ಪೆಟ್ರೋಲ್, ಡಿಸೇಲ್, ದಿನಬಳಕೆ ವಸ್ತುಗಳ ಬೆಲೆ ಸತತವಾಗಿ ಏರುತ್ತಿರುವುದನ್ನು ವಿರೋಧಿಸಿ, ಬಿಜೆಪಿ ಸರ್ಕಾರದ ವಿರುದ್ದ ಆಮ್ ಆದ್ಮಿ ಪಕ್ಷದಿಂದ ಎಳ್ಳು ನೀರು ತರ್ಪಣ ಬಿಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಿಜೆಪಿ ನಂಬಿ ಮತ ನೀಡಿದ್ದ ಜನರನ್ನೇ ಅದು ಹುರಿದು ಮುಕ್ಕುತ್ತಿದೆ. “ಅಚ್ಚೇದಿನ್ ಆಯೇಗಾ” ಎಂದು ಹೇಳಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಲೂಟಿ ಹೊಡೆಯುತ್ತಿದೆ. ಇಂತಹ ಕೆಟ್ಟ ಸರ್ಕಾರ ನಮಗೆ ಬೇಕೇ” ಎಂದು ಪ್ರಶ್ನಿಸಿದ್ದಾರೆ.
ದಿನಬಳಕೆ ವಸ್ತುಗಳು, ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇವೆ. ಬಿಜೆಪಿ ಸರ್ಕಾರದ ಈ ಎಲ್ಲಾ ವೈಫಲ್ಯಗಳನ್ನು ಮನೆ, ಮನೆಗೆ ತಲುಪಿಸುವ ಕಾರ್ಯಕ್ರಮ ಸೇರಿದಂತೆ ಎಳ್ಳು, ನೀರು ತರ್ಪಣ ಬಿಡುವ ಅಭಿಯಾನವನ್ನು ಆಮ್ ಆದ್ಮಿ ಪಕ್ಷದಿಂದ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಸರ್ಕಾರಿ ಗೋದಾಮುಗಳನ್ನು ಹೆಗ್ಗಣಗಳು ಹಾಳು ಮಾಡುತ್ತಿದ್ದವು. ಆದರೆ ಈಗ ಆ ಹೆಗ್ಗಣಗಳ ಜಾಗಕ್ಕೆ ಬಿಜೆಪಿ ಸರ್ಕಾರ ಬಂದು ಕೂತಿದೆ. ಜನರನ್ನೇ ತಿನ್ನುವ ಹೆಗ್ಗಣಗಳ ಸರ್ಕಾರ ಇದು ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ ಸದಂ ಅವರು ಮಾತನಾಡಿ, ಜನರನ್ನೇ ತಿನ್ನುವ ಈ ದುಷ್ಟ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸದ ಹೊರತು ಈ ದೇಶಕ್ಕೆ ಉಳಿಗಾಲವಿಲ್ಲ. ಆದ ಕಾರಣ ಆಮ್ ಆದ್ಮಿ ಪಕ್ಷ ಈ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ, ಈ ಅಭಿಯಾನಕ್ಕೆ ಜನಸಾಮಾನ್ಯರು ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: ಒಡಿಸ್ಸಾ; ಗಣಿಗಾರಿಕೆ ವಿರುದ್ಧ ಹೋರಾಡಿದ 16 ಆದಿವಾಸಿಗಳ ಬಂಧನ