Homeಕರ್ನಾಟಕಬರಗೂರು ಮರ್ಯಾದೆಗೇಡು ಹತ್ಯೆ ಪ್ರಕರಣ; ದುಡಿಮೆ ಬಡತನ ಕೊಟ್ಟಿತು, ಜಾತಿ ಕೊಲೆ ಮಾಡಿಸಿತು

ಬರಗೂರು ಮರ್ಯಾದೆಗೇಡು ಹತ್ಯೆ ಪ್ರಕರಣ; ದುಡಿಮೆ ಬಡತನ ಕೊಟ್ಟಿತು, ಜಾತಿ ಕೊಲೆ ಮಾಡಿಸಿತು

- Advertisement -
- Advertisement -

ಬರಗೂರು, ಕರ್ನಾಟಕವನ್ನು ಆಂಧ್ರ ಪ್ರದೇಶ-ತೆಲಂಗಾಣಗಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಿಂದ ಮೂರು ಕಿ.ಮೀ. ಸನಿಹದ ಗ್ರಾಮ. ಸುನೀತ ಈಗಷ್ಟೇ ಪಿ.ಯು.ಸಿ ಮುಗಿಸಿ, ಪದವಿ ಮೆಟ್ಟಿಲೇರಿದ ಸುಮಾರು 19 ವರ್ಷದ ಯುವತಿ. ದಾನಪ್ಪ ಸುಮಾರು 22 ವರ್ಷದ ಟ್ರ್ಯಾಕ್ಟರ್ ಚಾಲಕ. ಇವರಿಬ್ಬರೂ ಇದೇ ಗ್ರಾಮದವರು. ಜಾತಿ ಹಿನ್ನೆಲೆಯಲ್ಲಿ ಸುನೀತ ಕುರುಬರ ಹುಡುಗಿಯಾದರೆ, ದಾನಪ್ಪ ಮಾದಿಗರ ಹುಡುಗ.

ಈ ಇಬ್ಬರೂ ಅವರವರಷ್ಟಕ್ಕೆ ಇದ್ದಿದ್ದರೆ ಈಗ ಅವರ ಬಗ್ಗೆ ಬರೆಯುವ ಪ್ರಸಂಗವೇ ಬರುತ್ತಿರಲಿಲ್ಲ. ಆದರೆ ಇವರಿಬ್ಬರೂ ಪ್ರೇಮಿಸಿದ ’ಅಪರಾಧ’ಕ್ಕೆ ಹೀಗಾಗುತ್ತದೆ ಎಂದು ಯಾರೊಬ್ಬರೂ ಅಂದುಕೊಂಡಿರಲಿಲ್ಲ. ಆಗಿದ್ದಿಷ್ಟು. ಕಳೆದ ಮೂರು ವರ್ಷಗಳಿಂದಲೂ ಜಾರಿಯಲ್ಲಿದ್ದ ಇವರ ’ಪ್ರೇಮ’ ಹುಡುಗಿಯ ಕುಟುಂಬದ ಜಾತಿ ಗರ್ವಕ್ಕೆ ಪೆಟ್ಟುಕೊಟ್ಟಿತು. ಹಾಗೆಂದೇ ತಮ್ಮ ಜಾತಿಯ ’ಹೆಚ್ಚುಗಾರಿಕೆ’ಯನ್ನು ಉಳಿಸಿಕೊಳ್ಳಲು ಅವರು ಆ ಹುಡುಗನನ್ನು ’ಮುಗಿಸಿ’ಬಿಟ್ಟರು. ಅಷ್ಟೇ, ದಾನಪ್ಪ ಊರಾಚೆ ರಸ್ತೆ ಪಕ್ಕದ ಗದ್ದೆಯಲ್ಲಿ ಹೆಣವಾದ.

ಈ ಸುನೀತಳ ಅಪ್ಪ, ಮರಿಬಸಪ್ಪನೂ ಶ್ರೀಮಂತನೇನಲ್ಲ. ಜಮೀಂದಾರನಾಗಲಿ, ರಾಜಕಾರಣಿಯಾಗಲಿ, ವ್ಯಾಪಾರಸ್ಥನಾಗಲಿ ನೌಕರಿ ಮಾಡುವಾತನಾಗಲಿ ಅಲ್ಲ. ಒಂದು ಎಕರೆ ತುಂಡುಭೂಮಿ ಇಟ್ಟುಕೊಂಡು ಅಷ್ಟರ ಆಧಾರದಲ್ಲಿ ಜೀವನ ಸಾಗಿಸಲು ಆಗದೇ ಊರವರ ಹೊಲಗದ್ದೆಗಳಲ್ಲಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುವ ಕೃಷಿ ಕೂಲಿಕಾರ. ದಾನಪ್ಪನ ಅಪ್ಪ ಹನುಮಂತಪ್ಪನಿಗೆ ಇಷ್ಟೂ ಜಮೀನಿಲ್ಲದೇ ಕೂಲಿ ಮಾಡಿಯೇ ಅನ್ನ ಕಂಡುಕೊಳ್ಳಬೇಕಿದ್ದ ಬಡವ. ಹುಡುಗಿ ಸುನೀತ, ಹುಡುಗ ದಾನಪ್ಪನ ಕುಟುಂಬಗಳೆರಡೂ ಬಡತನರೇಖೆಯ ಕೆಳಗೆ ಬಾಳು ಸಾಗಿಸುವಲ್ಲಿ ಸಮಾನವಾಗಿದ್ದರೂ ಜಾತಿ ಎಂಬುದು ಅವರ ನಡುವೆ ಆತನಕ ಬಿರುಕು ಮೂಡಿಸಿದ್ದಷ್ಟಕ್ಕೆ ಸಾಕಾಗದೇ ಪ್ರೇಮದ ಸಂದರ್ಭದಲ್ಲಿ ದ್ವೇಷ ಹುಟ್ಟುವಂತೆ ಮಾಡಿತು. ಈ ಜಾತಿ, ಕೂಲಿಕಾರನನ್ನು ಕೊಲೆಗಾರನನ್ನಾಗಿಸಿತು. ಹೊಲಗದ್ದೆಗಳಲ್ಲಿ ದುಡಿಮೆಯಲ್ಲಿರಬೇಕಾಗಿದ್ದ ತಂದೆ ಮರಿಬಸಪ್ಪ ತನ್ನ ಹೆಂಡತಿ ಲಲಿತಮ್ಮ, ಮಗಳು ಸುನೀತಾರ ಜೊತೆಗೆ ಈಗ ಜೈಲಿನಲ್ಲಿದ್ದಾನೆ. ಬಡತನ ಇವರಿಗೆ ಇರಲು ಮಣ್ಣಿನ ಮನೆಯನ್ನಾದರೂ ನೀಡಿತ್ತು. ಜಾತಿ ಈ ಕುಟುಂಬವನ್ನು ಇದೀಗ ಜೈಲಿನಲ್ಲಿರಿಸಿದೆ.

ಘಟನೆಯ ಬಳಿಕ..

ಇಷ್ಟೆಲ್ಲಾ ಆದ ಬಳಿಕ, ಮುಂದೇನಾಗಬೇಕೋ ಅದು ’ಮಾಮೂಲಿ’ಯಂತೆ ನಡೆದೇ ಇದೆ. ಅಂದರೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್.ಐ.ಆರ್ ದಾಖಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಗೆ ಸಂಬಂಧಿಸಿದ ಇನ್ನು ನಾಲ್ವರನ್ನು ’ಶಂಕಿತರೆಂದು’ ದಾಖಲಿಸಿದ ಪೊಲೀಸರು ಅವರನ್ನು ಬಂಧಿಸಲು ನಿರಾಕರಿಸಿದ್ದಾರೆ. ಈ ನಾಲ್ವರನ್ನೂ ಬಂಧಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ-ಸಂಘಟನೆಗಳ ನೇತೃತ್ವದಲ್ಲಿ ಬರಗೂರಿನ ದಲಿತರು ತಾಲೂಕು ಕೇಂದ್ರ ಕಾರಟಗಿಯಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ತಹಸೀಲ್ದಾರರಿಗೆ ಮನವಿ ಪತ್ರ ಕೊಟ್ಟಿದ್ದಾರೆ. ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ, ಕರ್ನಾಟಕ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ರೈತ ಸಂಘ-ಎ.ಐ.ಕೆ.ಕೆ.ಎಸ್, ಅ.ಭಾ.ಗ್ರಾಮೀಣ ಕೃಷಿ ಕಾರ್ಮಿಕ ಸಂಘ, ಬಿ.ವಿ.ಎಸ್, ಭೀಮ್ ಆರ್ಮಿ, ಅಂಬೇಡ್ಕರ್ ಸೇನೆ, ಮೊದಲಾದ ಸಂಘಟನೆಗಳು ’ದಲಿತ ದಮನಿತರ ಒಕ್ಕೂಟ’ವನ್ನು ರಚಿಸಿಕೊಂಡು ’ಜನ ಜಾಗೃತಿ ಆಂದೋಲನ’ವನ್ನು ಆರಂಭಿಸಿವೆ.

ಪ್ರಗತಿಪರ ಸಂಘಟನೆಗಳು ಈ ಜಾಥಾಕ್ಕೆ ಬೆಂಬಲ ನೀಡಿದ್ದು ’ಕೊಪ್ಪಳ ಚಲೋ’ ಹೆಸರಿನಲ್ಲಿ ಬೃಹತ್ ಪ್ರತಿಭಟನೆಯನ್ನು ರೂಪಿಸುತ್ತಿದ್ದಾರೆ. ಜನವಾದಿ ಮಹಿಳಾ ಸಂಘಟನೆಯ ರಾಜ್ಯ ನಾಯಕಿ, ಜನಪರ ಚಿಂತಕಿ ಕೆ.ನೀಲಾ ಮೃತನ ಕುಟುಂಬಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿ ಸ್ಪಂದಿಸಿದ್ದಾರಲ್ಲದೇ ಹೋರಾಟ ಮಾಡುವ ಭರವಸೆ ನೀಡಿದ್ದಾರೆ. ಎಲ್ಲ ಆರೋಪಿಗಳನ್ನೂ ಬಂಧಿಸಬೇಕೆಂದು ಆಗ್ರಹಿಸಿ ಗಂಗಾವತಿ ತಾಲೂಕಿನ ಸಿ.ಪಿ.ಐ.ಎಂ ಮುಖಂಡರು ಸರಕಾರವನ್ನು ಆಗ್ರಹಿಸಿದ್ದಾರೆ. ಇನ್ನು, ಸರಕಾರದ ಮಟ್ಟದಲ್ಲಿ ತಕ್ಷಣಕ್ಕೆ ದೊರೆತ ಸ್ಪಂದನೆ ಎಂಬಂತೆ, ಸಮಾಜ ಕಲ್ಯಾಣ ಇಲಾಖೆಯು “ಮರ್ಯಾದೆಗೇಡು ಹತ್ಯೆ”ಗೀಡಾದ ದಾನಪ್ಪನ ಕುಟುಂಬಕ್ಕೆ ನಾಲ್ಕು ಲಕ್ಷ, ಹನ್ನೆರಡು ಸಾವಿರದ, ಐನೂರು ರೂ ಪರಿಹಾರದ ಚೆಕ್ಕನ್ನು ನೀಡಿದೆ. ಇನ್ನೂ ಸ್ವಲ್ಪ ಮೊತ್ತ ಈ ಕುಟುಂಬಕ್ಕೆ ಸರಕಾರದಿಂದ ಬರುವ ಭರವಸೆ ದೊರೆತಿದೆ. ಇನ್ನುಳಿದಂತೆ, ಯಥಾರೀತಿ ತನಿಖೆ ನಡೆಯುತ್ತಿದೆ.

ಪ್ರಥಮ ವರ್ತಮಾನ ವರದಿಯಲ್ಲಿರುವಂತೆ:

ಕಾರಟಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಥಮ ವರ್ತಮಾನ ವರದಿಯಂತೆ, ಈ ಘಟನೆಯು 22.06.21ರ ರಾತ್ರಿ 11 ಗಂಟೆಯಿಂದ 23.06.21ರ ಬೆಳಗಿನ 7.30ರ ನಡುವೆ ನಡೆದಿದೆ. ಕೊಲೆಗೀಡಾದ ದಾನಪ್ಪನ ತಂದೆ, ಫಿರ್ಯಾದುದಾರನ ಹೆಸರು ಕರಿ ಹನುಮಂತಪ್ಪ, ವೃತ್ತಿ ರೈತ, ಜಾತಿ ಮಾದಿಗ, ಧರ್ಮ ಹಿಂದು, ರಾಷ್ಟ್ರೀಯತೆ ಇಂಡಿಯಾ ಎಂದು ನಮೂದಾಗಿದೆ.

ಕೊಲೆಯಾದ ದಾನಪ್ಪನ ತಂದೆಯ ಮಾತಿನಲ್ಲಿರುವಂತೆ “ಮಗನನ್ನು ಕೊಲೆ ಮಾಡಿರುತ್ತಾರೆ, ಮಗನಿಗೆ ಎಡಗಾಲಿನ ಮೂಳೆ ಮುರಿದಂತೆ ಗಾಯವಾಗಿರುತ್ತದೆ. ಈ ಕೊಲೆಯನ್ನು ಮರಿಬಸಪ್ಪ, ಈತನ ಮಗಳು ಸುನೀತಾ, ಹೆಂಡತಿ ಲಲಿತಮ್ಮ, ಅಳಿಯ ಹುಲುಗಪ್ಪ, ಇವರುಗಳು ಸೇರಿ ಮಾಡಿದ್ದಾರೆ”. ದೂರಿನಲ್ಲಿ ಅವರು ಹೇಳುವುದು: “ನನ್ನ ಮಗ ದುಡಿಯಲು ಹೋಗಿ ನನ್ನ ಕುಟುಂಬವನ್ನು ನಿರ್ವಹಿಸುತ್ತಿದ್ದನು. ನಮ್ಮ ಕುಟುಂಬ ದಾನಪ್ಪನ ದಿನಗೂಲಿಯ ಮೇಲೆ ಅವಲಂಬನೆಯಾಗಿತ್ತು. ಈಗ ದಾನಪ್ಪನ ಕೊಲೆಯಿಂದಾಗಿ ನಮ್ಮ ಕುಟುಂಬ ಬೀದಿ ಪಾಲಾಗಿದೆ”.

ಪ್ರೇಮವನ್ನು ಕೊಂದ ಜಾತಿಯ ಪಾತ್ರ, ಚಿತ್ರ

ಈ ಕೊಲೆಯಾಗಿರುವುದು ಪ್ರೇಮದ ಕಾರಣಕ್ಕೆ ಎಂಬುದು ಅರ್ಧಸತ್ಯ ಅಥವಾ ಅಸಲೀ ಸತ್ಯವನ್ನು ಮರೆಮಾಚುವ ಮುಸುಕು ಮಾತ್ರ. ಇಲ್ಲಿ ನಿಜವಾದ ಕೊಲೆಗಾರನೆಂದರೆ ಜಾತಿ. ಮರಿಬಸಪ್ಪ, ಈ ಜಾತಿ ಕ್ರೌರ್‍ಯದ ಕೈಯ ಅಸ್ತ್ರಮಾತ್ರ. ಜಾತಿಮೂಲದ ಸಾಮಾಜಿಕ ವ್ಯವಸ್ಥೆಯ ಪಿತೂರಿಯಿಂದ ಸೃಷ್ಟಿಯಾದ ಹುಸಿ ’ಮರ್ಯಾದೆ’ ಎಂಬ ಪ್ರಚೋದನೆಯಿಂದ ಈ ಬಡ ಮರಿಬಸಪ್ಪ ಕೊಲೆಗಾರನಾಗುವಂತಾಗಿದೆ. ಈ ಜಾತಿ ವ್ಯವಸ್ಥೆಯೇ ಈತನಲ್ಲಿ ತಾನು ’ಅವರಿಗಿಂತ’ ಮೇಲಿನವನು ಎಂಬ ’ಗರ್ವ’ ಮೂಡಿಸಿದೆ. ಈ ಗರ್ವದಿಂದಲೇ ತಾನು ಜೈಲು ಸೇರಿದರೂ ಸರಿ, ಜಾತಿ ಉಳಿಸಿಕೊಳ್ಳಬೇಕೆಂದು ತನ್ನದಷ್ಟೇ ಅಲ್ಲ, ಮಗಳ ಬಾಳನ್ನೂ ಹಾಳು ಮಾಡಿ ಈತನೀಗ ಜೈಲು ಸೇರಿದ್ದಾನೆ.

ಬರಗೂರೆಂಬ, ಊರು-ಸಮಾಜದ ಜಾತಿ ನಕಾಶೆಯಲ್ಲಿ ಈ ಮರಿಬಸಪ್ಪ ತೀರಾ ಮೇಲಿನವನಲ್ಲದಿದ್ದರೂ ನಕಾಶೆಯ ಕೆಳಗಿರುವ ಮಾದಿಗ ಸಮುದಾಯಕ್ಕೆ ಹೋಲಿಸಿದರೆ ಮೇಲಿನವನು! ಹಾಗೆ ನೋಡಿದರೆ, ಈ ಪುಟ್ಟ ಗ್ರಾಮದ ಮಟ್ಟಕ್ಕೆ ಜಾತಿಯಲ್ಲಿ ಉಳಿದವುಗಳಿಗಿಂತ ಅತ್ಯಂತ ಮೇಲಿನದು ಲಿಂಗಾಯತ. ಆದರೆ ಈ ಸಮುದಾಯದ ಮನೆಗಳು ನಾಲ್ಕೈದು ಮಾತ್ರ. ನಾಯಕರ ಮನೆಗಳೂ ಏಳೆಂಟು ಅಷ್ಟೆ. ಸಂಖ್ಯಾ ಬಲದಲ್ಲಿ ಪ್ರಥಮ ಸ್ಥಾನದಲ್ಲಿರುವವರು ಕುರುಬರು. ಬಹುಸಂಖ್ಯಾತರೆಂಬ ಕಾರಣಕ್ಕೆ ಜಾತಿ ಮಾನದಂಡದಲ್ಲಿ ಹಿಂದುಳಿದವರು ಇಲ್ಲಿ ಮೇಲಿನವರು. ಆದರೆ ಕಡಿಮೆ ಸಂಖ್ಯೆಯಲ್ಲಿದ್ದರೂ ಲಿಂಗಾಯತರು ಜಾತಿಯಲ್ಲಿ ಕಡಿಮೆಯವರಲ್ಲವಾದ್ದರಿಂದ, ಬಹುತೇಕ ಸಮಬಲದ ಸಂಖ್ಯೆಯಲ್ಲಿರುವ ದಲಿತರು ಹಿಂದುಳಿದವರಿಂದ ದಮನಿತರು. ಈ ದಮನವೇ ಇಲ್ಲಿ ದಾನಪ್ಪನನ್ನು ಬಲಿ ತೆಗೆದುಕೊಂಡಿದೆ.

ಜಾತಿ ಎಂಬ ’ಮತ್ತು’ ನೆತ್ತಿಗೇರದೇ ಇದ್ದಿದ್ದರೆ ಸುನೀತ ಮತ್ತು ದಾನಪ್ಪ ಚೆಂದದ ಬಾಳ್ವೆ ಮಾಡುತ್ತಿದ್ದರು. ಆದರೆ ಜಾತಿಗರ್ವ, ಪ್ರೇಮವನ್ನು ಕೊಂದಿದೆ. ಪ್ರೇಮಿ ಸತ್ತು, ಅಪ್ಪನ ಕ್ರೌರ್ಯದಲ್ಲಿ ಮಗಳೂ ಪಾಲುದಾರಳೆಂದು ಆರೋಪಿಸಲ್ಪಟ್ಟ ಸುನೀತಾ ಕೂಡ ಜಾತಿ ಸಂಚಿಗೆ ಬಲಿಯಾಗಿ ದೈಹಿಕವಾಗಿ ಸೆರೆಮನೆಯಲ್ಲಿದ್ದು ವಿರಹ ಅನುಭವಿಸುತ್ತಿದ್ದಾಳೆ. ಪಾಪ, ಬಡವ, ಮರಿಬಸಪ್ಪ, ಕೊಲೆಗಾರನೆಂಬ ಕಿರೀಟತೊಟ್ಟು ಕಂಬಿ ಎಣಿಸುತ್ತಿದ್ದಾನೆ.

ಇಲ್ಲಿ ಅಸಲೀ ಕೊಲೆಗಾರ ಯಾರು? ಮರಿಬಸಪ್ಪನೋ ಆತನ ತಲೆಹೊಕ್ಕು ಕುಣಿಸುತ್ತಿರುವ ಜಾತಿಯೋ? ಮರಿಬಸಪ್ಪನೇನೋ ಜೈಲಿನಲ್ಲಿದ್ದಾನೆ. ಆದರೆ ಜಾತಿ ಎಂಬುದು ಕಣ್ಣಿಗೆ ಕಾಣದೆ ಮೆರವಣಿಗೆ ಹೊರಟಿದೆ. ಜಾತಿ ಕಾರಣದ ವ್ಯಕ್ತಿಗೆ ಶಿಕ್ಷೆಯಾಗಬಹುದು. ಆದರೆ ’ಜಾತಿ’ ಯನ್ನು ಶಿಕ್ಷಿಸುವ ಅಸ್ತ್ರ ನಮ್ಮಲ್ಲಿದೆಯೇ?

ದಲಿತ ದಮನ ನಿರಂತರ ವರ್ತಮಾನ

ಬರಗೂರಿನ ಮರ್ಯಾದೆಗೇಡು ಹತ್ಯೆ ಪ್ರಕರಣ ಮಾತ್ರವಲ್ಲ, ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಅನಿಯಂತ್ರಿತವಾಗಿ ದಲಿತರ ದಮನ ಮತ್ತು ಕೊಲೆಯಂತಹ ಘಟನೆಗಳು ನಡೆಯುತ್ತಲೇ ಬಂದಿವೆ. ಶ್ರೀರಾಮನಗರ ಮತ್ತು ಮರಳಿ ಗ್ರಾಮಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರದ ಘಟನೆಗಳು ಸಂಭವಿಸಿವೆ. ಯಲಬುರ್ಗಾ ತಾಲೂಕಿನ ವಜ್ರಬಂಡಿ, ಹೊಸಳ್ಳಿ ಗ್ರಾಮಗಳಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆದಿವೆ. ಕೊಪ್ಪಳ ತಾಲೂಕಿನ ಗುಳದಳ್ಳಿ, ಮೈನಹಳ್ಳಿಗಳಲ್ಲಿ ದಲಿತರ ಮೇಲೆ ಸುಳ್ಳು ಕೌಂಟರ್ ಕೇಸ್‌ಗಳನ್ನು ಹಾಕಿ ಕಿರುಕುಳ ಕೊಡಲಾಗಿದೆ. ಕೆಲ ವರ್ಷಗಳ ಹಿಂದೆ ಹೊಸಗುಡ್ಡ ಎಂಬಲ್ಲಿ ದಲಿತ ಮಹಿಳೆಯ ಕೊಲೆಯಾಗಿ ಪ್ರಕರಣ ಮುಚ್ಚಿಹೋಗಿದೆ. ಗಂಗಾವತಿ ಪಕ್ಕದ ಮರಕುಂಬಿ ಗ್ರಾಮದಲ್ಲಿ ದಲಿತರಿಗೆ ಕ್ಷೌರ ನಿಷೇಧದ ವಿರುದ್ಧ ಸುದೀರ್ಘ ಹೋರಾಟ ಮಾಡಲಾಗಿದೆ. ಹಗೇದಾಳ್ ಎಂಬ ಗ್ರಾಮದಲ್ಲಿ ದಲಿತ ಯುವಕರಿಂದ ಸಿಗರೇಟು ಪ್ಯಾಕ್ ತರಿಸಿ ಒಳಗಿನ ಸಿಗರೇಟು ಮುಟ್ಟಿದ್ದಾನೆ ಎಂಬ ಕಾರಣಕ್ಕೆ ಅವಾಚ್ಯವಾಗಿ ನಿಂದಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಲಾಗಿದೆ. ಹೀಗೆ ಒಂದೆರಡಲ್ಲ, ಬೆಳಕಿಗೆ ಬಾರದ ಘಟನೆಗಳೆಷ್ಟೋ ದಿನನಿತ್ಯ ನಡೆಯುತ್ತಲೇ ಇವೆ. ಈ ಎಲ್ಲ ದೌರ್ಜನ್ಯಗಳಿಗೆ ಕಾರಣವಾಗಿರುವುದು ಕೇವಲ “ಜಾತಿ” ಎಂಬ ಅಂಶ. ಈ ದಮನಗಳಿಗೆ ನಿರಂತರ ಬಲಿಯಾಗುತ್ತಿರುವವರು ದಲಿತರು.

ಬಿ. ಪೀರ್‌ಬಾಷ

ಬಿ. ಪೀರ್‌ಬಾಷ
ಕವಿ, ಲೇಖಕ ಮತ್ತು ಹೋರಾಟಗಾರರಾದ ಬಿ. ಪೀರ್ ಭಾಷರವರು ಮೂಲತಃ ಹೂವಿನ ಹಡಗಲಿಯವರಾಗಿದ್ದು ಸದ್ಯ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನೆಲೆಸಿದ್ದಾರೆ. ಸಮಾಜ ವಿಜ್ಞಾನ ಅಧ್ಯಯನ ಸಂಸ್ಥೆ ಮತ್ತು ಮುಸ್ಲಿಂ ಲೇಖಕರ ಚಾವಡಿಗಳಲ್ಲಿ ಸಕ್ರಿಯರಾಗಿದ್ದಾರೆ. ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ ಅವರ ಪ್ರಸಿದ್ದ ಕವನ ಸಂಕಲನವಾಗಿದೆ.


ಇದನ್ನೂ ಓದಿ: ’ಮರ್ಯಾದೆ’ ಮತ್ತು ಮನುಷ್ಯತ್ವದ ಕಂದರವನ್ನು ಶೋಧಿಸುವ ’ಪಾವ ಕದೈಗಳ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ಲೇಖನವನ್ನು ಡಾಬಸ್ಪೇಟೆ ವಾಯ್ಸ್‌ ಕನ್ನಡ ಮಾಸಪತ್ರಿಕೆಯ ಆಗಸ್ಟ್‌ ೨೦೨೧ರ ಸಂಚಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...