Homeಕರ್ನಾಟಕಶಿವಮೊಗ್ಗ, ಚಿಕ್ಕಬಳ್ಳಾಪುರ ಸ್ಫೋಟಗಳ ಸಾಲಿಗೆ ಸೇರಬಾರದು ಬ್ರಹ್ಮಾವರ ತಾಲೂಕಿನ ಗಣಿ

ಶಿವಮೊಗ್ಗ, ಚಿಕ್ಕಬಳ್ಳಾಪುರ ಸ್ಫೋಟಗಳ ಸಾಲಿಗೆ ಸೇರಬಾರದು ಬ್ರಹ್ಮಾವರ ತಾಲೂಕಿನ ಗಣಿ

- Advertisement -
- Advertisement -

ಅಕ್ರಮವಾಗಿ ಹಣ ಹರಿದು ಬರುವಲ್ಲಿ ಅನಾಹುತ-ಅನಾಚಾರ ಆಗಿಯೇ ಆಗುತ್ತದೆ. ಇದು ಪ್ರಕೃತಿ ನಿಯಮ. ರಾಜ್ಯದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಕಲ್ಲು ಮತ್ತು ಮರಳು ಗಣಿಗಳಲ್ಲಿ ಪ್ರತಿದಿನ ಒಂದಲ್ಲ ಒಂದು ಭಾನಗಡಿ ಇದ್ದದ್ದೇ! ಹತ್ತು-ಹನ್ನೆರಡು ಜಿಲ್ಲೆಗಳಲ್ಲಿ ನಿರಂತರ-ನಿರಾತಂಕವಾಗಿ ನಡೆಯುತ್ತಿರುವ ಕಳ್ಳ ಕಲ್ಲು ಗಣಿಗಾರಿಕೆಗೆ ಅಧಿಕಾರಸ್ಥರ ಪುಢಾರಿಗಳೇ ಪಿತಾಮಹರು. ಹೀಗಾಗಿ ಕಲ್ಲು ಕ್ವಾರಿಗಳಲ್ಲಿ ನರಬಲಿ, ರಕ್ತದೋಕುಳಿ ನಡೆಯುತ್ತಲೇ ಇದೆ. ಶಿವಮೊಗ್ಗದ ಹುಣಸೋಡು ಅಕ್ರಮ ಗಣಿಯಲ್ಲಿ ಘನಘೋರ ಸ್ಫೋಟ ಸಂಭವಿಸಿ ಆರು ಬಡ ಜೀವಗಳು ಆಹುತಿಯಾಗಿ ತಿಂಗಳಿನ್ನೂ ಕಳೆದಿಲ್ಲ; ಅದಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಹಿರೇನಾಗವೇಲಿ ಜಿಲೆಟಿನ್ ಸಿಡಿತಕ್ಕೆ ಆರು ಮಂದಿ ಬಲಿಯಾಗಿದ್ದಾರೆ!!

ರಾಜ್ಯದ ಸುಮಾರು 10-15 ಸಾವಿರ ಎಕರೆ ಪ್ರದೇಶದಲ್ಲಿ ಸಾವಿರಾರು “ಅಧಿಕೃತ” ಕಲ್ಲುಕ್ವಾರಿ ಮತ್ತು ಕ್ರಶರ್‌ಗಳಿವೆ ಎಂಬುದೊಂದು ಅಂದಾಜು. ಆದರೆ ಇದಕ್ಕೆ ದುಪ್ಪಟ್ಟು ಜಾಗದಲ್ಲಿ ದುಪ್ಪಟ್ಟು ಕಲ್ಲುಗಣಿ-ಕ್ರಶರ್‌ಗಳ “ಅನಧಿಕೃತ” ದಂಧೆ ರಾಜಾರೋಷವಾಗಿ ಸಾಗಿದೆ! ಇದು ಸರ್ಕಾರ ನಡೆಸುವವರಿಗೆ ಮತ್ತವರ ಅಧಿಕಾರಿ ಗಣಕ್ಕೆ ಗೊತ್ತಿರುವ ಸತ್ಯವೇ. ಕಳ್ಳ ಮಾರ್ಗದಲ್ಲಿ ಕೋಟಿ-ಕೋಟಿ ಲೂಟಿಯಾಗುತ್ತಿದ್ದರೂ ಕಡಿವಾಣ ಹಾಕುವುದಕ್ಕಾಗುತ್ತಿಲ್ಲ. ಸರ್ಕಾರವನ್ನೇ ಉರುಳಿಸುವಷ್ಟು ಮತ್ತು ಎಂಪಿ-ಎಮ್ಮೆಲ್ಲೆಗಳ ಗೆಲ್ಲಿಸುವ-ಸೋಲಿಸುವಷ್ಟು ಕೊಬ್ಬಿರುವ ಕ್ವಾರಿ ಲಾಬಿ ಮಟ್ಟಹಾಕುವ ತಾಕತ್ತು ಯಾರಿಗೂ ಇಲ್ಲವಾಗಿದೆ.

ಕಲ್ಲು ಕ್ವಾರಿಗಳಲ್ಲಿ ಸ್ಥಳೀಯ ಅಮಾಯಕ ಕೂಲಿಗಳ ಜತೆ ಆಂಧ್ರ, ಬಿಹಾರ, ಜಾರ್ಖಂಡ್ ಮುಂತಾದ ಹೊರ ರಾಜ್ಯಗಳ ಕಾರ್ಮಿಕರು ದುಡಿಯುತ್ತಿದ್ದಾರೆ. ಇದೊಂಥರಾ ಜೀತ!! ಜೀವ ಪಣಕ್ಕಿಟ್ಟು ಬೆವರಿಳಿಸಬೇಕಾದ ಬರ್ಬರ-ಭೀಕರ ಪದ್ಧತಿ!! ಕೆಲವು ಕಡೆ ಟನ್‌ಗಟ್ಟಲೆ ಸ್ಫೋಟಕ ಸಂಗ್ರಹಿಸಿಡಲಾಗಿದೆ. ಆಂಧ್ರ-ತಮಿಳುನಾಡು ಮತ್ತಿತರ ರಾಜ್ಯಗಳಿಂದ ಜಿಲೆಟಿನ್, ಅಮೋನಿಯಮ್ ನೈಟ್ರೇಟ್, ಡಿಟೋನೇಟರ್ ಮತ್ತು ಫ್ಯೂಸ್ ಪೂರೈಕೆಯಾಗುತ್ತಿದೆ. ಈ ಸ್ಫೋಟಕಗಳನ್ನು ಒಂದೇ ಕಡೆ ಸಂಗ್ರಹಿಸಿಡುವುದು ಗಂಡಾಂತರಕಾರಿ. ಯಾವ ಸುರಕ್ಷಾ ಕ್ರಮಗಳು ಇಲ್ಲದೆ ಸ್ಫೋಟಕ ದಾಸ್ತಾನು ಮಾಡುವ ಗಣಿ ಧಣಿಗಳು ಮಾರಣಹೋಮ ಮಾಡುತ್ತಿದ್ದಾರೆ. ಬೃಹತ್ ಬಂಡೆ ಒಡೆಯುವಾಗ ಪರವಾನಗಿ ಹೊಂದಿರುವ ಪರಿಣಿತರಿಂದಲೇ ಸ್ಫೋಟ ನಡೆಸಬೇಕೆಂಬ ನಿಯಮವಿದೆ. ಇದ್ಯಾವುದೂ ಯಾವ ಗಣಿಯಲ್ಲೂ ಪಾಲನೆಯಾಗುತ್ತಿಲ್ಲ.

ಕಲ್ಲುಕ್ವಾರಿ ಹಾಗೂ ಕ್ರಶರ್ ಪರವಾನಗಿ ಕಟ್ಟುನಿಟ್ಟಿನ ನಿಯಮವೇನೋ ಇದೆ. ಅರಣ್ಯ ಸಂರಕ್ಷಣಾ ಕಾಯ್ದೆ 198 2(1) ಮತ್ತು 2(3) ಮತ್ತು ಅರಣ್ಯ ಸಂರಕ್ಷಣಾ ಕಾನೂನು 2003(6) ಹಾಗೂ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಸಿಕ್ಕ ಬಳಿಕ 20 ಅಥವಾ 30 ವರ್ಷದ ಲೀಸ್ ನೀಡಬೇಕಾಗುತ್ತದೆ. ಇದೆಲ್ಲವನ್ನೂ ಪ್ರಜ್ಞಾಪೂರ್ವಕವಾಗೇ ಧಿಕ್ಕರಿಸಿ ಕಳ್ಳಕ್ವಾರಿಗೆ ಅವಕಾಶ ನೀಡಿ ತಮ್ಮ ಪಾಲು ಪಡೆಯುವ ಅಧಿಕಾರಿಗಳು ಏನೂ ಆಗಿಲ್ಲವೆಂಬಂತೆ ಇದ್ದು ಬಿಡುತ್ತಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಂತೂ ಲೇವಾದೇವಿ ಅಡ್ಡೆಯಂತಾಗಿ ಹೋಗಿದೆ! ಹೀಗಾಗಿ ಕಾಯ್ದಿಟ್ಟ ಅರಣ್ಯ, ಅಭಯಾರಣ್ಯ, ಪರಿಸರ ಸೂಕ್ಷ್ಮ ಪ್ರದೇಶದಲ್ಲೂ ನಾಯಿಕೊಡೆಗಳಂತೆ ಭೀಭತ್ಸ ಕ್ವಾರಿಗಳು ತಲೆಯೆತ್ತಿವೆ. ಕ್ರಶರ್‌ಗಳಿಗಷ್ಟೇ ಪರವಾನಗಿ ಪಡೆದು ಕಣ್ಕಟ್ಟು ನಡೆಸುವ ಕ್ವಾರಿ ಕುಳಗಳಿಗೆ ಕಳ್ಳ ಕ್ವಾರಿ ನಡೆಸಲು ಅಧಿಕಾರಿ ಬಳಗ ಅನುಕೂಲ ಮಾಡಿಕೊಡುತ್ತಿದೆ!

ಕಳ್ಳಕ್ವಾರಿಗಳಿಂದ ಪರಿಸರ ಶಬ್ದಮಾಲಿನ್ಯ ಆಗುತ್ತಿದೆ. ಯಂತ್ರಗಳ ಸದ್ದು ಮತ್ತು ಸ್ಫೋಟದಿಂದ ವನ್ಯ ಪ್ರಾಣಿಗಳು ದಿಕ್ಕೆಟ್ಟು ನಾಡಿಗೆ ನುಗ್ಗುತ್ತಿವೆ. ಕಲ್ಲುಸಾಗಾಟಕ್ಕೆ ರಸ್ತೆ, ಕಾರ್ಮಿಕರ ಗುಡಿಸಲು, ಯಂತ್ರಗಳ ಸ್ಥಾಪನೆ ಎಂದೆಲ್ಲ ಅರಣ್ಯ ನಾಶವಾಗುತ್ತಿದೆ. ಗಣಿಗಾರಿಕೆಯಿಂದ ನದಿಗಳು ಬತ್ತಿಹೋಗುತ್ತಿವೆ. ರೈತರ ಬೆಳೆಗೆ ಹಾನಿಯಾಗುತ್ತಿದೆ. ಮಣ್ಣಿನ ಸಾರಾಂಶ ಕಡಿಮೆಯಾಗುತ್ತಿದೆ. ಉಸಿರಾಟದ ತೊಂದರೆ, ಶ್ವಾಸಕೋಶ, ಶ್ರವಣ ಸಮಸ್ಯೆ, ಕೆಮ್ಮುಗಳಂಥ ರೋಗ ಜನರಿಗೆ ಬಾಧಿಸುತ್ತಿದೆ. ಸ್ಥಳೀಯ ಪ್ರಭಾವಿ ಮರಿ ಪುಢಾರಿಗಳ ಸಚಿವ-ಸಂಸದ-ಶಾಸಕರ ನಿಕಟವರ್ತಿಗಳೇ ಗಣಿಗಾರಿಕೆ ಯಜಮಾನರಾಗಿರುವುದರಿಂದ ನಿಷ್ಠಾವಂತ ಅಧಿಕಾರಿಗಳ ಕೈಕಟ್ಟಿಹಾಕಿದಂತಾಗಿದೆ. ಅಕ್ರಮಕ್ಕೆ ಅಂಕುಶವಿಡಲು ಪ್ರಯತ್ನಿಸುವ ಅಧಿಕಾರಿಗಳನ್ನು ಸತಾಯಿಸಿ ಪಳಗಿಸಲು ಹವಣಿಸುವುದು ಮಾಮೂಲಿ ಎಂಬಂತಾಗಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೊಪ್ಪಳ, ಚಾಮರಾಜನಗರ, ಮಂಡ್ಯ, ಬೀದರ್ ಮತ್ತು ಶಿವಮೊಗ್ಗಗಳಲ್ಲಿ ಕಲ್ಲುಕ್ವಾರಿ ಹಾವಳಿ ಜೋರಾಗಿದೆ! ಮೊನ್ನೆ ನಡೆದ ಗ್ರಾಪಂ ಇಲೆಕ್ಷನ್‌ನಲ್ಲೂ ಈ ಕ್ವಾರಿ ಕಪ್ಪು ಕಾಸು ನಿರ್ಣಾಯಕ ಆಟ ಆಡಿದೆ.

ಕಾಯ್ದೆ ಉಲ್ಲಂಘಿಸುವ ಕಲ್ಲು ಗಣಗಾರಿಕೆಯವರಿಗೆ 2 ವರ್ಷ ಶಿಕ್ಷೆ ಮತ್ತು 5 ಲಕ್ಷ ರೂ ದಂಡ ವಿಧಿಸುವ ಕಾನೂನಿದೆ. ಇದು ಬರೀ ಹೆಸರಿಗಷ್ಟೇ. ಕಳೆದ 5 ವರ್ಷದಲ್ಲಿ ಕದ್ದು ಕಲ್ಲು ಸಾಗಿಸಿದ ಸುಮಾರು 800 ಪ್ರಕರಣಗಳಲ್ಲಿ ಗಣಿ ಇಲಾಖೆ ವಾಹನಗಳ ಜಪ್ತಿ ಮಾಡಿ 9 ಕೋಟಿ ದಂಡ ವಸೂಲಿ ಮಾಡಿದೆ ಎಂಬುದು ಸರ್ಕಾರಿ ಅಂಕಿ-ಅಂಶ. ಆದರೆ ಕಳ್ಳ ಗಣಿ ದೊರೆಗಳು-ಅಧಿಕಾರಿಗಳು-ಅಧಿಕಾರಸ್ಥ ರಾಜಕಾರಣಿಗಳ ಒಳ ಒಪ್ಪಂದದಲ್ಲಿ ಸಾವಿರಾರು ಕೋಟಿ ರೂ ಕಲ್ಲು ಕಳ್ಳ ಸಾಗಾಣಿಕೆ ಆಗಿದೆ; ರಾಜಧನ ತಪ್ಪಿಸಿ ಹಗಲು ದರೋಡೆ ಮಾಡಲಾಗುತ್ತಿದೆ. ಕಳೆದ 5 ವರ್ಷದಲ್ಲಿ ಅಕ್ರಮ ಗಣಿಗಾರಿಕೆಯ 1,126 ಕೇಸ್ ದಾಖಲಾಗಿದೆ. ಇದಕ್ಕೆ ಎರಡು ಪಟ್ಟು ಮುಚ್ಚಿಹೋಗಿದೆ. ಗಣಿ ಇಲಾಖೆ ಇತಿಹಾಸದಲ್ಲಿ ಒಂದಿಷ್ಟು ತೋರಿಕೆಗೆ ದಂಡ ಹಾಕುವ ಕಾರ್ಯಾಚರಣೆ ನಡೆದಿದೆಯೇ ಹೊರತು ಯಾವ ಕಲ್ಲು ಕಳ್ಳನಿಗೂ ಶಿಕ್ಷೆಯಾದ ದಾಖಲೆಯಿಲ್ಲ!! ಹಗಲಿರುಳೆನ್ನದೆ ಸ್ಫೋಟಕ ಜಿಲೆಟಿನ್ ಲಾರಿಗಟ್ಟಲೆ ಸಾಗಾಟವಾಗುತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ. ಕೇಂದ್ರ ಗಣಿ ಮತ್ತು ಭೂವಿಜ್ಞಾನ ಮಂತ್ರಿ ಪ್ರಹ್ಲಾದ್ ಜೋಶಿಯೇ ಶಿವಮೊಗ್ಗದಲ್ಲಿ ಸ್ಫೋಟ ಆದಾಗ- “ಅಕ್ರಮ ಗಣಿಗಾರಿಕೆ ಮತ್ತು ಅಧಿಕಾರಿಗಳ ಮಧ್ಯೆ ಹೊಂದಾಣಿಕೆಯಿದೆ” ಎಂದು ಬಹಿರಂಗವಾಗೇ ಹೇಳಿದ್ದು ಕಪ್ಪು ಕ್ವಾರಿ ದಂಧೆ ಅಸಲಿಯತ್ತು ಸಾಬೀತು ಪಡಿಸುವಂತಿದೆ!!

ರಾಜ್ಯದಲ್ಲಿ ನಡೆಯುತ್ತಿರುವ ಅಷ್ಟೂ ಅಪಾಯಕಾರಿ ಅನಧಿಕೃತ ಮತ್ತು ಅಧಿಕೃತ ಕಲ್ಲು ಗಣಿಗಳ ಭೀಭತ್ಸತೆಯ ಸ್ಯಾಂಪಲ್‌ನಂತಿದೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ನಾಲ್ಕೂರು ಗ್ರಾಮದಲ್ಲಿ ಬಿಜೆಪಿ ಪ್ರಭಾವಿ ಶಾಸಕರೊಬ್ಬರ ಪರಮಾಪ್ತ ಬಂಟ ಅಕ್ರಮವಾಗಿ ನಡೆಸುತ್ತಿರುವ ಕಲ್ಲುಕ್ವಾರಿ ಕರ್ಮಕಾಂಡ! ಮಂದರ್ತಿ ಜಿಪಂ ಸದಸ್ಯ ಪ್ರತಾಪ್ ಹೆಗ್ಡೆ ಮತ್ತಾತನ ಸಹೋದರ ಪ್ರವೀಣ್ ಹೆಗಡೆ ಉಡುಪಿ ಶಾಸಕ ರಘುಪತಿ ಭಟ್ಟರ ಅಚ್ಚುಮೆಚ್ಚಿನ ಗೆಣೆಕಾರರು. ಪ್ರವೀಣ್ ಹೆಗಡೆ ಯುನಿಟಿ ರಾಕ್ ಇಂಡಸ್ಟ್ರೀಸ್ ಹೆಸರಿನ ಜಲ್ಲಿ ಕ್ರಶರ್ ಮತ್ತು ಕಲ್ಲುಕ್ವಾರಿ ಉದ್ಯಮ ಸಂಸ್ಥೆ ಸುಮಾರು 15 ಕೋಟಿ ರೂ ಬಂಡವಾಳದಲ್ಲಿ ಶುರು ಮಾಡಿದ್ದಾರೆ. ಇದನ್ನು ಮೊದಲು ರೆಸಾರ್ಟ್ ಉದ್ಯಮಿ ಜಾಯ್ ಆರಂಭಿಸಿದ್ದರು. ಅದಕ್ಕೆ ಹೆಗ್ಡೆ ಸಹೋದರರು ಸ್ಲೀಪಿಂಗ್ ಪಾರ್ಟ್‌ನರ್‌ಗಳಾಗಿದ್ದರು. ಈಚೆಗೆ ನಿಧನರಾದ ಅಂಡರ್ ವರ್ಲ್ಡ್ ಡಾನ್ ಒಬ್ಬನಿಂದ ಜಾಯ್‌ಗೆ ಬೆದರಿಕೆ ಬಂತೆಂದು ಹೇಳಲಾಗುತ್ತದೆ.

ಯುನಿಟಿ ರಾಕ್ ಇಂಡಸ್ಟ್ರೀಸ್‌ಗೆ ಲೀಸ್‌ನಲ್ಲಿ ಕೊಡಲಾಗಿರುವ ನಾಲ್ಕೂರು ಗ್ರಾಮದ ಸರ್ವೆ ನಂಬರ್ 27/7, 24/2, 24/8, 24/9ರಲ್ಲಿನ 1.97 ಎಕರೆ ಇಕೋ ಸೆನ್ಸಿಟಿವ್ ಝೋನ್‌ನಲ್ಲಿದೆ. ಈ ಬಗ್ಗೆ ದೂರು ಬಂದಾಗ ಅಂದಿನ ಹೆಬ್ರಿ ವಲಯದ ಅರಣ್ಯಾಧಿಕಾರಿ ಮುನಿರಾಜು ನಿಷ್ಠುರ ತನಿಖೆ ನಡೆಸಿ ಹೆಗ್ಡೆ ಬಂಧುಗಳ ರಾಕ್ ಇಂಡಸ್ಟ್ರಿಸ್ ಪರವಾನಗಿ ರದ್ದು ಮಾಡುವಂತೆ ವರದಿ ಕೊಟ್ಟಿದ್ದರು! ಅಷ್ಟೇ ಅಲ್ಲ, ಸರ್ವೆ ನಂಬರ್ 219/1ಪಿ1ರಲ್ಲೂ ಕ್ವಾರಿ ವ್ಯಾಪಿಸಿಕೊಂಡಿದ್ದು ಇದು ಡೀಮ್ಡ್ ಫಾರೆಸ್ಟ್‌ನಲ್ಲಿದೆ ಎಂದು ಆಕ್ಷೇಪಿಸಿದ್ದರು. ಸೋಮೇಶ್ವರ ವನ್ಯಜೀವಿ ವಲಯದ ತೆಂಕಹೊಲ ಮೀಸಲು ಅರಣ್ಯಕ್ಕೆ ಕೇವಲ 4.9 ಕಿ.ಮೀ ಅಂತರದಲ್ಲಿ ಕ್ವಾರಿಯಿರುವುದರಿಂದ ಹೆಗ್ಡೆಗಳು ನಡೆಸುತ್ತಿರುವ ಅಕ್ರಮ ಕ್ವಾರಿ ಸ್ಥಗಿತಗೊಳಿಸುವಂತೆ ವರದಿಯಲ್ಲಿ ಹೇಳಿದ್ದರು.

ಕ್ವಾರಿ ಧಣಿ ಅಧಿಕಾರಸ್ಥರ ಹತ್ತಿರದವನೆಂಬ ಕಾರಣಕ್ಕೆ ಖಡಕ್ ಮುನಿರಾಜು ನಂತರ ಬಂದ ಆರ್‌ಎಫ್‌ಓ ಸದ್ರಿ ಕಲ್ಲು ಗಣಿಗಾರಿಕೆಗೆ ಅವಕಾಶ ಕೊಟ್ಟು ಸುಮ್ಮನಿದ್ದಾರೆ. ಎರಡು ವರ್ಷದ ಹಿಂದೆ ಈ ಗಣಿಗಾರಿಕೆಯಲ್ಲಿ ಉತ್ತರ ಭಾರತದ ಕೂಲಿಯೊಬ್ಬ ನಿಗೂಢವಾಗಿ ಸತ್ತು ಬಿದ್ದಿದ್ದ. ಅದನ್ನು ಸಿಡಿಲು ಹೊಡೆತದಿಂದಾದ ಸಾವೆಂದು ಸಾರಲಾಗಿತ್ತು. ಮುಚ್ಚಿರುವ ಮಜುಬೂತ್ ಗೇಟಿನ ಒಳಗಿರುವ ಈ ಕ್ವಾರಿಯಲ್ಲಿ ನಿರಂತರವಾಗಿ ಜಿಲೆಟಿನ್ ಆಸ್ಫೋಟ ಆಗುತ್ತಿರುತ್ತದೆ. ಅಪಾರ ಸ್ಫೋಟಕ ಸಂಗ್ರಹ ಇಲ್ಲಿದೆಯೆನ್ನಲಾಗಿದೆ. ಪ್ರತಿದಿನ ಕಮ್ಮಿಯೆಂದರೂ 250 ಲಾರಿ ಲೋಡ್ ಜಲ್ಲಿಕಲ್ಲು ಈ ಕ್ವಾರಿಯಿಂದ ಆಚೀಚೆಯ ಜಿಲ್ಲೆಗಳಿಗೆ ಹೋಗುತ್ತದೆ! ಒಂದು ದಿನಕ್ಕೆ ಹತ್ತಿರಹತ್ತಿರ ಮುಕ್ಕಾಲು ಕೋಟಿ ಲೂಟಿಯಿದು!!

ಹೇಳೋರಿಲ್ಲ; ಕೇಳೋರಿಲ್ಲ! ನಿತ್ಯವೂ ಕಳ್ಳ ಕಲ್ಲುಗಣಿ ದೊರೆ ಬಳಗಕ್ಕೆ ಸುಗ್ಗಿಯೇ ಸುಗ್ಗಿ!!


ಇದನ್ನೂ ಓದಿ: ಇನ್ನಾದರು ಈ ಪ್ರಕೃತಿ ಸಂಪತ್ತುಗಳ ಲೂಟಿಗೆ ಕಡಿವಾಣ ಹಾಕಬೇಕು: ಎಚ್ ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...