Homeಮುಖಪುಟಆನ್‌ಸ್ಕ್ರೀನ್‌ನಲ್ಲಿ ಮಾತ್ರ ಪ್ರತಿಭಾವಂತ ನಟ; ಉಳಿದಂತೆ ಅಂತಃಕರಣವುಳ್ಳ ಸಾಮಾನ್ಯ ಮನುಷ್ಯನಾಗಿದ್ದ ಸಂಚಾರಿ ವಿಜಯ್

ಆನ್‌ಸ್ಕ್ರೀನ್‌ನಲ್ಲಿ ಮಾತ್ರ ಪ್ರತಿಭಾವಂತ ನಟ; ಉಳಿದಂತೆ ಅಂತಃಕರಣವುಳ್ಳ ಸಾಮಾನ್ಯ ಮನುಷ್ಯನಾಗಿದ್ದ ಸಂಚಾರಿ ವಿಜಯ್

- Advertisement -
- Advertisement -

“This quiet dust was gentleman and ladies” ಎನ್ನುವ ಎಮಿಲಿ ಡಿಕೆಸ್ನೆನ್‌ನ ಪದ್ಯದ ಸಾಲಿನಂತೆಯೇ ಸಂಚಾರಿ ವಿಜಯ್ ತಮ್ಮೂರಿನ ತೋಟದ ಮಣ್ಣು ಸೇರಿದರು. ಹೌದು, ಅವರೊಬ್ಬ ಜಂಟಲ್‌ಮನ್. ಕೇವಲ ಸಿನಿಮಾ ಕಾರಣಕ್ಕಂತೂ ಅಲ್ಲ. “ರಾಷ್ಟ್ರ ಪ್ರಶಸ್ತಿ ಎಂಬುದು ಶಾಶ್ವತವಾದ ಟ್ಯಾಗ್‌ಲೈನ್ ಅಲ್ಲ ಸರ್. ಅದೊಂದು ಸಿನಿಮಾದ ಒಂದು ಪಾತ್ರಕ್ಕೆ ಆ ವರ್ಷದಲ್ಲಿ ಬಂದ ಪ್ರಶಸ್ತಿ ಅಷ್ಟೆ. ಪ್ರತೀ ಸಿನಿಮಾಗೂ ಹೊಸ ಪಾತ್ರ, ಹೊಸ ಅನುಭವ ಬೇಕು. ಇದು ನನ್ನನ್ನು ಕಂಪಾರ್ಟ್‌ಮೆಂಟಲೈಸ್ ಮಾಡಿಬಿಡುತ್ತದೆಂಬ ಭಯ ನನಗೆ” ಎನ್ನುತ್ತಿದ್ದರು ಸಂಚಾರಿ ವಿಜಯ್. ಒಬ್ಬ ನಟನಾಗಿ ಚಿತ್ರರಂಗಕ್ಕೆ ಎಷ್ಟು ಅವಶ್ಯವಿದ್ದರೋ ಅದಕ್ಕಿಂತ ಹೆಚ್ಚಾಗಿ ಅವರ ಸಾಮಾಜಿಕ ಬದ್ಧತೆ ಮತ್ತು ಕಾಳಜಿಯ ಮನಸ್ಸಿದ್ದ ಕಾರಣಕ್ಕಾಗಿ ಅವರು ನಮ್ಮೊಡನೆ ಇರಲೇಬೇಕಿತ್ತು.

ಕಳೆದ ವರ್ಷದ ಕೋವಿಡ್ ಸಂದರ್ಭದ ಲಾಕ್‌ಡೌನ್‌ನಲ್ಲಿ ಶುರುವಾದ ಅವರ ಸಮಾಜಸೇವಾ ಕಾರ್ಯ, ಈ ವರ್ಷವಂತೂ ನಿರಂತರವಾಗಿ ಸಾಗಿತ್ತು. ಚಿತ್ರರಂಗದ ಬಹಳ ಜನ ಈ ಸಮಯದಲ್ಲಿ ತಮ್ಮ ’ಶಕ್ತ್ಯಾನುಸಾರ’ ಸೇವೆ ಮಾಡಿರಬಹುದು.

ಆದರೆ ಒಬ್ಬ ನಾಯಕ ನಟನಾಗಿದ್ದ ವಿಜಯ್ “Stay Home, Stay Safe” ಎಂಬ ಸೊಫೆಸ್ಟಿಕೇಟೆಡ್ ಸ್ಲೋಗನ್ ಹೇಳಿಕೊಂಡು ಮನೆಯೊಳಗೆ ಸೇರಲಿಲ್ಲ. ಹೊರಗೆ ಬಂದು ಅವಶ್ಯವಿರುವವರ ಸೇವೆಗಾಗಿ ನಿಂತರು.

ಕೋವಿಡ್ ಪೇಷಂಟ್ ಯಾರಿಗಾದರೂ ಬೆಡ್ ಕೊಡಿಸಲು ಸಾಧ್ಯವಾಗದೆ ಹೋದರೆ ಚಡಪಡಿಸಿಬಿಡುತ್ತಿದ್ದರು. ಐದಾರು ತಿಂಗಳ ಹಿಂದೆ ಸಿನಿಮಾದ ಮುಹೂರ್ತವೊಂದನ್ನು ಮುಗಿಸಿ ಮಾತಾಡುತ್ತಾ ಕೂತಾಗ ಹೊಸ ಕಾರು ಕೊಂಡಿದ್ದೀರಿ ಪಾರ್ಟಿ ಎಲ್ಲಿ ಎಂದದ್ದಕ್ಕೆ “ನನ್ನ ಕಾರಿನ ವಿಷಯ ಹಾಗಿರಲಿ, ಮೊನ್ನೆ ಒಂದು ಚಿಕ್ಕ ಹುಡುಗಿಗೆ ಅದೆಂಥದೋ ಜಗತ್ತಿನ ಅಪರೂಪದ ಕಾಯಿಲೆ ಬಂದಿದೆಯಂತೆ. ಐದು ಲಕ್ಷದಲ್ಲಿ ಒಬ್ಬರಿಗೆ ಬರುವಂಥ ಈ ಕಾಯಿಲೆಗೆ ವಿಪರೀತ ಖರ್ಚಾಗುತ್ತಂತೆ. ಪಾಪ, ಆ ತಂದೆತಾಯಿಗಳಿಗೆ ಲಾಕ್‌ಡೌನ್‌ನಿಂದಾಗಿ ಜೀವನ ನಡೆಸುವುದೇ ಕಷ್ಟ ಆಗಿದೆ. ಇನ್ನು ಇದ್ಹೇಗೆ ಮ್ಯಾನೇಜ್ ಮಾಡ್ತಾರೆ. ಒಂದಷ್ಟು ಜನಕ್ಕೆ ಮಾತಾಡಿದ್ದೀನಿ. ಏನಾದ್ರೂ ಸಹಾಯ ಮಾಡಲೇಬೇಕು” ಎಂದಿದ್ದರು. ಆ ಪ್ರಯತ್ನ ಮಾಡಿದರು ಕೂಡ. ಆದರೆ ಕೆಲ ದಿನಗಳ ನಂತರ ಆ ಹುಡುಗಿ ಸಾವನ್ನಪ್ಪಿದಾಗ ಕರೆ ಮಾಡಿ ಸಂಕಟಪಟ್ಟಿದ್ದರು. ಈ ಮನುಷ್ಯ ಏಕೆ ಹೀಗೆ? ಎಂದು ಅಂತ ಸಂದರ್ಭದಲ್ಲೆಲ್ಲ ಯೋಚಿಸುತ್ತಿದ್ದೆ. ಈಗ ಅವರ ದೇಹದ ಅಂಗಾಂಗಳನ್ನು ದಾನ ಮಾಡಿರುವುದು ನಿಜಕ್ಕೂ ಅವರ ವ್ಯಕ್ತಿತ್ವಕ್ಕೆ ತಕ್ಕುದಾದ ನಿರ್ಧಾರ. ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ದರ ಕಡಿಮೆ ಎಂಬ ಸುದ್ದಿ ನೋಡಿ, ಅವಶ್ಯವಿದ್ದ ಪರಿಚಿತರ ಯಾರನ್ನೋ ಕರೆದೊಯ್ದಾಗ, “ಎಷ್ಟೊಂದು ವಯಸ್ಸಾದ ಜನ ಸಾಲಿನಲ್ಲಿ ಇದ್ದರು. ಇವರನ್ನೆಲ್ಲ ಬಿಟ್ಟು ನಾವು ಪ್ರಭಾವ ಬಳಸಿ ಒಳಗೆ ಹೋಗೋದು ಎಷ್ಟು ಸರಿ? ಹಾಗಾಗಿ ವಾಪಾಸ್ ಬಂದೆ” ಎಂದು ಹೇಳಿಕೊಂಡಿದ್ದರು ವಿಜಯ್.

ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಾಗಲೇ ನಾನವರ ಹೆಸರ ಕೇಳಿದ್ದು. ಅದಾಗಿ ಒಂದು ವರ್ಷದ ನಂತರ ನಮ್ಮ ಹೊಂಗಿರಣ ತಂಡದಿಂದ, ಸಾಸ್ವೆಹಳ್ಳಿ ಸತೀಶ್ ನಿರ್ದೇಶನದಲ್ಲಿ ನನ್ನ ಕಥೆಯೊಂದನ್ನು ಕಿರುಚಿತ್ರ ಮಾಡಲು ಕರೆ ಮಾಡಿ ಕೇಳಿಕೊಂಡಾಗ ನಿರಾಸಕ್ತಿಯಿಂದಲೇ ಸಿನಾಪ್ಸಿಸ್ ಕಳಿಸಿ ನೋಡೋಣ ಎಂದವರು, ಅದೇ ಸಂಜೆ ಕಾಲ್ ಮಾಡಿ ನಾನು ಈ ಪಾತ್ರ ಮಾಡುತ್ತೇನೆ. ಭೇಟಿ ಮಾಡೋಣ ಅಂದರು. ಮೂವತ್ತು ನಿಮಿಷದ ಕಿರುಚಿತ್ರಕ್ಕೆ ಜೊತೆಯಾದ ನಾವು ಆನಂತರ ಹತ್ತಿರದ ಗೆಳೆಯರಾದೆವು.

ಓದುವ ಹವ್ಯಾಸ ನಿರಂತರ

ಒಮ್ಮೆ ಬೆಂಗಳೂರಿಂದ ಶಿವಮೊಗ್ಗಕ್ಕೆ ಕಾರ್ಯಕ್ರಮವೊಂದಕ್ಕೆ ಪ್ರಯಾಣಿಸಿದಾಗ ’ಆಧ್ಯಾತ್ಮ ಡೈರಿ’ ಪುಸ್ತಕವನ್ನು ಕಾರಿನ ಪ್ರಯಾಣದಲ್ಲೇ ಓದಿ ಮುಗಿಸಿದರು. ಯಾವುದಾದರೂ ಪುಸ್ತಕ ಓದಿದ ಮೇಲೆ ಕಾಲ್ ಮಾಡಿ ಅದರ ಬಗ್ಗೆ ಮಾತಾಡುತ್ತಿದ್ದರು. ಅವರಿಗೆ ಅಪಘಾತವಾಗುವ ಹಿಂದಿನ ದಿನ ಕುಂ.ವೀ.ಯವರ ’ಗಾಂಧಿ ಕ್ಲಾಸ್’ ಪುಸ್ತಕದ ಫೋಟೋ ಜೊತೆಗೆ ಇದನ್ನು ಓದುತ್ತಿದ್ದೇನೆ ಎಂಬ ಮೆಸೇಜ್ ಕಳಿಸಿದ್ದರು. ಬಹುಶಃ ಈ ವಾರದ ಕಾಲ್‌ನಲ್ಲಿ ಅದರ ಬಗ್ಗೆ ಮಾತಾಡುತ್ತಿದ್ದರೇನೋ. ಅವರೊಂದಿಗಿನ ಸಂಭಾಷಣೆಯಲ್ಲಿ ಕನ್ನಡ ಪದಗಳನ್ನು ಅವರು ತುಂಡು ಮಾಡಿ ಹೊಸ ರೀತಿಯ ಪದಗಳನ್ನು ಹುಟ್ಟು ಹಾಕುತ್ತಿದ್ದರು. ಅವು ತಮಾಷೆಯಾಗಿರುತ್ತಿದ್ದವು. ಇತ್ತೀಚಿಗೆ ಗಿರೀಶ್ ಕಾರ್ನಾಡರ ’ಆಡಾಡುತ ಮನುಷ್ಯ’ ಆಡಿಯೋ ಬುಕ್‌ಗೆ ಧ್ವನಿ ಕೊಡುವಾಗ ತುಂಬಾ ಪ್ರಾಕ್ಟೀಸ್ ಮಾಡಿಹೋಗ್ತೀನಿ, ಅಂಥ ದೊಡ್ಡವರ ಪುಸ್ತಕ ಇದು ಎನ್ನುವ ಎಚ್ಚರ ಅವರಲ್ಲಿತ್ತು.

ಐ.ಕೆ.ಗುಜ್ರಾಲ್ ಅವರ ಸಹೋದರ ಅಂತಾರಾಷ್ಟ್ರೀಯ ಖ್ಯಾತ ಕಲಾವಿದ ಮತ್ತು ಶಿಲ್ಪಿ, ಸತೀಶ್ ಗುಜ್ರಾಲ್ ಅವರಿಗೆ ಬಾಲ್ಯದ ಅಪಘಾತದಿಂದಾಗಿ ಶಾಲೆಗೆ ಹೋಗಲು ಸಾಧ್ಯವಾಗದೆ ಹೋದಾಗ ಅವರ ತಂದೆ ಹೆಚ್ಚೆಚ್ಚು ಪುಸ್ತಕಗಳನ್ನು ತಂದು ಕೊಡುತ್ತಿದ್ದರಂತೆ. ಅವುಗಳನ್ನು ಓದಿದ ಬಾಲಕ ಸತೀಶ್ ’ಪುಸ್ತಕಗಳು ಹೊಸ ಜಗತ್ತನ್ನೇ ನನ್ನ ಮುಂದಿಟ್ಟವು. ಜಗತ್ತಿನಲ್ಲಿರುವ ಸಮಸ್ಯೆಗಳ ಮುಂದೆ ನನ್ನ ಈ ಸಮಸ್ಯೆ ಏನೇನೂ ಅಲ್ಲ ಎಂಬ ಅರಿವಾಯಿತು’ ಎನ್ನುತ್ತಿದ್ದರಂತೆ. ವಿಜಯ್ ಅವರಿಗೆ ಸಮಾಜದ, ತನ್ನ ಸುತ್ತಲಿನವರ ಸಂಕಷ್ಟಗಳು, ಅಸಮಾನತೆಯ ಬಗ್ಗೆ ನಿಲುವು ತಾಳಲು ಅವರ ಓದು ಕಾರಣ ಎಂದೇ ನಾನು ಭಾವಿಸುತ್ತೇನೆ.

ಒಮ್ಮೆ ಅವರು ಎಫ್‌ಬಿಯಲ್ಲಿ ಹಾಕಿದ ಇಂಗ್ಲಿಷ್ ಪೋಸ್ಟ್‌ನಲ್ಲಿ ಸಣ್ಣದೊಂದು ತಪ್ಪಾಗಿತ್ತು. ಅದನ್ನು ಮೆಸೇಜ್ ಮಾಡಿ ತಿಳಿಸಿದೆ. ನಾನು ಸಂಕೋಚದಿಂದಲೇ ಟೈಪಿಂಗ್ ಮಿಸ್ಟೇಕ್ ಇರಬೇಕು ಎಂದೆ. ಅದಕ್ಕವರು, ’ಇಲ್ಲ ನನಗೆ ಅದು ಗೊತ್ತಿರಲಿಲ್ಲ’ ಎಂದರು. ಆ ನಂತರದಲ್ಲಿ ದೀರ್ಘವಾಗಿ ಏನಾದರೂ ಇಂಗ್ಲಿಷ್‌ನಲ್ಲಿ ಹಾಕುವ ಪೋಸ್ಟ್‌ಗಳನ್ನು ಕಳಿಸಿ ’ನೋಡಿ ಹೇಳಿ ಪ್ಲೀಸ್’ ಎನ್ನುವ ಮೆಸೇಜು ಕಳಿಸುತ್ತಿದ್ದರು. ಹಾಗೆ ನೋಡಿದರೆ ಅವುಗಳಲ್ಲಿ ಏನೂ ತಪ್ಪುಗಳಿರುತ್ತಿರಲಿಲ್ಲ. ಆದರೆ ಅವರಿಗೆ ಖಾತರಿಪಡಿಸಿಕೊಳ್ಳುವ ಆ ಪ್ರಾಮಾಣಿಕತೆ ಇತ್ತು. ಇಂಥ ನಡುವಳಿಕೆಯನ್ನು ನಾವು ಎಷ್ಟು ಜನರಲ್ಲಿ ಕಾಣಬಹುದು? ಈ ವಿಚಾರವಾಗಿ, ’ನನ್ನನ್ನು ಬಿಗ್‌ಬಾಸ್‌ಗೆ ಕರೆಯುತ್ತಿದ್ದಾರೆ, ನಾನು ಬರಲ್ಲ ಎಂಬುದನ್ನು ಪೊಲೈಟ್ ಆಗಿ ಮತ್ತು ಡೀಸೆಂಟ್ ಆಗಿ ಹೇಳಬೇಕು ಅಂಥ ಮೆಸೇಜ್ ಡ್ರಾಫ್ಟ್ ಮಾಡಿ ಸರ್’ ಎಂದಾಗ ನಾನು “ಹೇ, ಯಾಕೆ ಸರ್? ಸೋಷಿಯಲ್ ಲೈಫ್ ಈಸ್ ಗೋಲ್ಡನ್ ಲೈಫ್. ನೀವು ಹೋಗಿ ಬನ್ನಿ’ ಎಂದಿದ್ದಕ್ಕೆ , ’ಯಾಕ್ ಸ್ವಾಮಿ, ನಾವು ಹೀಗಿರೋದು ನಿಮ್ಗೆ ಇಷ್ಟ ಇಲ್ವ?’ ಅಂದಿದ್ದರು. ಆಮೇಲೆ ನಾನು ಅಂದೆ, ’ನೀವು ಹೋಗ್ತೀನಿ ಅಂದ್ರೆ, ನಾನೇ ಅದರ ವಿರುದ್ಧ ಕ್ಯಾಂಪೇನ್ ಮಾಡ್ತೀನಿ’ ಎಂದಾಗ ನಕ್ಕಿದ್ದರು.

ಅವರ ಸುದ್ದಿ ಏನಾದರೂ ಟಿವಿಗಳಲ್ಲಿ ಬರುವಾಗ ನಮ್ಮ ಅವ್ಯಕ್ತ ಕಿರುಚಿತ್ರದ ಫುಟೇಜುಗಳು ಬಂದರೆ ತಕ್ಷಣ ಫೋಟೋ ಹೊಡೆದು ಕಳಿಸುತ್ತಿದ್ದೆ. ಅವರು ಆಸ್ಪತ್ರೆ ಸೇರಿದಾಗಿನಿಂದ ನಿರಂತರವಾಗಿ ಅವವೇ ಚಿತ್ರಗಳು ಪರದೆ ಮೇಲೆ ಮೂಡಿ ಬರುತ್ತಿದ್ದಾಗ ವಿಚಿತ್ರ ಸಂಕಟವಾಗುತ್ತಿತ್ತು. ಆ ಫೋಟೋಗಳನ್ನು ಅವರಿಗೆ ಕಳಿಸಿದರೆ ನೋಡುವುದಿಲ್ಲವಲ್ಲ!

’ನೀವು ಸಿನಿಮಾ ಒಪ್ಪಿಕೊಳ್ಳುವ ವಿಷಯದಲ್ಲಿ ಸ್ವಲ್ಪ ಚ್ಯೂಸಿ ಆಗಬೇಕು’ ಎಂದರೆ, ’ಅಯ್ಯೋ ಕೆಲಸ ಸಿಕ್ಕಾಗ ಮಾಡ್ತಾ ಇರಬೇಕು’ ಎನ್ನುತ್ತಿದ್ದವರ ಬಳಿ ಈಗ ಸುಮಾರು ಹದಿನೈದು ಸಿನಿಮಾಗಳಿದ್ದವು. ’ತಲೆದಂಡ’ ಸಿನಿಮಾದ ಪಾತ್ರವೂ ವಿಶೇಷವಾದ ಅಭಿನಯಕ್ಕೆ ಅವಕಾಶ ಕೊಟ್ಟಿರುವ ಪಾತ್ರವಾಗಿದೆ. ನನಗೆ ಅವರ ಸ್ನೇಹ ಸಿಕ್ಕಿದ್ದರ ಬಗ್ಗೆ ಬಹಳ ಹೆಮ್ಮೆಯಿದೆ. ನಮ್ಮನ್ನು ದುಃಖಕ್ಕೆ ತಳ್ಳಿದರು ಎಂಬ ಕೋಪವಿದೆ. ಆದರೆ ಸಿನಿಮಾ ನಟನೊಬ್ಬನಿಗೆ ಬಂದ ದೊಡ್ಡ ಪ್ರಶಸ್ತಿಯೊಂದು ಅವನನ್ನು ಜನರಿಂದ ದೂರ ಮಾಡಿಬಿಡುವ ಸಾಧ್ಯತೆಯೇ ಹೆಚ್ಚು. ಅಂಥದ್ದರಲ್ಲಿ ರಾಷ್ಟ್ರ ಪ್ರಶಸ್ತಿಯ ಹಮ್ಮು ಬಿಮ್ಮು ಎಂದೂ ಇಟ್ಟುಕೊಳ್ಳದೆ ಸಹಜವಾಗಿಯೇ ಸರಳವಾಗಿ ಬದುಕಿದ್ದ ಸಂಚಾರಿ ವಿಜಯ್, ಕನ್ನಡ ಚಿತ್ರರಂಗ ಮತ್ತು ಸಮಾಜ ಸದಾ ನೆನಪಿಟ್ಟುಕೊಳ್ಳಬೇಕಾದ ’ಸಾಮಾನ್ಯ ಮನುಷ್ಯ’. ಸಂಚಾರಿ ವಿಜಯ್ ಎಂದರೆ ಸಹಜ, ಸರಳ, ಸಜ್ಜನಿಕೆ ಮತ್ತು ಸಂಯಮ ಹೊಂದಿದ್ದ ಆನ್‌ಸ್ಕ್ರೀನ್‌ನಲ್ಲಿ ಮಾತ್ರ ನಟನಾಗಿದ್ದ ಪ್ರತಿಭಾವಂತ. ಸದಾ ಆಸ್ಪತ್ರೆಯಲ್ಲಿದ್ದವರ ಚಿಕಿತ್ಸೆಯ ಬಗ್ಗೆ ಯೋಚಿಸುತ್ತಿದ್ದ ವಿಜಯ್, ತಮ್ಮ ಅಂಗಾಂಗಗಳನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರೋಪಕಾರಿಯಾಗಿದ್ದರೆಂಬ ಗರ್ವ ಇದ್ದಂತೆಯೇ ಆ ರಾತ್ರಿ ಹೆಲ್ಮೆಟ್ ಹಾಕಿರಲಿಲ್ಲ ಎಂದು ಗದರಿಸಬೇಕು ಅನ್ನಿಸುತ್ತದೆ. ಹಾಗೆಯೇ ಅವರಿಗಿದ್ದ ಜನರ ಪ್ರೀತಿಯನ್ನು ಕಾಣಿಸಬೇಕು ಅನ್ನಿಸುತ್ತಿದೆ. ಆದರೇನು ಮಾಡುವುದು?

He has met his maker!

  • ಶಿವಕುಮಾರ್ ಮಾವಲಿ
ಶಿವಕುಮಾರ್ ಮಾವಲಿ

ಶಿವಮೊಗ್ಗ ಮೂಲದ ಶಿವಕುಮಾರ್ ಕಥೆಗಾರ ಮತ್ತು ನಾಟಕಕಾರ. ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್ ಅವರ ’ದೇವರು ಅರೆಸ್ಟ್ ಆದ’, ’ಟೈಪಿಸ್ಟ್ ತಿರಸ್ಕರಿಸಿದ ಕಥೆ’ ಕಥಾಸಂಕಲನಗಳು ಪ್ರಕಟವಾಗಿವೆ.


ಇದನ್ನೂ ಓದಿ: ಸಂಚಾರಿ ವಿಜಯ್‌ ನಿಧನಕ್ಕೆ ಕನ್ನಡದಲ್ಲಿ ಸಂತಾಪ ಸೂಚಿಸಿದ ಅಮೆರಿಕಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...