Homeಮುಖಪುಟಸಾಮರಸ್ಯದ ಅಗತ್ಯವನ್ನು ಕಟ್ಟಿಕೊಡುವ ’ಅಲೈದೇವ್ರು’ ನಾಟಕ

ಸಾಮರಸ್ಯದ ಅಗತ್ಯವನ್ನು ಕಟ್ಟಿಕೊಡುವ ’ಅಲೈದೇವ್ರು’ ನಾಟಕ

- Advertisement -
- Advertisement -

ಪ್ರಸಕ್ತವಾಗಿ ಹಲವು ಪಕ್ಷಗಳು ನಡೆಸುತ್ತಿರುವ ಧರ್ಮ ರಾಜಕಾರಣಗಳು ನಿಜ ಭಾರತವನ್ನು ಅಕ್ಷರಶಃ ಕೊಂದುಹಾಕುತ್ತಿವೆ. ಕೋಮುವಾದಿಗಳು ಮತ್ತು ಮೂಲಭೂತವಾದಿಗಳು ಜನರಲ್ಲಿ ನೆಲೆಸಿದ್ದ ಒಗ್ಗಟ್ಟನ್ನು ಹಳ್ಳಿಹಳ್ಳಿಗಳಲ್ಲೂ ಒಡೆದು ಎಲ್ಲೆಲ್ಲೂ ಆತಂಕದ ಕರಿಛಾಯೆ ಏಳಲು ಕಾರಣೀಕರ್ತರಾಗಿದ್ದಾರೆ. ಇಡೀ ದೇಶಾದ್ಯಂತ ’ಸಾಮರಸ್ಯ’ ಎಂಬುದು ಬರೇ ಚಂದದ ನುಡಿಗಟ್ಟಾಗಿ ಮಾತ್ರ ಉಳಿದಿರುವ ಈ ದಿನಮಾನಗಳಲ್ಲಿ ಹನುಮಂತ ಹಾಲಿಗೇರಿಯವರ ರಚನೆಯ, ಸಿದ್ದರಾಮ ಕೊಪ್ಪರ ನಿರ್ದೇಶನದ ’ಅಲೈದೇವ್ರು’ ನಾಟಕವು ಸಾಮರಸ್ಯದ ಬದುಕು ಇಂದಿನ ತುರ್ತು ಅಗತ್ಯ ಎಂಬುದನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಯಿತು.

ಶಿವಮೊಗ್ಗದ ಕುಪ್ಪಳಿಯಲ್ಲಿ ’ದೇಶಕ್ಕಾಗಿ ನಾವು’ ಸಂಘಟನೆ ಹಮ್ಮಿಕೊಂಡಿದ್ದ ಯುವಜನರ ಅಧ್ಯಯನ ಶಿಬಿರದಲ್ಲಿ ಬೆಂಗಳೂರಿನ ಜನರಂಗ ತಂಡವು ಈ ನಾಟಕವನ್ನು ಪ್ರಸ್ತುತಪಡಿಸಿತು. ಒಂದು ಮುಕ್ಕಾಲು ಗಂಟೆಯ ಈ ನಾಟಕದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವೆನಿಸಿಕೊಂಡಿರುವ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರ ಸಂಕಟ, ನೋವು, ಅಭದ್ರತೆ, ಸಿಟ್ಟು, ಸೆಡವು, ವ್ಯಂಗ್ಯ, ಆಕ್ರೋಶಗಳನ್ನು ತಂಡದ ನಟರು ಪ್ರೇಕ್ಷಕರಿಗೆ ದಾಟಿಸಿ, ಅವರ ಕಣ್ಣುಗಳು ತೇವಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು. ವರ್ತಮಾನದ ರಾಜಕೀಯ ಹುನ್ನಾರಗಳಾದ ಪೌರತ್ವ ಕಾಯ್ದೆ, ಲವ್ ಜಿಹಾದ್, ಗೋಹತ್ಯೆ ನಿಷೇಧ ಮುಂತಾದವುಗಳು ಕುರಿತು ಎಲ್ಲೂ ಅಂತಿಮ ತೀರ್ಪನ್ನು ನೀಡದೇ, ಅಗ್ರೆಸಿವ್ ದಾರಿಯನ್ನು ಹಿಡಿಯದೇ, ಎರಡೂ ಮಗ್ಗಲುಗಳಿಂದ ಸಂವಾದ ನಡೆಸುವ ಶೈಲಿಯ ನಿರೂಪಣಾ ತಂತ್ರವನ್ನು ನಾಟಕ ಅನುಸರಿಸಿದ್ದು ವಿಶೇಷವಾಗಿತ್ತು.

ವರ್ಷವರ್ಷಗಳಿಂದ ಹಿಂದೂ ಮತ್ತು ಮುಸ್ಲಿಂ ಜನಾಂಗಗಳೆರಡೂ ಒಟ್ಟಾಗಿ ನಡೆಸುತ್ತಿದ್ದ ಊರಿನ ಜನಪದ ಮೊಹರಂ (ಅಲೈದೇವ್ರ ಹಬ್ಬ) ಹಬ್ಬವನ್ನು ಎರಡೂ ಕಡೆಯ ಮೂಲಭೂತವಾದಿಗಳಿಂದಾಗಿ ನಿಲ್ಲಿಸಲು ಶತಾಯಗತಾಯ ಪ್ರಯತ್ನಿಸಲಾಗುತ್ತದೆ. ಜನರು ಜಾಗೃತವಾಗಿದ್ದರೆ ಇಂತಹ ಒಡಕು ಎಬ್ಬಿಸುವ ಪ್ರಯತ್ನಗಳು ವಿಫಲವಾಗುತ್ತವೆ ಎಂಬ ಸಂದೇಶದೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ಈ ನಾಟಕದಲ್ಲಿ ಎಲ್ಲಿಯೂ ಯಾವುದೇ ಒಂದು ಧರ್ಮವನ್ನು ಟಾರ್ಗೆಟ್ ಮಾಡಿಲ್ಲ. ನಮ್ಮ ಹಳ್ಳಿಹಳ್ಳಿಗಳು ಧಾರ್ಮಿಕ ಸೂಕ್ಷ್ಮ ಪ್ರದೇಶಗಳಾಗಿ ಮಾರ್ಪಡಲು ಕಾರಣಗಳು ಯಾವುವು, ಅದರ ಹಿಂದಿರುವ ಶಕ್ತಿಗಳಾವವು, ಅವುಗಳ ಮುಖವಾಡಗಳೇನು ಎಂಬುದನ್ನು ನಾಟಕ ಬಿಚ್ಚಿಡುತ್ತಾ ಹೋಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಹಿಂದೂ-ಮುಸ್ಲಿಂ ಜನರ ಬಾಹುಳ್ಯ ಪ್ರದೇಶಗಳಲ್ಲಿ ’ಯಾವಾಗ ಎಲ್ಲಿ ಗಲಾಟೆ-ಗಲಭೆಗಳಾಗಿಬಿಡುತ್ತವೋ’ ಎಂಬ ಆತಂಕ ಮಡುಗಟ್ಟಿದೆ. ಅವುಗಳು ಧಾರ್ಮಿಕ ಸೂಕ್ಷ್ಮ ಪ್ರದೇಶಗಳಾಗಿ ಮಾರ್ಪಟ್ಟಿವೆ. ಎರಡೂ ಕಡೆಯಲ್ಲಿರುವ ಅತಿರೇಕದ ಧಾರ್ಮಿಕ ವಾದಿಗಳ ತೆವಲುಗಳಲ್ಲಿ ನಿರುಪದ್ರವಿ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮನುಷ್ಯ ಸಹಜ ಪ್ರೀತಿಯೂ ಧರ್ಮದ ಬಣ್ಣ ಬಳಿದುಕೊಳ್ಳುತ್ತಿದೆ. ಇಂತಹ ವಿಷಮ ದಿನಗಳ ತಲ್ಲಣಗಳನ್ನು ’ಅಲೈದೇವ್ರು’ ಒಂದು ಕಥೆಯಾಗಿ-ನಾಟಕ ಪ್ರದರ್ಶನವಾಗಿ ಸಮರ್ಥವಾಗಿ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಆದರೆ ರಂಗ ಪ್ರಯೋಗದ ದೃಷ್ಟಿಯಲ್ಲಿ ಇದು ಸಾಕಷ್ಟು ಮಾಗಬೇಕಿದೆ. ನಾಟಕದ ಕಂಟೆಂಟ್ ಮತ್ತು ಅವಧಿಯನ್ನು ಗಮನವಿಟ್ಟುಕೊಂಡು ಸಣ್ಣಪುಟ್ಟ ಬದಲಾವಣೆ ಮಾಡಬೇಕಿದೆ. ಸಣ್ಣಪುಟ್ಟ ಮಿತಿಗಳನ್ನು ಸರಿಪಡಿಸಿಕೊಂಡರೆ ಈ ನಾಟಕ ಈ ಕಾಲದ ಒಂದೊಳ್ಳೆ ಪ್ರಯತ್ನವೆನಿಸಿಕೊಳ್ಳದೆ ಇರದು. ಜೊತೆಗೆ ಇಂದು ಕೋಮು ವೈಷಮ್ಯದ ರೋಗಗಳಿಗೆ ಮದ್ದಾಗುವುದಕ್ಕೂ ಸಾಧ್ಯವಿದೆ.

ಈ ನಾಟಕ ಬೆಂಗಳೂರಿನಲ್ಲಿ ಪ್ರದರ್ಶನಗೊಂಡಾಗ ಕೆಲವು ಮೂಲಭೂತವಾದಿಗಳಿಂದ ಅಪಸ್ವರ ಕೇಳಿಬಂದಿದ್ದರ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ಕಾರಣದಿಂದಾಗಿ ಬಹುಶಃ ಧಾರ್ಮಿಕ ಸೂಕ್ಷ್ಮ ಪ್ರದೇಶಗಳೆಂದು ಕರೆಸಿಕೊಳ್ಳುವ ಊರುಗಳಲ್ಲಿ ಇದರ ಪ್ರದರ್ಶನಕ್ಕೆ ಆಯೋಜಕರು ಹಿಂದೇಟು ಹಾಕುತ್ತಿದ್ದಾರೆ. ಆದಾಗ್ಯೂ ಅಂತಹ ಪ್ರದೇಶಗಳಲ್ಲಿಯೇ ಇದು ಹೆಚ್ಚಚ್ಚು ಪ್ರದರ್ಶನಗೊಳ್ಳಬೇಕಿರುವ ಅಗತ್ಯವಿದೆ. ಎಲ್ಲಿ ಗಾಯವಾಗಿದೆಯೋ ಅಲ್ಲಿಯೇ ಮುಲಾಮು ಹಚ್ಚಬೇಕಾದುದು ಅನಿವಾರ್ಯ.

ಸಮಾಜದ ಬಹುಪಾಲು ಸಹೃದಯರು ಧಾರ್ಮಿಕ ಸಾಮರಸ್ಯದ ವಿಚಾರದಲ್ಲಿ ಜಾಣಮೌನ ವಹಿಸುವಾಗ, ಪರಸ್ಪರ ಅರಿತು ಬಾಳಬೇಕಾದ ಅಗತ್ಯಗಳನ್ನು ಗಟ್ಟಿಯಾಗಿ ಮಾತನಾಡದಿರುವಾಗ ಈ ಹೊತ್ತಿನ ತಲ್ಲಣವೊಂದನ್ನು ಇಷ್ಟು ಚಂದವಾಗಿ ಮತ್ತು ನೇರಾನೇರ ಹೇಳುವ ಧೈರ್ಯ ತೋರಿರುವ ರಂಗತಂಡಕ್ಕೆ ಅಭಿನಂದನೆಗಳು.

ಈ ಮಾತೊಂದನ್ನು ಹೇಳಲೇಬೇಕಿದೆಯೆನಿಸುತ್ತಿದೆ. ನಮ್ಮ ನಮ್ಮ ಜಾತಿ-ಮತಗಳನ್ನು ಮನೆಗಷ್ಟೇ
ಸೀಮಿತಗೊಳಿಸಿಕೊಳ್ಳಬೇಕಾಗಿರುವುದು ಶಾಂತಿ ಮತ್ತು ಸಾಮರಸ್ಯದ ದೃಷ್ಟಿಯಿಂದ ಅತೀ ಅಗತ್ಯ. ಇದನ್ನು ಅರ್ಥಮಾಡಿಕೊಳ್ಳದೇ ಪರಸ್ಪರ ಬಡಿದಾಡುತ್ತಿದ್ದರೆ ಮುಂದೆ ಯಾರೂ ಉಳಿಯಲಾರರು. ’ಸಿರಿಯಾ’ದಂತಹ ದೇಶಗಳಲ್ಲಿ ಧಾರ್ಮಿಕ ಮೂಲಭೂತವಾದ ಅದೆಷ್ಟರಮಟ್ಟಿಗೆ ಮುಗ್ಧಜೀವಗಳ ನೆಮ್ಮದಿಯನ್ನು ಕಿತ್ತುಕೊಂಡಿದೆ, ಅಲ್ಲಿನ ಸಾಮಾನ್ಯ ಜನರ ಬದುಕು ಅದೆಷ್ಟು ದಾರುಣವಾಗಿದೆ ಎಂಬುದು ನಮ್ಮ ಕಣ್ಣಮುಂದಿದೆ. ಈ ಉದಾಹರಣೆಗಳಿಂದ ಎಚ್ಚೆತ್ತುಕೊಂಡು, ಭಾರತದ ಎಳೆಯ ಮತ್ತು ಯುವ ಮನಸ್ಸುಗಳಲ್ಲಿ ಅಗತ್ಯವಾಗಿ ಸಾಮರಸ್ಯದ ಅಗತ್ಯವನ್ನು ಒತ್ತಿಹೇಳಬೇಕಿದೆ. ಮತೀಯ ಶಕ್ತಿಗಳ ಕುಟಿಲತೆಗಳು ಹೊಸ ತಲೆಮಾರಿಗೆ ಅರ್ಥವಾಗಬೇಕಿರುವುದು ಇಂದಿನ ಜರೂರತ್ತಾಗಿದೆ. ಧಾರ್ಮಿಕ ಸಾಮರಸ್ಯವನ್ನು ಪುನರ್ ಕಟ್ಟುವ ದೃಷ್ಟಿಯಿಂದ ’ಅಲೈದೇವ್ರು’ ನಾಟಕ ಮಹತ್ವದ್ದಾಗಿ ಕಾಣುತ್ತದೆ.

ನಾಗರಾಜ ಕೂವೆ
ಕುವೆಂಪು ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾಗಾರಾಜ ಅವರ ’ಕೈತುತ್ತು- ಭಾವನೆಗಳ ಹೊತ್ತು’, ’ನನ್ನಯ ಹಕ್ಕಿ ಬಿಟ್ಟೆ ಬಿಟ್ಟೆ…’ ಎಂಬ ಪುಸ್ತಕಗಳು ಪ್ರಕಟವಾಗಿವೆ. ಪಶ್ಚಿಮ ಘಟ್ಟ ಮತ್ತದರ ತಪ್ಪಲಿನ ಜನರ ಬದುಕು, ಜೀವವೈವಿಧ್ಯದ ಅಧ್ಯಯನ, ತಿರುಗಾಟ ಇವರ ಹವ್ಯಾಸಗಳು.


ಇದನ್ನೂ ಓದಿ: ಹಳ್ಳಿಗಳ ಹಿಂದೂ ಮುಸ್ಲಿಂ ಸಹಬಾಳ್ವೆ ಏನಾಗುತ್ತಿದೆ?: ಅಲೈದೇವ್ರು ನಾಟಕ ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಾಟಕ ಪ್ರದರ್ಶನ ಹಲವು ಮಿತಿಯಿಂದ ಕೂಡಿದೆ. ನಟರು ಪಾತ್ರದಿಂದ ದೂರವೇ ಉಳಿದಿದ್ದಾರೆ. ವಸ್ತು ಸನ್ನಿವೇಶ ವಿನ್ಯಾಸದಲ್ಲಿ ನಿರ್ದೇಶಕರು ಗಮನಹರಿಸಿಲ್ಲ. ನಟರಿಗೆ ಸ್ಪಷ್ಟತೆಯ ಕೊರತೆ ಇದೆ. ಹಲವಾರು ಸಂಭಾಷಣೆ ಮಿಸ್ ಆಗುತ್ತದೆ. ರಂಗಪರಿಕರಗಳ ಬಳಕೆಯಲ್ಲಿ ಗೊಂದಲ ಉಂಟಾಗಿದೆ. ತಾಲೀಮಿನ ಅವಶ್ಯಕತೆ ಇದೆ. ಕೆಲವು ದೃಶ್ಯಗಳನ್ನು ಚೂಯಿಂಗ್ ಗಮ್ಮಿನಂತೆ ಎಳೆಯಲಾಗಿದೆ. ದೃಶ್ಯ ಸಂಯೋಜನೆ ಇಲ್ಲ.

LEAVE A REPLY

Please enter your comment!
Please enter your name here

- Advertisment -

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...