Homeಮುಖಪುಟಕಾರ್ಪೊರೆಟ್ ಧೃತರಾಷ್ಟ್ರ ಬಾಹುಗಳಿಗೆ ವಾಣಿಜ್ಯ ಬ್ಯಾಂಕುಗಳು!

ಕಾರ್ಪೊರೆಟ್ ಧೃತರಾಷ್ಟ್ರ ಬಾಹುಗಳಿಗೆ ವಾಣಿಜ್ಯ ಬ್ಯಾಂಕುಗಳು!

- Advertisement -
- Advertisement -

ನವೆಂಬರ್ 23ರಂದು ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕುಗಳ ಮಾಲಿಕತ್ವದ ಉದಾರೀಕರಣ ಕುರಿತಂತೆ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ವ್ಯಾಪಾರ-ವಾಣಿಜ್ಯಗಳಲ್ಲಿ ತೊಡಗಿರುವ ಕಾರ್ಪೊರೆಟ್ ಸಂಸ್ಥೆಗಳು ಬ್ಯಾಂಕುಗಳನ್ನು ಆರಂಭಿಸುವುದಕ್ಕಿದ್ದ ನಿಯಂತ್ರಣವನ್ನು ತೆಗೆದುಹಾಕುವ ನಿರ್ಧಾರವದು. ಈ ನಿಯಂತ್ರಣವನ್ನು ಯಾಕಾಗಿ ಹಾಕಲಾಗಿತ್ತೆನ್ನುವುದರ ಬಗ್ಗೆ ಕಾಳಜಿ ಮೊದಲೇ ಇಲ್ಲ, ಅತ್ತ ಚರ್ಚೆಯೂ ಇಲ್ಲ. ಇಡೀ ದೇಶದಲ್ಲಿ ಬ್ಯಾಂಕ್ ವ್ಯವಹಾರ ಕ್ಷೇತ್ರ ಮತ್ತು ಆರ್ಥಿಕ ಅಭಿವೃದ್ಧಿ ಕ್ಷೇತ್ರದ ಬೆಳವಣಿಗೆಗಳ ಮೇಲೆ ಹದ್ದಿನ ಕಣ್ಣುಗಳನ್ನಿಟ್ಟುಕೊಂಡು ಯಾವುದೇ ಅನಾಹುತ, ವಂಚನೆಗಳಾಗದಂತೆ ಜವಾಬ್ದಾರಿಯುತ ಪಾತ್ರ ವಹಿಸುಕೊಂಡುಬರುತ್ತಿದ್ದ ಭಾರತಿಯ ರಿಸರ್ವ್ ಬ್ಯಾಂಕು, ತನ್ನ ಸ್ವಾಯತ್ತತೆಯನ್ನು ಕೇಂದ್ರ ಸರ್ಕಾರಕ್ಕೆ ಒತ್ತೆ ಇಟ್ಟಿರುವ ರೀತಿಯಲ್ಲಿ ಕಾರ್ಯ ನಿರ್ವಹಿಸತೊಡಗುತ್ತಿರುವುದು ಆತಂಕಕಾರಿ ಬೆಳವಣಿಗೆ. ತನ್ನ ಆಂತರಿಕ ಕಾರ್ಯ ನಿರ್ವಹಣಾ ಘಟಕದ ಬಹುಮತದ ಅಭಿಪ್ರಾಯವನ್ನು ಕಡೆಗಣಿಸಿ, ಅಲ್ಪ ಮತದ ತೀರ್ಮಾನವನ್ನು ಆಧರಿಸಿ ಕಾರ್ಪೊರೆಟ್ ಸಂಸ್ಥೆಗಳು ತಮ್ಮ ಮಾಲಿಕತ್ವದ ಅಡಿಯಲ್ಲಿ ಬ್ಯಾಂಕುಗಳನ್ನು ಹೊಂದಬಹುದು ಎನ್ನುವ ಆದೇಶ ಹೊರಡಿಸುವ ಹಂತಕ್ಕೆ ಈಗ ಆರ್‌ಬಿಐ ಬಂದಿದೆ. ಇದು ಕುರಿ ಕಾಯಲು ತೋಳವನ್ನು ನೇಮಿಸಿದಂತೆ ಎಂದು ತಜ್ಞರ ಅಭಿಪ್ರಾಯ.

ಕಾರ್ಪೊರೆಟ್ ವಲಯವನ್ನು ತೋಳ ಎಂದು ಉಪಮಿಸಲು ಕಾರಣ ಎಂದರೆ, ಇತ್ತೀಚಿನ ವರ್ಷಗಳಲ್ಲಿ ಆ ವಲಯದ ಕೆಲವು ಬಹು ದೊಡ್ಡ ಕಂಪನಿಗಳು ದೇಶದ ಅರ್ಥ ವ್ಯವಸ್ಥೆಗೆ ಮತ್ತು ಬ್ಯಾಂಕಿಂಗ್ ವಲಯಕ್ಕೆ ಕೊಟ್ಟಿರುವ ಕಾಣಿಕೆ: ಲಕ್ಷಾಂತರ ಕೋಟಿ ರೂಪಾಯಿಗಳ ಎನ್‌ಪಿಎ! ಅಂದರೆ ದುಡಿಯದ ಬಂಡವಾಳವನ್ನು ಸೃಷ್ಟಿಸಿರುವುದು ಮತ್ತು ಭಾರತೀಯ ರಿಸರ್ವ್ ಬ್ಯಾಂಕು ಕೇಂದ್ರ ಸರ್ಕಾರದ ಅನುಮೋದನೆ ಮೇರೆಗೆ ಅದನ್ನು ರೈಟ್ ಆಫ್ ಮಾಡಿರುವುದೇ ಆ ಕಾಣಿಕೆ. ಹೀಗೆ ರೈಟ್ ಆಫ್ ಆದ ಎನ್‌ಪಿಎ ಖಾತೆಗಳ ಮೊತ್ತ, ಕಳೆದ ಒಂದೂವರೆ ದಶಕದಲ್ಲಿ, ಹತ್ತಿರ ಹತ್ತಿರ 20 ಲಕ್ಷ ಕೋಟಿ ರೂಪಾಯಿಗಳು. ಈ ನಷ್ಟಗಳ ಅಂತಿಮ ಹೊರೆ ಪರೋಕ್ಷವಾಗಿ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ. ನಷ್ಟಕ್ಕೆ ಕಾರಣರಾದವರು ಕಾನೂನಿನ ಕೈಗಳಿಂದ ಪಾರಾಗುವಷ್ಟು ಜಾಣತನ ಹೊಂದಿಯೇ ಇದ್ದಾರೆ. ಈ ಜಾಣತನವೇ ಈ ದೇಶದ ಕಾರ್ಪೊರೆಟ್ ಧಣಿಗಳ ಸುರಕ್ಷತಾ ಕವಚ.

PC : Inc. Magazine

ರಾಷ್ಟ್ರೀಯ ವರಮಾನಕ್ಕೆ ಗಣನೀಯ ಕೊಡುಗೆ ನೀಡುತ್ತಿದ್ದ ಪ್ರಾಥಮಿಕ ವಲಯಗಳೆಂದು ಪರಿಗಣಿತವಾದ ಕೃಷಿ ಮತ್ತು ಗುಡಿ ಕೈಗಾರಿಕೆಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸುವುದಕ್ಕಾಗಿ 1969 ಮತ್ತು 1980ರಲ್ಲಿ ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಲಾಗಿತ್ತು. ಆ ಮೂಲಕ ದೇಶದ ಅತಿಹೆಚ್ಚು ಜನಸಂಖ್ಯೆಗೆ ಉದ್ಯೋಗ ಕೊಡುವುದರ ಜೊತೆಗೆ ಕೆಲವೇ ಜನರ ಕೈಯಲ್ಲಿ ಆರ್ಥಿಕ ಸಂಪತ್ತು ಮತ್ತು ಸಂಪನ್ಮೂಲಗಳು ಕೇಂದ್ರೀಕೃತವಾಗುವುದನ್ನು ತಪ್ಪಿಸುವ ಉದ್ದೇಶ ಅದಕ್ಕಿತ್ತು. ಈಗ ರಾಷ್ಟ್ರೀಕೃತ ಬ್ಯಾಂಕುಗಳನ್ನು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ವಿಲೀನಿಕರಣಕ್ಕೊಳಪಡಿಸುವ ಮೂಲಕ ಬೃಹತ್ ಬ್ಯಾಂಕುಗಳನ್ನು ಸೃಷ್ಟಿಸಿ ಬೃಹತ್ ಉದ್ಯಮಿಗಳ ಉತ್ಪಾದನೆಗಾಗಿ ದೊಡ್ಡ ಪ್ರಮಾಣದ ಸಾಲ ನೀಡುವ ಮೂಲಕ ದೇಶವನ್ನು ಜಗತ್ತಿನ ಬೃಹತ್ ರಾಷ್ಟ್ರಗಳ ಸಾಲಿನಲ್ಲಿ ತರುವ ಉದ್ದೇಶ ಈಗಿನ ಸರ್ಕಾರದ್ದಾಗಿದೆ.

ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಯಾವುದನ್ನು ಸಂವಿಧಾನಪರ ಅಭಿವೃದ್ಧಿಯ ರಾಷ್ಟ್ರೀಯ ಆರ್ಥಿಕ ನೀತಿ ಎಂದುಕೊಂಡಿದ್ದೆವೋ, ಅದರ ವಿರುದ್ಧ ದಿಕ್ಕಿನಲ್ಲಿ ಅರ್ಥವ್ಯವಸ್ಥೆಯನ್ನು ಕೊಂಡೊಯ್ಯುವ ನೀತಿ ಇವತ್ತಿನದ್ದಾಗುತ್ತಿದೆ. ಅದನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಘೊಷಿಸಿಕೊಂಡಿದೆ ಕೂಡ. ಈ ವರ್ಷದ ಮುಂಗಡ ಪತ್ರದಲ್ಲಿ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಯಾರನ್ನು ಸಂಪತ್ತು ಸೃಷ್ಟಿಕಾರರು ಎಂದು ಗೌರವಿಸಲಾಗಿದೆಯೋ ಆ ಸಂಪತ್ತು ಸೃಷ್ಟಿಕಾರರೇ ಈ ಕಾರ್ಪೊರೇಟ್ ಸಂಸ್ಥೆಗಳು. ಇಲ್ಲಿನ ದ್ವಂದ್ವ, ಗೊಂದಲ ಮತ್ತು ವಿರೋಧಾಭಾಸಗಳೆಂದರೆ, ಈ ಕಾರ್ಪೊರೆಟ್ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಬೃಹತ್ ಯಂತ್ರಗಳನ್ನು ಉಪಯೋಗಿಸಿ ಗ್ರಾಮ ಸ್ವರಾಜ್ಯವನ್ನು, ಆತ್ಮನಿರ್ಭರ ಭಾರತವನ್ನು ಕಟ್ಟುವ ಬಗೆಗೆ ಏನೆನ್ನುವುದು? ದೇಶದ ಆಂತರಿಕ ಆರ್ಥಿಕ ಘಟಕಗಳಿಗೆ ಕನಿಷ್ಟ ಭದ್ರತೆಯನ್ನು ದೃಢಪಡಿಸಿಕೊಳ್ಳದೆ, ಉದ್ಯೋಗ ವ್ಯವಸ್ಥೆಯನ್ನು ಗಟ್ಟಿಗೊಳಿಸಿಕೊಳ್ಳದೆ ಮುಕ್ತ ಮಾರುಕಟ್ಟೆಯಲ್ಲಿನ ಪೈಪೋಟಿಯ ಕಟ್ಟುಗಳನ್ನು ಸಡಿಲಗೊಳಿಸುವುದೆಂದರೆ ದುರ್ಬಲರನ್ನು ಮಾರುಕಟ್ಟೆಯಿಂದ ದೂರವಿಟ್ಟಂತೆಯೇ ಸರಿ.

ಉದ್ದೇಶವೇನು?

ಕಾರ್ಪೊರೆಟ್ ಸಂಸ್ಥೆಗಳ ಮಾಲಿಕತ್ವಕ್ಕೆ ಬ್ಯಾಂಕುಗಳನ್ನು ಮುಕ್ತಗೊಳಿಸುವ ಈ ಯೋಚನೆ ಸರ್ಕಾರಕ್ಕೆ ಬಂದದ್ದು 2013ರಲ್ಲಿ. ಆಗ ಇದೇ ಆಂತರಿಕ ಕಾರ್ಯನಿರತ ಘಟಕ ಮಾಡಿದ ಶಿಫಾರಸ್ಸನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿ ವ್ಯತಿರಿಕ್ತ ಸಾರ್ವಜನಿಕ ಅಭಿಪ್ರಾಯದ ಮೇರೆಗೆ 2014ರಲ್ಲಿ ಈ ನಿರ್ಧಾರವನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಈ ತೀರ್ಮಾನಕ್ಕೆ ಕೇಂದ್ರ ರಿಸರ್ವ್ ಬ್ಯಾಂಕು ಬರಲು ಕಾರಣ ಕೇಂದ್ರ ಸರ್ಕಾರದ ಒತ್ತಾಸೆಯಲ್ಲದೆ ಬೇರಿಲ್ಲ. ಅಲ್ಲಿಗೆ ಭಾರತೀಯ ರಿಸರ್ವ್ ಬ್ಯಾಂಕು ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿದೆ ಎಂದೇ ಅರ್ಥ. ಈ ತೀರ್ಮಾನಕ್ಕೆ, ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಕೇವಲ ಒಬ್ಬ ಸದಸ್ಯರನ್ನು ಉಳಿದು ಎಲ್ಲರೂ ವಿರುದ್ಧವಾಗಿರುವುದು ತಿಳಿದುಬಂದಿದೆ. ಅಷ್ಟೇ ಏಕೆ, ಇದೇ ಬ್ಯಾಂಕಿನ ಮಾಜಿ ಗವರ್‍ನರ್ ಮತ್ತು ಡೆಪ್ಯುಟಿ ಗವರ್‍ನರ್‌ಗಳಾದ ರಘುರಾಮ್ ರಾಜನ್ ಮತ್ತು ವಿರಲ್ ಆಚಾರ್ಯ ವಿರೋಧ ವ್ಯಕ್ತಪಡಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಚರ್ಚಿಸಲು ಕೂಡ ಮುಂದಾಗಿಲ್ಲ. ಸರ್ಕಾರದ ನೀತಿ ತೀರ್ಮಾನಗಳಲ್ಲಿ ಪರಿಣಿತರ ಮತ್ತು ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆ ಇಲ್ಲದಿರುವ ಕಾರಣಕ್ಕೇ, ಇಂದು ಪಂಜಾಬ್ ಮತ್ತು ಹರಿಯಾಣದ ರೈತರಷ್ಟೇ ಅಲ್ಲ, ದೇಶಾದ್ಯಂತ ರೈತರು ಕೇಂದ್ರ ಸರ್ಕಾರದ ಇತ್ತೀಚಿನ ಮೂರು ಕೃಷಿ ಕಾಯಿದೆಗಳೆಗೆ ಸಂಬಂಧಿಸಿದಂತೆ ತೀವ್ರ ಪ್ರತಿಭಟನೆಗೆ ಇಳಿದಿರುವುದು.

ಕಾರ್ಪೊರೆಟ್ ಸಂಸ್ಥೆಗಳಿಗೆ ತಮ್ಮ ವ್ಯವಹಾರಕ್ಕೆ ಅನುಕೂಲವಾಗುವಂತೆ ತಮ್ಮದೇ ಆದ ಹಣಕಾಸು ಸಂಸ್ಥೆಯನ್ನು ಸ್ಥಾಪಿಸಿಕೊಳ್ಳುವ ಅವಕಾಶ ನೀಡುವ ಮೂಲಕ, ಅವರದೇ ಸೂಜಿಯನ್ನು ಅವರ ಕಣ್ಣಲ್ಲಿ ಇಡುವ ಯೋಚನೆ ಕೇಂದ್ರ ಸರ್ಕಾರದ್ದು ಎನ್ನುವುದಾದರೆ ಅದು ಒಟ್ಟಾರೆ ಅಸಮಂಜಸವಾದುದು. ಏಕೆಂದರೆ, ಇಲ್ಲಿ ಸಂಭವನೀಯ ಕಾರ್ಪೊರೆಟ್ ಸಂಸ್ಥೆಯ ಬ್ಯಾಂಕಿನಲ್ಲಿ ಠೇವಣಿ ರೂಪದಲ್ಲಿಹಣ ಇಡುವ ಸಾರ್ವಜನಿಕರ ಪಾತ್ರ ಮಹತ್ವದ್ದು. ಮುಂದುವರೆದು, ಈ ತೀರ್ಮಾನದ ಮೂಲಕ ಕೇಂದ್ರ ಸರ್ಕಾರ ಬ್ಯಾಂಕಿಂಗ್ ವಲಯದ ಜವಾಬ್ದಾರಿಯಿಂದ ಹೊರಬರುವ ಆಲೋಚನೆಯಲ್ಲಿದ್ದರೆ, ಈಗಿರುವ ರಾಷ್ಟ್ರೀಕೃತ ಬ್ಯಾಂಕುಗಳನ್ನು ನಿಧಾನವಾಗಿ ಖಾಸಗೀಕರಿಸುವ ಉದ್ದೇಶವನ್ನೂ ಅದು ಹೊಂದಿದೆ ಎಂದೇ ಅರ್ಥ.

ಪರಿಣಾಮಗಳು

ಮೊದಲನೆಯದಾಗಿ, ಹಾಲಿ ವ್ಯವಹಾರ ಮತ್ತು ವಾಣಿಜ್ಯಗಳಲ್ಲಿ ತೊಡಗಿರುವ ಬೃಹತ್ ಖಾಸಗಿ ಕಂಪನಿಗಳು ತಮ್ಮವೇ ಆದ ಬ್ಯಾಂಕುಗಳನ್ನು ಸ್ಥಾಪಿಸಿಕೊಳ್ಳುತ್ತವೆ ಎಂದಿಟ್ಟುಕೊಳ್ಳೋಣ. ಆಗ ಅವು ನೀಡುವ ಸಾಲದ ಆದ್ಯತೆ ಆ ಸಂಸ್ಥೆಗಳ ವ್ಯವಹಾರ ವಹಿವಾಟುಗಳಿಗೆ ಇರುತ್ತದೆಯೇ ಹೊರತು ಸರ್ಕಾರದ
ಆದ್ಯತೆಗಳಿಗನುಗುಣವಾಗಿರುವುದಿಲ್ಲ. ಯಾವುದೇ ಕಂಪನಿ ತಾನು ಹುಟ್ಟು ಹಾಕಿದ ಬ್ಯಾಂಕು ತನಗೇ ನೀಡಿದ ಸಾಲವನ್ನು ತಾನೊಂದು ವೇಳೆ ಮರುಪಾವತಿಸಲು ವಿಫಲವಾದಲ್ಲಿ, ಆ ಕಂಪನಿಯಾದರೂ ಮುಚ್ಚಬಹುದು ಇಲ್ಲಾ ಬ್ಯಾಂಕಾದರೂ ಮುಚ್ಚಬಹುದು. ಅಥವಾ ಎರಡೂ ಏಕಕಾಲಕ್ಕೆ ಮುಚ್ಚಬಹುದು. ಇವುಗಳಲ್ಲಿ ಯಾವುದೊಂದಾದರೂ ಸರಿ, ಅಂತಿಮವಾಗಿ ದುರಂತಕ್ಕೆ ಒಳಗಾಗುವವರು ಠೇವಣಿದಾರ ಸಾರ್ವಜನಿಕರು ಮಾತ್ರ.

PC : StarsUnfolded (ಹರ್ಷದ್ ಮೆಹ್ತಾ)

ಆರಂಭದಲ್ಲಿ ಠೇವಣಿಗಳನ್ನು ಆಕರ್ಷಿಸಲು ಪ್ರಾಯೋಜಿತ ಕಂಪನಿ ಮತ್ತು ಬ್ಯಾಂಕುಗಳೆರಡೂ ವರ್ಣರಂಜಿತ ಚಿತ್ರಣವನ್ನು ಮುಂದಿಡಬಹುದು. ಇಂಥ ಆಕರ್ಷಣೆಗಳಿಗೆ ಬರೀ ಸಾರ್ವಜನಿಕರಷ್ಟೇ ಏಕೆ ಸರ್ಕಾರಗಳೂ ಕೂಡ ಮರುಳಾಗಿ ತಮ್ಮ ಹಣವನ್ನು ಆ ಬ್ಯಾಂಕುಗಳಲ್ಲಿಡಬಹುದು. ತೊಂಬತ್ತರ ದಶಕದ ಹರ್ಷದ್ ಮೆಹ್ತಾ ಪ್ರಕರಣದಲ್ಲಿ ಕಂಡಂತೆ ಭಾರತೀಯ ಎಣ್ಣೆ ನಿಗಮ ಹೂಡಿದ ಸಾವಿರಾರು ಕೋಟಿ ರೂಪಾಯಿಗಳ ಮೊತ್ತ ಮರಳಲ್ಲಿ ಎಣ್ಣೆ ಬೆರೆಸಿದಂತಾಯಿತು. ಅದಕ್ಕೆ ಕಾರಣ ಅಧಿಕ ಬಡ್ಡಿಯ ಮತ್ತು ಕೊಳ್ಳುವ ಷೇರುಗಳ ಮಾರುಕಟ್ಟೆ ಬೆಲೆಯಲ್ಲಿನ ಏರಿಕೆಯ ನಿರೀಕ್ಷೆ. ಇದರಿಂದಾಗಿ ಮಹಾರಾಷ್ಟ್ರದ ಕರಡ್ ಬ್ಯಾಂಕ್ ಮುಚ್ಚಿ ಹೋಯಿತು. ಸಾವಿರಾರು ಬೀಡಿ ಕಾರ್ಮಿಕರ ನೂರಾರು ಕೋಟಿ ಠೇವಣಿ ಮೊತ್ತ ಶೂನ್ಯವಾಯಿತು. ಇವರಿಗೆ ಪರಿಹಾರ ಸಿಕ್ಕ ಸಾಕ್ಷಿಗಳಿಲ್ಲ. ಹಾಗೆಯೇ ಅಲ್ಲಿನ ಮೆಟ್ರೋಪೊಲಿಟಿನ್ ಬ್ಯಾಂಕಿನ ಸ್ಥಿತಿ ಕೂಡ. ಸುಮಾರು 2.5 ಬಿಲಿಯನ್ ರೂಪಾಯಿಗಳಿಗಿಂತಲೂ ಹೆಚ್ಚಿನ ಮೊತ್ತದ ವಹಿವಾಟು ಕೇವಲ ಒಬ್ಬ ವ್ಯಕ್ತಿಯ ಚಾಲನೆಯಿಂದ ಆಗಿಹೋಯಿತು.

PC : Trade Brains (ಕೇತನ್ ಪರೇಕ್)

2000ನೆ ಇಸವಿಯ ಕೇತನ್ ಪರೇಕ್ ಪ್ರಕರಣ, ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ತೀರಾ ಇತ್ತೀಚಿನ ಬೆಸ್ಟ್ ಬ್ಯಾಂಕಿನ ಸ್ಥಿತಿ ಇವೆಲ್ಲವೂ ಕಣ್ಣಮುಂದಿದೆ. ಭಾರತೀಯ ರಿಸರ್ವ್ ಬ್ಯಾಂಕು ಕೇಂದ್ರ ಸರ್ಕಾರದ ಆಣತಿಯ ಮೇರೆಗೆ ಬೆಸ್ಟ್ ಬ್ಯಾಂಕನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಶಕ್ಕೆ ಕೊಡುವ ಮೂಲಕ ಠೇವಣಿದಾರರಿಗೆ ಒಂದಷ್ಟು ಭದ್ರತೆ ಒದಗಿಸಿದೆ. ಅದೇ ರೀತಿ ಲಕ್ಷ್ಮಿ ವಿಲಾಸ ಬ್ಯಾಂಕಿನ ಗತಿ ಕೂಡ. ಇದರಿಂದ ನಷ್ಟ ಯಾರಿಗೆ ಎಂದರೆ, ಪಾಪರ್ ಆಗುವ ಬ್ಯಾಂಕುಗಳನ್ನು ವಶಕ್ಕೆ ಪಡೆಯುವ ಮೂಲಕ ಅವುಗಳ ದುಃಸ್ಥಿತಿಯನ್ನು ಮೈಮೇಲೆ ಎಳೆದುಕೊಳ್ಳುವ ಬ್ಯಾಂಕುಗಳಿಗೆ. ಈ ಕ್ರಮಗಳು ಹೀಗೆಯೇ ಮುಂದುವರಿದರೆ, ಮುಂದೊಂದು ದಿನ ಭಾರತೀಯ ಸ್ಟೇಟ್ ಬ್ಯಾಂಕು ಏನಾಗಬಹುದೆಂಬುದಕ್ಕೆ ಎಪ್ಪತ್ತರ ದಶಕದ ಕೊನೆಯ ವರ್ಷಗಳಲ್ಲಿ ಆರಂಭಗೊಂಡ ಎನ್.ಟಿ.ಸಿಯ (ಭಾರತೀಯ ಬಟ್ಟೆ ನಿಗಮ) ಉದಾಹರಣೆ ನಮ್ಮ ಕಣ್ಣ ಮುಂದಿದೆ. ರೋಗಗ್ರಸ್ತ ಘಟಕಗಳನ್ನು ಪುನರುಜ್ಜೀವನಗೊಳಿಸಲು ಹುಟ್ಟು ಹಾಕಿದ ಎನ್.ಟಿ.ಸಿ., ಎಲ್ಲರ ರೋಗಗಳನ್ನು ತಾನು ಅಂಟಿಸಿಕೊಂಡು ರೋಗಗ್ರಸ್ತವಾಗಿ ನೆಲ ಕಚ್ಚಿದ ಸ್ಥಿತಿ ಬಾಂಕ್ ವಲಯದಲ್ಲಿ ಪುನರಾವರ್ತನೆಯಾದರೆ ಆಶ್ಚರ್ಯಪಡಬೇಕಿಲ್ಲ. ಸರಿಯಾದ ಸುರಕ್ಷಾ ಕ್ರಮಗಳ ಎಚ್ಚರಿಕೆ ಇಲ್ಲದೆ ಮುಳುಗುವವನನ್ನು ಉಳಿಸಲು ಮುಂದಾಗಿ ತಾನೇ ಮುಳುಗುವ ಸ್ಥಿತಿ.

ಇಡೀ ಬ್ಯಾಂಕಿಂಗ್ ಉದ್ಯಮ ನಿಂತಿರುವುದು ಠೇವಣಿದಾರರ ನಂಬಿಕೆಯ ಮೇಲೆ. ಠೇವಣಿದಾರರಿಗಾದರೂ ತಮ್ಮ ಠೇವಣಿಯ ಮೇಲೆ ಅವರು ಪಡೆಯುವ ಬಡ್ಡಿ ದರಕ್ಕಿಂತ ಠೇವಣಿಯ ಸುರಕ್ಷತೆಯೇ ಮೊದಲ ಆದ್ಯತೆ. ಈಗ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಠೇವಣಿಗಳ ಮೇಲೆ ನೀಡುವ ವಿಮಾ ರೂಪದ ಸುರಕ್ಷತಾ ಮೊತ್ತವನ್ನು ಕಳೆದ ಮುಂಗಡ ಪತ್ರದಲ್ಲಿ ವಿತ್ತ ಮಂತ್ರಿಗಳು ರೂ. ಒಂದು ಲಕ್ಷವಿದ್ದದ್ದನ್ನು 5 ಲಕ್ಷಕ್ಕೆ ಏರಿಸಿದ್ದಾರೆ. ಉಳಿದಂತೆ ಠೇವಣಿದಾರರಿಗೆ ಯಾವುದೇ ಭದ್ರತೆ ಇಲ್ಲ. ಈ ಭದ್ರತೆ ಸಿಗಬೇಕೆಂದರೆ ಈ ಕೂಡಲೆ ಕೇಂದ್ರ ಸರ್ಕಾರ ಠೇವಣಿದಾರರು ಇಟ್ಟ ಪೂರ್ಣ ಮೊತ್ತಕ್ಕೆ ಭದ್ರತೆ ನೀಡುವ ಕಾನೂನು ರೂಪಿಸಬೇಕು. ಜೊತೆಗೆ ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ವ್ಯವಹರಿಸುವಾಗ ಬ್ಯಾಂಕಿನ ಯಾವುದೇ ಗ್ರಾಹಕರಿಗೆ ನಷ್ಟವಾದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಆ ಬ್ಯಾಂಕೇ ವಹಿಸಿಕೊಳ್ಳುವಂತಹ ಕಾನೂನನ್ನು ರಚಿಸಬೇಕು. ಇಂಥ ಸುರಕ್ಷತಾ ಕವಚವಿಲ್ಲದೆ ಖಾಸಗಿ ಬ್ಯಾಂಕುಗಳನ್ನು ಮುಕ್ತವಾಗಿ ಬಿಡುವುದೆಂದರೆ ಅದು ಗ್ರಾಹಕರನ್ನು, ಅದರಲ್ಲೂ ನಿರ್ದಿಷ್ಠವಾಗಿ ಠೇವಣಿದಾರರನ್ನು ದುಃಸ್ಥಿತಿಗೆ ತಳ್ಳಿದಂತೆ.

ಎರಡನೆಯದಾಗಿ, ಕಾರ್ಪೊರೆಟ್ ಬ್ಯಾಂಕುಗಳು ಸಣ್ಣಪುಟ್ಟ ತುಂಡು ಭೂಮಿಯ ರೈತರುಗಳಿಗೆ ಸಾಲಸೌಲಭ್ಯ ನೀಡಲು ಮುಂದಾಗುವುದು ಕಡಿಮೆ. ಬದಲಾದ ಸಂದರ್ಭದಲ್ಲಿ ಅಂದರೆ, ಇವತ್ತಿನ ಭೂಸುಧಾರಣಾ ಕಾಯಿದೆಗೆ ತಂದಿರುವ ತಿದ್ದುಪಡಿಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ಕಾರ್ಪೊರೆಟ್ ಸಂಸ್ಥೆಗಳು ಕೃಷಿ ಭೂಮಿಯನ್ನು ಹೊಂದಲು ಪರವಾನಗಿ ಸಿಕ್ಕ ಮೇಲೆ, ರೈತರುಗಳ ಕೃಷಿ ಭೂಮಿಯನ್ನು ಆಧಾರವಾಗಿಟ್ಟುಕೊಂಡು ಸಾಲ ಕೊಡಬಹುದು. ಮುಂದೆ ಆ ರೈತರುಗಳು ಸಾಲ ಮರುಪಾವತಿ ಮಾಡಲು ತಪ್ಪಿದರೆ ಅವರ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡು ಭೂ ಮಾಲಿಕತ್ವ ಪಡೆಯಬಹುದು. ಅಲ್ಲಿಗೆ, ಭಾರತೀಯ ರಿಸರ್ವ್ ಬ್ಯಾಂಕಿನ ಈ ತೀರ್ಮಾನದಿಂದಾಗಿ ಮುಂದೊಂದು ದಿನ ಕೃಷಿ ಭೂಮಿ ಕಾರ್ಪೊರೆಟ್ ವಲಯದ ಆಸ್ತಿಯಾಗಿ ಮಾರ್ಪಡಲು ದಾರಿಯಾಗುತ್ತದೆ.

ಒಟ್ಟಾರೆಯಾಗಿ ಯಾವ ಮಗ್ಗುಲಿನಿಂದ ನೋಡಿದರೂ ಪ್ರಸ್ತುತ ಸರ್ಕಾರದ ನೀತಿ ಎಲ್ಲ ಕ್ಷೇತ್ರಗಳಲ್ಲಿ ಕಾರ್ಪೊರೆಟ್ ವಲಯಕ್ಕೆ ಕೆಂಪು ಹಾಸು ಹಾಸುವ ದಿಕ್ಕಿನಲ್ಲೇ ದಾಪುಗಾಲಿಡುತ್ತಿರುವುದು ಖಚಿತವಾಗುತ್ತಿದೆ. ಎಲ್ಲಿಯವರೆವಿಗೆ ಬೃಹತ್ ಕಾರ್ಪೊರೇಟ್ ಸಂಸ್ಥೆಗಳು ಬೃಹತ್ತಾಗಿ ಆರ್ಥಿಕ ಚಟುವಟಿಕೆಗಳಾದ ಉತ್ಪಾದನೆ ಮತ್ತು ವಿತರಣೆಯಲ್ಲಿ ನಿರತವಾಗಿರುತ್ತವೆಯೋ, ಅಲ್ಲಿಯವರೆವಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಕೇಂದ್ರೀಕೃತ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಭಾರತೀಯ ಸಂವಿಧಾನದ ರಾಜ್ಯ ನಿರ್ದೇಶಿತ ತತ್ತ್ವಗಳಲ್ಲಿ ಒಂದಾದ ಕೆಲವೇ ವ್ಯಕ್ತಿಗಳ ಕೈಯಲ್ಲಿ ಆರ್ಥಿಕ ಸಂಪತ್ತು ಕೇಂದ್ರೀಕರಣವಾಗುವುದನ್ನು ತಡೆಯಬೇಕೆನ್ನುವ ಉದ್ದೇಶ ಈಡೇರುವುದಿಲ್ಲ. ಬ್ರಿಟಿಷರ ಕಂಪನಿ ಆಡಳಿತದಿಂದ ಮುಕ್ತವಾದ ಭಾರತ ಮುಂದಿನ ದಿನಗಳಲ್ಲಿ ಈಸ್ಟ್ ಇಂಡಿಯಾ ಕಂಪನಿಯಂತಹ ಕಂಪನಿ ಪ್ರಭಾವ ವಲಯದಲ್ಲಿ ಸರ್ಕಾರಗಳು ಆಡಳಿತ ನಡೆಸುವ ಸ್ಥಿತಿ ಬರಬಹುದು.

ಸುಮ್ಮನೆ ಇತಿಹಾಸದ ಒಂದು ಘಟಟನೆಯನ್ನು ನೆನೆಯುವುದಾದರೆ, ಭಾರತದಲ್ಲಿ ವಿ.ಪಿ. ಸಿಂಗ್ ಅವರು ಪ್ರಧಾನಿಯಾದ ಸಂದರ್ಭದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳನ್ನು ಸಂವಿಧಾನ ಆಶಯದ ಚುನಾವಣೆ ಎನ್ನುವುದಕ್ಕಿಂತ ಬಾಂಬೆ ಡೈಯಿಂಗ್ ಕಂಪನಿಯ ಭರತ್ ರಾಂ ಮತ್ತು ರಿಲಯೆನ್ಸ್ ಕಂಪನಿಯ ಧೀರೂ ಭಾಯಿ ಅಂಬಾನಿ ಅವರುಗಳ ನಡುವಿನ ಕಾರ್ಪೊರೆಟ್ ವಾರ್ ಎಂದೇ ಕರೆಯಲಾಗಿತ್ತು. ಇಂಥ ವಾರ್‌ಗಳ ನಡುವೆ ಅದಾವ ಗ್ರಾಮ ಸ್ವರಾಜ್ಯ ಸಾಧ್ಯವಾದೀತು? ಎಸ್.ವಿ. ಪರಮೇಶ್ವರ ಭಟ್ಟರ ಪದ್ಯದ ಸಾಲೊಂದು ನೆನಪಾಗುತ್ತದೆ. “ಮದ್ದಾನೆ ಮದ್ದಾನೆ ಗುದ್ದಾಡಿಕೊಳ್ಳುವಾಗ ಎದ್ದೋಡಿ ಗುಬ್ಬಿ ಬೇಡೆಂದು ಹೇಳುವುದು ಸರಿಯೇನೇ ಸರಸೀಯೆ”, ಎನ್ನುವಂತೆ ದೇಶದ ಪ್ರಧಾನಮಂತ್ರ್ರಿಗಳನ್ನು ಆಯ್ಕೆ ಮಾಡುವಲ್ಲಿ ಪ್ರಭಾವ ಬೀರುವಷ್ಟು ಸಬಲವಾದ ಕಂಪನಿಗಳ ಸಂಘರ್ಷದ ನಡುವೆ ಸುಸ್ಥಿರ ಅಭಿವೃದ್ಧಿಯ ಪರವಾದ ಯರಾದರೂ ಸಣ್ಣ ಪುಟ್ಟ ಜನ ಬುದ್ಧಿ ಹೇಳಲು ಸಾಧ್ಯವೆ? ಈ ಎಲ್ಲ ಕಾರಣಗಳಿಗಾಗಿ ಕಾರ್ಪೊರೆಟ್ ವಲಯಕ್ಕೆ ಬ್ಯಾಂಕಿಂಗ್ ಕ್ಷೇತ್ರವನ್ನು ಬಿಟ್ಟುಕೊಡುವುದು ಸೂಕ್ತವಲ್ಲ ಎನ್ನುವುದು ಚಿಂತಕರ ಅಭಿಪ್ರಾಯ.

ಕೊನೆಯದಾಗಿ, ನಮ್ಮ ಬೆಂಗಳೂರಿನಲ್ಲಿಯೇ ಆಗಿರುವ ಪ್ರಕರಣಗಳನ್ನು ನೋಡಿದರೆ ಐ.ಎಮ್.ಎ ಅಂತಹ ಸಂಸ್ಥೆಗಳಲ್ಲಿ, ಬಡವರಿಂದ ಶ್ರೀಮಂತರವರೆಗೆ ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ಅಧಿಕ ಬಡ್ಡಿಯ ಆಸೆಗೆ ಠೇವಣಿ ಇಟ್ಟು ದುಃಸ್ಥಿತಿ ತಂದು ಕೊಳ್ಳಲು ಕಾರಣರಾದವರಲ್ಲಿ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಯಾದರೂ, ಸರ್ಕಾರದ ಹೊಣೆಗಾರಿಕೆ ಇಲ್ಲವೆ? ಇಂಥ ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು, ಸಹಕಾರಿ ವಲಯದ ಕೆಲವೊಂದು ಪತ್ತಿನ ಸಂಸ್ಥೆಗಳನ್ನು, ಹರ್ಷದ್ ಮೆಹ್ತಾನಂಥವರಿಂದ ವಂಚನೆಗೆ ಒಳಗಾದ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಅಂತಿಮವಾಗಿ ಸರ್ಕಾರಗಳದ್ದೇ ಆಗಿರುತ್ತದೆ. ಸದ್ಯಕ್ಕೆ, ಈ ದೇಶದ ಕನಿಷ್ಠ ಮೊತ್ತದ ಠೇವಣಿ ಇಡುವ ಶಕ್ತಿ ಇರುವ ಎಲ್ಲ ವರ್ಗದ ಗ್ರಾಹಕರ ಸಂಪೂರ್ಣ ಠೇವಣಿ ಮೊತ್ತಕ್ಕೆ ಪೂರ್ಣ ರಕ್ಷಣೆ ನೀಡುವ ಕಾನೂನುಗಳು ಜಾರಿಯಾಗುವವರೆಗೆ ಈಗಿರುವ ಬ್ಯಾಂಕಿಂಗ್ ವ್ಯವಸ್ಥೆ ಮುಂದುವರೆಸುವುದಷ್ಟೇ ಅಲ್ಲ, ಎಲ್ಲ ವರ್ಗದ ಠೇವಣಿದಾರರಿಗೆ ನಷ್ಟವಾಗದಂತೆ ಕ್ರಮಕೈಗೊಳ್ಳಬೇಕಾಗಿದೆ.

ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ

ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಮಲ್ಲಿಕಾರ್ಜುನಪ್ಪನವರು, ಆರ್ಥಿಕ ವಿದ್ಯಮಾನಗಳ ಬಗ್ಗೆ ಮಹತ್ವದ ಲೇಖನಗಳನ್ನು ಬರೆದಿದ್ದಾರೆ.ಚಿತ್ರದುರ್ಗದ ಎಸ್‌ಜೆಎಂ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯಕಾರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: 189 ದೇಶಗಳಲ್ಲಿ 131ನೇ ಸ್ಥಾನ: ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಮತ್ತೆರೆಡು ಸ್ಥಾನ ಕುಸಿದ ಭಾರತ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...