ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಸೋಮವಾರ ಬೆಳಿಗ್ಗೆ ಟ್ವೀಟ್ ಮಾಡಿ “ದೇಶ ವಿರೋಧಿ ಬೀಜ ಯಾರೆಲ್ಲರ ಮನಸ್ಸಲ್ಲಿದೆಯೋ ಅವರೆಲ್ಲರನ್ನು ಸಂಪೂರ್ಣವಾಗಿ ನಾಶಮಾಡಬೇಕು. ಅದು ದಿಶಾ ರವಿಯಾಗಿರಲಿ ಅಥವಾ ಬೇರೆಯವರಾಗಲಿ” ಎಂದು ಹೇಳಿದ್ದಾರೆ.
ಇನ್ನು ದ್ವೇಷ ಮತ್ತು ಹಿಂಸೆಯ ಮಾತುಗಳನ್ನಾಡಿದ ಹರಿಯಾಣ ಗೃಹ ಸಚಿವ ಅನಿಲ್ ವಿಜ್ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ದ್ವೇಷದ ಮಾತುಗಳ ವಿರುದ್ಧ ಜನಾಂದೋಲನ (Campaign Against hate speech) ಸಂಘಟನೆ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು ಸಲ್ಲಿಸಿದೆ.
ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ದಿಶಾರನ್ನು ಬಂಧಿಸಿರುವ ದೆಹಲಿ ಪೊಲೀಸರ ವಿರುದ್ಧ ಬೆಂಗಳೂರು ಪೊಲೀಸರು ಕ್ರಮ ತೆಗೆದುಕೊಳ್ಳಬೇಕು, ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸಿದ ಬೆಂಗಳೂರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಈ ಪ್ರಕರಣದಲ್ಲಿ ಬೆಂಗಳೂರು ಮತ್ತು ದೆಹಲಿ ಪೊಲೀಸರ ನಡುವಿನ ಯಾವುದೇ ಪತ್ರ ವ್ಯವಹಾರ ನಡೆದಿಲ್ಲ ಹಾಗಾಗಿ ಈ ಅಕ್ರಮ ಬಂಧನದ ಬಗ್ಗೆ ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಸಿಂಘು ಗಡಿ: ಪ್ರತಿಭಟನಾ ನಿರತ 72 ವರ್ಷದ ರೈತ ಹೃದಯಾಘಾತದಿಂದ ಸಾವು
— ANIL VIJ MINISTER HARYANA (@anilvijminister) February 15, 2021
ರೈತ ಹೋರಾಟಕ್ಕೆ ಸಂಬಂಧಿಸಿ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದ ಟೂಲ್ಕಿಟ್ ಪ್ರಕರಣ ಸಂಬಂಧಿಸಿ ಭಾನುವಾರ ಬೆಂಗಳೂರಿನ 21 ವರ್ಷದ ಯುವತಿ ದಿಶಾ ರವಿಯನ್ನು ಬಂಧಿಸಿದ್ದರು. ಈ ಹಿನ್ನಲೆಯಲ್ಲಿ ಹರಿಯಾಣ ಗೃಹಮಂತ್ರಿ ಟ್ವೀಟ್ ಮಾಡಿದ್ದರು.
ಈ ಟ್ವೀಟ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಹಲವಾರು ಜನರು ಕಾನೂನು ಬಾಹಿರ ಎಂದು ಹೇಳಿದ್ದರು. ಆದರೆ ಇದೀಗ ಟ್ವೀಟರ್ ಅವರಿಗೆ ನೋಟಿಸ್ ನೀಡಿದ್ದು, “ಜರ್ಮನಿಯಲ್ಲಿ ಟ್ವೀಟ್ ಬಗ್ಗೆ ದೂರು ನೀಡಲಾಗಿತ್ತು. ನಾವು ಇದನ್ನು ಪರಿಶೀಲಿಸಿದ್ದು ಜರ್ಮನಿ ಅಥವಾ ಟ್ವಿಟರ್ ಕಾನೂನಿನ ಪ್ರಕಾರ ಇದರಲ್ಲಿ ಯಾವುದೆ ಕಾನೂನುಬಾಹಿರ ವಿಷಯ ಇಲ್ಲ. ಆದ್ದರಿಂದ ಇದರ ಬಗ್ಗೆ ಯಾವುದೆ ಕ್ರಮಕೈಗೊಳ್ಳುವುದಿಲ್ಲ” ಎಂದು ಹೇಳಿದೆ. ಈ ನೋಟಿಸ್ನ ಸ್ಕ್ರೀನ್ಶಾಟ್ ಅನ್ನು ಅವರು ಟ್ವೀಟ್ ಮಾಡಿದ್ದಾರೆ.
ದಿಶಾ ರವಿ ಅವರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇಷ್ಟೇ ಅಲ್ಲದೆ ಪೊಲೀಸರು ಇದೇ ಪ್ರಕರಣದಲ್ಲಿ ನಿಕಿತಾ ಜಾಕೋಬ್ ಮತ್ತು ಶಾಂತನು ಎಂಬವರಿಗೆ ಜಾಮೀನು ರಹಿತ ವಾರಂಟ್ ಕಳುಹಿಸಿದ್ದಾರೆ. ಈ ಹಿನ್ನಲೆಯಲ್ಲಿ ನಿಕಿತಾ ಜಾಕೋಬ್ ಅವರು ನಾಲ್ಕು ವಾರಗಳ ಬಂಧನದಿಂದ ರಕ್ಷಣೆಗಾಗಿ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ.
ಇದನ್ನೂ ಓದಿ: ಅವರು ಮನೆಯಲ್ಲಿದ್ದರೂ ಸಾಯುತ್ತಿದ್ದರು: ರೈತರ ಸಾವಿನ ಬಗ್ಗೆ ನಾಲಗೆ ಹರಿಯ ಬಿಟ್ಟ ಹರಿಯಾಣ ಕೃಷಿ ಸಚಿವ