ರೈತ ಹೋರಾಟದ ಕುರಿತು ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಹಂಚಿಕೊಂಡಿದ್ದ ಟೂಲ್ಕಿಟ್ ಪ್ರಕರಣದಲ್ಲಿ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನ ಖಂಡಿಸಿ ಸೋಮವಾರ ಸಂಜೆ ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್ ಬಳಿಯಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ವಕೀಲರು, ರೈತ ಮುಖಂಡರು, ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಸಾಮಾಜಿಕ ಹೋರಾಟಗಾರರು ಭಾಗಿಯಾಗಿ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸಿದರು.
ಇದನ್ನೂ ಓದಿ: ಹಿಂಸೆಯ ಮಾತುಗಳನ್ನಾಡಿದ ಹರಿಯಾಣ ಗೃಹ ಸಚಿವರ ವಿರುದ್ಧ ಕ್ರಮ ಕೈಗೊಳ್ಳಿ: ಬೆಂಗಳೂರಿನಲ್ಲಿ ದೂರು ದಾಖಲು
ಪ್ರತಿಭಟನೆಯಲ್ಲಿ ಮಾತನಾಡಿದ ವಕೀಲ ವಿನಯ್ ಶ್ರೀನಿವಾಸ್, “ದಿಶಾ ಬಂಧನ ಕ್ರಮವೇ ಕಾನೂನು ಬಾಹಿರವಾಗಿದ್ದು, ಕರ್ನಾಟಕ ಪೊಲೀಸರಿಗೆ ಮಾಹಿತಿಯಿಲ್ಲದೆ ಏಕಾಏಕಿ ದೆಹಲಿ ಪೊಲೀಸರು ಕರ್ನಾಟಕದ ಹೆಣ್ಣುಮಗಳೊಬ್ಬಳನ್ನು ಬಂಧಿಸಿರುವುದು ಆತಂಕಕಾರಿಯಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರ ಏನು ಮಾಡುತ್ತಿದೆ” ಎಂದು ಅಸಮಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಮಾತನಾಡಿ, “ದಿಶಾ ಬಂಧನವು ಖಂಡನೀಯವಾಗಿದ್ದು, ಸರ್ಕಾರದ ಈ ನಡೆಯು ಫ್ಯಾಸಿಸಂನ ಮುಖವನ್ನು ಅನಾವರಣ ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹರಿಯಾಣದ ಬಿಜೆಪಿ ಸಚಿವರೊಬ್ಬರು ದಿಶಾ ರವಿಯವರನ್ನು ಕೊಲ್ಲಬೇಕೆಂದು ಕರೆ ನೀಡುತ್ತಾರೆ. ರಾಜ್ಯದ ಹೆಣ್ಣು ಮಗಳೊಬ್ಬಳನ್ನು ಕೊಲ್ಲಲು ಹರಿಯಾಣದ ಬಿಜೆಪಿ ನಾಯಕ ಕರೆ ಕೊಡುವಾಗ ರಾಜ್ಯ ಬಿಜಪಿ ನಾಯಕರೇಕೆ ಸುಮ್ಮನಿದ್ದಾರೆ. ಇವತ್ತು ದಿಶಾ ಮೇಲೆ ನಡೆದ ಅನ್ಯಾಯ, ನಾಳೆ ನಮ್ಮ-ನಿಮ್ಮ ಮಕ್ಕಳ ಮೇಲೂ ನಡೆಯಬಹುದು” ಎಂದು ಪರಿಸರ ಹೋರಾಟಗಾರರಾದ ಲಿಯೋ ಸಾಲ್ಡಾನ ಹೇಳಿದರು.
ಇದನ್ನೂ ಓದಿ: ರಾಮಮಂದಿರಕ್ಕೆ ದೇಣಿಗೆ ನೀಡದವರ ಮನೆ ಗುರುತು ಮಾಡುತ್ತಿರುವ RSS: ಕುಮಾರಸ್ವಾಮಿ ಆತಂಕ
ದಿಶಾ ಬಂದನ ಕಂಡನಾರ್ಹ, ಅವರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು.