Homeಕರ್ನಾಟಕನೈತಿಕತೆ ಮತ್ತು ಪೊಲೀಸ್‌ಗಿರಿ ಕೂಡಿಕೊಂಡರೆ ಅದು ಅನೈತಿಕ ಮನಸ್ಥಿತಿಗಳ ವಿಕೃತಿ

ನೈತಿಕತೆ ಮತ್ತು ಪೊಲೀಸ್‌ಗಿರಿ ಕೂಡಿಕೊಂಡರೆ ಅದು ಅನೈತಿಕ ಮನಸ್ಥಿತಿಗಳ ವಿಕೃತಿ

- Advertisement -
- Advertisement -

ತಪ್ಪು ಜ್ಞಾನದಿಂದ ಎಚ್ಚರಿಕೆಯಿಂದಿರಿ; ಏಕೆಂದರೆ ಅದು ಅಜ್ಞಾನಕ್ಕಿಂತ ಅಪಾಯಕಾರಿ ಆದದ್ದು.
– ಜಾರ್ಜ್ ಬರ್ನಾಡ್ ಶಾ

ಈ ಅನೈತಿಕ ಪೊಲೀಸ್‌ಗಿರಿಯಲ್ಲಿ ತೊಡಗಿಸಿಕೊಂಡವರಿಗೆ ಸೂಕ್ತವಾಗಿ ಅನ್ವಯವಾಗುವ ಹೇಳಿಕೆ ಇದು. ಆದರೆ ಅವರ ಪ್ರತಿಯೊಂದು ಕಾರ್ಯದಲ್ಲೂ ಇಂತಹ ಜ್ಞಾನ ಅಥವಾ ಗ್ರಹಿಕೆ ಮಾತ್ರ ಇದೆ ಎಂದು ಹೇಳಲು ಆಗುವುದಿಲ್ಲ. ಸಂಪೂರ್ಣವಾಗಿ ಬ್ರೇನ್‌ವಾಷ್ ಆಗಿ ಯಾವುದೋ ಮೂರ್ಖತನದಲ್ಲಿ ಅನೈತಿಕ
ಪೋಲಿಸ್‌ಗಿರಿ ಮಾಡುವವರು ಒಂದು ಕೆಟಗೆರಿ ಆದರೆ, ಒಂದು ನಿರ್ದಿಷ್ಟ ರಾಜಕೀಯ ಅಥವಾ
ಧಾರ್ಮಿಕ ಗುರಿಸಾಧನೆಯ ಭಾಗವಾಗಿ ಮಾಡುವವರದು ಇನ್ನೊಂದು ಕೆಟಗರಿ. ಇದು ಬಹಳ ಅಪಾಯಕಾರಿ ಮತ್ತು ಕಳವಳಕಾರಿ ಸಂಗತಿಯಾಗಿದೆ. ತನ್ನ ಗುರಿ ಸಾಧನೆಗಾಗಿ ಇದು ಸಮಾಜದ ಸ್ವಾಸ್ಥ್ಯವನ್ನು ಎಷ್ಟು ಬೇಕಾದರೂ ಕೆಡಿಸಲು ತಯಾರಾಗಬಲ್ಲದು. ಇವುಗಳ ಜೊತೆಗೆ ಇನ್ನೊಂದಿದೆ, ಅದು ತಕ್ಷಣದ ಖ್ಯಾತಿ ಅಥವಾ
ಸುದ್ದಿಗಾಗಿ ಮಾಡುವುದು. ಇದಕ್ಕೆ ನಂತರ ಬರೋಣ.

ನೈತಿಕತೆ (Morality) ಅಂದರೆ, ಪ್ರಖ್ಯಾತ ಶಬ್ದಕೋಶಗಳ ಪ್ರಕಾರ “ಸಮಾಜದಲ್ಲಿ ಸಾಮಾನ್ಯವಾಗಿ ಸರಿ ಮತ್ತು ತಪ್ಪು ಎಂದು ನಂಬಿರುವ ನಡವಳಿಕೆಗಳ ನಡುವಿನ ವ್ಯತ್ಯಾಸಗಳನ್ನು ಎತ್ತಿ ತೋರಿಸುವ ತತ್ವಗಳು”

ಎಂ ಎಫ್ ಹುಸೇನ್‌

ಸಮಾಜ ಶಾಸ್ತ್ರೀಯ ವಿವರಣೆಯ ಪ್ರಕಾರ ಕಾಲಕಾಲಕ್ಕೆ ಒಂದು ನಿರ್ದಿಷ್ಟ ಪ್ರದೇಶದ ಜನ ತಮ್ಮ ಅಸ್ತಿತ್ವದ ಹೋರಾಟದಲ್ಲಿ, ಒಪ್ಪಿಕೊಂಡು ಅನುಸರಿಸುತ್ತ ಬಂದಂತಹ ನಡವಳಿಕೆಗಳು. ಈ ಪ್ರಕೃತಿಯಲ್ಲಿ ಯುದ್ಧಗಳೂ ಆಗಿರುತ್ತವೆ, ತೆರೆದ ಬಾಹುಗಳಿಂದ ಸ್ವಾಗತವೂ ಆಗಿರುತ್ತದೆ. ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಆಕ್ರಮಣಕಾರಿಗಳಾಗಿ ವ್ಯಾಪಾರಕ್ಕಾಗಿ ಅಥವಾ ವಿಹಾರಕ್ಕಾಗಿ ಬಂದವರಿಂದ ಕೂಡ ಈ ನೈತಿಕತೆ ತನ್ನ ವಿಶಿಷ್ಟ ಸಾಮಾಜಿಕ ಸಂರಚನೆಯನ್ನು ಪಡೆದುಕೊಂಡಿದೆ. ಕ್ರಮೇಣ ಎಲ್ಲ ಬಗೆಯ ಜನ ಹೊಂದಿಕೊಂಡು ಹೋಗುವ ಪ್ರಕ್ರಿಯೆಯಲ್ಲಿ ಕೆಲವು ಲಿಖಿತ ಅಥವಾ ಅಲಿಖಿತ ಕಾನೂನುಗಳು ಕಾಯ್ದೆಗಳು ಜಾರಿಗೆ ಬಂದು ಕ್ರಮೇಣ ಸಮಾಜದ ನಿಯಮಗಳೆಂದು ಸಾರ್ವತ್ರಿಕವಾಗಿ ಒಪ್ಪಿಗೆ ಆಗುತ್ತವೆ. ಇದನ್ನು ನಿರ್ಧರಿಸುವವರು ಯಾರು ಎಂದರೆ ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಕಾನೂನುಗಳು ಎಂದು ಹೇಳಬಹುದು. ಹಾಗಾದರೆ ಜನರ ಪಾತ್ರ ಏನು ಎಂದರೆ ಈ ಸಂವಿಧಾನ ಮತ್ತು ಕಾನೂನಿಗೆ ವಿಧೇಯರಾಗಿ ನಡೆದುಕೊಳ್ಳುವುದು. ಅಕಸ್ಮಾತ್ ಯಾರಾದರೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಜನ ಏನು ಮಾಡಬೇಕು? “ಕಾನೂನು ಪಾಲಕರ ಗಮನಕ್ಕೆ ತರಬೇಕು”.

ಇನ್ನು ’ಪೋಲಿಸ್‌ಗಿರಿ’ ಎಂದರೆ ಪೋಲಿಸರಿಂದ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು. ಈ ಎರಡೂ ಅಂಶಗಳ ವಿವರಣೆ ಇಷ್ಟು ಸ್ಪಷ್ಟವಾಗಿದ್ದಗೂ “ಅನೈತಿಕ ಪೊಲೀಸ್‌ಗಿರಿ” ಹೆಚ್ಚಲು ಕಾರಣ ಕೆಲವು ಮನುಷ್ಯರ ಮಾನಸಿಕ ವಿಕೃತಿ.

ಅನೈತಿಕ ಪೊಲೀಸ್‌ಗಿರಿ ಎಂದ ತಕ್ಷಣ ಕಲ್ಪನೆಗೆ ಬರುವುದು ಎರಡು ಬೇರೆಬೇರೆ ಧರ್ಮ ಅಥವಾ ಜಾತಿಗೆ ಸೇರಿದ ಗಂಡು ಹೆಣ್ಣುಗಳನ್ನು ಅವರು ಮದುವೆ ಆದರು ಎಂಬ ಕಾರಣಕ್ಕೆ, ಪ್ರೀತಿಸಿ ಓಡಿ ಹೋದರು ಎಂಬ ಕಾರಣಕ್ಕೆ ಅಥವಾ ಮೊನ್ನೆ ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಆದಂತೆ ಕೇವಲ ಗಾಡಿಯಲ್ಲಿ ಡ್ರಾಪ್ ತೆಗೆದುಕೊಂಡರು ಎಂಬ ಕಾರಣಕ್ಕೆ ಹಿಡಿದು ಹೊಡೆದು ಕೊಂದ ಅಥವಾ ಅಪಮಾನಗೊಳಿಸಿದ ಘಟನೆಗಳು. ಈ ನೈತಿಕ ಪೊಲೀಸ್‌ಗಿರಿಯ ಅತ್ಯಂತ ಕ್ರೂರ ಮತ್ತು ವಿಕೃತ ಮುಖ ಎಂದರೆ ಮರ್ಯಾದೆಗೇಡು ಹತ್ಯೆಗಳು. ಇತ್ತೀಚಿನವರೆಗೂ ಉತ್ತರ ಭಾರತದ ಹಳ್ಳಿಗಳಲ್ಲಿ ಫ್ಯೂಡಲ್ ಮನಸ್ಥತಿಗಳು ತಾಂಡವವಾಡುವ ಜಾಗಗಳಲ್ಲಿ ’ಖಾಪ್’ ಪಂಚಾಯಿತಿಗಳ ತೀರ್ಮಾನಗಳಿಂದ ನಡೆಯುತ್ತಿದ್ದ ಕ್ರೌರ್ಯಗಳು ಈಗ ಇಡೀ ದೇಶವನ್ನು ವ್ಯಾಪಿಸುತ್ತಿವೆ. ಇಡೀ ದೇಶಕ್ಕೆ ಅತ್ಯಂತ ಸಭ್ಯಸ್ಥರ ನಾಡು, ಆಧುನಿಕ ಭಾರತದ ಮುಖ, ಅಕ್ಷರಸ್ಥಿರ ರಾಜ್ಯ ಎಂದೆಲ್ಲ ಹೆಮ್ಮೆಯಿಂದ ಕೊಚ್ಚಿಕೊಳ್ಳುತ್ತಿದ್ದ ನಮ್ಮ ಕರ್ನಾಟಕದಲ್ಲಿಯೂ ಇವು ಹೆಚ್ಚಾಗುತ್ತಿವೆ ಎಂದರೆ ಸಮಸ್ಯೆ ಸಣ್ಣದಾಗಿ ಉಳಿದಿಲ್ಲ ಬದಲಿಗೆ ಒಂದು ಮನೋರೋಗವಾಗಿ ವ್ಯಾಪಿಸಿದೆ ಎಂದರ್ಥ.

2012ರ ಮಂಗಳೂರು ಘಟನೆ ಒಂದು ಕೆಟ್ಟ ಅಧ್ಯಾಯಕ್ಕೆ ಮುನ್ನುಡಿ ಬರೆದಂತೆ ಇತ್ತು. ಅಂದಿನ ದಿನ ಸಮಾಜದ ಕೆಲವೊಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಇದನ್ನು ಕಠಿಣವಾಗಿ ವಿರೋಧಿಸಿದ್ದರೆ ಚಿತ್ರಣ ಬೇರೆಯಾಗುವ ಸಾಧ್ಯತೆ ಇತ್ತು. ಅಲ್ಲಿಂದೀಚೆಗೆ ನೂರಾರು ಘಟನೆಗಳು, ದೇಶಾದ್ಯಂತ ಸಾವಿರಾರು ಘಟನೆಗಳು ಮರುಕಳಿಸುತ್ತಲೇ ಹೋದವು. ಈ ಅನೈತಿಕ ಪೋಲಿಸ್‌ಗಿರಿಗೆ ಇನ್ನು ಅನೇಕ ಮುಖಗಳಿವೆ. ಕೇವಲ ಗಂಡು ಹೆಣ್ಣಷ್ಟೇ ಇವರ ಟಾರ್ಗೆಟ್ ಅಲ್ಲ. ತಮ್ಮ ಪುರೋಗಾಮಿ ಮನಸ್ಥಿತಿಯ ಅಜ್ಞಾನಕ್ಕೆ ಜಗ್ಗದ ಎಲ್ಲವೂ ಇವರಿಗೆ ಒಂದು ಸಮಸ್ಯೆಯೇ. ಎಂ ಎಫ್ ಹುಸೇನ್‌ರ ಕಲಾಕೃತಿಗಳನ್ನು ಧಾರ್ಮಿಕ ಭಾವನೆಗೆ ಧಕ್ಕೆ ತಂದರೆಂದು ಹರಿದು ಹಾಕಿದ, ಜೈಪುರದಲ್ಲಿ ನಡೆಯುತ್ತಿದ್ದ ಕಲಾಕೃತಿ ಪ್ರದರ್ಶನದಲ್ಲಿ ನಗ್ನ ಕಲಾಕೃತಿಗಳಿವೆ ಎಂದು ಅವುಗಳನ್ನು ಹರಿದು ಹಾಕಿದ ಮನುಷ್ಯರಿಗೆ “ಕಲೆ” ಎಂಬ ಅಭಿವ್ಯಕ್ತಿ ಮಾಧ್ಯಮದಲ್ಲಿ ಕೇವಲ ನಗ್ನತೆ ಮಾತ್ರ ಕಂಡಿದ್ದಕ್ಕೆ ಏನೆನ್ನಬೇಕು?

ಜೈಪುರದ ಕಲಾಕೃತಿಗಳನ್ನು ಹರಿದು ಹಾಕಿದ ಜನರ ಮುಂಚೂಣಿ ವಹಿಸಿದ್ದು ಹೇಮಲತಾ ಎಂಬ ಹೆಂಗಸು. ಆಕೆ ಹೇಳಿದ್ದು ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಾನು ಚಲಾಯಿಸಿ ಹರಿದಿದ್ದೇನೆ ಎಂದು. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದಕ್ಕೆ ಈ ರೀತಿಯಲ್ಲಿ ಜನ ವಿವರಿಸ ಹೊರಟಾಗ ಅದರ ರಕ್ಷಣೆ ಮಾಡಬೇಕಾದ ಪೋಲಿಸರು, ಅದಕ್ಕೆ ಬದಲಾಗಿ ಇಂತಹ ವಿಕೃತಿಯನ್ನು ಪೋಷಿಸುವ ಮೂಕಪ್ರೇಕ್ಷಕರಾದಾಗ ಇದನ್ನೇ ಅನೈತಿಕ ಪೊಲೀಸ್‌ಗಿರಿ ಎನ್ನುವುದು. ಇಂಥ ಜನ ಲೈಂಗಿಕ ಅಲ್ಪಸಂಖ್ಯಾತರು, ಸಲಿಂಗಿಗಳು ಮುಂತಾದ LGBTQ ಸಮುದಾಯದವರನ್ನು ಮನುಷ್ಯರಂತೆಯೇ ಕಾಣುವುದಿಲ್ಲ. ಅವರ ಪ್ರತಿಯೊಂದು ನಡವಳಿಕೆಯೂ ಇವರಿಗೆ ಅನೈತಿಕ ಎನಿಸುತ್ತದೆ. ಇವರ ಸೀಮಿತ ನೈತಿಕತೆಯ ಪರಿಭಾಷೆಯಲ್ಲಿ, ತೀವ್ರ ಪ್ರತಿಗಾಮಿ ರಾಜಕೀಯ ಪಕ್ಷಗಳ ನೂರಾರು ಅಂಗಸಂಸ್ಥೆಗಳ ಮೂಲಕ ತಮ್ಮ ಮನದಾಳದ ವಿಷಯವನ್ನು ವಿವಿಧ ರೂಪದಲ್ಲಿ ಹೊರಗೆ ಹಾಕುತ್ತಲೇ ಇರುತ್ತಾರೆ.

Right to Expression ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯ ಒಂದು ಧನಾತ್ಮಕ ವಿವರಣೆಯಾಗಿದೆ. ಪ್ರತಿಯೊಬ್ಬ ಪ್ರಜೆಯ ಈ ಸ್ವಾತಂತ್ರ್ಯವನ್ನು ರಕ್ಷಿಸುವುದೂ ದೇಶದ ಕಾನೂನಿನ ಕೆಲಸವಾಗಿದೆ. ಅಕಸ್ಮಾತ್ ಯಾರಾದರೂ ಸಮಾಜದ ನಿರ್ದಿಷ್ಟ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಕಾನೂನಿನ ಮೂಲಕ ಸಮಾಧಾನಕ್ಕೆ ಪ್ರಯತ್ನಿಸಬೇಕೆ ಹೊರತು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಯಾವಾಗ ಪೊಲೀಸರು ಅಥವಾ ಸರ್ಕಾರ ನಿಷ್ಕ್ರಿಯರಾಗುತ್ತಾರೋ ಆಗ ಇಂಥ ಜನರಿಗೆ, ಸಂಘಟನೆಗಳಿಗೆ ಬಲ ಬರುತ್ತದೆ. ಕೆಲವೊಮ್ಮೆ ಈ ಅನೈತಿಕ ಪೊಲೀಸ್‌ಗಿರಿ ಕೇವಲ ತಕ್ಷಣದ ಖ್ಯಾತಿ ಹೊಂದುವ ಉದ್ದೇಶದಿಂದ ಅಥವಾ ಸುದ್ದಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವಂತಹ ಕಾರಣಗಳಿಗೂ ಆಗುತ್ತವೆ. ’ಪದ್ಮಾವತ್’ ಸಿನಿಮಾ ಬಿಡುಗಡೆಯಾದಾಗ ಕರಣಿ ಸೇನಾ ಎನ್ನುವ ಒಂದು ಗುಂಪು ದೀಪಿಕಾ ಪಡುಕೋಣೆ ಮೂಗು ಕತ್ತರಿಸಿದವರಿಗೆ ಬಹುಮಾನ ಕೊಡುವುದಾಗಿ ಘೋಷಿಸಿತ್ತು. ರಜಪೂತರ ಮಾನ ನಷ್ಟವಾಗಿದೆ ಎಂದು ಹಾರಾಡಿತ್ತು. ಆದರೆ
ವಿಚಿತ್ರವೆಂದರೆ ಪ್ರತಿಭಟನೆಯಲ್ಲಿ ಭಾಗವಹಿಸಿದವರ್‍ಯಾರು ಚಲನಚಿತ್ರವನ್ನು ಇನ್ನೂ ನೋಡಿಯೇ ಇರಲಿಲ್ಲ. ಬೆಂಗಳೂರಲ್ಲಿ ವಕೀಲೆಯೊಬ್ಬಳು ಲೇಖಕ ಭಗವಾನ್ ಅವರಿಗೆ ಮಸಿ ಬಳಿದಳು. ಇಂಥ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ.

ಹಾಗಾದರೆ ಇಂತಹ ಘಟನೆಗಳನ್ನು ತಡೆಯುವುದು ಸಾಧ್ಯವಿಲ್ಲವೆ ಎಂಬ ಪ್ರಶ್ನೆಗಳು ಸಹಜವಾಗಿ ಜನಸಾಮಾನ್ಯರಿಗೆ ಕಾಡುತ್ತವೆ. ಖಂಡಿತವಾಗಿಯೂ ಸಾಧ್ಯವಿದೆ. ಗೂಂಡಾ ಕಾಯ್ದೆಗಳ ಅನ್ವಯ, IPC ಮತ್ತು CRPCಗಳ ಅನ್ವಯವೇ ಇವನ್ನು ಮಟ್ಟ ಹಾಕಬಹುದು. ಆದರೆ ಅದಕ್ಕೆ ಪೊಲೀಸ್ ಹಾಗೂ ಸರ್ಕಾರದ ಇಚ್ಛಾಶಕ್ತಿ ಬೇಕು.

ಕೇವಲ ಫ್ರಿಜ್‌ನಲ್ಲಿ ದನದ ಮಾಂಸವಿದೆ ಎಂಬ ಕಾರಣಕ್ಕೆ ಜನ ಒಬ್ಬ ವ್ಯಕ್ತಿಯ ಜೀವ ತೆಗೆಯುತ್ತಾರೆ ಎಂದಾದಾಗ, ಟ್ರೇನಿನಲ್ಲಿ ಹೋಗುವಾಗ ಒಬ್ಬ ಯುವಕನ ಪ್ರಾಣ ತೆಗೆಯುವಾಗ, ದನದ ಕಳ್ಳಸಾಗಣೆ ಮಾಡುತ್ತಿದ್ದ ಎಂದು ವ್ಯಕ್ತಿಯೊಬ್ಬನನ್ನು ಬೆಂಕಿ ಹಚ್ಚಿ ಅದನ್ನು ವಿಡಿಯೋ ಮಾಡಿ ಸಾಧನೆಯಂತೆ ಹಂಚಿಕೊಂಡಾಗ ಪ್ರತಿಯೊಂದು ಹಂತದಲ್ಲೂ ಮನುಷ್ಯ ಹಂತ ಹಂತವಾಗಿ ಮನುಷ್ಯತ್ವವನ್ನು ಕಳೆದುಕೊಂಡು ಮೃಗವಾಗುತ್ತಿರುವಂತೆ ಭಾಸವಾಗುತ್ತದೆ. ಈ ಎಲ್ಲ ಕೃತ್ಯಗಳು ಘೋರ ಅಪರಾಧಿತ ಕೃತ್ಯಗಳು ಆದರೆ ಇವುಗಳ ಮೂಲ ಸರಳವಾಗಿ ಕಾಣುವ ಅನೈತಿಕ ಪೊಲೀಸ್‌ಗಿರಿಯ ಆಳದಲ್ಲಿ ಅಡಗಿದೆ.

ಒಂದು ರಾಜ್ಯದ ಆರೋಗ್ಯಮಂತ್ರಿ (ಡಾ. ಸುಧಾಕರ್) ’ಮಾರ್ಡನ್ ವುಮೆನ್ ಮಕ್ಕಳನ್ನು ಹೆರಲು ಬಯಸುವುದಿಲ್ಲ’ ಎಂಬಂತಹ ಹೇಳಿಕೆ ಕೊಟ್ಟಾಗ ಇಂಥ ಜನ ಇಷ್ಟೊಂದು ಓದಿ ಸಮಾಜದ ಬದಲಾವಣೆಯ ಹಿಂದಿನ ಕಾರಣಗಳನ್ನು ಅರಿತುಕೊಳ್ಳಲಾರದಷ್ಟು ಅಪ್ರಬುದ್ಧರಾಗಿದ್ದಾರಲ್ಲಾ ಎಂದು ಮರುಕ ಉಂಟಾಗುತ್ತದೆ.

ಕೇಂದ್ರ ಮಂತ್ರಿ ಅನುರಾಗ್ ಠಾಕೂರ್ ’ಗೋಲಿಮಾರೋ ಸಾಲೋಂಕೊ’ ಎಂದಾಗ, ಬಸನಗೌಡ ಯತ್ನಾಳ ದೊರೆಸ್ವಾಮಿಯವರಂಥ ವ್ಯಕ್ತಿತ್ವದ ಕುರಿತು ತುಚ್ಛವಾಗಿ ಮಾತಾಡುವುದು ನೋಡಿದಾಗ ಈ ಸಮಯದ, ಈ ಸಾಮಾಜಿಕ ಅಧೋಗತಿಯ ಬಗ್ಗೆ ತೀವ್ರ ಆತಂಕ ಉಂಟಾಗುತ್ತದೆ. ಪ್ರಧಾನಮಂತ್ರಿಯಾಗಿದ್ದು ಮಹಿಳೆಯೊಬ್ಬರನ್ನು ಕುರಿತು ಬೀದಿ ಬದಿ ರೋಮಿಯೋಗಳ ತರಹ “ದೀದೀ ಓ ದೀದೀ” ಅಂದದ್ದನ್ನು ಚಿಕ್ಕ ಮಕ್ಕಳು ಅನುಕರಿಸಿದ್ದನ್ನು ಅವರ ಪೋಷಕರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ, ನಮ್ಮ ಮುಂದಿನ ಪೀಳಿಗೆಗೆ ಅದೆಂಥ ಕೆಟ್ಟ ವಾತಾವರಣ ಸೃಷ್ಟಿಸುತ್ತಿದ್ದೇವೆ ಎಂದು ಭಯವಾಗುತ್ತದೆ.

ಅನೈತಿಕ ಪೊಲೀಸ್‌ಗಿರಿ ಕೇವಲ ಸಂವಿಧಾನದ ಉಲ್ಲಂಘನೆ ಮಾತ್ರ ಅಲ್ಲ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಹಿಳೆಯರ ಘನತೆಯ ಉಲ್ಲಂಘನೆ ಕೂಡ. ಬೇಗ ಎಚ್ಚೆತ್ತುಕೊಂಡಷ್ಟೂ ಸಮಾಜದ ಸ್ವಾಸ್ಥ್ಯಕ್ಕೆ ಒಳ್ಳೆಯದು.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ಮಂಗಳೂರು: ಮತ್ತೊಂದು ಅನೈತಿಕ ಪೊಲೀಸ್‌ಗಿರಿ; ಇಬ್ಬರು ಬಜರಂಗದಳ ಕಾರ್ಯಕರ್ತರ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...