Homeನ್ಯಾಯ ಪಥಜಾಗೃತಿ ಮತ್ತು ಬದಲಾವಣೆಗಾಗಿ ಹಾಡುವುದನ್ನೆ ಅಸ್ತ್ರವಾಗಿಸಿಕೊಂಡ ಭೂಮ್ತಾಯಿ ಬಳಗ

ಜಾಗೃತಿ ಮತ್ತು ಬದಲಾವಣೆಗಾಗಿ ಹಾಡುವುದನ್ನೆ ಅಸ್ತ್ರವಾಗಿಸಿಕೊಂಡ ಭೂಮ್ತಾಯಿ ಬಳಗ

- Advertisement -
- Advertisement -

“ಪ್ರೀತಿಯ ಗಾಳಿ ಬೀಸುತಿದೆ!
ಅಟ್ಟಿಮೊಹಲ್ಲಗಳಾ ನಡುವೆ!
ಗಡಿಗಳ ಮೀರಿ ಗೆಳೆತನವಾ ಮಾಡೋಣ ಬಾ
ನನ್ನ ಸಂಗಾತಿಯೇ….”

ಪರಿಸರ, ಮಕ್ಕಳ-ಮಾನವ ಹಕ್ಕುಗಳು, ಸೌಹಾರ್ದತೆಯ ಸಂರಕ್ಷಣೆ ಹಾಗೂ ಅಸಮಾನತೆ, ಅನ್ಯಾಯಗಳ ವಿರುದ್ಧ ಹೋರಾಡಲು ಹಲವು ಮಂದಿ ಸಂಘಸಂಸ್ಥೆಗಳನ್ನು ಕಟ್ಟಿಕೊಂಡು ನಿರಂತರವಾಗಿ ಕಾರ್ಯನಿರ್ವಹಿಸುತ್ತಾರೆ. ಎಷ್ಟೋ ಬಾರಿ ಸರ್ಕಾರಗಳಿಗೆ ಸಾಧ್ಯವಾಗದ ಜನಪರ ಕೆಲಸಗಳನ್ನು ಈ ಸಂಸ್ಥೆಗಳು ಮಾಡಿಕೊಂಡು ಬರುತ್ತಿವೆ. ಒಂದೊಂದು ಗುಂಪುಗಳ ಆಲೋಚನೆ, ರೀತಿನೀತಿಗಳು ಬೇರೆ ಆದರೆ, ಗುರಿ ಮಾತ್ರ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸರ್ಕಾರಗಳ ಆಚೆಗೆ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವುದು. ಇಂತಹದ್ದೆ ಕೆಲಸಕ್ಕೆ ಕೈಹಾಕಿ ಹಾಡುಗಳ ಮೂಲಕ ವಿಭಿನ್ನವಾಗಿ ಜನಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ ಭೂಮ್ತಾಯಿ ಬಳಗ.

ಜನರ ಬಳಿಗೆ ತಲುಪಿ, ಅವರೊಂದಿಗೆ ಬೆರೆತು, ಜನಪರ ಮತ್ತು ಜನಪದ ಹಾಡುಗಳನ್ನು ಹಾಡುತ್ತಾ ತಿಳಿವು ಮೂಡಿಸಲು ಶ್ರಮಿಸುತ್ತಿರುವ ತಂಡ ’ಭೂಮ್ತಾಯಿ ಬಳಗ’. ಮನರಂಜನೆಗಾಗಿ ಹಾಡುವ ವೃತ್ತಿಪರ ಕಲಾತಂಡಗಳ ಮಧ್ಯೆ ಈ ತಂಡ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಹಾಡುಗಳನ್ನೆ ಅಸ್ತ್ರವಾಗಿಸಿಕೊಂಡು ಜಾಗೃತಿ ಮೂಡಿಸುವ, ಬದಲಾವಣೆಗಾಗಿ ಪ್ರಯತ್ನಿಸುವುದು ಈ ತಂಡದ ಮುಖ್ಯ ಕೆಲಸ. ಇನ್ನೊಂದು ವಿಷಯವೆಂದರೆ ಇಲ್ಲಿನ ಹಲವು ಹಾಡುಗಾರರು ಶಾಸ್ತ್ರೀಯವಾಗಿ ಅಥವಾ ಪಾರಂಪರಿಕವಾಗಿ ಸಂಗೀತ ಕಲಿತವರಲ್ಲ.

ಪರಿಸರಿ ಸಂರಕ್ಷಣೆ, ನೆಲ-ಜಲ, ಮಕ್ಕಳ ಹಕ್ಕುಗಳು, ಮಹಿಳಾ ಸಮಾನತೆ, ದಲಿತರ ಹಕ್ಕುಗಳು, ಜಾಗತಿಕ ವಿಷಯಗಳು, ಮಾನವ ಹಕ್ಕುಗಳ ಸಂರಕ್ಷಣೆ ಮುಂತಾದ ವಿಷಯಗಳನ್ನು ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಭೂಮ್ತಾಯಿ ಬಳಗ ಶ್ರಮಿಸುತ್ತಿದೆ.

ಗಂಗಮ್ಮನ ಹೊಕ್ಕಲು ಕಲಾ ತಂಡಕ್ಕೆ 2007ರಲ್ಲಿ ಭೂಮ್ತಾಯಿ ಬಳಗ ಎಂದು ಹೆಸರಿಡಲಾಗಿದೆ. ಈ ಬಳಗದ ಸಂಸ್ಥಾಪಕರಾದ ಜನಾರ್ದನ ಕೆಸರಗದ್ದೆ ಈ ಹೆಸರು ಇಟ್ಟಿದ್ದರು. ಸದ್ಯ ಈ ತಂಡವನ್ನು ಮುನ್ನಡೆಸುತ್ತಿರುವುದು 2017ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆಯಾಗಿದ್ದ, ಈ ತಂಡದ ಗಾಯಕಿ ನಿರ್ಮಲಾ ಡಿ.ಆರ್.

“ಭಾಷಣಗಳಲ್ಲಿ ವಿಷಯಗಳನ್ನು ಹೇಳಿ ಅರ್ಥ ಮಾಡಿಸುವುದಕ್ಕಿಂತ ಕಲೆಗಳ ಮೂಲಕ ಅದರಲ್ಲೂ ಹಾಡುಗಳ ಮೂಲಕ ಮತ್ತು ಸಂಗೀತದ ಮೂಲಕ ತಿಳಿಸಿದರೆ, ಜನರಿಗೆ ಹೆಚ್ಚು ಆಪ್ತವಾಗುತ್ತದೆ” ಎಂದು ಹೇಳುತ್ತಾರೆ ಗಾಯಕಿ ನಿರ್ಮಲಾ. “ಮೊದಲು ಹಾಡುಗಳ ಜೊತೆಗೆ ಬೀದಿನಾಟಕಗಳನ್ನು ಮಾಡುತ್ತಿದ್ದೆವು. ಈಗ ಕಲಾವಿದರ ಕೊರತೆಯಿದೆ. ಸದ್ಯ ತಂಡದಲ್ಲಿ 10 ಜನರಿದ್ದೇವೆ. ತಂಡದಲ್ಲಿದ್ದ ಹಳಬರು ಕೂಡ ಕಾರ್ಯಕ್ರಮಗಳಿಗೆ ಬರುತ್ತಾರೆ. ಮೊದಲಿಗೆ ವಾಲಂಟಿಯರ್ ಆಗಿದ್ದವರೆಲ್ಲಾ ಹತ್ತಿರದ ಕಾರ್ಯಕ್ರಮಗಳಿಗೆ ಬರುತ್ತಾರೆ. ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡಬೇಕು ಎಂಬ ಆಶಯಕ್ಕೆ ಸದ್ಯ ಕೊರೊನಾ ಬ್ರೇಕ್ ಹಾಕಿದೆ” ಎನ್ನುತ್ತಾರೆ.

ನಮಗೆ ನಮ್ಮ ಪೂರ್ವಿಕರು ಬಳುವಳಿಯಾಗಿ ನೀಡಿರುವ, ಜನಪದವನ್ನು, ಜನಪದ ಶೈಲಿಯನ್ನು ಇಟ್ಟುಕೊಂಡು ಹಾಡುಗಳನ್ನು ಕಟ್ಟುವುದು, ಅವುಗಳಿಗೆ ಸಂಗೀತ ಸಂಯೋಜಿಸುವುದು, ಜಾನಪದವನ್ನು ಉಳಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ ಎನ್ನುತ್ತದೆ ಈ ಭೂಮ್ತಾಯಿ ಬಳಗ.

ಬೆಂಗಳೂರಿನಲ್ಲಿ ’ಹಾಡು ಬೆಂಗಳೂರು’ ಎನ್ನುವ ಕಾರ್ಯಕ್ರಮವನ್ನು ಎರಡು ಬಾರಿ ನಡೆಸಿ, ಮೂರು ತಿಂಗಳಲ್ಲಿ ಕರ್ನಾಟಕ ಹಲವು ಕಡೆ 100ಕ್ಕೂ ಹೆಚ್ಚು ಕಾರ್ಯಕ್ರಮ ಮಾಡಿರುವ ಕೀರ್ತಿ ಈ ತಂಡಕ್ಕೆ ಇದೆ.

“ಈ ’ಹಾಡು ಬೆಂಗಳೂರು’ ನಮಗೆ ಹೊಸ ಅನುಭವವಾಗಿತ್ತು. ಕಾಲೇಜುಗಳಲ್ಲಿ ಮತ್ತಿತರ ಕಡೆ ಸಾರ್ವಜನಿಕವಾಗಿ ತುಂಬಾ ಕಾರ್ಯಕ್ರಮ ಮಾಡಿದ್ದೆವು. ನೆಲ-ಜಲ, ಸಮಾನತೆ, ಮಹಿಳಾ ಪರ ವಿಚಾರಗಳು, ಪರಿಸರ, ಸಮಾನತೆ ಬಗ್ಗೆ ಹಾಡುಗಳನ್ನು ಹಾಡಿದ್ದೇವೆ. ಇವುಗಳಿಂದಾಗಿಯೇ ಹಾಡು ಕರ್ನಾಟಕ ಎಂಬ ಕಾರ್ಯಕ್ರಮ ಆರಂಭವಾಯಿತು. ಇಡೀ ಕರ್ನಾಟಕದಲ್ಲಿ ಹಾಡಿನ ಮೂಲಕ ಬದಲಾವಣೆಗೆ ಕರೆ ಕೊಡುವ ಆಶಯ ನಮ್ಮದಾಗಿತ್ತು. ಆದರೆ, ಹಾಸನ, ಚಿಕ್ಕಬಳ್ಳಾಪುರದಲ್ಲಿ ನಾಲ್ಕಾರು ಕಾರ್ಯಕ್ರಮ ನಡೆಸುವಷ್ಟರಲ್ಲಿ ಕೊರೊನಾ ಸಾಂಕ್ರಾಮಿಕ ಇದಕ್ಕೆ ತಡೆ ಹಾಕಿತು. ಇಡೀ ಕರ್ನಾಟಕ ಸುತ್ತುವ ನಮ್ಮ ಯೋಚನೆ ಸದ್ಯಕ್ಕೆ ಅಲ್ಲಿಗೆ ನಿಂತಿದೆ. ಆದರೆ ಹಾಡು ಕರ್ನಾಟಕ ಎಂಬುದು ನಾಲ್ಕಾರು ವರ್ಷಗಳ ಕನಸು. ಅದು ಈಗ ಸದ್ಯಕ್ಕೆ 2-3 ಜಿಲ್ಲೆಗಳಿಗೆ ನಿಂತು ಹೋಗಿದ್ದು ಬೇಸರ ಇದೆ. ಮುಂದಿನ ದಿನಗಳಲ್ಲಿ ಪುನರಾರಂಭಿಸುತ್ತೇವೆ” ಎನ್ನುತ್ತಾರೆ ನಿರ್ಮಲಾ.

“ಬಳಗದ ಸಂಸ್ಥಾಪಕರಾದ ಜನಾರ್ದನ ಕೆಸರುಗದ್ದೆ, ಗೊಲ್ಲಹಳ್ಳಿ ಶಿವಪ್ರಸಾದ, ಕೊಟಗಾನಹಳ್ಳಿ ರಾಮಯ್ಯ, ಗ್ಯಾರಂಟಿ ರಾಮಣ್ಣ ಅವರ ಜನಪರ ಮತ್ತು ಹೋರಾಟದ ಹಾಡುಗಳನ್ನು ಹೆಚ್ಚಾಗಿ ಹಾಡುತ್ತೇವೆ. ನಮ್ಮ ತಂಡದ ಗಾಯಕ ಅರುಣ್ ಕುಮಾರ್ ಕೂಡ ಹೋರಾಟದ, ರೈತಪರ ಹಾಡುಗಳನ್ನು ರಚಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ನಾವು ಹೊಸ ಬಗೆಯ ಹಾಡುಗಳನ್ನು ರಚನೆ ಮಾಡಿ ಸಂಯೋಜಿಸಿ ಜನರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಮ್ಮ ಆಶಯಗಳನ್ನು” ನಿರ್ಮಲಾ ನ್ಯಾಯಪಥದ ಮುಂದಿಡುತ್ತಾರೆ.

“ಜನಪದವನ್ನು ಬೆಳೆಸಿ ಜನಪ್ರಿಯಗೊಳಿಸುವುದು ಕೂಡ ನಮ್ಮ ಕರ್ತವ್ಯ. ನಮ್ಮ ಹಾಡುಗಳು ಮತ್ತಷ್ಟು ಜನರಿಗೆ ತಲುಪಲಿ ಎನ್ನುವ ಉದ್ದೇಶದಿಂದಲೇ ನಾನು ಖಾಸಗಿ ಚಾನೆಲ್ ಒಂದರ ಸಂಗೀತ ಕಾರ್ಯಕ್ರಮದ ಸ್ಪರ್ಧಿಯಾಗಿದ್ದೆ. ನಮ್ಮ ಜನಪರ ಹಾಡುಗಳನ್ನು ಹಾಡಿಸುವುದಾಗಿಯೂ ಅವರು ಹೇಳಿದ್ದರು. ಆದರೆ, ಅದು ಸ್ಪರ್ಧೆ ಆಗಿದ್ದರಿಂದ ಹೆಚ್ಚಾಗಿ ಸಿನಿಮಾ ಹಾಡುಗಳಿಗೆ ಪ್ರಾಮುಖ್ಯತೆ ಇತ್ತು. ಚಾನೆಲ್‌ಗಳ ಪ್ರಾಮುಖ್ಯತೆ, ಅವುಗಳ ಮಾನದಂಡ ಬೇರೆಯೇ ಇರುವುದರಿಂದ ಅಲ್ಲಿ ನಮ್ಮ ಹಾಡುಗಳಿಗೆ ಅಷ್ಟೊಂದು ಸ್ಥಳ ಸಿಕ್ಕಲಿಲ್ಲ. ಆದರೂ,
ಕೆಲವು ಜನಪದ ಹಾಡುಗಳಿಗೆ ದನಿಯಾದೆ” ಎಂದು ನಿರ್ಮಲಾ ಹೇಳುತ್ತಾರೆ.

ತಂಡವನ್ನು ಮುನ್ನಡೆಸಲು ಆರ್ಥಿಕ ಸಹಾಯ ಬೇಕಲ್ಲವೇ ಹಾಗೂ ತಂಡದ ಸದಸ್ಯರ ಆರ್ಥಿಕ ಸ್ಥಿತಿಗತಿ ಕೂಡ ಮುಖ್ಯ ಅಲ್ಲವೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ ನಿರ್ಮಲಾ, “ದಲಿತಪರ, ಮಹಿಳಾ ಪರ, ರೈತಪರ ಸಂಘಟನೆಗಳ ಕಾರ್ಯಕ್ರಮಗಳಿಗೆ ಕಡಿಮೆ ಗೌರವಧನ ಪಡೆಯುತ್ತೇವೆ. ಮೊದಲು ಅತಿ ಕಡಿಮೆ ಹಣ ಪಡೆಯುತ್ತಿದ್ದೇವು. ಆರ್ಥಿಕವಾಗಿ ಬಳಗದ ಮೇಲೆ ಅವಲಂಬಿಸಿರುವವರಿಗೆ ಸ್ಪಲ್ಪವಾದರೂ ಸಹಾಯ ಮಾಡಬೇಕು. ನಮ್ಮ ಓಡಾಟದ ಖರ್ಚು ಎಲ್ಲವನ್ನೂ ನೋಡಿಕೊಂಡು ಗೌರವಧನ ಫಿಕ್ಸ್ ಮಾಡುತ್ತೆವೆ. ಕೆಲವೊಮ್ಮೆ ಹಲವು ಸಂಘಟನೆಗಳ ಬಳಿ ಹಣವನ್ನೇ ತೆಗೆದುಕೊಂಡಿಲ್ಲ. ಹೋರಾಟಗಳಲ್ಲಿ ಹಾಗೆಯೇ ಹಾಡುತ್ತೇವೆ. ಕೇವಲ ಓಡಾಟದ ಖರ್ಚು ಪಡೆಯುತ್ತೇವೆ” ಎನ್ನುತ್ತಾರೆ.

“ತಂಡದ ಎಲ್ಲರಿಗೂ ಇದು ತಮ್ಮ ತಂಡ ಎಂಬ ಭಾವನೆ ಇದೆ. ಹೀಗಾಗಿ ತಂಡ ಇಷ್ಟು ವರ್ಷದಿಂದ ಉಳಿದುಕೊಂಡಿದೆ. ಒಬ್ಬರಿಗೊಬ್ಬರು ಪೂರಕವಾಗಿ ಕೆಲಸ ಮಾಡುತ್ತಾರೆ. ತಂಡದಲ್ಲಿ ಬರೀ ಹಣವೇ ಮುಖ್ಯ
ಅಂದುಕೊಂಡವರು ಯಾರೂ ಇಲ್ಲ. ತಂಡ ಬೆಳೆಯಬೇಕು, ಇನ್ನೂ ಹೆಚ್ಚೆಚ್ಚು ಹಾಡಬೇಕು ಎನ್ನುವವರೆ ಎಲ್ಲರೂ. ಮೊದಲು ಹಲವು ಹೆಣ್ಣು ಮಕ್ಕಳು ತಂಡದಲ್ಲಿದ್ದರು. ಆದರೆ ಅವರಲ್ಲಿ ಕೆಲವರು ಈಗ ಗೃಹಿಣಿಯರು, ಮತ್ತೆ ಕೆಲವರು ವೈಯಕ್ತಿಕ ಕಾರಣದಿಂದ ತಂಡದಲ್ಲಿ ಮುಂದುವರೆಯಲಿಲ್ಲ. ನನ್ನ ಪತಿ ರವಿಶಾಸ್ತ್ರಿ ನನ್ನನ್ನು ಅರ್ಥ ಮಾಡಿಕೊಂಡು ಜೊತೆಗೆ ಇರುತ್ತಾರೆ. ಅವರ ಬೆಂಬಲ ಹೆಚ್ಚಾಗಿರುವುದರಿಂದ ನಾನು ಈ ತಂಡವನ್ನು ಮುನ್ನಡೆಸಲು ಸಾಧ್ಯವಾಗುತ್ತಿದೆ” ಎನ್ನುತ್ತಾರೆ ನಿರ್ಮಲಾ.

“ನಮ್ಮ ತಂಡವನ್ನು ಜನ ಗುರುತಿಸುವ ರೀತಿಗೆ ಖುಷಿಯಾಗುತ್ತದೆ. ಮೊದಲಿಗಿಂತಲೂ ಈಗ ತಂಡಕ್ಕೆ ಬೇಡಿಕೆ ಹೆಚ್ಚಾಗಿದೆ. ನಿಮ್ಮ ತಂಡದ ಹಾಡುಗಳೇ ಬೇಕು ಎಂದು ಹಠ ಹಿಡಿದು ಕರೆಯುತ್ತಾರೆ. ಕೊರೊನಾ ಸೋಂಕು ಕಡಿಮೆಯಾದ ಬಳಿಕ ಹಲವು ಕಾರ್ಯಕ್ರಮಗಳ ಆಹ್ವಾನ ಬಂದಿದೆ. ಪ್ರತಿ ವರ್ಷವೂ ಒಂದೊಂದು ಶೀರ್ಷಿಕೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಹಾಡು ಬೆಂಗಳೂರು, ಹಾಡು ಕರ್ನಾಟಕ ಕೂಡ ಇವುಗಳ ಒಂದು ಭಾಗ” ಎನ್ನುತ್ತಾರೆ.

ತಂಡದಲ್ಲಿ ಸದ್ಯಕ್ಕೆ ಮುಖ್ಯ ಗಾಯಕರಾಗಿ ಅರುಣ್ ಕುಮಾರ್, ಬಾಲು ಜಂಬೆ (ಜಂಬೆ ವಾದ್ಯ, ಅಂತಾರಾಷ್ಟ್ರೀಯ ಕಲಾವಿದ), ವಿವೇಕ್ ಮೌರ್ಯ (ಕೀಬೋರ್ಡ್), ಹೊಂಬೇಗೌಡ, ರವಿಶಾಸ್ತ್ರಿ, ನಾಗೇಶ್ (ರಿದಮ್ ಪ್ಯಾಡ್) ಇದ್ದಾರೆ. ಉಳಿದವರು ಕಾರ್ಯಕ್ರಮಗಳಿಗೆ ಸಾಥ್ ನೀಡುತ್ತಾರೆ.

ಬಿಎಸ್‌ಸಿ ಪದವಿ ಮುಗಿಸಿ, ಕಳೆದ 6 ವರ್ಷಗಳಿಂದ ತಂಡದ ಜೊತೆಗೆ ಗುರುತಿಸಿಕೊಂಡಿರುವ ದೇವನಹಳ್ಳಿಯ ಕಲಾವಿದ ಅರುಣ್ ಕುಮಾರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ.

“ಭೂಮ್ತಾಯಿ ಬಳಗ ತುಂಬಾ ಹಣಕಾಸು ಇರುವ ತಂಡವೇನಲ್ಲ. ಆದರೂ ಇಂದು ನಮ್ಮ ಮನೆಯಲ್ಲಿ ಮೂರು ಹೊತ್ತು ಊಟ ಸಿಗುತ್ತಿರುವುದು ಇದೇ ತಂಡದಿಂದ. ಬಡ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾರೆ. ತಂಡದವರಿಗೆ ಸಮಾನ ಮನಸ್ಥಿತಿ ಇದೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಸಾಗುವ ಇವರ ಗುಣ ನನ್ನನ್ನು 6 ವರ್ಷಗಳಿಂದ ಇವರ ಜೊತೆಗೆ ಇರಿಸಿದೆ. ಬಡ ಕಲಾವಿದರಿಗೆ ಈ ತಂಡ ನೀಡುವ ಪ್ರೋತ್ಸಾಹ ಅನುಕರಣೀಯ” ಎನ್ನುತ್ತಾರೆ.

“ಬಳಗ ಹಲವು ಜನರಿಗೆ ಜೀವನ ನೀಡಿದೆ. ಮುಖ್ಯ ವೇದಿಕೆಗೆ ಬಡ ಕಲಾವಿದರು ಬರಲು ಹಲವು ವರ್ಷಗಳು ಬೇಕು. ಆದರೆ ಇಲ್ಲಿ ತಾವೇ ಹಾಡುಗಳನ್ನು ಕಲಿಸಿ, ಹಾಡಲು ಅವಕಾಶ ನೀಡಿದ್ದಾರೆ. 10 ವರ್ಷದ ಸಮಯದಲ್ಲಿ ಕಲಿಯುವಂತಾದನ್ನು ನನಗೆ ಇಲ್ಲಿ ಒಂದು ವರ್ಷಕ್ಕೆ ಕಲಿಸಿದ್ದಾರೆ. ಹಳಬರ ಜೊತೆಗೆ ಹೊಸಬರನ್ನು ಬೆಳೆಸುವ ತಂಡದ ಗುಣ ನನಗೆ ತುಂಬಾ ಇಷ್ಟ. ನಾನು ಕೂಡ ಈಗ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಮತ್ತಷ್ಟು ಉತ್ತಮ ಹಾಡುಗಳನ್ನು ಸಂಯೋಜಿಸಬೇಕು” ಎನ್ನುತ್ತಾರೆ ಅರುಣ್ ಕುಮಾರ್. ಪ್ರತಿಭಟನೆಗಳು, ಜನಪರ ಚಳವಳಿಗಳ ಜೊತೆಗೆ ಹಾಡುಗಳ ಮೂಲಕವೂ ಜನರಲ್ಲಿ ಅರಿವು ಮೂಡಿಸಲು ಸಾಧ್ಯ. ಹಾಡುಗಳು ಕೇವಲ ಮನರಂಜನೆಗೆ ಮಾತ್ರವಲ್ಲ, ಜಾಗೃತಿಯಾಗಲೂ ಸಾಧ್ಯ. ಹಾಡುಗಳನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಮತ್ತಷ್ಟು ಬದಲಾವಣೆಗೆ ದುಡಿಯುತ್ತಿರುವ ಈ ತಂಡ ಭೂಮಿ ತಾಯಿಯ ಬಳಗವೇ ಸರಿ.

ಬಳಗ ಹಾಡುವ ಹಾಡೊಂದರ ಈ ಸಾಲುಗಳು “ಮಸಣದಲ್ಲಿ ಗಿಡವ ನೆಡು, ಬೆಳೆದು ಹಣ್ಣು ನೀಡುವುದು! ಎಲ್ಲ ಮಣ್ಣಿನಲ್ಲಿ ಹೊನ್ನು ಇದೇ..” ಇಂದಿನ ದಿನಕ್ಕೆ ಎಷ್ಟು ಸೂಕ್ತ ಅಲ್ಲವೇ!

  • ಮಮತ ಎಂ

ಇದನ್ನೂ ಓದಿ: 14 ವರ್ಷ ವನವಾಸದಿಂದ ಮರಳಿ ಬಂದಳೇ ಸೀತೆ?: ಕರೀನಾ, ಆಯಿಷಾ, ಭವ್ಯ ವಿರುದ್ಧ ನಿಂತ ಶಕ್ತಿಗಳು ಯಾವುವು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...