Homeಅಂಕಣಗಳುಬಹುಜನ ಭಾರತ: ತುಕ್ಕು ತಗುಲಿತೇ ಉಕ್ಕಿನ ರಕ್ಷಾ ಕವಚಕ್ಕೆ?

ಬಹುಜನ ಭಾರತ: ತುಕ್ಕು ತಗುಲಿತೇ ಉಕ್ಕಿನ ರಕ್ಷಾ ಕವಚಕ್ಕೆ?

- Advertisement -
- Advertisement -

ಲೋಕಸಭಾ ಚುನಾವಣೆಗಳು ಮೂರು ವರ್ಷ ದೂರದಲ್ಲಿವೆ. ಚಂಡಪ್ರಚಂಡರ ವರ್ಚಸ್ಸಿನ ಕವಚಕ್ಕೆ ತಗುಲಿರುವ ತುಕ್ಕನ್ನು ಉಜ್ಜಿ ತೆಗೆದು, ಹೊಸ ತಂತ್ರ-ಕುತಂತ್ರಗಳ ಹೆಣೆಯಲು ಸಾಕಷ್ಟು ಕಾಲಾವಕಾಶವಿದೆ
ಬಂಗಾಳದ ವಿಧಾನಸಭಾ ಚುನಾವಣೆಯ ನಂತರ ಮೌನಕ್ಕೆ ಶರಣಾಗಿದ್ದ ಪ್ರಧಾನಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಜನಾಕ್ರೋಶದ ಖಡ್ಗಕ್ಕೆ ಎದುರಾಗಿ ಕಂಬನಿ ತುಂಬಿದ ಭಾವುಕತೆಯ ಗುರಾಣಿಯನ್ನು ಅಡ್ಡ ಹಿಡಿದಿದ್ದಾರೆ.

ಕೋವಿಡ್ ಮಾರಣಹೋಮ ಕೇಕೆ ಹಾಕಿ ಕೊಳ್ಳೆ ಹೊಡೆದ ಭಾರತದ ದಿಡ್ಡಿ ಬಾಗಿಲನ್ನು ಭಾವುಕತೆಯಿಂದ ಮುಚ್ಚುವ ಅವರ ಎದೆಗಾರಿಕೆ ಅಸಾಧಾರಣ. ಆದರೆ ಕಂಬನಿ ತುಂಬಿ ಗಂಟಲು ಕಟ್ಟಿದ ಸಾಂತ್ವನ, ಶ್ರದ್ಧಾಂಜಲಿ ದಿಟವೆನಿಸುವುದಿಲ್ಲ. ಸಟೆಯೇ ಹೌದು. ಈ ಕಾರಣಕ್ಕಾಗಿಯೇ ಗಾಯದ ಮೇಲೆ ಬರೆ ಎಳೆದಿವೆ. ’ಎಲೆ ದೇವಾ, ಬೆಂದ ಹುಣ್ಣಿಗೆ ಬೇಗೆಯನಿಕ್ಕಲು ಬಂದೀತೇ’ ಎಂಬ ಅಕ್ಕನ ವಚನದ ಸಾಲನ್ನು ನೆನಪಿಸಿವೆ.

ಸಾಮಾನ್ಯ ಕಾಲದಲ್ಲಿ ಸರ್ವಾಂತರಿಯಾಗಿ ವಿಜೃಂಭಿಸುವ ಪ್ರಧಾನಿ ಮೋದಿಯವರು ವಾರಗಳ ಹಿಂದೆ ಕೋವಿಡ್ ನರಮೇಧದ ನಟ್ಟ ನಡುವೆ ಹಠಾತ್ತನೆ ಅಂತರ್ಧಾನರಾದರು. ದೇಶವೇ ಬೇಯುತ್ತಿದ್ದಾಗ ಅವರು ಮುಖ ತೋರಲಿಲ್ಲ, ತುಟಿ ಬಿಚ್ಚಲಿಲ್ಲ.

ಮೊದಲ ಅಲೆ ಮತ್ತು ಎರಡನೆಯ ಅಲೆಯ ನಡುವಣ ಅಂತರವನ್ನು ಪೋಲು ಮಾಡಿದರು. ಆಸ್ಪತ್ರೆಗಳು-ಆಮ್ಲಜನಕ-ಔಷಧಿಗಳು-ಲಸಿಕೆಗಳ ಆಲೋಚನೆಯನ್ನೇ ಮಾಡಲಿಲ್ಲ. ನಿಜವಾದ ನಾಯಕನ ಶಕ್ತಿ ಸಾಮರ್ಥ್ಯ ಮುನ್ನೋಟ ಯೋಜನಾಶಕ್ತಿಯ ಸತ್ವ ಪರೀಕ್ಷೆ ನಡೆಯುವುದು ಸಮರಕಾಲದಲ್ಲೇ ವಿನಾ ಶಾಂತಿಯ ದಿನಗಳಲ್ಲಿ ಅಲ್ಲ. ಈ ಪರೀಕ್ಷೆಯ ಬೆಂಕಿಗೆ ಮುಖ್ಯಮಂತ್ರಿಗಳನ್ನು ಮುಂದೆ ತಳ್ಳಿ ತಾವು ತೆರೆಮರೆಗೆ ಸರಿದುಬಿಟ್ಟರು.

ಗುಜರಾತ್ ಮಾದರಿ
Photo Courtesy: PTI

ಪವಿತ್ರನದಿಗಳಾದ ಗಂಗೆ ಯಮುನೆಯರು ಕೋವಿಡ್ ಶವವಾಹಕಗಳಾಗಿ ಹೋದವು. ಶವ ಸುಡುವ ಕಟ್ಟಿಗೆಯ ದರಗಳು ಮುಗಿಲಿಗೇರಿದವು. ವಾಹನಗಳ ಹಳೆಯ ಟೈರುಗಳ ತಂದು ಚಿತೆ ಹೊತ್ತಿಸಿ ಸುಟ್ಟ ದಾರುಣ ಉದಾಹರಣೆಗಳಿವೆ. ಸತ್ತವರ ಸಂಸ್ಕಾರಕ್ಕೆ ಹಣ ಹೊಂದಿಸಲಾಗದ ಬಂಧುಗಳು ನದೀ ನೀರಿಗೆ ಶವಗಳನ್ನು ತೇಲಿಬಿಟ್ಟರು. ಬಹುತೇಕರು ಗಂಗೆ ಮತ್ತು ಯಮುನೆಯ ನದೀ ದಂಡೆಯ ಮರಳು ತೋಡಿ ಹೂತು ಹಾಕಿದರು. ಕಣ್ಣು ಹರಿದಷ್ಟು ದೂರ ಹರಡಿ ಹಬ್ಬಿದ ಈ ಮರಳ ಸಮಾಧಿಗಳನ್ನು ನಾಯಿಗಳು ತೋಡಿ ಶವಗಳನ್ನು ಕಿತ್ತು ತಿಂದವು. ಉತ್ತರ ಭಾರತದಲ್ಲಿ ಸುರಿದ ಅಕಾಲದ ಮಳೆಯು ಮರಳನ್ನು ಕೊಚ್ಚಿ ಹಾಕಿದ ನಂತರ ಗೋಚರವಾದ ಶವಗಳನ್ನೂ ನಾಯಿಗಳು ಕಿತ್ತು ಜಗಿಯತೊಡಗಿದಾಗ, ನಗರಸಭೆಗಳು ಪೌರಕಾರ್ಮಿಕರನ್ನು ಕರೆತಂದು ಪುನಃ ಮರಳನ್ನು ಎಳೆದು ಮುಚ್ಚಿಸಿದವು. ದಿಕ್ಕಿಲ್ಲದ ಶವಗಳನ್ನು ಆಸ್ಪತ್ರೆಗಳು, ಆಂಬುಲೆನ್ಸ್‌ನವರು ನೀರುಪಾಲು ಮಾಡಿದರು. ಹಿಂದೀ ಪತ್ರಿಕೆಯೊಂದು ತನ್ನ 26 ವರದಿಗಾರರನ್ನು ನಿಯುಕ್ತಿ ಮಾಡಿ ನಡೆಸಿದ ತನಿಖಾ ವರದಿಯಲ್ಲಿ ಗಂಗೆಯುದ್ದಕ್ಕೆ ಎರಡು ಸಾವಿರ ಶವಗಳು ಪತ್ತೆಯಾದವು. ಜೀವಿಸಿರುವವರಿಗೆ
ಆಸ್ಪತ್ರೆಯಲ್ಲಿ ಜಾಗವಿಲ್ಲ, ಸತ್ತವರಿಗೆ ಸ್ಮಶಾನದಲ್ಲಿ ಸಂಸ್ಕಾರವಿಲ್ಲ ಎಂಬ ದುಸ್ಥಿತಿ. ದಿನನಿತ್ಯ ಹಗಲಿರುಳು ಉರಿದ ಸಹಸ್ರಾರು ಚಿತೆಗಳಿಗೆ ಲೆಕ್ಕವಿಲ್ಲ. ತಬ್ಬಲಿಗಳಾದ ಮಕ್ಕಳ ನೆತ್ತಿಯ ಮೇಲಿನ ಹೆತ್ತವರ ನೆರಳು ಎಲ್ಲ ಕಾಲಕ್ಕೂ ಸರಿದುಹೋಯಿತು.

ನಡುವೆ ಗೋಮೂತ್ರ ಸೇವನೆಯಿಂದ, ಗೋವಿನ ಸೆಗಣಿಯ ಲೇಪನದಿಂದ ಕೋವಿಡ್ ವೈರಾಣು ನಾಶವಾಗುತ್ತದೆಂಬ ಪ್ರಚಾರದ ಆರ್ಭಟ ನಡೆದಿದೆ. ಸಂಸದೆಯೂ ಆದ ಸಾಧ್ವಿ ಪ್ರಜ್ಞಾ ಸಿಂಗ್ ಈ ಪ್ರಚಾರದ ಮುಂಚೂಣಿಯಲ್ಲಿದ್ದಾರೆ. ಬೀದಿ ಬೀದಿಗಳಲ್ಲಿ ಬೇವಿನ ಸೊಪ್ಪಿನ ಹೊಗೆ ಹಾಕಿ, ಶಂಖಘೋಷ ಮಾಡಿ ಕೊರೊನಾ ಓಡಿಸುವ ಅವಿವೇಕವೂ ಜರುಗಿದೆ. ಕೇಂದ್ರ ಸರ್ಕಾರದ ಆರೋಗ್ಯ ಶಾಖೆಗಳು ಅಂಧಶ್ರದ್ಧೆಗೆ ಕುಮ್ಮಕ್ಕು ನೀಡಿವೆ. ನಿತ್ಯ ಗೋಮೂತ್ರ ಸೇವನೆಯಿಂದಾಗಿ ತಮ್ಮನ್ನು ಕೊರೊನಾ ಬಾಧಿಸಿಲ್ಲ ಎಂಬ ಸಾಧ್ವಿ ಪ್ರಜ್ಞಾ ಅವರು ನಿನ್ನೆ ಹಠಾತ್ತನೆ ಉಸಿರಾಟದ ತೊಂದರೆಯನ್ನು ಎದುರಿಸಿದರು. ಅವರನ್ನು ವಿಮಾನ ಆಂಬುಲೆನ್ಸ್‌ನಿಂದ ಸುರಕ್ಷಿತ ಆಸ್ಪತ್ರೆಗೆ ತಲುಪಿಸಲಾಯಿತು. ಅಂಧಶ್ರದ್ಧೆಗಳ ಕುರಿತು ಪ್ರಧಾನಿ ಚಕಾರ ಎತ್ತಲಿಲ್ಲ. ಈ ಎಲ್ಲ ಎಣೆಯಿಲ್ಲದ ದುಃಖ ದುರಂತದಲ್ಲಿ ಪ್ರಧಾನಿಯವರ ಕಂಚಿನ ಕಂಠ ಬಹುತೇಕ ಅಡಗಿಹೋಗಿತ್ತು.

ಕೋವಿಡ್ ಸಾವುನೋವಿನ ಸೂತಕದ ನಡುವೆ 20 ಸಾವಿರ ಕೋಟಿ ರುಪಾಯಿ ವೆಚ್ಚದ ಹೊಸ ಸಂಸತ್ ಭವನ ಮತ್ತು ಪ್ರಧಾನಿ ನಿವಾಸವನ್ನು ಹೊಂದಿರುವ ಸೆಂಟ್ರಲ್ ವಿಸ್ತಾ ನಿರ್ಮಾಣ ಅಬಾಧಿತವಾಗಿ ನಡೆದಿದೆ. ಈ ಯೋಜನೆಯನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ತೆಗೆದುಕೊಂಡಿದ್ದಾರೆ ಪ್ರಧಾನಿಯವರು. ಮಾರಣಹೋಮದ ನಡುವೆ ನಡೆಯುವ ಮೋಜಿನ ಮೇಜವಾನಿಯಷ್ಟೇ ವಿಕೃತ ಕೃತ್ಯವಿದು. ನೊಂದು ಸತ್ತು ಸಂಸ್ಕಾರವನ್ನೂ ಕಾಣದೆ ನೀರುಪಾಲು ನಾಯಿ ನರಿ ಪಾಲಾದ ಕಳೇಬರಗಳ ಅಡಿಪಾಯದ ಮೇಲೆ ಮೈ ತಳೆಯುವ ಈ ಸೌಧಗಳ ಗೋಡೆ ಮಾಡುಗಳು ನೋವು ನರಳಾಟವನ್ನು ಪಿಸುಗುಡುವುದಿಲ್ಲವೇ? ಅಂತಹ ಸುಖಾಸೀನಗಳ ಮೇಲೆ ಕುಳಿತು ಜನಚಿಂತನೆ ಮಾಡುವುದು ಸಾಧ್ಯವೇ? ಅಂತಹ ಮಹಲಿನ ಹಂಸತೂಲಿಕಾ ತಲ್ಪದಲ್ಲಿ ಪ್ರಧಾನಿಯಾದ ವ್ಯಕ್ತಿ ದಿಂಬಿಗೆ ತಲೆಯಾನಿಸಿ ನಿದ್ರಿಸುವುದು ಸಾಧುವೇ?

ಸಂವೇದನೆಗಳು ಸತ್ತು ಹೋದಂತೆ ನಡೆದುಕೊಂಡಿರುವವರು ಏಕಾಏಕಿ ಮಿಡಿಯುವ ಕಂಬನಿ ಕೃತ್ರಿಮ ಅಲ್ಲವೆಂದು ನಂಬುವುದಾದರೂ ಹೇಗೆ?

ಸಾವು ಸಂಕಟಗಳ ನಡುವಿನಿಂದ ಮೋದಿ ಆಡಳಿತದ ವಿರುದ್ಧ ಜನಾಕ್ರೋಶ ಸಿಡಿದಿರುವುದು ಸಹಜ ಬೆಳವಣಿಗೆ. ಉತ್ತುಂಗದಲ್ಲಿದ್ದ ಅವರ ಜನಪ್ರಿಯತೆಯ ಉಕ್ಕಿನ ಕವಚಕ್ಕೆ ತುಕ್ಕು ತಗುಲತೊಡಗಿದೆ. ಪಕ್ಷ ಪರಿವಾರದಲ್ಲಿ ಗಾಬರಿಯ ಗಂಟೆ ಮೊಳಗಿದೆ. ಹಾನಿಯನ್ನು ತಡೆಯುವ ಬಗೆಯೆಂತು ಎಂಬ ಕುರಿತು ಚಿಂತನೆ ನಡೆದಿದೆ. ಉತ್ತರಪ್ರದೇಶದ ವಿಧಾನಸಭೆ ಚುನಾವಣೆಗೆ ವರ್ಷವೂ ಉಳಿದಿಲ್ಲ. ಯೋಗಿ ಆದಿತ್ಯನಾಥರಿಗೆ ಹೋಲಿಸಿದರೆ ನರೇಂದ್ರ ಮೋದಿಯವರು ಅದೃಷ್ಟವಂತರು. ಮುಂದಿನ ಲೋಕಸಭಾ ಚುನಾವಣೆಗಳು ಮೂರು ವರ್ಷ ದೂರದಲ್ಲಿವೆ. ಅಷ್ಟರೊಳಗೆ ವರ್ಚಸ್ಸಿನ ಕವಚಕ್ಕೆ ತಗುಲಿರುವ ತುಕ್ಕನ್ನು ಉಜ್ಜಿ ತೆಗೆದು, ಹೊಸ ತಂತ್ರಗಳ ಹೆಣೆಯಲು ಸಾಕಷ್ಟು ಕಾಲಾವಕಾಶ ಉಂಟು.

ಅಳುವ ದೃಶ್ಯ ಮನುಷ್ಯನನ್ನು ವಿನಮ್ರವಾಗಿಸುತ್ತದೆ, ಮಾನವೀಯಗೊಳಿಸುತ್ತದೆ. ಅನುಕಂಪ-ಸಹಾನುಭೂತಿಯನ್ನು ಹುಟ್ಟಿಸುತ್ತದೆ. ಕಣ್ಣೀರಿಡುವ ವ್ಯಕ್ತಿಯು ಸರ್ವಶಕ್ತನೇನೂ ಅಲ್ಲ, ಬದಲಾಗಿ ಮನುಷ್ಯ ಮಾತ್ರನೇ ಎಂಬ ಅನುಕಂಪ ಹುಟ್ಟಿಸುತ್ತದೆ. ಆತ ತಪ್ಪು ಮಾಡಿರಲಾರ, ಮಾಡಿದ್ದರೂ ಪರವಾಗಿಲ್ಲ, ಕಣ್ಣೀರು ಅವನ ಪಶ್ಚಾತ್ತಾಪವೇ ಇದ್ದೀತು ಎಂಬ ಭಾವನೆಯನ್ನು ಹುಟ್ಟಿಸಿಬಿಡುತ್ತದೆ.

ಕಣ್ಣೀರು ಹಾಕಿ ಅದಕ್ಷ ಆಡಳಿತವನ್ನು ಅಸಾಮರ್ಥ್ಯವನ್ನು ಮುಚ್ಚಿಡುವುದು ಸಾಧ್ಯವಿಲ್ಲ. ವಚನಭಂಗ, ಮೋಹಭಂಗವನ್ನು ಅದುಮಿಡುವುದು ಸುಲಭವಲ್ಲ. ಕುಸಿಯತೊಡಗಿರುವ ಜನತಂತ್ರ, ಜನಸಮುದಾಯಗಳ ವಿಶ್ವಾಸ, ಕವಿಯುತ್ತಿರುವ ನಿರುದ್ಯೋಗ, ಹದಗೆಟ್ಟಿರುವ ಅರ್ಥಸ್ಥಿತಿ, ದ್ರುವೀಕರಣ ರಾಜಕಾರಣದಿಂದಾಗಿ ತಲೆಯೆತ್ತುತ್ತಿರುವ ಆರ್ಥಿಕ-ಸಾಮಾಜಿಕ ಘರ್ಷಣೆಗಳ ಕುರೂಪವನ್ನು ಅಡಗಿಸುವುದು ದುಸ್ಸಾಧ್ಯವೇ ಸರಿ. ಸಾವುನೋವುಗಳಿಗೆ ಹನಿಗೂಡದ ಕಣ್ಣುಗಳು ವರ್ಚಸ್ಸಿನ ಹಾನಿಗೆ, ಗತವೈಭವಕ್ಕೆ ಮರುಜೀವ ನೀಡುವುದಕ್ಕೆ ರಾಜಕೀಯ ನಷ್ಟವನ್ನು ತುಂಬಿಕೊಳ್ಳುವುದಕ್ಕೆ ಕಂಬನಿ ತುಂಬುವುದು ಜನದ್ರೋಹ.

ಹೊಟ್ಟೆ ಬಟ್ಟೆಗೆ ಬಡಿದಾಡುವ ನಿತ್ಯ ಯಾತನೆಯ ಲೌಕಿಕ ವಾಸ್ತವಕ್ಕೆ ಜನಸಮೂಹಗಳನ್ನು ತುಸುಕಾಲ ಜೋಮುಗಟ್ಟಿಸಬಹುದು. ಕಡು ಭಾವುಕತೆಯ ಅರಿವಳಿಕೆ ಮದ್ದು ನೀಡಿ ಹುಸಿ ಆವರಣದಲ್ಲಿ ಕೆಲ ಕಾಲ ಬಂಧಿಸಲು ಬಂದೀತು. ಆದರೆ ಅರಿವಳಿಕೆಯ ಮದ್ದಿನ ಪ್ರಭಾವ ಕಾಯಂ ಅಲ್ಲ. ಹೀಗಾಗಿ ಮೈಮರೆವು ಚಿರಾಯು ಅಲ್ಲ.


ಇದನ್ನೂ ಓದಿ: ಲ್ಯುಟಿನ್ಸ್ ದೆಹಲಿಯ ಐಶಾರಾಮದ ಬಗ್ಗೆ ಗೇಲಿ; ಸಾವಿನ ಸರಣಿಯ ಮಧ್ಯೆ 20 ಸಾವಿರ ಕೋಟಿ ಮಹಲು

ಇದನ್ನೂ ಓದಿ: ದೆಹಲಿ ವಾಸ್ತು- ಹಿನ್ನೋಟ; ಭವ್ಯ ಕಟ್ಟಡವೊಂದಕ್ಕೆ ಪರಂಪರೆಯ ನೆಲಸಮ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಬರಹ ಅರ್ಥಪೂರ್ಣವಾಗಿದೆ. ಬಹುಜನ ಅಪ್ಪಟ ದೇಶ ಭಕ್ತರು ಶಾಶ್ಕವತವಾದ ಗಟ್ಟಿಮುಟ್ಟಾದ ತಳಪಾಯದ ಮೇಲೆ ಕಟ್ಟಿದ್ದ ಏಕತೆ, ಭಾವೈಕ್ಯತೆಯ ಭಾರತ ದೇಶವನ್ನು ಬಿಜೆಪಿ ನೇತೃತ್ವದ ಮನೆಯಾಳ ಮೋದಿ ಬುಡ ಸಹಿತ ಕೇವಲ ೭ ವರ್ಷಗಳಲ್ಲೇ ನೆಲಸಮ ಮಾಡಿ ಸೆಂಟ್ರಲ್ ವಿಸ್ತಾ ಹೆಸರಿನ ಸೂತಕದ ಸೌಧ ನಿರ್ಮಾಣ ಮಾಡುತ್ತಿದ್ದಾರೆ. ಜಗತ್ತಿನಲ್ಲೇ ಅತ್ಯಂತ ದುರ್ಬಲ ಪ್ರಧಾನಿ ಎಂಬ ಕುಖ್ಯಾತಿಯನ್ನು ಮೋದಿ ಪಡೆದುಕೊಳ್ಳುವ ಮೂಲಕ ದೇಶದ ಮಾನ ಮರ್ಯಾದೆಯನ್ನು ಹಾಳು ಮಾಡಿದರು.

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...