Homeಕರ್ನಾಟಕಬಳ್ಳಾರಿ: ಶ್ರೀ ಕೃಷ್ಣದೇವರಾಯ ವಿ.ವಿ: ಒಳಜಗಳದ ಒಳಸುಳಿಗಳು

ಬಳ್ಳಾರಿ: ಶ್ರೀ ಕೃಷ್ಣದೇವರಾಯ ವಿ.ವಿ: ಒಳಜಗಳದ ಒಳಸುಳಿಗಳು

- Advertisement -
- Advertisement -

ಮುತ್ತುರಾಜ್ |

ಶೈಕ್ಷಣಿಕವಾಗಿ ಹಿಂದುಳಿದಿರುವ ಬಳ್ಳಾರಿ ಜಿಲ್ಲೆಯಲ್ಲಿ ಹೊಸ ಶಿಕ್ಷಣ ಕ್ರಾಂತಿಯನ್ನು ಮಾಡಬೇಕೆಂಬ ಆಶಯದೊಂದಿಗೆ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವನ್ನು 2010ರಲ್ಲಿ ಆರಂಭಿಸಲಾಯಿತು. ಕೊಪ್ಪಳ ಮತ್ತು ಬಳ್ಳಾರಿ ಎರಡು ಜಿಲ್ಲೆಗಳಲ್ಲಿ ಅಧಿಕಾರ ವ್ಯಾಪ್ತಿ ಹೊಂದಿರುವ, ಬಳ್ಳಾರಿಯ ವಿನಾಯಕನಗರದಲ್ಲಿ 100 ಎಕರೆ ವಿಶಾಲ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಈ ವಿ.ವಿಯು ಶುರುವಾಗಿ 9 ವರ್ಷ ಆದರೂ ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸಲು ಸಫಲವಾಗಿಲ್ಲ. ಅಷ್ಟರಲ್ಲಾಗಲೇ ವಿ.ವಿಯು ನೇಮಕಾತಿ ಗೊಂದಲದಿಂದ ನಲುಗುತ್ತಿದ್ದು ಇಲ್ಲಿನ ಒಳಜಗಳ ಬೀದಿಗೆ ಬಂದುನಿಂತಿದೆ. ಗುಣಮಟ್ಟದ ಉನ್ನತ ಶಿಕ್ಷಣದ ಕನಸೊತ್ತು ಬರುವ ವಿದ್ಯಾರ್ಥಿಗಳ ಪಾಲಿಗೆ ಇದು ನಿಜವಾಗಲೂ ಸಮಗ್ರ ವಿ.ವಿ ಅನಿಸಿಕೊಳ್ಳುವುದು ಯಾವಾಗ ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.
ಕಳೆದ ಹದಿನೈದು ದಿನಗಳಿಂದ ಕೃಷ್ಣದೇವರಾಯ ವಿ.ವಿಯಲ್ಲಿ ನಡೆಯುವ ಜಗಳಗಳು ದಿನಪತ್ರಿಕೆ, ಟಿವಿಗಳಿಗೆ ಆಹಾರವಾಗತೊಡಗಿವೆ. ಕುಲಪತಿ ಪ್ರೊ.ಎಂ.ಎಸ್ ಸುಭಾಷ್‍ರವರು ಕುಲಸಚಿವರಾದ ಪ್ರೊ.ಬಿ.ಕೆ ತುಳಸಿಮಾಲರವರನ್ನು ಪತ್ರಿಕಾಗೋಷ್ಠಿಯಿಂದ ಎದ್ದು ನಡಿಯಿರಿ ಎಂದದ್ದು ಇನ್ನು ಚರ್ಚೆಯಾಗುತ್ತಲೆ ಇದೆ. ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯ ನೇಮಕಾತಿ ವಿಚಾರದಲ್ಲಿ ದೊಡ್ಡ ಮಾರಾಮಾರಿಯೆ ನಡೆಯುತ್ತಿದೆ.

ಏನಿದು ವಿವಾದ?
ವಿ.ವಿಯು 2012 ರಲ್ಲಿ 134 ಬೋಧಕ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಮುಂದಾಗಿತ್ತು. 80% ಹೈದರಾಬಾದ್ ಕರ್ನಾಟಕದವರಿಗೆ ಮತ್ತು ಉಳಿದ ಹುದ್ದೆಗಳು ಜನರಲ್ ಮೆರಿಟ್ ಎಂದು ನಿರ್ಧರಿಸಲಾಗಿತ್ತು. ಶೇ.20 ಜನರಲ್ ಹುದ್ದೆಗಳು ನೇಮಕಗೊಂಡವೇ ಹೊರತು ಹೈ.ಕ ಭಾಗದವರಿಗೆ ದಕ್ಕಬೇಕಾಗಿದ್ದ 80% ಹುದ್ದೆಗಳು ಹಾಗೆ ಉಳಿದವು. ಹೈ.ಕ ದವರಿಗೆ ದಕ್ಕಬೇಕಿದ್ದ ಜೊತೆಗೆ 45 ಬೋಧಕೇತರ ಸಿಬ್ಬಂದಿ ನೇಮಕಾತಿಯೂ ನೆನೆಗುದಿಗೆ ಬಿದ್ದಿತ್ತು. ಪ್ರಸ್ತುತ ಕುಲಪತಿಗಳು ಈ ಹುದ್ದೆಗಳ ಭರ್ತಿಗೆ ಮುಂದಾಗಿದ್ದು 2018ರಲ್ಲೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದರು. ಆಗ ಮಧ್ಯ ಪ್ರವೇಶಿಸಿದ ಕೆಲವರು ಕುಲಪತಿಗಳ ಹುದ್ದೆ ಇನ್ನೇನು ಮುಗಿಯಲಿದೆ, ಚುನಾವಣೆ ಹತ್ತಿರ ಬಂದಿರುವಾಗ ನೇಮಕಾತಿ ನಡೆಯಬಾರದೆಂದು ಕೊಕ್ಕು ಹಾಕಿದರು.
ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಕುಲಪತಿಗಳು ಸರ್ಕಾರಕ್ಕೆ ಪತ್ರ ಬರೆದು 371ಜೆ ಮೀಸಲಾತಿಗೆ ಅನ್ಯಾಯವಾಗುತ್ತಿದೆ, ಹಾಗಾಗಿ ತುರ್ತು ನೇಮಕಾತಿ ನಡೆಯಬೇಕೆಂದು ಕೋರಿದರು. ಇದಕ್ಕೆ ನೇಮಕಾತಿ ಪ್ರಕ್ರಿಯೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಸಿರು ನಿಶಾನೆ ತೋರಿದ್ದರು. ಅಷ್ಟು ಮಾತ್ರವಲ್ಲ ಈ ವಿಷಯಕ್ಕೆ ಚುನಾವಣಾ ಆಯೋಗ ಸಲ್ಲಿಸಿದ್ದ ನೀತಿಸಂಹಿತೆ ಉಲ್ಲಂಘನೆಯ ಅರ್ಜಿಯನ್ನು ಹೈ ಕೋರ್ಟ್ ವಜಾ ಮಾಡಿ ನೇಮಕಾತಿಗೆ ಚುನಾವಣಾ ನೀತಿಸಂಹಿತೆ ಅಡ್ಡಿ ಬರುವುದಿಲ್ಲ ಎಂದು ತೀರ್ಪು ನೀಡಿತ್ತು. ಇದರಿಂದ ಬೋಧಕ ಸಿಬ್ಬಂದಿಯ ನೇಮಕಾತಿಯು ನಡೆಯಿತು. ಈಗ ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಯೂ ಚಾಲನೆಯಲ್ಲಿದ್ದು ಇನ್ನೊಂದು ವಾರದಲ್ಲಿ ಮುಗಿಯಲಿದೆ. ತಾನು ಕುಲಪತಿ ಹುದ್ದೆಯಿಂದ ನಿರ್ಗಮಿಸುವುದರೊಳಗೆ ನೇಮಕಾತಿ ಮುಗಿಸಲೇಬೇಕೆಂದು ಪ್ರೊ.ಸುಭಾಷ್‍ರವರು ಹಠತೊಟ್ಟರೆ, ಕುಲಸಚಿವೆ ಪ್ರೊ.ಬಿ.ಕೆ ತುಳಸಿಮಾಲರವರು ನಿಯಮಾವಳಿಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಆರೋಪ ಮಾಡಿದರು. ಜೊತೆಗೆ ತಾನು ನೇಮಕಾತಿ ಪ್ರಕ್ರಿಯೆಯಿಂದ ಹೊರಗುಳಿಯುವುದಾಗಿ ಘೋಷಿಸಿದ್ದರು. ಇನ್ನೊಂದಿಷ್ಟು ಜನ ನೇಮಕಾತಿಯಲ್ಲಿ ಭ್ರಷ್ಟಾಚಾರವೂ ನಡೆಯುತ್ತಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಟಿಯೆಂಬ ಡ್ರಾಮ
ವಿ.ವಿಯ 7 ಘಟಿಕೋತ್ಸವದ ನಿಮಿತ್ತ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ಕುಲಪತಿ ಪ್ರೊ.ಎಂ.ಎಸ್ ಸುಭಾಷ್ ಮತ್ತು ಕುಲಸಚಿವೆ ಪ್ರೊ.ಬಿ.ಕೆ ತುಳಸಿಮಾಲ ಉಪಸ್ಥಿತರಿದ್ದರು. ಪತ್ರಕರ್ತರೊಬ್ಬರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕದ ಕುರಿತು ಪ್ರಶ್ನೆ ಎತ್ತಿದ್ದರು. ಆಗ ಪ್ರೊ.ಬಿ.ಕೆ ತುಳಸಿಮಾಲರವರು ಉತ್ತರಿಸಿ ನೇಮಕಾತಿಯಲ್ಲಿ ಹಲವು ಗೊಂದಲಗಳಾಗಿವೆ, ಹಾಗಾಗಿ ನಾನು ನೇಮಕಾತಿ ಪ್ರಕ್ರಿಯೆಯಿಂದ ಹೊರಗುಳಿದಿದ್ದೆ ಎನ್ನುತ್ತಿದ್ದಂತೆ ಪ್ರೊ.ಎಂ.ಎಸ್ ಸುಭಾಷ್‍ರವರು ಮಾತನಾಡಿ “ದಯವಿಟ್ಟು ನೀವು ಇಲ್ಲಿಂದ ಎದ್ದು ಹೋಗಿ, ನಿಮ್ಮ ಬಗ್ಗೆಯೇ ನಾನೊಂದಿಷ್ಟು ಮಾತಾಡಬೇಕಿದೆ. ನೀವಿದ್ದರೆ ಅದು ಸಾಧ್ಯವಿಲ್ಲ” ಎಂದು ಖಾರವಾಗಿ ನುಡಿದಿದ್ದಾರೆ. ನೊಂದ ತುಳಿಸಿಮಾಲರವರು ತಕ್ಷಣವೇ ಸುದ್ದಿಗೋಷ್ಠಿಯಿಂದ ಹೊರನಡೆದಿದ್ದು ಆ ಫೋಟೋ ಎಲ್ಲಾ ಕಡೆ ವೈರಲ್ ಆಗಿದೆ.
ನೇಮಕಾತಿ ಪ್ರಕ್ರಿಯೆಗೆ ನನಗೆ ಯಾವುದೇ ಆಕ್ಷೇಪವಿಲ್ಲ, ಕುಲಪತಿಗಳು ನನ್ನನ್ನು ಕುಲಸಚಿವೆಯನ್ನಾಗಿ ನೋಡುತ್ತಿಲ್ಲ. ತರಾತುರಿಯಲ್ಲಿ 30 ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿರುವುದು ಸರಿಯಲ್ಲ ಎಂದು ಪ್ರೊ.ಬಿ.ಕೆ ತುಳಸಿಮಾಲ ಹೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಬೆಂಗಳೂರು, ಮೈಸೂರು ಸೇರಿ ದಕ್ಷಿಣ ಕರ್ನಾಟಕದವರಿಗೆ ಉತ್ತರ ಕರ್ನಾಟಕದ ಜನರ ಕಷ್ಟಗಳು ಅರ್ಥವಾಗುತ್ತಿಲ್ಲ. ಒಂದು ವೇಳೆ ನೇಮಕಾತಿ ಪ್ರಕ್ರಿಯೆ ನಿಂತರೆ ಹೈದರಾಬಾದ್ ಕರ್ನಾಟಕ ಭಾಗಕ್ಕೆ ದೊಡ್ಡ ಅನ್ಯಾಯವಾಗುತ್ತದೆ. ನನ್ನ ಅವಧಿಯಲ್ಲಿ ಈ ಕೆಲಸ ಮುಗಿದು ಹೈ.ಕ ಭಾಗದವರಿಗೆ ಉದ್ಯೋಗ ಸಿಗಬೇಕೆಂಬುದು ನನ್ನ ಆಶಯ ಎಂದು ಪ್ರೊ.ಎಂ.ಎಸ್ ಸುಭಾಷ್ ಹೇಳುತ್ತಾರೆ.
ಇನ್ನು ಈ ವಿಚಾರವಾಗಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಸಿರಿಗೇರಿ ಪನ್ನರಾಜ್‍ರವರು 371ಜೆ ವಿಚಾರಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಹಿಂದೆ ಕುಲಪತಿಯಾಗಿದ್ದ ಮೈಸೂರು ಭಾಗದ ಮಂಜಪ್ಪ ಹೊಸಮನಿಯವರು 371ಜೆ ಮೀಸಲಾತಿಯನ್ನು ಪಾಲಿಸದೇ ಸ್ಥಳಿಯೇತರರನ್ನು ಮಾತ್ರ ನೇಮಕಾತಿ ಮಾಡಿದ್ದರು. ಆಗ ಹೈ.ಕ ದ ಅಭ್ಯರ್ಥಿಗಳು ಆಯ್ಕೆಯಾಗಿದ್ದರೆ ಇಂದಿಗೆ ಅವರಿಗೆ 7 ವರ್ಷಗಳ ಸೇವಾ ಹಿರಿತನ ಲಭಿಸುತ್ತಿತ್ತು. ಅವರು ಮಾಡಿದ ಅನ್ಯಾಯದಿಂದ 7 ವರ್ಷಗಳ ಸೇವಾ ಹಿರಿತನವನ್ನು ಕಳೆದುಕೊಂಡಿರುವ ಈ ಭಾಗದ ಅರ್ಹ ಅಭ್ಯರ್ಥಿಗಳಿಗೆ ಈಗಲಾದರೂ ನ್ಯಾಯ ಸಿಗಬೇಕು ಹಾಗಾಗಿ ನೇಮಕಾತಿ ಪ್ರಕ್ರಿಯೆ ಬೇಗ ಮುಗಿಯಬೇಕೆಂದು ಹೇಳಿದ್ದಾರೆ. ಇದೇ ವೇಳೆ ಭ್ರಷ್ಟಾಚಾರಕ್ಕೆ ಅವಕಾಶವಿರಬಾರದು ಈ ಕುರಿತು ತನಿಖೆಯೂ ನಡೆಯಬೇಕೆಂದು ಅಭಿಪ್ರಾಯಪಡುತ್ತಾರೆ.

ಮರೀಚಿಕೆಯಾದ ಗುಣಮಟ್ಟದ ಶಿಕ್ಷಣ
ಬಳ್ಳಾರಿ ನಗರದಲ್ಲಿದ್ದರೂ ಬಹುತೇಕ ವಿದ್ಯಾರ್ಥಿಗಳು ವಿ.ವಿ ಸೇರಲು ಹಿಂದೇಟು ಹಾಕುತ್ತಿದ್ದಾರೆ. ನೂರು ಎಕರೆಗಳ ವಿಶಾಲತೆಯಿದ್ದರೂ ಇದು ಒಂದು ಸಾಮಾನ್ಯ ಪದವಿ ಕಾಲೇಜಿಗಿಂತಲೂ ಕಳಪೆಯಾಗಿ ಕಾಣುತ್ತಿದೆ ಎಂಬುದು ಅವರ ಆರೋಪ. ಆರೋಪಕ್ಕೆ ಸಾಕ್ಷಿಯೆಂಬಂತೆ ವಿವಿಯಲ್ಲಿ ಅತ್ಯುತ್ತಮ ಬೋಧನೆ, ಪಾರದರ್ಶಕ ಪರೀಕ್ಷೆ, ಉತ್ತಮ ಫಲಿತಾಂಶವೂ ಕಂಡುಬರುತ್ತಿಲ್ಲ. ಮೂಲಭೂತ ಸೌಲಭ್ಯಗಳ ಕೊರತೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕೊರತೆ, ಅಸಮರ್ಪಕ ಆಡಳಿತ, ಕೆಟ್ಟು ನಿಂತ ಹಾಸ್ಟೆಲ್‍ಗಳು, ಇಚ್ಛಾಶಕ್ತಿಯ ಕೊರತೆ ಇದಕ್ಕೆ ಕಾರಣವಾಗಿದೆ. ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಂಪಿಯಲ್ಲಿರುವ ಹಂಪಿ ಕನ್ನಡ ವಿ.ವಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದರೆ ಬಳ್ಳಾರಿ ಕೃಷ್ಣದೇವರಾಯ ವಿ.ವಿ ಮಾತ್ರ ಅರಾಜಕತೆಗೆ ಕುಖ್ಯಾತಿಯಾಗುತ್ತಿದೆ.

ಕಳಪೆ ಆಹಾರದ ಕೊಂಪೆಗಳಾದ ಹಾಸ್ಟೆಲ್‍ಗಳು
ಇನ್ನು ಕಾಲೇಜಿಗೆ ಸೇರಿದರೂ ಕೂಡ ಯಾವುದೇ ಕಾರಣಕ್ಕೂ ಹಾಸ್ಟೆಲ್‍ಗಳಿಗೆ ಸೇರುವುದಿಲ್ಲ ಎಂಬುದು ಎಲ್ಲಾ ವಿದ್ಯಾರ್ಥಿಗಳ ಸಾಮಾನ್ಯ ದೂರು. ಅಪರಿಮಿತ ಭ್ರಷ್ಟಾಚಾರದ ಕಾರಣಕ್ಕೆ ಇಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ. ಶುಚಿತ್ವದ ಬಗ್ಗೆ ಕೇಳಲೇಬೇಕಿಲ್ಲ. ಈ ಕಷ್ಟವನ್ನು ಸಹಿಸಿಕೊಳ್ಳಲಾಗದೇ ಬಹಳಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಸೇರಿ ನಂತರ ಬಿಟ್ಟು ಬಿಟ್ಟಿದ್ದಾರೆ. ಹಾಸ್ಟೆಲ್ ಸರಿಯಿಲ್ಲದ್ದಕ್ಕೆ ಬಹಳಷ್ಟು ವಿದ್ಯಾರ್ಥಿಗಳು ಕಾಲೇಜು ತೊರೆದಿದ್ದಾರೆ. ಇದರ ವಿರುದ್ಧ ಹೋರಾಟ ನಡೆಸಿದ ಎಸ್‍ಎಫ್‍ಐ ವಿದ್ಯಾರ್ಥಿಯೊಬ್ಬನಿಗೆ ಪ್ರಾಧ್ಯಾಪಕರೊಬ್ಬರು ಹಲ್ಲೆ ನಡೆಸಿದ ಘಟನೆ ನಡೆದು ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಡಾ.ಮೋಹನ್ ದಾಸ್ ಎಂಬ ಪ್ರಾಧ್ಯಾಪಕರು ಎಸ್‍ಎಫ್‍ಐ ಪದಾಧಿಕಾರಿ ಬಸವರಾಜ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಮತ್ತು ಹಾಸ್ಟೆಲ್‍ಗಳನ್ನು ಸಂಬಂಧಿಸಿದ ಇಲಾಖೆಗಳೆ ನಡೆಸುವಂತೆ ಆಗ್ರಹಿಸಿ ಕಳೆದ ವರ್ಷ ಸೆಪ್ಟಂಬರ್‍ನಲ್ಲಿ ವಿ.ವಿಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರು.
ಒಟ್ಟಾರೆಯಾಗಿ ದಿನದಿಂದ ದಿನಕ್ಕೆ ಅಭಿವೃದ್ದಿಯತ್ತ ಸಾಗಬೇಕಿದ್ದ ವಿ.ವಿ ಕೆಲವು ವ್ಯಕ್ತಿಗಳ ನಡುವಿನ ವೈಯಕ್ತಿಕ ಇಗೋ, ಅಧಿಕಾರದ ಮದ, ಭ್ರಷ್ಟಾಚಾರ, ಸರ್ಕಾರದ ನಿರ್ಲಕ್ಷ್ಯದ ಕಾರಣಕ್ಕಾಗಿ ದಿನೇ ದಿನೇ ಕುಸಿಯುತ್ತಿದೆ. ಇದರಿಂದ ಸಾವಿರಾರು ಅಮಾಯಕ ವಿದ್ಯಾರ್ಥಿಗಳ ಭವಿಷ್ಯ ಕಮರಿಹೋಗುತ್ತಿದೆ. ಅತಿಹೆಚ್ಚು ಬಡತನವಿರುವ, ಅನಕ್ಷರತೆ ಇರುವ, ನಿರುದ್ಯೋಗವಿರುವ ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಈ ಪರಿಸ್ಥಿತಿ ಇರುವುದು ನಾಡಿನ ದುರಂತವಾಗಿದೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ವಿ.ವಿಯನ್ನು ಗುಣಮಟ್ಟದತ್ತ ತೆಗೆದುಕೊಂಡು ಹೋಗಬೇಕಿದೆ. ಅದಕ್ಕಾಗಿ ಜನಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಅಲ್ಲಿನ ವಿದ್ಯಾರ್ಥಿಗಳು ದನಿಯೆತ್ತಬೇಕಿದೆ, ದಿಟ್ಟ ಹೋರಾಟ ನಡೆಯಬೇಕಿದೆ. ಅಂತಹ ಹೋರಾಟದ ಸಂದರ್ಭ ಬೇಗ ಬರಲೆಂದು ಪತ್ರಿಕೆ ಆಶಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...