Homeಅಂಕಣಗಳುಬಹುಜನ ಭಾರತ; ಬಸ್ತರ್ - ಹುಟ್ಟಿದ ನೆಲದಲ್ಲೇ ತಬ್ಬಲಿಗಳಾಗಿರುವ ಆದಿವಾಸಿಗಳು!

ಬಹುಜನ ಭಾರತ; ಬಸ್ತರ್ – ಹುಟ್ಟಿದ ನೆಲದಲ್ಲೇ ತಬ್ಬಲಿಗಳಾಗಿರುವ ಆದಿವಾಸಿಗಳು!

- Advertisement -
- Advertisement -

ಆದಿವಾಸಿ ನೆಲೆಯ ಅಡವಿ-ಗುಡ್ಡಗಳಡಿಯ ಖನಿಜ ಸಂಪತ್ತಿಗಾಗಿ ಜೊಲ್ಲು ಸುರಿಸುವ ಕಾರ್ಪೊರೇಟುಗಳಿವೆ. ಪ್ರಭುತ್ವಗಳು ಅವುಗಳಿಗೆ ನಡೆಮುಡಿ ಹಾಸುತ್ತಿವೆ.

ಭ್ರಮೆಯಲ್ಲಿ ಬದುಕುವ ಬಹುತೇಕ ಭಾರತವು ಬಸ್ತರ್ ಎಂಬ ಸೀಮೆಯ ಹೆಸರನ್ನು ಕೇಳಿರುವುದು ಅನುಮಾನ. ಮಧ್ಯಭಾರತದ ಕಾಡು ಕಣಿವೆ ಗುಡ್ಡಗಳಲ್ಲಿ ಹಲವು ಆದಿವಾಸಿ ನೆಲೆಗಳು ಹರಡಿ ಹಬ್ಬಿವೆ.

ಈ ಸೀಮೆಗಳ ಹೆಸರಾಂತ ತವರು ಛತ್ತೀಸಗಢದ ಬಸ್ತರ್. ಅಲ್ಲಿನ ಸುಕ್ಮಾ ಜಿಲ್ಲೆಯಲ್ಲಿ ಸಿಲ್ಗೆರ್ ಎಂಬುದೊಂದು ಗ್ರಾಮ. ತಿಂಗಳೊಪ್ಪತ್ತಿನಿಂದ ಅಲ್ಲಿನ ಆದಿವಾಸಿಗಳ ಬದುಕು ಸರ್ಕಾರಿ ದಮನದ ಬೆಂಕಿಯಲ್ಲಿ ಬೇಯತೊಡಗಿದೆ.

ರಾಜ್ಯ ಸರ್ಕಾರ ರಾತ್ರೋರಾತ್ರಿ ತಮ್ಮ ನೆಲದಲ್ಲಿ ಸುರಕ್ಷಾಬಲದ ಶಿಬಿರವೊಂದನ್ನು ಎಬ್ಬಿಸಿರುವ ಬೆಳವಣಿಗೆ ಈ ಬಡಪಾಯಿಗಳ ಬದುಕುಗಳನ್ನು ಬುಡಮೇಲು ಮಾಡಿದೆ. ತಿಂಗಳೊಪ್ಪತ್ತಿನಿಂದ ಸಾವಿರಾರು ಆದಿವಾಸಿಗಳು ಸಂಘರ್ಷಕ್ಕೆ ಇಳಿದಿದ್ದಾರೆ. ಪ್ರತಿಭಟನೆಯಲ್ಲಿ ಹೆಣ್ಣುಮಕ್ಕಳು, ಗಂಡಸರು, ವೃದ್ಧರು, ಬಾಲರೆಲ್ಲ ಸೇರಿದ್ದಾರೆ.

ಕಳೆದ ಮೇ 17ರಂದು ಆಂದೋಲನನಿರತ ಆದಿವಾಸಿಗಳ ಮೇಲೆ ಸುರಕ್ಷಾಬಲ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಅಸುನೀಗಿದ್ದು 18 ಮಂದಿ ಗಾಯಗೊಂಡಿದ್ದಾರೆ. ಗೋಲಿಬಾರಿನಿಂದ ಉಂಟಾದ ನೂಕುನುಗ್ಗಲಿಗೆ ಸಿಕ್ಕಿ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡ ಗರ್ಭಿಣಿ ಪುನೆಮ್ ಸುಕ್ಲಿ ಮೇ 23ರಂದು ಅಸುನೀಗಿದಳು. ಈ ನಾಲ್ವರು ಹುತಾತ್ಮರಿಗೆ ಸಿಲ್ಗೇರ್ ಶಿಬಿರದ ಎದುರಿನಲ್ಲಿ ಸ್ಮಾರಕಗಳನ್ನು ನಿರ್ಮಿಸಿದ್ದಾರೆ ಆದಿವಾಸಿಗಳು.

ಮೇ 17ರಿಂದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಆದಿವಾಸಿಗಳು ಮುಖಾಮುಖಿಯಾಗಿದ್ದಾರೆ. ಒಂದೆಡೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹಿಡಿದ ಮೀಸಲು ಪೊಲೀಸರು. ಮತ್ತೊಂದೆಡೆ ಧರಣಿ ಪ್ರದರ್ಶನ ನಡೆಸಿರುವ ಸಾವಿರಾರು ಆದಿವಾಸಿಗಳು.

ಸರ್ಕಾರ ಆದಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮೇ 12ರಂದು ರಾತ್ರೋರಾತ್ರಿ ಈ ಶಿಬಿರವನ್ನು ಎಬ್ಬಿಸಿ ನಿಲ್ಲಿಸಿದೆ. ಮರುದಿನ ಮಧ್ಯಾಹ್ನದ ವೇಳೆಗೆ ಈ ಸುದ್ದಿ ಸಿಲ್ಗೇರ್ ಸುತ್ತಮುತ್ತ ಹರಡಿದೆ. ಗ್ರಾಮೀಣರ ಸಮೂಹವೊಂದು ಅಧಿಕಾರಿಗಳೊಂದಿಗೆ ಮಾತುಕತೆಗೆ ಬಂದಿದ್ದಾರೆ. ಕೆಲ ಹೊತ್ತು ಚರ್ಚೆಯ ನಂತರ ಅವರನ್ನು ಗದರಿಸಿ ಓಡಿಸಲಾಗಿದೆ. ಸ್ವಾಭಾವಿಕವಾಗಿ ಆದಿವಾಸಿಗಳು ಸಿಟ್ಟಿಗೆದ್ದಿದ್ದಾರೆ. ಹಿಂದೆ ಸರಿಯಲು ಸಿದ್ಧರಿಲ್ಲ. ಸುತ್ತಮುತ್ತಲ ಹಲವಾರು ಪಂಚಾಯತಿಗಳ ಸಾವಿರಾರು ಮಂದಿ ಘಟನಾ ಸ್ಥಳದ ಬಳಿ ಸೇರಿದ್ದಾರೆ. ಈ ಜಮಾವಣೆಯ ಮುಂಚೂಣಿಯಲ್ಲಿ ನಿಂತಿರುವಾತ ಒಬ್ಬ ವೃದ್ಧ. ಆತನ ಹೆಸರು ಲಖಮಾ.

ಪೊಲೀಸ್ ಶಿಬಿರವನ್ನು ಹಿಂತೆಗೆದುಕೊಳ್ಳುವ ತನಕ ಪ್ರತಿಭಟನೆ ಕರಗುವುದಿಲ್ಲ ಎಂಬುದಾಗಿ ಆತ ಘೋಷಿಸಿದ್ದಾನೆ. ಸುರಕ್ಷಾ ಪಡೆಗಳ ಶಿಬಿರಗಳನ್ನು ಆದಿವಾಸಿಗಳು ವಿರೋಧಿಸಬೇಕಾದರೂ ಯಾಕೆ?

ಲಖಮಾ ನೀಡುವ ಉತ್ತರ ಹೀಗಿದೆ:

ಶಿಬಿರವೊಂದು ಎದ್ದಿತೆಂದರೆ ಪೊಲೀಸರು ಸುತ್ತಮುತ್ತಲ ಅಡವಿಯಲ್ಲಿ ಅಡ್ಡಾಡುವ ಆದಿವಾಸಿಗಳನ್ನು ಹಿಡಿದು ಬಡಿದು ಹಿಂಸಿಸುತ್ತಾರೆ. ಹಿಡಿದೊಯ್ದು ಜೈಲಿಗೆ ನೂಕುತ್ತಾರೆ. ಅಡವಿಯೇ ಆದಿವಾಸಿಗಳ ಅನ್ನ-ಉಸಿರು. ಉರುವಲು, ತೆಂದು ಎಲೆ (ಬೀಡಿ ಕಟ್ಟಲು ಬಳಸುವ ಎಲೆ) ತರಲು ಅಡವಿಗೆ ಹೋಗುತ್ತೇವೆ. ಕೆಲವೊಮ್ಮೆ ಶಿಕಾರಿಗಾಗಿ ಕೈಯಲ್ಲಿ ಬಿಲ್ಲು ಬಾಣ ಹಿಡಿದಿರುತ್ತೇವೆ. ಈ ಕಾರಣಕ್ಕಾಗಿಯೂ ನಮ್ಮನ್ನು ಗುಂಡುಹಾರಿಸಿ ಕೊಲ್ಲಲಾಗುತ್ತದೆ. ಈಗಷ್ಟೇ ಈ ಶಿಬಿರವನ್ನು ಎಬ್ಬಿಸಲಾಗಿದೆ. ವಿರೋಧ ಮಾಡಿದ ಕಾರಣಕ್ಕಾಗಿ ನಮ್ಮನ್ನು ಲಾಠಿಗಳಿಂದ ಬಡಿಯಲಾಗುತ್ತಿದೆ. 17ರಂದು ನಮ್ಮ ಮೇಲೆ ಗಂಡು ಹಾರಿಸಲಾಯಿತು. ನಮ್ಮ ಮೂವರು ಬಂಧುಗಳು ಬಲಿಯಾಗಿದ್ದಾರೆ. ನಮ್ಮ ನಡುವೆ ಮಾವೋವಾದಿಗಳಿದ್ದಾರೆ ಎನ್ನುತ್ತಾರೆ ಪೊಲೀಸರು. ಹಸಿ ಹಸಿ ಸುಳ್ಳು ಮಾತಿದು. ಈ ಆಂದೋಲನದಲ್ಲಿ ಗ್ರಾಮೀಣ ಆದಿವಾಸಿಗಳ ವಿನಾ ಬೇರೆ ಯಾರೊಬ್ಬರೂ ಇಲ್ಲ.

ಆಂದೋಲನಿರತ ಯುವತಿ ಸರಸಿತಾ ಹೇಳುವ ಪ್ರಕಾರ ಗುಂಡು ತಗುಲಿ ಸತ್ತ ಯುವಕರ ಪೈಕಿ ಒಬ್ಬಾತ ತನ್ನ ಗ್ರಾಮ ತಿಮಾಪುರಮ್‌ಗೆ ಸೇರಿದವನು. ಶಿಬಿರಗಳ ಯೋಧರು ಆದಿವಾಸಿ ಹೆಣ್ಣುಮಕ್ಕಳೊಂದಿಗೆ ಅಶ್ಲೀಲವಾಗಿ ವ್ಯವಹರಿಸುತ್ತಾರೆ. ಇಲ್ಲಿ ಶಿಬಿರ ಎದ್ದಿತೆಂದರೆ ಪುನಃ ಅದೇ ಗೋಳು. ಹೀಗಾಗಿ ನಾವು ವಿರೋಧಿಸುತ್ತಿದ್ದೇವೆ ಎನ್ನುವ. ಆದಿವಾಸಿಗಳ ಹಕ್ಕುಗಳ ಹೋರಾಟಗಾರ್ತಿ ಸೋನಿ ಸೋರಿ ಬಸ್ತರ್ ಪೊಲೀಸರ ದೌರ್ಜನ್ಯವನ್ನು ಖಂಡಿಸಿದ್ದಾರೆ. ಪೊಲೀಸರದೇ ತಪ್ಪು. ಈ ಕಾರಣದಿಂದಾಗಿಯೇ ಘಟನಾ ಸ್ಥಳವನ್ನು ತಾವು ಸೇರಿದಂತೆ ಯಾವುದೇ ಹೋರಾಟಗಾರರು ತಲುಪದಂತೆ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಿದ್ದಾರೆ.

ಪಾಲಾಗುಡಾದಿಂದ ಬಂದಿರುವ ಯುವಕ ಐತೂನ ಪ್ರಕಾರ- ನಮಗೆ ರಸ್ತೆ ಬೇಕು, ಆದರೆ ಶಿಬಿರ ಬೇಡ. ನಮ್ಮ ಹಳ್ಳಿಗಳಲ್ಲಿ ವಿಕಾಸ ಬೇಕು, ಆದರೆ ಸರ್ಕಾರ ಹೇರುವ ಮಾದರಿಯ ವಿಕಾಸ ಅಲ್ಲ. ಅಂಗನವಾಡಿ, ಶಾಲೆ, ಆಸ್ಪತ್ರೆ, ನ್ಯಾಯಬೆಲೆ ದಿನಸಿ ಅಂಗಡಿ, ರಸ್ತೆ ಬೇಕು. ಇಷ್ಟು ಭಾರೀ ಅಗಲದ ರಸ್ತೆ ಬೇಕಿಲ್ಲ. ರಸ್ತೆ ಕೆಲಸವನ್ನು ಆದಿವಾಸಿಗಳಿಗೇ ಕೊಡಲಿ. ನಮ್ಮ ಜರೂರತ್ತಿಗೆ ತಕ್ಕಂತೆ ರಸ್ತೆಗಳನ್ನು ನಾವೇ ನಿರ್ಮಿಸಿಕೊಳ್ಳುತ್ತೇವೆ. ರಸ್ತೆಯೂ ಆಗುತ್ತದೆ, ನಮ್ಮ ಯುವಕರಿಗೆ ಉದ್ಯೋಗವೂ ಸಿಗುತ್ತದೆ.

ಬಸ್ತರ್ ಸೀಮೆಯ ನಾನಾ ಭಾಗಗಳಲ್ಲಿ ಪೊಲೀಸ್ ಶಿಬಿರಗಳನ್ನು ಎಬ್ಬಿಸುವ ಕುರಿತು ಆದಿವಾಸಿಗಳ ವಿರೋಧ ಹೊಸದೇನಲ್ಲ. ಪೊಲೀಸರು ಈ ವಿರೋಧಗಳಿಗೆ ನಕ್ಸಲೀಯ ಪ್ರಾಯೋಜಿತ ಎಂಬ ಹಣೆಪಟ್ಟಿ ಹಚ್ಚಿದ್ದಾರೆ. ಸಿಲ್ಗೇರ್‌ನ ಈ ಆಂದೋಲನವನ್ನೂ ಮಾವೋವಾದಿಗಳ ಪ್ರಚಾರ ಎಂಬುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಕರೆದಿದ್ದಾರೆ.

ಸಿಲ್ಗೇರ್ ಬಳಿ ಪೊಲೀಸ್ ಶಿಬಿರ ನೆಲೆಯೂರಿತೆಂದರೆ ತಮ್ಮ ಮೇಲೆ ಅತ್ಯಾಚಾರ ನಿಶ್ಚಿತ ಎಂಬುದು ಆದಿವಾಸಿಗಳ ಅಳಲು. ಅವರು ಈ ಹಿಂದೆ ಅನುಭವಿಸಿರುವ ಕಷ್ಟನಷ್ಟ ಹಿಂಸೆಗಳೇ ಈ ಅಳಲಿಗೆ ಆಧಾರ.

ಮೇ 17ರಂದು ಪೊಲೀಸರ ಗೋಲಿಬಾರಿನಲ್ಲಿ ಅಸುನೀಗಿದ ಮೂವರು ಆದಿವಾಸಿ ಯುವಕರು ಮಾವೋವಾದಿಗಳು ಎಂಬುದು ಪೊಲೀಸರ ಹೇಳಿಕೆ. ಆದರೆ ಆದಿವಾಸಿಗಳು ಮತ್ತು ಮಾನವ ಹಕ್ಕು ಹೋರಾಟಗಾರರ ಪ್ರಕಾರ ಈ ಮೂವರು ಯುವಕರಿಗೂ ಮಾವೋವಾದಿಗಳಿಗೂ ದೂರ ದೂರದ ಸಂಬಂಧವೂ ಇರಲಿಲ್ಲ. ಪೊಲೀಸರಿಂದ ಬಂದೂಕು ಮತ್ತು ವೈರ್‌ಲೆಸ್ ಉಪಕರಣ ಕಿತ್ತುಕೊಳ್ಳುವ ಪ್ರಯತ್ನದ ಆರೋಪದ ಮೇರೆಗೆ ಎಂಟು ಮಂದಿ ಆದಿವಾಸಿಗಳನ್ನು ಬಂಧಿಸಲಾಗಿದೆ.

ನಿರಾಯುಧ ಆಂದೋಲನನಿರತರ ಮೇಲೆ ಗುಂಡು ಹಾರಿಸುವ ಅಗತ್ಯವಾದರೂ ಏನಿತ್ತು? ಆಂದೋಲನ ನಿರತ ಆದಿವಾಸಿಗಳ ನಡುವೆ ಅಡಗಿಕೊಂಡು ಮಾವೋವಾದಿಗಳು ಪೊಲೀಸರತ್ತ ಗುಂಡು ಹಾರಿಸಿದ್ದಾರೆ ಎಂದೂ ಪೊಲೀಸರು ಆರೋಪಿಸಿದ್ದಾರೆ. ಆದರೆ ಈ ಸಂಬಂಧದ ವಿಡಿಯೋ ಹೊರಬಿದ್ದಿದ್ದು, ಪೊಲೀಸರ ಆರೋಪ ನಿರಾಧಾರವೆಂದು ನಿಚ್ಚಳವಾಗಿದೆ. ಒಂದು ವೇಳೆ ಆದಿವಾಸಿಗಳು ಮಾವೋವಾದಿಗಳ ಒತ್ತಡಕ್ಕೆ ಒಳಗಾಗಿ ಆಂದೋಲನ ನಡೆಸುತ್ತಿದ್ದಾರೆಂದು ವಾದಕ್ಕಾಗಿ ಒಪ್ಪಿಕೊಂಡರೂ, ನಿರಾಯುಧ ಆದಿವಾಸಿಗಳನ್ನು ಪೊಲೀಸರು ರಕ್ಷಿಸಬೇಕೇ ವಿನಾ ಗುಂಡು ಹೊಡೆದು ಕೊಲ್ಲುವುದು ಯಾವ ನ್ಯಾಯ ಎಂಬ ಪ್ರಶ್ನೆಗಳೆದ್ದಿವೆ.

ಪ್ರತಿಪಕ್ಷದಲ್ಲಿದ್ದಾಗ ಆದಿವಾಸಿಗಳ ಹಿತದ ಪರವಾಗಿ ಮಾತನಾಡುತ್ತಿದ್ದ ಕಾಂಗ್ರೆಸ್ ಪಕ್ಷ ಈಗ ಆಡಳಿತ ನಡೆಸಿದೆ. ಕಾಂಗ್ರೆಸ್ ಪಕ್ಷದ ಎರಡೆಳೆ ನಾಲಗೆಯ ಕುರಿತು ಆದಿವಾಸಿಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಅವರು ಆಂದೋಲನದಿಂದ ಹಿಂದೆ ಸರಿಯುವ ಸೂಚನೆಗಳಿಲ್ಲ.

ಆದಿವಾಸಿಗಳ ಮೇಲೆ ನಡೆಯುವ ದಾಳಿಗಳ ಹಿಂದೆ ಅವರು ವಾಸಿಸುವ ಅಡವಿಗಳಲ್ಲಿ ಗುಡ್ಡಗಳಲ್ಲಿ ಅಡಗಿರುವ ಖನಿಜ ಸಂಪತ್ತಿಗಾಗಿ ಜೊಲ್ಲು ಸುರಿಸುವ ಕಾರ್ಪೊರೇಟುಗಳಿವೆ. ಅವುಗಳಿಗೆ ನಡೆಮುಡಿ ಹಾಸುವ ಪ್ರಭುತ್ವಗಳಿವೆ.

ತಮ್ಮ ನೆಲದಲ್ಲೇ ತಬ್ಬಲಿಗಳಾಗಿ ಬದುಕಿಯೂ ಸತ್ತಂತಾಗಿರುವ, ಸತ್ತು ಬದುಕುತ್ತಿರುವ ಆದಿವಾಸಿಗಳಿಗಾಗಿ ತಾಯಿ ಭಾರತಿಯ ಕಣ್ಣೀರು ಇಂಗಿ ಹೋಗಿದೆ. ಆದಿವಾಸಿಗಳ ಪಾಲಿಗೆ ಆಕೆ ಕಿವುಡಿಯೂ ಕುರುಡಿಯೂ ಮೂಕಿಯೂ ಆಗಿ ಹೋಗಿರುವುದು ಬಹುದೊಡ್ಡ ದುರಂತ.


ಇದನ್ನೂ ಓದಿ: ಬಹುಜನ ಭಾರತ: ತುಕ್ಕು ತಗುಲಿತೇ ಉಕ್ಕಿನ ರಕ್ಷಾ ಕವಚಕ್ಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...