ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ಹೆಚ್ಚು ಬಾಧಿತರಾದವರ ಸಾಲಿಗೆ ಮಕ್ಕಳು ಸೇರುತ್ತಾರೆ. ತಂದೆ-ತಾಯಿ, ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳು ಸುಮಾರು 30 ಸಾವಿರಕ್ಕೂ ಹೆಚ್ಚಿದ್ದಾರೆ. ತಮ್ಮ ತಮ್ಮ ರಾಜ್ಯಗಳಲ್ಲಿ ಕೊರೊನಾದಿಂದ ಅನಾಥರಾದ ಮಕ್ಕಳ ಜವಾಬ್ದಾರಿಯನ್ನು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ವಹಿಸಿಕೊಂಡಿವೆ. ಈ ಸಾಲಿಗೆ ಈಗ ಉತ್ತರ ಪ್ರದೇಶ ಸರ್ಕಾರ ಕೂಡ ಸೇರಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯದಲ್ಲಿ ಕೊರೊನಾ ಕಾರಣದಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಮುಖ್ಯಮಂತ್ರಿ ಬಾಲ್ ಸೇವಾ ಯೋಜನೆಯಡಿ ಮಾಸಿಕ 4,000 ರೂಪಾಯಿ ಪಿಂಚಣಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.
“ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ರಾಜ್ಯ ಸರ್ಕಾರವು ತಿಂಗಳಿಗೆ 4,000 ರೂಪಾಯಿ ನೀಡಲಿದೆ. ಮುಖ್ಯಮಂತ್ರಿ ಬಾಲ್ ಸೇವಾ ಯೋಜನೆಯಡಿ 18 ವರ್ಷ ತುಂಬುವವರೆಗೆ ಈ ಹಣವನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ, ಮಾಸಿಕ 5000 ರೂ. ಪಿಂಚಣಿ
ರಾಜ್ಯದಲ್ಲಿಯೂ 42 ಜನ ಮಕ್ಕಳು ತಂದೆ ತಾಯಿ ಇಬ್ಬರನ್ನು ಕಳೆದುಕೊಂಡು ಅನಾಥವಾಗಿವೆ. ತಂದೆ ತಾಯಿ ಇಬ್ಬರನ್ನು ಕಳೆದುಕೊಂಡ ಈ ಮಕ್ಕಳಲ್ಲಿ 5 ಜನ ಮಕ್ಕಳು ಏಳು ವರ್ಷಕ್ಕಿಂತ ಒಳಗಿನವರಾಗಿದ್ದರೆ ಉಳಿದವರು 10 ರಿಂದ 18 ವರ್ಷ ಒಳಗಿನ ಮಕ್ಕಳಾಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಂದೆ-ತಾಯಿಯರನ್ನು ಕಳೆದುಕೊಂಡ ಮಕ್ಕಳನ್ನು ಪತ್ತೆ ಹಚ್ಚಲು ಸರ್ವೆ ನಡೆಸುತ್ತಿದೆ. ಈ ಸರ್ವೆ ಮೂಲಕ ಕೋವಿಡ್ ಕಾರಣದಿಂದ ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಮುಖ್ಯಮಂತ್ರಿಗಳ ಬಾಲ ಸೇವಾ ಯೋಜನೆಯಡಿಯಲ್ಲಿ ತಿಂಗಳಿಗೆ 3,500 ರೂ ಮಾಸಾಶನವನ್ನು ನೀಡಲಾಗುತ್ತದೆ.
ಇತ್ತ ದೆಹಲಿಯಲ್ಲಿಯು ಕೋವಿಡ್ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ದೆಹಲಿಯ ಆಮ್ ಆದ್ಮಿ ಸರ್ಕಾರ ಘೋಷಿಸಿದೆ. ಅಲ್ಲದೇ ಆ ಮಕ್ಕಳು 25 ವರ್ಷದವರಾಗುವವರೆಗೂ ಮಾಸಿಕ 2,500 ರೂ ಪಿಂಚಣಿ ನೀಡಲಾಗುತ್ತದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿಯೂ ಕೊರೊನಾದಿಂದ ಅನಾತರಾದ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಮಾಸಿಕ 5,000 ರೂಪಾಯಿ ಪಿಂಚಣಿ ನೀಡುವುದಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಸಾಂಕ್ರಾಮಿಕದ ಹೊಡೆತಕ್ಕೆ ಅನಾಥವಾದ ಸಾವಿರಾರು ಮಕ್ಕಳು