ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿತ್ತಿರುವ ಪಂಜಾಬ್ ಮೂಲದ ರೈತರು, ಪ್ರತಿಭಟನೆ ಮತ್ತು ಪ್ರತಿಭಟನಾಕಾರರನ್ನು ಅವಹೇಳನ ಮಾಡಿದ ಆರೋಪದ ಮೇಲೆ ಮೂವರು ಬಿಜೆಪಿ ನಾಯಕರಿಗೆ ಲೀಗಲ್ ನೋಟಿಸ್ ಕಳಿಸಿದ್ದಾರೆ.
ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಮತ್ತು ಬಿಜೆಪಿ ನಾಯಕ ರಾಮ್ ಮಾಧವ್ ಅವರಿಗೆ ನೋಟಿಸ್ ಕಳಿಸಲಾಗಿದ್ದು, ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷದ ಸಹ-ಉಸ್ತುವಾರಿಯಾಗಿರುವ ರಾಘವ್ ಛಡ್ಡಾ, ರೈತರಿಗೆ ಅಗತ್ಯವಾದ ಎಲ್ಲ ಕಾನೂನು ನೆರವುಗಳನ್ನು ಒದಗಿಸುತ್ತೇವೆ ಎಂದಿದ್ದಾರೆ.
ಈ ಮೂವರು ಬಿಜೆಪಿ ನಾಯಕರು ಬೇಷರತ್ ಕ್ಷಮೆಯಾಚಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ ಎಂಬುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಹಲವಾರು ರಾಜಕೀಯ ನಾಯಕರು ದುರುದ್ದೇಶಪೂರ್ವಕವಾಗಿ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುವ ಮೂಲಕ ರೈತರ ಪ್ರತಿಭಟನೆಗೆ ಕಳಂಕ ತರಲು ಯತ್ನಿಸಿದ್ದಾರೆ ಎಂದು ನೋಟಿಸ್ನಲ್ಲಿ ಅಪಾದಿಸಲಾಗಿದೆ.
ಇದನ್ನೂ ಓದಿ: ರಫ್ತಿನಲ್ಲಿ ಶೇ.0.8 ಕುಸಿತ: 15.71 ಬಿಲಿಯನ್ ಡಾಲರ್ಗೇರಿದ ಭಾರತದ ವ್ಯಾಪಾರ ಕೊರತೆ
ಒಂದು ಕಡೆ ಪ್ರಧಾನಿ ಮೋದಿ ಮತ್ತು ಅವರ ಸಹಚರರು ರೈತರೊಂದಿಗೆ ಸಹಮತ ಸಾಧಿಸುವ ಮಾತನಾಡುತ್ತಿದ್ದರೆ, ಅವರದೇ ಗುಂಪಿನ ಹಲವರು, “ರೈತರನ್ನು ದಾರಿ ತಪ್ಪಿಸಲಾಗಿದೆ, ಪ್ರತ್ಯೇಕವಾದಿಗಳು ಮತ್ತು ದೇಶದ್ರೋಹಿಗಳು ರೈತರ ಹಿಂದಿದ್ದಾರೆ” ಎಂಬಂತಹ ಅಭಿಪ್ರಾಯ ಸೃಷ್ಟಿಸುವ ಯತ್ನ ಮಾಡಲಾಗಿದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಅಮೃತಸರ್ದ ರೈತ ಜಸ್ಕರಣ್ ಸಿಂಗ್ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರಿಗೆ ನೋಟಿಸ್ ಕಳಿಸಿದ್ದು, ಬೇಷರತ್ ಕ್ಷಮೆ ಯಾಚಿಸಲು ಆಗ್ರಹಿಸಿದ್ದಾರೆ. ಸಂದರ್ಶನವೊಂದರಲ್ಲಿ, “ವಿದೇಶಿ ಶಕ್ತಿಗಳು ಪ್ರತಿಭಟನೆಯಲ್ಲಿ ಸೇರಿವೆ. ಪ್ರತಿಭಟನೆಯಲ್ಲಿ ಖಲಿಸ್ತಾನ್ ಮತ್ತು ಶರ್ಜಿಜ್ ಇಮಾಮ್ ಪೋಸ್ಟರ್ಗಳನ್ನು ಅಂಟಿಸಲಾಗಿದೆ” ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದರು.
ಇದನ್ನೂ ಓದಿ: ಸುರಿವ ಮಳೆ – ಕೊರೆವ ಚಳಿಯಲ್ಲಿಯೂ ಪಟ್ಟು ಬಿಡದ ಪ್ರತಿಭಟನಾ ನಿರತ ರೈತರು!
ಜಲಂದರ್ನ ರೈತ ರಮ್ನೀಕ್ ಸಿಂಗ್ ರಂಧಾವಾ ಅವರು ಗುಜರಾತ್ ಡಿಸಿಎಂ ನಿತಿನ್ ಪಟೇಲ್ಗೆ ನೋಟಿಸ್ ಕಳಿಸಿದ್ದಾರೆ. “ರೈತರ ಹೆಸರಲ್ಲಿ ದೇಶದ್ರೋಹಿ ಶಕ್ತಿಗಳು, ಕಮ್ಯುನಿಸ್ಟರು, ಖಲಿಸ್ತಾನಿಗಳು ಮತ್ತು ಚೀನಾ ಪರ ಇರುವವರು ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದು, ದೇಶದ್ರೋಹಿಗಳು ಈ ಪ್ರತಿಭಟನೆಗೆ ಧನ ಸಹಾಯ ಮಾಡುತ್ತಿದ್ದಾರೆ” ಎಂದು ಗುಜರಾತ್ ಡಿಸಿಎಂ ನಿತಿನ್ ಪಟೇಲ್ ಹೇಳಿದ್ದರು. “ಪ್ರತಿಭಟನಾನಿರತ ರೈತರು ಪಿಜ್ಜಾ, ಪಕೋಡಾ ತಿನ್ನೋದನ್ನ ನೋಡಿದ್ದೇವೆ, ಅವೆಲ್ಲ ಅವರಿಗೆ ಉಚಿತವಾಗಿ ಬರುತ್ತಿವೆ” ಎಂದೂ ಪಟೇಲ್ ಹೇಳಿದ್ದರು.
ಸಂಗ್ರೂರ್ನ ಸುಖ್ವಿಂದರ್ ಸಿಂಗ್ ಸಿಧು, ಬಿಜೆಪಿ ರಾಷ್ಟ್ರ ನಾಯಕ ರಾಮ್ ಮಾಧವರಿಗೆ ನೋಟಿಸ್ ಕಳಿಸಿದ್ದಾರೆ. ಟ್ವೀಟ್ಗಳ ಮೂಲಕ ಮಾಧವ್ ರೈತ ಪ್ರತಿಭಟನೆಗೆ ಕಳಂಕ ಹಚ್ಚಲು ಯತ್ನಿಸಿದ್ದಾರೆ ಎಂದು ದೂರಲಾಗಿದೆ.
ಇದೇ ಸಂದರ್ಭದಲ್ಲಿ ಪಂಜಾಬ್ ಆಮ್ ಆದ್ಮಿ ಪಾರ್ಟಿಯ ಸಹ ಉಸ್ತುವಾರಿ ಆಗಿ ನೇಮಕವಾಗಿರುವ ದೆಹಲಿ ಶಾಸಕ ರಾಘವ್ ಛಡ್ಡಾ, ನೋಟಿಸ್ ಕಳಿಸಿದ ಈ ಮೂವರು ರೈತರಿಗೆ ಉಚಿತ ಕಾನೂನು ನೆರವು ಮತ್ತು ಸೇವೆಯನ್ನು ಒದಗಿಸಲಾಗುವುದು ಎಂದು ಶನಿವಾರ ಪ್ರಕಟಿಸಿದ್ದಾರೆ.
AAP vowed to extend legal aid to farmers who wish to take legal recourse against pre-meditated smear campaign by BJP to discredit Farmers Protest.
As promised, AAP helps farmers send Defamation notices to Union Minister Giriraj Singh, Gujarat Dy CM Nitin Patel & BJP's Ram Madhav. pic.twitter.com/RGw59h8wVK— Raghav Chadha (@raghav_chadha) January 2, 2021
ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಬಿರುಕು: ಯತ್ನಾಳ್ ವಿರುದ್ಧ ರಾಷ್ಟ್ರ ನಾಯಕರಿಗೆ ದೂರು ನೀಡಿದ ಸಿಎಂ ಬೆಂಬಲಿಗರು!