Homeಎಕಾನಮಿಕುಸಿಯುತ್ತಲೇ ಇದೆ ಆರ್ಥಿಕತೆ: ಜನಕ್ಕೆ ಈಗಲಾದರೂ ಅರ್ಥವಾದೀತೆ...

ಕುಸಿಯುತ್ತಲೇ ಇದೆ ಆರ್ಥಿಕತೆ: ಜನಕ್ಕೆ ಈಗಲಾದರೂ ಅರ್ಥವಾದೀತೆ…

ದುರಂತವೆಂದರೆ, ಭಾರತೀಯ ವಾಯುಸೇನೆ ಬಳಸುತ್ತಿರುವ ಹಲವು ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ತಯಾರಿಸಿರುವ ಎಚ್‌ಎಎಲ್ ಬಳಿ ಕಾರ್ಮಿಕರಿಗೆ ಸಂಬಳ ಕೊಡಲು ಹಣವಿಲ್ಲ!

- Advertisement -
- Advertisement -

ತೀವ್ರ ಆರ್ಥಿಕ ಹಿಂಜರಿತದತ್ತ ಭಾರತ!

ಕನ್ನಡಿಯೊಳಗಿನ ಗಂಟನ್ನು ತೋರಿಸಿ, ಜನರಲ್ಲಿ ಇನ್ನಿಲ್ಲದ ಆಸೆಗಳನ್ನು ಹುಟ್ಟಿಸಿ ಮೊದಲ ಅವಧಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ, ಎರಡನೆಯ ಅವಧಿಯ ಮೊದಲ ಬಜೆಟಿನಲ್ಲಿಯೂ ಸ್ವರ್ಗವನ್ನೇ ಭೂಮಿಗಿಳಿಸುವ ಭರವಸೆ ನೀಡಿದೆ. ಆದರೆ ಆರ್ಥಿಕ ಪರಿಸ್ಥಿತಿ ಮಾತ್ರ ಅದಕ್ಕೆ ವ್ಯತಿರಿಕ್ತವಾಗಿದೆ. ದೇಶದ ಎದುರಿಸಲಿರುವ ಭೀಕರ ಆರ್ಥಿಕ ತುರ್ತು ಪರಿಸ್ಥಿತಿಯ ಲಕ್ಷಣಗಳನ್ನಷ್ಟೇ ಇಲ್ಲಿ ಕೆಲವು ಉದಾಹರಣೆಗಳ ಮೂಲಕ ನೋಡೋಣ.

ಆರ್ಥಿಕತೆಯು ತೀರಾ ಮಂದಗತಿಯಲ್ಲಿ ಸಾಗುತ್ತಿದ್ದು, ಭಯಹುಟ್ಟಿಸುವಷ್ಟು ಪ್ರಮಾಣದಲ್ಲಿ ದಾಖಲೆ ಮಟ್ಟಕ್ಕೆ ಏರಿರುವ ನಿರುದ್ಯೋಗದ ಜೊತೆ, ಕೃಷಿ ಬಿಕ್ಕಟ್ಟು ಸೇರಿಕೊಂಡು ಜನರ ಜನಜೀವನದ ಮೇಲೆ ಅಸಹನೀಯ ಪರಿಣಾಮ ಬೀರುತ್ತಿದೆ ಎಂದು ಹೇಳಲು ಆರ್ಥಿಕ ತಜ್ಞರು ಬೇಕಾಗಿಲ್ಲ. ಸ್ವಂತ ಅನುಭವದಿಂದ, ಸುತ್ತಮುತ್ತ ಗಮನಿಸುವುದರಿಂದಲೇ ಇದನ್ನು ಹೇಳಬಹುದು. ಇದರ ಪರಿಣಾಮ ಕೇವಲ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಆಗುತ್ತಿಲ್ಲ. ಅದಾನಿ, ಅಂಬಾನಿಯಂತಹ ಗುಜರಾತಿ ಕುಬೇರರ ಹೊರತಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳಿಗೂ ಎಂತಹಾ ಪರಿಣಾಮ ಆಗುತ್ತಿದೆ ಎಂಬುದನ್ನು ಕಾಫಿ ಡೇ ಸಾಮ್ರಾಜ್ಯ ಕಟ್ಟಿದ ಸಿದ್ಧಾರ್ಥ ಹೆಗಡೆಯವರ ದುರಂತ ಸಾವಿನಲ್ಲಿ ಕಾಣಬಹುದು.

ಈಗ ಕೆಲವು ಅಂಕಿ ಅಂಶಗಳನ್ನು ಗಮನಿಸೋಣ. ಮುಖ್ಯ ಕ್ಷೇತ್ರದ ಕೈಗಾರಿಕಾ ಬೆಳವಣಿಗೆ ದರ ಜೂನ್ 2019ರ ಲೆಕ್ಕಾಚಾರ ಪ್ರಕಾರ 0.2 ಶೇಕಡಾ ಮಾತ್ರ ಇದ್ದು, ಇದು 44 ತಿಂಗಳುಗಳಲ್ಲೇ ಕನಿಷ್ಟ. ಜೂನ್ 2018ರಲ್ಲಿ ಅದು 7.5 ಶೇಕಡಾ ಇತ್ತು. ಒಂದೇ ವರ್ಷದಲ್ಲಿ ಈ ಪ್ರಮಾಣದ ಕುಸಿತಕ್ಕೆ ಕಾರಣವೇನು?

ವಾಹನೋದ್ಯಮ ಕ್ಷೇತ್ರವು ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದ 7.5 ಶೇಕಡಾವನ್ನು ನೀಡುತ್ತಿದ್ದು, ಹೆಚ್ಚುಕಡಿಮೆ ನಾಲ್ಕು ಕೋಟಿ ಜನರಿಗೆ ಉದ್ಯೋಗ ನೀಡುತ್ತಿದೆ. ಅದರ ಪಾಲು ಉತ್ಪಾದನಾ ಜಿಡಿಪಿಯ 49 ಶೇಕಡಾದಷ್ಟಿದೆ. ದೇಶದ ಅತೀ ದೊಡ್ಡ ಕಾರು ಉತ್ಪಾದಕ ‘ಮಾರುತಿ’ ಸಹಿತ 17 ಪ್ರಮುಖ ಕಂಪೆನಿಗಳಲ್ಲಿ 10ರ ಮಾರಾಟ ಇಳಿಮುಖವಾಗಿದ್ದು, ಅವುಗಳಲ್ಲಿ ಕಾರ್ಮಿಕರ ಕೆಲಸ ಕಡಿತ, ವಜಾ ಇತ್ಯಾದಿ ನಡೆಯುತ್ತಿದೆ ಮತ್ತು ಮುಂದೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗುವ ಸೂಚನೆಗಳಿವೆ. ಪೂರಕ ಕೈಗಾರಿಕೆಗಳಲ್ಲಿ ಈಗಾಗಲೇ ಹತ್ತು ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿರುವ ವರದಿಗಳಿವೆ. 55,000 ಕೋಟಿ ರೂ. ಮೌಲ್ಯದ ಕಾರುಗಳು ಮಾರಾಟವಾಗದೇ ಹಾಗೆಯೇ ಬಿದ್ದುಕೊಂಡಿವೆ ಎಂದರೆ, ಬಿಕ್ಕಟ್ಟಿನ ತೀವ್ರತೆಯನ್ನು ಊಹಿಸಬಹುದು.

ಮೋದಿ ಸರಕಾರವು ದೊಡ್ಡ ಪ್ರಮಾಣದಲ್ಲಿ ಖಾಸಗೀಕರಣ ಪ್ರಕ್ರಿಯೆಯಲ್ಲಿ ತೊಡಗಿದೆ. ಉದ್ದೇಶ- ಸಾರ್ವಜನಿಕ ರಂಗದ ಉದ್ದಿಮೆಗಳ ಸರಕಾರಿ ಬಂಡವಾಳವನ್ನು ಭಾಗಶಃ ಅಥವಾ ಪೂರ್ಣವಾಗಿ ಮಾರಿ ಹಣ ಸಂಗ್ರಹಿಸಿ ಆರ್ಥಿಕ ಕೊರತೆಯನ್ನು ಮರೆಮಾಚುವುದು ಮತ್ತು ಕೆಲವೇ ಉದ್ಯಮ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಮೂಲಕ ಪಕ್ಷದ ಮತ್ತು ಅದರ ನಾಯಕರ ‘ಬಂಡವಾಳ’ ಹೆಚ್ಚಿಸುವುದು. ಇದಕ್ಕಾಗಿ ರಕ್ಷಣೆಗೆ ಸಂಬಂಧಿಸಿದ ಉದ್ದಿಮೆಗಳನ್ನು ಕೂಡಾ ಈ ‘ದೇಶ ಪ್ರೇಮಿ’ ಸರಕಾರ ಬಿಟ್ಟಿಲ್ಲ.

ಹಿಂದಿನವರು ರಕ್ಷಣಾ ವಲಯದಲ್ಲಿ ಖಾಸಗಿ ರಂಗಕ್ಕೆ ಅವಕಾಶ ನೀಡಿದಲ್ಲಿ ಭದ್ರತಾ ಅಪಾಯ ಹೆಚ್ಚೆಂಬ ಕಾರಣದಿಂದ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಸ್ಥಾಪಿಸಿದ್ದರು. ಈ ಸರಕಾರ 42 ಅಂತಹಾ ಉದ್ದಿಮೆಗಳನ್ನು ಖಾಸಗಿಗೆ ಮಾರಲು ಹೊರಟಿದೆ. ಇವುಗಳಲ್ಲಿ ಶಸ್ತ್ರಾಸ್ತ್ರ ಮತ್ತು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮತ್ತು ಮಿಲಿಟರಿ ಇಂಜಿನಿಯರಿಂಗ್ ಘಟಕಗಳೂ ಸೇರಿವೆ. ಈ ಕ್ಷೇತ್ರದಲ್ಲಿ ಈಗಾಗಲೇ ಅನಿಲ್ ಅಂಬಾನಿ ಹೊಸ ಶಸ್ತ್ರಾಸ್ತ್ರ ಉದ್ದಿಮೆ ಸ್ಥಾಪಿಸಿ, ಅನುಭವಿ ಸಾರ್ವಜನಿಕ ರಂಗದ ಉದ್ದಿಮೆಯಾದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಕಂಪೆನಿಯನ್ನೂ ಮೀರಿಸಿ ರಫೇಲ್ ಗುತ್ತಿಗೆ ಪಡೆದಿರುವುದರಿಂದ, ಈ ಘಟಕಗಳು ಯಾರ ಪಾಲಾಗಲಿವೆ ಎಂಬುದನ್ನು ಊಹಿಸಲು ಕಷ್ಟವಿಲ್ಲ. ಈ ಘಟಕಗಳಲ್ಲಿ ಸದ್ಯಕ್ಕೆ ನಾಲ್ಕು ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ದುರಂತವೆಂದರೆ, ಭಾರತೀಯ ವಾಯುಸೇನೆ ಬಳಸುತ್ತಿರುವ ಹಲವು ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ತಯಾರಿಸಿರುವ ಎಚ್‌ಎಎಲ್ ಬಳಿ ಕಾರ್ಮಿಕರಿಗೆ ಸಂಬಳ ಕೊಡಲು ಹಣವಿಲ್ಲ!

ಕೇಂದ್ರವು ಆರು ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಿದ್ದು, ಅದರ ಗುತ್ತಿಗೆ ಮೋದಿ ಮಿತ್ರ ಅದಾನಿಗೆ ಹೋಗಿದೆ. ಸರಕಾರವು ಇನ್ನೂ 20-25 ವಿಮಾನ ನಿಲ್ದಾಣಗಳ ಖಾಸಗೀಕರಣವನ್ನು ಘೋಷಿಸಿದೆ. ಭಾರತೀಯ ರೈಲ್ವೇಯ ಖಾಸಗೀಕರಣ ಹಂತಹಂತವಾಗಿ ನಡೆಯುತ್ತಿದೆ. ಕೆಲವು ರೈಲು ನಿಲ್ದಾಣಗಳು ಈಗಾಗಲೇ ಖಾಸಗಿ ಪಾಲಾಗಿವೆ. ಇದೇ ಹೊತ್ತಿಗೆ ಏರ್‌ಇಂಡಿಯಾ ಭಾರೀ ನಷ್ಟ ಅನುಭವಿಸುತ್ತಿದ್ದು, ಅದನ್ನೂ ಖಾಸಗೀಕರಣ ಮಾಡುವ ಯೋಜನೆ ಭರದಿಂದ ಸಾಗಿದೆ.

ದೇಶದ ಹಳ್ಳಿಹಳ್ಳಿಗೆ ದೂರವಾಣಿ ತಲುಪಿಸಿದ ಬಿಎಸ್ಎನ್‌‌ಎಲ್, ಮೋದಿ ಜಾಹೀರಾತು ಮಾಡೆಲ್ ಆಗಿದ್ದ ಜಿಯೋ ಎದುರು ಉಸಿರೆಳೆಯುತ್ತಾ ನಷ್ಟದಲ್ಲಿದೆ. 4ಜಿ ಸೌಲಭವನ್ನು ಇನ್ನೂ ಒದಗಿಸಲಾಗದ ಅದರ ಪುನಶ್ಚೇತನಕ್ಕೆ ಸರಕಾರ ಯಾವುದೇ ನೆರವು ನೀಡಿಲ್ಲ. ಅದನ್ನು ಬೇಕೆಂದೇ ಕೊಲ್ಲಲಾಗುತ್ತಿದೆ ಎಂಬ ಆರೋಪದಲ್ಲಿ ಹುರುಳಿದೆ. ಇದೀಗ ಅದರ 54,000 ನೌಕರರನ್ನು ಮನೆಗೆ ಕಳಿಸುವ ಯೋಜನೆ ಸಿದ್ಧವಾಗಿದೆ ಮಾತ್ರವಲ್ಲ, ಅದರ 18,000 ಕೋಟಿ ಬೆಲೆಯ ಆಸ್ತಿಯನ್ನು ಮಾರುವ ಸಿದ್ಧತೆ ನಡೆದಿದೆ. ಇದನ್ನು ಯಾರು ಖರೀದಿಸಲಿದ್ದಾರೆ ಎಂಬುದನ್ನು ಊಹಿಸುವುದೂ ಕಷ್ಟವಲ್ಲ.

ಅಂಚೆ ಇಲಾಖೆ ಕೂಡಾ ಸುಮಾರು 18,000 ಕೋಟಿ ರೂ.ನಷ್ಟದಲ್ಲಿದ್ದು, ಹಾಗೋಹೀಗೋ ಜೀವ ಎಳೆಯುತ್ತಿದೆ. ಲಾಭದಾಯಕವಾಗಿ ನಡೆಯುತ್ತಿದ್ದ ನವರತ್ನ ಸಂಸ್ಥೆಗಳಲ್ಲಿ ಒಂದಾದ ಅಯಿಲ್ ಎಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ಓಎನ್‌ಜಿಸಿ) ಹಿಂದೆಯೂ ಕಾಣದ ನಷ್ಟ ಅನುಭವಿಸುತ್ತಿದೆ. ಇಲ್ಲಿಯೂ ಅದರ ಪ್ರತಿಸ್ಪರ್ಧಿ ಅಂಬಾನಿಯ ರಿಲಯನ್ಸ್ ಪೆಟ್ರೊ ಆಗಿರುವುದು ಕೇವಲ ಕಾಕತಾಳೀಯ ಇರಲಾರದು. ಹಿಂದಿನ ರಷ್ಯನ್ ಗುತ್ತಿಗೆ ಹಗರಣವನ್ನು ಇಲ್ಲಿ ನೆನಪಿಸಬಹುದು.

ಇನ್ನೂ ಆತಂಕಕಾರಿ ವಿಷಯವೆಂದರೆ, ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ಸಾರ್ವಜನಿಕ ಉದ್ದಿಮೆಗಳಲ್ಲಿ ಸರಕಾರದ ಪಾಲುಬಂಡವಾಳವನ್ನು 49 ಶೇಕಡಾಕ್ಕೆ ಇಳಿಸಿ, ನಿಯಂತ್ರಣವನ್ನು ಖಾಸಗಿಯವರಿಗೆ ಧಾರೆ ಎರೆದುಕೊಡುವ ಕಾರ್ಯಸೂಚಿಯನ್ನು ಸರಕಾರ ಈಗಾಗಲೇ ರೂಪಿಸಿರುವುದು. ಖಾಸಗಿ ಉದ್ದಿಮೆಗಳೇನಾದರೂ ಉದ್ಧಾರವಾಗಿವೆಯೇ ಎಂದರೆ ಅದೂ ಇಲ್ಲ. ಮೋದಿಕಾಲದಲ್ಲಿ ಮುಚ್ಚಿಹೋದ ಸಂಸ್ಥೆಗಳಲ್ಲಿ ಟಾಟಾ ಡೊಕೋಮೊ, ಏರ್‌ಸೆಲ್, ಜೆಟ್‌ ಏರ್‌ವೇಸ್, ಜೆ.ಪಿ. ಗ್ರೂಪ್ ಮೊದಲಾದವುಗಳನ್ನು ಹೆಸರಿಸಬಹುದು. ವಿಡಿಯೋಕಾನ್ ಕೂಡಾ ದಿವಾಳಿ ಎದ್ದಿದೆ. ಆದರೆ, ಇದೇ ಅವಧಿಯಲ್ಲಿ ಅಂಬಾನಿ ಮೌಲ್ಯ ಮಾತ್ರ ದ್ವಿಗುಣ! ಅಷ್ಟು ವರ್ಷಗಳ ಸಂಪಾದನೆ ಕೇವಲ ಐದು ವರ್ಷಗಳಲ್ಲಿ!

ಇನ್ನು ಬ್ಯಾಂಕಿಂಗ್ ಕ್ಷೇತ್ರಕ್ಕೆ ಬಂದರೆ, ಬಹುತೇಕ ಎಲ್ಲಾ ಸಾರ್ವಜನಿಕ ರಂಗದ ಬ್ಯಾಂಕುಗಳು ನಷ್ಟದಲ್ಲಿವೆ. ಇದೇ ಕಾರಣದಿಂದ ಕೆಲವು ಬ್ಯಾಂಕುಗಳ ವಿಲೀನ ಮಾಡಿರುವುದು ಎಲ್ಲರಿಗೂ ಗೊತ್ತು. ಇದಕ್ಕೆ ಕಾರಣ ಬ್ಯಾಂಕುಗಳ ಮೂಲಕ ದೇಶದ ಸಂಪತ್ತಿನ ಲೂಟಿ. ಸರಕಾರದ ಹೇಳಿಕೆಗೆ ವ್ಯತಿರಿಕ್ತವಾಗಿ ರಾಷ್ಟ್ರೀಕೃತ ಬ್ಯಾಂಕಗಳ ದುಡಿಯದ ಆಸ್ತಿ (ಎನ್‌ಪಿಎ) ಅಂದರೆ ಹೆಚ್ಚಾಗಿ, ವಸೂಲಾಗದ ಅಥವಾ ವಸೂಲು ಮಾಡದ ಸಾಲದ ಪ್ರಮಾಣ ಸ್ವತಃ ಬ್ಯಾಂಕುಗಳ ಅಂಕಿಅಂಶ ಪ್ರಕಾರವೇ 2,30,811 ಕೋಟಿ ರೂ.ಗಳು! ಇದು ಕೂಡ 2018-19ರ ಸಾಲಿನಲ್ಲಿ- ರೈತರ ಸಾಲ ಮನ್ನಾ ಮಾಡದ ಸರಕಾರ- 1,96,000 ಕೋಟಿ ರೂ.ಗಳಷ್ಟು ಶ್ರೀಮಂತ ವಂಚಕರ ಸಾಲ ಮನ್ನಾ ಮಾಡಿದ ಬಳಿಕದ ಅಂಕಿಅಂಶ! ಇದಕ್ಕೆ ಹೊರತಾಗಿ ಚೌಕಿದಾರನ ಮೂಗಿನ ಅಡಿಯಲ್ಲಿ ಓಡಿಹೋದ ಅತಿದೊಡ್ಡ 36 ಸಾಲಗಾರರು ದೇಶಬಿಟ್ಟು ಪರಾರಿಯಾಗಿದ್ದಾರೆ. ಚುನಾವಣೆ ಮುಗಿದಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿ ಕಾಣಸಿಗುತ್ತಿದ್ದ ಚೌಕಿದಾರರೆಲ್ಲಾ ಮಾಯವಾಗಿದ್ದಾರೆ.

ಈಗಿನ ಪರಿಸ್ಥಿತಿಗೆ ಕಾರಣಗಳನ್ನು ಹಣಕಾಸು ತಜ್ಞರು ಬಜೆಟ್ ಮತ್ತು ಸಿಎಜಿ ವರದಿಯಲ್ಲಿ ಹುಡುಕಿದ್ದಾರೆ. ದೇಶದ ಮೇಲಿನ ಸಾಲದ ಹೊರೆ ದಾಖಲೆ 1,31,100 ಡಾಲರ್ (ರೂಪಾಯಿ ಅಲ್ಲ!) ತಲಪಿದೆ. ಸರಕಾರ ಎಲ್ಲವನ್ನು ಮರೆಮಾಚಲು ಅಂಕಿಅಂಶಗಳ ಇಂದ್ರಜಾಲ ನಡೆಸಿದೆ. ಬಜೆಟ್ ಲೆಕ್ಕಾಚಾರದಲ್ಲಿ ಕನಿಷ್ಟ 1,70,000 ಕೋಟಿ ರೂ.ಗಳ ವ್ಯತ್ಯಾಸ ಇದೆ ಎಂದು ತಜ್ಞರು ಹೇಳುತ್ತಾರೆ. ಆದಾಯ ಮತ್ತು ಜಿಎಸ್‌ಟಿ ಸಂಗ್ರಹವನ್ನು ಉಬ್ಬರಿಸಿ ತೋರಿಸಲಾಗಿದೆ. ಸಿಎಜಿ ವರದಿ ಪ್ರಕಾರ ಸರಕಾರದ ಆರ್ಥಿಕ ಕೊರತೆ ಜೂನ್ ತನಕ 3,42,000 ಕೋಟಿ ರೂ.ಗಳಿಗೆ ತಲಪಿದೆ. ಇದು 2019-20ರ ಬಜೆಟ್ ಅಂದಾಜಿನ 61.4 ಶೇಕಡಾ! ಈ ಹಣಕಾಸು ವರ್ಷದಲ್ಲಿ ಇನ್ನೂ ಮೂರು ತ್ರೈಮಾಸಿಕಗಳು ಉಳಿದಿವೆ. ಇದರಿಂದ ಆರ್ಥಿಕ ಹಿಂಜರಿಕೆ ಸ್ಪಷ್ಟ.

ಇವೆಲ್ಲದರ ಪರಿಣಾಮವಾಗಿ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತೀ ಹೆಚ್ಚಾಗಿದೆ. ಇವೆಲ್ಲವನ್ನೂ ಮರೆ ಮಾಚಲು ಸರಕಾರದ ಅಂಕಿಅಂಶ ಇಲಾಖೆ ನಿರುದ್ಯೋಗದ ಕುರಿತಾಗಲೀ, ರೈತರ ಆತ್ಮಹತ್ಯೆ ಕುರಿತಾಗಲೀ ಯಾವುದೇ ಅಂಕಿಅಂಶ ಸಂಗ್ರಹಿಸುತ್ತಿಲ್ಲ. ಹಾಗಾಗಿಯೇ ಪಕೋಡ ಮಾರಿ 200 ರೂ. ಸಂಪಾದಿಸುವುದೂ ಒಂದು ಉದ್ಯೋಗ ಎಂದು- ವರ್ಷಕ್ಕೆ ಅಷ್ಟು ಲಕ್ಷ ಉದ್ಯೋಗ ಸೃಷ್ಟಿ, ಇಷ್ಟು ಲಕ್ಷ ಉದ್ಯೋಗ ಸೃಷ್ಟಿ ಎಂದು- 2014ರಲ್ಲಿ ಬೊಗಳೆ ಬಿಟ್ಟಿದ್ದ ಪ್ರಧಾನಿ ಹೇಳುವ ದುಸ್ಥಿತಿ ಬಂದಿರುವುದು. ವಾಸ್ತವಿಕವಾಗಿ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆಂದು ಮೇಲೆ ನೋಡಿದ್ದೀರಿ.

ಪರಿಸ್ಥಿತಿ ಇಷ್ಟು ಕೆಟ್ಟಿದ್ದರೂ, ನಮ್ಮ ಭಾರತೀಯ ನೀರೋ, ಮ್ಯಾನ್ ವರ್ಸಸ್ ವೈಲ್ಡ್‌ನಲ್ಲಿ ಕಾಡು ತಿರುಗುತ್ತಾ ಪಿಟೀಲು ಬಾರಿಸುತ್ತಿದ್ದಾರೆ. ಭಕ್ತರು ಭಜನೆ ಮುಂದುವರಿಸಿದ್ದಾರೆ. ಮಾರಿಕೊಂಡ ಮಾಧ್ಯಮಗಳು ಈ ಕುರಿತು ಬೆಳಕು ಚೆಲ್ಲದೇ ಇದ್ದರೂ, ಕೊನೆಗೂ ಅನಿವಾರ್ಯವಾಗಿ ಆರ್ಥಿಕ ಹಿಂಜರಿತ ಕುರಿತು ಬರೆಯಬೇಕಾಗಿಬಂದರೂ, ಪಿಳ್ಳೆನೆವಗಳನ್ನು ಹೇಳಿ ಸಮರ್ಥಿಸುತ್ತಿವೆ. ಜನರು ಮಾತ್ರ ಮೋದಿ ಜಾದುಗಾರರು ಖಾಲಿ ಟೊಪ್ಪಿಯಿಂದ ಮೊಲವನ್ನು ಹೊರತೆಗೆಯುತ್ತಾರೆ ಎಂದು ಕಾಯುತ್ತಿದ್ದಾರೆ. ಆದರೆ, ಮೊಲದ ಬದಲು ಅದರ ಅಸ್ತಿಪಂಜರ ಹೊರಬರುವ ಸಾಧ್ಯತೆ ಹೆಚ್ಚೆಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...