ಹೌದು, ನಮ್ಮ ದೇಶದ ಸರ್ಕಾರಿ ಟೂಲ್ಕಿಟ್ ಒಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತಿದೆ. ಅಷ್ಟೇ ಅಲ್ಲ ಅದು ಅಪಹಾಸ್ಯಕ್ಕೂ ಈಡಾಗುತ್ತಿದೆ. ಈ ಟೂಲ್ಕಿಟ್ನಲ್ಲಿ ಇರುವ ಮಾರ್ಗಸೂಚಿಗಳು: ಐಪಿಸಿ-ಸಿಆರ್ಪಿಸಿ ಸೆಕ್ಷನ್ಸ್ 124(A), 153(A) 120(B) ಮತ್ತು UAPA ಇತ್ಯಾದಿ. ಕೆಲವೊಮ್ಮೆ ಸಾಧಾರಣ ಕೋಡ್ಗಳೂ ಬಳಕೆಯಾಗುತ್ತವೆ. ಬಿಜೆಪಿ ಆಡಳಿತವಿರುವ ರಾಜ್ಯಗಳ ಪೊಲೀಸರು ಈ ಟೂಲ್ಕಿಟ್ ಪ್ರಕಾರ ಕೆಲಸ ಮಾಡುತ್ತಿದ್ದಾರಾದರೂ ಉತ್ತರಪ್ರದೇಶ ಪೊಲೀಸರು ತುಸು ಹೆಚ್ಚು ಆಕ್ಟಿವ್ ಆಗಿದ್ದಾರೆ. ಆದರೆ ಈ ಟೂಲ್ಕಿಟ್ ಅನ್ನು ಭಯಂಕರವಾಗಿ ಜಾರಿಗೆ ತರುವ ಮೂಲಕ ಜಾಗತಿಕ ಅಪಖ್ಯಾತಿ ಮತ್ತು ಅಪಹಾಸ್ಯಕ್ಕೆ ಈಡಾಗುತ್ತಿರುವುದು ದೆಹಲಿ ಪೊಲೀಸ್.
ಜೆಎನ್ಯುನ ಪ್ರಜ್ಞಾವಂತ, ಸಮಾಜಮುಖಿ ವಿದ್ಯಾರ್ಥಿಗಳ ಬಾಯಿ ಮುಚ್ಚಿಸಲು ಈ ಟೂಲ್ಕಿಟ್ ಬಳಸಲಾಯಿತು. ಭೀಮಾ-ಕೋರೆಗಾಂವ್ ಪ್ರಕರಣದ ನೆಪದಲ್ಲಿ ಈ ದೇಶದ ದುರ್ಬಲ ಸಮುದಾಯಗಳ ಸಾಕ್ಷಿ ಪ್ರಜ್ಞೆಯಂತಿರುವ ಲೇಖಕರು, ಸಾಮಾಜಿಕ ಹೋರಾಟಗಾರರು ಮತ್ತು ವಕೀಲರು ಸಾರ್ವಜನಿಕ ಜಾಗೃತಿ ಮೂಡಿಸದಂತೆ ಮಾಡಲು ಇದೇ ಟೂಲ್ಕಿಟ್ ಅನ್ವಯ ಮಾಡಿ ಅವರನ್ನೆಲ್ಲ ಬಂಧನದಲ್ಲಿ ಇಡಲಾಗಿತು.
ಕಳೆದ ವರ್ಷ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದ ಎನ್ಆರ್ಸಿ-ಸಿಎಎ-ಎನ್ಪಿಆರ್ ಹೋರಾಟಕ್ಕೆ ಕಳಂಕ ತರಲೂ ಇದೇ ಟೂಲ್ಕಿಟ್ ಬಳಕೆಯಾಗಿತು. ಈಶಾನ್ಯ ದೆಹಲಿಯಲ್ಲಿ ಪೊಲೀಸರೇ ಮುಂದೆ ನಿಂತು, ಕೆಲವೊಮ್ಮೆ ತಾವೇ ಭಾಗಿದಾರರಾಗಿದ್ದ ಪ್ರಾಯೋಜಿತ ಗಲಭೆ-ಹಿಂಸಾಚಾರ ಪ್ರಕರಣದಲ್ಲಿ ಸಿಎಎ ವಿರೋಧಿ ಹೋರಾಟಗಾರರನ್ನು ಈ ಟೂಲ್ಕಿಟ್ನ ಅಸ್ತ್ರಗಳ ಜೊತೆ ದಂಗೆ, ಕೊಲೆ ಇತ್ಯಾದಿ ಕೇಸುಗಳನ್ನು ಹಾಕಿ ಬಂಧಿಸಲಾಗಿತು.
ಇದನ್ನೂ ಓದಿ: ಕೋಮುವಾದ ಮತ್ತು ಜನದ್ರೋಹಿ ಮೀಡಿಯಾವನ್ನು ಬೆತ್ತಲು ಮಾಡಿದ ರೈತ ಚಳವಳಿ: ಡಿ. ಉಮಾಪತಿ
ಈಗ ರೈತ ಹೋರಾಟವನ್ನು ಬಗ್ಗು ಬಡಿಯಲು ಕೂಡ ದೆಹಲಿ ಪೊಲೀಸರು ಈ ಟೂಲ್ಕಿಟ್ ಮೊರೆ ಹೋಗಿದ್ದಾರೆ. ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆ ಪ್ರದೇಶದಲ್ಲಿ ಕೆಲವು ಪುಂಡರಿಂದಾದ ಗಲಭೆಯನ್ನು ರೈತ ಹೋರಾಟಗಾರರ ತಲೆಗೆ ಕಟ್ಟಲು ಅವರ ಹೆಸರುಗಳನ್ನು ಎಫ್ಐಆರ್ಗಳಲ್ಲಿ ಸೇರಿಸಲಾಗಿದೆ, ಯೋಗೇಂದ್ರ ಯಾದವ್ ಸೇರಿ ಹಲವರಿಗೆ ನೋಟಿಸ್ ನೀಡಲಾಗಿದೆ.

ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬಲಪ್ರದರ್ಶನದಿಂದ ಹತ್ತಿಕ್ಕಲು ಹೋಗಿ ಉತ್ತರಪ್ರದೇಶ ಪೊಲೀಸರು ಕೈ ಸುಟ್ಟುಕೊಂಡ ನಂತರ, ದೆಹಲಿ ಪೊಲೀಸರು ಎಚ್ಚರಗೊಂಡಿದ್ದಾರೆ. ಅವರೀಗ ರೈತ ಹೋರಾಟಕ್ಕೆ ಬಾಹ್ಯವಾಗಿ ಬೆಂಬಲ ನೀಡುತ್ತಿರುವ ಯುವಜನರ ಬೇಟೆ ಆರಂಭಿಸಿದ್ದಾರೆ.
ಇದರ ಪರಿಣಾಮವಾಗಿ ದಿಶಾ ರವಿ, ನಿಕಿತಾ ಜಾಕೋಬ್ ಮತ್ತು ಶಾಂತನು ಮುಲುಕ್ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಇಲ್ಲೂ ದೆಹಲಿ ಪೊಲೀಸರ ಟೂಲ್ಕಿಟ್ ಪ್ರಯೋಗವಾಗಿದೆ. ಕುತೂಹಲದ ವಿಷಯ ಎಂದರೆ, ಪ್ರತಿಭಟನೆಯ ಸ್ವರೂಪ ಹೇಗಿರಬೇಕು ಎಂಬ ಮಾರ್ಗಸೂಚಿಗಳನ್ನು ಒಳಗೊಂಡ ಟೂಲ್ಕಿಟ್ ಈಗ ದೆಹಲಿ ಪೊಲೀಸರ ಟಾರ್ಗೆಟ್ ಆಗಿದೆ!
ಇದನ್ನೂ ಓದಿ: ಮೌನ ಮುರಿಯುವ ಹೊತ್ತಿದು; ಮಂದಿರದ ಹೆಸರಿನಲ್ಲಿ ಮನುಷ್ಯ ಸಂಬಂಧಗಳನ್ನು ಹದಗೆಡಿಸಲು ಬಿಡದಿರೋಣ
ಅಂದರೆ ತಮ್ಮ ಪ್ರಭು ಮತ್ತು ದಂಡನಾಯಕ ಎಡಿಟ್ ಮಾಡಿರುವ ಟೂಲ್ಕಿಟ್ ಈ ದೆಹಲಿ ಪೊಲೀಸರ ಅಸ್ತ್ರ. ದೇಶದ್ರೋಹಕ್ಕಾಗಿ ಐಪಿಸಿ ಸೆಕ್ಷನ್ಸ್ 124(A), ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಕ್ಕೆ 153 (A) ಮತ್ತು ಕ್ರಿಮಿನಲ್ ಪಿತೂರಿಗಾಗಿ 120 (B) ಮತ್ತು UAPA ಅಡಿಯಲ್ಲಿ ಯಾವಾಗ ಬೇಕಾದರೂ, ಸರ್ಕಾರವನ್ನು ಪ್ರಶ್ನಿಸಿದವರ ಮೇಲೆ ಪ್ರಕರಣ ದಾಖಲಿಸಲು ದೆಹಲಿ ಪೊಲೀಸರು ಸ್ವತಂತ್ರರು!
ದೆಹಲಿ ಪೊಲೀಸರ ದ್ವಿಪಾತ್ರ ಅಭಿನಯ, ಮೂಕಪ್ರೇಕ್ಷಕರು ಮತ್ತು ಹೈಪರ್-ಆಕ್ಟಿವ್
ಹಾಗಂತ ಎಲ್ಲ ಸಂದರ್ಭಗಳಲ್ಲೂ ದೆಹಲಿ ಪೊಲೀಸರು ತಮ್ಮ ಸರ್ಕಾರಿ ಟೂಲ್ಕಿಟ್ ಬಳಸುತ್ತಾರೆ ಎಂದುಕೊಳ್ಳಬೇಡಿ. ಅವರು ಒಮ್ಮೊಮ್ಮೆ ಮೂಕಪ್ರೇಕ್ಷಕರಾಗಿ ’ಅಹಿಂಸಾವಾದ’ ಮೆರೆದಿದ್ದೂ ಇದೆ. ಪ್ರಭುಗಳ ಚೇಲಾಗಳು ನಡೆಸುವ ಹಿಂಸಾಚಾರದ ಸಂದರ್ಭಗಳಲ್ಲಿ ಇಂತಹ ನಿಲುವು ತಳೆಯುತ್ತಾರೆ. ಕೆಲವೊಮ್ಮೆ ಪ್ರಭುಗಳ ಅಣತಿಯಂತೆ, ತಾವೇ ಹಿಂಸಾಚಾರದಲ್ಲಿ ಭಾಗಿಯಾಗುತ್ತಾರೆ. ಹೀಗಾಗಿ ಒಮ್ಮೆ ಮೂಕಪ್ರೇಕ್ಷಕರಾಗಿಯೂ, ಇನ್ನೊಮ್ಮೆ ಹೈಪರ್ ಆಕ್ಟಿವ್ ಆಗಿಯೂ ದ್ವಿಪಾತ್ರ ಅಭಿನಯ ಮಾಡುವ ’ಸಮರ’ ಕಲೆ ಅವರಿಗೆ ಸಿದ್ಧಿಯಾಗಿದೆ.
- ಜೆಎನ್ಯುಗೆ ನುಗ್ಗಿದ ಗೂಂಡಾಗಳ ಪಡೆಯೊಂದು ರಾಡು, ಲಾಠಿಗಳಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಥಳಿಸುವಾಗ ದೆಹಲಿ ಪೊಲೀಸರು ಮೂಕಪ್ರೇಕ್ಷಕರು. ಈಗಲೂ ಆ ಕೇಸಿನಲ್ಲಿ ಒಬ್ಬರ ಬಂಧನವೂ ಆಗಿಲ್ಲ!
- ಸಿಎಎ-ಎನ್ಆರ್ಸಿ ವಿರೋಧಿಸಿ ಶಾಹೀನ್ ಬಾಗ್ ಪ್ರತಿಭಟನಾಕಾರರು ನಡೆಸುತ್ತಿದ್ದ ಪಾದಯಾತ್ರೆ… ಏಕಾಏಕಿ ಒಬ್ಬ ಪುಂಡ ನೇರಾನೇರ ನಿಂತು ಪಿಸ್ತೂಲ್ ತೆಗೆದು ಪ್ರತಿಭಟನಾಕಾರರತ್ತ ಶೂಟ್ ಮಾಡತೊಡಗಿದ. ಆತನ ಹಿಂದುಗಡೆ ನಿಂತಿದ್ದ ಹಿಂಡು ಪೊಲೀಸರು ಏನೂ ನಡೆದೇ ಇಲ್ಲ ಎಂಬ ಭಾವದಲ್ಲಿದ್ದರು, ಮೂಕಪ್ರೇಕ್ಷಕರು!

- ಈಶಾನ್ಯ ದೆಹಲಿಯಲ್ಲಿ ಹುಟ್ಟು ಹಾಕಲಾದ ಗಲಭೆ ನಿಯಂತ್ರಣಕ್ಕೆ ತರಬೇಕಿದ್ದ ಪೊಲೀಸರು, ಮುಸ್ಲಿಮರ ಮನೆಗೆ ಪುಂಡಪೋಕರಿಗಳು, ದುಷ್ಕರ್ಮಿಗಳು ಬೆಂಕಿ ಹಚ್ಚುವಾಗ ಸುಮ್ಮನೆ ನಿಂತಿದ್ದರು. ಮತ್ತೆ ಮೂಕಪ್ರೇಕ್ಷಕರ ಪಾತ್ರ!
- ದೆಹಲಿ ಗಲಭೆಗೆ ಸಂಬಂಧಿಸಿದಂತೆ, ಸಿಎಎ ವಿರೋಧಿ ಹೋರಾಟಗಾರರು, ಅಲ್ಪಸಂಖ್ಯಾತ ಸಂತಸ್ತ್ರರ ಮೇಲೆಯೇ ಎಫ್ಐಆರ್ ದಾಖಲಿಸಿದರು. ಹೈಪರ್-ಆಕ್ಟಿವ್ ರೋಲ್!
- ಕೆಂಪುಕೋಟೆಗೆ ನುಗ್ಗಿ ಧ್ವಜ ಹಾರಿಸುವವರೆಗೂ ಮೂಕಪ್ರೇಕ್ಷಕರು.
- ನಂತರ ಫುಲ್ಚಾರ್ಜ್ ಆದ ಪೊಲೀಸರು ರೈತ ಮುಖಂಡರ ಮೇಲೆಯೇ ಎಫ್ಐಆರ್ ದಾಖಲಿಸಿದರು. ನೂರಾರು ರೈತ ಪ್ರತಿಭಟನಾಕರರನ್ನು ಜೈಲಿಗೆ ತಳ್ಳಿದರು.
- ಸಿಂಘು ಗಡಿಯ ಒಂದು ಭಾಗದಲ್ಲಿ ಬಿಜೆಪಿ ಕಾರ್ಯಕರ್ತರ ನೇತೃತ್ವದ ದುಷ್ಕರ್ಮಿಗಳ ಗುಂಪೊಂದು ಪ್ರತಿಭಟನಾ ನಿರತ ರೈತರ ಮೇಲೆ ಕಲ್ಲು ತೂರಾಟ ನಡೆಸುವಾಗ ಪಕ್ಕದಲ್ಲೇ ನಿಂತಿದ್ದ ಪೊಲೀಸರು ಗಪ್ಚುಪ್. ಎರಡು ದಿನದ ನಂತರ, ಈ ಕಲ್ಲು ತೂರಾಟ ನಡೆಸಿದವರಿಗೂ, ಬಿಜೆಪಿಗೂ ಲಿಂಕ್ ಇದೆ ಎಂದು ವರದಿ ಮಾಡಿದ್ದ ಪತ್ರಕರ್ತನನ್ನು ಎಳೆದುಕೊಂಡು ಹಲ್ಲೆ ನಡೆಸಿ ಬಂಧಿಸಿದರು.
****
ಪಟ್ಟಿ ಮಾಡುತ್ತ ಹೋದರೆ, ಬಿಡಿ ಬಿಡಿ ಘಟನೆ ಬರೆಯುತ್ತ ಹೋದರೆ ಅದೇ ಒಂದು ದೊಡ್ಡ ಕತೆಯಾದೀತು. ಮೇಲಿನ ಎಲ್ಲ ಘಟನೆಗಳಲ್ಲೂ ದೆಹಲಿ ಪೊಲೀಸರು ಒಂದೋ ಮೂಕಪ್ರೇಕ್ಷಕರು ಇಲ್ಲವೇ ಹೈಪರ್-ಆಕ್ಟಿವ್ (ವಿಪರೀತ ಕಾರ್ಯಶೀಲರು). ಈ 6-7 ವರ್ಷಗಳಲ್ಲಿ ಅವರೆಂದೂ ಸಮಚಿತ್ತದ ಪೊಲೀಸರಾಗಿ ಕೆಲಸ ನಿರ್ವಹಿಸಿದ್ದೇ ಅಪರೂಪ.
ಹೀಗೆ ಒಂದಕ್ಕೊಂದು ತದ್ವಿರುದ್ಧವಾದ ದ್ವಿಪಾತ್ರ ಅಭಿನಯವನ್ನು ಸಲೀಸಾಗಿ ಮಾಡುತ್ತ ಹೊರಟಿರುವ ಅವರು, ಈಗ ತಮ್ಮ ಮೂರ್ಖ ನಿರ್ಧಾರಗಳಿಂದ ಜಾಗತಿಕ ಮಟ್ಟದಲ್ಲಿಯೂ ಅಪಹಾಸ್ಯಕ್ಕೆ ಈಡಾಗಿದ್ದಾರೆ. ಇವರಿಗೆ ದ್ವಿಪಾತ್ರ ವಹಿಸಿದ ನಿರ್ದೇಶಕ ಅಮಿತ್ ಶಾ ಮತ್ತು ದಿಗ್ದರ್ಶಕ ಮೋದಿ ಅವರಂತೆಯೇ ದೆಹಲಿ ಪೊಲೀಸರು ಕೂಡ ಸಂವೇದನೆಯನ್ನೆ ಕಳೆದುಕೊಂಡ ವಿಕ್ಷಿಪ್ತ ಮನಸ್ಸಿನ ಮನುಷ್ಯರಾಗಿ ಬದಲಾಗಿದ್ದಾರೆ.
When the protector turns perpetrator, where do we go?!
Shame on @DelhiPolice for disrespecting the value of human life. Is this how the Delhi Police fulfills its Constitutional duty to show respect to our National Anthem?
(Maujpur, 24 Feb)#ShameOnDelhiPolice #DelhiBurning pic.twitter.com/QVaxpfNyp5— Shaheen Bagh Official (@Shaheenbaghoff1) February 25, 2020
ಮೇಲಿನ ವಿಡಿಯೋ ಅಲ್ಟ್ನ್ಯೂಸ್ ಮತ್ತು ನ್ಯೂಯಾರ್ಕ್ ಟೈಮ್ಸ್ ದೃಢೀಕರಿಸಿದ ವಿಡಿಯೋವಾಗಿದೆ. ಇದು ದೆಹಲಿ ಹಿಂಸಾಚಾರ ಸಂದರ್ಭದ್ದಾಗಿದ್ದು, ಪೊಲೀಸರು ಐದಾರು ಮುಸ್ಲಿಂ ಯುವಕರನ್ನು ನೆಲಕ್ಕೆ ಕೆಡವಿ ಲಾಠಿಯಿಂದ ಮನಸೋ ಇಚ್ಛೆ ಥಳಿಸಿ ವಿಕೃತ ಆನಂದ ಪಡೆಯುವುದಲ್ಲದೇ ಜನಗಣಮನ ಹಾಡಲು ಒತ್ತಾಯಿಸುತ್ತಾ ಕ್ರೂರವಾಗಿ ನಡೆದುಕೊಂಡಿದ್ದರು. ಹೀಗೆ ಥಳಿತಕ್ಕೊಳಗಾದವರಲ್ಲಿ ಒಬ್ಬ ವ್ಯಕ್ತಿ ನಂತರದಲ್ಲಿ ಮೃತಪಟ್ಟಿದ್ದಾರೆ ಎಂದು ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿತ್ತು.
ಇದನ್ನೂ ಓದಿ: ಹಿಂದು ರಾಷ್ಟ್ರವೆಂಬುದೇ ಭ್ರಮೆ; ಆಕಾರ್ ಪಟೇಲ್ ಅವರ ’ಅವರ್ ಹಿಂದು ರಾಷ್ಟ್ರ’ ಪುಸ್ತಕ ಪರಿಚಯ


