ಎಲ್ಲ ಸಂದರ್ಭಗಳನ್ನೂ ತನ್ನ ಹಿತಾಸಕ್ತಿಗೆ ಬಳಸಿಕೊಳ್ಳುವ ಅರೆ-ಸರ್ವಾಧಿಕಾರಿ ’ಡೆಮಾಕ್ರಸಿ’ಯನ್ನು ಕೊರೊನಾ ವೈರಸ್ ಬಯಲು ಮಾಡಿತ್ತು. ಈಗ ಸಾಂಕ್ರಾಮಿಕವನ್ನು ನಿವಾರಿಸುವ ಲಸಿಕೆಯನ್ನೂ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆಯೇ?
ಭಾರತದಲ್ಲಿ ಕೊರೊನಾ ಶಮನಕ್ಕೆ ನಾಲ್ಕು ಲಸಿಕೆ ಸಿದ್ಧವಾಗಿವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಕಳೆದ ಐದಾರು ದಿನದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆಗಾಗ ಲಸಿಕೆಯ ಪ್ರಸ್ತಾಪ ಮಾಡುವುದು, ಟಿವಿ ಮಾಧ್ಯಮಗಳು ಮೋದಿನೇ ಲಸಿಕೆ ಕಂಡು ಹಿಡಿದರು ಎಂಬಂತೆ ಸ್ಟೋರಿ ಮಾಡುವುದು ನಡೆದೇ ಇದೆ.
ಆಕ್ಸ್ಫರ್ಡ್-ಅಸ್ಟ್ರಾಜೆನಿಕಾ ಲಸಿಕೆ, ಫಿಜರ್ ಲಸಿಕೆ-ಯಾವುದೇ ಇರಲಿ, ಅದು ಪಾಕಿಸ್ತಾನ, ನೈಜಿರಿಯಾ ಸೇರಿದಂತೆ ಎಲ್ಲ ದೇಶಗಳಿಗೂ ಲಭ್ಯವಾಗಲಿದೆ. ಭಾರತವೂ ಸೇರಿ ಕಡಿಮೆ ಆದಾಯದ ದೇಶಗಳ ಜನರಿಗೆ ಸುಲಭವಾಗಿ ಲಸಿಕೆ ಸಿಗುವಂತೆ ಮಾಡಲು ಬಿಲ್ ಗೇಟ್ಸ್ ಫೌಂಡೇಶನ್ನಂತಹ ಹಲವಾರು ಎನ್ಜಿಒಗಳು ಈಗಾಗಲೇ ಸಕಲ ವ್ಯವಸ್ಥೆ ಮಾಡಿವೆ.
ಆದರೆ, ಭಾರತದಲ್ಲಿ ಮಾತ್ರ, ಒಂದು ಗುಂಪು ಲಸಿಕೆಯ ವಿಷಯದಲ್ಲೂ ರಾಜಕೀಯ ಲಾಭ ಮಾಡಿಕೊಳ್ಳಲು ಹವಣಿಸುತ್ತಿದೆ ಎಂಬ ಅನುಮಾನ ಮೂಡತೊಡಗಿದೆ.
ಇದನ್ನೂ ಓದಿ: ಸಾವಿತ್ರಿ ಬಾಯಿ ಫುಲೆ ಸ್ಥಾಪಿಸಿದ ಮೊಟ್ಟಮೊದಲ ಹೆಣ್ಣು ಮಕ್ಕಳ ಶಾಲೆಯ ಸ್ಥಿತಿ ಹೇಗಿದೆ ಗೊತ್ತಾ?
ಲಭ್ಯವಾಗಲಿರುವ (ಲಭ್ಯ ಆಗಬಹುದಾದ!) ನಾಲ್ಕು ಲಸಿಕೆಗಳ ಪೈಕಿ ಒಂದು ’ದೇಸಿ’ ಲಸಿಕೆಯಿದೆ. ಅದು ’ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್’ (ಐಸಿಎಂಆರ್) ಸಹಯೋಗದಲ್ಲಿ ಹೈದರಾಬಾದಿನ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಎಂಬ ಲಸಿಕೆ.
ಶನಿವಾರ ಈ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಮೂರನೇ ಹಂತದ ಟ್ರಯಲ್ಗಳನ್ನು ಪೂರ್ಣಗೊಳಿಸದೇ ಇದ್ದರೂ, ಕೆಲವು ಕಂಡಿಷನ್ಗಳ ಮೇಲೆ ಈ ಲಸಿಕೆಯ ಬಳಕೆಗೆ ಅನುಮತಿ ನೀಡಲಾಗಿದೆ. ಸಂಪೂರ್ಣ ಸಿದ್ಧವಾದ ಮೂರು ಲಸಿಕೆ ಇರುವಾಗ, ಸದಾ ವಿವಾದಾತ್ಮಕವಾಗಿಯೇ ತನ್ನ ಪ್ರಕ್ರಿಯೆ ನಡೆಸಿರುವ ಈ ಕೊವಾಕ್ಸಿನ್ ಎಂಬ ದೇಸಿ ತಳಿಯ ಅಗತ್ಯವಾದರೂ ಏನಿತ್ತು ಎಂಬ ಸಂಶಯ ಕಾಡುತ್ತದೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಮಸೂದೆ: ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ರಾಜ್ಯ ಸರ್ಕಾರ
2020 ರ ನವಂಬರ್ 9 ರಂದು ಕೊವಾಕ್ಸಿನ್ ಮೂರನೇ ಹಂತವು, ’ಕ್ಲಿನಿಕಲ್ ಟ್ರಯಲ್ ರಿಜಿಸ್ಟ್ರಿ ಆಫ್ ಇಂಡಿಯಾ’ದಲ್ಲಿ ನೋಂದಣಿಯಾಗಿತ್ತು. 25,800 ಸ್ವಯಂಸೇವಕರ ಮೇಲೆ ಪ್ಲಾಸೆಬೊ ಆಧರಿತ ವಿವಿಧ ಪ್ರಯೋಗ ನಡೆಸಬೇಕಿತ್ತು. ಈ ಪ್ರಕ್ರಿಯೆಗೆ ಸ್ವಯಂಸೇವಕರ ಸೇರ್ಪಡೆ (ರಿಕ್ರೂಟ್ಮೆಂಟ್) ಶುರುವಾಗಿದ್ದೇ 2020ರ ನವಂಬರ್ 16 ರಂದು. ತನಗೆ ಸ್ವಯಂಸೇವಕರ ಕೊರತೆಯಿದೆ ಎಂದು ಭಾರತ್ ಬಯೋಟೆಕ್ ಒಪ್ಪಿಕೊಂಡ ಕೆಲವೇ ವಾರಗಳಲ್ಲಿ ಇದೀಗ ದೇಶದ ಔಷಧ ನಿಯಂತ್ರಣ ಮಂಡಳಿ ರಚಿಸಿದ ವಿಷಯವಾರು ತಜ್ಞ ಸಮಿತಿ ಕೊವಾಕ್ಷಿನ್ ತುರ್ತು ಬಳಕೆಗೆ ಅವಕಾಶ ನೀಡಿಬಿಟ್ಟಿದೆ!
ಬಾಕ್ಸ್ ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ನೀಡಬೇಕಾದ್ದು ಸರ್ಕಾರದ ಕರ್ತವ್ಯ. ಇದಕ್ಕೇನೂ ಪಿಎಂ-ಕೇರ್ಸ್ ಹೆಸರಲ್ಲಿ ಗುಡ್ಡೆ ಹಾಕಿದ ಹಣ ನೀಡುವುದೂ ಬೇಡ. ಆರೋಗ್ಯ ಇಲಾಖೆಯ ಬಜೆಟ್, ವಿಪತ್ತು ನಿರ್ವಹಣಾ ನಿಧಿ ಬಳಸಿಕೊಂಡರೆ ಸಾಕು. ಆದರೆ, 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಉಚಿತ ಲಸಿಕೆ ಎಂದು ಸರ್ಕಾರ ಹೇಳಿದೊಡನೆ, ಉಳಿದವರು ರೊಕ್ಕ ಕೊಡಬೇಕು ಎಂದಾಗುತ್ತದೆ. ನಂತರದಲ್ಲಿ ಎಲ್ಲರಿಗೂ ಉಚಿತ ಎಂದು ಹೇಳುವ ಮೂಲಕ ತಾವೇನೋ ಮಹಾನ್ ಸಾಧನೆ ಮಾಡುತ್ತಿದ್ದೇವೆ ಎಂಬಂತೆ ಪೋಸ್ ಕೊಡಲಾಗುತ್ತಿದೆ.
ಏನೇ ಇರಲಿ, ಪ್ರಧಾನಮಂತ್ರಿ, ಗೃಹ ಮಂತ್ರಿ, ಆರೋಗ್ಯ ಮಂತ್ರಿ ಮತ್ತು ಇತರೆಲ್ಲ ಕೇಂದ್ರ ಸಚಿವರು ಕೊವಾಕ್ಸಿನ್ ಲಸಿಕೆ ಹಾಕಿಸಿಕೊಳ್ಳಲೇಬೇಕು. ಆ ಮೂಲಕ ದೇಸಿ ಲಸಿಕೆಗೆ ಗೌರವ ತೋರಬೇಕು ಅಲ್ಲವಾ?
ಇದನ್ನೂ ಓದಿ: ರೈತರ ಪ್ರತಿಭಟನೆ ಕುರಿತು ಅವಹೇಳನ: ಮೂವರು ಬಿಜೆಪಿ ನಾಯಕರಿಗೆ ಲೀಗಲ್ ನೋಟಿಸ್
ಐಸಿಎಂಆರ್ ಭಾರತ್ ಬಯೋಟೆಕ್ಗೆ ಸಹಯೋಗ ನೀಡಿದೆ. ಹೀಗಾಗಿ ಕೊವಾಕ್ಸಿನ್ ವಿವಾದ ಶುರುವಾಗುವುದೇ ಐಸಿಎಂಆರ್ನಿಂದ. ಐಸಿಎಂಆರ್ ಮುಖ್ಯಸ್ಥ ಡಾ.ಬಲರಾಮ್ ಭಾರ್ಗವ್ ಜುಲೈ 2 ರಂದು ಕೊವಾಕ್ಸಿನ್ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಗಳಿಗೆ ಒಂದು ಪತ್ರ ಬರೆದಿದ್ದರು. ಅಗಸ್ಟ್ 15 ರೊಳಗೆ ಲಸಿಕೆ ಸಿದ್ಧವಾಗಬೇಕು ಎಂದು ಆದೇಶಿಸಿದ್ದರು. ಆಗಿನ್ನೂ ಕೊವಾಕ್ಸಿನ್ ಮೊದಲ ಹಂತದ ಟ್ರಯಲ್ ಕೂಡ ಆರಂಭಿಸಿರಲಿಲ್ಲ. ಇದು ಟೀಕೆಗೆ ಒಳಗಾದ ನಂತರ ಡಾ. ಬಲರಾಮ್, ’ಹಾಗಲ್ಲ, ಕೆಲಸ ಬೇಗ ಬೇಗ ನಡೆಯಲಿ ಎಂಬ ಕಾರಣಕ್ಕೆ ಆ ಪತ್ರ ಬರೆದಿದ್ದು’ ಎಂದು ಲೋಕಲ್ ಪುಢಾರಿಯ ಧಾಟಿಯಲ್ಲಿ ಸಮಜಾಯಿಷಿ ನೀಡಿದ್ದರು! ಹೇಗಾದರೂ ಮಾಡಿ ಅಗಸ್ಟ್ 15 ರಂದು ಕೆಂಪುಕೋಟೆಯ ಮೇಲೆಯೇ ಲಸಿಕೆ ಬಿಡುಗಡೆ ಮಾಡಬೇಕು ಎಂದು ಅಂದುಕೊಂಡಿದ್ದರೇನೋ?
ಕೊವಾಕ್ಸಿನ್ 3 ನೆ ಮತ್ತು ಕೊನೆ ಹಂತದ ಟ್ರಯಲ್ನಲ್ಲಿ ಡಿಸೆಂಬರ್ 28 ರೊಳಗೆ ದೇಶದ ವಿವಿಧ ಭಾಗಗಳಲ್ಲಿ 26,000 ಸ್ವಯಂಸೇವಕರ ಮೇಲೆ ಪ್ರಯೋಗ ನಡೆಯಬೇಕಿತ್ತು. ಆದರೆ ದಾಖಲೆಗಳ ಪ್ರಕಾರ, ಭಾರತ್ ಬಯೋಟೆಕ್ ಕಂಪನಿಯು ಡಿಸೆಂಬರ್ 22 ರವರೆಗೆ ಕೇವಲ 13,000 ಸ್ವಯಂಸೇವಕರನ್ನು ನೋಂದಣಿ ಮಾಡಿಕೊಳ್ಳಲು ಶಕ್ತವಾಗಿತ್ತಷ್ಟೇ!
ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಬಿರುಕು: ಯತ್ನಾಳ್ ವಿರುದ್ಧ ರಾಷ್ಟ್ರ ನಾಯಕರಿಗೆ ದೂರು ನೀಡಿದ ಸಿಎಂ ಬೆಂಬಲಿಗರು!
ಮೂರನೇ ಹಂತದ ಟ್ರಯಲ್ ಅಪೂರ್ಣವಾಗಿದ್ದರೂ, ವಿಷಯವಾರು ತಜ್ಞ ಸಮಿತಿಯು ಕೊವಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡಿದ್ದನ್ನು ಐಸಿಎಂಆರ್ ಮುಖ್ಯಸ್ಥ ಡಾ.ಬಲರಾಮ್ ಸಮರ್ಥಿಸಿಕೊಳ್ಳುತ್ತಿದ್ದಾರೆ. ’ಲಸಿಕೆಯ ವಿಷಯದಲ್ಲಿ ಉಪಯೋಗ ಮತ್ತು ರಿಸ್ಕ್ ಎರಡೂ ಇರುತ್ತವೆ. ರಿಸ್ಕ್ಗಿಂತ ಉಪಯೋಗವೇ ಹೆಚ್ಚಿದೆ ಎಂದು ಅನಿಸಿದ ಕಾರಣಕ್ಕೆ ಔಷಧ ನಿಯಂತ್ರಕ ಮಂಡಳಿ ನೇಮಿಸಿದ ತಜ್ಞರ ಸಮಿತಿಯು ತುರ್ತು ಬಳಕೆಗೆ ಅವಕಾಶ ನೀಡಿದೆ. ಈ ತುರ್ತು ಕಾಲದಲ್ಲಿ ಇದು ಸರಿಯಾದ ತೀರ್ಮಾನವೇ ಆಗಿದೆ’ ಎಂದು ಕೊವಾಕ್ಸಿನ್ ಅನ್ನು ಬೆಂಬಲಿಸಿದ್ದಾರೆ.
ನೆನಪಿರಲಿ, ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಸಹಯೋಗದಲ್ಲಿ ಈ ಕೊವಾಕ್ಸಿನ್ ಲಸಿಕೆ ತಯಾರಾಗಿದೆ. ಇದು ಈಗ ಏಕೈಕ ಸಂಪೂರ್ಣ ’ದೇಸಿ’ ಲಸಿಕೆ! ಆತ್ಮನಿರ್ಭರ ಅಂತಾ ಅದೇನೋ ಹೇಳ್ತಾರಲ್ಲ, ಅಂತಹದ್ದು ಇದು!
ಇದನ್ನೂ ಓದಿ: ಬಿಜೆಪಿ ಮೇಲೆ ನಂಬಿಕೆಯಿಲ್ಲ, ಕೊರೊನಾ ಲಸಿಕೆ ತೆಗೆದುಕೊಳ್ಳುವುದಿಲ್ಲ: ಅಖಿಲೇಶ್ ಯಾದವ್