ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್ಡಿ)ಯ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯು ಮತಧರ್ಮೀಯವಾದ ಸಂದೇಶಗಳನ್ನು ಬಿತ್ತರಿಸಿ ತುಂಬ ತಪ್ಪು ಮಾಡುತ್ತಿದೆ ಎಂದು ಆಕ್ಷೇಪಿಸಿ 272 ಕಲಾವಿದರು ಎನ್ಎಸ್ಡಿಯ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ರಾಷ್ಟ್ರೀಯ ನಾಟಕಶಾಲೆಯ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯು ಮತಧರ್ಮೀಯವಾದ ಹಬ್ಬಗಳನ್ನು ಎತ್ತಿಹಿಡಿಯುತ್ತಿದೆ. ಮತಧರ್ಮೀಯವಾದ ಚಿತ್ರಗಳು ಹಾಗೂ ಪ್ರತಿಮಾ ಸಂಕೇತಗಳನ್ನು ಪ್ರದರ್ಶಿಸಲು ತೊಡಗಿದೆ ಎಂದು 272 ಮಂದಿ ಕಲಾವಿದ-ಕಲಾವಿದೆಯರು, ಸಾಹಿತಿಗಳು, ಅಧ್ಯಾಪಕ-ಅಧ್ಯಾಪಿಕೆಯರು, ಸಂಸ್ಕೃತಿ ಕ್ಷೇತ್ರದ ಕಾಯಕದವರು, ಮತ್ತು ಆ ಶಾಲೆಯ ಪದವೀಧರರು, ಪದವೀಧರೆಯರು ಹಾಗೂ ಈ ಶಾಲೆಯಲ್ಲಿ ಈ ಹಿಂದೆ ಪಾಠ ಮಾಡಿದವರು ಬಹಿರಂಗ ಪತ್ರಬರೆದಿದ್ದು, “ಇದನ್ನು ಬಹಳ ಆತಂಕದಿಂದ ಗಮನಿಸಿದ್ದೇವೆ” ಎಂದಿದ್ದಾರೆ.
“ಯಾವುದೇ ಮತಧರ್ಮಕ್ಕೆ ಸೇರಿದ ಯಾವುದೇ ಬಗೆಯ ಸಂದೇಶ ಚಿತ್ರ ಹಾಗೂ ಪ್ರತಿಮಾ ಸಂಕೇತಗಳನ್ನು ಸರ್ಕಾರವು ನಡೆಸುವ ಸಾರ್ವಜನಿಕ ಸಂಸ್ಥೆಗಳು ಬಿತ್ತರಿಸುವುದು ಆ ಸಂಸ್ಥೆಗಳ ಕರ್ತವ್ಯಧರ್ಮಕ್ಕೆ ಹೊರತಾದುದು. ಈ ವಿಷಯವನ್ನು ನಾವು, ಈ ಮೂಲಕ, ರಾಷ್ಟ್ರೀಯ ನಾಟಕಶಾಲೆಯ ಅಧಿಕಾರಿಗಳಾದ ತಮ್ಮ ಗಮನಕ್ಕೆ ತಂದು, ಇಂಥ ಕೆಲಸವು ಈಗಿಂದೀಗ ನಿಲ್ಲುವಂತೆ ನೋಡಿಕೊಳ್ಳಬೇಕು” ಎಂದು ಜೀವಪರ ಮನಸ್ಸುಗಳು ಆಗ್ರಹಿಸಿವೆ.
ಇದನ್ನೂ ಓದಿರಿ: ತ್ರಿಪುರಾ: VHP ರ್ಯಾಲಿ ವೇಳೆ ಮಸೀದಿ ಧ್ವಂಸ, ಎರಡು ಅಂಗಡಿಗಳಿಗೆ ಬೆಂಕಿ
ರಾಷ್ಟ್ರೀಯ ನಾಟಕ ಶಾಲೆಯು ಮತಧರ್ಮೀಯವಾದ ಹಬ್ಬಗಳ ಆಚರಣೆಯನ್ನು ಎತ್ತಿಹಿಡಿಯುವ ಸಂದೇಶಗಳನ್ನು ಬಿತ್ತರಿಸುವುದರಿಂದಾಗಿ, ಕಲಾಬೋಧನೆಯ ತನ್ನ ಅಸಲು ಕರ್ತವ್ಯವನ್ನು ಕಡೆಗಣಿಸಿ, ತನ್ನ ಘನತೆಗೌರವಗಳಿಗೆ ಧಕ್ಕೆ ಉಂಟುಮಾಡಿಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
View this post on Instagram
View this post on Instagram
View this post on Instagram
“ಸಾರ್ವಜನಿಕ ಸಂಪರ್ಕತೆಗೆ ಬೇಕಾದ ಕುಶಲತೆಯ ವಿಷಯದಲ್ಲಿ ನಿಮಗೆ, ಒಂದು ವೇಳೆ, ನೆರವು ಬೇಕಾದಲ್ಲಿ, ದಯವಿಟ್ಟು, ಶಾಲೆಯಲ್ಲಿ ಈ ಹಿಂದೆ ಪಾಠ ಮಾಡುತ್ತಿದ್ದ ಅಧ್ಯಾಪಕರನ್ನು, ಅಧ್ಯಾಪಿಕೆಯರನ್ನು ಕೇಳಿ; ಕಲೆ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಕೇಳಿ; ಅಧ್ಯಾಪನ ಕ್ಷೇತ್ರದ ಧೀಮಂತರನ್ನು ಕೇಳಿ; ಈ ನಮ್ಮ ಶಾಲೆಯ ಪದವೀಧರರಲ್ಲಿ ಸಮರ್ಥರಾದವರನ್ನು ಕೇಳಿ. ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ಈ ಸಂಸ್ಥೆಯು ತನ್ನ ಚಹರೆ ಗುರುತುಗಳನ್ನು ಉಳಿಸಿ, ಬೆಳೆಸಿಕೊಳ್ಳಲು ಅವರು ನಿಮಗೆ ಸಂತಸದಿಂದ ನೆರವಾಗುತ್ತಾರೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಎನ್ಎಸ್ಡಿಯ ಅಧಿಕಾರಿವರ್ಗದ ಮುಂದೆ ಇಡಲಾಗಿರುವ ಬೇಡಿಕೆಗಳು
“ರಾಷ್ಟ್ರೀಯ ನಾಟಕಶಾಲೆಯ ಸಾಮಾಜಿಕ ಸಂಪರ್ಕದ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ಸಂಪರ್ಕದ ಅದರ ಮತ್ತೆಲ್ಲ ವಹಿವಾಟಿನಲ್ಲಿ ಈಗ ಕಾಣಿಸಿಕೊಂಡಿರುವ ಮತ್ತು ಕಾಣಿಸಿಕೊಳ್ಳುತ್ತಿರುವ ಮತಧರ್ಮೀಯವಾದ ಎಲ್ಲ ಸಂದೇಶ, ಒಕ್ಕಣೆ ಹಾಗೂ ಚಿತ್ರಗಳನ್ನು ತಾವು ಈಗಿಂದೀಗ ಹಿಂದಕ್ಕೆ ಪಡೆದು, ಅಳಿಸಿಹಾಕಬೇಕು” ಎಂದು ಸಹಿ ಮಾಡಿರುವ ಎಲ್ಲ ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
“ರಾಷ್ಟ್ರೀಯ ನಾಟಕ ಶಾಲೆಯ ಸಾಮಾಜಿಕ ಸಂಪರ್ಕದ ಜಾಲತಾಣಗಳಲ್ಲಿ ಕಾಣಿಸಿಕೊಳ್ಳಬೇಕಾದದ್ದು ರಂಗಭೂಮಿ, ಕಲೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸಂದೇಶ ಮತ್ತು ಒಕ್ಕಣೆಗಳು ಮಾತ್ರ. ನಮ್ಮ ಈ ಸಂಸ್ಥೆಯ ಘನತೆ ಗೌರವಗಳನ್ನು, ಇದರ ಉನ್ನತ ಮಾನದಂಡಗಳನ್ನು ಉಳಿಸಿ, ಬೆಳೆಸುವಲ್ಲಿ ಹೆಚ್ಚಿನ ಮುತುವರ್ಜಿ ಕಾಣಿಸಿಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.


ಖ್ಯಾತ ಕವಿ-ನಾಟಕಕಾರ-ರಂಗನಿರ್ದೇಶಕ ರಘುನಂದನ ಅವರು ದೆಹಲಿಯ ರಾಷ್ಟ್ರೀಯ ನಾಟಕಶಾಲೆ (ಎನ್ಎಸ್ಡಿ)ಯಲ್ಲಿ ಓದಿದವರು. ರಂಗಾಯಣ, ನೀನಾಸಮ್, ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಹಲವು ದಶಕಗಳಿಂದ ಕೆಲಸಮಾಡುವುದರ ಜೊತೆಗೆ ಅನೇಕ ವರ್ಷಗಳ ಕಾಲ ದೆಹಲಿಯ ಆ ನಾಟಕಶಾಲೆಗೆ ಅತಿಥಿ ಪ್ರಾಧ್ಯಾಪಕ ಹಾಗೂ ರಂಗನಿರ್ದೇಶಕರಾಗಿ ಹೋಗಿಬರುತ್ತಿದ್ದವರು. ಅಲ್ಲಿನ ಶೈಕ್ಷಣಿಕ ಮಂಡಳಿಯ ಸದಸ್ಯರಾಗಿದ್ದವರು.
ಅವರು ‘ನಾನುಗೌರಿ.ಕಾಂ’ನೊಂದಿಗೆ ಮಾತನಾಡಿ, “ಎನ್ಎಸ್ಡಿ ಶುರುವಾದದ್ದು 1957-58ರಲ್ಲಿ. ಈ ಶಾಲೆಗೆ ಬುನಾದಿ ಹಾಕಿ ಕಟ್ಟಿದವರಲ್ಲಿ ಇಬ್ರಾಹಿಂ ಅಲ್ಕಾಜಿ಼ ಮತ್ತು ಬಿ. ವಿ. ಕಾರಂತ ಥರದ ಮಹಾನ್ ವ್ಯಕ್ತಿತ್ವಗಳಿವೆ. ನಿತ್ಯವೂ ಅವರನ್ನು ನೆನೆಯಬೇಕು. ನಿಜವಾದ ಅರ್ಥದಲ್ಲಿ ಅಲ್ಕಾಜಿ಼ ಅವರು ದೇಶಪ್ರೇಮಿಯಾಗಿದ್ದರು, ದೇಶ ಕಟ್ಟುವ ಕೆಲಸ ಮಾಡಿದರು. ಪ್ರಧಾನಿ ನೆಹರೂ ಅವರಿಗೆ ಅಲ್ಕಾಜಿ಼ ಅವರ ಮೇಲೆ ಅಪಾರ ನಂಬಿಕೆ ಇತ್ತು. ಎನ್ಎಸ್ಡಿಯಲ್ಲಿನ ತಮ್ಮ ಕೆಲಸದ ಮೂಲಕ ನಮ್ಮ ದೇಶವು ಸೆಕ್ಯೂಲರಿಸಮ್ ಕಡೆಗೆ ಸಾಗುವುದರತ್ತ ತಮ್ಮ ಪಾಲು ನೀಡಿದವರು. ನಂತರದಲ್ಲಿ ಬಂದ ಕಾರಂತರು ಈ ಆಶಯವನ್ನು ಮತ್ತಷ್ಟು ವಿಸ್ತರಿಸಿದರು, ಆಳಗೊಳಿಸಿದರು. ಶಾಲೆಯ ಇತಿಹಾಸದಲ್ಲಿ ಏಳುಬೀಳುಗಳಿದ್ದರೂ ಎಲ್ಲರನ್ನೂ ಒಳಗೊಳ್ಳುವ ಬಂಧುತ್ವವನ್ನು ಕಾಪಾಡಿಕೊಂಡು ಬರುತ್ತಿತ್ತು. ಆದರೆ ಈಗ ಉಲ್ಟಾ ಆಗಿದೆ” ಎಂದು ವಿಷಾದಿಸಿದರು.
ಎನ್ಎಸ್ಡಿ ಮತೀಯ ವಿಚಾರಗಳಿಗೆ ಎಂದಿಗೂ ತಲೆ ಹಾಕಿರಲಿಲ್ಲ. ಈಗ ಹಾಕುತ್ತಿದೆ. ಈಗ ಆಯಾಕಟ್ಟಿನ ಜಾಗದಲ್ಲಿ ಕುಳಿತಿರುವವರು ಕಲಾವಿದರಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, “ಕಡವಾ ಚೌತ್ ಆಚರಣೆಯ ಪೋಸ್ಟ್ ಹಾಕಲಾಗಿದೆ. ಅದು ಪತಿ ಪೂಜೆಯನ್ನು ಪ್ರತಿಪಾದಿಸುತ್ತದೆ. ಹೆಂಡತಿ ದಿನಪೂರ್ತಿ ಉಪವಾಸ ಇರಬೇಕು, ಗಂಡನಿಗೆ ಬಾಯಿತುತ್ತು ತಿನಿಸಬೇಕು, ಜರಡಿ ಹಿಡಿದು ಗಂಡನ ಮುಖ ನೋಡಬೇಕು. ಇದು ಉತ್ತರಭಾರತದಲ್ಲಿ ಆಚರಣೆಯಲ್ಲಿದೆ. ಅಷ್ಟೇ ಅಲ್ಲದೆ ಗಂಡಾಳ್ವಿಕೆಯನ್ನು ಪ್ರತಿನಿಧಿಸುವ ಆಚರಣೆ ಕಡವಾ ಚೌತ್. ಇದನ್ನು ಆಚರಿಸಿ ಎಂದು ಪ್ರಚಾರ ಮಾಡುವುದು ಸರಿಯೇ? ಹೆಣ್ಣು ಮಕ್ಕಳು ಗಂಡನ ಪಾದ ಪೂಜೆ ಮಾಡಿ ಆತನಿಗೆ ಅಧೀನವಾಗಿ ಇರಬೇಕಾ? ರಾಷ್ಟ್ರೀಯ ನಾಟಕ ಶಾಲೆ ಏನನ್ನು ಹೇಳಲು ಹೊರಟಿದೆ” ಎಂದು ಪ್ರಶ್ನಿಸಿದರು.
ಇದನ್ನೂ ಓದಿರಿ: ಲೆಸ್ಬಿಯನ್ ಜೋಡಿ ‘ಕರ್ವಾ ಚೌತ್’ ಆಚರಿಸುವ ಜಾಹೀರಾತು ಹಿಂಪಡೆದ ಡಾಬರ್!



ಈ ೨೭೨ ಜನ ಕಲಾವಿದರಿಗೆ ವಂದನೆಗಳು.