Homeಮುಖಪುಟಆಕ್ಟ್-1978: ಘನತೆ ಮತ್ತು ನ್ಯಾಯಕ್ಕಾಗಿ ಸಿಡಿದೇಳಿ ಎನ್ನುವ ಸಿನಿಮಾ

ಆಕ್ಟ್-1978: ಘನತೆ ಮತ್ತು ನ್ಯಾಯಕ್ಕಾಗಿ ಸಿಡಿದೇಳಿ ಎನ್ನುವ ಸಿನಿಮಾ

ಭ್ರಷ್ಟ ವ್ಯವಸ್ಥೆಯಿಂದ ನೊಂದ ಹೆಣ್ಣುಮಗಳೊಬ್ಬಳು ತನಗೆ ತಿಳಿದ ದಾರಿಯಲ್ಲಿ ಸಿಡಿದೇಳುವ ಸಣ್ಣ ಕಥಾ ಎಳೆಯಿಟ್ಟುಕೊಂಡು ಒಂದು ಜನಪ್ರಿಯ ಸಿನಿಮಾ ಮಾಡಬಹುದು ಎನ್ನುವುದನ್ನು ಆಕ್ಟ್-1978 ಚಿತ್ರತಂಡ ತೋರಿಸಿಕೊಟ್ಟಿದೆ.

- Advertisement -
- Advertisement -

‘ಬಡವನ ಸಿಟ್ಟು ದವಡೆಗೆ ಮೂಲ’, ‘ಬಡವ ನೀನ್ ಮಡಗಿದಂಗೆ ಇರು’ ಎನ್ನುವ ಗಾದೆಗಳು ಜನಸಾಮಾನ್ಯರ ನಡುವೆ ಜನಪ್ರಿಯವಾಗಿವೆ. ವ್ಯವಸ್ಥೆಯ ಬಗ್ಗೆ ಜನರ ಆಕ್ರೋಶ ವ್ಯಕ್ತಪಡಿಸಲು, ಹೋರಾಟ ನಡೆಸಲು ಬಿಡದ ವಿದ್ಯಮಾನವನ್ನು ಈ ಗಾದೆಗಳು ಪ್ರತಿನಿಧಿಸಿದರೂ, ‘ಬಡವರ ಸಿಟ್ಟು ರಟ್ಟೆಗೆ ಬಂದ್ರೆ ಸರ್ಕಾರಗಳು ಪೀಸ್, ಪೀಸ್’ ಎಂಬ ಹೋರಾಟದ ಸ್ಲೋಗನ್ ಕೂಡ ಒಂದು ಮಟ್ಟಕ್ಕೆ ಜನಪ್ರಿಯವೇ. ಸಿನಿಮಾವೊಂದು ಈ ಸ್ಲೋಗನ್‌ ಅನ್ನು ಪ್ರತಿನಿಧಿಸಬಹುದೇ? ಜನಸಾಮಾನ್ಯರು, ಬಡವರು ತಮ್ಮ ಅನ್ಯಾಯಗಳ ವಿರುದ್ಧ ಸಿಡಿದೆದ್ದರೆ ಏನಾಗಬಹುದು? ಅಂತಹ ಶೋಧನೆಯ ಚಿತ್ರ ಆಕ್ಟ್-1978.

ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ಹಲವು ತಿಂಗಳುಗಳ ಲಾಕ್ಡೌನ್ ನಂತರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ಹೊಸ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯೊಂದಿಗೆ ಇಂದು ಬಿಡುಗಡೆಯಾಗಿರುವ ಆಕ್ಟ್-1978 ಚಿತ್ರ ಹಲವು ಕಾರಣಗಳಿಗಾಗಿ ಗಮನ ಸೆಳೆಯುತ್ತದೆ. ಭ್ರಷ್ಟ ವ್ಯವಸ್ಥೆಯಿಂದ ನೊಂದ ಹೆಣ್ಣುಮಗಳೊಬ್ಬಳು ತನಗೆ ತಿಳಿದ ದಾರಿಯಲ್ಲಿ ಸಿಡಿದೇಳುವ ಸಣ್ಣ ಕಥಾ ಎಳೆಯಿಟ್ಟುಕೊಂಡು ಒಂದು ಜನಪ್ರಿಯ ಸಿನಿಮಾ ಮಾಡಬಹುದು ಎನ್ನುವುದನ್ನು ಆಕ್ಟ್-1978 ಚಿತ್ರತಂಡ ತೋರಿಸಿಕೊಟ್ಟಿದೆ.

ನಮ್ಮ ವ್ಯವಸ್ಥೆಯಲ್ಲಿ ನೂರಾರು ಸಮಸ್ಯೆಗಳಿವೆ. ಬಡತನ, ಜಾತಿಪದ್ದತಿ, ಪ್ರಾದೇಶಿಕ ಅಸಮಾನತೆ, ಧಾರ್ಮಿಕ ತಾರತಮ್ಯ, ಭ್ರಷ್ಟಾಚಾರ, ಖಾಸಗೀಕರಣ, ರೈತ-ಕಾರ್ಮಿಕರ ಬೆವರಿನ ಲೂಟಿ, ನಾಡು ನುಡಿಯ ಅವಹೇಳನ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಈ ಸಮಸ್ಯೆಗಳ ನಡುವೆ ನೊಂದ ರೈತನ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ದುಷ್ಪರಿಣಾಮಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲುತ್ತದೆ.

ಒಂದು ಕಡೆ ಬೆಳೆದ ಬೆಳೆಗೆ ಬೆಲೆ ಸಿಗದೇ ತಮ್ಮ ಕುಟುಂಬಕ್ಕಾದರೂ ಪರಿಹಾರ ಸಿಗಲಿ ಎಂದು ತೆಂಗಿನ ಮರದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ತಂದೆ. ಇನ್ನೊಂದು ಕಡೆ ಸರ್ಕಾರಿ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ ರಸ್ತೆ ಅಪಘಾತದಲ್ಲಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿರುವ ಗಂಡ. ಈ ನಡುವೆ ತನಗೆ ನ್ಯಾಯಯುತವಾಗಿ ಸಿಗಬೇಕಾದ ಪರಿಹಾರ ಹಣಕ್ಕಾಗಿ ಕಚೇರಿಗಳಿಂದ ಕಚೇರಿಗಳಿಗೆ ಅಲೆಯುತ್ತಿರುವ ತುಂಬು ಗರ್ಭಿಣಿ ಕಥಾನಾಯಕಿ. ಯಾವುದೇ ಕಾರಣಕ್ಕೂ ಲಂಚ ನೀಡಿ ಭ್ರಷ್ಟ ವ್ಯವಸ್ಥೆಯಲ್ಲಿ ಭಾಗಿಯಾಗುವುದಿಲ್ಲ ಎಂಬುವ ನೈತಿಕ ಸಿಟ್ಟು. ಇದರಿಂದ ಹತಾಶಳಾಗಿ, ತನ್ನದಲ್ಲದ ತಪ್ಪಿಗೆ 14 ವರ್ಷ ಜೈಲು ಶಿಕ್ಷೆ ಅನುಭವಿಸಿ ಮೌನಿಯಾಗಿರುವ ರೈತ ಮುದುಕನ ಜೊತೆ ಸೇರಿ, ಸರ್ಕಾರಕ್ಕೆ ಹೇಗೆ ತಲೆನೋವಾಗುತ್ತಾಳೆ ಎಂಬ ಕಥಾಹಂದರದ ಆಕ್ಟ್-1978, ಹೋಸ್ಟೇಜ್ ಡ್ರಾಮಾ ಸಿನೆಮಾಗಳಿಗೆ ಹೊಸ ಸೇರ್ಪಡೆಯಾಗಿದೆ.

ಈ ಸಿನಿಮಾ ನೋಡುವ ವೀಕ್ಷಕನಿಗೆ ಸರ್ಕಾರಿ ಕಚೇರಿಗಳಲ್ಲಿ ತಮಗಾದ ಕೆಟ್ಟ ಅನುಭವಗಳು ನೆನಪಿಗೆ ಬರಬಹುದು. ಆದರೆ ನಮ್ಮ ಜನರು ಅಸಾಮಾನ್ಯ ತಾಳ್ಮೆಯುಳ್ಳವರು. ಅದಕ್ಕೆ ಚಿತ್ರದಲ್ಲಿಯೂ ಒಂದು ಉದಾಹರಣೆಯಿದೆ. 22 ನೇ ವಯಸ್ಸಿಗೆ ಒಂದಷ್ಟು ಲಂಚ ಕೊಟ್ಟು ಅಡೆಂಡರ್ ಆಗಿ ಕೆಲಸಕ್ಕೆ ಸೇರುವ ಬೆಂಜಮಿನ್ ತನಗೆ 37 ವರ್ಷವಾದರೂ ಸಹ ತನ್ನ ಹುದ್ದೆ ಪರ್ಮನೆಂಟ್ ಆಗುತ್ತದೆ ಎಂಬ ಆಸೆಯಿಟ್ಟುಕೊಂಡು ಹಿರಿಯ ಅಧಿಕಾರಿಗೆ ತನಗೆ ಬರುವ ಸಂಬಳದಲ್ಲಿ 25% ಲಂಚ ಕೊಡುತ್ತಿರುತ್ತಾನೆ. ಆದರೆ ಕಥಾನಾಯಕಿ ವಿದ್ಯಾವಂತೆ ಗೀತಾ (ಯಜ್ಞಶೆಟ್ಟಿ) ಮಾತ್ರ ತಾನು ಎನ್ ಸಿ ಸಿಯಲ್ಲಿದ್ದಾಗ ಪ್ರತಿಜ್ಞೆ ಮಾಡಿದಂತೆ ಲಂಚಕೊಡಲೊಲ್ಲಳು, ಮಾತ್ರವಲ್ಲ ಅದೇ ಆದರ್ಶಗಳನ್ನು ಉಳಿಸಿಕೊಂಡು ಬಂದಿರುವವಳು. ತನಗಾದ ನೋವು ಮತ್ತು ಅನ್ಯಾಯಕ್ಕೆ ನ್ಯಾಯ ಪಡೆಯಲು ತೀವ್ರ ಹೆಜ್ಜೆ ಇಟ್ಟು, ಬಾಂಬ್ ಕಟ್ಟಿಕೊಂಡು, ಬಂದೂಕು ಹಿಡಿದು, ತನಗೆ ಅನ್ಯಾಯ ಮಾಡಿದ ಸರ್ಕಾರಿ ನೌಕರರನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡು ವ್ಯವಸ್ಥೆಯೊಂದಿಗೆ ಸಂಪರ್ಕ ಸಾಧಿಸಿ ಜಡಗಟ್ಟಿದ ವ್ಯವಸ್ಥೆಗೆ ಚುರುಕು ಮುಟ್ಟಿಸಬಲ್ಲಳು.

ಹತಾಶಗೊಂಡ ಜನ ಯಾವ ಮಟ್ಟಕ್ಕೂ ಹೋಗಬಲ್ಲರು ಎಂಬುದನ್ನು ಸಿನಿಮಾ ಸೂಚ್ಯವಾಗಿ ಹೇಳುತ್ತದೆ. ಹಾಗೆಯೇ ಪ್ರತಿಯೊಬ್ಬರೂ (ಲಂಚ ಕೊಡುವವರು, ಪಡೆಯುವವರು) ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂಬುದು ಚಿತ್ರತಂಡದ ಅಭಿಲಾಷೆ. ಸಾಮಾನ್ಯ ಜನರ ನೋವನ್ನು, ಆಕ್ರೋಶವನ್ನು ಹಿರಿತೆರೆಮೇಲೆ ತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ ಎಂದೇ ಹೇಳಬಹುದು. ಕೊನೆಯವರೆಗೂ ಕುತೂಹಲ ಕಾಯ್ದುಕೊಳ್ಳುವ ಚಿತ್ರದ ಮೊದಲಾರ್ಧದಲ್ಲಿ ಕಚಗುಳಿ ಇಡುವ ಹಾಸ್ಯ ಕೂಡ ಮುದ ನೀಡುತ್ತವೆ. ಗಾಂಧಿ ವೇಷಧಾರಿಯ ಪ್ರತಿಭಟನೆಯನ್ನು ಸಮಾಜ ನಿರ್ಲಕ್ಷಿಸುವುದು, ಮಾಧ್ಯಮಗಳು ಬಾಯಿಗೆ ಬಂದಂತೆ ಸಂದರ್ಭವನ್ನು ತಿರುಚುವುದು ಇವೆಲ್ಲವೂ ಚಿತ್ರದಲ್ಲಿ ಸೂಚ್ಯವಾಗಿ ಅಡಕಗೊಂಡಿದೆ.

ಹರಿವು ಮತ್ತು ನಾತಿಚರಾಮಿ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಮಂಸೋರೆ ತಾನೊಬ್ಬ ಸಮರ್ಥ ಕಮರ್ಷಿಯಲ್ ಸಿನಿಮಾ ನಿರ್ದೇಶಕನೂ ಹೌದು ಎಂಬುದನ್ನು ಆಕ್ಟ್ 1978 ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ. ಬೆಲ್ ಬಾಟಂ ಚಿತ್ರಕಥೆ ಮೂಲಕ ಮನೆಮಾತಾಗಿರುವ ಯುವ ಬರಹಗಾರ ದಯಾನಂದ್ ಟಿ.ಕೆ ಮತ್ತು ವೀರು ಮಲ್ಲಣರವರ ಚಿತ್ರಕಥೆ ಮತ್ತು ಸಂಭಾಷಣೆ ಚಿತ್ರಕ್ಕೆ ಜೀವತುಂಬಿದೆ. ‘I Need Respect’ ಎನ್ನುವ ಡೈಲಾಗ್ ಚಿತ್ರದ ಧ್ಯೇಯವಾಕ್ಯವೂ ಅನಿಸುತ್ತದೆ. ಯಜ್ಞಶೆಟ್ಟಿ, ಬಿ.ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ರವರ ಅಭಿನಯ ಗಮನಸೆಳೆಯುತ್ತದೆ.

ಚಿತ್ರ ದ್ವಿತಿಯಾರ್ಧದಲ್ಲಿ ಸ್ವಲ್ಪ ಎಳೆದಂತೆ ಭಾಸವಾಗುತ್ತದೆ. ಭ್ರಷ್ಟಾಚಾರ ಕೇವಲ ಸರ್ಕಾರಿ ಕಚೇರಿಗಳಲ್ಲಿ ಮಾತ್ರವಿದೆ ಎಂಬ ಸರಳ ನಿರೂಪಣೆ, ಇಡೀ ಆಡಳಿತ ವ್ಯವಸ್ಥೆಯನ್ನು ಅದಕ್ಕೆ ಲಿಂಕ್ ಮಾಡಲು ಸಾಧ್ಯವಾಗದಿರುವುದು, ಕಾರ್ಪೋರೆಟ್ ಸಂಸ್ಥೆಗಳು ಈ ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಅಂಶವನ್ನು ನಿಭಾಯಿಸಲು ಸಾಧ್ಯವಾಗದಿರುವುದು, ಭಾರತದಂತಹ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲ್ ಸ್ತರದ ಹುದ್ದೆಗಳಲ್ಲಿ ಇರುವ ಜಾತಿ ತಾರತಮ್ಯ ಮತ್ತು ಅದು ಸೃಷ್ಟಿಸಿರುವ ತೀವ್ರ ಭ್ರಷ್ಟಾಚಾರ ಇವುಗಳ ಬಗ್ಗೆ ಅಷ್ಟು ಎಚ್ಚರ ವಹಿಸದೆ ಹೋಗಿರುವುದು ಇಂತಹ ಸಂಗತಿಗಳು ಕಥಾಹಂದರವನ್ನು ತೆಳುವಾಗಿಸಿ ಇನ್ನಷ್ಟು ಪರಿಣಾಮಕಾರಿಯಾಗುವ ಅವಕಾಶವನ್ನು ಈ ಚನಲಚಿತ್ರ ಕೈಚೆಲ್ಲಿದೆ ಅನ್ನಿಸದೆ ಇರದು.

ಈ ಎಲ್ಲವನ್ನು ಒಂದೇ ಚಿತ್ರದಲ್ಲಿ ತರಲು ಸಾಧ್ಯವಿಲ್ಲ ಎನ್ನುವ ಅರಿವಿರುತ್ತಲೇ, ಇದರಲ್ಲಿ ಕೆಲವಾದರೂ ಸೇರಿದರೆ ಚಿತ್ರ ಮತ್ತಷ್ಟು ಸಮಗ್ರವಾಗುತ್ತಿತ್ತು. ಒಟ್ಟಿನಲ್ಲಿ ಜನಮುಖಿ ಕಥಾಹಂದರವುಳ್ಳ ಚಿತ್ರವೊಂದನ್ನು ಕಮರ್ಷಿಯಲ್ ಆಯಾಮದಲ್ಲಿ ತರಲು, ಲಾಕ್‌ಡೌನ್ ನಂತರ ಪ್ರೇಕ್ಷಕರಿಗೆ ಉತ್ತಮ ಕನ್ನಡ ಚಿತ್ರ ನೀಡಲು ಚಿತ್ರತಂಡ ಯಶಸ್ವಿಯಾಗಿದೆ.


ಇದನ್ನೂ ಓದಿ: ’ಆಕ್ಟ್-1978’ ಚಿತ್ರ: ಸಾಮಾಜಿಕ ಜಾಗೃತಿ ಮೂಡಿಸುವ ಪೋಸ್ಟರ್‌ಗಳು ವೈರಲ್‌‌!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...