Homeಕರೋನಾ ತಲ್ಲಣಕೊರೊನಾ ತಂದೆಳೆದ ಕೃಷಿ ಸಂಕಷ್ಟಗಳು ಮತ್ತು ಪ್ರಭುತ್ವದ ಹೊಣೆಗಾರಿಕೆ: ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ

ಕೊರೊನಾ ತಂದೆಳೆದ ಕೃಷಿ ಸಂಕಷ್ಟಗಳು ಮತ್ತು ಪ್ರಭುತ್ವದ ಹೊಣೆಗಾರಿಕೆ: ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ

- Advertisement -
- Advertisement -

“ಸಾಲ ಮಾಡಿ ಬಂಡವಾಳ ತಂದು, ಉತ್ತು-ಬಿತ್ತಿ ಸುಗಂಧರಾಜ ಮತ್ತು ಕನಕಾಂಬರ ಹೂ ಬೆಳೆದಿದ್ದೇನೆ, ಮಾರುಕಟ್ಟೆಗೆ ಸಾಗಿಸಲು ವಾಹನಗಳಿಲ್ಲ, ಕೊಳ್ಳಲು ಜನ ಇಲ್ಲ, ಗಿಡದಲ್ಲಿ ಹಾಗೇ ಬಿಟ್ಟಿದ್ದೀನಿ”. ಹುಲುಸಾಗಿ ಬೆಳೆದ ಹೂವನ್ನು ಕಿತ್ತು ಮಾರಿದರೆ ಕೊಟ್ಟ ಕೂಲಿಯೂ ದಕ್ಕದೆಂಬ ಕಾರಣಕ್ಕೆ ಅವುಗಳನ್ನು ಗಿಡದಲ್ಲಿಯೇ ಒಣಗಲು ಬಿಟ್ಟು ತಲೆಮೇಲಿ ಕೈ ಹೊತ್ತು ಕುಳಿತ ರೈತನೊಬ್ಬನ ಅಳಲು. “ಕಲ್ಲಂಗಡಿ, ಕರಬೂಜ ಬೆಳೆದಿದ್ದೇನೆ, ಮಾರ್ಕೆಟ್‌ಗೆ ಒಯ್ಯೋಕ್ಕಾಗ್ತಿಲ್ಲ, ಇಲ್ಲೇ ಬಂದು ಕೊಳ್ಳೊರ್ ಕೇಳೋ ಬೆಲೆ ಏನೇನೂ ಸಾಲದು. ಆದ್ರೆ ಅವ್ರು ಮಾತ್ರ ಮಾರೋದ್ ಅದ್ರ ಡಬ್ಬಲ್ ಬೆಲೆಗೆ”. ಹಣ್ಣು ಬೆಳೆದು ಹಣ್ಣುಗಾಯಿಯಾದವನ ಅಳಲು. ರೈತರಿಂದ ಹಣ್ಣುಗಳನ್ನು ಕೊಂಡು ತಂದು ಮಾರುಕಟ್ಟೆಯಲ್ಲಿ ಮಾರುವವರನ್ನು ಕೇಳಿದರೆ, “ಹೌದು, ನಾವು ಮಾರೋದೇ ಹಂಗೆ. ಹೊಲದಿಂದ ಖರೀದಿಸಿ ಮಾರುಕಟ್ಟೆಗೆ ಸಾಗಿಸಲು ವಾಹನ ಸೌಲಭ್ಯ ಇಲ್ಲದಿರುವಾಗ, ಏನೇನೋ ಮಾಡಿ ಇಲ್ಲಿಗೆ ತಂದ್ರೆ ಒಂದೇ ದಿನ ಎಲ್ಲಾನೂ ಖರ್ಚಾಗೋಲ್ಲ. ಕಾಲ್ ಭಾಗ ಕೊಳ್‌ತ್ರೆ ಮಾಡೋದೇನು? ಇರೋವ್ನೆ ಜಾಸ್ತಿ ಬೆಲೆಗೆ ಮಾರ್‍ಬೇಕು. ಅದೂ ಗಿರಾಕಿಗಳು ಬಂದ್ರೆ. ಇಲ್ದಿದ್ರೆ ಇಲ್ಲ. ಹತ್ತು ಗಂಟೆಗೆಲ್ಲಾ ಪೊಲೀಸ್‌ನೋರ್ ಬಂದು ಕ್ಲೋಸ್ ಮಾಡ್‌ಸ್ತಾರೆ”, ಇದು ಮಾರುವರ ಕಷ್ಟ.

ಸೀಬೆಹಣ್ಣು ಬೆಳೆದ ರೈತನೊಬ್ಬ ಕೊಳ್ಳುವ ಸಗಟು ಖರೀದಿದಾರರಿಲ್ಲದ ಕಾರಣಕ್ಕೆ ಬೆಳೆದು ನಿಂತ ಗಿಡಗಳನ್ನೇ ಕಡಿದುರುಳಿಸಿರುವುದನ್ನ ಪತ್ರಿಕೆಗಳು ವರದಿ ಮಾಡಿವೆ. ದ್ರಾಕ್ಷಿ ಬೆಳೆದವರ ಪಾಡೂ ಕೂಡ ಕಳೆದ ವರ್ಷಕ್ಕಿಂತ ಬೇರಿಲ. “ಹೋದ ವರ್ಷ, ಇದೇ ಟೈಮಲ್ಲಿ ತೆಂಗಿನಕಾಯಿ ಒಂದಕ್ಕೆ ರೂ.17.50ಕ್ಕೆ ಮಾರಿದ್ದೆ. ಈಗ ಅದರ ಅರ್ಧ ಬೆಲೆಗೆ ಕೇಳ್ತಾರೆ. ಮರ ಹತ್ತಿ ಕಾಯಿ ಕೀಳೋ ಜನ ಇಲ್ಲ. ಇರೋರು ಕೇಳೋ ಡಬ್ಬಲ್ ಕೂಲಿಕೊಡೋಕಾಗಲ್ಲ. ತೋಟಕ್ಕೆ ಮಣ್ಣು-ಗೊಬ್ಬರ ಹೊಡಸಕ್ಕಾಗ್ತಿಲ್ಲ, ತೆಂಗು ಬೆಳೆಗಾರನೊಬ್ಬನ ನೋವು. “ಮಳೆ ಬಂದಿದೆ. ಶೇಂಗಾ ಬಿತ್ತಬೇಕು, ಬೀಜ ಗೊಬ್ಬರ ಸಿಗಂಗಿಲ್ಲ. ಕೃಷಿ ಇಲಾಖೆನೋರು ಕೊಡೋ ಅಷ್ಟೋ, ಇಷ್ಟೋ ಕೊಳ್ಳೋಣ ಅಂದ್ರೆ, ಬೆಳಿಗ್ಗೆ 9 ಗಂಟೆಗೆ ಹೋಗಿ ಕ್ಯೂ ನಿಂತ್ರೆ ಒಂದಷ್ಟು ಜನಕ್ಕೆ ಕೊಟ್ಟು ಟೈಮ್ ಆತು ಅಂತ ಬಾಗಲು ಹಾಕ್ತಾರೆ. ಈವಾಗ ಬಿತ್ಲಿಲ್ಲಾ ಅಂದ್ರೆ ಇನ್ನೇನೂ ಮಾಡಂಗಿಲ್ಲ”. ಶೇಂಗಾ ಬೆಳೆಯುವ ರೈತನ ಗೋಳು. “ಕಷ್ಟಪಟ್ಟು ಬೀಜ ಗೊಬ್ಬರ ಜೋಡ್‌ಸಿದೀನಿ, ಬಿತ್ತಾಕೆ ಎತ್ಗಳಿಲ್ಲ, ಬಿತ್ತೋ ಮಷಿನ್ ಬಂದಿದೆ, ಗಂಟೆಗೆ 1000 ರೂಪಾಯಿ ಕೇಳ್ತಾರೆ. ಹೋದವರ್ಷ 600 ರೂಪಾಯ್‌ಗೆಲ್ಲಾ ಬರ್‍ತಿದ್ರು. ಕೇಳಿದ್ರೆ ಡೀಸೆಲ್ ಬೆಲೆ ಜಾಸ್ತಿ ಆಗಿದೆ ಅಂತಾರೆ”. ಬಿತ್ತಲು ಎತ್ತುಗಳಿಲ್ಲದವರ ಕಷ್ಟ. ಒಂದು ಕಾಲಕ್ಕೆ ಪ್ರತಿ ರೈತ ಕುಟುಂಬಕ್ಕೂ ಒಂದು ಜೊತೆ ಎತ್ತುಗಳಿರುತ್ತಿದ್ದುದು ಸಾಮಾನ್ಯವಾಗಿತ್ತು.

ಈಗ ಊರೆಲ್ಲಾ ಹುಡುಕಿದರೂ ಹತ್ತಾರು ಜೊತೆ ಎತ್ತುಗಳನ್ನು ಕಾಣುವುದು ಕಷ್ಟ. ಹೆಸರು, ಉದ್ದು, ಹಲಸಂದೆ, ಎಳ್ಳು ಬೆಳೆಯುವ ಕೆಲವರಂತೂ ಹಾಗೇ ಹೊಲದಲ್ಲಿ ಶೂನ್ಯ ಬೇಸಾಯದ ರೀತಿ ಚೆಲ್ಲಿ ಬಂದಿದ್ದಾರೆ.

ಇದರ ಜೊತೆಗೆ, ಬಿತ್ತನೆಗಾಗಿ ಬೀಜ-ಗೊಬ್ಬರ ಕೊಳ್ಳಲು ಹಣಕಾಸಿನ ದುಃಸ್ಥಿತಿ ಬೇರೆ. ಕಡಲೆ, ರಾಗಿ ಮುಂತಾದವುಗಳನ್ನು ಕಳೆದ ವರ್ಷ ಬೆಂಬಲ ಬೆಲೆಗೆ ಮಾರಿದ ಹಣ ಇನ್ನೂ ಕೈ ಸೇರಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಳೆ ಪರಿಹಾರದ ಹಣ ಖಾತೆಗೆ ಜಮಾ ಅಗಿದ್ದನ್ನೂ ನಿಯಮ ಮೀರಿ ಕೆಲವು ಬ್ಯಾಂಕುಗಳು ಹಳೇ ಸಾಲದ ಕಡೆಗೆ ಜಮಾ ಮಾಡಿಕೊಂಡಿರುವುದನ್ನು ರೈತಸಂಘದ ಮುಖಂಡರೊಬ್ಬರು ದೂರುತ್ತಾರೆ. ನೀರಾವರಿ ಸೌಲಭ್ಯ ಹೊಂದಿರುವವರು ತಮಗೆ ಅತಿ ಅಗತ್ಯವಿರುವ ವಿದ್ಯುತ್ ವೈರು ಮತ್ತು ಪಿವಿಸಿ ಪಂಪುಗಳ ಬೆಲೆ ದುಪ್ಪಟ್ಟಾಗಿರುವುದನ್ನು ದೂಷಿಸುತ್ತಾರೆ. ಇವೆಲ್ಲವುಗಳ ಜೊತೆಗೆ, ಈಗ ಉಂಟಾಗಿರುವ ಬಿಡಿಸಲಾಗದ ಕಗ್ಗಂಟೆಂದರೆ, ಬಹುತೇಕ ಮೂರನೇ ಒಂದು ಭಾಗ ಹಳ್ಳಿಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ

ಕೃಷಿ ಕೆಲಸಗಳಲ್ಲಿ ನಿರತರಾದ ಕೆಲವಷ್ಟು ಜನ ಕೊರೊನಾ ಸೋಂಕಿಗೆ ಒಳಗಾಗಿರುವುದು. ಇದು ಬರೀ ನಮ್ಮ ಊರು, ಜಿಲ್ಲೆ ರಾಜ್ಯ ಒಂದಕ್ಕೆ ಸೀಮಿತವಾಗಿರದೆ, ಒಂದಲ್ಲಾ ಒಂದು ರೀತಿಯಲ್ಲಿ ಹೊರನೋಟಕ್ಕೆ ಗೋಚರಿಸುವ ಇಡೀ ದೇಶದ ಸ್ಥಿತಿಯೇ ಆಗಿದೆ. ಈ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸದಿದ್ದರೆ, ಬರುವ ವರ್ಷದಲ್ಲಿ ಇದು ಆಹಾರ ಧಾನ್ಯಗಳ ಒಟ್ಟು ಉತ್ಪಾದನೆಯನ್ನು ತಗ್ಗಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕೃಷಿ ಭಾರತದ ಬೆನ್ನೆಲುಬು, ರೈತ ದೇಶದ ಅನ್ನದಾತ ಎನ್ನುವ ಹೆಗ್ಗಳಿಕೆಯ ಮಾತು ಇವತ್ತಿಗೂ ಹುಸಿಯೇನಲ್ಲ. ಏಕೆಂದರೆ, ಸ್ವಾತಂತ್ರ್ಯಾನಂತರದ ದಶಕಗಳ ಹಸಿರುಕ್ರಾಂತಿಯ ಕ್ರಮಗಳಿಂದ, ಹಲವು ಮಿತಿಗಳ ನಡುವೆಯೂ, ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಭಾರತಕ್ಕೆ ಸಾಧ್ಯವಾಗಿದೆ. ಕಳೆದ ವರ್ಷದ ಹಿಂದಿನ ವರ್ಷ, ಅಂದರೆ 2019-2020ರಲ್ಲಿ ದಾಖಲೆ ಪ್ರಮಾಣದ 291.95 ಮೆಟ್ರಿಕ್ ಟನ್ ಆಹಾರ ಧಾನ್ಯಗಳ ಉತ್ಪಾದನೆಯನ್ನು ದಾಖಲಿಸಿದೆ.

ದೇಶದ ಇಡೀ ರಾಷ್ಟ್ರೀಯ ವರಮಾನ ದರ ಕಳೆದ ವರ್ಷ ಶೇ.(-)23ಕ್ಕೆ ಕುಸಿದಾಗ ಕೃಷಿ ಬೆಳವಣಿಗೆ ದರ ಶೇ.3.4 ಇತ್ತು. ಈ ಬೆಳವಣಿಗೆ ರಾತ್ರೋರಾತ್ರಿ ಆದದ್ದಲ್ಲ. ಹೊರನೋಟಕ್ಕೆ ದೇಶದ ಒಟ್ಟು ಉತ್ಪಾದನೆಯಲ್ಲಿ ಕೃಷಿಯ ಪಾಲು ಕಡಿಮೆಯಾಗುತ್ತಾ ಬಂದಿರುವುದು ನಿಜ. ಒಂದು ಕಾಲಕ್ಕೆ ಶೇ.60ರಷ್ಟಿದ್ದ ಇದು ಇಂದು ಶೇ.20ರಷ್ಟಿದೆ. ಇದು ಕೃಷಿ ಉತ್ಪಾದನೆಯ ಇಳಿಕೆಯಿಂದಾಗಿಲ್ಲ. ಬದಲಾಗಿ ಇತರೆ ವಲಯಗಳ, ಅದರಲ್ಲೂ ಸೇವಾವಲಯದ ಕ್ಷಿಪ್ರ ಗತಿಯ ಬೆಳವಣಿಗೆಯಿಂದಾಗಿದೆ. ಇವತ್ತಿಗೂ ಕೂಡ ಶೇ.70ರಷ್ಟು ಗ್ರಾಮೀಣ ಕುಟುಂಬಗಳಿಗೆ ಕೃಷಿ ಕ್ಷೇತ್ರ ಉದ್ಯೋಗಾಶ್ರಯವಾಗಿದೆ. ಇದರಲ್ಲಿ ಶೇ.82ರಷ್ಟು ಕುಟುಂಬಗಳು ಸಣ್ಣ ಮತ್ತು ಅತಿಸಣ್ಣ, ಅಂದರೆ ತುಂಡು ಭೂಮಿ ಮಾಲಿಕತ್ವದ ಕುಟುಂಬಗಳಾಗಿವೆ. ಇದು ಈ ದೇಶದ ಕೃಷಿ ವಲಯದ ಪ್ರಾಮುಖ್ಯತೆ ಮತ್ತು ಅಸ್ಮಿತೆ. ಇಷ್ಟಾಗಿಯೂ 2016ರ ಜಾಗತಿಕ ಪೌಷ್ಠಿಕಾಂಶ ವರದಿ ಪ್ರಕಾರ 132 ದೇಶಗಳ ಸಾಲಿನಲ್ಲಿ ಭಾರತ 114ನೇ ಸ್ಥಾನದಲ್ಲಿರುವುದು 1.4 ಬಿಲಿಯನ್ ಜನಸಂಖ್ಯೆಯ ಬಹುಪಾಲು ಜನ ಪೌಷ್ಠಿಕಾಂಶಗಳ ಕೊರತೆ ಅನುಭವಿಸುತ್ತಿರುವುದನ್ನು ಎತ್ತಿ ತೋರಿಸುತ್ತದೆ.

ದೇಶದ ಬಹುಸಂಖ್ಯಾತ ಜನರಿಗೆ ಉದ್ಯೋಗ ಮತ್ತು ಅನ್ನವನ್ನು ಕೊಡುವ ಕೃಷಿ ವಲಯ ಪ್ರಭುತ್ವಗಳ ನಿರ್ಲಕ್ಷ್ಯದಿಂದಾಗಿ ದುಃಸ್ಥಿತಿ ತಲುಪುತ್ತಿದೆ. ಇದಕ್ಕೆ ನೇರವಾಗಿ ರೈತರನ್ನಷ್ಟೇ ದೂರುವುದು ಸರಿಯಲ್ಲ. ಇದು ಬಡತನಕ್ಕೆ ಕಾರಣ ಬಡವರೇ ಎಂದಂತೆ! ಭೂ ಮಾಲಿಕತ್ವ ಸಂಬಂಧೀ ಕಾನೂನುಗಳನ್ನು ಬದಲಾಯಿಸಿ ಕೃಷಿ ಭೂಮಿಯ ಮಾಲಿಕತ್ವವನ್ನು ಪಲ್ಲಟಗೊಳಿಸುವ ಮೂಲಕ ಮೇಲಿನ ಸಮಸ್ಯೆಗಳಿಗೆ ಪರಿಹಾರವಾಗಿಸುತ್ತೇವೆ ಎನ್ನುವುದು ಇವತ್ತಿನ ಒಕ್ಕೂಟ ಸರ್ಕಾರದ ಯೋಚನೆ. ಇದು ಎಷ್ಟರಮಟ್ಟಿಗೆ ಸರಿಯಾದೀತು? ಈ ಬಗ್ಗೆ ಆಲೋಚಿಸುವ ಮುನ್ನವೇ ಅವು ಕಾನೂನುಗಳಾಗಿ ಕುಳಿತಿವೆ. ಯಾವುದರ ವಿರುದ್ಧ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ದೆಹಲಿಯ ಗಡಿಗೆ ಬಂದು ಆರು ತಿಂಗಳುಗಳಿಂದ ಮುಷ್ಕರ ಮಾಡುತ್ತಿದ್ದಾರೋ, ಆ ಕೃಷಿ ಕಾನೂನುಗಳಲ್ಲಿ ಈ ಸಮಸ್ಯೆಗಳಿಗೆ ಉತ್ತರಗಳಿವೆಯೇ? ಅವುಗಳ ಸಮರ್ಥಕರು ಕೊಡುತ್ತಿರುವ ಉತ್ತರ ಯಾರಿಗೂ ಸಮರ್ಪಕ ಅನ್ನಿಸುತ್ತಿಲ್ಲ. ದೆಹಲಿ ಗಡಿಗಳಲ್ಲಿ ಹೋರಾಟ ಮುಂದುವರೆದೇ ಇದೆ.

ದೇಶದ ಜನರ ಅನುಭೋಗದ ಅಗತ್ಯಗಳನ್ನು ಲೆಕ್ಕಾಚಾರ ಹಾಕದೆ, ಯಾರ ಯಾರದೋ ಮಾತು ಕೇಳಿ ಏನನ್ನೋ ಬೆಳೆದು ರಾತ್ರೋರಾತ್ರಿ ಅಧಿಕ ಆದಾಯ ಗಳಿಸಿದರು ಎನ್ನುವುದನ್ನೇ ಮುಂದಿಟ್ಟುಕೊಂಡು, ಎಲ್ಲರೂ ಅದೇ ಬೆಳೆಯನ್ನು ಬೆಳೆದು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಹಾದಿ ಬೀದಿಯಲ್ಲಿ ಸುರಿದು ಸಂಕಟ ವ್ಯಕ್ತಪಡಿಸಿರುವುದು ಈ ದೇಶಕ್ಕೆ ಹೊಸದೇನೂ ಅಲ್ಲ. ಇದನ್ನು ಕಂಡವರು ಆ ರೈತರನ್ನು ದೂರುತ್ತಾರೆಯೇ ಹೊರತು, ಅವರ ಈ ವರ್ತನೆಗೆ ಕಾರಣವಾದ ಪ್ರಭುತ್ವಗಳ ಜವಾಬ್ದಾರಿ ಕುರಿತಂತೆ ಯಾರೂ ಮಾತನಾಡುವುದಿಲ್ಲ. ನಮ್ಮದೊಂದು ಯೋಜಿತ ಅರ್ಥವ್ಯವಸ್ಥೆ ಎಂದು ಸಾರಿಕೊಂಡು ಬರುತ್ತಿರುವ ಈ ದೇಶದಲ್ಲಿ ಯಾರು, ಎಲ್ಲಿ, ಯಾವಾಗ, ಯಾವ ಬೆಳೆಯನ್ನು, ಹೇಗೆ, ಎಷ್ಟು ಎಕರೆ ಪ್ರದೇಶದಲ್ಲಿ, ಯಾರ ಅನುಭೋಗಕ್ಕಾಗಿ ಅಥವಾ ಮರಾಟಕ್ಕಾಗಿ ಬೆಳೆಯುತ್ತಿದ್ದಾರೆನ್ನುವ ಮಾಹಿತಿ ಇವತ್ತಿಗೂ ಯಾರಿಗೂ ಸರಿಯಾಗಿ ಸಿಗುತ್ತಿಲ್ಲ. ದೂರದೃಷ್ಟಿಯ ಅಥವಾ ಸಣ್ಣ ಅವಧಿಯ ಯೋಜನೆಗಳಿಲ್ಲ. ಕೃಷಿ ಅಭಿವೃದ್ಧಿಗೆ ಮಾದರಿಯಾಗಿ ಇವತ್ತು ಚೀನಾ ಮತ್ತು ಇಸ್ರೇಲ್ ದೇಶಗಳನ್ನು ಉದಾಹರಿಸುವುದು ಸರ್ವೇಸಾಮಾನ್ಯವಾಗಿದೆ. ಆದರೆ ಅಲ್ಲಿ ಇರುವ ಸರ್ಕಾರಗಳ ಕಾಳಜಿ ಮತ್ತು ಯೋಜನೆಗಳ ನಿರ್ವಹಣೆಯಲ್ಲಿನ ದಕ್ಷತೆಯ ಬಗ್ಗೆ ಮೌನವಹಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವೃದ್ಧಿ ಎಂದರೆ ತೋಚಿದ್ದನ್ನು ಮಾಡುವುದಲ್ಲ. ಮಾರುಕಟ್ಟೆಯನ್ನು ಗೂಳಿಯಂತೆ ಸ್ವೇಚ್ಛೆಯಾಗಿ ಬಿಡುವುದರ ಬದಲು ಅದಕ್ಕೆ ಮೂಗುದಾರ ಹಾಕಿ ವ್ಯವಸಾಯಕ್ಕೆ ಬಳಸಿಕೊಳ್ಳುವ ವಿವೇಚನೆ ಸಕಾರಗಳದ್ದು. ಇಲ್ಲಿ ಸರ್ಕಾರದ ಪಾತ್ರ ಬೇಡವೇ ಬೇಡ ಎನ್ನುವುದಾದರೆ, ಆ ಜಾಗದಲ್ಲಿ ಶೋಷಕನೊಬ್ಬ ಸ್ಥಾಪನೆಗೊಳ್ಳುವುದು ನಿಸ್ಸಂಶಯ.

ತಜ್ಞರ ವರದಿ ಉಲ್ಲೇಖಿಸಿ ಹೇಳುವುದಾದರೆ, ಇದೀಗ ಜಾರಿಯಲ್ಲಿರುವ ಲಾಕಡೌನ್ ಇನ್ನೂ ಕೆಲ ವಾರಗಳಾದರೂ ಮುಂದುವರೆಯುವ ಸಾಧ್ಯತೆ ಇದೆ. ಆದ್ದರಿಂದ, ಸರ್ಕಾರಗಳು ಇನ್ನಷ್ಟು ಮುಂಜಾಗ್ರತೆ ವಹಿಸಿ ರೈತರ ಪ್ರಸ್ತುತ ಮುಂಗಾರಿನ ಬಿತ್ತನೆಗೆ ಅನುಕೂಲ ಮಾಡಿಕೊಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ರೈತರನ್ನಷ್ಟೇ ಅಲ್ಲ, ಕೃಷಿ ಉತ್ಪನ್ನಗಳ ಬಳಕೆದಾರರನ್ನೂ ದುಃಸ್ಥಿತಿಗೆ ತಳ್ಳಿದಂತಾಗುತ್ತದೆ. ಮೊದಲನೆಯದಾಗಿ, ಈಗ ಜಾರಿಗೊಳಿಸುತ್ತಿರುವ ಕ್ರಮಗಳ ಜೊತೆಗೆ, ರೈತರು ಬೀಜ-ಗೊಬ್ಬರಗಳಿಗಾಗಿ ಇಲಾಖೆ ಮತ್ತು ಅಂಗಡಿಗಳಿಗೆ ಅಲೆಯುವುವುದರ ಬದಲಿಗೆ ಸಂಚಾರಿ ಮಾರಾಟ ವ್ಯವಸ್ಥೆ ಮಾಡುವುದು ಕಷ್ಟವೇನಲ್ಲ. ಕೃಷಿ ಇಲಾಖೆಯಲ್ಲಿ ಈಗಿರುವ ಸಿಬ್ಬಂದಿ ಮತ್ತು ಗ್ರಾಮೀಣ ಸಹಕಾರಿ ಸಂಘಗಳ ಸಿಬ್ಬಂದಿಯನ್ನು ಬಳಸಿಕೊಂಡು ಯಾವ ರೈತರಿಗೆ ಎಷ್ಟು ಬೀಜ-ಗೊಬ್ಬರಗಳು ಬೇಕು ಎನ್ನುವ ಮುಂಬೇಡಿಕೆ ಪಡೆದು ಹಳ್ಳಿಗಳಿಗೆ ಹೋಗಿ ತಲುಪಿಸಲು ಕಾರ್ಯಪಡೆ ರಚಿಸಬೇಕು. ಕೊನೇ ಪಕ್ಷ ಪ್ರಮುಖ ಬೆಳೆಗಳಿಗೆ ಸಂಬಂಧಿಸಿದಂತೆಯಾದರೂ ಈ ವ್ಯವಸ್ಥೆ ಬೇಕಿದೆ. ಇದಕ್ಕೆ ಈ ಸರಕುಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥ ಸಂಘಗಳ ನೆರವು ಪಡೆಯಬಹುದು. ವೆಚ್ಚವನ್ನು ಭರಿಸಲು ರೈತರು ಇಲ್ಲಾ ಎನ್ನಲು ಸಧ್ಯವೇ ಇಲ್ಲ.

ಎರಡನೆಯದಾಗಿ, ಈ ಉತ್ಪನ್ನಗಳ ಮಾರಾಟ ಮತ್ತು ಸಾಗಾಣಿಕೆಗೆ ಅನುಕೂಲವಾಗುವಂತೆ ಈ ಸೇವೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಬೇಕು. ಮೂರನೆಯದಾಗಿ, ಕೊರೊನಾ ಸೋಂಕಿನಿಂದ ಬಿತ್ತನೆ, ಕಳೆಕೀಳುವುದು ಮುಂತಾದ ಕೆಲಸಗಳಿಗೆ ಕೃಷಿ ಕಾರ್ಮಿಕರ ಕೊರತೆಯುಂಟಾಗುತ್ತಿದ್ದು ಅದನ್ನು ಸರಿದೂಗಿಸಲು ಇದೊಂದು ಬಾರಿಗೆ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪೂರ್ಣವಾಗಿಯಲ್ಲದಿದ್ದರೂ ಪೂರಕವಾಗಿಯಾದರೂ, ನೋಂದಾಯಿತ ಕಾರ್ಮಿಕರ ನೆರವು ಕೊಟ್ಟರೆ ತಪ್ಪೇನಿಲ್ಲ. ತುರ್ತು ಸಂದರ್ಭಗಳಲ್ಲಿ ನಿಯಮಾವಳಿಗಳಿಗೆ ಬದಲಾವಣೆ ತಂದು ಯಾರಿಗೆ, ಯಾವ ಬೆಳೆಗಳಿಗೆ, ಯಾವ ಚಟುವಟಿಕೆಗಳಿಗೆ ಈ ನೆರವು ಅನಿವಾರ್ಯವಾಗಿದೆ ಎಂದು ವಿವೇಚಿಸಿ ಕಾರ್ಯೋನ್ಮುಖವಾಗಬಹುದು. ಬೇಕಾದಲ್ಲಿ ಇಂಥ ನೆರವು ಪಡೆದವರಿಂದ ನಿಗದಿತ ಮೊತ್ತವನ್ನು ಸಂಬಂಧಿಸಿದ ಖಾತೆಗೆ ಜಮಾ ಮಾಡಿಸಿಕೊಳ್ಳಬಹುದು. ಜೊತೆಗೆ, ಉಳುಮೆ ಮತ್ತು ಬಿತ್ತನೆ ಕೆಲಸಗಳಿಗೆ ಬಳಸುವ ಯಂತ್ರಗಳ ಸೇವೆ ಬೇಕಾದಲ್ಲಿ ಸಕಾಲಕ್ಕೆ ಸಿಗುವಂತೆ ಖಾಸಗಿ ವಲಯದಿಂದಲೋ ಅಥವಾ ಸರ್ಕಾರದ ವತಿಯಿಂದಲೋ ವ್ಯವಸ್ಥೆ ಮಾಡಬಹುದು. ರೈತರಿಗೆ ಬೇಕಾಗಿರುವ ಇಂಥ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಪ್ರತಿ ತಾಲ್ಲೂಕಿಗೊಂದರಂತೆ ಸಹಾಯವಾಣಿ ಸೌಲಭ್ಯ ಒದಗಿಸಬೇಕು ಮತ್ತು ಅವುಗಳನ್ನು ತುರ್ತು ಸೇವೆ ಎಂದು ನಿರ್ವಹಿಸಲು ಸಜ್ಜುಗೊಳಿಸಬೇಕು. ಸರ್ಕಾರ ಮನಸ್ಸು ಮಾಡಿದರೆ ಇದೇನು ಕಷ್ಟದ ಕೆಲಸವಲ್ಲ.

ಕೊನೆಯದಾಗಿ ನೊಂದವರ ಕಷ್ಟಗಳಿಗೆ, ಅಭಿವೃದ್ಧಿಯ ತುರ್ತು ಅಗತ್ಯಗಳಿಗೆ ಕೂಡಲೆ ಸ್ಪಂದಿಸುವ ಮನೋಧರ್ಮವನ್ನು ಹೊಂದುವುದೂ ಕೂಡ ಉತ್ಕೃಷ್ಟ ಸಂಪನ್ಮೂಲವೇ ಆಗಿದೆ. ಪ್ರಭುತ್ವದ ಕ್ರಿಯಾಶೀಲತೆಯಲ್ಲಿ ಯಾವುದು ಸರಿ ಮತ್ತು ಯಾವುದು ಸರಿಯಲ್ಲ ಎನ್ನುವುದಕ್ಕೆ ಇಬ್ಬರು ಶರಣರ ವಚನಗಳ ಸಾಲುಗಳನ್ನು ಉದಾಹರಿಸಬಹುದು. ಒಂದು, ಬಸವಣ್ಣನವರ “ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರೆರೆದರೆ, ಮೇಲೆ ಪಲ್ಲವಿಸಿತ್ತು ನೋಡಾ”, ಎನ್ನುವುದು. ಮತ್ತೊಂದು, ಮೋಳಿಗೆ ಮಹದೇವಮ್ಮನ “ಕಲ್ಲ ಬಿತ್ತಿ ನೀರನೆರೆದಲ್ಲಿ ಪಲ್ಲವಿಸುವುದೇ ದಿಟದ ಬೀಜದ ವೃಕ್ಷದಂತೆ” ಎಂಬುದು. ಇಲ್ಲಿ ನೀರೆರೆವ ಮತ್ತು ಬಿತ್ತುವ ಬೀಜದ ವಿವೇಚನೆ ಮತ್ತು ಕರ್ತವ್ಯ, ಪ್ರಭುತ್ವದ್ದು ಮೊದಲು, ಪ್ರಜೆಗಳದ್ದು ನಂತರದ್ದು.

ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ

ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ
ವಿಶ್ರಾಂತ ಪ್ರ್ರಾಂಶುಪಾಲರು, ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದರ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರು. ಆರ್ಥಿಕ ಮತ್ತು ಶೈಕ್ಷಣಿಕ ಚಿಂತಕರು. ಚಿತ್ರದುರ್ಗ ಮೂಲದವರು.


ಇದನ್ನೂ ಓದಿ: ಬಹುಜನ ಭಾರತ; ಬಸ್ತರ್ – ಹುಟ್ಟಿದ ನೆಲದಲ್ಲೇ ತಬ್ಬಲಿಗಳಾಗಿರುವ ಆದಿವಾಸಿಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...