ದೆಹಲಿಯ ಸಂತ್ ನಗರದಲ್ಲಿರುವ ಬಿರಿಯಾನಿ ಪಾಯಿಂಟ್ ರೆಸ್ಟೋರೆಂಟ್ ಮುಚ್ಚಬೇಕು ಇಲ್ಲವಾದಲ್ಲಿ ಬೆಂಕಿ ಹಚ್ಚುತ್ತೇನೆ ಎಂದು ವ್ಯಕ್ತಿಯೊಬ್ಬ ರೆಸ್ಟೋರೆಂಟ್ ಸಿಬ್ಬಂದಿಯನ್ನು ಕೆಟ್ಟದಾಗಿ ನಿಂದಿಸಿ, ಕಿರುಕುಳ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೀಪಾವಳಿ ರಾತ್ರಿ ಈ ಘಟನೆ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆದ ನಂತರ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಆದರೆ ಆರೋಪಿಯ ಗುರುತು ಸಿಕ್ಕಿಲ್ಲದೇ ಇರುವುದರಿಂದ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಧರ್ಮ ಮತ್ತು ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಉದ್ದೇಶ) ಅಡಿಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ.
ಈವರೆಗೂ ಬುರಾರಿ ಪೊಲೀಸ್ ಠಾಣೆಯಲ್ಲಿ ಯಾವುದೇ ಪಿಸಿಆರ್ ಕರೆ ಅಥವಾ ದೂರು ಬಂದಿಲ್ಲ. ಆದರೂ ಸತ್ಯವನ್ನು ಪರಿಶೀಲಿಸಲಾಗುತ್ತಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಸಿಪಿ (ಉತ್ತರ) ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.
ವೈರಲ್ ಆಗಿರುವ ಸುಮಾರು ಮೂರು ನಿಮಿಷಗಳ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಗಿಜುಗುಡುವ ರಸ್ತೆಯಲ್ಲಿರುವ ರೆಸ್ಟೋರೆಂಟ್ ಅನ್ನು ಉಲ್ಲೇಖಿಸಿ, ‘ಇದು ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶವಾ? ಅವರು ಅಲ್ಲಿ ಕುಳಿತಿದ್ದಾರೆ ನೋಡಿ, ದೀಪಾವಳಿ ದಿನ ತೊಂದರೆ ನೀಡಲು ಹೋಟೆಲ್ ತೆರೆದಿದ್ದಾರೆ’ ಎಂದು ಹೇಳಿರುವುದು ವೀಡಿಯೋದಲ್ಲಿದೆ. ಎನ್ಡಿಟಿವಿ ಇದನ್ನು ಸ್ವತಂತ್ರವಾಗಿ ಪರಿಶೀಲನೆ ನಡೆಸಿಲ್ಲ ಸಾಧ್ಯವಾಗಿಲ್ಲ ಎಂದು ತಿಳಿಸಿದೆ.
[English Captions]
This video is from New Delhi, India’s capital city
A Hindu extremist from Bajrang Dal abusing and forcing a Muslim restaurant owner to close his shop on the eve of Diwali. pic.twitter.com/tsXGkmK94V
— HindutvaWatch (@HindutvaWatchIn) November 5, 2021
ಪಿಟಿಐ ಸುದ್ದಿ ಸಂಸ್ಥೆ ಪ್ರಕಾರ, ಆರೋಪಿ ನರೇಶ್ ಕುಮಾರ್ ಸೂರ್ಯವಂಶಿ, ತನ್ನನ್ನು ಬಲಪಂಥೀಯ ಸಂಘಟನೆ ಬಜರಂಗದಳದ ಸದಸ್ಯ ಎಂದು ಗುರುತಿಸಿಕೊಂಡಿದ್ದಾನೆ ಎನ್ನಲಾಗಿದೆ.
ರೆಸ್ಟೋರೆಂಟ್ ಒಳಗೆ ಕುಳಿತಿದ್ದ ಅಲ್ಲಿನ ಸಿಬ್ಬಂದಿಯೊಂದಿಗೆ ಮಾತಿಗಿಳಿದ ವ್ಯಕ್ತಿಯು, ಇದು ಹಿಂದು ಪ್ರದೇಶ ಎಂದು ಘೋಷಿಸಿ, ರೆಸ್ಟೋರೆಂಟ್ ಅನ್ನು ಮುಚ್ಚುವಂತೆ ಒತ್ತಾಯಿಸಿ, ಅವರನ್ನು ನಿಂದಿಸಲು ಪ್ರಾರಂಭಿಸುತ್ತಾನೆ. ‘ಅರೇ… ನಿಮ್ಮ ಅಂಗಡಿ ಹೇಗೆ ತೆರೆದಿದ್ದೀರಿ? ನಿಮಗೆ ಅನುಮತಿ ನೀಡಿದ್ದು ಯಾರು? ಇದು ಹಿಂದು ಪ್ರದೇಶ ಎಂಬುದು ನಿಮಗೆ ತಿಳಿದಿಲ್ಲವೇ? ಇಂದು ದೀಪಾವಳಿ…. ಈಗ ಅಂಗಡಿಯನ್ನು ಮುಚ್ಚಿ. ಏನಿದು? ಇದೇನು ನಿಮ್ಮ ಪ್ರದೇಶವೇ? ಇದೇನು ಜಾಮಾ ಮಸೀದಿಯೇ? ಇದು ಸಂಪೂರ್ಣವಾಗಿ ‘ಹಿಂದು ಪ್ರದೇಶ’ ಎಂದು ಕಿರುಚಾಡಿದ್ದಾನೆ.
ಈಗ ಹೋಟೆಲ್ ಮುಚ್ಚದಿದ್ದರೆ ಬೆಂಕಿ ಹಚ್ಚಬೇಕಾಗುತ್ತದೆ ಎಂದು ಗದರಿದ್ದಾನೆ. ವ್ಯಕ್ತಿಯು ಮಾಡಿದ ಗಲಾಟೆಯಿಂದ ರೆಸ್ಟೋರೆಂಟ್ ಸಿಬ್ಬಂದಿ ಭಯಭೀತರಾಗಿದ್ದು, ಅಂಗಡಿಯೊಳಗಿನ ಟೇಬಲ್, ಕುರ್ಚಿ ಹಾಗೂ ಪಾತ್ರೆಗಳನ್ನು ಸ್ಥಳಾಂತರಿಸಲು ಪ್ರಾರಂಭಿಸಿದ್ದಾರೆ. ಆ ಸಮಯದಲ್ಲಿ ಅರಚಾಡುತ್ತಲೇ ಇದ್ದ ವ್ಯಕ್ತಿಯು ‘ಇದು ಹಿಂದೂ ಪ್ರದೇಶ’ ಎಂದು ಕೂಗಿದ್ದು, ಸುತ್ತಲು ನೆರೆದಿದ್ದ ಜನರನ್ನು ಉದ್ದೇಶಿಸಿ, ‘ಎದ್ದೇಳಿ…. ಇವರೆಲ್ಲರೂ ನಮ್ಮ ಸಹೋದರಿಯರೊಂದಿಗೆ ಇಲ್ಲಿ ಲವ್ ಜಿಹಾದ್ ಮಾಡುತ್ತಿದ್ದಾರೆ’ ಎಂದಿದ್ದಾನೆ.
ಇತ್ತೀಚೆಗೆ ದೇಶಾದ್ಯಂತ ಮತೀಯ ಗೂಂಡಾಗಿರಿ ನಡೆಸುವ ಪ್ರಕರಣಗಳು ಹೆಚ್ಚುತ್ತಿವೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ಜೈ ಶ್ರೀರಾಮ್ ಘೋಷಣೆ ಕೂಗದ ಬೀದಿ ವ್ಯಾಪಾರಿ ಮೇಲೆ ಹಲ್ಲೆ – ಮತೀಯ ಗೂಂಡಾಗಿರಿ