Homeಮುಖಪುಟಆನ್‌ಸ್ಕ್ರೀನ್‌ನಲ್ಲಿ ಮಾತ್ರ ಪ್ರತಿಭಾವಂತ ನಟ; ಉಳಿದಂತೆ ಅಂತಃಕರಣವುಳ್ಳ ಸಾಮಾನ್ಯ ಮನುಷ್ಯನಾಗಿದ್ದ ಸಂಚಾರಿ ವಿಜಯ್

ಆನ್‌ಸ್ಕ್ರೀನ್‌ನಲ್ಲಿ ಮಾತ್ರ ಪ್ರತಿಭಾವಂತ ನಟ; ಉಳಿದಂತೆ ಅಂತಃಕರಣವುಳ್ಳ ಸಾಮಾನ್ಯ ಮನುಷ್ಯನಾಗಿದ್ದ ಸಂಚಾರಿ ವಿಜಯ್

- Advertisement -
- Advertisement -

“This quiet dust was gentleman and ladies” ಎನ್ನುವ ಎಮಿಲಿ ಡಿಕೆಸ್ನೆನ್‌ನ ಪದ್ಯದ ಸಾಲಿನಂತೆಯೇ ಸಂಚಾರಿ ವಿಜಯ್ ತಮ್ಮೂರಿನ ತೋಟದ ಮಣ್ಣು ಸೇರಿದರು. ಹೌದು, ಅವರೊಬ್ಬ ಜಂಟಲ್‌ಮನ್. ಕೇವಲ ಸಿನಿಮಾ ಕಾರಣಕ್ಕಂತೂ ಅಲ್ಲ. “ರಾಷ್ಟ್ರ ಪ್ರಶಸ್ತಿ ಎಂಬುದು ಶಾಶ್ವತವಾದ ಟ್ಯಾಗ್‌ಲೈನ್ ಅಲ್ಲ ಸರ್. ಅದೊಂದು ಸಿನಿಮಾದ ಒಂದು ಪಾತ್ರಕ್ಕೆ ಆ ವರ್ಷದಲ್ಲಿ ಬಂದ ಪ್ರಶಸ್ತಿ ಅಷ್ಟೆ. ಪ್ರತೀ ಸಿನಿಮಾಗೂ ಹೊಸ ಪಾತ್ರ, ಹೊಸ ಅನುಭವ ಬೇಕು. ಇದು ನನ್ನನ್ನು ಕಂಪಾರ್ಟ್‌ಮೆಂಟಲೈಸ್ ಮಾಡಿಬಿಡುತ್ತದೆಂಬ ಭಯ ನನಗೆ” ಎನ್ನುತ್ತಿದ್ದರು ಸಂಚಾರಿ ವಿಜಯ್. ಒಬ್ಬ ನಟನಾಗಿ ಚಿತ್ರರಂಗಕ್ಕೆ ಎಷ್ಟು ಅವಶ್ಯವಿದ್ದರೋ ಅದಕ್ಕಿಂತ ಹೆಚ್ಚಾಗಿ ಅವರ ಸಾಮಾಜಿಕ ಬದ್ಧತೆ ಮತ್ತು ಕಾಳಜಿಯ ಮನಸ್ಸಿದ್ದ ಕಾರಣಕ್ಕಾಗಿ ಅವರು ನಮ್ಮೊಡನೆ ಇರಲೇಬೇಕಿತ್ತು.

ಕಳೆದ ವರ್ಷದ ಕೋವಿಡ್ ಸಂದರ್ಭದ ಲಾಕ್‌ಡೌನ್‌ನಲ್ಲಿ ಶುರುವಾದ ಅವರ ಸಮಾಜಸೇವಾ ಕಾರ್ಯ, ಈ ವರ್ಷವಂತೂ ನಿರಂತರವಾಗಿ ಸಾಗಿತ್ತು. ಚಿತ್ರರಂಗದ ಬಹಳ ಜನ ಈ ಸಮಯದಲ್ಲಿ ತಮ್ಮ ’ಶಕ್ತ್ಯಾನುಸಾರ’ ಸೇವೆ ಮಾಡಿರಬಹುದು.

ಆದರೆ ಒಬ್ಬ ನಾಯಕ ನಟನಾಗಿದ್ದ ವಿಜಯ್ “Stay Home, Stay Safe” ಎಂಬ ಸೊಫೆಸ್ಟಿಕೇಟೆಡ್ ಸ್ಲೋಗನ್ ಹೇಳಿಕೊಂಡು ಮನೆಯೊಳಗೆ ಸೇರಲಿಲ್ಲ. ಹೊರಗೆ ಬಂದು ಅವಶ್ಯವಿರುವವರ ಸೇವೆಗಾಗಿ ನಿಂತರು.

ಕೋವಿಡ್ ಪೇಷಂಟ್ ಯಾರಿಗಾದರೂ ಬೆಡ್ ಕೊಡಿಸಲು ಸಾಧ್ಯವಾಗದೆ ಹೋದರೆ ಚಡಪಡಿಸಿಬಿಡುತ್ತಿದ್ದರು. ಐದಾರು ತಿಂಗಳ ಹಿಂದೆ ಸಿನಿಮಾದ ಮುಹೂರ್ತವೊಂದನ್ನು ಮುಗಿಸಿ ಮಾತಾಡುತ್ತಾ ಕೂತಾಗ ಹೊಸ ಕಾರು ಕೊಂಡಿದ್ದೀರಿ ಪಾರ್ಟಿ ಎಲ್ಲಿ ಎಂದದ್ದಕ್ಕೆ “ನನ್ನ ಕಾರಿನ ವಿಷಯ ಹಾಗಿರಲಿ, ಮೊನ್ನೆ ಒಂದು ಚಿಕ್ಕ ಹುಡುಗಿಗೆ ಅದೆಂಥದೋ ಜಗತ್ತಿನ ಅಪರೂಪದ ಕಾಯಿಲೆ ಬಂದಿದೆಯಂತೆ. ಐದು ಲಕ್ಷದಲ್ಲಿ ಒಬ್ಬರಿಗೆ ಬರುವಂಥ ಈ ಕಾಯಿಲೆಗೆ ವಿಪರೀತ ಖರ್ಚಾಗುತ್ತಂತೆ. ಪಾಪ, ಆ ತಂದೆತಾಯಿಗಳಿಗೆ ಲಾಕ್‌ಡೌನ್‌ನಿಂದಾಗಿ ಜೀವನ ನಡೆಸುವುದೇ ಕಷ್ಟ ಆಗಿದೆ. ಇನ್ನು ಇದ್ಹೇಗೆ ಮ್ಯಾನೇಜ್ ಮಾಡ್ತಾರೆ. ಒಂದಷ್ಟು ಜನಕ್ಕೆ ಮಾತಾಡಿದ್ದೀನಿ. ಏನಾದ್ರೂ ಸಹಾಯ ಮಾಡಲೇಬೇಕು” ಎಂದಿದ್ದರು. ಆ ಪ್ರಯತ್ನ ಮಾಡಿದರು ಕೂಡ. ಆದರೆ ಕೆಲ ದಿನಗಳ ನಂತರ ಆ ಹುಡುಗಿ ಸಾವನ್ನಪ್ಪಿದಾಗ ಕರೆ ಮಾಡಿ ಸಂಕಟಪಟ್ಟಿದ್ದರು. ಈ ಮನುಷ್ಯ ಏಕೆ ಹೀಗೆ? ಎಂದು ಅಂತ ಸಂದರ್ಭದಲ್ಲೆಲ್ಲ ಯೋಚಿಸುತ್ತಿದ್ದೆ. ಈಗ ಅವರ ದೇಹದ ಅಂಗಾಂಗಳನ್ನು ದಾನ ಮಾಡಿರುವುದು ನಿಜಕ್ಕೂ ಅವರ ವ್ಯಕ್ತಿತ್ವಕ್ಕೆ ತಕ್ಕುದಾದ ನಿರ್ಧಾರ. ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ದರ ಕಡಿಮೆ ಎಂಬ ಸುದ್ದಿ ನೋಡಿ, ಅವಶ್ಯವಿದ್ದ ಪರಿಚಿತರ ಯಾರನ್ನೋ ಕರೆದೊಯ್ದಾಗ, “ಎಷ್ಟೊಂದು ವಯಸ್ಸಾದ ಜನ ಸಾಲಿನಲ್ಲಿ ಇದ್ದರು. ಇವರನ್ನೆಲ್ಲ ಬಿಟ್ಟು ನಾವು ಪ್ರಭಾವ ಬಳಸಿ ಒಳಗೆ ಹೋಗೋದು ಎಷ್ಟು ಸರಿ? ಹಾಗಾಗಿ ವಾಪಾಸ್ ಬಂದೆ” ಎಂದು ಹೇಳಿಕೊಂಡಿದ್ದರು ವಿಜಯ್.

ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಾಗಲೇ ನಾನವರ ಹೆಸರ ಕೇಳಿದ್ದು. ಅದಾಗಿ ಒಂದು ವರ್ಷದ ನಂತರ ನಮ್ಮ ಹೊಂಗಿರಣ ತಂಡದಿಂದ, ಸಾಸ್ವೆಹಳ್ಳಿ ಸತೀಶ್ ನಿರ್ದೇಶನದಲ್ಲಿ ನನ್ನ ಕಥೆಯೊಂದನ್ನು ಕಿರುಚಿತ್ರ ಮಾಡಲು ಕರೆ ಮಾಡಿ ಕೇಳಿಕೊಂಡಾಗ ನಿರಾಸಕ್ತಿಯಿಂದಲೇ ಸಿನಾಪ್ಸಿಸ್ ಕಳಿಸಿ ನೋಡೋಣ ಎಂದವರು, ಅದೇ ಸಂಜೆ ಕಾಲ್ ಮಾಡಿ ನಾನು ಈ ಪಾತ್ರ ಮಾಡುತ್ತೇನೆ. ಭೇಟಿ ಮಾಡೋಣ ಅಂದರು. ಮೂವತ್ತು ನಿಮಿಷದ ಕಿರುಚಿತ್ರಕ್ಕೆ ಜೊತೆಯಾದ ನಾವು ಆನಂತರ ಹತ್ತಿರದ ಗೆಳೆಯರಾದೆವು.

ಓದುವ ಹವ್ಯಾಸ ನಿರಂತರ

ಒಮ್ಮೆ ಬೆಂಗಳೂರಿಂದ ಶಿವಮೊಗ್ಗಕ್ಕೆ ಕಾರ್ಯಕ್ರಮವೊಂದಕ್ಕೆ ಪ್ರಯಾಣಿಸಿದಾಗ ’ಆಧ್ಯಾತ್ಮ ಡೈರಿ’ ಪುಸ್ತಕವನ್ನು ಕಾರಿನ ಪ್ರಯಾಣದಲ್ಲೇ ಓದಿ ಮುಗಿಸಿದರು. ಯಾವುದಾದರೂ ಪುಸ್ತಕ ಓದಿದ ಮೇಲೆ ಕಾಲ್ ಮಾಡಿ ಅದರ ಬಗ್ಗೆ ಮಾತಾಡುತ್ತಿದ್ದರು. ಅವರಿಗೆ ಅಪಘಾತವಾಗುವ ಹಿಂದಿನ ದಿನ ಕುಂ.ವೀ.ಯವರ ’ಗಾಂಧಿ ಕ್ಲಾಸ್’ ಪುಸ್ತಕದ ಫೋಟೋ ಜೊತೆಗೆ ಇದನ್ನು ಓದುತ್ತಿದ್ದೇನೆ ಎಂಬ ಮೆಸೇಜ್ ಕಳಿಸಿದ್ದರು. ಬಹುಶಃ ಈ ವಾರದ ಕಾಲ್‌ನಲ್ಲಿ ಅದರ ಬಗ್ಗೆ ಮಾತಾಡುತ್ತಿದ್ದರೇನೋ. ಅವರೊಂದಿಗಿನ ಸಂಭಾಷಣೆಯಲ್ಲಿ ಕನ್ನಡ ಪದಗಳನ್ನು ಅವರು ತುಂಡು ಮಾಡಿ ಹೊಸ ರೀತಿಯ ಪದಗಳನ್ನು ಹುಟ್ಟು ಹಾಕುತ್ತಿದ್ದರು. ಅವು ತಮಾಷೆಯಾಗಿರುತ್ತಿದ್ದವು. ಇತ್ತೀಚಿಗೆ ಗಿರೀಶ್ ಕಾರ್ನಾಡರ ’ಆಡಾಡುತ ಮನುಷ್ಯ’ ಆಡಿಯೋ ಬುಕ್‌ಗೆ ಧ್ವನಿ ಕೊಡುವಾಗ ತುಂಬಾ ಪ್ರಾಕ್ಟೀಸ್ ಮಾಡಿಹೋಗ್ತೀನಿ, ಅಂಥ ದೊಡ್ಡವರ ಪುಸ್ತಕ ಇದು ಎನ್ನುವ ಎಚ್ಚರ ಅವರಲ್ಲಿತ್ತು.

ಐ.ಕೆ.ಗುಜ್ರಾಲ್ ಅವರ ಸಹೋದರ ಅಂತಾರಾಷ್ಟ್ರೀಯ ಖ್ಯಾತ ಕಲಾವಿದ ಮತ್ತು ಶಿಲ್ಪಿ, ಸತೀಶ್ ಗುಜ್ರಾಲ್ ಅವರಿಗೆ ಬಾಲ್ಯದ ಅಪಘಾತದಿಂದಾಗಿ ಶಾಲೆಗೆ ಹೋಗಲು ಸಾಧ್ಯವಾಗದೆ ಹೋದಾಗ ಅವರ ತಂದೆ ಹೆಚ್ಚೆಚ್ಚು ಪುಸ್ತಕಗಳನ್ನು ತಂದು ಕೊಡುತ್ತಿದ್ದರಂತೆ. ಅವುಗಳನ್ನು ಓದಿದ ಬಾಲಕ ಸತೀಶ್ ’ಪುಸ್ತಕಗಳು ಹೊಸ ಜಗತ್ತನ್ನೇ ನನ್ನ ಮುಂದಿಟ್ಟವು. ಜಗತ್ತಿನಲ್ಲಿರುವ ಸಮಸ್ಯೆಗಳ ಮುಂದೆ ನನ್ನ ಈ ಸಮಸ್ಯೆ ಏನೇನೂ ಅಲ್ಲ ಎಂಬ ಅರಿವಾಯಿತು’ ಎನ್ನುತ್ತಿದ್ದರಂತೆ. ವಿಜಯ್ ಅವರಿಗೆ ಸಮಾಜದ, ತನ್ನ ಸುತ್ತಲಿನವರ ಸಂಕಷ್ಟಗಳು, ಅಸಮಾನತೆಯ ಬಗ್ಗೆ ನಿಲುವು ತಾಳಲು ಅವರ ಓದು ಕಾರಣ ಎಂದೇ ನಾನು ಭಾವಿಸುತ್ತೇನೆ.

ಒಮ್ಮೆ ಅವರು ಎಫ್‌ಬಿಯಲ್ಲಿ ಹಾಕಿದ ಇಂಗ್ಲಿಷ್ ಪೋಸ್ಟ್‌ನಲ್ಲಿ ಸಣ್ಣದೊಂದು ತಪ್ಪಾಗಿತ್ತು. ಅದನ್ನು ಮೆಸೇಜ್ ಮಾಡಿ ತಿಳಿಸಿದೆ. ನಾನು ಸಂಕೋಚದಿಂದಲೇ ಟೈಪಿಂಗ್ ಮಿಸ್ಟೇಕ್ ಇರಬೇಕು ಎಂದೆ. ಅದಕ್ಕವರು, ’ಇಲ್ಲ ನನಗೆ ಅದು ಗೊತ್ತಿರಲಿಲ್ಲ’ ಎಂದರು. ಆ ನಂತರದಲ್ಲಿ ದೀರ್ಘವಾಗಿ ಏನಾದರೂ ಇಂಗ್ಲಿಷ್‌ನಲ್ಲಿ ಹಾಕುವ ಪೋಸ್ಟ್‌ಗಳನ್ನು ಕಳಿಸಿ ’ನೋಡಿ ಹೇಳಿ ಪ್ಲೀಸ್’ ಎನ್ನುವ ಮೆಸೇಜು ಕಳಿಸುತ್ತಿದ್ದರು. ಹಾಗೆ ನೋಡಿದರೆ ಅವುಗಳಲ್ಲಿ ಏನೂ ತಪ್ಪುಗಳಿರುತ್ತಿರಲಿಲ್ಲ. ಆದರೆ ಅವರಿಗೆ ಖಾತರಿಪಡಿಸಿಕೊಳ್ಳುವ ಆ ಪ್ರಾಮಾಣಿಕತೆ ಇತ್ತು. ಇಂಥ ನಡುವಳಿಕೆಯನ್ನು ನಾವು ಎಷ್ಟು ಜನರಲ್ಲಿ ಕಾಣಬಹುದು? ಈ ವಿಚಾರವಾಗಿ, ’ನನ್ನನ್ನು ಬಿಗ್‌ಬಾಸ್‌ಗೆ ಕರೆಯುತ್ತಿದ್ದಾರೆ, ನಾನು ಬರಲ್ಲ ಎಂಬುದನ್ನು ಪೊಲೈಟ್ ಆಗಿ ಮತ್ತು ಡೀಸೆಂಟ್ ಆಗಿ ಹೇಳಬೇಕು ಅಂಥ ಮೆಸೇಜ್ ಡ್ರಾಫ್ಟ್ ಮಾಡಿ ಸರ್’ ಎಂದಾಗ ನಾನು “ಹೇ, ಯಾಕೆ ಸರ್? ಸೋಷಿಯಲ್ ಲೈಫ್ ಈಸ್ ಗೋಲ್ಡನ್ ಲೈಫ್. ನೀವು ಹೋಗಿ ಬನ್ನಿ’ ಎಂದಿದ್ದಕ್ಕೆ , ’ಯಾಕ್ ಸ್ವಾಮಿ, ನಾವು ಹೀಗಿರೋದು ನಿಮ್ಗೆ ಇಷ್ಟ ಇಲ್ವ?’ ಅಂದಿದ್ದರು. ಆಮೇಲೆ ನಾನು ಅಂದೆ, ’ನೀವು ಹೋಗ್ತೀನಿ ಅಂದ್ರೆ, ನಾನೇ ಅದರ ವಿರುದ್ಧ ಕ್ಯಾಂಪೇನ್ ಮಾಡ್ತೀನಿ’ ಎಂದಾಗ ನಕ್ಕಿದ್ದರು.

ಅವರ ಸುದ್ದಿ ಏನಾದರೂ ಟಿವಿಗಳಲ್ಲಿ ಬರುವಾಗ ನಮ್ಮ ಅವ್ಯಕ್ತ ಕಿರುಚಿತ್ರದ ಫುಟೇಜುಗಳು ಬಂದರೆ ತಕ್ಷಣ ಫೋಟೋ ಹೊಡೆದು ಕಳಿಸುತ್ತಿದ್ದೆ. ಅವರು ಆಸ್ಪತ್ರೆ ಸೇರಿದಾಗಿನಿಂದ ನಿರಂತರವಾಗಿ ಅವವೇ ಚಿತ್ರಗಳು ಪರದೆ ಮೇಲೆ ಮೂಡಿ ಬರುತ್ತಿದ್ದಾಗ ವಿಚಿತ್ರ ಸಂಕಟವಾಗುತ್ತಿತ್ತು. ಆ ಫೋಟೋಗಳನ್ನು ಅವರಿಗೆ ಕಳಿಸಿದರೆ ನೋಡುವುದಿಲ್ಲವಲ್ಲ!

’ನೀವು ಸಿನಿಮಾ ಒಪ್ಪಿಕೊಳ್ಳುವ ವಿಷಯದಲ್ಲಿ ಸ್ವಲ್ಪ ಚ್ಯೂಸಿ ಆಗಬೇಕು’ ಎಂದರೆ, ’ಅಯ್ಯೋ ಕೆಲಸ ಸಿಕ್ಕಾಗ ಮಾಡ್ತಾ ಇರಬೇಕು’ ಎನ್ನುತ್ತಿದ್ದವರ ಬಳಿ ಈಗ ಸುಮಾರು ಹದಿನೈದು ಸಿನಿಮಾಗಳಿದ್ದವು. ’ತಲೆದಂಡ’ ಸಿನಿಮಾದ ಪಾತ್ರವೂ ವಿಶೇಷವಾದ ಅಭಿನಯಕ್ಕೆ ಅವಕಾಶ ಕೊಟ್ಟಿರುವ ಪಾತ್ರವಾಗಿದೆ. ನನಗೆ ಅವರ ಸ್ನೇಹ ಸಿಕ್ಕಿದ್ದರ ಬಗ್ಗೆ ಬಹಳ ಹೆಮ್ಮೆಯಿದೆ. ನಮ್ಮನ್ನು ದುಃಖಕ್ಕೆ ತಳ್ಳಿದರು ಎಂಬ ಕೋಪವಿದೆ. ಆದರೆ ಸಿನಿಮಾ ನಟನೊಬ್ಬನಿಗೆ ಬಂದ ದೊಡ್ಡ ಪ್ರಶಸ್ತಿಯೊಂದು ಅವನನ್ನು ಜನರಿಂದ ದೂರ ಮಾಡಿಬಿಡುವ ಸಾಧ್ಯತೆಯೇ ಹೆಚ್ಚು. ಅಂಥದ್ದರಲ್ಲಿ ರಾಷ್ಟ್ರ ಪ್ರಶಸ್ತಿಯ ಹಮ್ಮು ಬಿಮ್ಮು ಎಂದೂ ಇಟ್ಟುಕೊಳ್ಳದೆ ಸಹಜವಾಗಿಯೇ ಸರಳವಾಗಿ ಬದುಕಿದ್ದ ಸಂಚಾರಿ ವಿಜಯ್, ಕನ್ನಡ ಚಿತ್ರರಂಗ ಮತ್ತು ಸಮಾಜ ಸದಾ ನೆನಪಿಟ್ಟುಕೊಳ್ಳಬೇಕಾದ ’ಸಾಮಾನ್ಯ ಮನುಷ್ಯ’. ಸಂಚಾರಿ ವಿಜಯ್ ಎಂದರೆ ಸಹಜ, ಸರಳ, ಸಜ್ಜನಿಕೆ ಮತ್ತು ಸಂಯಮ ಹೊಂದಿದ್ದ ಆನ್‌ಸ್ಕ್ರೀನ್‌ನಲ್ಲಿ ಮಾತ್ರ ನಟನಾಗಿದ್ದ ಪ್ರತಿಭಾವಂತ. ಸದಾ ಆಸ್ಪತ್ರೆಯಲ್ಲಿದ್ದವರ ಚಿಕಿತ್ಸೆಯ ಬಗ್ಗೆ ಯೋಚಿಸುತ್ತಿದ್ದ ವಿಜಯ್, ತಮ್ಮ ಅಂಗಾಂಗಗಳನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರೋಪಕಾರಿಯಾಗಿದ್ದರೆಂಬ ಗರ್ವ ಇದ್ದಂತೆಯೇ ಆ ರಾತ್ರಿ ಹೆಲ್ಮೆಟ್ ಹಾಕಿರಲಿಲ್ಲ ಎಂದು ಗದರಿಸಬೇಕು ಅನ್ನಿಸುತ್ತದೆ. ಹಾಗೆಯೇ ಅವರಿಗಿದ್ದ ಜನರ ಪ್ರೀತಿಯನ್ನು ಕಾಣಿಸಬೇಕು ಅನ್ನಿಸುತ್ತಿದೆ. ಆದರೇನು ಮಾಡುವುದು?

He has met his maker!

  • ಶಿವಕುಮಾರ್ ಮಾವಲಿ
ಶಿವಕುಮಾರ್ ಮಾವಲಿ

ಶಿವಮೊಗ್ಗ ಮೂಲದ ಶಿವಕುಮಾರ್ ಕಥೆಗಾರ ಮತ್ತು ನಾಟಕಕಾರ. ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್ ಅವರ ’ದೇವರು ಅರೆಸ್ಟ್ ಆದ’, ’ಟೈಪಿಸ್ಟ್ ತಿರಸ್ಕರಿಸಿದ ಕಥೆ’ ಕಥಾಸಂಕಲನಗಳು ಪ್ರಕಟವಾಗಿವೆ.


ಇದನ್ನೂ ಓದಿ: ಸಂಚಾರಿ ವಿಜಯ್‌ ನಿಧನಕ್ಕೆ ಕನ್ನಡದಲ್ಲಿ ಸಂತಾಪ ಸೂಚಿಸಿದ ಅಮೆರಿಕಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...