Homeಮುಖಪುಟಆನ್‌ಸ್ಕ್ರೀನ್‌ನಲ್ಲಿ ಮಾತ್ರ ಪ್ರತಿಭಾವಂತ ನಟ; ಉಳಿದಂತೆ ಅಂತಃಕರಣವುಳ್ಳ ಸಾಮಾನ್ಯ ಮನುಷ್ಯನಾಗಿದ್ದ ಸಂಚಾರಿ ವಿಜಯ್

ಆನ್‌ಸ್ಕ್ರೀನ್‌ನಲ್ಲಿ ಮಾತ್ರ ಪ್ರತಿಭಾವಂತ ನಟ; ಉಳಿದಂತೆ ಅಂತಃಕರಣವುಳ್ಳ ಸಾಮಾನ್ಯ ಮನುಷ್ಯನಾಗಿದ್ದ ಸಂಚಾರಿ ವಿಜಯ್

- Advertisement -
- Advertisement -

“This quiet dust was gentleman and ladies” ಎನ್ನುವ ಎಮಿಲಿ ಡಿಕೆಸ್ನೆನ್‌ನ ಪದ್ಯದ ಸಾಲಿನಂತೆಯೇ ಸಂಚಾರಿ ವಿಜಯ್ ತಮ್ಮೂರಿನ ತೋಟದ ಮಣ್ಣು ಸೇರಿದರು. ಹೌದು, ಅವರೊಬ್ಬ ಜಂಟಲ್‌ಮನ್. ಕೇವಲ ಸಿನಿಮಾ ಕಾರಣಕ್ಕಂತೂ ಅಲ್ಲ. “ರಾಷ್ಟ್ರ ಪ್ರಶಸ್ತಿ ಎಂಬುದು ಶಾಶ್ವತವಾದ ಟ್ಯಾಗ್‌ಲೈನ್ ಅಲ್ಲ ಸರ್. ಅದೊಂದು ಸಿನಿಮಾದ ಒಂದು ಪಾತ್ರಕ್ಕೆ ಆ ವರ್ಷದಲ್ಲಿ ಬಂದ ಪ್ರಶಸ್ತಿ ಅಷ್ಟೆ. ಪ್ರತೀ ಸಿನಿಮಾಗೂ ಹೊಸ ಪಾತ್ರ, ಹೊಸ ಅನುಭವ ಬೇಕು. ಇದು ನನ್ನನ್ನು ಕಂಪಾರ್ಟ್‌ಮೆಂಟಲೈಸ್ ಮಾಡಿಬಿಡುತ್ತದೆಂಬ ಭಯ ನನಗೆ” ಎನ್ನುತ್ತಿದ್ದರು ಸಂಚಾರಿ ವಿಜಯ್. ಒಬ್ಬ ನಟನಾಗಿ ಚಿತ್ರರಂಗಕ್ಕೆ ಎಷ್ಟು ಅವಶ್ಯವಿದ್ದರೋ ಅದಕ್ಕಿಂತ ಹೆಚ್ಚಾಗಿ ಅವರ ಸಾಮಾಜಿಕ ಬದ್ಧತೆ ಮತ್ತು ಕಾಳಜಿಯ ಮನಸ್ಸಿದ್ದ ಕಾರಣಕ್ಕಾಗಿ ಅವರು ನಮ್ಮೊಡನೆ ಇರಲೇಬೇಕಿತ್ತು.

ಕಳೆದ ವರ್ಷದ ಕೋವಿಡ್ ಸಂದರ್ಭದ ಲಾಕ್‌ಡೌನ್‌ನಲ್ಲಿ ಶುರುವಾದ ಅವರ ಸಮಾಜಸೇವಾ ಕಾರ್ಯ, ಈ ವರ್ಷವಂತೂ ನಿರಂತರವಾಗಿ ಸಾಗಿತ್ತು. ಚಿತ್ರರಂಗದ ಬಹಳ ಜನ ಈ ಸಮಯದಲ್ಲಿ ತಮ್ಮ ’ಶಕ್ತ್ಯಾನುಸಾರ’ ಸೇವೆ ಮಾಡಿರಬಹುದು.

ಆದರೆ ಒಬ್ಬ ನಾಯಕ ನಟನಾಗಿದ್ದ ವಿಜಯ್ “Stay Home, Stay Safe” ಎಂಬ ಸೊಫೆಸ್ಟಿಕೇಟೆಡ್ ಸ್ಲೋಗನ್ ಹೇಳಿಕೊಂಡು ಮನೆಯೊಳಗೆ ಸೇರಲಿಲ್ಲ. ಹೊರಗೆ ಬಂದು ಅವಶ್ಯವಿರುವವರ ಸೇವೆಗಾಗಿ ನಿಂತರು.

ಕೋವಿಡ್ ಪೇಷಂಟ್ ಯಾರಿಗಾದರೂ ಬೆಡ್ ಕೊಡಿಸಲು ಸಾಧ್ಯವಾಗದೆ ಹೋದರೆ ಚಡಪಡಿಸಿಬಿಡುತ್ತಿದ್ದರು. ಐದಾರು ತಿಂಗಳ ಹಿಂದೆ ಸಿನಿಮಾದ ಮುಹೂರ್ತವೊಂದನ್ನು ಮುಗಿಸಿ ಮಾತಾಡುತ್ತಾ ಕೂತಾಗ ಹೊಸ ಕಾರು ಕೊಂಡಿದ್ದೀರಿ ಪಾರ್ಟಿ ಎಲ್ಲಿ ಎಂದದ್ದಕ್ಕೆ “ನನ್ನ ಕಾರಿನ ವಿಷಯ ಹಾಗಿರಲಿ, ಮೊನ್ನೆ ಒಂದು ಚಿಕ್ಕ ಹುಡುಗಿಗೆ ಅದೆಂಥದೋ ಜಗತ್ತಿನ ಅಪರೂಪದ ಕಾಯಿಲೆ ಬಂದಿದೆಯಂತೆ. ಐದು ಲಕ್ಷದಲ್ಲಿ ಒಬ್ಬರಿಗೆ ಬರುವಂಥ ಈ ಕಾಯಿಲೆಗೆ ವಿಪರೀತ ಖರ್ಚಾಗುತ್ತಂತೆ. ಪಾಪ, ಆ ತಂದೆತಾಯಿಗಳಿಗೆ ಲಾಕ್‌ಡೌನ್‌ನಿಂದಾಗಿ ಜೀವನ ನಡೆಸುವುದೇ ಕಷ್ಟ ಆಗಿದೆ. ಇನ್ನು ಇದ್ಹೇಗೆ ಮ್ಯಾನೇಜ್ ಮಾಡ್ತಾರೆ. ಒಂದಷ್ಟು ಜನಕ್ಕೆ ಮಾತಾಡಿದ್ದೀನಿ. ಏನಾದ್ರೂ ಸಹಾಯ ಮಾಡಲೇಬೇಕು” ಎಂದಿದ್ದರು. ಆ ಪ್ರಯತ್ನ ಮಾಡಿದರು ಕೂಡ. ಆದರೆ ಕೆಲ ದಿನಗಳ ನಂತರ ಆ ಹುಡುಗಿ ಸಾವನ್ನಪ್ಪಿದಾಗ ಕರೆ ಮಾಡಿ ಸಂಕಟಪಟ್ಟಿದ್ದರು. ಈ ಮನುಷ್ಯ ಏಕೆ ಹೀಗೆ? ಎಂದು ಅಂತ ಸಂದರ್ಭದಲ್ಲೆಲ್ಲ ಯೋಚಿಸುತ್ತಿದ್ದೆ. ಈಗ ಅವರ ದೇಹದ ಅಂಗಾಂಗಳನ್ನು ದಾನ ಮಾಡಿರುವುದು ನಿಜಕ್ಕೂ ಅವರ ವ್ಯಕ್ತಿತ್ವಕ್ಕೆ ತಕ್ಕುದಾದ ನಿರ್ಧಾರ. ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ದರ ಕಡಿಮೆ ಎಂಬ ಸುದ್ದಿ ನೋಡಿ, ಅವಶ್ಯವಿದ್ದ ಪರಿಚಿತರ ಯಾರನ್ನೋ ಕರೆದೊಯ್ದಾಗ, “ಎಷ್ಟೊಂದು ವಯಸ್ಸಾದ ಜನ ಸಾಲಿನಲ್ಲಿ ಇದ್ದರು. ಇವರನ್ನೆಲ್ಲ ಬಿಟ್ಟು ನಾವು ಪ್ರಭಾವ ಬಳಸಿ ಒಳಗೆ ಹೋಗೋದು ಎಷ್ಟು ಸರಿ? ಹಾಗಾಗಿ ವಾಪಾಸ್ ಬಂದೆ” ಎಂದು ಹೇಳಿಕೊಂಡಿದ್ದರು ವಿಜಯ್.

ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಾಗಲೇ ನಾನವರ ಹೆಸರ ಕೇಳಿದ್ದು. ಅದಾಗಿ ಒಂದು ವರ್ಷದ ನಂತರ ನಮ್ಮ ಹೊಂಗಿರಣ ತಂಡದಿಂದ, ಸಾಸ್ವೆಹಳ್ಳಿ ಸತೀಶ್ ನಿರ್ದೇಶನದಲ್ಲಿ ನನ್ನ ಕಥೆಯೊಂದನ್ನು ಕಿರುಚಿತ್ರ ಮಾಡಲು ಕರೆ ಮಾಡಿ ಕೇಳಿಕೊಂಡಾಗ ನಿರಾಸಕ್ತಿಯಿಂದಲೇ ಸಿನಾಪ್ಸಿಸ್ ಕಳಿಸಿ ನೋಡೋಣ ಎಂದವರು, ಅದೇ ಸಂಜೆ ಕಾಲ್ ಮಾಡಿ ನಾನು ಈ ಪಾತ್ರ ಮಾಡುತ್ತೇನೆ. ಭೇಟಿ ಮಾಡೋಣ ಅಂದರು. ಮೂವತ್ತು ನಿಮಿಷದ ಕಿರುಚಿತ್ರಕ್ಕೆ ಜೊತೆಯಾದ ನಾವು ಆನಂತರ ಹತ್ತಿರದ ಗೆಳೆಯರಾದೆವು.

ಓದುವ ಹವ್ಯಾಸ ನಿರಂತರ

ಒಮ್ಮೆ ಬೆಂಗಳೂರಿಂದ ಶಿವಮೊಗ್ಗಕ್ಕೆ ಕಾರ್ಯಕ್ರಮವೊಂದಕ್ಕೆ ಪ್ರಯಾಣಿಸಿದಾಗ ’ಆಧ್ಯಾತ್ಮ ಡೈರಿ’ ಪುಸ್ತಕವನ್ನು ಕಾರಿನ ಪ್ರಯಾಣದಲ್ಲೇ ಓದಿ ಮುಗಿಸಿದರು. ಯಾವುದಾದರೂ ಪುಸ್ತಕ ಓದಿದ ಮೇಲೆ ಕಾಲ್ ಮಾಡಿ ಅದರ ಬಗ್ಗೆ ಮಾತಾಡುತ್ತಿದ್ದರು. ಅವರಿಗೆ ಅಪಘಾತವಾಗುವ ಹಿಂದಿನ ದಿನ ಕುಂ.ವೀ.ಯವರ ’ಗಾಂಧಿ ಕ್ಲಾಸ್’ ಪುಸ್ತಕದ ಫೋಟೋ ಜೊತೆಗೆ ಇದನ್ನು ಓದುತ್ತಿದ್ದೇನೆ ಎಂಬ ಮೆಸೇಜ್ ಕಳಿಸಿದ್ದರು. ಬಹುಶಃ ಈ ವಾರದ ಕಾಲ್‌ನಲ್ಲಿ ಅದರ ಬಗ್ಗೆ ಮಾತಾಡುತ್ತಿದ್ದರೇನೋ. ಅವರೊಂದಿಗಿನ ಸಂಭಾಷಣೆಯಲ್ಲಿ ಕನ್ನಡ ಪದಗಳನ್ನು ಅವರು ತುಂಡು ಮಾಡಿ ಹೊಸ ರೀತಿಯ ಪದಗಳನ್ನು ಹುಟ್ಟು ಹಾಕುತ್ತಿದ್ದರು. ಅವು ತಮಾಷೆಯಾಗಿರುತ್ತಿದ್ದವು. ಇತ್ತೀಚಿಗೆ ಗಿರೀಶ್ ಕಾರ್ನಾಡರ ’ಆಡಾಡುತ ಮನುಷ್ಯ’ ಆಡಿಯೋ ಬುಕ್‌ಗೆ ಧ್ವನಿ ಕೊಡುವಾಗ ತುಂಬಾ ಪ್ರಾಕ್ಟೀಸ್ ಮಾಡಿಹೋಗ್ತೀನಿ, ಅಂಥ ದೊಡ್ಡವರ ಪುಸ್ತಕ ಇದು ಎನ್ನುವ ಎಚ್ಚರ ಅವರಲ್ಲಿತ್ತು.

ಐ.ಕೆ.ಗುಜ್ರಾಲ್ ಅವರ ಸಹೋದರ ಅಂತಾರಾಷ್ಟ್ರೀಯ ಖ್ಯಾತ ಕಲಾವಿದ ಮತ್ತು ಶಿಲ್ಪಿ, ಸತೀಶ್ ಗುಜ್ರಾಲ್ ಅವರಿಗೆ ಬಾಲ್ಯದ ಅಪಘಾತದಿಂದಾಗಿ ಶಾಲೆಗೆ ಹೋಗಲು ಸಾಧ್ಯವಾಗದೆ ಹೋದಾಗ ಅವರ ತಂದೆ ಹೆಚ್ಚೆಚ್ಚು ಪುಸ್ತಕಗಳನ್ನು ತಂದು ಕೊಡುತ್ತಿದ್ದರಂತೆ. ಅವುಗಳನ್ನು ಓದಿದ ಬಾಲಕ ಸತೀಶ್ ’ಪುಸ್ತಕಗಳು ಹೊಸ ಜಗತ್ತನ್ನೇ ನನ್ನ ಮುಂದಿಟ್ಟವು. ಜಗತ್ತಿನಲ್ಲಿರುವ ಸಮಸ್ಯೆಗಳ ಮುಂದೆ ನನ್ನ ಈ ಸಮಸ್ಯೆ ಏನೇನೂ ಅಲ್ಲ ಎಂಬ ಅರಿವಾಯಿತು’ ಎನ್ನುತ್ತಿದ್ದರಂತೆ. ವಿಜಯ್ ಅವರಿಗೆ ಸಮಾಜದ, ತನ್ನ ಸುತ್ತಲಿನವರ ಸಂಕಷ್ಟಗಳು, ಅಸಮಾನತೆಯ ಬಗ್ಗೆ ನಿಲುವು ತಾಳಲು ಅವರ ಓದು ಕಾರಣ ಎಂದೇ ನಾನು ಭಾವಿಸುತ್ತೇನೆ.

ಒಮ್ಮೆ ಅವರು ಎಫ್‌ಬಿಯಲ್ಲಿ ಹಾಕಿದ ಇಂಗ್ಲಿಷ್ ಪೋಸ್ಟ್‌ನಲ್ಲಿ ಸಣ್ಣದೊಂದು ತಪ್ಪಾಗಿತ್ತು. ಅದನ್ನು ಮೆಸೇಜ್ ಮಾಡಿ ತಿಳಿಸಿದೆ. ನಾನು ಸಂಕೋಚದಿಂದಲೇ ಟೈಪಿಂಗ್ ಮಿಸ್ಟೇಕ್ ಇರಬೇಕು ಎಂದೆ. ಅದಕ್ಕವರು, ’ಇಲ್ಲ ನನಗೆ ಅದು ಗೊತ್ತಿರಲಿಲ್ಲ’ ಎಂದರು. ಆ ನಂತರದಲ್ಲಿ ದೀರ್ಘವಾಗಿ ಏನಾದರೂ ಇಂಗ್ಲಿಷ್‌ನಲ್ಲಿ ಹಾಕುವ ಪೋಸ್ಟ್‌ಗಳನ್ನು ಕಳಿಸಿ ’ನೋಡಿ ಹೇಳಿ ಪ್ಲೀಸ್’ ಎನ್ನುವ ಮೆಸೇಜು ಕಳಿಸುತ್ತಿದ್ದರು. ಹಾಗೆ ನೋಡಿದರೆ ಅವುಗಳಲ್ಲಿ ಏನೂ ತಪ್ಪುಗಳಿರುತ್ತಿರಲಿಲ್ಲ. ಆದರೆ ಅವರಿಗೆ ಖಾತರಿಪಡಿಸಿಕೊಳ್ಳುವ ಆ ಪ್ರಾಮಾಣಿಕತೆ ಇತ್ತು. ಇಂಥ ನಡುವಳಿಕೆಯನ್ನು ನಾವು ಎಷ್ಟು ಜನರಲ್ಲಿ ಕಾಣಬಹುದು? ಈ ವಿಚಾರವಾಗಿ, ’ನನ್ನನ್ನು ಬಿಗ್‌ಬಾಸ್‌ಗೆ ಕರೆಯುತ್ತಿದ್ದಾರೆ, ನಾನು ಬರಲ್ಲ ಎಂಬುದನ್ನು ಪೊಲೈಟ್ ಆಗಿ ಮತ್ತು ಡೀಸೆಂಟ್ ಆಗಿ ಹೇಳಬೇಕು ಅಂಥ ಮೆಸೇಜ್ ಡ್ರಾಫ್ಟ್ ಮಾಡಿ ಸರ್’ ಎಂದಾಗ ನಾನು “ಹೇ, ಯಾಕೆ ಸರ್? ಸೋಷಿಯಲ್ ಲೈಫ್ ಈಸ್ ಗೋಲ್ಡನ್ ಲೈಫ್. ನೀವು ಹೋಗಿ ಬನ್ನಿ’ ಎಂದಿದ್ದಕ್ಕೆ , ’ಯಾಕ್ ಸ್ವಾಮಿ, ನಾವು ಹೀಗಿರೋದು ನಿಮ್ಗೆ ಇಷ್ಟ ಇಲ್ವ?’ ಅಂದಿದ್ದರು. ಆಮೇಲೆ ನಾನು ಅಂದೆ, ’ನೀವು ಹೋಗ್ತೀನಿ ಅಂದ್ರೆ, ನಾನೇ ಅದರ ವಿರುದ್ಧ ಕ್ಯಾಂಪೇನ್ ಮಾಡ್ತೀನಿ’ ಎಂದಾಗ ನಕ್ಕಿದ್ದರು.

ಅವರ ಸುದ್ದಿ ಏನಾದರೂ ಟಿವಿಗಳಲ್ಲಿ ಬರುವಾಗ ನಮ್ಮ ಅವ್ಯಕ್ತ ಕಿರುಚಿತ್ರದ ಫುಟೇಜುಗಳು ಬಂದರೆ ತಕ್ಷಣ ಫೋಟೋ ಹೊಡೆದು ಕಳಿಸುತ್ತಿದ್ದೆ. ಅವರು ಆಸ್ಪತ್ರೆ ಸೇರಿದಾಗಿನಿಂದ ನಿರಂತರವಾಗಿ ಅವವೇ ಚಿತ್ರಗಳು ಪರದೆ ಮೇಲೆ ಮೂಡಿ ಬರುತ್ತಿದ್ದಾಗ ವಿಚಿತ್ರ ಸಂಕಟವಾಗುತ್ತಿತ್ತು. ಆ ಫೋಟೋಗಳನ್ನು ಅವರಿಗೆ ಕಳಿಸಿದರೆ ನೋಡುವುದಿಲ್ಲವಲ್ಲ!

’ನೀವು ಸಿನಿಮಾ ಒಪ್ಪಿಕೊಳ್ಳುವ ವಿಷಯದಲ್ಲಿ ಸ್ವಲ್ಪ ಚ್ಯೂಸಿ ಆಗಬೇಕು’ ಎಂದರೆ, ’ಅಯ್ಯೋ ಕೆಲಸ ಸಿಕ್ಕಾಗ ಮಾಡ್ತಾ ಇರಬೇಕು’ ಎನ್ನುತ್ತಿದ್ದವರ ಬಳಿ ಈಗ ಸುಮಾರು ಹದಿನೈದು ಸಿನಿಮಾಗಳಿದ್ದವು. ’ತಲೆದಂಡ’ ಸಿನಿಮಾದ ಪಾತ್ರವೂ ವಿಶೇಷವಾದ ಅಭಿನಯಕ್ಕೆ ಅವಕಾಶ ಕೊಟ್ಟಿರುವ ಪಾತ್ರವಾಗಿದೆ. ನನಗೆ ಅವರ ಸ್ನೇಹ ಸಿಕ್ಕಿದ್ದರ ಬಗ್ಗೆ ಬಹಳ ಹೆಮ್ಮೆಯಿದೆ. ನಮ್ಮನ್ನು ದುಃಖಕ್ಕೆ ತಳ್ಳಿದರು ಎಂಬ ಕೋಪವಿದೆ. ಆದರೆ ಸಿನಿಮಾ ನಟನೊಬ್ಬನಿಗೆ ಬಂದ ದೊಡ್ಡ ಪ್ರಶಸ್ತಿಯೊಂದು ಅವನನ್ನು ಜನರಿಂದ ದೂರ ಮಾಡಿಬಿಡುವ ಸಾಧ್ಯತೆಯೇ ಹೆಚ್ಚು. ಅಂಥದ್ದರಲ್ಲಿ ರಾಷ್ಟ್ರ ಪ್ರಶಸ್ತಿಯ ಹಮ್ಮು ಬಿಮ್ಮು ಎಂದೂ ಇಟ್ಟುಕೊಳ್ಳದೆ ಸಹಜವಾಗಿಯೇ ಸರಳವಾಗಿ ಬದುಕಿದ್ದ ಸಂಚಾರಿ ವಿಜಯ್, ಕನ್ನಡ ಚಿತ್ರರಂಗ ಮತ್ತು ಸಮಾಜ ಸದಾ ನೆನಪಿಟ್ಟುಕೊಳ್ಳಬೇಕಾದ ’ಸಾಮಾನ್ಯ ಮನುಷ್ಯ’. ಸಂಚಾರಿ ವಿಜಯ್ ಎಂದರೆ ಸಹಜ, ಸರಳ, ಸಜ್ಜನಿಕೆ ಮತ್ತು ಸಂಯಮ ಹೊಂದಿದ್ದ ಆನ್‌ಸ್ಕ್ರೀನ್‌ನಲ್ಲಿ ಮಾತ್ರ ನಟನಾಗಿದ್ದ ಪ್ರತಿಭಾವಂತ. ಸದಾ ಆಸ್ಪತ್ರೆಯಲ್ಲಿದ್ದವರ ಚಿಕಿತ್ಸೆಯ ಬಗ್ಗೆ ಯೋಚಿಸುತ್ತಿದ್ದ ವಿಜಯ್, ತಮ್ಮ ಅಂಗಾಂಗಗಳನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರೋಪಕಾರಿಯಾಗಿದ್ದರೆಂಬ ಗರ್ವ ಇದ್ದಂತೆಯೇ ಆ ರಾತ್ರಿ ಹೆಲ್ಮೆಟ್ ಹಾಕಿರಲಿಲ್ಲ ಎಂದು ಗದರಿಸಬೇಕು ಅನ್ನಿಸುತ್ತದೆ. ಹಾಗೆಯೇ ಅವರಿಗಿದ್ದ ಜನರ ಪ್ರೀತಿಯನ್ನು ಕಾಣಿಸಬೇಕು ಅನ್ನಿಸುತ್ತಿದೆ. ಆದರೇನು ಮಾಡುವುದು?

He has met his maker!

  • ಶಿವಕುಮಾರ್ ಮಾವಲಿ
ಶಿವಕುಮಾರ್ ಮಾವಲಿ

ಶಿವಮೊಗ್ಗ ಮೂಲದ ಶಿವಕುಮಾರ್ ಕಥೆಗಾರ ಮತ್ತು ನಾಟಕಕಾರ. ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್ ಅವರ ’ದೇವರು ಅರೆಸ್ಟ್ ಆದ’, ’ಟೈಪಿಸ್ಟ್ ತಿರಸ್ಕರಿಸಿದ ಕಥೆ’ ಕಥಾಸಂಕಲನಗಳು ಪ್ರಕಟವಾಗಿವೆ.


ಇದನ್ನೂ ಓದಿ: ಸಂಚಾರಿ ವಿಜಯ್‌ ನಿಧನಕ್ಕೆ ಕನ್ನಡದಲ್ಲಿ ಸಂತಾಪ ಸೂಚಿಸಿದ ಅಮೆರಿಕಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...