Homeಮುಖಪುಟ14 ವರ್ಷ ವನವಾಸದಿಂದ ಮರಳಿ ಬಂದಳೇ ಸೀತೆ?: ಕರೀನಾ, ಆಯಿಷಾ, ಭವ್ಯ ವಿರುದ್ಧ ನಿಂತ ಶಕ್ತಿಗಳು ಯಾವುವು?

14 ವರ್ಷ ವನವಾಸದಿಂದ ಮರಳಿ ಬಂದಳೇ ಸೀತೆ?: ಕರೀನಾ, ಆಯಿಷಾ, ಭವ್ಯ ವಿರುದ್ಧ ನಿಂತ ಶಕ್ತಿಗಳು ಯಾವುವು?

- Advertisement -
- Advertisement -

ಕರೀನಾ ಕಪೂರ್ ಸೀತೆಯ ಪಾತ್ರ ಮಾಡಬಾರದು ಎಂದು ಭಾನುವಾರ ಒಂದು ಟ್ವಿಟರ್ ಅಭಿಯಾನ ನಡೆಯಿತು. ಕರೀನಾ ಬಾಲಿವುಡ್ ನಟ ಸೈಫ್‍ ಅಲಿ ಖಾನ್ ಪತ್ನಿ ಎಂಬುದೇ ಇವರರೆಲ್ಲರ ಆಕ್ಷೇಪ! ಇದರ ಹಿಂದೆ ತೀವ್ರವಾದಿ ರಾಷ್ಟ್ರೀಯತೆ ಬೆಂಬಲಿಸುವ ಗುಂಪಿದೆ.

ಲಕ್ಷದ್ವೀಪದ ಹೊಸ ಲೆಫ್ಟಿನೆಂಟ್‍ ಗವರ್ನರ್ ತನ್ನ ನೆಲದ ಅಸ್ಮಿತೆಯನ್ನೇ ನಾಶ ಮಾಡುತ್ತಿದ್ದಾರೆ ಎಂದು ಅಲ್ಲಿನ ಜನತೆ ಆರೋಪಿಸಿದ್ದಾರೆ. ಆತನನ್ನು ‘ಬಯೋಲಾಜಿಕಲ್‍ ವೆಪನ್‍’ ಎಂದು ಕರೆದ ಯುವ ಪ್ರತಿಭಾನ್ವಿತ ನಿರ್ಮಾಪಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಆಯಿಷಾ ಸುಲ್ತಾನ ವಿರುದ್ಧ ದೇಶದ್ರೋಹದ ಕೇಸನ್ನು ದಾಖಲಿಸಲಾಗಿದೆ. ಮತ್ತೆ ಇದರ ಹಿಂದೆ ತೀವ್ರವಾದಿ ರಾಷ್ಟ್ರೀಯತೆ ಬೆಂಬಲಿಸುವ ಗುಂಪಿದೆ.

ಟಿವಿ ಚರ್ಚೆಯಲ್ಲಿ ಬಿಜೆಪಿಯನ್ನು ವಸ್ತುನಿಷ್ಠವಾಗಿ ಟೀಕಿಸಿದ ಕರ್ನಾಟಕ ಕಾಂಗ್ರೆಸ್‍ನ ಯುವ ವಕ್ತಾರೆ ಭವ್ಯ ನರಸಿಂಹಮೂರ್ತಿ ಅವರಿಗೆ ಅವಾಚ್ಯ ಕರೆಗಳನ್ನು ಮತ್ತು ಜಾಲತಾಣಗಳಲ್ಲಿ ಅವಾಚ್ಯ ಸಂದೇಶಗಳನ್ನು ಬಿತ್ತರಿಸಲಾಗುತ್ತಿದೆ. ಮತ್ತೆ ಇದರ ಹಿಂದೆ ತೀವ್ರವಾದಿ ರಾಷ್ಟ್ರೀಯತೆ ಬೆಂಬಲಿಸುವ ಗುಂಪಿದೆ.

ಕರೀನಾ, ಆಯಿಷಾ ಮತ್ತು ಭವ್ಯ ಈ ಮೂವರು ಸೀತೆಯರು ಈಗ ಅಗ್ನಿಪರೀಕ್ಷೆ ಎದುರಿಸುವ ಕಾಲ ಬಂದಿದೆ. 14 ವರ್ಷಗಳ ವನವಾಸದಿಂದ ಆ ಸೀತೆ ಇನ್ನೂ ಹೊರಕ್ಕೆ ಬರಲು ಈ ಸಮಾಜ ಬಿಡಲೇ ಇಲ್ಲ ಎಂಬುದಕ್ಕೆ ಇವು ಸಾಂಕೇತಿಕ ಪ್ರಸಂಗಗಳಷ್ಟೇ..

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಎರಡನೇ ಬಾರಿಗೆ ತಾಯಿಯಾದ ನಂತರ ಮತ್ತೊಮ್ಮೆ ಸಿನಿಮಾದಲ್ಲಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಹಿಂದೂ ಮಹಾಕಾವ್ಯವಾದ ರಾಮಾಯಣದ ರೂಪಾಂತರದಲ್ಲಿ ಸೀತಾ ಎಂಬ ಪೌರಾಣಿಕ ಪಾತ್ರವನ್ನು ನಿರ್ವಹಿಸಲು ಆಕೆಗೆ ಆಫರ್ ನೀಡಲಾಗಿದೆ. ಚಿತ್ರದ ನಿರ್ಮಾಪಕರಿಂದ 12 ಕೋಟಿ ರೂ.ಗಳ ಸಂಭಾವನೆಯನ್ನು ಕೋರಿದ್ದಾರೆ ಎಂಬ ವರದಿಗಳಿವೆ. ಸಾಮಾನ್ಯವಾಗಿ ಒಂದು ಚಿತ್ರಕ್ಕಾಗಿ 6​​ಕೋಟಿಯಿಂದ 8 ಕೋಟಿ ರೂ. ಪಡೆಯುತ್ತಿದ್ದ  ಕರೀನಾ 12 ಕೋಟಿ ಕೇಳಿದ್ದಕ್ಕೆ ತೀವ್ರವಾದಿ ರಾಷ್ಟ್ರೀಯತೆ ಬೆಂಬಲಿಸುವ ಗುಂಪಿಗೆ ವಿಪರೀತ ಸಿಟ್ಟು ಬಂದಿದೆ. ಕೊನೆಗೆ ಅದು ಕರೀನಾ ‘ಖಾನ್‍’ಗೆ ಆ ಪಾತ್ರ ಮಾಡುವ ಯೋಗ್ಯತೆ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದೆ.

“ಸಿನಿಮಾ ಎಂಬ ಸೃಜನಶೀಲ ಮಾದ್ಯಮದಲ್ಲಿ ನಿರ್ದೇಶಕನ ಪಾತ್ರ ಆಯ್ಕೆಯೇ ಅಂತಿಮ. ನಿರ್ದೇಶಕನಿಗೆ ಸೀತೆ ಪಾತ್ರಕ್ಕೆ ಕರೀನಾ ಸರಿ ಅನಿಸಿದ್ದರೆ ಆತ ಯಾವ ಕಾರಣಕ್ಕೂ ಹಿಂದಕ್ಕೆ ಸರಿಯಬಾರದು. ಅದ್ಯಾರೋ ‘2 ರೂಪೀಸ್‍ ಪರ್ ಮೆಸೆಜ್ ಗ್ಯಾಂಗ್‍’ ಬಾಯಿ ಬಡಿಕೊಂಡರೆ ಅದನ್ನು ನೆಗ್ಲೆಕ್ಟ್ ಮಾಡಿ ಮುಂದುವರಿಯಬೇಕು ಅಷ್ಟೇ” ಎಂದು ನಿರ್ದೇಶಕ, ಬರಹಗಾರ ಎನ್‍.ಎಸ್‍ ಶಂಕರ್ ಹೇಳುತ್ತಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಹೈಕೋರ್ಟ್ ವಕೀಲೆ ರಾಜಲಕ್ಷ್ಮಿ ಅಂಕಲಗಿ, ‘ದೇಶ ಅಂದರೆ ಬಿಜೆಪಿ, ಬಿಜೆಪಿ ಅಂದರೆ ದೇಶ ಎಂದು ಭ್ರಮಿಸಿರುವ, ಸ್ವಂತ ವ್ಯಕ್ತಿತ್ವ, ಆತ್ಮಸಾಕ್ಷಿಯನ್ನು ಮಾರಾಟ ಮಾಡಿಕೊಂಡಿರುವವರು ಈ ತರಹದ ಹುಚ್ಚಾಟ ಮಾಡುತ್ತಿದ್ದಾರೆ. ಸೈಫ್‍ ಅಲಿಖಾನ್‍ ತಾಯಿ ಶರ್ಮಿಳಾ ಟ್ಯಾಗೋರ್ ಬಗ್ಗೆ ಎಂದೂ ಆಕ್ಷೇಪ ಎತ್ತದವರು ಈಗ  ಅವರ ಸೊಸೆ ಕರೀನಾ ಬಗ್ಗೆ ಕಿಡಿ ಕಾರುತ್ತಿದ್ದಾರೆ ಎಂದರೆ ಈ ಏಳು ವರ್ಷಗಳಲ್ಲಿ ಆದ ವಿಕ್ಷಿಪ್ತ ಬದಲಾವಣೆ ಇದಕ್ಕೆ ಕಾರಣ. ಬಾಲಿವುಡ್‍ನಲ್ಲಿ ಎಷ್ಟೊಂದು ಖಾನ್‍ಗಳು ಹಿಂದೂ ಪೌರಾಣಿಕ ಪಾತ್ರಗಳನ್ನು ಮಾಡಿದ್ದಾರೆ. ಆಗ ಇಲ್ಲದ ಆಕ್ಷೇಪ ಈಗೇಕೆ?’ ಎಂದು ಪ್ರಶ್ನೆ ಎತ್ತಿದರು.

‘ಆಯಿಶಾ ಕುರಿತು ನೋಡುವುದಾದರೆ, ಅಲ್ಲಿಗೆ ಆಡಳಿತಾಧಿಕಾರಿಯಾಗಿ ಬಂದ ಬಿಜೆಪಿ ಮನುಷ್ಯ ಅಲ್ಲಿದ್ದ ಲಾಕ್‍ಡೌನ್‍ ತೆಗೆದು ಪ್ರವಾಸಿಗರ ಸಂಖ್ಯೆ ಹೆಚ್ಚಿಸುತ್ತಾನೆ. ಝೀರೋ ದೈನಂದಿನ ಕೇಸುಗಳು ಈಗ 100ಕ್ಕೆ ತಲುಪಿವೆ. ಜೊತೆಗೆ ಲಕ್ಷದ್ವೀಪದ ಸಾಂಸ್ಕೃತಿಕ, ಸಾಮಾಜಿಕ ಅಸ್ಮಿತೆಯನ್ನೇ ಈ ಮನುಷ್ಯ ಬರ್ಬಾದ್‍ ಮಾಡಲು ಹೊರಟಿದ್ದಾನೆ. ಆತನನ್ನು ‘ಬಯೋ ವೆಪನ್‍’ ಎಂದು ಕರೆದರೆ ಅದು ದೇಶದ್ರೋಹ ಹೇಗೆ ಆಗುತ್ತದೆ? ಆ ಮನುಷ್ಯ ದೇಶವನ್ನು ಪ್ರತಿನಿಧಿಸುವುದಿಲ್ಲ. ವ್ಯಕ್ತಿಯೋರ್ವನ ಕುರಿತಾದ ಈ ಟೀಕೆ ದೇಶದ್ರೋಹದ ವ್ಯಾಪ್ತಿಗೆ ಬರುವುದೇ ಇಲ್ಲ…. ಮೂರನೆ ವಿಷಯ ಭವ್ಯಾ ಕುರಿತಾಗಿ. ಇದನ್ನು ಈ ಹಿಂದೆಯೂ ಅನೇಕ ಮಹಿಳೆಯರು ಅನುಭವಿಸಿದ್ದಾರೆ. ಕಾಂಗ್ರೆಸ್‍ನ ಪುರುಷ ವಕ್ತಾರನ ಟೀಕೆಗಳನ್ನು ಸಹಿಸಿಕೊಳ್ಳಬಲ್ಲ ಬಿಜೆಪಿ, ಅದೇ ಮಹಿಳೆ ಧ್ವನಿ ಎತ್ತಿದ ಕೂಡಲೇ ಅವಾಚ್ಯ ಕ್ರಮಗಳಿಗೆ ಮುಂದಾಗುತ್ತದೆ. ಈ ಏಳು ವರ್ಷಗಳಲ್ಲಿ ಇದು ತುಂಬಾ ಓವರ್ ಆಗಿದೆ. ಮನುವಾದ ಹೇರುವ ಸಂಘದ ಸಿದ್ದಾಂತಕ್ಕೆ ತಕ್ಕಂತೆ ಇದು ನಡೆಯುತ್ತಿದೆ. ಆ ಸೀತೆಗೂ ಇನ್ನು ಮುಕ್ತಿ ಸಿಕ್ಕಿಲ್ಲ. ಇಲ್ಲಿ ಶ್ರೀರಾಮನ ಹೆಸರಲ್ಲಿ ಅಂಧಾದುಂಧಿ ಮಾಡಲಾಗುತ್ತಿದೆ’ ಎಂದು ರಾಜಲಕ್ಷ್ಮಿ ವಿವರಿಸುತ್ತಾರೆ.

‘ಅಲ್ರಿ ಒಂದ್‍ ಆರ್‌ಎಸ್‍ಎಸ್‍ ವೈರಸ್‍ ತಗೊಂಡು ಹೋಗಿ ಲಕ್ಷದ್ವೀಪದ ಮ್ಯಾಲ ಹಾಕ್ಯಾರ. ಅಲ್ಲಿ ಈ ವೈರಸ್‍ ಆ ಪ್ರದೇಶದ ಶಾಂತಿನೇ ಹಾಳ್‍ ಮಾಡಾಕ್‍ ಹತ್ಯೈತಿ.  ಆ ಪ್ರದೇಶದ ಒಂದು ಹುಡ್ಗಿ ಅದನ್ನ ಬಯೋ ವೆಪನ್‍ ಅನ್ನೋದು ಸಹಜ ಐತಿ. ಆನಂದ ತೇಲ್ದುಂಬೆ, ವರವರರಾವ್‍, ಫಾದರ್ ಸ್ಟಾನ್ ಸ್ವಾಮಿ ಮ್ಯಾಲೆಯೇ ಸುಮ್ಮಸುಮ್ಮನೆ ದೇಶದ್ರೋಹದ ಕೇಸು ಹಾಕೋರು ಈ ಹುಡುಗಿಯನ್ನ ಬಿಡ್ತಾರಾ? ಸರ್ವಾಧಿಕಾರಿ ಆಡಳಿತ ಇದು. ಮೊದಲು ಈ ಸರ್ಕಾರವನ್ನು ಚುನಾವಣೆ ಮೂಲಕವೇ ಕಿತ್‍ ಹಾಕಬೇಕು…’ ಎಂದು ಹೋರಾಟಗಾರ್ತಿ ಕಲಬುರ್ಗಿಯ ಮೀನಾಕ್ಷಿ ಬಾಳಿ ಆಕ್ರೋಶ ವ್ಯಕ್ತಪಡಿಸಿದರು.

ದೇಶದ್ರೋಹ ಆರೋಪದ ವಿರುದ್ದ ಹೈಕೋರ್ಟ್‌ ಹತ್ತಿದ ಲಕ್ಷದ್ವೀಪದ ನಿರ್ಮಾಪಕಿ ಆಯಿಷಾ ಸುಲ್ತಾನ | ನಾನು ಗೌರಿ

‘ಸುರಯ್ಯ, ಮೀನಾಕುಮಾರಿ, ದಿಲೀಪ್‍ಕುಮಾರ್ ಇವರೆಲ್ಲ ಹಿಂದೂ ಪೌರಾಣಿಕ ಪಾತ್ರಗಳನ್ನು ಮಾಡಿದ್ದಾರೆ. ಈಗ ಕರೀನಾ ಕಪೂರ್ ಮಾಡುವುದಕ್ಕೆ ವಿರೋಧ ಎಂದರೆ, ರಾಮನ ಹೆಸರಲ್ಲಿ ದಂಧೆ ಮಾಡೋರು, ಚುನಾವಣೆ ಮಾಡೋರು ಇದರ ಹಿಂದೆ ನಿಂತಾರ ಅಂಥಾನೇ ಅಲ್ವೆ?’ ಎಂದು ಬಾಳಿ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಹಿಂದುತ್ವ ಅಜೆಂಡಾದ ಪ್ರಯೋಗಕ್ಕೆ ಈಗ ನೂತನ ಬಲಿ ಲಕ್ಷದ್ವೀಪ

‘ಮೊನ್ನೆ ಮೊನ್ನೆ ‘ರಾಣೆಬೆನ್ನೂರಿನ ವಕೀಲೆಯೊಬ್ಬರು ಪ್ರಸಾರ ಮಾಡಿದ ವಿಡಿಯೋದಲ್ಲಿ ಈ ಗ್ಯಾಂಗ್‍ ವಿರುದ್ಧ ವಿಪರೀತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರೀನಾ, ಆಯಿಷಾ, ಭವ್ಯ ಇವರೆಲ್ಲರ ವಿರುದ್ಧ ನಿಂತವರು ಈ ಮನೋಭಾವದ ಮನುವಾದಿಗಳು. ಇವರೆಲ್ಲ ಇರುವುದು ಬಿಜೆಪಿ ಅಥವಾ ಸಂಘದ ಅಂಗಳದಲ್ಲಿ. ಕಲಾವಿದರಿಗೆ ಜಾತಿ, ಭಾಷೆ, ಧರ್ಮ ಇಲ್ಲ. ಪ್ರತಿಭೆಯ ಆಧಾರದಲ್ಲಿ ಆ ನಿರ್ಮಾಪಕ-ನಿರ್ದೇಶಕ ಕರೀನಾ ಕಪೂರ್ ಆಯ್ಕೆ ಮಾಡಿಕೊಂಡಿದ್ದಾರೆ. ಸೈಫ್‍ ಪತ್ನಿ ಎಂಬ ಕಾರಣಕ್ಕೆ ಆಕೆ ಆ ಪಾತ್ರ ಮಾಡಕೂಡದು ಎಂದು ಹೇಳಲು ಇವರ್ಯಾವ ದೊಣ್ಣೆನಾಯಕರು?’ ಎಂದು ಮಹಿಳಾ ಆಯೋಗದ ಮಾಜಿ ಸದಸ್ಯೆ ಹೊಸಪೇಟೆಯ ಅಂಬಿಕಾ ಜಲಗಾರ್ ಪ್ರಶ್ನೆ ಎತ್ತುತ್ತಾರೆ. ಈ ಬಗ್ಗೆ ಶೋಭಾ ಕರಂದ್ಲಾಜೆ ಮಾತಾಡೋದೇ ಇಲ್ಲ. ಕರೀನಾ, ಆಯಿಷಾ, ಭವ್ಯಾ ಈ ಎಲ್ಲ ಸೀತೆಯರ ಬಗ್ಗೆ ಈ ಶೋಭಾ ತರಹದವರು ಮಾತನಾಡುವುದಿಲ್ಲ ಏಕೆ ಎಂದು ಅಂಬಿಕಾ ಕೇಳುತ್ತಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಕವಿಯಿತ್ರಿ ವಿನಯಾ ವಕ್ಕುಂದ, ‘ಮಂಗ್ಯಾಗಳು ಅದೇನೋ ಟ್ರೆಂಡ್‍ ಮಾಡ್ತಾವು ಅಂತ ಸುಮ್ಮನೆ ಕೂಡೋ ಕಾಲ ಇದಲ್ಲ. ಈ ಮಂಗ್ಯಾಗಳ ಹಿಂದ ಒಂದ್‍ ದೊಡ್ಡ ಜಾಲ ಐತಿ. ಈ ಜಾಲದೊಳಗ ಬಂಡವಾಳಶಾಹಿನೂ ಐತಿ. ಕರೀನಾ, ಆಯಿಷಾ, ಭವ್ಯಾ ಇದಕ್ಕೆಲ್ಲ ಬಲಿಪಶುಗಳು. ಸೀತೆಯನ್ನು ವನವಾಸದಲ್ಲೇ ಇಟ್ಟಾರ. ಆಕಿ ಬಂದು ಸತ್ಯ ಹೇಳಿದ ಕೂಡ್ಲೇ ಇವರು ಉರುಕೊಂಡು ಸಾಯ್ತಾರ’ ಎಂದು ಸೀತೆಯರ ಕುರಿತು ಹೇಳುತ್ತಲೇ ಮಂಗ್ಯಾಗಳನ್ನೂ ತರಾಟೆಗೆ ತೆಗೆದುಕೊಂಡರು.

ಉದ್ದೇಶಿತ ಚಿತ್ರದಲ್ಲಿ ಮಹೇಶ್ ಬಾಬು ರಾಮನ ಪಾತ್ರದಲ್ಲಿ ಕಾಣಿಸಲಿದ್ದು, ಹೃತಿಕ್ ರೋಷನ್ ರಾವಣನ ಪಾತ್ರವನ್ನು ನಿರ್ವಹಿಸುವ ಸಾಧ್ಯತೆ ಇದೆ. ದೊಡ್ಡ ಬಜೆಟ್ ಚಿತ್ರವನ್ನು ಮಧು, ಅಲ್ಲು ಅರವಿಂದ್ ಮತ್ತು ನಮಿತ್ ಮಲ್ಹೋತ್ರಾ ಸಹ-ನಿರ್ಮಾಣ ಮಾಡಲಿದ್ದಾರೆ. ಹಿಂದಿ ಅಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಚಿತ್ರ ತಯಾರಾಗುತ್ತಿದೆ.

‘ಈ ದೇಶದೊಳ್ಗ ನೂರಾರು ರಾಮಾಯಣ, ಮಹಾಭಾರತ ಅದಾವ. ಅವೆಲ್ಲ ಜನಪದರು ಕಟ್ಟಿಗೊಂಡು ಬಂದ ಪುರಾಣ.. ಆದ್ರ ಈ ಬಿಜೆಪಿ ಸಂಘ ಪರಿವಾರ ಅದಾವಲ್ಲ, ಇವು ಆ ಪುರಾಣಗಳನ್ನು ಬಳಸಿಕೊಂಡು ಪಾಲಿಟಿಕ್ಸ್‍ ಮಾಡಾಕ ಹತ್ತ್ಯಾವು. ಅದರ ಭಾಗನೇ ಇದು, ಕರೀನಾ ಸೀತೆ ಪಾತ್ರ ಮಾಡಬಾರ್ದು ಅನ್ನೋದು ಇದರ ಭಾಗ. ಇಂಥವಕ್ಕೆ ಪಾಲಿಟಿಕಲ್‍ ಆಗಿನೇ ಚಾಲೆಂಜ್‍ ಮಾಡಬೇಕು’ ಎಂದು ಕಲಬುರ್ಗಿಯ  ಎಡಪಂಥೀಯ ಹೋರಾಟಗಾರ್ತಿ ಕೆ. ನೀಲಾ ಹೇಳಿದರು.

ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿಗೆ ಬೆದರಿಕೆ ಕರೆ: 5 ದಿನಗಳಾದರೂ ಕ್ರಮ ಕೈಗೊಳ್ಳದ ಪೋಲೀಸರು!
PC:twitter@Bhavyanmurthy

‘ನಾವು ಭವ್ಯ ನರಸಿಂಹಮೂರ್ತಿ ಪರ ಪ್ರೆಸ್‍ಮೀಟ್‍ ಮಾಡಿದ್ದೇವೆ. ಕೇವಲ ಭವ್ಯಾ ಅಷ್ಟೇ ಅಲ್ಲ, ಬಿಜೆಪಿ ವಿರುದ್ಧ ಟೀಕೆ ಮಾಡುವ ಮಹಿಳೆಯರ ಮೇಲೆ ಇಂತಹ ದಾಳಿ ನಡೆಯುತ್ತಿವೆ. ಪೊಲೀಸ್‍ ಇಲಾಖೆ ಕ್ರಮಕ್ಕೆ ಮುಂದಾಗುತ್ತಿಲ್ಲ. ಒಂದಿಬ್ಬರ ಮೇಲೆ ಪ್ರಕರಣ ದಾಖಲಿಸಿದರೂ ಈ ಅವಾಂತರ ನಿಲ್ಲಿಸಬಹುದು’ ಎಂದು ರಾಜ್ಯ  ಕಾಂಗ್ರೆಸ್‍ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್  ಹೇಳುತ್ತಾರೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಸಿನಿಮಾ ಬಗ್ಗೆ ವಿಶೇಷ ಆಸಕ್ತಿ ಇರುವ ಯದುನಂದನ್‍ ಕಿಲಾರ, ‘ಈ ಏಳೆಂಟು ವರ್ಷಗಳಲ್ಲಿ ಬಲಪಂಥೀಯ ಪ್ರೊಪಗಂಡಾ ವಿಪರೀತಕ್ಕೆ ತಲುಪಿದೆ. ಅದರ ಪರಿಣಾಮವೇ ಕರೀನಾ ಸೀತೆಯ ಪಾತ್ರ ಮಾಡಬಾರದು ಎಂಬ ಕ್ಷುಲ್ಲಕ ಪ್ರಚಾರ ನಡೆದಿದೆ. ಅಷ್ಟಕ್ಕೂ ಈ ರಾಮಾಯಣ ಮತ್ತು ಮಹಾಭಾರತ ಎಂಬ ಇತಿಹಾಸವಲ್ಲದ ಫಿಕ್ಸನ್‍ (ಪುರಾಣ)   ಇಟ್ಟುಕೊಂಡು ಸಿನಿಮಾ ಮಾಡುವುದೇ ಹೋಪ್‍ಲೆಸ್‍. ಈ ದೇಶದಲ್ಲಿ ಮನೆಮನೆಗೂ ಒಂದು ರಾಮಾಯಣ ಕತೆಗಳಿವೆ’ ಎಂದು ಹೇಳಿದರು.

‘ಅಯ್ಯೋ, ನನ್ನ ಅಲೈ ದೇವರು ನಾಟಕದ ಮೊದಲ ಪ್ರದರ್ಶನಕ್ಕೂ ತುಂಬ ಬೆದರಿಕೆ ಕರೆ ಬಂದಿದ್ದವು. ಆದರೆ, ಅವತ್ತು ಹೋರಾಟ ಮನೋಭಾವದ ಹತ್ತಾರು ಯುವಕ ಯುವತಿಯರು ಹಾಜರು ಇದ್ದ ಕಾರಣಕ್ಕೆ ನಾಟಕ ಸುಸೂತ್ರವಾಗಿ ನಡೆಯಿತು’ ಎಂದು ಹನುಮಂತ ಹಾಲಿಗೇರಿ ಹೇಳಿದರು.

ದೇವರು-ಧರ್ಮ-ಸುಳ್ಳುಗಳ ಆಧಾರದಲ್ಲಿ ಪಾಲಿಟಿಕ್ಸ್ ಮಾಡುವ ಗುಂಪನ್ನು ಬೆಂಬಲಿಸುತ್ತ ಮೂರ್ಖರಾಗುತ್ತಿರುವ ಯುವಜನತೆ  ಈ ಸುಳಿಯಿಂದ ಹೊರಬರಲಿ ಎಂದು ಆಶಿಸೋಣ.

  • ಪಿ.ಕೆ ಮಲ್ಲನಗೌಡರ್

ಇದನ್ನೂ ಓದಿ: ಲಕ್ಷದ್ವೀಪ: ಕೇಂದ್ರದಿಂದ ಜೈವಿಕ ಅಸ್ತ್ರ ಬಳಕೆ ಆರೋಪ, ನಿರ್ಮಾಪಕಿ ವಿರುದ್ಧ ದೇಶದ್ರೋಹ ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...