ್ನು ಸುಟ್ಟು ಹಾಕಲಾಗಿದೆ. ಮನೆತನದ ಮಾನ ಮರ್ಯಾದೆಯನ್ನು ನಾಶ ಮಾಡುತ್ತಿದ್ದಾಳೆ ಎಂದು ದೂಷಿಸಲಾಗಿದೆ. ಸಾರಾ ಅತಿಕಾಮಿಯಾಗಿದ್ದಳು ಎನ್ನುವ ಆರೋಪಗಳ ಹಣೆಪಟ್ಟಿಯನ್ನು ಆಕೆಗೆ ಅಂಟಿಸಲಾಯಿತು. ಸಾರಾ ಅನೇಕ ಗಂಡಸರೊಂದಿಗೆ ಮಲಗುತ್ತಾಳೆ ಎನ್ನುವ ಅಪಪ್ರಚಾರದ ಮೂಲಕ ಆಕೆಯ ಚಾರಿತ್ರ್ಯಹರಣ ಮಾಡಲಾಯಿತು. ಸಾರಾ ಇಂತಹ ಆರೋಪಗಳಿಂದ ನೊಂದುಕೊಳ್ಳುತ್ತಾಳೆ. ಆದರೆ ಏಕಾಂಗಿಯಾಗಿಯೇ ತನ್ನೊಳಗಿನ ಸೃಜನಶೀಲತೆಯ ಮೂಲಕವೇ ಎದುರೇಟು ನೀಡಿದ್ದಾಳೆ.

ಸಾರಾ ತನ್ನದೊಂದು ಕವಿತೆಯಲ್ಲಿ ‘ಒಂದು ಸರಹದ್ದು ಇದೆಯೇ ಹೆಣ್ಣಿಗೆ| ತನ್ನ ದೇಹದ ಹೊರತಾಗಿ?’ ಎಂದು ಪ್ರಶ್ನಿಸುತ್ತಾಳೆ. ಹೆಣ್ಣಿನ ಚೈತನ್ಯವನ್ನು ದಮನಿಸುವ ಎಲ್ಲ ಬಗೆಯ ವ್ಯವಸ್ಥೆಯನ್ನೂ ವಿರೋಧಿಸುತ್ತಾಳೆ. ಮತ್ತೊಂದು ಕವಿತೆಯಲ್ಲಿ ‘ನಾನು ಬರೆಯುತ್ತಿಲ್ಲ ಉರಿಯುತ್ತೇನೆ| ಈ ನಾಲಾಯಕ ಜನರಿಗೆ ಬೇಕಿಲ್ಲ ಕಮಲ| ಅಲೆಗಳಿಲ್ಲದ ಸಮುದ್ರವಿರಲಾರದು| ಹೆಣ್ಣು ಸಂಧಿಸಲೇಬೇಕು ಒಬ್ಬ ಪುರುಷನನ್ನು’ ಎಂದು ಲಿಂಗತಾರತಮ್ಯವನ್ನು ಪ್ರತಿರೋಧಿಸುತ್ತಾಳೆ; ಸಾರಾಗೆ ಹೆಣ್ಣು ಗಂಡುಗಳ ಸೌಹಾರ್ದಯುತ ಬಾಳ್ವೆಯಲ್ಲಿ ನಂಬಿಕೆಯಿತ್ತು. ಸಾರಾಳ ಕವಿತೆಗಳಲ್ಲಿ ‘ಮನಸ್ಸಾಕ್ಷಿ’, ‘ದಫನ್’, ‘ಗೋರಿ’, ‘ದೇವರು’ ಮತ್ತು ‘ಸಮಾಧಿ’ ಎಂಬ ಪದಗಳು ಹೇರಳವಾಗಿ ಬಳಕೆಯಾಗುತ್ತವೆ. ಈ ಸಮಾಜವು ತನಗೆ ಜೀವವಿರುವಾಗಲೇ ‘ಗೋರಿ ಕಟ್ಟಿದೆ’ ಎಂದು ರೋದಿಸಿದ್ದಾಳೆ. ಸಾರಾ ತಮ್ಮ ಕವಿತೆಯೊಂದರಲ್ಲಿ ‘ನಾನು ದೇವರಿಗಿಂತಲೂ ಹೆಚ್ಚು ಒಂಟಿ| ಆದರೆ ನಾನು ಹಾಜರು ನನ್ನ ಪಾಪಗಳಲ್ಲಿ| ಮನಸ್ಸಾಕ್ಷಿಯ ವಿಷ ಸಾಕ್ರೇಟಿಸ್‍ನ ಬಟ್ಟಲೊಳಗಿನ ವಿಷಕ್ಕಿಂತಲೂ ಘೋರ’ ಎಂದಿದ್ದಾಳೆ. ಈ ಜನರಿಗೆ ‘ಮನಸ್ಸಾಕ್ಷಿ’ ಇದ್ದಿದ್ದರೆ ತನ್ನ ವಿಷಯದಲ್ಲಿ ಇಷ್ಟೊಂದು ಬರ್ಬರವಾಗಿ ನಡೆದುಕೊಳ್ಳುತ್ತಿದ್ದರೆ ಎಂದು ನೇರವಾಗಿಯೇ ಕೇಳುತ್ತಾಳೆ. ‘ನಾನೊಂದು ದೇವರ ನಿರ್ಜೀವ ಪ್ರತಿಮೆ’ ಎಂದಿರುವ ಸಾರಾ ‘ಬದುಕು ಎಂದೂ ಸ್ನೇಹಮಯಿಯಾಗಿರಲಿಲ್ಲ ನನಗೆ| ಆದಿಯಿಂದಲೇ ಮರಳಿ ಬರುವೆ| ದೂಷಿಸಲು ದೇವರನ್ನು|’ ಎನ್ನುತ್ತಾಳೆ. ಆಕೆಯ ಎಷ್ಟೋ ಕವಿತೆಗಳು ದೇವರನ್ನು ತರಾಟೆಗೆ ತೆಗೆದುಕೊಳ್ಳುತ್ತವೆ.

ಅಮೃತಾ ಪ್ರೀತಂ

ಅಮೃತಾ ಪ್ರೀತಂ ಮತ್ತು ಸಾರಾ ಶಗುಫ್ತಾ-ಇಬ್ಬರ ಬದುಕಿನ ನಡುವೆ ಕೆಲವು ಸಮಾನ ಅಂಶಗಳಿವೆ. ಈರ್ವರೂ ಉರ್ದು ಮತ್ತು ಪಂಜಾಬಿ ಭಾಷೆಯಲ್ಲಿ ಬರೆದವರು. ಅಮೃತಾ ಪ್ರೀತಂ ಅವರು ಕೂಡ ಕುಟುಂಬದ ಕಟ್ಟುಪಾಡಿಗೆ ಬಲಿಬಿದ್ದು ಬಾಲ್ಯದಲ್ಲಿಯೇ ಮದುವೆಯಾಗಿದ್ದರು. ಅಮೃತಾ ತಮ್ಮ ಮೊದಲ ಮದುವೆಯಿಂದ ವಿಚ್ಛೇದನ ಪಡೆದುಕೊಂಡಿದ್ದರು; ಆದರೆ ಕಾವ್ಯ ಲೋಕದ ಮಾಯಾವಿ ಸಾಹಿರ್ ಲುಧಿಯಾನ್ವಿಯನ್ನು ಗಾಢವಾಗಿ ಪ್ರೇಮಿಸಿದ್ದರು. ಅಮೃತಾ ಮತ್ತು ಸಾರಾ ಮದುವೆಯ ವಿಷಯದಲ್ಲಿ ಸಮಾನ ದುಃಖಿಗಳಾಗಿದ್ದಾರೆ. ಅಮೃತಾ ಮತ್ತು ಸಾರಾ-ಇಬ್ಬರೂ ತಮ್ಮ ಆಳದ ನೋವುಗಳಿಗೆ ಕಾವ್ಯದ ರೂಪವನ್ನು ನೀಡಿದವರು; ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವನ್ನು ಪ್ರತಿರೋಧಿಸಿದವರು. ನಂತರದಲ್ಲಿ ಅಮೃತಾರ ಬಾಳ ಸಂಗಾತಿಯಾಗಿ ಕಲಾವಿದ ಇಮ್ರೋಜ್ ಬಂದರು. ಆದರೆ ಸಾರಾಳ ಬದುಕಿನಲ್ಲಿ ಇಮ್ರೋಜ್‍ನಂತಹ ಉದಾತ್ತ ವ್ಯಕ್ತಿತ್ವದವರೊಬ್ಬರು ಬಾಳ ಸಂಗಾತಿಯಾಗಿ ಬರಲಿಲ್ಲ.

ಸಾರಾ ಶಗುಫ್ತಾಗೆ ನಾಲ್ಕು ಸಂಗತಿಗಳಿಂದ ನಿಷೇಧಗಳು ವ್ಯಕ್ತವಾಗಿವೆ. 1. ಲಿಂಗ ತಾರಮ್ಯತೆಯ ಕಾರಣಕ್ಕಾಗಿಯೇ ಸಾರಾಳ ಜೀವನ ದುಸ್ತರವಾಯಿತು. ಇದರಲ್ಲಿ ಗಂಡು ಹೆಣ್ಣೆಂಬ ಭೇದಭಾವವಿಲ್ಲದೇ ಎಲ್ಲರೂ ಭಾಗಿಗಳಾಗಿದ್ದಾರೆ. 2. ಹೆಣ್ಣನ್ನು ಅಧೀನದಲ್ಲಿಟ್ಟುಕೊಳ್ಳುವುದರಲ್ಲಿ ವೈವಾಹಿಕ ಸಂಸ್ಥೆಯು ಪ್ರಧಾನ ಅಸ್ತ್ರವಾಗಿದೆ. ಪುರುಷರ ಲೈಂಗಿಕ ಯಜಮಾನಿಕೆಯು ಮಹಿಳೆಯರ ದೇಹದ ಮೇಲೆ ಅಧಿಪತ್ಯವನ್ನು ಸಾಧಿಸುತ್ತದೆ. 3. ಸಾಮಾಜಿಕ ನಿಂದನೆಗಳು ಮಹಿಳೆಯ ಆಂತರಿಕ ಚೈತನ್ಯವನ್ನು ಕುಗ್ಗಿಸುತ್ತವೆ. ಇದರಿಂದಾಗುವ ಅವಮಾನವು ಮಹಿಳೆಯ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. 4. ಧಾರ್ಮಿಕ ಕಟ್ಟುಪಾಡುಗಳು ಮಹಿಳೆಯನ್ನು ಯಥಾಸ್ಥಿತಿವಾದಕ್ಕೆ ಕಟ್ಟಿ ಹಾಕುತ್ತವೆ. ಇಂತಹ ಸ್ಥಾಪಿತ ಮೌಲ್ಯಗಳಿಂದ ಚಲನಶೀಲತೆ ಸಾಧ್ಯವಾಗುವುದಿಲ್ಲ. ಹೆಣ್ಣನ್ನು ‘ಅನ್ಯ’ಳನ್ನಾಗಿಯೇ ನೋಡುವುದರಿಂದ ಇಂತಹ ದಮನಗಳು ನಿರಂತರವಾಗಿರುತ್ತದೆ. ಸಮಾನತೆ, ಸ್ವಾತಂತ್ರ್ಯ, ಗೌರವಯುತ ಜೀವನ ನಡೆಸುವ ಹಕ್ಕುಗಳಿಂದಷ್ಟೇ ಮಹಿಳೆಯ ವ್ಯಕ್ತಿತ್ವ ಅರಳಬಲ್ಲದು.

ಸಾರಾ ನಾಲ್ಕಾರು ಸಲ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಳು. ಆಕೆ ಮಾನಸಿಕ ಅಸ್ವಸ್ಥೆಯೆಂದು ಪದೇ ಪದೇ ಹುಚ್ಚಾಸ್ಪತ್ರೆಗೆ ಸೇರಿಸಲಾಗುತ್ತದೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಆಕೆ ಆಸ್ಪತ್ರೆಯಲ್ಲಿದ್ದಾಗ ಅಲ್ಲಿಯ ಮಹಿಳಾ ಒಳರೋಗಿಗಳ ಬಗ್ಗೆಯು ಅಂತಃಕರಣದಿಂದ ಬರೆದಿದ್ದಾಳೆ. ಸಾರಾಳ ಲೇಖನಿಯು ಸಾಯುವ ದಿನದವರೆಗೂ ದೀಪದಂತೆ ಬೆಳಗುತ್ತಲೇ ಇತ್ತು. ಆಕೆಯ ಆತ್ಮಹತ್ಯೆಯು ಬರಿ ಆಕೆಯಿಂದಷ್ಟೇ ಆಗಿದ್ದಲ್ಲ. ಅದರಲ್ಲಿ ಈ ಸಮಾಜದ ನೂರಾರು ಕೈಗಳ ಪಾಲಿದೆ. ಇದನ್ನು ಕುರಿತು ಅಮೃತಾ ಪ್ರೀತಂ “ಸಾರಾ ಜಾರಿ ಬಿದ್ದ ಒಂದು ವರ. ಆದರೆ ಅವಳು ಪುರುಷರ ಕೈಗಳಿಂದ ಬೀಳಿಸಲ್ಪಟ್ಟವಳು. ಅವಳು ಒಂದೋ ಅವಳ ಗಂಡಂದಿರು ಇಲ್ಲವೆ ಅವಳ ಕವನಗಳ ವಿಮರ್ಶಕರು. ಅವಳು ಅವರ ಕೈಗಳಿಂದ ಮಣ್ಣಗೂಡಿಸಲ್ಪಟ್ಟ ಪ್ರಾರ್ಥನೆ. ಯಾವುದಾದರೂ ಕಳಚಿ ಬಿದ್ದಿದ್ದರೆ ಅದು ದೇವರು ಮತ್ತು ಮನುಷ್ಯನ ನಡುವಿನ ಸಂಬಂಧ” ಎಂದಿದ್ದಾರೆ. ಸಾರಾಳ ಆತ್ಮಹತ್ಯೆಯ ನಂತರದಲ್ಲಿ ಆಕೆಯ ಸ್ನೇಹಿತರಾಗಿದ್ದ ಸೈಯದ್ ‘ಸಾರಾ ಅಕಾಡೆಮಿ’ಯನ್ನು ಸ್ಥಾಪಿಸಿದ್ದಾರೆ. ಇಂದು ಸಾರಾ ಇಲ್ಲದಿರಬಹದು; ಆದರೆ ಸಾರಾಳ ಕಾವ್ಯವು ಜೀವಂತವಾಗಿದೆ.

ಸುಭಾಷ್ ರಾಜಮಾನೆ: ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಅವರು ಮೂಲತಃ ಬೆಳಗಾವಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಮರ್ಶೆಯಲ್ಲಿ ಜಾತಿ ಆಯಾಮಗಳ ಕುರಿತು ಅಧ್ಯಯನ ನಡೆಸಿ ಪಿಎಚ್‌.ಡಿ.ಪದವಿ ಗಳಿಸಿದ್ದಾರೆ. ಕನ್ನಡ, ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಗಳನ್ನು ಬಲ್ಲ ಸುಭಾಷ್ ಅವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ.

ಇದನ್ನು ಓದಿ: NRC ಕೊಟ್ಟ ನೋವುಗಳ ಗುಚ್ಛ : ‘ನಾಯ್ಸ್ ಆಫ್ ಸೈಲೆನ್ಸ್’ ಚಿತ್ರ ಬಿಡುಗಡೆಗೆ ಸಿದ್ಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...