Homeಕರೋನಾ ತಲ್ಲಣಕೊರೋನಾ ನಿರ್ವಹಣೆ, ಲಸಿಕೆ ವಿತರಣೆ ರಾಜ್ಯಗಳ ವಿಷಯ ಎಂದ ಕೇಂದ್ರ ಮಂತ್ರಿಗಳು: ಸಾಂಕ್ರಾಮಿಕದ ನಡುನೀರಲ್ಲಿ ಕೈಬಿಟ್ಟು...

ಕೊರೋನಾ ನಿರ್ವಹಣೆ, ಲಸಿಕೆ ವಿತರಣೆ ರಾಜ್ಯಗಳ ವಿಷಯ ಎಂದ ಕೇಂದ್ರ ಮಂತ್ರಿಗಳು: ಸಾಂಕ್ರಾಮಿಕದ ನಡುನೀರಲ್ಲಿ ಕೈಬಿಟ್ಟು ಪಲಾಯನಗೈದ ಕೇಂದ್ರ

ಕೇಂದ್ರ ಸರ್ಕಾರ ತನ್ನ ಗಾಢ ನಿದ್ರೆಯಿಂದ ಎಚ್ಚೆತ್ತುಕೊಂಡು ಬೆಳಗಿನ ಕಾಫಿಯನ್ನು ಹೀರುವುದರ ಜೊತೆಗೆ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಬೇಕು - ಸುಪ್ರೀಂ ಕೋರ್ಟ್

- Advertisement -
- Advertisement -

ಮೂಲ : ಕ್ವಿಂಟ್‌
ಅನುವಾದ : ರಾಜೇಶ್‌ ಹೆಬ್ಬಾರ್‌

ಕೇಂದ್ರದ ಬಹು ರಂಜಿತ ಲಸಿಕಾ ಅಭಿಯಾನದಲ್ಲಿ ಪ್ರಧಾನಿ ಮೋದಿಯವರ ಚಿತ್ರ ಎಲ್ಲೆಡೆ ರಾರಾಜಿಸುತ್ತಿದೆ. ಆದರೆ ಪ್ರಧಾನಿಯವರ ಸರ್ಕಾರ ಮಾತ್ರ ಎಲ್ಲರಿಗೂ ಲಸಿಕೆ ನೀಡುವುದು ರಾಜ್ಯಗಳ ಜವಾಬ್ಧಾರಿ, ಆರೋಗ್ಯ ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿರುವ ವಿಷಯ. ತಮ್ಮ ತಮ್ಮ ರಾಜ್ಯಗಳ ಜನರ ಆರೋಗ್ಯ ನಿರ್ವಹಣೆಗೆ ರಾಜ್ಯಗಳೇ ಕ್ರಮ ಕೈಗೊಳ್ಳಬೇಕು. ಕೇಂದ್ರ, ರಾಜ್ಯ ಸರ್ಕಾರಗಳಿಗೆ ಲಸಿಕೆ ಪೂರೈಕೆಯ ಎಲ್ಲಾ ಅಧಿಕಾರವನ್ನೂ ಬಿಟ್ಟುಕೊಟ್ಟಿದೆ ಎಂದು ಹೇಳಿ ಸಾಂಕ್ರಾಮಿಕದ ನಡುನೀರಿನಲ್ಲಿ ರಾಜ್ಯಗಳನ್ನು ಕೈಬಿಟ್ಟು ಪಲಾಯನ ಮಾಡುತ್ತಿದೆ.
ಕೇಂದ್ರ ಸರ್ಕಾರದ ಪಲಾಯನ ವಾದದ ನಡುವೆ ರಾಜ್ಯಗಳು ಲಸಿಕೆಗಳ ಪೂರೈಕೆಯಿಲ್ಲದೇ ಸಂಕಷ್ಟಕ್ಕೆ ಸಿಲುಕಿವೆ. ಆದರೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳು ಮೇಲಿಂದ ಮೇಲೆ ಕೋವಿಡ್‌ ವ್ಯಾಕ್ಸೀನ್‌ ಗಳಿಗಾಗಿ ಮನವಿ ಸಲ್ಲಿಸುತ್ತಿರುವುದು ಕಾಣಿಸುತ್ತಿಲ್ಲ. ಸಾಂಕ್ರಾಮಿಕದ ಬಿಕ್ಕಟ್ಟಿನ ನಡುವೆ ಏಕಾಏಕಿ ಕೇಂದ್ರ ಸರ್ಕಾರದ ಮಂತ್ರಿಗಳು ಲಸಿಕೆ ಪೂರೈಕೆಯನ್ನು ವಿಕೇಂದ್ರೀಕರಣ ಮಾಡಿದ್ದೇವೆ ಎಂದು ಹೇಳಿಕೆ ನೀಡತೊಡಗಿದ್ದಾರೆ.

ಆರೋಗ್ಯವು ರಾಜ್ಯಗಳ ಅಧಿಕಾರವ್ಯಾಪ್ತಿಯಲ್ಲಿದೆ. ಕೇಂದ್ರ ಸರ್ಕಾರದ ಹಲವು ಮಂತ್ರಿಗಳು ಮತ್ತು ನಾಯಕರು ಇದರ ಉಪಯೋಗಪಡೆದುಕೊಂಡು ತಮ್ಮ ವಿಫಲವಾದ ವ್ಯಾಕ್ಸಿನೇಶನ್‌ ಅಭಿಯಾನದ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರಗಳ ಹೆಗಲಮೇಲೆ ಹೊರಿಸುತ್ತಿದ್ದಾರೆ. ಕೇಂದ್ರದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್‌ ಅವರಿಂದ ಹಿಡಿದು ರೈಲ್ವೆ ಮಂತ್ರಿ ಪಿಯುಷ್‌ ಗೋಯಲ್‌ ವರೆಗೆ ಎಲ್ಲಾ ಕೇಂದ್ರ ಮಂತ್ರಿಗಳು ಕೋವಿಡ್‌ ನಿಯಂತ್ರಣದಲ್ಲಿನ ಕೇಂದ್ರಸರ್ಕಾರದ ವೈಫಲ್ಯವನ್ನು ರಾಜ್ಯ ಸರ್ಕಾರಗಳ ತಲೆಗೆ ಕಟ್ಟಲು ಮುಂದಾಗಿದ್ದಾರೆ. ಹಾಗದಾರೆ ಕೋವಿಡ್‌ ನಿಯಂತ್ರಣ ಮತ್ತು ವ್ಯಾಕ್ಸಿನೇಶನ್‌ ಪ್ರಕ್ರಿಯೆಯಲ್ಲಿ ಕೇಂದ್ರವು ರಾಜ್ಯಗಳಿಗೆ ಎಷ್ಟರ ಮಟ್ಟಿನ ಸ್ವಾತಂತ್ರ್ಯವನ್ನು ನೀಡಿದೆ ಎಂದು ಕೇಂದ್ರದ ಯಾವ ನಾಯಕರೂ ತಮ್ಮ ತುಟಿಬಿಚ್ಚುತ್ತಿಲ್ಲ.

ಆರೋಗ್ಯವು ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿರುವ ವಿಷಯ. ವಿಕೇಂದ್ರಿಕರಿಸಿದ ಲಸಿಕೆ ನೀತಿ ರಾಜ್ಯಗಳ ಸತತ ಬೇಡಿಕೆಗಳ ಪರಿಣಾಮವಾಗಿ ದೇಶದಲ್ಲಿ ಸಾಧ್ಯವಾಗಿದೆ. ಲಸಿಕೆ ನೀತಿಯಲ್ಲಿ ಇದುವರೆಗೆ ರಾಜ್ಯಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿಲ್ಲ. ದೇಶದಲ್ಲಿ ಉತ್ಪಾದನೆಯಾಗುವ ಲಸಿಕೆಗಳ ಮೇಲೆ ಕೇಂದ್ರ ಇದುವರೆಗೆ ತನ್ನ ಪ್ರಾಬಲ್ಯವನ್ನು ಹೊಂದಿದೆ. ರಾಜ್ಯಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡದೇ ಕೋವಿಡ್‌ ವ್ಯಾಕ್ಸಿನ್‌ ಗಳ ಪೂರೈಕೆಯಲ್ಲಿನ ಕೊರತೆಯನ್ನು ಸರಿಪಡಿಸುವ ಜವಾಬ್ದಾರಿಗಳನ್ನು ರಾಜ್ಯ ಸರ್ಕಾರಗಳ ಹೆಗಲಮೇಲೆ ಹಾಕುವುದರಿಂದ ಯಾವ ಪ್ರಯೋಜನವೂ ಇಲ್ಲ. ಜಗತ್ತಿನೆಲ್ಲೆಡೆ ಕೊರೋನಾ ಲಸಿಕೆಗಳ ಕೊರತೆ ಸಂಭವಿಸಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಾತ್ರ ವ್ಯಾಕ್ಸಿನ್‌ ಪೂರೈಕೆಯ ವ್ಯವಸ್ಥೆಯನ್ನು ಸರಿಪಡಿಸಬಹುದೇ ಹೊರತು ರಾಜ್ಯಗಳಿಂದ ಇದು ಸಾಧ್ಯವಿಲ್ಲ.

ಆದರೆ ಈಗ ಕೇಂದ್ರದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್‌ ಮಾತ್ರ ಲಸಿಕೆ ನೀತಿಯಲ್ಲಿ ರಾಜ್ಯ ಸರ್ಕಾರಗಳ ಒತ್ತಾಯದಂತೆ ಅವರಿಗೆ ಹೆಚ್ಚಿನ ಅಧಿಕಾರಗಳನ್ನು ನೀಡಿದ್ದೇವೆ. ಲಸಿಕೆ ಕೊರತೆಯಾದರೆ ಕೇಂದ್ರ ಏನೂ ಮಾಡಲು ಸಾಧ್ಯವಿಲ್ಲ ಎಂದು ತಮ್ಮ ಜವಾಬ್ಧಾರಿಯಿಂದ ಸಲೀಸಾಗಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಇನ್ನು ಕೇಂದ್ರ ಆರೋಗ್ಯ ಮಂತ್ರಿ ಹರ್ಷವರ್ಧನ್‌ ಕೇಂದ್ರದ ಲಸಿಕೆ ನೀತಿಯ ಬಗೆಗಿನ ಟೀಕೆಗಳಿಗೆ ‘Shared idealism’ ಫ್ಯಾನ್ಸಿ ಅಕ್ಷರಗಳಲ್ಲಿ ಉತ್ತರಗಳನ್ನು ನೀಡುತ್ತಿದ್ದಾರೆ. ಸಾಮಾನ್ಯ ಸಿದ್ಧಾಂತ ಅಥವಾ ಆದರ್ಶ ಈಗ ದೇಶಕ್ಕೆ ಬೇಕಾಗಿದೆ. ಅದರಿಂದ ಮಾತ್ರ ದೇಶದ ಸದ್ಯದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ಎನ್ನುತ್ತಿದ್ದಾರೆ.

“Shared idealism”, “State subject”, “Decentralization” – ಎಂಬ ವರ್ಣರಂಜಿತ ಪದಗಳ ಮೂಲಕ ಕೇಂದ್ರ ಸರ್ಕಾರದ ಮಂತ್ರಿಗಳು ಜನರ ಗಮನವನ್ನು ಬೇರೆಡೆಗೆ ಸೆಳೆದು ಮತ್ತು ಕೊರೋನಾ ಸಾಂಕ್ರಾಮಿಕದ ನಿರ್ವಹಣೆಯಲ್ಲಿನ ಕೇಂದ್ರದ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ದೇಶದ ಸರ್ವೋಚ್ಛ ನ್ಯಾಯಾಲಯ ಮತ್ತು ಇತರ ಹೈಕೋರ್ಟ್‌ ಗಳು ಕೊರೋನಾ ನಿರ್ವಹಣೆಯ ಕುರಿತು ಕೇಳಿದ ಪ್ರಶ್ನೆಗಳಿಗೆ ಇದುವರೆಗೆ ಸಮರ್ಪಕವಾಗಿ ಉತ್ತರಿಸದ ಕೇಂದ್ರ ಸರ್ಕಾರ ಈಗ ನ್ಯಾಯಾಲಯದ ಆದೇಶಗಳಿಗೆ ಮತ್ತು ಕಾನೂನಿಗೆ ವ್ಯತಿರಿಕ್ತವಾಗಿ ತನ್ನ ನಿಲುವಗಳನ್ನು ಪ್ರದರ್ಶಿಸುತ್ತಿದೆ. ಒಂದು ವೇಳೆ ಕೇಂದ್ರವು ರಾಜ್ಯ ಸರ್ಕಾರಗಳನ್ನು ಕೋವಿಡ್‌ ಸಾಂಕ್ರಾಮಿಕದ ವೈಫಲ್ಯಕ್ಕೆ ಹೊಣೆಗಾರರನ್ನಾಗಿ ಮಾಡುವುದೇ ಆದರೆ ಆರಂಭದಲ್ಲಿಯೇ ಇದನ್ನು ಹೇಳಬೇಕಿತ್ತು. ಜನವರಿ 16, 2021 ರಂದು ಕೊರೋನಾ ಸಾಂಕ್ರಾಮಿಕದ ನಿರ್ವಹಣೆಯಲ್ಲಿ ಭಾರತ ವಿಜಯ ಸಾಧಿಸಿದೆ ಎಂದು ಜಾಗತಿಕ ಎಕನಾಮಿಕ್‌ ಸಮ್ಮೇಳನದಲ್ಲಿ ಪ್ರಧಾನಿಗಳು ತಮ್ಮ ಎದೆ ಉಬ್ಬಿಸಿಕೊಂಡು ಹೇಳುವ ಅಗತ್ಯವಾದರೂ ಏನಿತ್ತು? ಆರೋಗ್ಯ ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿಯಲ್ಲಿರುವ ವಿಷಯವಾದರೂ ಸಾಂಕ್ರಾಮಿಕವು ಕೇಂದ್ರದ ಅಧಿಕಾರ ವ್ಯಾಪ್ತಿಯಲ್ಲಿರುವ ವಿಷಯ ಎಂಬುದು ಸಂವಿಧಾನದ 7 ನೇ ಶೆಡ್ಯೂಲ್‌ ನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಕೇಂದ್ರ ಸರ್ಕಾರ ತನ್ನ ಪ್ರೊಪಗೆಂಡಾಗಳ ಮೂಲಕ ಅಷ್ಟು ಸುಲಭವಾಗಿ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದೇಶದಲ್ಲಿ 2021 ಮೇ ಮತ್ತು ಏಪ್ರಿಲ್‌ ಗಳಲ್ಲಿ ಉದ್ಭವವಾದ ಅವ್ಯವಸ್ಥೆ ಮತ್ತು ಅರಾಜಕತೆಗೆ ರಾಜ್ಯ ಸರ್ಕಾರಗಳ ವೈಫಲ್ಯ ಮಾತ್ರ ಕಾರಣವಲ್ಲ. ಕೇಂದ್ರದ ನಿರ್ಲಕ್ಷ್ಯವೂ ಇದಕ್ಕೆ ಪರೋಕ್ಷ ಕಾರಣ.

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಗಳಿಗೆ ಸಾಂಕ್ರಾಮಿಕವನ್ನು ಹರಡುವಂತೆ ತಡೆಯುವುದು ಎಂದು ಸಂವಿಧಾನದ 7 ನೇ ಶೆಡ್ಯೂಲ್‌ ನ ರಾಜ್ಯ ಮತ್ತು ಕೇಂದ್ರದ ಅಧಿಕಾರ ವ್ಯಾಪ್ತಿಯಿರುವ ಸಮವರ್ತಿ ಪಟ್ಟಿಯಲ್ಲಿನ 29 ನೇ ಆರ್ಟಿಕಲ್ ಹೇಳುತ್ತದೆ. ಈ ಮೂಲಕ ಸ್ಪಷ್ಟವಾಗುವುದೇನೆಂದರೆ ಕೊರೋನಾ ನಿರ್ವಹಣೆಗೆ ಸಂಬಂಧಿಸಿದ ಕಾನೂನುಗಳನ್ನು ಮಾಡುವುದು ಕೇವಲ ರಾಜ್ಯಗಳ ಜವಾಬ್ದಾರಿಯಲ್ಲ. ಕೇಂದ್ರ ಸರ್ಕಾರ ಕೂಡ ಸಾಂಕ್ರಾಮಿಕಗಳನ್ನು ತಡೆಯುವ ಹೊಣೆಗಾರಿಕೆಯನ್ನು ಹೊಂದಿದೆ ಎಂದು.

ಸುಪ್ರೀಂ ಕೋರ್ಟ್‌ ಕೂಡ ಏಪ್ರಿಲ್‌ 27, 2021ರ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ಕೋವಿಡ್‌ ಸಾಂಕ್ರಾಮಿಕದ ಬಿಕ್ಕಟ್ಟಿನ ವಿಷಯವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಳ್ಳುವ ಮುನ್ನ ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಕೇಂದ್ರದ ಹೊಣೆಗಾರಿಕೆಯನ್ನು ಹೇಳಿದೆ. ಕೋವಿಡ್‌ ಸಂಕ್ರಾಮಿಕವು ರಾಜ್ಯಗಳ ಗಡಿಯನ್ನು ದಾಟಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹರಡುತ್ತಿರುವಾಗ ಕೊರೋನಾ ನಿಯಂತ್ರಣಕ್ಕೆ ದೇಶವ್ಯಾಪಿ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರವನ್ನು ಕೇಳಲೇ ಬೇಕಾಗುತ್ತದೆ. ಸಾಂಕ್ರಾಮಿಕವು ರಾಷ್ಟ್ರೀಯ ವಿಪತ್ತಾಗಿರುವುದರಿಂದ ಜನರ ರಕ್ಷಣೆ ಮತ್ತು ಸಾಂಕ್ರಾಮಿಕದ ನಿಯಂತ್ರಣ ಕೇಂದ್ರ ಸರ್ಕಾರದ ಹೊಣೆಗಾರಿಕೆ ಮತ್ತು ಮೊದಲ ಆದ್ಯತೆಯಾಗಿರಬೇಕು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಹಾಗಿದ್ದಾಗ ನರೇಂದ್ರ ಮೋದಿ ಸರ್ಕಾರದ ಮಂತ್ರಿಗಳು ರಾಜ್ಯ ಸರ್ಕಾರಗಳನ್ನು ಕೊರೋನಾ ನಿಯಂತ್ರಣದ ವೈಫಲ್ಯಕ್ಕೆ ಹೊಣೆಮಾಡುವದಕ್ಕೆ ಯಾವುದೇ ಅರ್ಥವಿಲ್ಲ ಮತ್ತು ಮಂತ್ರಿಗಳ ಹೇಳಿಕೆಗೆ ಯಾವ ಆಧಾರಗಳೂ ಇಲ್ಲ.

ವ್ಯಾಕ್ಸಿನೇಶನ್‌ ಹೊಣೆಗಾರಿಕೆಯಿಂದ ಕೇಂದ್ರ ತಪ್ಪಿಸಿಕೊಳ್ಳುವ ಹಾಗಿಲ್ಲ..

ಕೇಂದ್ರ ಹೇಳುತ್ತಿರುವ ಲಿಬರಲೈಸ್ಡ್‌, ಡಿಸೆಂಟ್ರಲೈಸ್ಡ್‌ ವ್ಯಾಕ್ಸೀನ್‌ ನೀತಿಗೆ ಅರ್ಥವಿಲ್ಲ. ಕೇಂದ್ರ ಸರ್ಕಾರವು 45 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡುತ್ತದೆ. ರಾಜ್ಯಗಳು 18 ರಂದ 45 ವಯೋಮಾನದವರಿಗೆ ಲಸಿಕೆ ನೀಡಲಿ ಎಂಬ ಸರ್ಕಾರದ ವಾದ ಅತ್ಯಂತ ಉಢಾಪೆಯ ಉತ್ತರವಾಗಿ ಕಾಣಿಸುತ್ತದೆ. ದೇಶದಲ್ಲಿ ಉತ್ಪಾದನೆಯಾದ ಶೇ. 50 ರಷ್ಟು ವ್ಯಾಕ್ಸಿನ್‌ ಕೇಂದ್ರವೇ ಖರೀದಿ ಮಾಡುತ್ತಿದೆ. ಮತ್ತು ಅದಕ್ಕೆ ಸಬ್ಸಿಡಿಯ ದರದಲ್ಲಿ ವ್ಯಾಕ್ಸೀನ್‌ ಗಳನ್ನು ಖರೀದಿಸುತ್ತಿದೆ. ಆದರೆ ರಾಜ್ಯ ಸರ್ಕಾರಗಳು ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ವ್ಯಾಕ್ಸೀನ್‌ ಗಳ ಖರೀದಿಯನ್ನು ಮಾಡುತ್ತಿವೆ. ಜೊತೆಗೆ ಜಾಗತಿಕ ಟೆಂಡರ್‌ ಮೂಲಕ ಅಂತರಾಷ್ಟ್ರೀಯ ಮಾರುಕಟ್ಟೆಯಿಂದ ವ್ಯಾಕ್ಸೀನ್‌ ಖರೀದಿಯನ್ನು ಮಾಡಲು ಮುಂದಾಗಿವೆ. ಈಗ ಕೇಂದ್ರ ಸರ್ಕಾರ ದೇಶದ 50% ವ್ಯಾಕ್ಸೀನುಗಳನ್ನು ಅತ್ಯಂತ ಕಡಿಮೆ ಬೆಲೆಗೆ ತನ್ನಲ್ಲಿ ಹೊಂದಿ ರಾಜ್ಯಗಳು ಪರಿಣಾಮಕಾರಿಯಾಗಿ ವ್ಯಾಕ್ಸಿನೇಶನ್‌ ಪ್ರಕ್ರಿಯೆಯನ್ನು ಜಾರಿಗೊಳಿಸುತ್ತಿಲ್ಲವೆಂದು ಹೇಳುವುದು ಅತ್ಯಂತ ಬೇಜವಬ್ದಾರಿಯ ಸಂಗತಿ. ಜೊತೆಗೆ ರಾಜ್ಯಗಳು ಇಂದಿಗೂ ತಮ್ಮ ಪಾಲಿನ ವ್ಯಾಕ್ಸೀನ್‌ ಗಾಗಿ ಕೇಂದ್ರದ ಬಳಿ ದೀನವಾಗಿ ಬೇಡುವ ಪರಿಸ್ಥಿತಿ ಇದೆ. ಹೀಗಿರುವಾಗ ವ್ಯಾಕ್ಸಿನೇಶನ್‌ ಪ್ರಕ್ರಿಯೆಯ ವಿಳಂಬ ಮತ್ತು ವೈಫಲ್ಯಕ್ಕೆ ಹೊಣೆಗಾರರು ಯಾರು ಕೇಂದ್ರ ಸರ್ಕಾರವೋ ಅಥವಾ ರಾಜ್ಯ ಸರ್ಕಾರಗಳೋ ?

ಕೇಂದ್ರ ಸರ್ಕಾರ ಹೇಳುವ ಲಿಬ್ರಲೈಸ್ಡ್‌ ಮತ್ತು ಡಿಸೆಂಟ್ರಲೈಸ್ಡ್‌ ವ್ಯಾಕ್ಸಿನೇಶನ್‌ ಪಾಲಿಸಿಯು ದೇಶ ಇದುವರೆಗೆ ನಡೆಸಿಕೊಂಡು ಬಂರುತ್ತಿರುವ ಔಷಧಿ ನೀತಿಗೆ ವಿರುದ್ಧವಾಗಿದೆ. ಇತಿಹಾಸವನ್ನು ನೋಡಿದರೆ ಇದುವರೆಗಿನ ಎಲ್ಲಾ ಕೇಂದ್ರ ಸರ್ಕಾರಗಳು ಸ್ವತಹ ತಾವೇ ವ್ಯಾಕ್ಸೀನ್‌ ಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡಿವೆ. ಅದು ಮೆಸ್ಲೆಸ್‌ ವ್ಯಾಕ್ಸೀನ್‌ ಇರಬಹುದು ಅಥವಾ ಹೆಚ್‌ಪಿವಿ ವ್ಯಾಕ್ಸೀನ್‌ ಇರಬಹುದು ಇದುವರೆಗಿನ ಯಾವ ಕೇಂದ್ರ ಸರ್ಕಾರವು ರಾಜ್ಯಗಳಿಗೆ ವ್ಯಾಕ್ಸೀನ್‌ ಆಮದು ಮಾಡಿಕೊಳ್ಳಲು ಹೇಳಿದ ನಿದರ್ಶನಗಳಿಲ್ಲ. ಭಾರತದ ಇತಿಹಾಸದಲ್ಲಿ ಇದುವರೆಗೆ ಒಮ್ಮೆಯೂ ಔಷಧಿಗಳಿಗಾಗಿ ರಾಜ್ಯ ಸರ್ಕಾರಗಳು ಜಾಗತಿಕ ಟೆಂಡರ್‌ ಪ್ರಕ್ರಿಯೆಗಳನ್ನು ನಡೆಸಿದ ಉದಾಹರಣೆಗಳಿಲ್ಲ. ಕೇಂದ್ರ ಸರ್ಕಾರ ವ್ಯಾಕ್ಸೀನ್‌ ಗಳನ್ನು ಖರೀದಿಸುವುದು ʼರಾಷ್ಟ್ರೀಯ ರೋಗನೀರೋಧಕತೆʼ ಮತ್ತು ʼರಾಷ್ಟ್ರೀಯ ಆರೋಗ್ಯ ಅಭಿಯಾನʼ ಯೋಜನೆಯ ಒಂದು ಭಾಗವಾಗಿಯೇ ಇದುವರೆಗೆ ನಡೆದುಕೊಂಡು ಬಂದಿದೆ.

ವ್ಯಾಕ್ಸೀನ್‌ಗಳ ಆಮದಿನ ಜೊತೆಗೆ ದೇಶದಲ್ಲೇ ತಯಾರಾಗುವ ಲಸಿಕೆಗಳಲ್ಲೂ ಕೇಂದ್ರ ಸರ್ಕಾರವೇ ದೊಡ್ಡ ಖರೀದಿದಾರನಾಗಿ ಇದುವರೆಗೆ ನಡೆದುಕೊಂಡಿದೆ.

ವಿಕೇಂದ್ರಕೃತ ಲಸಿಕೆ ನೀತಿಗಳಿಗೆ ನ್ಯಾಯಾಲಯಗಳ ಟೀಕೆ

ಆರೋಗ್ಯ ನಿರ್ವಹಣೆ ರಾಜ್ಯಗಳಿಗೆ ಸಂಬಂಧಿಸಿದ್ದು ಮತ್ತು ವಿಕೇಂದ್ರೀಕೃತ ಲಸಿಕೆ ಎಂಬ ಕೇಂದ್ರದ ವಾದವನ್ನು ದೇಶದ ಅನೇಕ ನ್ಯಾಯಾಲಯಗಳು ಅಲ್ಲಗಳೆದಿವೆ. ಮೇ 31 ರಂದು ಸುಪ್ರೀಂ ಕೋರ್ಟ್‌ ವ್ಯಾಕ್ಸೀನ್‌ ಪೂರೈಕೆಯ ಕುರಿತು ಕೇಂದ್ರ ಸರ್ಕಾರದ ದ್ವಿಮುಖ ನೀತಿಯ ಹಿಂದಿನ ತರ್ಕವನ್ನು ಸುಪ್ರೀಂ ಕೋರ್ಟ್‌ ಪ್ರಶ್ನೆ ಮಾಡಿದೆ. “ನೀವು ಒಂದು ರಾಜ್ಯ ಸರ್ಕಾರ ಮತ್ತೊಂದು ರಾಜ್ಯಸರ್ಕಾರದೊಂದಿಗೆ ಮತ್ತೊಂದು ಖಾಸಗಿ ಸಂಸ್ಥೆಗಳೊಂದಿಗೆ ವ್ಯಾಕ್ಸೀನ್‌ ಖರೀದಿಗೆ ಪೈಪೋಟಿಯನ್ನು ನಡೆಸಬೇಕೆಂದು ಪೈಪೋಟಿಯನ್ನು ನಡೆಸಬೇಕೆಂದು ಬಯಸುತ್ತೀರೋ? ಯಾಕೆ ನೀವು ನೇರವಾಗಿ ಹೇಳುವುದಿಲ್ಲ ನಾವು ಕೇಂದ್ರ ಸರ್ಕಾರ ನಮಗೆ ಯಾವುದು ಸರಿ ಎಂಬುದು ತಿಳಿದಿದೆ ಎಂದು. ನ್ಯಾಯಲಯಕ್ಕೆ ಸಂಪೂರ್ಣ ಶಕ್ತಿಯಿದೆ ನಿಮ್ಮ ಇಂತಹ ನೀತಿಗಳನ್ನು ಕೆಡವಲು” ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ.

ಕೊರೋನಾ ಬಿಕ್ಕಟ್ಟಿನ ಸ್ವಯಂಪ್ರೇರಿತ ಪ್ರಕರಣವನ್ನು ವಿಚಾರಣೆ ನಡೆಸುತ್ತ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನು ವ್ಯಾಪಕವಾಗಿ ತರಾಟೆಯನ್ನು ತೆಗೆದುಕೊಂಡಿದೆ. “ಕೇಂದ್ರ ಸರ್ಕಾರ ತನ್ನ ಗಾಢ ನಿದ್ರೆಯಿಂದ ಎಚ್ಚೆತ್ತುಕೊಂಡು ಬೆಳಗಿನ ಕಾಫಿಯನ್ನು ಹೀರುವುದರ ಜೊತೆಗೆ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಬೇಕು” ಎಂದು ಕೋವಿಡ್‌ ನಿರ್ವಹಣೆಯಲ್ಲಿನ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ದ ಕುರಿತು ಕಠಿಣ ಎಚ್ಚರಿಕೆಯನ್ನು ನೀಡಿದೆ.

ನಾವು ಕೇಂದ್ರ ಸರ್ಕಾರದ ವ್ಯಾಕ್ಸಿನೇಶನ್‌ ಪಾಲಿಸಿಯನ್ನು ನೋಡ ಬಯಸುತ್ತೇವೆ. ನಮಗೆ ಕೇಂದ್ರ ಸರ್ಕಾರದ ವ್ಯಾಕ್ಸೀನ್‌ ಖರೀದಿಯ ದ್ವಿಮುಖ ನೀತಿಯ ಹಿಂದಿನ ತರ್ಕ ಅರ್ಥವಾಗುತ್ತಿಲ್ಲ. ಗೋವಾ ಮತ್ತು ಉತ್ತರಖಂಡಗಳಂತಹ ರಾಜ್ಯಗಳು ತಮ್ಮ ವ್ಯಾಕ್ಸೀನ್‌ ಗಳನ್ನು ತಾವೇ ಖರೀದಿ ಮಾಡಲು ಹೇಗೆ ಸಾಧ್ಯ? ಚಿಕ್ಕ ರಾಜ್ಯಗಳು ತಾವಾಗಿಯೇ ಹೇಗೆ ಎಲ್ಲರಿಗೂ ವ್ಯಾಕ್ಸೀನ್‌ ಖರೀದಿ ಮಾಡಬೇಕು ಎಂದು ಹೇಗೆ ಹೇಳುತ್ತೀರಿ? ಇದನ್ನು ನೀವು ಯಾವ ಆಧಾರದ ಮೇಲೆ ಸಮರ್ಥಿಸಿಕೊಳ್ಳುತ್ತೀರಿ? ನಿಮಗೆ ದೇಶದ ಎಲ್ಲಾ ಜನರಿಗೂ ವ್ಯಾಕ್ಸೀನ್‌ ಪೂರೈಸಲು ಸಾಧ್ಯವಾಗುವುದಿಲ್ಲವೆಂದಾದರೆ ಅದನ್ನು ಹೇಳಿಬಿಡಿ. ನ್ಯಾಯಾಲಯ ತನ್ನದೇ ರೀತಿಯಲ್ಲಿ ರಾಜ್ಯಗಳಿಗೆ ಮಾರ್ಗದರ್ಶನ ನೀಡುತ್ತದೆ. ಆದರೆ ಅದನ್ನು ಬಿಟ್ಟು ರಾಜ್ಯಗಳು ಹೆಚ್ಚಿನ ಬೆಲೆಗೆ ವ್ಯಾಕ್ಸೀನ್‌ ಖರೀದಿ ಮಾಡಬೇಕು ಎಂದು ಯಾಕೆ ಹೇಳುತ್ತೀರಿ. ದೇಶದ ಎಲ್ಲಾ ಭಾಗಗಳಲ್ಲಿಯೋ ಒಂದೇ ಬೆಲೆಗೆ ವ್ಯಾಕ್ಸೀನ್‌ ಸಿಗುವಂತೆ ನೋಡಿಕೊಳ್ಳುವುದು ಕೇಂದ್ರದ ಜವಾಬ್ದಾರಿ. ಕೇಂದ್ರ ಸರ್ಕಾರ ಒಂದು ಬೆಲೆಗೆ ಮತ್ತು ರಾಜ್ಯ ಸರ್ಕಾರಗಳು ಇನ್ನೊಂದು ಬೆಲೆಗೆ ವ್ಯಾಕ್ಸೀನ್‌ ಖರೀದಿ ಮಾಡುವಂತಹ ವ್ಯವಸ್ಥೆ ನ್ಯಾಯಸಮ್ಮತವಾದುದ್ದಲ್ಲ ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರದ ವ್ಯಾಕ್ಸೀನ್‌ ಖರೀದಿಯಲ್ಲಿನ ತಾರತಮ್ಯ ನೀತಿಯ ಕುರಿತು ತನ್ನ ಅಸಮಾಧನವನ್ನು ಹೊರಹಾಕಿದೆ.

ಮೇ 27 ರಂದು ವ್ಯಾಕ್ಸೀನ್‌ಗಳ ಕೊರತೆಗೆ ಸಂಬಂಧಿಸಿದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ವ್ಯಾಕ್ಸೀನ್‌ ಪೂರೈಕೆಯಲ್ಲಿ ಸಮಾನ ಜವಾಬ್ಧಾರಿಯನ್ನು ತೆಗೆದುಕೊಳ್ಳಬೇಕು. ಸಂವಿಧಾನದ ಅನುಚ್ಛೇದ 14 ರ ಅನ್ವಯ ಕೇಂದ್ರ ಮತ್ತು ರಾಜ್ಯಗಳು ಸಮಾನ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಕೇಂದ್ರ ಸರ್ಕಾರದ ವ್ಯಾಕ್ಸೀನ್‌ ನೀತಿಯನ್ನು ಪುನರ್ ಪರಿಶೀಲಿಸುವಂತೆ ಮಧ್ಯ ಪ್ರದೇಶ ಹೈಕೋರ್ಟ್‌ ಮೇ 25 ರಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಇದೇ ಸಂದರ್ಭದಲ್ಲಿ ಮಧ್ಯಪ್ರದೇಶ ಹೈ ಕೋರ್ಟ್‌ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅಗತ್ಯವಿರುವ ವ್ಯಾಕ್ಸೀನ್‌ ಪೂರೈಕೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲೇಬೇಕು. ಎಲ್ಲಾ ರಾಜ್ಯಗಳಲ್ಲೂ ಲಸಿಕೆ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲು ವ್ಯಾಕ್ಸೀನ್‌ ಉತ್ಪಾದಕ ಕಂಪನಿಗಳಿಗೆ ಅಗತ್ಯ ಲೈಸೆನ್ಸ್‌ ನೀಡಿ ವ್ಯಾಕ್ಸೀನ್‌ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಸದ್ಯಕ್ಕೆ ವ್ಯಾಕ್ಸೀನ್‌ ಕೊರತೆಯನ್ನು ನೀಗಿಸಲು ದೇಶದ ಮುಂದೆ ಇರುವ ಪರಿಹಾರ ಇದೊಂದೇ ಎಂದು ಮಧ್ಯಪ್ರದೇಶ ಹೈಕೋರ್ಟ್ ಮೇ 25 ರಂದು ಕೇಂದ್ರ ಸರ್ಕಾರಕ್ಕೆ ಹೇಳೀದೆ.

ಕೇಂದ್ರ ಸರ್ಕಾರದ ಕಿವಿಗಳನ್ನು ತಲುಪದೇ ಹೋದ ನ್ಯಾಯಾಲಯದ ಟೀಕೆ ಮತ್ತು ಆಕ್ಷೇಪಗಳು

ಸುಪ್ರೀಂ ಕೋರ್ಟ್‌ ಸೇರಿ ದೇಶದ ವಿವಿಧ ಹೈಕೋರ್ಟ್‌ ಗಳ ನಿರ್ದೇಶನಗಳು ಮತ್ತು ಟೀಕೆ ಕೇಂದ್ರ ಸರ್ಕಾರದ ಕಿವಿಗೆ ಬೀಳುತ್ತಲೇ ಹೋಗುತ್ತಿಲ್ಲ. ಕೇಂದ್ರ ಸರ್ಕಾರ ತನ್ನ ವ್ಯಾಕ್ಸಿನೇಶನ್‌ ನೀತಿಯಿಂದ ಒಂದೇ ಒಂದು ಇಂಚು ಇದುವರೆಗೆ ಹಿಂದೆ ಸರಿದಿಲ್ಲ. ನ್ಯಾಯಾಲಯಗಳಲ್ಲಿ ಮೇಲಿಂದ ಮೇಲೆ ಆರೋಗ್ಯ ನಿರ್ವಹಣೆ ರಾಜ್ಯಗಳ ಹೊಣೆ ಎಂದು ಅಫಿಡೆವಿಟ್‌ ಗಳನ್ನು ಸಲ್ಲಿಸುತ್ತ ಅಂತಹದೇ ಹೇಳಿಕೆಗಳನ್ನು ನೀಡುತ್ತ ತನ್ನ ಜವಾಬ್ಧಾರಿಗಳಿಂದ ಪಲಾಯನ ದಾರಿಯನ್ನು ಹಿಡಿದಿದೆ. ಸಾರ್ವಜನಿಕವಾಗಿಯೂ ಲಸಿಕೆ ಗಳನ್ನು ಪೂರೈಸುವುದು ರಾಜ್ಯ ಸರ್ಕಾರಗಳ ಹೊಣೆಗಾರಿಕೆ. ಲಸಿಕೆ ಅಭಿಯಾನದ ವೈಫಲ್ಯಕ್ಕೆ ರಾಜ್ಯ ಸರ್ಕಾರಗಳೇ ಕಾರಣ ಎಂದು ಕೇಂದ್ರ ಸರ್ಕಾರದ ಮಂತ್ರಿಗಳ ಹಿಂಡು ಸಾರ್ವಜನಿಕವಾಗಿ ಬಿಂಬಿಸಲು ಆರಂಭಿಸಿದೆ.

ರಾಜ್ಯ ಸರ್ಕಾರಗಳ ಮೇಲೆ ವೈಫಲ್ಯದ ಹೊಣೆಗಾರಿಕೆಯನ್ನು ಹೊರಿಸುವುದು, ತನ್ನ ಕೈಲಾಗದ ವೇಳೆ ರಾಜ್ಯಗಳಿಗೆ ನೀವೇ ಯೋಜನೆಗಳನ್ನು ಜಾರಿಗೊಳಿಸಿ ಎಂದು ಹೇಳುವುದು ಒಕ್ಕೂಟ ವ್ಯವಸ್ಥೆ ಇದುವರೆಗೆ ಪಾಲಿಸಿಕೊಂಡು ಬಂದಿರುವ ತತ್ವಗಳಿಗೆ ವಿರುದ್ಧವಾದ ಕೇಂದ್ರ ಸರ್ಕಾರದ ನಡೆ. ಜೊತೆಗೆ ಇದೊಂದು ಕೇಂದ್ರ ಸರ್ಕಾರದ ಅತಿದೊಡ್ಡ ಹಿಪೊಕ್ರಸಿ. ಲಸಿಕೆ ಅಭಿಯಾನದ ಜಾಹೀರಾತುಗಳಲ್ಲೆಲ್ಲ ಪ್ರಧಾನಿ ಮೋದಿಯ ಮುಖವೇ ರಾರಾಜಿಸುತ್ತಿರುವಾಗ ಕೇಂದ್ರ ಸರ್ಕಾರ ವ್ಯಾಕ್ಸಿನೇಶನ್‌ ನ ತನ್ನ ಜವಾಬ್ಧಾರಿಯಿಂದ ಹಿಂದೆ ಸರಿಯುವುದನ್ನು ಏನೆನ್ನಬೇಕು? ಕೋವಿನ್‌ ಮತ್ತು ವ್ಯಾಕ್ಸಿನೇಶನ್‌ ಪ್ರಮಾಣಪತ್ರಗಳಲ್ಲೂ ಪ್ರಧಾನಿಗಳ ಭಾವಚಿತ್ರವೇ ಇರುವಾಗ ಯೋಜನೆಯ ಯಶಸ್ಸಿನ ಲಾಭ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಪಡೆಯುತ್ತಿರುವಾಗ ರಾಜ್ಯ ಸರ್ಕಾರಗಳೇಕೆ ಲಸಿಕೆ ಪೂರೈಕೆಗೆ ಮುಂದಾಗಬೇಕು? ಯೋಜನೆಯ ಶ್ರೇಯ ಮತ್ತು ಕೀರ್ತಿ ಯಾರಿಗೆ ಸಲ್ಲುತ್ತದೋ ಅವರೇ ಲಸಿಕೆಗಳನ್ನು ಪೂರೈಸಲಿ ಎಂದು ಅನೇಕ ರಾಜ್ಯಗಳು ತಮ್ಮ ಪಾಡಿಗೆ ತಾವು ಸುಮ್ಮನಾಗಲು ಕೇಂದ್ರ ಸರ್ಕಾರ ಈಗ ಅವಕಾಶ ಮಾಡಿಕೊಟ್ಟಿದೆ. ತಮ್ಮದು ತಾಯಿ ಹೃದಯ ಎನ್ನುವ ಪ್ರಧಾನಿ ಮೋದಿಯವರ ಅವರ ಕಣ್ಣಿಗೆ ಕೇಂದ್ರ ಸರ್ಕಾರದ ಮಕ್ಕಳಂತಿರುವ ರಾಜ್ಯಸರ್ಕಾರಗಳು ಲಸಿಕೆಗಳ ಕೊರತೆ ಮತ್ತು ಕೊರೋನಾ ಸಾಂಕ್ರಾಮಿಕದ ನಿರ್ವಹಣೆಯ ಸಂಕಷ್ಟಕ್ಕೆ ಸಿಲುಕಿರುವುದು ಕಾಣಿಸುತ್ತಿಲ್ಲವೇ?


ಇದನ್ನೂ ಓದಿ: ಮಾನ್ಯ ಪ್ರಧಾನಿಗಳೇ ಕೊರೋನಾ ಲಸಿಕೆಗಳೆಲ್ಲಿ? ಎಲ್ಲಿ ನೀವು ಹೇಳಿದ ಕೊರೋನಾ ವಿರುದ್ಧದ ಜಯ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...