Homeಮುಖಪುಟಹಿಂದುತ್ವ ಅಜೆಂಡಾದ ಪ್ರಯೋಗಕ್ಕೆ ಈಗ ನೂತನ ಬಲಿ ಲಕ್ಷದ್ವೀಪ

ಹಿಂದುತ್ವ ಅಜೆಂಡಾದ ಪ್ರಯೋಗಕ್ಕೆ ಈಗ ನೂತನ ಬಲಿ ಲಕ್ಷದ್ವೀಪ

- Advertisement -
- Advertisement -

#LakshadwwepIsInDanger #SaveLakshdweep ಇದು ಕಳೆದ ಕೆಲವು ದಿನಗಳ ಹಿಂದೆ ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದ ವಿಚಾರ. ಲಕ್ಷದ್ವೀಪ ಭಾರತಕ್ಕೆ ಸೇರಿದ ಒಂದು ಸಣ್ಣ ಕೇಂದ್ರಾಡಳಿತ ಪ್ರದೇಶ. ಅಷ್ಟೇ ಅಲ್ಲ ಈ ದ್ವೀಪವನ್ನು ಭೂಮಿಯ ಮೇಲಿನ ಸಣ್ಣ ಸ್ವರ್ಗ ಎಂದೂ ಕರೆಯಲಾಗುತ್ತದೆ. ಅದಕ್ಕೆ ಕಾರಣಗಳೂ ಸಾಕಷ್ಟಿವೆ.

ಸಾಮಾನ್ಯವಾಗಿ ದ್ವೀಪ ಪ್ರದೇಶ ಅಂದ್ರೆನೇ ಕರಾವಳಿಯ ಆ ಪ್ರದೇಶದ ಸುತ್ತಾ ತುಂಬಾ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳೇ ತುಂಬಿರುತ್ತದೆ ಎಂಬುದು ಹಲವರ ಸಾಮಾನ್ಯ ಗ್ರಹಿಕೆ. ಆದರೆ, ಲಕ್ಷದ್ವೀಪ ಹಾಗಲ್ಲ. ಬೆಳ್ಳಿಯ ಬಣ್ಣದಲ್ಲಿ ಜ್ವಲಿಸುವ ಕರಾವಳಿ ತೀರ, ಕನ್ನಡಿಯಂತಹ ನೀರಿನಲ್ಲಿ ಕಣ್ಣು ಕೋರೈಸುವ ಹವಳದ ಬಂಡೆಗಳು. ಭಾರತದಲ್ಲೇ ಅತ್ಯಂತ ಸ್ವಚ್ಛ ಕರಾವಳಿ ತೀರ ಇರುವುದು ಲಕ್ಷ ದ್ವೀಪದಲ್ಲೇ ಎನ್ನುತ್ತವೆ ಹಲವು ಉಲ್ಲೇಖಗಳು.

ಇಲ್ಲಿ ವಾಯು ಮಾಲಿನ್ಯವಿಲ್ಲ. 2020ರಲ್ಲಿ ಇಡೀ ಭಾರತ ಕೊರೊನಾ ಸಾಂಕ್ರಾಮಿಕಕ್ಕೆ ತತ್ತರಿಸಿದ್ದ ಸಂದರ್ಭದಲ್ಲಿ ಲಕ್ಷದ್ವೀಪದಲ್ಲಿ ಒಂದೇ ಒಂದು ಸೋಂಕು ಪ್ರಕರಣ ಸಹ ಪತ್ತೆಯಾಗಿರಲಿಲ್ಲ. ಶೇ.100 ರಷ್ಟು ಸಾಕ್ಷರತೆ. ಒಂದೇ ಒಂದು ಕೊಲೆ, ದರೋಡೆ, ಅತ್ಯಾಚಾರ ಪ್ರಕರಣಗಳೂ ಸಹ ದಾಖಲಾಗದ ಜೀರೋ ಕ್ರೈಂ ರೇಟ್ ಇರುವ ಹೆಗ್ಗಳಿಕೆ ಕೂಡ ಈ ದ್ವೀಪದ್ದು.

ಈ ದ್ವೀದಪದಲ್ಲಿ ಟೂರಿಸಂ ಪ್ರಮುಖ ಆದಾಯದ ಮಾರ್ಗ. ಹೀಗಿದ್ದಾಗ್ಯೂ, ಇಲ್ಲಿ ಮದ್ಯಪಾನಕ್ಕೆ ನಿಷೇಧವಿದೆ. ಹೀಗೆ ಎಲ್ಲಾ ವಿಧದಲ್ಲೂ ಲಕ್ಷದ್ವೀಪವನ್ನು ಭೂಲೋಕದ ಸ್ವರ್ಗ ಎನ್ನಲು ಅಡ್ಡಿ ಇಲ್ಲ. ಆದರೆ, ಇಂತಹ ಒಂದು ದ್ವೀಪಕ್ಕೆ ಇದೀಗ ಆಪತ್ತು ಎದುರಾಗಿದೆ. ಅದೂ ಯೂನಿಯನ್ ಸರ್ಕಾರ ಈ ದ್ವೀಪಕ್ಕೆ ಹೊಸದಾಗಿ ನೇಮಕ ಮಾಡಿರುವ ಪ್ರಫುಲ್ ಖೋಡಾ ಪಟೇಲ್ ಎಂಬ ಆಡಳಿತಧಿಕಾರಿಯ ಮೂಲಕ.

PC : The Indian Express, (ದಿನೇಶ್ವರ್ ಶರ್ಮಾ)

ಕೇಂದ್ರಾಡಳಿತ ಪ್ರದೇಶಗಳಿಗೆ ಸಾಮಾನ್ಯವಾಗಿ ಐಪಿಎಸ್ ಅಥವಾ ಐಎಎಸ್ ಅಧಿಕಾರಿಗಳನ್ನೇ ಆಡಳಿತ ಅಧಿಕಾರಿಗಳನ್ನಾಗಿ ನೇಮಕ ಮಾಡುವುದು ಸಂಪ್ರದಾಯ. ಕಳೆದ ಬಾರಿ ಲಕ್ಷದ್ವೀಪಕ್ಕೆ ಹೆಸರಾಂತ ಐಪಿಎಸ್ ಅಧಿಕಾರಿ ದಿನೇಶ್ವರ್ ಶರ್ಮಾ ಅವರನ್ನು ಆಡಳಿತ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಭಾರತದ ಇಂಟಲಿಜೆನ್ಸ್ ಬ್ಯೂರೋದ ಮುಖ್ಯಸ್ಥರಾಗಿ ಹೆಸರು ಮಾಡಿದ್ದ ದಿನೇಶ್ವರ್ ಶರ್ಮಾ ಅವರನ್ನು ನಿವೃತ್ತಿಯ ನಂತರ ಲಕ್ಷದ್ವೀಪಕ್ಕೆ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಅವರೂ ಸಹ ಅಲ್ಲಿನ ಜನ ಮೆಚ್ಚುವಂತೆ ಕೆಲಸ ನಿರ್ವಹಿಸಿದ್ದರು. ಆದರೆ, ಅವರ ಅಕಾಲಿಕ ಮರಣದ ನಂತರ ಕಳೆದ ಡಿಸೆಂಬರ್‌ನಲ್ಲಿ ಈ ದ್ವೀಪಕ್ಕೆ ಅಧಿಕಾರಿಯಾಗಿ ಗುಜರಾತ್ ರಾಜ್ಯದ ಮಾಜಿ ಶಾಸಕ ಪ್ರಫುಲ್ ಖೋಡಾ ಪಟೇಲ್ ಅವರನ್ನು ನೇಮಕ ಮಾಡಲಾಗಿತ್ತು. ಸಮಸ್ಯೆ ಆರಂಭವಾದದ್ದೇ ಇಲ್ಲಿಂದ.

ಯಾರು ಈ ಪ್ರಫುಲ್ ಖೋಡಾ ಪಟೇಲ್

ದಿನೇಶ್ವರ್ ಶರ್ಮ ನಂತರ ಲಕ್ಷದ್ವೀಪಕ್ಕೆ ಯಾವ ಐಪಿಎಸ್ ಅಥವಾ ಐಎಎಸ್ ಆಡಳಿತಾಧಿಕಾರಿ ಬರುತ್ತಾರೆ ಎಂದು ಇಡೀ ದ್ವೀಪದ ಜನ ಕಾತರದಿಂದ ಎದುರು ನೋಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಅಧಿಕಾರಿಯಾಗಿ ಬಂದವರೆ ಈ ರಾಜಕಾರಣಿ ಪ್ರಫುಲ್ ಖೋಡಾ ಪಟೇಲ್.

ಇವರ ಇತಿಹಾಸವನ್ನು ಕೆದಕಿದರೆ ಹಲವು ರೋಚಕ ಕಹಿ ಸತ್ಯಗಳು ಬಹಿರಂಗವಾಗುತ್ತದೆ. ಗುಜರಾತ್‌ನಲ್ಲಿ ಅಮಿತ್ ಶಾ ಗೃಹಸಚಿವರಾಗಿದ್ದ ಸಂದರ್ಭದಲ್ಲಿ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶಾ ಅವರನ್ನು ಬಂಧಿಸಿತ್ತು. ಈ ವೇಳೆ ಅಮಿತ್ ಶಾ ಖಾತೆಯನ್ನು ನಿರ್ವಹಿಸಿದ್ದು ಇದೇ ಪ್ರಫುಲ್ ಖೋಡಾ ಪಟೇಲ್.

ಲಕ್ಷದ್ವೀಪಕ್ಕೂ ಮುನ್ನ ಡಿಯು-ಡಮನ್ ಮತ್ತು ದಾದ್ರಾ ಹವೇಲಿ ಎಂಬ ಕೇಂದ್ರಾಡಳಿತ ಪ್ರದೇಶಕ್ಕೂ ಪ್ರಫುಲ್ ಖೋಡಾ ಪಟೇಲ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ಕಳುಹಿಸಲಾಗಿತ್ತು. ಈ ವೇಳೆ 2019ರಲ್ಲಿ ಡಿಯು-ಡಮನ್‌ನಲ್ಲಿ ಉಂಟಾದ ಒಂದು ಸಣ್ಣ ಗಲಭೆಯಲ್ಲಿ 90ಕ್ಕೂ ಹೆಚ್ಚು ಬಡ ಕೂಲಿ ಕಾರ್ಮಿಕರ ಮನೆಯನ್ನು ನೆಲಸಮ ಮಾಡಿ, ಸೆಕ್ಷನ್ 144 ಜಾರಿ ಮಾಡಿ, ಸರ್ಕಾರಿ ಶಾಲೆಗಳನ್ನು ತಾತ್ಕಾಲಿಕ ಜೈಲನ್ನಾಗಿ ಪರಿವರ್ತಿಸಿ ಅಲ್ಲಿನ ಬಡ ಜನರನ್ನು ಬೀದಿಗೆ ತಂದ ಕುಖ್ಯಾತಿಯೂ ಇವರಿಗೆ ಇದೆ.

ಇಷ್ಟೇ ಅಲ್ಲ, ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದ ದಾದ್ರಾ-ಹವೇಲಿ ಸಂಸದ ಮೋಹನ್ ಡೆಲ್ಕರ್, ತಮ್ಮ ಸಾವಿಗೆ ಪ್ರಫುಲ್ ಖೋಡಾ ಪಟೇಲ್ ಅವರೇ ಕಾರಣ ಎಂದು ತಮ್ಮ ಡೆತ್‌ನೋಟ್‌ನಲ್ಲಿ ಬರೆದಿದ್ದರು. ಆದರೆ, ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದ ಕೇಂದ್ರ ಸರ್ಕಾರ ಎಲ್ಲಾ ಸಂಪ್ರದಾಯಗಳನ್ನೂ ಮುರಿದು ಇದೀಗ ಅವರನ್ನು ಲಕ್ಷದ್ವೀಪಕ್ಕೆ ಕಳುಹಿಸಿದೆ. ಗುಜರಾತ್ ರಾಜಕಾರಣಿಯಾಗಿದ್ದರೆ ಲಭಿಸುವ ಮರ್ಯಾದೆಗಳೇ ಬೇರೆ! ಆದರೆ, ಲಕ್ಷದ್ವೀಪಕ್ಕೆ ಆತ ಕಾಲಿಟ್ಟ ದಿನಗಳಿಂದಲೂ ದ್ವೀಪದಲ್ಲಿ ಪ್ರತಿಭಟನೆಗಳು ಕಾವೇರುತ್ತಲೇ ಇವೆ. ಇಷ್ಟಕ್ಕೂ ಜನರ ಪ್ರತಿಭಟನೆ-ಆಕ್ರೋಶಕ್ಕೆ ಕಾರಣವೇನು?

ಪ್ರಫುಲ್ ಖೋಡಾ ಪಟೇಲ್ ವಿರುದ್ಧ ಜನಾಕ್ರೋಶಕ್ಕೆ ಕಾರಣವೇನು?

ಲಕ್ಷದ್ವೀಪದ ಜನ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ವಿರುದ್ಧ ಪ್ರತಿಭಟಿಸಲು ಅವರು ಜಾರಿಗೆ ತಂದಿರುವ ಕೆಲವು ಹೊಸ ಕಾನೂನುಗಳೇ ಕಾರಣ. ಇಸ್ಲಾಂ ಧರ್ಮೀಯರು ಅಧಿಕವಾಗರುವ ಭೂ ಭಾಗದಲ್ಲಿ ಹಿಂದುತ್ವದ ಅಜೆಂಡಾವನ್ನು ಕಾನೂನಾತ್ಮಕವಾಗಿ ಹೇರುವ ಹೇಯ ಕೃತ್ಯಕ್ಕೆ ಇವರು ಮುಂದಾಗಿರುವುದೇ ಎಲ್ಲಾ ಸಮಸ್ಯೆಗೆ ಮೂಲಕ ಕಾರಣ.

ಲಕ್ಷದ್ವೀಪದಲ್ಲಿ ಕಳೆದ ಸೆನ್ಸೆಕ್ಸ್ ಪ್ರಕಾರ 64,000 ಜನರಿದ್ದು, ಇಸ್ಲಾಂ ಧರ್ಮದ ಜನ ಇಲ್ಲಿ ಅಧಿಕ. ಕೇರಳ ರಾಜ್ಯದಿಂದ ಕೇವಲ 200 ಕಿ.ಮೀ. ದೂರ ಇರುವ ಈ ಭೂಭಾಗದಲ್ಲಿ ಮಳಯಾಳಂ ಅಧಿಕೃತ ಭಾಷೆ. ಮಳಯಾಳಿ ಅದರಲ್ಲೂ ಇಸ್ಲಾಂ ಮಳಯಾಳಿಗಳ ಸಾಮಾನ್ಯವಾದ ಆಹಾರ ದನದ ಮಾಂಸ. ತರಕಾರಿ, ಸೊಪ್ಪುಗಳಂತಹ ಆಹಾರಗಳನ್ನು ದ್ವೀಪ ಭೂಮಿಯಲ್ಲಿ ಬೆಳೆಯಲು ಸಾಧ್ಯವಿಲ್ಲ. ಅಲ್ಲಿನ ಎಲ್ಲಾ ಆಹಾರ ಪದಾರ್ಥಗಳೂ ಭಾರತದಿಂದಲೇ ಆಮದಾಗಬೇಕು. ಹೀಗಾಗಿ ಅಲ್ಲಿನ ಜನರಿಗೆ ತಾಜಾವಾಗಿ ಸಿಗುವ ಏಕೈಕ ಆಹಾರ ಮಾಂಸ ಮಾತ್ರ. ಇದು ಮಾತ್ರವಲ್ಲದೆ ಅಲ್ಲಿ ಮಕ್ಕಳಿಗೆ ಬಿಸಿಯೂಟದಲ್ಲಿ ನೀಡಲಾಗುತ್ತಿದ್ದ ಮಾಂಸಾಹಾರಕ್ಕೂ ತಡೆಹಾಕಲಾಗುತ್ತಿದೆ ಎಂಬ ವರದಿಗಳಿವೆ.

PC : Hindustan Times, (ಪ್ರಫುಲ್ ಖೋಡಾ ಪಟೇಲ್)

ಆದರೆ, ಪ್ರಫುಲ್ ಖೋಡಾ ಪಟೇಲ್ ಅಧಿಕಾರ ವಹಿಸಿದ ತಕ್ಷಣ ಮಾಡಿದ ಮೊದಲ ಕೆಲಸ Animal preservation regulation ಎಂಬ ಹೊಸ ಕಾನೂನನ್ನು ಜಾರಿಗೆ ತರುವ ಮೂಲಕ ಬಹು ಸಂಖ್ಯಾತ ಮುಸ್ಲಿಮರು ದನದ ಮಾಂಸವನ್ನು ತಿನ್ನದಂತೆ ಮಾಡಿದ್ದು. ದನದ ಮಾಂಸ ತಿಂದರೆ ಅವರಿಗೆ ಕಠಿಣ ಶಿಕ್ಷೆ ಎಂಬ ಈ ಕಾನೂನು ಅಲ್ಲಿನ ಜನರ ಆಹಾರ ಕ್ರಮದ ಬುಡಕ್ಕೆ ಬಿದ್ದ ಬೆಂಕಿಯಂತಾಗಿದೆ.

ಇಷ್ಟಕ್ಕೆ ಸುಮ್ಮನಾಗದ ಪ್ರಫುಲ್ ಖೋಡಾ ಪಟೇಲ್ ಲಕ್ಷದ್ವೀಪವನ್ನು ತಾನು ಮಾಲ್ಡೀವ್ಸ್ ತರ ಅಭಿವೃದ್ಧಿ ಮಾಡುತ್ತೇನೆ ಎಂದು Development authority regulation ಎಂಬ ಕಾನೂನನ್ನು ಜಾರಿಗೆ ತಂದಿದ್ದಾರೆ. ಈ ಕಾನೂನಿನ ಮೂಲಕ ಪ್ರವಾಸಿಗರಿಗೆ ದ್ವೀಪದ ಬಾಗಿಲನ್ನು ತೆರೆದಿದ್ದರು. ಅಸಲಿಗೆ ಈತ ದ್ವೀಪದಲ್ಲಿ ಕಾಲಿಡುವವರೆಗೆ ಅಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ಸಹ ದಾಖಲಾಗಿರಲಿಲ್ಲ. ಆದರೆ, ಈತ ಅಲ್ಲಿಗೆ ಬಂದಮೇಲೆ, ಪ್ರವಾಸಿಗರಿಗೆ ಇಲ್ಲಿ ಯಾವುದೇ ಕ್ವಾರಂಟೈನ್ ಅಗತ್ಯ ಇಲ್ಲ ಅಂದದ್ದಲ್ಲದೆ, ನೆಗೆಟಿವ್ ರಿಪೋರ್ಟ್ ಇದ್ರೆ 48 ಗಂಟೆಯಲ್ಲಿ ಯಾರು ಬೇಕಾದ್ರು ಲಕ್ಷದ್ವೀಪಕ್ಕೆ ಬರಬಹುದು ಎಂಬ ಹೊಸ ನಿಯಮವನ್ನು ಮುಂದಿಟ್ಟರು.

ಪರಿಣಾಮ 2021 ಜನವರಿ 1ರಂದು ಲಕ್ಷದ್ವೀಪದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಇದೀಗ ಈ ಸಂಖ್ಯೆ 7000 ದಾಟಿದೆ. ಅಲ್ಲದೆ, ಈವರೆಗೆ 36 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಅಲ್ಲದೆ, ಮದ್ಯಪಾನ ನಿಷೇಧವಿದ್ದ ಈ ದ್ವೀಪದಲ್ಲಿ ಈಗ, ಪ್ರವಾಸಿಗರ ನೆಪವೊಡ್ಡಿ ಎಲ್ಲೆಡೆ ಮದ್ಯಪಾನಕ್ಕೆ ಅವಕಾಶ ನೀಡಲಾಗಿದೆ. ಇದು ಅಲ್ಲಿನ ಜನರ ನಂಬಿಕೆಯ ಮೇಲಿನ ದೊಡ್ಡ ಪೆಟ್ಟಾದರೆ, ಜೀವನ ಶೈಲಿಯ ಮೇಲೂ ದೊಡ್ಡ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಇದಲ್ಲದೆ, ಲಕ್ಷದ್ವೀಪದ ಸುತ್ತಳತೆ ಕೇವಲ 34 ಕಿ.ಮೀ. ಇದು ಹತ್ತಾರು ಸಣ್ಣ ದ್ವೀಪಗಳ ಭೂ ಭಾಗ. ಇಲ್ಲಿ ಎಲ್ಲೆಡೆ ರಸ್ತೆಯ ಪಕ್ಕ ಎರಡೂ ಕಡೆ ಮನೆ ಮತ್ತು ಮನೆ ದಾಟಿದ ತಕ್ಷಣ ಸಮುದ್ರದ ತೀರ ಇರುವುದು ಸಾಮಾನ್ಯ. ಆದರೆ, ಅಭಿವೃದ್ಧಿಯ ನೆಪದಲ್ಲಿ ಪ್ರಫುಲ್ ಪಟೇಲ್ ರಸ್ತೆ ಅಗಲೀಕರಣಕ್ಕೆ ಮುಂದಾಗಿ ಜನರ ಮನೆಗಳನ್ನು ಒಡೆಯುವ ಕೆಲಸವನ್ನೂ ಮಾಡಿದ್ದಾರೆ. ಇಂತಹ ಅಭಿವೃದ್ಧಿ ನಮ್ಮ ದ್ವೀಪಕ್ಕೆ ಬೇಡ ಎಂದು ಜನ ಬೀದಿಗಿಳಿದರೂ ಅದನ್ನು ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದೆ, ಅನೇಕರ ಮನೆಗಳನ್ನು ಧ್ವಂಸ ಮಾಡಲಾಗಿದೆ.

2019ರ ನ್ಯಾಷನಲ್ ಕ್ರೈಂ ಬ್ಯೂರೋ ಅಂಕಿಅಂಶಗಳ ಪ್ರಕಾರ ದೇಶದಲ್ಲೇ ಜೀರೋ ಕ್ರೈಂ ರೇಟ್ ಇರುವ ಏಕೈಕ ಭೂಭಾಗ ಅಂದ್ರೆ ಅದು ಲಕ್ಷದ್ವೀಪ. ಆದರೆ, ಅಂತಹ ದ್ವೀಪಕ್ಕೆ Anti social activities regulation ಕಾನೂನನ್ನು ಜಾರಿಗೆ ತರಲಾಗಿದೆ. ಇದು ಇಲ್ಲಿನ ಗೂಂಡಾ ಕಾಯ್ದೆಯಂತಹದ್ದು. ಸರ್ಕಾರದ ವಿರುದ್ಧ ಧ್ವನಿ ಎತ್ತುವವರ ಸದ್ದಡಗಿಸುವ ಸಲುವಾಗಿಯೇ ಈ ಕಾಯ್ದೆಯನ್ನು ದ್ವೀಪದಲ್ಲಿ ಜಾರಿಗೆ ತರಲಾಗಿದೆ. ಈ ಕಾಯ್ದೆಯಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿದರೆ 1 ವರ್ಷದ ಜೈಲು ವಾಸದ ನಂತರವೇ ಕೋರ್ಟ್ ವಿಚಾರಣೆ ಆರಂಭವಾಗುತ್ತದೆ ಎಂಬುದು ಉಲ್ಲೇಖಾರ್ಹ.

ಇದೆಲ್ಲದ್ದಿಂಕ ಮುಖ್ಯವಾಗಿ Panchayat regulation act ಕಾಯ್ದೆ ಇಲ್ಲಿನ ಜನರ ಧ್ವನಿಯನ್ನು ಅಡಗಿಸುವ ಕ್ರಮವಾಗಿದೆ. ಅಂದರೆ ಈವರೆಗೆ ಲಕ್ಷದ್ವೀಪದ ಜನರಿಗೆ ಶಾಸಕ ಅಥವಾ ಸಿಎಂ ಅನ್ನು ಆಯ್ಕೆ ಮಾಡುವ ಹಕ್ಕಿಲ್ಲ. ಈ ದ್ವೀಪವನ್ನು ಪ್ರತಿನಿಧಿಸಲು ಕೇವಲ ಓರ್ವ ಸಂಸದ ಮಾತ್ರ ಇದ್ದಾನೆ. ಉಳಿದಂತೆ ಇಲ್ಲಿನ ಆಡಳಿತ ನಡೆಯುವುದು ಪಂಜಾಯತ್ ವ್ಯವಸ್ಥೆಯ ಮೇಲೆ. ಪಂಚಾಯತ್ ಸದಸ್ಯರನ್ನು ಮಾತ್ರ ಜನ ಮತ ಚಲಾವಣೆ ಮಾಡುವ ಮೂಲಕ ಆಯ್ಕೆ ಮಾಡಬಹುದು.

#SaveLakshadweep-ಬಿಜೆಪಿಯ ಧ್ವೇಷ ರಾಜಕೀಯಕ್ಕೆ ಹೊಸ ಬಲಿ; ಲಕ್ಷದ್ವೀಪದಲ್ಲಿ ಏನಾಗುತ್ತಿದೆ?

ಆದರೆ, ಇಲ್ಲಿನ ಪಂಚಾಯತ್ ಸದಸ್ಯರು ತಮ್ಮ ವಿರುದ್ಧ ದ್ವನಿ ಎತ್ತುತ್ತಿದ್ದಾರೆ ಎಂಬ ಕಾರಣಕ್ಕೆ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ Panchayat regulation act ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಈ ಕಾಯ್ದೆಯ ನಿಯಮದಂತೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲವಂತೆ. ಸಾಮಾನ್ಯವಾಗಿ ಲಕ್ಷದ್ವೀಪದಲ್ಲಿ ಎಲ್ಲರಿಗೂ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದಾರೆ. ಹೀಗಾಗಿ ಅವರನ್ನು ಚುನಾವಣಾ ಕಣದಿಂದ ದೂರ ಇಡಬೇಕು ಎಂಬ ಏಕೈಕ ಕಾರಣಕ್ಕೆ ಇಂತಹ ಕಾನೂನನ್ನು ಜಾರಿಗೆ ತರಲಾಗಿದೆ ಎಂಬುದು ಅಲ್ಲಿನ ಜನರ ಆರೋಪ.

ಅಸಲಿಗೆ ಭಾರತದಲ್ಲಿ ಎಷ್ಟೋ ರಾಜಕಾರಣಿಗಳಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದಾರೆ. ಆದರೆ, ಭಾರತದಲ್ಲಿ ಜಾರಿ ಇಲ್ಲದ ಈ ಕಾನೂನು ಇಲ್ಲಿ ಏಕೆ? ಎಂಬುದು ಲಕ್ಷದ್ವೀಪದ ಜನರ ಪ್ರಶ್ನೆ. ಇದಲ್ಲದೆ ಲಕ್ಷದ್ವೀಪದಲ್ಲಿ ಯಾರು ಬೇಕಾದರೂ ಭೂಮಿ ಖರೀದಿಸಬಹುದು ಎಂಬ ಹೊಸ ನಿಯಮವೂ ಅಲ್ಲಿನ ಪರಿಸರ ಮತ್ತು ಪ್ರಕೃತಿಯನ್ನು ಹಾಳು ಮಾಡಲಿದೆ ಎಂಬುದು ಜನರ ಆತಂಕಕ್ಕೆ ಕಾರಣವಾಗಿದೆ. ಕಾಶ್ಮೀರದ ನಂತರ ಬಿಜೆಪಿ ಲಕ್ಷದ್ವೀಪದಲ್ಲಿ ತನ್ನ ಪರಯೋಗವನ್ನು ಮುಂದುವರಿಸಿದೆಯೇ ಎಂಬ ಪ್ರಶ್ನೆಗಳು ಕೂಡ ಎದ್ದಿವೆ.

ಕೇರಳ ಸರ್ಕಾರ ಈಗಾಗಲೇ ಸೋಮವಾರ ಕೇರಳ ಅಧಿವೇಶನದಲ್ಲಿ ಪ್ರಫುಲ್ ಖೋಡಾ ಪಟೇಲ್ ತಗೆದುಕೊಂಡಿರುವ ಕ್ರಮಗಳನ್ನು ವಿರೋಧಿಸಿ ನಿರ್ಣಯ ಕೈಗೊಂಡಿದ್ದು, ಶೀಘ್ರದಲ್ಲೇ ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ಕೇಂದ್ರ ಯೂನಿಯನ್ ಸರ್ಕಾರ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದೆ. ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ಪ್ರಮುಖ ನಾಯಕರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಲಕ್ಷದ್ವೀಪದ ಜನರ ಹೋರಾಟವೂ ಮುಗಿಯುವ ಯಾವುದೇ ಲಕ್ಷಗಳೂ ಕಾಣಿಸುತ್ತಿಲ್ಲ. ಸೋಮವಾರ ಹಲವರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ, ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾತ್ರ ಇದ್ಯಾವುದನ್ನೂ ಕಂಡೂ ಕಾಣದಂತೆ ಮೌನ ವಹಿಸಿರುವುದು ಮಾತ್ರ ವಿಪರ್ಯಾಸ.


ಇದನ್ನೂ ಓದಿ: ಲಕ್ಷದ್ವೀಪ: ದೇಶದ್ರೋಹ ಆರೋಪದ ವಿರುದ್ದ ಕೇರಳ ಹೈಕೋರ್ಟ್‌ ಮಟ್ಟಿಲೇರಿದ ನಿರ್ಮಾಪಕಿ ಆಯಿಷಾ ಸುಲ್ತಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡಿದ ಬಿಜೆಪಿ ಸಿಎಂ ಬಿರೇನ್ ಸಿಂಗ್: ಅಸ್ಸಾಂ ರೈಫಲ್ಸ್ ವರದಿ

0
ಮಣಿಪುರದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು ನಡೆಸಿದ ಮೌಲ್ಯಮಾಪನದಲ್ಲಿ ಸ್ಪೋಟಕ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಮಣಿಪುರದಲ್ಲಿನ ಸಂಘರ್ಷಕ್ಕೆ ಸಿಎಂ ಬಿರೇನ್ ಸಿಂಗ್ ಉತ್ತೇಜನ ಕಾರಣ ಎಂದು ಹೇಳಿದೆ. ಅಸ್ಸಾಂ ಸಿಎಂ ಬಿರೇನ್ ಸಿಂಗ್...