Homeಮುಖಪುಟಇದು ಯಡಿಯೂರಪ್ಪನವರ ’ಜಾತಿಗೊಂದು ನಿಗಮ’ವಷ್ಟೇ ಅಲ್ಲ, ಬಿಜೆಪಿಯ ಅಪಾಯಕಾರಿ ವೈದಿಕಶಾಹಿ ವರಸೆ!

ಇದು ಯಡಿಯೂರಪ್ಪನವರ ’ಜಾತಿಗೊಂದು ನಿಗಮ’ವಷ್ಟೇ ಅಲ್ಲ, ಬಿಜೆಪಿಯ ಅಪಾಯಕಾರಿ ವೈದಿಕಶಾಹಿ ವರಸೆ!

ಇದು ಇನ್ನೂ ಕನಿಷ್ಠ 20 ಜಾತಿ ನಿಗಮಗಳಿಗೆ ದಾರಿ ಮಾಡಿಕೊಡಲಿದೆ. ಒಂದು ನಿಗಮ ಎಂದಾಕ್ಷಣ ಬೇರಾವ ಸಮುದಾಯಮುಖಿ ಕೆಲಸ ಮಾಡದಿದ್ದರೂ ಕೆಲವು ಕೋಟಿಗಳ ಹಣ ವಾರ್ಷಿಕವಾಗಿ ಖರ್ಚಾಗಲಿದೆ.

- Advertisement -
- Advertisement -

ಯಡಿಯೂರಪ್ಪನವರು ಮೊದಲ ಸಾರಿ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಒಂದು ಯಶಸ್ವೀ ಅಭಿಯಾನವು ಈಗ ಇನ್ನೊಂದು ಮಜಲನ್ನು ಪಡೆದುಕೊಂಡಿದೆ. ಆದರೆ ಈ ಸಾರಿ ಅದು ಒಂದಾದಮೇಲೆ ಒಂದರಂತೆ ಬರುತ್ತಿರುವ ಉಪಚುನಾವಣೆಗಳ ಜೊತೆಗೆ ತಳುಕು ಹಾಕಿಕೊಂಡು ಸ್ವಲ್ಪ ಗದ್ದಲ ಎಬ್ಬಿಸಿದೆಯಷ್ಟೇ. ಆ ಅಭಿಯಾನವೇನೆಂದರೆ ವಿವಿಧ ಸಮುದಾಯಗಳನ್ನು, ಅದರಲ್ಲೂ ಶೋಷಿತ ಸಮುದಾಯಗಳಿಗೆ ಸಾಂಕೇತಿಕವಾಗಿ ವಿಶೇಷ ಪ್ರಾತಿನಿಧ್ಯ ಕೊಟ್ಟಂತೆ ಮಾಡಿ ವಾಸ್ತವದಲ್ಲಿ ಅವರ ವಿರುದ್ಧ ಕೆಲಸ ಮಾಡುವ ಒಂದು ವಿಧಾನ. ಆದರೆ ಆ ಸಮುದಾಯದ ಒಂದು ಸಣ್ಣ ಗುಂಪಿಗೆ ವಿಶೇಷ ಸವಲತ್ತುಗಳು ಸೃಷ್ಟಿಯಾಗಿರುತ್ತವೆ. ಅವರು ಅದಕ್ಕಾಗಿ ಇಡೀ ಸಮುದಾಯವನ್ನು ದಿಕ್ಕುತಪ್ಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಾರೆ. ಸಣ್ಣಪುಟ್ಟ ಹಾಗೂ ಸಂಖ್ಯೆಯಲ್ಲಿ ಗಣನೀಯವಾಗಿರುವ ಜಾತಿಗಳೂ ಸಹಾ ಶೋಷಿತರಾಗಿಯೇ ಉಳಿದುಕೊಂಡುಬಿಡಲು ಬೇಕಾದ ಒಂದು ’ವ್ಯವಸ್ಥೆ’ ಗಟ್ಟಿಯಾಗಿ ಉಳಿಯುತ್ತದೆ. ಇದನ್ನು ಮೇಲ್ನೋಟಕ್ಕೆ ’ಆರೆಸ್ಸೆಸ್‌ನ ವೈದಿಕ ಅಜೆಂಡಾ’ದ ಆಚೆಗೂ ಯೋಚಿಸುವವರೆಂದು ಭಾವಿಸಲಾಗುವ ಯಡಿಯೂರಪ್ಪನವರು ಯಶಸ್ವಿಯಾಗಿ ನಿರ್ವಹಿಸಿದರು; ನಿರ್ವಹಿಸುತ್ತಿದ್ದಾರೆ.

ಕಾಡುಗೊಲ್ಲ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮರಾಠಾ ಪ್ರಾಧಿಕಾರವನ್ನು ಈ ನೆಲೆಯಲ್ಲಿ ನೋಡದಿದ್ದರೆ ಮರಾಠಾ ಭಾಷಿಕರ ಪರವಾಗಿ ಯಡಿಯೂರಪ್ಪನವರು ಏನೋ ಮಾಡುತ್ತಿದ್ದಾರೆಂದು ಭಾಷಿಕ ನೆಲೆಯಲ್ಲಿ ವಿರೋಧಕ್ಕೆ ಸೀಮಿತವಾಗಿಬಿಡುವ ಅಪಾಯವಿದೆ. ಇದರಲ್ಲೂ ಮೇಲ್ನೋಟಕ್ಕೇ ಒಂದು ಅಪಾಯಕಾರಿ ವಿದ್ಯಮಾನ ಎದ್ದು ಕಾಣುತ್ತಿದೆ. ಅದು ನಿರ್ದಿಷ್ಟ ಕ್ಷೇತ್ರವೊಂದರ ಚುನಾವಣೆಯನ್ನು ಗೆಲ್ಲಲು ಅಲ್ಲಿನ ಸಾಮಾಜಿಕ ಸಮೀಕರಣವನ್ನು ಅರ್ಥ ಮಾಡಿಕೊಂಡು ಅಧಿಕಾರದಲ್ಲಿರುವ ಸರ್ಕಾರವೊಂದು ಸಮುದಾಯದ ಮೂಗಿಗೆ ತುಪ್ಪ ಸವರುವ ಮತ್ತು ಅನೈತಿಕ ಕ್ರಮವಾಗಿದೆ. ಎಲ್ಲ ರೀತಿಯಲ್ಲೂ ಚುನಾವಣಾ ನೀತಿಸಂಹಿತೆಯ ವಿರೋಧಿ ಕ್ರಮವಿದು.

ಹಾಗಾದರೆ ಕಾಡುಗೊಲ್ಲ ಸಮುದಾಯಕ್ಕೆ ಸರ್ಕಾರದಿಂದ ವಿಶೇಷಗಮನ ಅಗತ್ಯವೇ ಇರಲಿಲ್ಲವೇ? ಕಾಡುಗೊಲ್ಲ ಸಮುದಾಯವು ನಿಜಕ್ಕೂ ಹಿಂದುಳಿದ ಸಮುದಾಯ. ಆರ್ಥಿಕವಾಗಿ ಹಿಂದುಳಿದಿದೆ, ಸಾಮಾಜಿಕವಾಗಿ ಶೋಷಣೆಗೆ ಗುರಿಯಾಗಿದೆ ಮತ್ತು ಸಾಂಸ್ಕೃತಿಕವಾದ ಹಲವು ಆಚರಣೆಗಳು ಆ ಸಮುದಾಯದ ಗಣನೀಯ ಗ್ರಾಮೀಣ ವಿಭಾಗವನ್ನು ಮೌಢ್ಯದಲ್ಲೂ ಇಟ್ಟಿವೆ. ಹೀಗಾಗಿ ಅದನ್ನು ಸಮಗ್ರವಾಗಿ ಸರಿಪಡಿಸುವ ಕೆಲಸ ಆಗಬೇಕಿದೆ. ಅದು ಯಾವುದೇ ಪ್ರಜಾತಾಂತ್ರಿಕ ಸಮಾಜದ ಸರ್ಕಾರದ ಕೆಲಸ. ಕರ್ನಾಟಕದಲ್ಲಿ ಮೀಸಲಾತಿ ನೀಡಲು ಅದನ್ನು 1 ಎ ಕೆಟಗರಿಯಲ್ಲಿಟ್ಟಿರುವುದು ಸೂಕ್ತವಾಗಿದೆ, ಎಸ್‌ಟಿ ಪಂಗಡಕ್ಕೆ ಸೇರಿಸಿದರೂ ಅದಕ್ಕೆ ಸಮರ್ಥನೀಯ. 1 ಎ ಕೆಟಗರಿಯಲ್ಲಿರುವುದರಿಂದ ಇತರ ಹಿಂದುಳಿದ ಸಮುದಾಯಗಳಿಗಿಂತ ಸ್ವಲ್ಪ ಹೆಚ್ಚಿನ ಅನುಕೂಲಗಳು ಕೆಲವು ಅಂಶಗಳಲ್ಲಿ ಸಿಗುತ್ತಿದ್ದುದು ಸರಿಯಾಗಿಯೇ ಇದೆ.

ಆ ರೀತಿ ಇದುವರೆಗೆ ಸಿಕ್ಕಿರುವ ಸವಲತ್ತುಗಳ್ಯಾವುದಕ್ಕೂ ಬಿಜೆಪಿಯು ಕಾರಣವಲ್ಲ. ಅದನ್ನು ದಾಟಿ ನಿರ್ದಿಷ್ಟ ಪ್ರಮಾಣದ ಅನುದಾನವನ್ನು ಆ ಸಮುದಾಯಕ್ಕೆ ಒದಗಿಸಿ, ಈಗಿರುವ ಸೌಲಭ್ಯವನ್ನೂ ಸಮರ್ಥವಾಗಿ ತಲುಪಿಸಲು ಯಾವುದೇ ಸರ್ಕಾರ (ಬಿಜೆಪಿಯೂ ಸೇರಿ) ಮಾಡುವುದಾದರೆ ಅದನ್ನು ಸ್ವಾಗತಿಸಬೇಕು. ಅದರ ಅಗತ್ಯ ನಿಜಕ್ಕೂ ಇದೆ. ಆದರೆ, ಒಂದು ನಿಗಮವೋ ಅಥವಾ ಪ್ರಾಧಿಕಾರವನ್ನೋ ಮಾಡುವುದರ ಮುಖಾಂತರ ಅದು ಸಾಧ್ಯವೇ? ಸಮಾಜ ಕಲ್ಯಾಣ ಅಥವಾ ಹಿಂದುಳಿದ ವರ್ಗಗಳ ಇಲಾಖೆ ಹಾಗೂ ನಿಗಮಗಳ ಮುಖಾಂತರ ಒಂದಷ್ಟು ಕೆಲಸ ನಡೆಯುತ್ತಿಲ್ಲವೇ? ಎಷ್ಟೇ ಭ್ರಷ್ಟಾಚಾರ, ಅಧಿಕಾರಶಾಹಿಯ ಕೊಕ್ಕೆ ಇತ್ಯಾದಿಗಳು ಇದ್ದರೂ ಅದರಿಂದ ಒಂದಷ್ಟು ಒಳ್ಳೆಯದು ಆಗಿಯೇ ಇದೆ. ಹಾಗಿದ್ದರೆ ಇದರಿಂದ ಏಕಾಗದು?

ಈಗಾಗಲೇ ಕಾಣುತ್ತಿರುವಂತೆ, ಇದು ಇನ್ನೂ ಕನಿಷ್ಠ 20 ಜಾತಿ ನಿಗಮಗಳಿಗೆ ದಾರಿ ಮಾಡಿಕೊಡಲಿದೆ. ಒಂದು ನಿಗಮ ಎಂದಾಕ್ಷಣ ಬೇರಾವ ಸಮುದಾಯಮುಖಿ ಕೆಲಸ ಮಾಡದಿದ್ದರೂ ಕೆಲವು ಕೋಟಿಗಳ ಹಣ ವಾರ್ಷಿಕವಾಗಿ ಖರ್ಚಾಗಲಿದೆ. ಆಫೀಸು, ಸಿಬ್ಬಂದಿ ವೇತನ, ಆಫೀಸು ಖರ್ಚು, ಅಧ್ಯಕ್ಷರಿಗೆ ಕಾರು, ಸದಸ್ಯರಿಗೆ ಭತ್ಯೆ, ಮೀಟಿಂಗ್ ಭತ್ಯೆಗಳು ಇವಿಷ್ಟು ಕೆಲಸ ಮಾಡದಿದ್ದರೆ ಆಗುವ ಖರ್ಚು. ಕೆಲಸ ಮಾಡಿದರೆ ನಿಗಮ-ಪ್ರಾಧಿಕಾರದ ಸದಸ್ಯರ ಪ್ರಯಾಣ ಭತ್ಯೆ, ಕೆಲವು ವೇದಿಕೆ ಕಾರ್ಯಕ್ರಮಗಳು ಸೇರಿಕೊಂಡರೆ ಇನ್ನಷ್ಟು ಕೋಟಿಗಳು. ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಸೇರಿದಂತೆ ಹಲವು ಪ್ರಾಧಿಕಾರ/ನಿಗಮಗಳು ಒಂದಷ್ಟು ಕೆಲಸ ಮಾಡುತ್ತಿವೆಯಾದರೂ ಅವಕ್ಕಿರುವ ಅನುದಾನದ ಕೊರತೆಯ ಬಗ್ಗೆ ಈಗಾಗಲೇ ಆಕ್ಷೇಪಣೆಗಳಿವೆ. ಹೀಗಿರುವಾಗ ಚುನಾವಣಾಪೂರ್ವದಲ್ಲಿ ಯಾವ ಮುನ್ನೋಟವೂ ಇಲ್ಲದೇ ಘೋಷಣೆಯಾಗುವ ನಿಗಮಗಳಿಗೆ ಇನ್ನೆಷ್ಟು ಅನುದಾನ ಕೊಟ್ಟಾರು? ಒಂದುವೇಳೆ ಕೊಟ್ಟರೂ ಈಗ ಆಗಲು ಹೊರಟಿರುವ ರೀತಿಯಲ್ಲಿ 20 ಜಾತಿ ನಿಗಮಗಳು ಸ್ಥಾಪನೆಯಾದರೆ ಏನಾದೀತು? ತಲಾ ಐದು ಕೋಟಿ ಕೊಟ್ಟರೂ ಇದಕ್ಕೆ 100 ಕೋಟಿ ಬೇಕು. ಅಲ್ಲಿಗೆ ಆಫೀಸು, ಅಧ್ಯಕ್ಷರು, ಕಾರು, ಸಿಬ್ಬಂದಿ, ವೇದಿಕೆ ಕಾರ್ಯಕ್ರಮಗಳಿಗೆ ಸಾಕಾಗುತ್ತದೆ.

ಆದರೆ, ಇದರ ಜೊತೆಗೆ ಇನ್ನೊಂದು ಬೆಳವಣಿಗೆ ನಡೆಯುತ್ತದೆ. ಗೊಲ್ಲ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿ ಶಿರಾ ಉಪಚುನಾವಣೆಯಲ್ಲಿ ಗೆದ್ದ ನಂತರ ಸರ್ಕಾರ ಅಧ್ಯಕ್ಷರ ನೇಮಕಾತಿಯನ್ನೂ ಮಾಡಿಲ್ಲ, ಹಣವನ್ನೂ ಬಿಡುಗಡೆ ಮಾಡಿಲ್ಲವೆಂದು ಆ ಸಮುದಾಯದ ಕೆಲವರು ಒಂದು ಸಭೆ ಮಾಡಿದ್ದಾರೆ. ಕೂಡಲೇ ನೇಮಕಾತಿ ಮತ್ತು ಹಣ ಬಿಡುಗಡೆ ಮಾಡಿ ಎಂದು ಕೇಳಿರುವ ಅವರಲ್ಲಿ ಸದರಿ ನಿಗಮದ ಅಧ್ಯಕ್ಷ ಆಕಾಂಕ್ಷಿಗಳೂ ಇರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಅಧ್ಯಕ್ಷರು ಮತ್ತು ಸದಸ್ಯರಾಗಿ ಒಟ್ಟು 10 ಜನ ಆಗಬಹುದಾದರೆ, ಎಷ್ಟೇ ಪುಟ್ಟ ಸಮುದಾಯವಾದರೂ 100 ಜನರು ಅದರ ಹಿಂದೆ ಒಂದು ಲಾಬಿ ನಡೆಸಲು ಸಾಧ್ಯವಾಗುತ್ತದೆ. ಅದು ಸಮುದಾಯದ ಹಿತ ಇರುವುದು ಈ ಪ್ರಾಧಿಕಾರದಲ್ಲಿ ಎಂದು ನಂಬಿಸಲು ಸನ್ನದ್ಧವಾಗಿರುವ ಒಂದು ಗುಂಪಾಗಿರುತ್ತದೆ. ಒಂದು ವೇಳೆ ಪರಿಣಾಮಕಾರಿ ಕೆಲಸ ನಡೆಯುತ್ತಿಲ್ಲವೆನ್ನುವುದಾದರೆ ಅದಕ್ಕೆ ಕಾರಣ ಈ ಹಿಂದಿನ ಅವಧಿಯಲ್ಲಿದ್ದ ಅಧ್ಯಕ್ಷ/ಸದಸ್ಯರೇ ಹೊರತು ಈ ನಿಗಮದ ರಚನೆಯೇ ಪರಿಣಾಮಹೀನ ಎನ್ನಲು ಅವರು ಸಿದ್ಧರಿರುವುದಿಲ್ಲ. ಏಕೆಂದರೆ ಸ್ವತಃ ಅವರೇ ಆಕಾಂಕ್ಷಿಗಳಾಗಿರುತ್ತಾರೆ ಮತ್ತು ಅಧಿಕಾರ ಪಡೆದುಕೊಂಡರೆ ಅವರು ತಮ್ಮ ಅಭಿವೃದ್ಧಿಯನ್ನು ಚೆನ್ನಾಗಿ ಮಾಡಿಕೊಳ್ಳುವ ಸಾಧ್ಯತೆ ಇದೆ, ಸಮುದಾಯದ ಅಭಿವೃದ್ಧಿಯಲ್ಲ.

ಏಕೆಂದರೆ ಈ ಅನುದಾನ ಹಾಗೂ ಶೂನ್ಯ ಅಧಿಕಾರದಲ್ಲಿ ಅವರು ಏನೂ ಮಾಡುವ ಸಾಧ್ಯತೆಯೂ ಇರುವುದಿಲ್ಲ. ಇದು ಕೇವಲ ನಿಗಮ, ಪ್ರಾಧಿಕಾರಗಳಿಗೆ ಸೀಮಿತವಾಗಿಲ್ಲ. ನಮ್ಮ ಇಡೀ ಸ್ಥಳೀಯ ಸಂಸ್ಥೆಗಳೇ (ಅದರಲ್ಲೂ ಗ್ರಾ.ಪಂ., ತಾ.ಪಂ., ಹಾಗೂ ಜಿ.ಪಂಗಳು) ಅನುದಾನಹೀನ, ಅಧಿಕಾರಹೀನ ಸಂಸ್ಥೆಗಳಾಗಿವೆ. ಏನೂ ಇಲ್ಲ ಎಂದಲ್ಲ; ಕಾಗದದ ಮೇಲೆ ಅವು ಹುಲಿಗಳೇ. ಆದರೆ ಬಹುತೇಕ ಅಧಿಕಾರವು ಎಂಎಲ್‌ಎಗಳ ಕೈಯ್ಯಲ್ಲಿರುತ್ತದೆ. ಇರುವಷ್ಟು ಅಧಿಕಾರ ಮತ್ತು ಅನುದಾನವು ಇಲ್ಲಿನ ಅಧ್ಯಕ್ಷರು ಹಾಗೂ ಸದಸ್ಯರುಗಳ ಹಿತಕ್ಕೆ ಬಳಕೆಯಾಗುತ್ತದೆ. ಮಂಡಲ್ ಪಂಚಾಯತ್ ಮತ್ತು ಜಿಲ್ಲಾ ಪರಿಷತ್ ಇದ್ದಾಗ ಇದ್ದ ಅಧಿಕಾರ ಹಾಗೂ ಅನುದಾನಕ್ಕೂ ಈಗಿನದ್ದಕ್ಕೂ ಹೋಲಿಕೆಯೇ ಇಲ್ಲದಂತಾಗಿದೆ.

ಹಾಗೆಂದು ಇದು ಸರ್ಕಾರೀ ಸಂಸ್ಥೆಗಳ ಪ್ರಾತಿನಿಧ್ಯಕ್ಕೆ ಸೀಮಿತವಾದ ಸಂಗತಿಯೂ ಅಲ್ಲ. ಯಡಿಯೂರಪ್ಪನವರು ಮೊದಲ ಅವಧಿಯಲ್ಲಿ ಏನು ಸಾಧಿಸಿದರು ಎಂದು ನೋಡಿದರೆ ಗೊತ್ತಾಗುತ್ತದೆ. ಅವರು ಸಾರ್ವಜನಿಕವಾಗಿ ಇದುವರೆಗೆ ದೊಡ್ಡ ಗುರುತು ಪಡೆದುಕೊಂಡಿರುವ, ಪಡೆದುಕೊಂಡಿರದ ಅದೆಷ್ಟೋ ಸಮುದಾಯಗಳ ಸಮ್ಮೇಳನಗಳನ್ನು ಮಾಡಲು ಉತ್ತೇಜಿಸಿದರು. ಬಹುಶಃ ಅಂತಹ ಸಮ್ಮೇಳನ ಸಂಘಟಿಸದ ಯಾವೊಂದು ಸಮುದಾಯವೂ ಇಲ್ಲವೇನೋ ಎಂಬ ಮಟ್ಟಿಗೆ ಅವು ನಡೆದವು. ಆ ಎಲ್ಲಾ ಸಮ್ಮೇಳನಗಳಿಗೂ ಯಡಿಯೂರಪ್ಪನವರು ಅತಿಥಿಯಾಗಿದ್ದರು; ಹಣವನ್ನೂ ಕೊಟ್ಟಿರುತ್ತಾರೆಂಬ ಬಗ್ಗೆ ಸಂದೇಹವಿರುವ ಅಗತ್ಯವಿಲ್ಲ. ನಂತರ ಆಯಾ ಸಮುದಾಯಗಳ ಮಠಗಳಿಗೆ ಅಥವಾ ದೇವಸ್ಥಾನಗಳಿಗೆ ಬಜೆಟ್‌ನಲ್ಲಿ ಹಣ ನೀಡಿದರು. ಇದು ಆಯಾ ಸಮುದಾಯಗಳಲ್ಲಿನ ಸ್ಥಾಪಿತ ಹಿತಾಸಕ್ತಿಗಳ ಹಿತವನ್ನು ಕಾಪಾಡಿತಷ್ಟೇ ಅಲ್ಲ; ಸಮುದಾಯಕ್ಕೆ ’ಬಿಜೆಪಿ ಆಡಳಿತದಲ್ಲಿ ಮತ್ತು ’ಹಿಂದುತ್ವದ ಅಜೆಂಡಾ’ದಡಿ ಒಂದು ’ಗುರುತು’ ಸಿಕ್ಕಿತು. ಈ ಗುರುತು ವಿಶಾಲವಾದ ದೊಡ್ಡ ಗುರುತಿನಡಿ ಸೇರಿಕೊಂಡ ಸಮಾಧಾನವನ್ನೂ ತರುತ್ತದೆ. ಆದರೆ ಯಾವ ರೀತಿಯಲ್ಲೂ ದೊಡ್ಡ ಆರ್ಥಿಕ, ಸಾಮಾಜಿಕ, ರಾಜಕೀಯ ಚಲನೆಯನ್ನೂ ಇಡೀ ಸಮುದಾಯಕ್ಕೆ ತರುವುದಿಲ್ಲ.

ರಾಜಕೀಯವಾಗಿ ಸರ್ಕಾರದಲ್ಲಿ ಪ್ರಾತಿನಿಧ್ಯ ಸಿಕ್ಕಂತೆ ಮತ್ತು ಸಾಮಾಜಿಕವಾಗಿ ಹಿಂದುತ್ವದಡಿ ಗುರುತು ಸಿಕ್ಕಂತೆ.
ಇದನ್ನು ಕಳೆದ ಬಾರಿ ಸಮ್ಮೇಳನ, ಬಜೆಟ್‌ನಲ್ಲಿ ಮಠಕ್ಕೆ ಹಣದ ಮುಖಾಂತರ ನಡೆಸಿದ ಕಾರ್ಯಾಚರಣೆ ಮೂಲಕ ಮಾಡಲಾಯಿತು. ಈ ಸಾರಿ ಅದನ್ನು ಸಾಂಸ್ಥಿಕಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸರ್ಕಾರದ ಅಂದರೆ ರಾಜ್ಯದ ಜನರ ಹಣದಲ್ಲಿ! ಹಿಂದೆಯೂ ಅದು ರಾಜ್ಯದ ಜನರ ಹಣವೇ ಆಗಿತ್ತು. ಆದರೆ ಸರ್ಕಾರೀ ಯಂತ್ರಾಂಗದ ಭಾಗವಾಗಿ ಸಾಂಸ್ಥೀಕರಿಸಿರಲಿಲ್ಲ. ಈ ಸಾರಿ ಅದನ್ನೂ ಮಾಡುತ್ತಿದ್ದಾರೆ.

ಕಾಡುಗೊಲ್ಲ ಅಭಿವೃದ್ಧಿ ಪ್ರಾಧಿಕಾರವನ್ನು ಶಿರಾದ ಉಪಚುನಾವಣೆಗೆ ಮುಂಚೆ ಘೋಷಿಸಿದರು. ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ಬಸವಕಲ್ಯಾಣ ಉಪಚುನಾವಣೆಗೆ (ಅಲ್ಲಿ ಮರಾಠಾ ಮತಗಳು ಹೆಚ್ಚಿದ್ದು ಕಳೆದ ಚುನಾವಣೆಯಲ್ಲಿ ಪಿ.ಜಿ.ಆರ್.ಸಿಂಧ್ಯಾ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರಿಂದ ಅವು ವಿಭಜನೆಯಾಗಿ ಕಾಂಗ್ರೆಸ್‌ನಿಂದ ಹಿಂದುಳಿದ ಸಮುದಾಯಕ್ಕೆ ಸೇರಿದ್ದ ನಾರಾಯಣರಾವ್ ಗೆದ್ದಿದ್ದರು) ಮುಂಚೆ ಘೋಷಿಸಿದರು. ಅದೇ ಹೊತ್ತಿಗೆ ಲಿಂಗಾಯಿತರಿಗೇಕೆ ಅಭಿವೃದ್ಧಿ ಪ್ರಾಧಿಕಾರವಿಲ್ಲ ಎಂಬ ಪ್ರಶ್ನೆ ಎದ್ದಿತು. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಘೋಷಿಸಿದ್ದರು. ಯಾವ ರೀತಿಯಲ್ಲೂ ಸಮರ್ಥನೀಯವಲ್ಲದ ಕೆಲಸ ಅದಾಗಿತ್ತು. 3% ಬ್ರಾಹ್ಮಣರು ಮತ್ತು ಇನ್ನಿತರ ಸಮುದಾಯಗಳಿಗೆ 10% ಮೀಸಲಾತಿ ಕೊಟ್ಟಿದ್ದನ್ನು ದೇಶದ ಯಾವೊಂದು ಪಕ್ಷವೂ ಹೇಗೆ ವಿರೋಧಿಸಲಿಲ್ಲವೋ ಹಾಗೆಯೇ ಇದೂ ಸಹಾ ಸಣ್ಣ ಗೊಣಗಾಟವೂ ಇಲ್ಲದೇ ಪಾಸಾಗಿ ಹೋಯಿತು. ಹೀಗಿರುವಾಗ ಲಿಂಗಾಯಿತರಿಗೆ ಈ ಪ್ರಶ್ನೆ ಬರಬಾರದೆಂದರೆ ಹೇಗೆ? ಇದೇ ಬಸವಕಲ್ಯಾಣದಲ್ಲಿ ಲಿಂಗಾಯಿತ ಮತಗಳ ಪಾರುಪತ್ಯವನ್ನು ಗಣನೆಗೆ ತೆಗೆದುಕೊಳ್ಳುವುದರ ಜೊತೆಗೆ ಲಿಂಗಾಯಿತರ ಏಕಮೇವಾದ್ವಿತೀಯ ನಾಯಕನ ಸ್ಥಾನವನ್ನು ಬಿಟ್ಟುಕೊಡುವುದಾದರೆ ಅದು ವಿಜಯೇಂದ್ರನ ಹೊರತಾಗಿ ಯಾರಿಗೂ ಅಲ್ಲ ಎಂಬ ಭಾವನೆಯಲ್ಲಿರುವ ಯಡಿಯೂರಪ್ಪನವರು ಸುಮ್ಮನಿರಲಾದೀತೇ? ವೀರಶೈವ ಲಿಂಗಾಯಿತ ಅಭಿವೃದ್ಧಿ ಪ್ರಾಧಿಕಾರದ ಘೋಷಣೆಯೂ ಆಗಿ ಹೋಯಿತು.

ಈಗ ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರದ ಒತ್ತಾಯವೂ ಬಂದಿದೆ. ಬಿಜೆಪಿಯಲ್ಲಿ ಮೂರ್‍ನಾಲ್ಕು ದೊಡ್ಡ ಒಕ್ಕಲಿಗ ನಾಯಕರಿದ್ದು, ಬಿಜೆಪಿಯಲ್ಲಿ ಸತತವಾಗಿ ಗೆದ್ದು ಶಾಸಕನಾಗಿರುವ ತನ್ನನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲವಲ್ಲಾ ಎಂಬ ಕೊರಗಿರುವ ಬಿಜೆಪಿಯ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅದನ್ನು ಮುಂದಿಟ್ಟಿದ್ದಾರೆ. ಅಂದರೆ ಈಗ ಸಮಸ್ಯೆಯ ಪೆಟ್ಟಿಗೆಯನ್ನು ತೆರೆದಂತೇ.. ಒಂದಾದ ಮೇಲೆ ಒಂದು ಸಮುದಾಯಗಳು ಈಗ ಕೇಳಿಯೇ ಕೇಳುತ್ತಾರೆ. ರಾಜ್ಯದ ದೊಡ್ಡ ಮತ್ತು ಬಲಾಢ್ಯ ಸಮುದಾಯವಾದ ಲಿಂಗಾಯಿತರಿಗೇ ಕೊಟ್ಟ ಮೇಲೆ ನಮಗೇಕಿಲ್ಲ ಎಂದು ಯಾರಾದರೂ ಕೇಳಿದರೆ ಅದು ಸಮರ್ಥನೀಯ ಎಂದೇ ಅನಿಸುತ್ತದೆ. ಆದರೆ ಬಿಜೆಪಿ ಇದನ್ನು ಸಮಸ್ಯೆಯೆಂದು ನೋಡುವ ಸಾಧ್ಯತೆ ಇಲ್ಲ. ಬದಲಿಗೆ ಮುಸ್ಲಿಮರು, ಛಲವಾದಿಗಳನ್ನು ಬಿಟ್ಟರೆ ಯಾರನ್ನೂ ಬಿಜೆಪಿ ಸದ್ಯಕ್ಕೆ ಕೂಡಲೇ ಒಳಕ್ಕೆಳೆದುಕೊಳ್ಳದ ಪಟ್ಟಿಯಲ್ಲಿ ಇಟ್ಟಿಲ್ಲ. ಕುರುಬರನ್ನೂ ಜೊತೆಗೆಳೆದುಕೊಂಡು, ಸಿದ್ದರಾಮಯ್ಯನವರು ಆ ಸಮುದಾಯದ ಹಿತ ಕಾಪಾಡುತ್ತಿಲ್ಲ ಎಂದು ಹೇಳಲು ಬೇಕಾದ ’ಕುರುಬರಿಗೆ ಎಸ್‌ಟಿ ಮೀಸಲಾತಿ ಬೇಕು’ ಹೋರಾಟವನ್ನು ಎತ್ತಿ ಕಟ್ಟಲು ಹೊರಟಿದೆ.

ಕಾಂಗ್ರೆಸ್‌ನ ಮತಬ್ಯಾಂಕಿನಲ್ಲಿ ಅಹಿಂದ ಭದ್ರವಾಗಿದೆ ಎಂದು ಯಾರಾದರೂ ಭಾವಿಸಿದರೆ ಅದು ಮೂರ್ಖತನವಾದೀತು. ಹಿಂದುಳಿದವರಲ್ಲಿ ಕುರುಬರನ್ನು ಬಿಟ್ಟು ಮಿಕ್ಕೆಲ್ಲರನ್ನು ಜೊತೆಗೆ ಕರೆದುಕೊಳ್ಳಲು, ಈಗಾಗಲೇ ಹೇಳಿದಂತೆ, ಯಡಿಯೂರಪ್ಪನವರ ಮೊದಲ ಅವಧಿಯಲ್ಲೇ ಪ್ರಯತ್ನಪಟ್ಟ ಕಾರ್ಯಾಚರಣೆ ಭಾಗಶಃ ಯಶಸ್ವಿಯಾಗಿತ್ತು. ವಾಲ್ಮೀಕಿ ಸಮುದಾಯವು ಹಲವು ಜಿಲ್ಲೆಗಳಲ್ಲಿ ಬಿಜೆಪಿಯ ಜೊತೆಗೇ ಗುರುತಿಸಿಕೊಂಡಿದೆ. ಮಾದಿಗರನ್ನು ಸೆಳೆಯಲು ಬೇಕಾದ ಸುಳ್ಳಾಟಗಳು ನಡೆದೇ ಇವೆ (ಕಾಂಗ್ರೆಸ್ ಸರ್ಕಾರವಿದ್ದಾಗ ಅಷ್ಟು ದೊಡ್ಡದಾಗಿ ಸದ್ದು ಮಾಡಿದ್ದ ದಲಿತ ಮುಖ್ಯಮಂತ್ರಿಯ ವಿಚಾರವಾಗಲೀ, ಒಳಮೀಸಲಾತಿಯ ಪ್ರಶ್ನೆಯಾಗಲೀ ಈಗ ದೂರ ಸರಿದಿರುವುದನ್ನು ಗಮನಿಸಬೇಕು). ಇಷ್ಟಾದ ಮೇಲೆ ಇನ್ನು ಕುರುಬರು ಹಾಗೂ ಛಲವಾದಿಗಳು ದೂರವುಳಿದಾರೇ? ಏಕೆಂದರೆ ಇದು ಕೇವಲ ಪಕ್ಷವೊಂದರ ಜೊತೆಗೆ ಸಮುದಾಯವು ಬರುವ ಪ್ರಶ್ನೆಯಾಗುಳಿದಿಲ್ಲ.

ವೈದಿಕಶಾಹಿ ಸಿದ್ಧಾಂತವೊಂದು ಎಚ್ಚೆತ್ತ ಶೋಷಿತ ಸಮುದಾಯಗಳು ತನ್ನಿಂದ ದೂರ ಸರಿದಾಗ, ಮತ್ತೆ ತೆಕ್ಕೆಗೆ ಎಳೆದುಕೊಳ್ಳಲು ವಿಶಾಲವಾದ ಐಡೆಂಟಿಟಿಯ ಭಾಗ ಮಾಡಿಕೊಳ್ಳುತ್ತಲೇ ಮೇಲು ಕೀಳಿನ ಶ್ರೇಣೀಕರಣವನ್ನೂ ಮುಂದುವರೆಸುವ ಸೋಷಿಯಲ್ ಮತ್ತು ಪೊಲಿಟಿಕಲ್ ಇಂಜಿನಿಯರಿಂಗ್‌ನ ದೊಡ್ಡ ಹುನ್ನಾರವಾಗಿದೆ.
ಇದನ್ನು ಶೋಷಿತ ಸಮುದಾಯಗಳು ಅರ್ಥಮಾಡಿಕೊಳ್ಳುವ ಸಾಧ್ಯತೆ ಈಗಂತೂ ಇಲ್ಲ. ಏಕೆಂದರೆ ಆ ಸಮುದಾಯಗಳ ಐಡೆಂಟಿಟಿಗಳನ್ನು ರೂಪಿಸುತ್ತಿರುವುದು ಆಯಾ ಸಮುದಾಯಗಳಲ್ಲಿ ನಿಗಮ, ಪ್ರಾಧಿಕಾರಗಳ ಅಧಿಕಾರಸ್ಥಾನಗಳ ಮೇಲೆ ಆಸಕ್ತಿ ಹೊಂದಿರುವ ಪುಢಾರಿಗಳು ಮತ್ತು ಅದಕ್ಕೆ ಪುಷ್ಟಿ ಕೊಡುತ್ತಿರುವ ಅವಕಾಶವಾದಿ ಬುದ್ಧಿಜೀವಿ ಗುಂಪುಗಳೇ ಹೊರತು, ಸಮಗ್ರ ವಿಮೋಚನೆ ಒದಗಿಸಬಲ್ಲ ವೈದಿಕಶಾಹಿ ವಿರೋಧಿ ಅಜೆಂಡಾ ಅಲ್ಲ.

ಅದನ್ನು ಮೀರಿದ ಪ್ರಜ್ಞೆ ಬರಬೇಕೆಂದರೆ ಅದು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಎಲ್ಲಾ ಸಮುದಾಯಗಳ ಐಕ್ಯತೆಯ ಕುರಿತು ಆಲೋಚಿಸುವವರೆಲ್ಲರೂ ಈ ಸೀಮಿತ ಐಡೆಂಟಿಟಿಗಳನ್ನು ದಾಟಬಲ್ಲ ಆಂದೋಲನವನ್ನು ವಿಶ್ವಾಸ ಮೂಡಿಸುವಷ್ಟು ದೊಡ್ಡದಾಗಿ ಕಟ್ಟಲು ತಯಾರಾಗಬೇಕಿದೆ. ಕರ್ನಾಟಕದ ಪ್ರಸ್ತುತ ಸಾಮಾಜಿಕ, ರಾಜಕೀಯ ಸಂದರ್ಭದಲ್ಲಿ ಅಂತಹ ಸಾಧ್ಯತೆ ಇದೆಯೇ ಎಂಬುದನ್ನು ಮುಂದಿನ ದಿನಗಳಷ್ಟೇ ತೋರಬಲ್ಲವು.

  • ನೀಲಗಾರ

ಇದನ್ನೂ ಓದಿ: ಸರ್ಕಾರ ಮರಾಠಿಗರ ಪ್ರಾಧಿಕಾರ ರಚಿಸಿ ಕನ್ನಡಿಗರನ್ನ ಕೆರಳಿಸಿದೆ – ಸಿದ್ದರಾಮಯ್ಯ ಸರಣಿ ಟ್ವೀಟ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...