Homeಮುಖಪುಟರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳ ಜನರ ಮೇಲೆ ಸವಾರಿ

ರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳ ಜನರ ಮೇಲೆ ಸವಾರಿ

ರಾಮಾಯಣ ಮಹಾಭಾರತ ಕಾಲದಲ್ಲಿಯೇ ಅನುಲೋಮ ಪ್ರತಿಲೋಮ ವಿವಾಹ ಪದ್ಧತಿಗಳು, ಸ್ವಯಂವರ ಗಾಂಧರ್ವವಿವಾಹ ನಾನಾ ನಮೂನೆ ವಿವಾಹಗಳು ಹಿಂದೂ ಧರ್ಮಗಳಲ್ಲಿದ್ದವೆಂಬುದನ್ನು ಭಕ್ತರು ಅರಿಯುವ ಅಗತ್ಯವಿದೆ.

- Advertisement -
- Advertisement -

ಜನರಿಂದ ಆರಿಸಿ ಬಂದ ಸರ್ಕಾರವು ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ದೇಶದ ಭದ್ರತೆ, ಪ್ರಜೆಗಳ ಸೌಖ್ಯವನ್ನು ಮೆರೆತು ಏನೇನೋ ತರ್ಕ, ಕುತರ್ಕ, ಚಿಂತನೆಗಳ ಕರ್ಫ್ಯೂವನ್ನು ಪ್ರಜೆಗಳ ಮೇಲೆ ಹೇರಲು ಹವಣಿಸುತ್ತಿದೆ. ದೇಶದ ಆರ್ಥಿಕತೆಯ ಕುಸಿತ ಆಡಳಿತ ವೈಫಲ್ಯ ಮರೆಮಾಚಲು ದಿಢೀರನೆ ಒಂದು ದೇಶ ಒಂದು ಚುನಾವಣೆ ಅನ್ನೋದು. ಒಂದು ದೇಶ ಒಂದೇ ಧರ್ಮ ಒಂದೇ ಭಾಷೆ ಒಂದೇ ತೆರಿಗೆ ಅಂತ ಹೆದರಿಸೋದು ಅವ್ಯಾಹತವಾಗಿ ನಡೆದಿದೆ.

ಇದೆಲ್ಲಾ ದೇಶದ ಐಕ್ಯತೆಯನ್ನು ವಿಘಟನೆಯತ್ತ ಕೊಂಡೊಯುತ್ತದಲ್ಲದೆ ಆಯಾ ಭಾಷಿಕರ ಅಸ್ಮಿತೆಯ ಆತ್ಮಹತ್ಯೆಯಾದಿತೆಂಬುದರ ಬಗ್ಗೆ ಚಿಂತಿಸುತ್ತಿಲ್ಲ. ನಿರ್ದಿಷ್ಟ ಚುನಾವಣೆಯಲ್ಲಿ ಗೆಲ್ಲಲು ಆಯಾ ಸಮುದಾಯಗಳಿಗೆ ನಿಗಮಮಂಡಳಿ ಪ್ರಾಧಿಕಾರಗಳನ್ನು ಮಾಡ ಹೊರಡುವುದೂ ನಡೆಯುತ್ತಿದೆ.

ಸಾಲದ್ದಕ್ಕೆ ಇಲ್ಲದ ’ಲವ್ ಜಿಹಾದ್ ಬಗ್ಗೆ ಪ್ರಸ್ತಾಪಿಸಿ ಅಂತರಧರ್ಮೀಯ ಮದುವೆಗಳನ್ನು ನಿಷೇಧಿಸಲು ಪ್ರಯತ್ನಿಸಲಾಗುತ್ತಿದೆ. ’ಗೋಹತ್ಯೆ ನಿಷೇಧ’ ಜಾರಿಗೆ ತರುತ್ತೇವೆಂದು ಫರಮಾನು ಹೊರಡಿಸುತ್ತಾ ರಾಷ್ಟ್ರೀಯತೆಯ ಹೆಸರಿನಲ್ಲಿ ಅನ್ಯಧರ್ಮಗಳವರ ಮೇಲೆ ಸವಾರಿ ಮಾಡುವ ಚೋದ್ಯವೂ ನಡೆದಿದೆ. ಉತ್ತರ ಪ್ರದೇಶದಲ್ಲಿ ಜಾರಿಯಾಯಿತೆಂದು ’ಲವ್ ಜಿಹಾದ್ ಕಾಯ್ದೆ ತರಲು ಹೊರಟಿರುವ ಸರ್ಕಾರವೂ ಇದು ಅಸಂವಿಧಾನಿಕವೆಂದರಿಯದ್ದೇನಲ್ಲ. ನಿಗದಿಗೊಳಿಸಿದ ವಯೋಮಾನ ದಾಟಿದ ಪ್ರತಿ ಗಂಡು ಹೆಣ್ಣು ಇಷ್ಟಪಟ್ಟವರನ್ನು ವರಿಸುವ ಸ್ವಾತಂತ್ರ್ಯವಿದೆಯೆಂಬ ಕಾನೂನೇ ಇರುವಾಗ ನಿಯಮ ಹೇಗೆ ತರುತ್ತಾರಂತೆ! ಹಿಂದೂ ಹುಡುಗರು ಮುಸ್ಲಿಂ ಹುಡುಗಿಯರನ್ನು, ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಪ್ರೇಮಿಸಿ ವರಿಸಬಾರದೆಂಬ ಯಾವ ಕಾಯ್ದೆ ಇದೆ? ಬಲವಂತ ಮತಾಂತರ ತಪ್ಪಿರಬಹುದು. ಇಷ್ಟಪಟ್ಟ ಧರ್ಮಕ್ಕೆ ಮತಾಂತರವಾಗುವುದು ತಪ್ಪಲ್ಲವೆಂದು ಸಂವಿಧಾನವೇ ಸಾರಿರುವಾಗ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕೇಕೆ? ಮನುಷ್ಯರನ್ನು ಮನುಷ್ಯ ಮಟ್ಟಿಸಿಕೊಳ್ಳದ, ಮಮತೆ ತೋರದ ಧರ್ಮ ಒಂದಿದ್ದರೆ ಅದರಲ್ಲೆ ಉಳಿಯಲು ಜಿಗುಪ್ಸೆಗೊಂಡು ಪ್ರೀತಿ ಸಾಮರಸ್ಯ ಸಮಾನತೆ ತೋರುವ ಯಾವ ಧರ್ಮವಾದರೇನು ಹೋಗುವುದು ಸಹಜವಲ್ಲವೆ. ಕನಿಷ್ಟ ಜೊತೆಗೆ ಕೂತು ಉಣ್ಣದವರ ನಡುವೆ ವಿವಾಹಗಳಾದವೆ? ಹೀಗಾಗಿಯೇ ಕಾಲಕಾಲಕ್ಕೆ ರೂಪಾಂತರಗಳಾಗಿವೆ. ಅಪಾರ ಬುದ್ಧಿಮತ್ತೆ ಇರುವ ಮಾನವತಾವಾದಿ ಅಂಬೇಡ್ಕರ್ ಅಂಥವರೇ ನೋವುಂಡು ಬೌದ್ಧಧರ್ಮಕ್ಕೆ ಮತಾಂತರಗೊಂಡರೆಂದಾಗ ಜಾತಿಯ ಅಟ್ಟಹಾಸ ಅಳೆವ ಮಾಪನವೆಲ್ಲಿಂದ ತರೋದು ಹೇಳಿ.

ಹಿಂದೆಂದಿಗಿಂತಲೂ ಇಂದು ಭಾರತದಲ್ಲಿ ರಾಷ್ಟ್ರೀಯತೆಯನ್ನು ಪ್ರಚೋದಿಸುವ ಕಾರ್ಯ ಹೆಚ್ಚುತ್ತಿದೆ. ಧರ್ಮದ ಹೆಸರಿನಲ್ಲಿ ಮುಸ್ಲಿಂ ದ್ವೇಷವನ್ನು ವ್ಯವಸ್ಥಿತವಾಗಿ ಬಿತ್ತುವುದೂ ಸಹ ’ಜಿಹಾದಿ’ ಅಲ್ಲವೆ? ಜಿಹಾದಿಗೂ ಲವ್‌ಗೂ ಏಕೆ ಸಂಬಂಧ ಕಲ್ಪಿಸುತ್ತಿದ್ದಾರೊ! ’ಜಿಹಾ’ ಅಂದರೆ ಇಷ್ಟೆ ಅನ್ಯಾಯದ ವಿರುದ್ಧ ಹೋರಾಟ, ಮುಸ್ಲಿಂ ಬಾಂಧವರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುತ್ತಾ ಅವರ ಸಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸುವ, ಅವರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡುವ ಪ್ರಯತ್ನಗಳಾಗುತ್ತಿರುವುದು ಜನಸಮಾನ್ಯರಿಂದಲ್ಲ. ಆಳುವ ಪ್ರಭುತ್ವದಿಂದಲೇ ಎಂದಾಗ ಯಾರ ಬಳಿ ದೂರುವುದು? ಮುಸ್ಲಿಂ ಹುಡುಗರು ಮಾತ್ರವೇ ಪ್ರೀತಿಸಿ ಮದುವೆಯಾಗಿಯೋ, ಆಗದೆಯೋ ಮೋಸ ಮಾಡುತ್ತಿದ್ದಾರೆಯೆ? ಹಿಂದೂಗಳಲ್ಲಿಯೂ ಅದೆಷ್ಟು ಅಂತರ್ಜಾತಿ ವಿವಾಹಗಳು ವಿಫಲವಾಗಿಲ್ಲ ಹೇಳಿ. ಸನಾತನವ್ಯಾಧಿಗಳಿಂದಾಗಿ ಮರ್ಯಾದಾ ಹತ್ಯೆಗಳು ನಡೆಯುತ್ತಿಲ್ಲವೆ.

ಯಾವನೋ ಮುಸಲ್ಮಾನನೊಬ್ಬ ಹಿಂದೂ ಹೆಣ್ಣೊಬ್ಬಳಿಗೆ ಮೋಸ ಮಾಡಿದನೆಂದಾದರೆ ಅವನನ್ನು ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸದೆ, ಲವ್ ಜಿಹಾದಿ ನಿಷೇಧ ಕಾಯ್ದೆಗೆ ಮುಂದಾಗೋದು ನೆಗಡಿಯಾಯಿತೆಂದು ಮೂಗು ಕತ್ತರಿಸಿಕೊಂಡಂತೆ. ಇದನ್ನು ಕಾನೂನಿಂದ ಮಾನ್ಯ ಮಾಡಲು ಸಾಧ್ಯವೇ? ಜಾತಿ ಧರ್ಮದ ಹೊರತಾಗಿಯೂ ಇಬ್ಬರ ನಡುವಿನ ವೈಯಕ್ತಿಕ ಸಂಬಂಧವನ್ನು ಅತಿಕ್ರಮಿಸುವ ಸ್ವಾತಂತ್ರ್ಯ ಯಾರಿಗೂ ಇಲ್ಲವೆಂದು ಅಲಹಾಬಾದ್ ಹೈಕೋರ್ಟ್ ಹೇಳಿದ್ದಾಗಿದೆ. ಇತ್ತೀಚಿಗೆ ಇಂತದ್ದೇ ಪ್ರೇಮ ಪ್ರಕರಣದಲ್ಲಿ ರಮ್ಯ ಮತ್ತು ವಾಜಿದಾಖಾನ್‌ರ ಅಂತರ್ಧರ್ಮಿಯ ವಿವಾದ ವಿಚಾರದಲ್ಲಿ ನ್ಯಾಯಾಮೂರ್ತಿ ಎಸ್. ಸುಜಾತ ಹಾಗೂ ಸಚಿನ್ ಶಂಕರ್ ಮಗದಮ್ ಅವರುಗಳಿದ್ದ ಪೀಠ ಇಂತದ್ದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೂ ಸರ್ಕಾರ ಕಾಯ್ದೆ ತರಲು ಹೊರಟಿದೆ. ಇದು ಸ್ವಂತ ಆಲೋಚನೆಯೂ ಅಲ್ಲ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ನಕಲು.

ಇನ್ನು ಗೋಹತ್ಯೆ ನಿಷೇಧದ ಮಾತು ಬೇರೆ. ಈ ವಿಷಯದಲ್ಲಾಗಲೇ ಧರ್ಮಧರ್ಮಗಳ ನಡುವೆ, ಜಾತಿಜಾತಿಗಳ ಮಧ್ಯೆ ಕೊಲೆಗಳೇ ಆಗಿವೆಯಾದರೂ ಹಗ್ಗಜಗ್ಗಾಟ ನಿಲ್ಲುವಂತಿಲ್ಲ. ಅನಾದಿಕಾಲದಲ್ಲಿ ಎಲ್ಲರೂ ಒಂದೇ ಜಾತಿಯವರೆ – ಬೇಟೆಯಾಡುವ ಬೇಡರು, ಎಲ್ಲಾ ಮಾಂಸಾಹಾರಿಗಳೇ. ಒಂದು ಕಾಲದಲ್ಲಿ ವೈದಿಕರೂ ಮಾಂಸಾಹಾರಿಗಳೇ ಎಂಬ ವಾದವೂ ಈಗ ಹಳೆಯದು. ನಾವು ಏನನ್ನು ಇಷ್ಟಪಟ್ಟು ಉಣ್ಣುತ್ತೇವೋ ಉಡುತ್ತೇವೋ ಹಾಗೆ ಮತಾಂತರವೋ ವೈಯಕ್ತಿಕ ಹಕ್ಕೆಂದು ಸಂವಿಧಾನದಲ್ಲಿ ಹೇಳಿದ್ದರೂ ಸರ್ಕಾರ ಜನರ ನೆಮ್ಮದಿಗೆ ಮತ್ತೆ ಮತ್ತೆ ಕೊಳ್ಳಿ ಇಡುವ ಯತ್ನ ಮಾಡುತ್ತಲೇ ಇದೆಯೇಕೆ? ಮುಸ್ಲಿಮರಲ್ಲಿ ಮಾತ್ರವೆ ಉಗ್ರರಿದ್ದಾರೆಯೇ? ಹಿಂದೂಗಳಲ್ಲಿ ಉಗ್ರರು, ಮೂಲಭೂತವಾದಿಗಳಿಲ್ಲವೇ? ಭಯೋತ್ಪಾದಕರು ಜಿಹಾದಿಗಳೂ ಮುಸ್ಲಿಮರಲ್ಲಿ ಮಾತ್ರವಿದ್ದಾರೆಂಬುದು ಪೂರ್ವಾಗ್ರಹಪೀಡಿತ ಅರ್ಧ ಸತ್ಯವಷ್ಟೆ.

ಇನ್ನು ಕ್ರಾಸ್ ಮದುವೆಗಳಾಗಿವೆ ಎಂದು ವಿರೋಧ ಪಕ್ಷದ ನಾಯಕರ ಮಾತಿಗೆ ಆಳುವ ರಾಜಕಾರಣಿಗಳು ಮುನಿದು ಹೊಗೆ ಹಾಕಿದ್ದಾರೆ. ಇಂತಹ ಮದುವೆಗಳು 600 ವರ್ಷ ಆಳಿದ ಮೊಘಲರ ಕಾಲದಲ್ಲೂ ನಂತರ 200 ವರ್ಷ ಆಳಿದ ಬ್ರಿಟಿಷರ ಕಾಲದಲ್ಲೂ ನಡೆದಿದೆ. ಇಲ್ಲಿರುವ ಬಹುತೇಕ ಮುಸ್ಲಿಮರು ಕ್ರಿಶ್ಚಿಯನ್ನರೂ ಕನ್ವರ್ಟೆಡ್ ಹಿಂದೂಗಳು. ಇಂತಹ ಕೇಸ್‌ಗಳು ವೇದಗಳ ಕಾಲದಲ್ಲೇ ನಡೆದಿವೆ, ವಸಿಷ್ಠ ಅರುಂಧತಿ, ಜಮದಗ್ನಿ ರೇಣುಕಾರ ವಿವಾಹಗಳಿಗೇನಂತೀರಿ?

ರಾಮಾಯಣ ಮಹಾಭಾರತ ಕಾಲದಲ್ಲಿಯೇ ಅನುಲೋಮ ಪ್ರತಿಲೋಮ ವಿವಾಹ ಪದ್ಧತಿಗಳು, ಸ್ವಯಂವರ ಗಾಂಧರ್ವವಿವಾಹ ನಾನಾ ನಮೂನೆ ವಿವಾಹಗಳು ಹಿಂದೂ ಧರ್ಮಗಳಲ್ಲಿದ್ದವೆಂಬುದನ್ನು ಭಕ್ತರು ಅರಿಯುವ ಅಗತ್ಯವಿದೆ.

ಹೀಗಂದರೆ ತಟ್ಟನೆ ಧರ್ಮದ್ರೋಹಿ, ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತದೆ. ಅಂಬೇಡ್ಕರ್ ಕೊಟ್ಟ ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರವೀಗ ನಡೆದಿದೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಎಲ್ಲವೂ ಆಳುವವರ ಮುಖವಾಣಿಯಾಗಿದೆ. ವಿರೋಧ ಪಕ್ಷದಂತೆ ಧ್ವನಿ ಎತ್ತಬೇಕಾದ ದವರು ಆಳುವವರಿಗೆ ಮಾರಿಕೊಂಡು ಬಕೆಟ್ ಹಿಡಿದು ವಾಚಾಮಗೋಚರವಾಗಿ ಹೊಗಳಿ ಆಟ್ಟಕ್ಕೇರಿಸುತ್ತಾ ಅಸಹ್ಯ ಹುಟ್ಟಿಸುತ್ತಿದೆ. ಸರ್ಕಾರವಾಗಲಿ ಯಾರೇ ಅಗಲಿ ಕಾನೂನಿಗಿಂತ ಅತೀ ಅಲ್ಲವೆಂದು ತಿಳಿದೂ ಇಂತಹ ಕೆಲಸಕ್ಕೆ ಸರ್ಕಾರ ಕೈ ಹಾಕುವಲ್ಲಿ ಸದುದ್ದೇಶವಂತೂ ಕಾಣುತ್ತಿಲ್ಲ. ಎದೆ ಎಷ್ಟು ಇಂಚಿದೆ ಅನ್ನೋದು ದೊಡ್ಡ ವಿಷಯವಾಗದೆ ಮಿದುಳು ಎಷ್ಟಿದೆ ಎಂಬುದೀಗ ಸಾಬೀತಾಗಬೇಕಿದೆಯಲ್ಲವೆ.

  • ಡಾ. ಬಿ. ಎಲ್ ವೇಣು

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. 26 ಕಾದಂಬರಿಗಳನ್ನು ಪ್ರಕಟಿಸಿದ್ದು ಈ ಪೈಕಿ 9 ಚಲನಚಿತ್ರಗಳಾಗಿವೆ. ಕುವೆಂಪು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.


ಇದನ್ನೂ ಓದಿ: ಅಂಬೇಡ್ಕರ್ ಚಿಂತನೆಗಳನ್ನು ತಿರುಚುವ ಕುತ್ಸಿತ ಶಕ್ತಿಗಳು ಮತ್ತು ಅವರ ಆಶಯಗಳನ್ನು ಮಣ್ಣುಗೂಡಿಸುವ ಕಾನೂನುಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...