Homeಕರ್ನಾಟಕರಾಜೇಶ್ವರಿ ತೇಜಸ್ವಿ ಸ್ಮರಣೆ; ಜೀವನ ಪ್ರೀತಿಯ ಹುಚ್ಚುತನವನ್ನು ಕಾಣಿಸಿದ ಲೇಖಕಿ

ರಾಜೇಶ್ವರಿ ತೇಜಸ್ವಿ ಸ್ಮರಣೆ; ಜೀವನ ಪ್ರೀತಿಯ ಹುಚ್ಚುತನವನ್ನು ಕಾಣಿಸಿದ ಲೇಖಕಿ

- Advertisement -
- Advertisement -

ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರು ತಮ್ಮ 84ನೇ ವಯಸ್ಸಿನಲ್ಲಿ ನಮ್ಮನ್ನಗಲಿದ್ದಾರೆ. ರಾಜೇಶ್ವರಿ ಅವರ ಹೆಸರನ್ನು ಜನ ಹೆಚ್ಚಾಗಿ ಕೇಳಿದ್ದೇ ತೇಜಸ್ವಿ ಅವರ ಅಗಲಿಕೆಯ ನಂತರ. ಬಹುಶಃ ಅವರ ಆಪ್ತ ವಲಯದವರನ್ನು ಹೊರತುಪಡಿಸಿ ಇನ್ನಾರ ಗಮನಕ್ಕೂ ಬಾರದಂತೆ ನೇಪಥ್ಯದಲ್ಲಿಯೇ ಬದುಕಿದ್ದವರು.

ತೇಜಸ್ವಿ ಅವರ ಹಠಾತ್ ನಿರ್ಗಮನದ ನಂತರ ಹಲವು ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ಕೆಲವೆಡೆ ತೇಜಸ್ವಿ ಅವರಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿಯೂ ರಾಜೇಶ್ವರಿ ಅವರು ಮಾತನಾಡಿದ್ದಿದೆ. ಅವರ ಎಲ್ಲ ಮಾತುಗಳು ಮತ್ತೆ ತೇಜಸ್ವಿ ಅವರನ್ನೇ ಸುತ್ತುವರೆದಿದ್ದವು. ಹೀಗಾಗಿ ರಾಜೇಶ್ವರಿ ಅವರ ಬಗ್ಗೆ ಬರೆಯುವುದೆಂದರೆ ಮತ್ತೆ ತೇಜಸ್ವಿ ಅವರ ಬಗ್ಗೆಯೇ ಮತ್ತೊಂದು ಮಗ್ಗುಲಿಂದ ಬರೆದಂತೆ.

ನಮ್ಮ ಮನೆಗೂ ಬಂದರು ಗಾಂಧೀಜಿ ಎಂಬ ಕೃತಿಯ ಮುನ್ನುಡಿಯಲ್ಲಿ ಎಲ್.ಸಿ. ಸುಮಿತ್ರ ಅವರು ಉಲ್ಲೇಖಿಸಿರುವ ಮಾತು. ’ನಿರುತ್ತರ’ಕ್ಕೆ ಭೇಟಿ ನೀಡಿದ್ದ ಮನೋರಖ್ಖಿತ ಭಂತೇಜಿ ಅವರು ರಾಜೇಶ್ವರಿ ಅವರಿಗೆ ಕೇಳಿದರಂತೆ; “ನೀವು ತತ್ವಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದೀರಲ್ಲ, ನಿಮಗೆ ತತ್ವಶಾಸ್ತ್ರದ ಯಾವ ಸ್ಕೂಲ್ ಒಪ್ಪಿಗೆ?” ಎಂದು. “ತೇಜಸ್ವಿ ಪರಿಚಯವಾದ ನಂತರ ಅವೆಲ್ಲ ಸ್ಕೂಲ್‌ಗಳನ್ನು ತ್ಯಜಿಸಿ ತೇಜಸ್ವಿ ತತ್ವವನ್ನು ಒಪ್ಪಿಕೊಂಡವಳು ನಾನು”- ಇದು ರಾಜೇಶ್ವರಿ ಅವರ ಉತ್ತರವಾಗಿತ್ತು.

ರಾಜೇಶ್ವರಿ ಅವರು ಹುಟ್ಟಿದ್ದು 1937ರಲ್ಲಿ. ಓದಿ ಬೆಳೆದದ್ದು ಬೆಂಗಳೂರು – ಮೈಸೂರುಗಳಲ್ಲಿ. ರಾಜೇಶ್ವರಿ ಅವರ ತಂದೆ ಸರ್ಕಾರಿ ಇಲಾಖೆಯಲ್ಲಿ ಉನ್ನತ ನೌಕರಿಯಲ್ಲಿದ್ದು ನಿವೃತ್ತಿಯಾಗಿದ್ದರು. ತಮ್ಮ ಎರಡನೇ ಕೃತಿ ’ನಮ್ಮ ಮನೆಗೂ ಬಂದರು ಗಾಂಧೀಜಿ’ಯಲ್ಲಿ ಅವರೇ ಸ್ಮರಿಸಿರುವಂತೆ, ಅವರ ತಂದೆಯವರು ಯಾವಾಗಲೂ ಹೇಳುತ್ತಿದ್ದರಂತೆ: “ಹೆಣ್ಣು ಮಕ್ಕಳು ಮದುವೆಯಾಗಬೇಕು ನಿಜ, ಆದರೆ ತಮ್ಮ ಕಾಲ ಮೇಲೆ ತಾವು ನಿಲ್ಲುವಂತಹ ವಿದ್ಯಾಭ್ಯಾಸ ಕೊಡಿಸುವುದು ತಂದೆತಾಯಿಯರ ಆದ್ಯ ಕರ್ತವ್ಯ” ಎಂದು. ಹಾಗೆಯೇ ಈಗ್ಗೆ ಏಳೆಂಟು ದಶಕಗಳ ಹಿಂದೆಯೇ ತಮ್ಮ ಮಗಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದರು.

ರಾಜೇಶ್ವರಿ ಅವರು ತಮ್ಮ ಬದುಕಿನ ಕೊನೆಯ ಹತ್ತು ವರ್ಷಗಳನ್ನು ಹೊರತುಪಡಿಸಿ ಎಂದೂ ಹೆಚ್ಚು ಬರೆದವರಲ್ಲ. ತೇಜಸ್ವಿ ಅವರು ಆತ್ಮಕತೆಯೊಂದನ್ನು ಬರೆದಿರುತ್ತಿದ್ದರೆ ಬಹುಶಃ ಅವರಿಬ್ಬರ ಬದುಕಿನಲ್ಲಿ ಬರೆಯದೇ ಉಳಿಯುವಂಥದ್ದೇನೂ ಇರುತ್ತಿರಲಿಲ್ಲವೋ ಏನೋ ಅನ್ನಿಸುವುದೂ ಇದೆ. ತೇಜಸ್ವಿ ಎಂಬ ವರ್ಚಸ್ವಿ ಲೇಖಕನ ಸಂಗಾತಿಯಾಗಿ ತುಂಬು ಜೀವನ ಕಳೆದಿದ್ದ ಅವರ ಬದುಕಿನ ಸಮೃದ್ಧ ಅನುಭವಗಳು ಎಲ್ಲಿಯೂ ದಾಖಲಾಗಿರಲಿಲ್ಲ. ಯಾರೋ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈಗಿರುವ ಸಾಹಿತ್ಯದ ಭಾರಕ್ಕೆ ನಾನೊಂದಷ್ಟು ಹೊರೆಯೇಕೆ ಸೇರಿಸಲಿ ಎಂದಿದ್ದರಂತೆ.

ತೇಜಸ್ವಿ ಅವರ ಬಹುತೇಕ ಬರೆಹಗಳನ್ನು ಓದಿದವರಿಗೆ ಅವರ ಲೌಖಿಕ ಬದುಕಿನ ಎಲ್ಲ ಕೋನಗಳೂ ಅಲ್ಲಿ ಢಾಳಾಗಿ ದಾಖಲಾಗಿಬಿಟ್ಟಿವೆ ಎನಿಸಿರುತ್ತದೆ. ಇದಕ್ಕೆ ಕಾರಣ ಅವರ ಬಹುತೇಕ ಕೃತಿಗಳಲ್ಲಿ ಅವರೂ ಒಂದು ಪಾತ್ರವೇ ಆಗಿರುತ್ತಿದ್ದದು. ವಿಷಯ ಅಷ್ಟು ಸರಳವಿಲ್ಲವೆನಿಸುತ್ತದೆ. ನಾವೊಮ್ಮೆ ಅವರ ಮನೆಗೆ ಹೋದಾಗ ಶೋಕೇಸಿನಲ್ಲಿದ್ದ ಹಳೇ ಲಾಟೀನು ಕಂಡು, ಕೇಳಿದ್ದೆ. ಮೇಡಂ ಇದೇ ಲಾಟೀನ ನೀವು ಕರೆಂಟಿಲ್ಲದ ಮನೆಯಲ್ಲಿ ಇದ್ದಾಗ ಬಳಸ್ತಿದ್ದದ್ದು ಎಂದು. ಅವರು ಹೌದು ಎಂದು ನೆನಪಿನ ಲೋಕಕ್ಕೆ ಜಾರಿದ್ದರು. (ಇದು ತೇಜಸ್ವಿ ಬರೆದಿದ್ದಲ್ಲ, ರಾಜೇಶ್ವರಿ ಅವರು ದಾಖಲಿಸಿರೋದು)

1966ರಲ್ಲಿ ಕೆಲವೇ ಬಂಧು ಮತ್ತು ಸ್ನೇಹಿತರ ಸಮಕ್ಷಮದಲ್ಲಿ ಕೈಹಿಡಿದಿದ್ದ ರಾಜೇಶ್ವರಿ ಮತ್ತು ತೇಜಸ್ವಿ ಅವರು ಚಿತ್ರಕೂಟ ಎಂಬ ಹೆಸರಿನ ತೋಟದ ಮನೆಯಲ್ಲಿ ಹತ್ತಿರಹತ್ತಿರ ದಶಕದ ಕಾಲ ವಿದ್ಯುತ್ ಸಂಪರ್ಕವಿಲ್ಲದ ಮನೆಯಲ್ಲಿ ಲಾಟೀನಿನ ಆಸರೆಯಲ್ಲಿ ಬದುಕಿದ್ದರು. ಆ ಅವಧಿಯಲ್ಲಿ ತೇಜಸ್ವಿ ಎರಡು ಕಾದಂಬರಿ ಮತ್ತು ಕಥಾಸಂಕಲನಗಳನ್ನು ಪ್ರಕಟಿಸಿದ್ದನ್ನೂ ಹೇಳಿದರು. ಪತಿ-ಪತ್ನಿ ಇಬ್ಬರೂ ಮೈಸೂರು- ಬೆಂಗಳೂರುಗಳೆಂಬ ನಗರಗಳಲ್ಲಿ ಹುಟ್ಟಿ ಬೆಳೆದು ಬದುಕಿ ಹಾಗೆ ಕಾಡ ನಡುವೆ ಕರೆಂಟಿಲ್ಲದ ಸ್ಥಳದಲ್ಲಿ ಬದುಕುವುದು ಹುಡುಗಾಟಿಕೆಯ ಮಾತಾಗಿರಲಿಲ್ಲ; ಜೀವನಪ್ರೀತಿಯ ಹುಚ್ಚುತನ.

ತೇಜಸ್ವಿ ಮನೆಗೆ ಬೀಗ ಹಾಕುವುದರ ವಿರುದ್ಧವಿದ್ದರಂತೆ. ಯಾರು ಬಂದು ಏನು ತೊಗೊಂಡು ಹೋಗ್ತಾರೆ ಬಿಡಮ್ಮ ಅನ್ನೋರಂತೆ. ಸಣ್ಣ ಪುಟ್ಟ ವ್ಯಾಪಾರ ಮಾಡೋವ್ರ ಬಳಿ ಚೌಕಾಸಿ ಮಾಡಿದರೆ ಅವ್ರೂ ಚೂರು ಎಂಪವರ್ ಆಗ್ಲಿ ಚೌಕಾಸಿ ಬಿಟ್ಟು ಕೊಟ್ಟು ಬಾ ಅನ್ನೋವ್ರಂತೆ. ಇನ್ನು ಪ್ರಯೋಗಶೀಲತೆಯಲ್ಲಿ ಇಬ್ಬರ ಈಡು-ಜೋಡು ಹೊಂದಿತ್ತು ಎಂದು ಕಾಣುತ್ತದೆ. ಭೂತನಕಾಡಿನಲ್ಲಿದ್ದಾಗ ಇಬ್ಬರೂ ಯಾವುದೋ ಕಾಡುಮರದ ಹಣ್ಣು ತಿಂದು ಹೊಟ್ಟೆ ನುಲಿತ ತಾಳಲಾರದೆ ಡಾಕ್ಟರ ಬಳಿ ಹೋದಾಗ ಅವರು ಹಾಗೆ ಸಿಕ್ಕ ಸಿಕ್ಕದ್ದೆಲ್ಲಾ ತಿನ್ನಬೇಡಿರಂದು ಬೈದು ಕಳಿಸಿದ್ದರಂತೆ.

ತೇಜಸ್ವಿ ಅವರ ನೂರಾರು ರೀತಿಯ ಸಾಹಸಗಳು ಸುಮ್ಮನೆ ಜರುಗಿದವಲ್ಲ, ಅವೆಲ್ಲಕ್ಕೂ ರಾಜೇಶ್ವರಿ ಅವರ ಒತ್ತಾಸೆ ಇದ್ದೇ ಇದೆ. ಅದು ಲಹರಿ ಪತ್ರಿಕೆಯಿಂದ ಹಿಡಿದು ಅವರ ಫೋಟೋಗ್ರಫಿಯವರೆಗೆ. ನನ್ನ ತೇಜಸ್ವಿ ಕೃತಿಯಲ್ಲಿ ಒಂದು ತಮಾಷೆಯ ಪ್ರಸಂಗ ದಾಖಲಾಗಿದೆ. ತೇಜಸ್ವಿ ಅವರು ಪಕ್ಷಿಗಳ ಫೋಟೋ ಕ್ಲಿಕ್ಕಿಸಲು ಅವುಗಳ ಅರಿವಿಗೆ ಬಾರದಂತ ’ಮರೆ’ಯೊಂದನ್ನು ಮಾಡಿಕೊಂಡಿದ್ದರಂತೆ. (ಹಾಗೆಂದರೆ ಪಕ್ಷಿಗಳಿಗೆ ತಮ್ಮ ಆವಾಸದ ಬಳಿಯೇ ಒಂದು ಕೃತಕ ರಚನೆ ಆಗಿದೆ ಎಂದು ತಿಳಿಯದಂತೆ ಏರ್ಪಡಿಸಿಕೊಳ್ಳುವ ವ್ಯವಸ್ಥೆ). ಪಕ್ಷಿಗಳು ಅತ್ಯಂತ ಚಂಚಲಚಿತ್ತದ ಮತ್ತು ಅತಿಜಾಗರೂಕ ಜೀವಿಗಳು. ಒಂದು ಸಣ್ಣ ಎಲೆಯ ಅಲುಗುವಿಕೆಯೂ ಅವು ಪುರ್ರನೆ ಹಾರಿಹೋಗುವಂತೆ ಮಾಡಿಬಿಡುತ್ತವೆ. ಒಮ್ಮೆ ತೇಜಸ್ವಿ ಹಲವು ಗಂಟೆಗಳ ಕಾಲ ಅಂಥ ಮರೆಯೊಂದರಲ್ಲಿ ಕೂತು ಕ್ಯಾಮರಾಗೆ ಕಣ್ಣು ಕೀಲಿಸಿ ಇನ್ನೇನು ಕ್ಲಿಕ್ಕಿಸಬೇಕು ಎಂದುಕೊಂಡಿರುವಾಗ ಅಲ್ಲಿಯೇ ಪಕ್ಕದಲ್ಲಿದ್ದ ಕರಿಬೇವಿನ ಗಿಡದ ಬಳಿಗೆ ಹಾಡು ಗುನುಗಿಕೊಂಡು ಬಂದ ರಾಜೇಶ್ವರಿ ಒಗ್ಗರಣೆಗೆ ಸೊಪ್ಪು ಕುಯ್ದುಕೊಂಡು ಹೋಗುವ ಹೊತ್ತಿಗೆ ಹಕ್ಕಿ ಹೆದರಿ ಹಾರಿ ಹೋಗಿತ್ತಂತೆ. ತೇಜಸ್ವಿ ಮೈಮುರಿಯುತ್ತ ಮರೆಯಿಂದ ಹೊರಬಂದಾಗ ನೆನಪಾಯ್ತಂತೆ ಅವರು ಅಲ್ಲಿ ಗಂಟೆಗಳಿಂದ ಕಾಯುತ್ತಿದ್ದ ಸಂಗತಿ!

ಇನ್ನೊಮ್ಮೆ, ರಾಜೇಶ್ವರಿ ಬೆಂಗಳೂರಿನಲ್ಲಿದ್ದಾಗ ತೇಜಸ್ವಿ ಬರೆದ ಪತ್ರ ಸಕಾಲಕ್ಕೆ ತಲುಪದೆ ಎದುರಾದ ಫಜೀತಿ ಬಗ್ಗೆ ವಿಸ್ತಾರವಾಗಿ ಬರೆದುಕೊಂಡಿದ್ದಾರೆ. ಪತ್ರಗಳೆಂದಾಗ ನೆನಪಾಗುವ ಸಂಗತಿ. ರಾಜೇಶ್ವರಿ-ತೇಜಸ್ವಿ ಅವರ ನಡುವಿನ ಹತ್ತಾರು ಪತ್ರಗಳು ನನ್ನ ತೇಜಸ್ವಿ ಕೃತಿಯಲ್ಲಿ ಅಚ್ಚಾಗಿವೆ. ಅವೆಲ್ಲ ಪತ್ರಗಳ ಕಟ್ಟು ಒಮ್ಮೆ ಸಿಕ್ಕಾಗ ಇವುಗಳನ್ನು ತಾವು ಹೊಸ ಮನೆ ಕಟ್ಟುವಾಗ ಅದರ ಪಾಯದ ಮಣ್ಣಿಗೆ ಹಾಕಿಬಿಡೋಣೆಂದು ಇಬ್ಬರೂ ತೀರ್ಮಾನಿಸಿದ್ದರಂತೆ. ಆದರೆ ಮನೆ ಕಟ್ಟುವ ಕಾಲಕ್ಕೆ ಅವು ಕೈಗೆ ಸಿಗದ ಕಾರಣ ಉಳಿದವಂತೆ. ಈಗ ನನ್ನ ತೇಜಸ್ವಿ ಮಾತ್ರವಲ್ಲದೆ ತೇಜಸ್ವಿ ಪತ್ರಗಳು ಎಂಬ ಪತ್ರ ಸಂಕಲನದಲ್ಲಿಯೂ ನೂರಾರು ಪತ್ರಗಳು ದಾಖಲಾಗಿವೆ. ನರೇಂದ್ರ ರೈ ದೇರ್ಲ ಆ ಪತ್ರಗಳ ಸಂಯೋಜನೆಯನ್ನು ಮಾಡಿದ್ದಾರೆ. ಈ ಸಂಕಲನದಲ್ಲಿ ಕೂಡ ತೇಜಸ್ವಿ ಅವರಿಗೆ ರಾಜೇಶ್ವರಿ ಅವರು ಬರೆದ ಹಲವು ಪತ್ರಗಳಿವೆ. ಮದುವೆಯಾದ ಇಪ್ಪತ್ತು ವರ್ಷಗಳ ನಂತರ ಗಂಡ ಹೆಂಡಿರು ಪತ್ರದಲ್ಲಿ ಪರಸ್ಪರ ಕಾಲೆಳೆಯುವಂತ ಮಾತು ಬರೆದುಕೊಂಡುದನ್ನು ಓದುವುದೇ ಮಜಾ.

ರಾಜೇಶ್ವರಿ: ಈಶ (ಈಶಾನ್ಯೆ) ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿರುವಳು. ಇನ್ನು ಅವಳ Englishನ ಬಗ್ಗೆ ನಕ್ಕು ಸಾಯಬೇಕು. ನಿಮ್ಮ ಮಗಳೇ ಅವಳು. ನೀವು ನನಗೆ ಬರೆದಿರುವ ಅಡ್ರೆಸ್ಸಿನಲ್ಲಿ ಎರಡು ತಪ್ಪಿವೆ!

ತೇಜಸ್ವಿ: (ಮಾರುತ್ತರದಲ್ಲಿ) ನಿನ್ನ ಕನ್ನಡ ಅಕ್ಷರಗಳು ಶೋಚನೀಯ ಸ್ಥಿತಿ ತಲುಪುತ್ತಿವೆ. ಯಾಕೆ ಒಂಚೂರು ಗಮನವಿಟ್ಟು ಬರೆಯಬಾರದು.

ತೇಜಸ್ವಿ ಅವರು ಬರೆಯದೇ ಉಳಿಸಿದ ಆತ್ಮಕತೆಯ ಕೊರತೆಯನ್ನು ತಮ್ಮದೇ ರೀತಿಯಲ್ಲಿ ತುಂಬಿಸಿದವರು ರಾಜೇಶ್ವರಿ ತೇಜಸ್ವಿ. ರಾಜೇಶ್ವರಿ ಅವರ ನೆನಪಿನ ಶಕ್ತಿ ಎಷ್ಟು ಶಕ್ತವಾದ್ದು ಎಂಬುದು ಅವರ ಬರೆಹ ಮತ್ತು ಮಾತುಗಳನ್ನು ಗಮನಿಸಿದವರಿಗೆ ಚೆನ್ನಾಗಿ ಅರ್ಥವಾಗಿರುತ್ತದೆ. ರಾಜೇಶ್ವರಿ ಆನರ್ಸ್ ಓದುವಾಗ ಯು.ಆರ್. ಅನಂತಮೂರ್ತಿ ಅವರಿಗೆ ಮೇಷ್ಟ್ರಂತೆ. ಆಗವರು ಹೇಳಿದ್ದ T.S. Eliotನ ಪದ್ಯವೊಂದನ್ನು ಯಥಾವತ್ತಾಗಿ ನೆನಪಿನ ಶಕ್ತಿಯಿಂದ ದಾಖಲಿಸಿದ್ದಾರೆ.

ಮುಂದೆ ಅದರ ಅರ್ಥವನ್ನು ತೇಜಸ್ವಿ ಅವರಿಂದ ಮನಗಾಣಿಸಿಕೊಂಡೆ ಎಂದಿದ್ದಾರೆ.

ತೇಜಸ್ವಿ ಅವರ ಬರಹದಲ್ಲಿ ಎಂದೂ ಇಣುಕದೇ ಇರುವ ಅವರ ಮನೆಕಟ್ಟುವಾಗಿನ ಪ್ರಯೋಗ, ಫೋಟೋ ಪ್ರಿಂಟ್ ಹಾಕಲು, ಪಕ್ಷಿಗಳ ಫೋಟೋ ಕ್ಲಿಕ್ಕಿಸಲು ಪಡುತ್ತಿದ್ದ ಪಡಿಪಾಟಲು, ಮನೆಗೆ ಗುಡ್ಡದಿಂದ ಶುದ್ಧ ನೀರು ಬರುವಂತೆ ಏರ್ಪಡಿಸಿಕೊಂಡಿದ್ದ ತಮ್ಮದೇ ಆದ ತಾಂತ್ರಿಕ ವ್ಯವಸ್ಥೆ, ತಮ್ಮ ಸ್ಕೂಟರು, ಜೀಪು ಇತ್ಯಾದಿಗಳನ್ನು ತಾವೇ ರಿಪೇರಿ ಮಾಡಿಕೊಳ್ಳುವ ಅವರ ಪ್ರಯೋಗಶೀಲ ಗುಣ, ಗೆಳೆಯರ ಜೊತೆ ಸುತ್ತಾಡಿ ಬೇಟೆ ಮಾಂಸ ತಂದರೆ ತಾವೇ ತಯಾರು ಮಾಡಿಕೊಳ್ಳುವ ಪಾಕ ಪ್ರಾವೀಣ್ಯ ಎಲ್ಲವೂ ಸಾದ್ಯಂತವಾಗಿ ದಾಖಲಾಗಿದ್ದು ರಾಜೇಶ್ವರಿ ಅವರ ’ನನ್ನ ತೇಜಸ್ವಿ’ ಕೃತಿಯ ಮೂಲಕವೆ.

ತಮ್ಮ ಎಪ್ಪತ್ತನಾಲ್ಕನೇ ವಯಸ್ಸಿನಲ್ಲಿ ಲೇಖಕಿಯಾಗಿ ಇಷ್ಟು ಸಮರ್ಥವಾಗಿ ತಮ್ಮ ಚೊಚ್ಚಲ ಕೃತಿಯಲ್ಲಿಯೇ ಇಂಥ ಪ್ರಬುದ್ಧತೆ ಸಾಧಿಸಿದ್ದ ರಾಜೇಶ್ವರಿ ಅವರು ಕೆಲ ವರ್ಷ ಮುಂಚೆಯೇ ಬರೆಹ ಆರಂಭಿಸಿದ್ದರೆ ಇನ್ನೊಂದಷ್ಟು ಬರೆಯುತ್ತಿದ್ದರೇನೊ ಎಂದುಕೊಳ್ಳುವ ಊಹೆ, ತೇಜಸ್ವಿ ಅವರ ಲೋಕದಲ್ಲಿ ಕಳೆದೇ ಹೋಗುವಷ್ಟು ತನ್ಮಯತೆಯ ಕಾರಣಕ್ಕೆ ಸ್ವತಃ ಲೇಖಕಿಯೇ ಹಿಂದೆ ಸರಿದುಬಿಡುವರಲ್ಲವೆ ಎಂಬ ಸಂದೇಹದ ಜೊತೆಗೇ ಅಗಲಿದ ಅವರ ತುಂಬು ವ್ಯಕ್ತಿತ್ವಕ್ಕೆ ವಿದಾಯ ಹೇಳಬಹುದೇನೊ.

ರೋಹಿತ್ ಅಗಸರಹಳ್ಳಿ

ರೋಹಿತ್ ಅಗಸರಹಳ್ಳಿ
ಕನ್ನಡ ಉಪನ್ಯಾಸಕರು, ಸಿನೆಮಾ ಪ್ರೇಮಿ, ಅಗಸರಹಳ್ಳಿ, ಮಂಡ್ಯ ಜಿಲ್ಲೆ.


ಇದನ್ನೂ ಓದಿ: ತೇಜಸ್ವಿ ಕಂಡ ನಾಯಿ ಲೋಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...