ಯಾಸ್ ಚಂಡಮಾರುತದಿಂದ ತೀವ್ರ ಹಾನಿಗೊಳಗಾಗಿರುವ ಪಶ್ಚಿಮ ಬಂಗಾಳಕ್ಕೆ, ಒಕ್ಕೂಟ ಸರ್ಕಾರ ಯಾವುದೇ ಆರ್ಥಿಕ ಪರಿಹಾರ ನಿಧಿಯನ್ನು ನೀಡಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.
ಮೇ 28 ರಂದು ಪಶ್ಚಿಮ ಬಂಗಾಳ ಸೇರಿದಂತೆ ಯಾಸ್ ಚಂಡಮಾರುತದಿಂದ ಹಾನಿಗೊಳಗಾದ ರಾಜ್ಯಗಳಿಗೆ ಪ್ರಧಾನಿ 1,000 ಕೋಟಿ ರೂಪಾಯಿ ಆರ್ಥಿಕ ಸಹಾಯವನ್ನು ಮಂಜೂರು ಮಾಡಿದ್ದರು. ಮೇ 26 ರಂದು ಆರಂಭವಾಗಿದ್ದ ಯಾಸ್ ಚಂಡಮಾರುತ ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್ನಲ್ಲಿ ತೀವ್ರ ಹಾನಿಯುಂಟುಮಾಡಿತ್ತು.
ಪರಿಹಾರ ಪ್ಯಾಕೇಜ್ನಲ್ಲಿ 500 ಕೋಟಿ ರೂ.ಗಳನ್ನು ಒಡಿಶಾಗೆ ನೀಡಲಾಗಿದ್ದು, ಉಳಿದ 500 ಕೋಟಿ ರೂಪಾಯಿಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ನಡುವೆ ವಿತರಿಸಲಾಗುವುದು. ಚಂಡಮಾರುತದಿಂದ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 50,000 ರೂಪಾಯಿ ನೀಡುವುದಾಗಿ ಘೋಷಿಸಲಾಗಿತ್ತು.
ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
No money has been given to the State by the Centre after cyclone Yaas: West Bengal CM Mamata Banerjee pic.twitter.com/AKa5g82UgX
— ANI (@ANI) June 17, 2021
ಹೆಚ್ಚುವರಿಯಾಗಿ, ಹಾನಿಯಾದ ಪ್ರದೇಶಗಳ ವ್ಯಾಪ್ತಿಯನ್ನು ನಿರ್ಣಯಿಸಲು ಸಂತ್ರಸ್ತ ರಾಜ್ಯಗಳಿಗೆ ಭೇಟಿ ನೀಡಲು ಕೇಂದ್ರವು ತಂಡವನ್ನು ನಿಯೋಜಿಸಿತ್ತು, ತಂಡದ ವರದಿ ಆಧಾರದ ಮೇಲೆ ಹೆಚ್ಚಿನ ಸಹಾಯವನ್ನು ನೀಡಲಾಗುವುದು ಎಂದು ಒಕ್ಕೂಟ ಸರ್ಕಾರ ತಿಳಿಸಿತ್ತು.
ಯಾಸ್ ಚಂಡಮಾರುತವನ್ನು ಎದುರಿಸಲು ಎಲ್ಲಾ ರೀತಿಯ ನೆರವು ನೀಡುವ ಭರವಸೆ ನೀಡಿದ್ದರೂ, ಕೇವಲ 400 ಕೋಟಿ ರೂ.ಗಳ ಮುಂಗಡವನ್ನು ನೀಡಲು ಕೇಂದ್ರವು ಒಪ್ಪಿಗೆ ಸೂಚಿಸಿದೆ. ಆದರೆ, ಒಡಿಶಾ ಮತ್ತು ಆಂಧ್ರಪ್ರದೇಶದಂತಹ ಸಣ್ಣ ರಾಜ್ಯಗಳಿಗೆ ತಲಾ 600 ಕೋಟಿ ರೂಪಾಯಿ ನೀಡಿ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
2019 ರಲ್ಲಿ ಬುಲ್ಬುಲ್ ಚಂಡಮಾರುತವು ಮತ್ತು ಆಂಫಾನ್ ಚಂಡಮಾರುತದ ಬಳಿಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಪಶ್ಚಿಮ ಬಂಗಾಳ ರಾಜ್ಯಕ್ಕೆ ಯಾವುದೇ ನೆರವು ಬಂದಿಲ್ಲ. ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ನೆರವು ನೀಡುವಲ್ಲಿ ವಿಫಲವಾಗಿದೆ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಬಿಟ್ಟು ಟಿಎಂಸಿ ಸೇರಿದ ಮುಕುಲ್ ರಾಯ್: Z ರಕ್ಷಣೆ ವಾಪಸ್ ಪಡೆದ ಕೇಂದ್ರ