Homeಮುಖಪುಟಸ್ವಾಭಾವಿಕವೆನಿಸುವಂತೆ ಮುನ್ನುಗ್ಗಿರುವ ಕೃತಕ ಬದ್ಧಿಮತ್ತೆ; ಸಾರ್ವಜನಿಕರ ಒಳತಿನ ಪ್ರಶ್ನೆ ಕೇಳುವವರಾರು?

ಸ್ವಾಭಾವಿಕವೆನಿಸುವಂತೆ ಮುನ್ನುಗ್ಗಿರುವ ಕೃತಕ ಬದ್ಧಿಮತ್ತೆ; ಸಾರ್ವಜನಿಕರ ಒಳತಿನ ಪ್ರಶ್ನೆ ಕೇಳುವವರಾರು?

- Advertisement -
- Advertisement -

ಇತ್ತೀಚಿಗೆ ಸಾಮಾಜಿಕ ಜಾಲತಾಣದ ದೈತ್ಯ ಟೆಕ್ ಕಂಪನಿ ಫೇಸ್‌ಬುಕ್ ತನ್ನ ಬ್ರಾಂಡ್ ಹೆಸರನ್ನು ’ಮೆಟಾ’ ಎಂದು ಬದಲಾಯಿಸಿಕೊಂಡಾಗ, ಅದೊಂದು ರಿಬ್ರಾಂಡಿಂಗ್ ಎಕ್ಸರ್‌ಸೈಸ್ ಎಂಬಂತೆ ಹಲವು ಮಾಧ್ಯಮಗಳು ಉಪೇಕ್ಷಿಸಿದ್ದಿದೆ. ಎಲ್ಲೋ ಕೆಲವು ಮಾಧ್ಯಮಗಳು ಫೇಸ್‌ಬುಕ್ ಸಂಸ್ಥೆ ಇಲ್ಲಿಯವರೆಗೂ ಸೃಷ್ಟಿಸಿರುವ ಅಪಸವ್ಯಗಳ ಹಿನ್ನೆಲೆಯಲ್ಲಿ ಮತ್ತು ಆ ಸಂಸ್ಥೆಯ ಮಾಜಿ ನೌಕರರು ಸೋರಿಕೆ ಮಾಡಿದ ದಾಖಲೆಗಳ ಬೆಳಕಿನಲ್ಲಿ ತಂತ್ರಜ್ಞಾನ ಆಧಾರಿತ, ಡೇಟಾ ಆಧಾರಿತ ಸಾಮಾಜಿಕ ಮಾಧ್ಯಮಗಳು ಜನಸಮೂಹಗಳಲ್ಲಿ ಸೃಷ್ಟಿಸಿರುವ ಒಡಕನ್ನು, ಧ್ರುವೀಕರಣವನ್ನು, ಪ್ರಭುತ್ವಗಳು ಅದನ್ನು ಬಳಸಿಕೊಂಡ ಬಗೆಯನ್ನು ಅವಲೋಕಿಸಿ ಚರ್ಚಿಸಿದ್ದು ಕೂಡ ನಡೆಯಿತು. ಈ ಚರ್ಚೆಯ ಸಮಯದಲ್ಲಿ ಮುಖ್ಯವಾಗಿ ಗೋಚರಿಸಿದ್ದು: ಒಂದು ಸಮಯದಲ್ಲಿ ಹೆಚ್ಚು ಪ್ರಜಾಸತ್ತಾತ್ಮಕಗೊಳಿಸುವ ನಿಟ್ಟಿನಲ್ಲಿ ಬೆಳೆಯುತ್ತದೆ ಎಂದು ನಂಬಿದ್ದ ಇಂಟರ್‌ನೆಟ್, ಈ ದೈತ್ಯ ಟೆಕ್ ಸಂಸ್ಥೆಗಳ ಹಿಡಿತದಲ್ಲಿ ಸಿಕ್ಕಿ, ನೋಡನೋಡುತ್ತಿದ್ದಂತೆಯೇ ಅದು ಸರ್ವಾಧಿಕಾರಿಯ ರೀತಿಯಲ್ಲಿ ಬೆಳೆಯಿತೆಲ್ಲಾ ಎಂಬ ಅಚ್ಚರಿ ಮತ್ತು ಆತಂಕ. ಎಷ್ಟೋ ದೇಶಗಳಲ್ಲಿ ಅವು, ತನ್ನಂತಹ ವ್ಯವಸ್ಥೆಯನ್ನೇ ಬೆಂಬಲಿಸುವ ರಾಜಕೀಯ ಪಕ್ಷಗಳಿಗೆ ಚುನಾವಣೆಗಳನ್ನು ಗೆಲ್ಲಲು ಸಹಕರಿಸಿದರೆ ಮತ್ತೆ ಕೆಲವು ದೇಶಗಳಲ್ಲಿ ಅಲ್ಪಸಂಖ್ಯಾತರ, ಅವಕಾಶವಂಚಿತರ, ವಲಸಿಗರ ವಿರೋಧಿ ವೇದಿಕೆಯಾಗಿ ಹೆಚ್ಚು ಕಾರ್ಯನಿರ್ವಹಿಸುತ್ತಾ ಸಾಗಿತು ಎಂಬುದೂ ಕೂಡ ವಿದಿತವೇ.

ಈಗ ಇಂಟರ್‌ನೆಟ್ ವೆಬ್3ಯತ್ತ ಹೆಜ್ಜೆ ಹಾಕುತ್ತಿದೆ. ಹಿಂದೊಮ್ಮೆ ಪ್ರೋಗ್ರಾಮ್ ಮಾಡಿದಷ್ಟು ಮಾತ್ರ ಕೆಲಸ ಮಾಡುತ್ತಿದ್ದ ತಂತ್ರಜ್ಞಾನ, ತಾನು ಬೆಳೆದಂತೆ ತಾನೇ ಕಲಿಯುವ ‘ಮೆಶಿನ್ ಲರ್ನಿಂಗ್‌’ಗೆ ಮುಂದಾಯಿತು. ಈ ಯಂತ್ರ ಕಲಿಕೆ ಇಂದು ಹಿಂದೆಂದಿಗಿಂತಲೂ ಅಗಾಧವಾಗಿ ಬೆಳೆದಿದೆ. ಈ ಯಂತ್ರ ಕಲಿಕೆ ಎಷ್ಟು ಮುಂದುವರಿದಿದೆ ಎಂದರೆ, ಪ್ರೋಗ್ರಾಮ್‌ಗಳ ಮೂಲಕ ಏನನ್ನು ಮಾಡಬೇಕು ಎಂಬ ನಿರ್ದೇಶನಗಳ ತತ್ವವನ್ನು ಮೀರಿ ತಾನೇ ಹೊಸ ಕೆಲಸ ನಿರ್ವಹಿಸುವ, ನಿರೀಕ್ಷೆ ಮಾಡಲಾರದ ನಿರ್ಣಯ ತೆಗೆದುಕೊಳ್ಳುವ ಕೃತಕ ಬುದ್ಧಿಮತ್ತೆ ಅದಕ್ಕೆ ಬೆಳೆಯುತ್ತದೆ. ಇದಕ್ಕೆ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಆಗಿರುವ ಮಹತ್ತರ ವಿದ್ಯಮಾನಗಳು ಸಹಕರಿಸಿವೆ. ಈ ಯಂತ್ರ ಕಲಿಕೆಗೆ ಬಿಗ್‌ಡೇಟಾ ಎಂಬ ಮಾಹಿತಿಯನ್ನು ಕ್ರೋಢೀಕರಿಸಿ ಅದನ್ನು ಅವಲೋಕಿಸಿ ಬಳಸುವ ತಂತ್ರಜ್ಞಾನ ಕೂಡ ಒಂದು ದೊಡ್ಡ ಕೊಡುಗೆಯನ್ನು ನೀಡಿದೆ. ಈಗ ಈ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಪತ್ರಿಕೋದ್ಯಮವನ್ನೂ ಒಳಗೊಂಡಂತೆ, ಆರೋಗ್ಯ, ಶಿಕ್ಷಣ, ಪೊಲೀಸಿಂಗ್, ಉತ್ಪಾದನೆ, ಎಚ್‌ಆರ್, ಸಾಗಣೆ, ಸಂಚಾರ ಮುಂತಾದ ಕ್ಷೇತ್ರಗಳಿಗೆ ಲಗ್ಗೆ ಇಟ್ಟಿದೆ. ಇದು ಹಲವು ವಲಯಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಬಲ್ಲದು ಎಂದು ಇದರ ಮೇಲೆ ಹೂಡಿಕೆ ಮಾಡಿದವರು ಪ್ರತಿಪಾದಿಸುತ್ತಿದ್ದರಾದರೂ, ಈ ಕ್ರಾಂತಿ ಒಡ್ಡಬಹುದಾದ ಅಪಾಯಗಳ ಮೇಲೆ ನಿರೀಕ್ಷಿತ ಮಟ್ಟದ ಚರ್ಚೆಗಳಾಗುತ್ತಿಲ್ಲ. ಸಾಮಾಜಿಕ ಮಾಧ್ಯಮಗಳು ಮಾಹಿತಿ/ಜ್ಞಾನ ಉತ್ಪಾದನೆಯಿಂದ ಹಿಡಿದು ಹಂಚಿಕೆಯವರೆಗೂ ಹೇಗೆ ಅವನ್ನು ಪ್ರಜಾಸತ್ತಾತ್ಮಗೊಳಿಸಲಿವೆ ಎಂಬ ಮೊದಲಿನ ನಂಬಿಕೆಗೆ ವ್ಯತಿರಿಕ್ತವಾಗಿ ಮೂರೋ ನಾಲ್ಕೋ ಕಂಪನಿಗಳು ಸ್ವಾಮ್ಯ ಸಾಧಿಸಿರುವಂತೆಯೇ, ಈ ಕ್ರಾಂತಿ ಕೂಡ ಎಂಬ ಚರ್ಚೆಗಳಿವೆ.


ಅಕ್ಟೋಬರ್ ಕೊನೆಯಲ್ಲಿ ಫೇಸ್‌ಬುಕ್, ’ಮೆಟಾ’ ಎಂದು ರಿಬ್ರಾಂಡ್ ಮಾಡಿಕೊಂಡ ನಂತರ ಅದರ ಸಿಇಒ ಮಾರ್ಕ್ ಝುಕರ್ಬಗ್, ಮುಂದೆ ಆ ಸಂಸ್ಥೆ ತೆರೆದುಕೊಳ್ಳಲಿರುವ ’ಮೆಟಾವರ್ಸ್’ಗೆ ಪ್ರಚಾರ ಎಂಬಂತೆ ಸುಮಾರು ಎರಡು ನಿಮಿಷಗಳ ವಿಡಿಯೋವನ್ನು ಬಿಡುಗಡೆ ಮಾಡಿದರು. ಝುಕರ್ಬಗ್ ತನ್ನ ಪ್ರತಿಕೃತಿಯನ್ನು ಸೃಷ್ಟಿಸಿಕೊಂಡು, ಬಾಹ್ಯಾಕಾಶದಲ್ಲಿ ತನ್ನ ಗೆಳೆಯರೊಂದಿಗೆ (ಅವುಗಳೂ ಪ್ರತಿಕೃತಿಗಳೇ) ಮತ್ತು ರೊಬೋಟ್ ಒಂದರೊಂದಿಗೆ ಇಸ್ಪೀಟ್ ಆಡುವುದು, ನಡುವೆ ನಿಜ ಲೋಕದ ತನ್ನ ಗೆಳೆಯರೊಂದಿಗೆ ಸಂಭಾಷಿಸುವುದು ಹೀಗೆ ಮುಂದುವರೆಯುತ್ತದೆ. ಮುಂದಿನ ಸಾಮಾಜಿಕ ಮಾಧ್ಯಮದಲ್ಲಿ/ಮೆಟಾವರ್ಸ್‌ನಲ್ಲಿ ನಾವೆಲ್ಲಾ ಹೀಗೆ ಸೋಶಿಯಲೈಸ್ ಮಾಡುತ್ತೇವೆ ಅಥವಾ ಕನೆಕ್ಟ್ ಆಗುತ್ತೇವೆ ಎಂಬ ಸಂದೇಶದೊಂದಿಗೆ ಆ ವಿಡಿಯೋ ಮುಕ್ತಾಯವಾಗುತ್ತದೆ. ಇದು ’ವರ್ಚುಯಲ್ ರಿಯಾಲಿಟಿ’ ಲೋಕ. ಇಲ್ಲಿ ಕೂಡ ಎಐ ಅಪಾರ ಬಗೆಗಳಲ್ಲಿ ಬಳಕೆಯಾಗಲಿದೆ. ಒಂದು ಕನ್ನಡಕದ ರೀತಿಯ ಸಾಧನವನ್ನು ಹಾಕಿಕೊಂಡು, ನಮ್ಮ ಪ್ರತಿಕೃತಿಯನ್ನು ಸೃಷ್ಟಿಸಿಕೊಂಡು, ನಮ್ಮ ಮಾತುಗಳನ್ನು ಅರ್ಥ ಮಾಡಿಕೊಂಡು, ಆ ಮಾತುಗಳ ಅರ್ಥದ ರೀತಿಯಲ್ಲಿ ಬೇಕಾದ ಜಗತ್ತನ್ನು ಸೃಷ್ಟಿ ಮಾಡಿ, ಅದಕ್ಕೆ ಸ್ಪಂದಿಸಿ ವ್ಯವಹರಿಸುವ ಈ ವರ್ಚುಯಲ್ ಲೋಕದ ಸೃಷ್ಟಿಗೆ ಕೃತಕ ಬುದ್ಧಿಮತ್ತೆ ಅನನ್ಯವಾಗಿ ಜತೆಗೂಡಲಿದೆ.

ಇಂತಹ ವರ್ಚುಯಲ್ ಲೋಕದಲ್ಲಿ ಸೃಷ್ಟಿಯಾಗುವ ಭ್ರಾಮುಕ ಜಗತ್ತಿನಲ್ಲಿ ಇಂದು ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ಇರಬಲ್ಲುದೇ? ಇಂದು ಜಗತ್ತನ್ನು ಬಾಧಿಸುತ್ತಿರುವ ತೀವ್ರ ಧ್ರುವೀಕರಣವನ್ನು ಆ ಜಗತ್ತಿನಲ್ಲಿ ಸರಿಪಡಿಸುವ ಶಕ್ತಿ ಇದೆಯೇ? ಇಂದಿನ ತೀವ್ರ ಅಸಮಾನತೆಯನ್ನು ಹೋಗಲಾಡಿಸುವ ಶಕ್ತಿ ಅಲ್ಲಿದೆಯೇ? ಇದಕ್ಕೆ ಉತ್ತರ ಕಂಡುಕೊಳ್ಳುವುದು ಅಲ್ಲಿ ಹೂಡಿಕೆ ಮಾಡುತ್ತಿರುವ ದೈತ್ಯ ಕಾರ್ಪೊರೆಟ್ ಶಕ್ತಿಗಳಿಗೆ ಬೇಕಾಗಿಲ್ಲ. ಭೂಮಿಯ ಡಿಜಿಟಲ್ ರೂಪವನ್ನು ಹಂಚಿ ಟ್ರೇಡ್ ಮಾಡುವ, ಒಡೆತನ ನೀಡುವ ಬಗ್ಗೆ ಆ ಕಂಪನಿಗಳು ಚಿಂತೆ ಮಾಡುತ್ತಿವೆ. ಅದೆಲ್ಲಾ ಇರಲಿ, ಇಂತಹ ವರ್ಚುಯಲ್ ಜಗತ್ತಿನ ಸೃಷ್ಟಿಗೆ ಬಳಕೆಯಾಗುವ ಬಳಕೆದಾರನ ಮಾಹಿತಿಯ ರಕ್ಷಣೆ ಬಗ್ಗೆ, ಗೌಪ್ಯತೆಯ ಬಗ್ಗೆ ನೀತಿ ನಿಯಮಗಳನ್ನು ರೂಪಿಸುವ ನಿಟ್ಟಿನಲ್ಲಿ ಜಗತ್ತಿನ ಹಲವು ದೇಶಗಳ ಆಡಳಿತ ವ್ಯವಸ್ಥೆಗಳು ಚಿಂತನೆ ನಡೆಸಿವೆಯೇ? ನಮ್ಮ ಭಾರತದಲ್ಲಂತೂ ಇದರ ಬಗ್ಗೆ ಪ್ರಭುತ್ವ ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡಿಲ್ಲ. ಸದ್ಯದ ಸಾಮಾಜಿಕ ಜಾಲತಾಣ ಸಂಸ್ಥೆಗಳು ತನ್ನ ರಾಜಕೀಯಕ್ಕೆ ಸಹಕರಿಸುತ್ತಿರುವಾಗ, ಅದರ ಮುಂದುವರೆದ ತಂತ್ರಜ್ಞಾನ ಕೂಡ ತನ್ನತ್ತಲೇ ವಾಲಬಹುದೆಂಬ ಲೆಕ್ಕಾಚಾರ ಇರಬಹುದೇ ಅದಕ್ಕೆ?

1997ರಲ್ಲಿ ಐಬಿಎಂ ಸಂಸ್ಥೆಯ ಡೀಪ್ ಬ್ಲೂ ಸೂಪರ್ ಕಂಪ್ಯೂಟರ್ ಅಂದಿನ ಚೆಸ್ ವಿಶ್ವ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್ ಅವರನ್ನು ಸೋಲಿಸಿದಾಗ ಬಹುಷಃ ಈ ಕೃತಕ ಬುದ್ಧಿಮತ್ತೆ ಈ ಮಟ್ಟಕ್ಕೆ ಬೆಳೆಯುತ್ತದೆ ಎಂಬುದನ್ನು ಊಹಿಸಿದವರು ಕಡಿಮೆ ಇದ್ದಾರು. ಆದರೆ ಈಗ ಕನಿಷ್ಠ ಪಶ್ಚಿಮದ ದೇಶದ ಚಿಂತಕರು, ತಜ್ಞರು, ತತ್ವ ಶಾಸ್ತ್ರಜ್ಞರು ಇದರ ಬಗ್ಗೆ ಹೆಚ್ಚುಹೆಚ್ಚು ಮಾತನಾಡಲು ಪ್ರಾರಂಭಿಸಿದ್ದಾರೆ. ಉದಾಹರಣೆಗೆ, ಇಸ್ರೇಲ್‌ನ ಇತಿಹಾಸದ ಪ್ರೊಫೆಸರ್ ಮತ್ತು ಸಾರ್ವಜನಿಕ ಬುದ್ಧಿಜೀವಿ ಯುವಲ್ ಹರಾರಿ ಅವರು, ಎಐ ತಂತ್ರಜ್ಞಾನ ಒಡ್ಡಬಹುದಾದ ಸಮಸ್ಯೆಗಳ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಒಂದು ಹಂತದಲ್ಲಿ ಉತ್ಪಾದನೆ ಯಾಂತ್ರೀಕೃತವಾದಾಗ, ಹಲವು ಉದ್ಯೋಗಗಳು ನಷ್ಟವಾದರೂ, ಆ ಯಂತ್ರಗಳನ್ನು ಮುನ್ನಡೆಸಬೇಕಾದ ಒಂದು ಪಡೆ ಅಗತ್ಯವಿದ್ದರಿಂದ ಅದಕ್ಕಾಗಿ ಹೊಸ ನೌಕರಪಡೆಯನ್ನು ಸೃಷ್ಟಿಮಾಡಬೇಕಾಗಿ ಬಂತು. ಆ ನಿಟ್ಟಿನಲ್ಲಿ ಕಡಿತಗೊಂಡ ಉದ್ಯೋಗಗಳ ಪ್ರಮಾಣ ಆತಂಕಕಾರಿಯಾಗಿರಲಿಲ್ಲ. ಆದರೆ ಎಐ ಸೃಷ್ಟಿಸುವ ಆಟೋಮೇಷನ್ ಬೇರೆ ತೆರನಾದದ್ದು. ಇದು ಊಹಿಸಲೂ ಕಷ್ಟವಾದಷ್ಟು ಜನರ ಉದ್ಯೋಗವನ್ನು ಕಡಿತಗೊಳಿಸುತ್ತದೆ. ಇದಕ್ಕೆ ಸರ್ಕಾರಗಳು ಯಾವ ರೀತಿಯಲ್ಲಿ ಸಿದ್ಧವಾಗಿವೆ ಎಂಬುದು ಹರಾರಿ ಅವರ ಚಿಂತನೆಯ ಸಾರ. ಉದಾಹರಣೆಗೆ ಚಾಲಕರಿಲ್ಲದ ಕಾರು ಸಾಕಾರವಾಗುವುದರತ್ತ ದಾಪುಗಾಲಿಟ್ಟಿದೆ. ಇದು ಎಷ್ಟು ಜನರನ್ನು ಚಾಲಕ ವೃತ್ತಿಯಿಂದ ಹೊರದಬ್ಬಬಹುದು ಎಂಬ ಊಹೆಯೇ ಭಯಂಕರವಾಗಿದೆ. ಹಿಂದಿನ ಕೈಗಾರೀಕರಣ ಕಾರ್ಮಿಕರನ್ನು ’ರಿಸ್ಟ್ರಕ್ಚರ್’ ಮಾಡಿ ಬೇರೆ ಉದ್ಯೋಗ ನೀಡಬಹುದಾದ ರೀತಿಯಲ್ಲಿತ್ತು. ಆದರೆ ಈ ಎಐ ಕ್ರಾಂತಿ ಬೇರೆಯೇ ರೀತಿಯದ್ದು. ಈಗಾಗಲೇ ಅಮೆಜಾನ್ ಕಂಪನಿ ಮನುಷ್ಯರ ಜೊತೆಗೆ ವ್ಯವಹರಿಸಬಲ್ಲ ಕೃತಕ ಬುದ್ಧಿಮತ್ತೆಯ ಡ್ರೋಣ್ ಮೂಲಕ ವಸ್ತುಗಳನ್ನು ಡೆಲಿವರಿ ಮಾಡುವ ಪೇಟೆಂಟ್ ತೆಗೆದುಕೊಂಡಿದೆ. ಇಲ್ಲಿ ಸಾವಿರಾರು ಡ್ರೋನ್‌ಗಳನ್ನು ಚಲಾಯಿಸಲು ಬಹುಷಃ ಬೇಕಾಗಿರುವುದು ಕೆಲವೇ ಕೆಲವರು. ಈ ನಿಟ್ಟಿನಲ್ಲಿ ಸಾಗಾಣೆ ಸರಪಳಿಯಲ್ಲಿ ನಷ್ಟವಾಗಬಹುದಾದ ಉದ್ಯೋಗಗಳ ಬಗ್ಗೆ ಸರ್ಕಾರಗಳಿಗೆ ಯೋಜನೆಯೇನಾದರೂ ಇದೆಯೇ?

ಇನ್ನು ಈ ಎಐ ಬಳಕೆ ಹಲವು ನೈತಿಕ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿರುವುದು ಕೂಡ ಈಗಾಗಲೇ ದಾಖಲಾಗಿದೆ. ಉದಾಹರಣೆಗೆ ಅಮೆರಿಕದ ಕೆಲವು ಕಡೆ ಜೈಲಿನಲ್ಲಿರುವ ಕೈದಿಗಳಿಗೆ ’ಪೆರೋಲ್’ ನೀಡುವುದಕ್ಕೆ ಪ್ರಾಯೋಗಿಕವಾಗಿ ಬಳಸಲಾದ ಎಐ ತಂತ್ರಜ್ಞಾನ. ಕೈದಿಗಳಿಗೆ ಜೈಲಿನಿಂದ ಕೆಲವು ವರ್ಷಗಳ ಕಾಲ ತಾತ್ಕಾಲಿಕ ಬಿಡುಗಡೆ ಮಾಡಲು ಅಥವಾ ಜೈಲಿನಲ್ಲಿನ ಅವರ ನಡವಳಿಕೆಯ ಪ್ರಕಾರ ಅವರ ಕಾರಾಗೃಹ ಅವಧಿಗೂ ಮುಂಚಿತವಾಗಿ ಬಿಡುಗಡೆ ಮಾಡಲು ನಿರ್ಧರಿಸಲು ಹಲವು ಪುಟಗಳ ದಾಖಲೆಗಳನ್ನು ಓದಿ, ಅದರ ಪ್ರಕಾರ ಮುಂದಿನ ನಿರ್ಣಯ ಕೈಗೊಳ್ಳಬೇಕಿದೆ. ಇದು ಮನುಷ್ಯರು ಅವಲೋಕಿಸಿ ಮಾಡಬೇಕಾದ ಕರ್ತವ್ಯವಾಗಿದ್ದರೂ ಇದಕ್ಕೆ ಅಗತ್ಯ ಮಾನವ ಸಂಪನ್ಮೂಲಗಳು ಇಲ್ಲ. ಮನುಷ್ಯನ ರೀತಿಯಲ್ಲಿಯೇ ಆದರೆ ಅವನಿಗಿಂತಲೂ ದಾಖಲೆಗಳನ್ನು ವೇಗವಾಗಿ ಓದುವ, ನೂರಾರು ಪ್ಯಾರಾಮೀಟರ್‌ಗಳನ್ನು ಮನುಷ್ಯರಂತೆಯೇ ಅಥವಾ ಅವನಿಗಿಂತಲೂ ಚುರುಕಾಗಿ ಅವಲೋಕಿಸುವ ಮತ್ತು ನಿರ್ಣಯ ಕೈಗೊಳ್ಳುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಪ್ರಯೋಗ ಮಾಡಲಾಯಿತು. ಎಷ್ಟೋ ಬಾರಿ ಮನುಷ್ಯರು ಜನಾಂಗ ಮತ್ತು ವ್ಯಕ್ತಿಗಳ ಬಗ್ಗೆ ಪೂರ್ವಾಗ್ರಹಪೀಡಿತರಾಗಿರಲು ಸಾಧ್ಯವಿದ್ದು, ಪೆರೋಲ್ ನಿರ್ಣಯಗಳಲ್ಲಿ ಅದು ರಿಫ್ಲೆಕ್ಟ್ ಆಗುವ ಸಾಧ್ಯತೆಯಿರುತ್ತದೆ. ಆದುದರಿಂದ ಕೃತಕ ಬುದ್ಧಿಮತ್ತೆಯ ಯಂತ್ರ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಕೂಡ ಬಣ್ಣಿಸಲಾಗಿತ್ತು. ಈ ಪ್ರಯೋಗದ ನಂತರ ಮಾಡಿದ ಅಧ್ಯಯನ ತಿಳಿಸಿದ ಸತ್ಯ ಅಘಾತಕಾರಿಯಾಗಿತ್ತು. ಈ ಮೆಶಿನ್ ಕಲಿಕೆಗೆ ಯಾವ ಡೇಟಾ ಬಳಕೆ ಮಾಡಲಾಗಿತ್ತೋ ಅದು ಕೂಡ ಪೂರ್ವಾಗ್ರಹಗಳಿಂದ ಕೂಡಿದ್ದರಿಂದ ಮೆಶಿನ್ ಕಲಿಕೆ ಕೂಡ ಅದೇ ನಿಟ್ಟಿನಲ್ಲಿತ್ತು. ಎಷ್ಟೋ ಜನ ಅರ್ಹ ಬ್ಲಾಕ್ ಸಮುದಾಯದ ವ್ಯಕ್ತಿಗಳಿಗೆ ಈ ಯಂತ್ರ ಪೆರೋಲ್ ನಿರಾಕರಿಸಿದ್ದು ಈ ಅಧ್ಯಯನದಿಂದ ತಿಳಿದುಬಂತು. ಇದೇ ರೀತಿಯ ಮತ್ತೊಂದು ಉದಾಹರಣೆಯಲ್ಲಿ, ಹಲವು ಕಾರಣಗಳಿಂದ ಪುನರ್ವಸತಿ ಶಿಬಿರಗಳಲ್ಲಿ ಇರುವ ತಾಯಂದಿರು ಹಡೆದಾಗ, ಮಗುವಿಗೆ ಮುಂದೆ ಅವರು ಅಪಾಯಕಾರಿಯಾಗಬಲ್ಲರೇ ಎಂಬುದನ್ನು ಪತ್ತೆ ಹಚ್ಚಿ ಮಗುವನ್ನು ಬೇರೆ ಕಡೆಗೆ ಆರೈಕೆಗೆ ವರ್ಗಾಯಿಸುವುದಕ್ಕೆ ಕೂಡ ಎಐ ತಂತ್ರಜ್ಞಾನವನ್ನು ಬಳಸಲಾಗಿತ್ತು. ಅಲ್ಲಿ ಕೂಡ ಆ ಯಂತ್ರ ಬ್ಲಾಕ್ ಸಮುದಾಯದ ತಾಯಂದಿರ ಮೇಲೆ ತಾರತಮ್ಯ ಎಸಗಿದ್ದು ಅಧ್ಯಯನಗಳಿಂದ ತಿಳಿದುಬಂದಿದೆ. ಈ ರೀತಿ ಎಐ ತಂತ್ರಜ್ಞಾನ ಈಗಿರುವ ತಾರತಮ್ಯವನ್ನು ಬಲಪಡಿಸದಂತೆ, ಅಸಮಾನತೆಯನ್ನು ತೀವ್ರಗೊಳಿಸದಂತೆ ಸರಿ ದಿಕ್ಕಿನಲ್ಲಿ ಸಾಗಬೇಕಿರುವಂತೆ ಮಾಡುವ ನೈತಿಕ ಬಿಕ್ಕಟ್ಟುಗಳು ಕೂಡ ತಲೆದೋರಿವೆ.

ಫೋಟೋ ಹೊಡೆದು ಪತ್ತೆ ಹಚ್ಚಿ ಕಣ್ಗಾವಲು ನಡೆಸುವ, ಫೋಟೋಗಳನ್ನು ಮ್ಯಾಚ್ ಮಾಡುವ, ನಕಲಿ ವಿಡಿಯೋಗಳನ್ನು ಸೃಷ್ಟಿಸುವ ಡೀಪ್ ಫೇಕ್, ಹೀಗೆ ಕೃತಕ ಬುದ್ಧಿಮತ್ತೆ ಸೃಷ್ಟಿಸುತ್ತಿರುವ ಸವಾಲುಗಳು, ಈ ಸದ್ಯಕ್ಕೆ ಅದು ನಮಗೆ ನೀಡುತ್ತಿರುವ ಒಳ್ಳೆಯ ಭವಿಷ್ಯದಭರವಸೆಯನ್ನು ಮೀರಿಸುತ್ತಿರುವುದಕ್ಕೆ ಅನೇಕ ಉದಾಹರಣೆಗಳಿವೆ. ಕಥೆ-ಕವಿತೆ ಬರೆದು, ರಿಪೋರ್ಟ್‌ಗಳನ್ನು ಬರೆದು ಸೃಜನಶೀಲ ಕೆಲಸದ ಮಹತ್ವವನ್ನು ಅಲ್ಲಗಳೆಯುವ ಅಪಾಯ, ಉಳಿದೆಲ್ಲಾ ಕಳವಳಕಾರಿ ಆತಂಕಗಳಿಗೆ ಹೋಲಿಸಿದರೆ, ನಿಜಕ್ಕೂ ಅತಿ ಸಣ್ಣಸಂಗತಿಯಂತೆ ಕಾಣುತ್ತದೆ.

ಈ ನಿಟ್ಟಿನಲ್ಲಿ ಎಐ ಬಗ್ಗೆ ಕೆಲವು ಆಯಾಮಗಳಲ್ಲಿ ಚರ್ಚೆಗಳನ್ನು ಈ ಸಂಚಿಕೆಯಲ್ಲಿ ಪ್ರಾರಂಭಿಸಿದ್ದೇವೆ. ಈ ತಂತ್ರಜ್ಞಾನದ ತಿಳಿವಳಿಕೆ ದೃಷ್ಟಿ ಮತ್ತು ಇದರ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಸ್ಟೇಕ್ ಕೂಡ ಇರಬೇಕೆಂಬ ಕಾಳಜಿ ಪತ್ರಿಕೆಯದ್ದು. ಆ ನಿಟ್ಟಿನಲ್ಲಿ ಇದರ ಬಗ್ಗೆ ಸರಣಿ ಲೇಖನಗಳು ಮುಂದುವರೆಯಲಿವೆ.

  • – ಗುರುಪ್ರಸಾದ್ ಡಿ ಎನ್

ಇದನ್ನೂ ಓದಿ: ಪಾವ್ಲೊ ಫ್ರೆಯರೆಗೆ ನೂರು; ಮಾನವೀಕರಣ ಮತ್ತು ಪ್ರಜಾತಾಂತ್ರಿಕ ಶಿಕ್ಷಣಕ್ಕೆ ಮರುಚಿಂತನೆ ಅಗತ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...