Homeಮುಖಪುಟಯಾವುದೇ ವ್ಯಕ್ತಿಯನ್ನು ಭಯೋತ್ಪಾದಕನೆಂದು ಕರೆಯಬಹುದಾದ ಯುಎಪಿಎ ತಿದ್ದುಪಡಿಗೆ ರಾಜ್ಯಸಭೆಯಲ್ಲಿಯೂ ಒಪ್ಪಿಗೆ

ಯಾವುದೇ ವ್ಯಕ್ತಿಯನ್ನು ಭಯೋತ್ಪಾದಕನೆಂದು ಕರೆಯಬಹುದಾದ ಯುಎಪಿಎ ತಿದ್ದುಪಡಿಗೆ ರಾಜ್ಯಸಭೆಯಲ್ಲಿಯೂ ಒಪ್ಪಿಗೆ

- Advertisement -
- Advertisement -

ಕಾನೂನುಬಾಹಿರ ಚಟುವಟಿಕೆಗಳ ತಡೆ (ತಿದ್ದುಪಡಿ) ಮಸೂದೆ (ಯುಎಪಿಎ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) (ತಿದ್ದುಪಡಿ) ಮಸೂದೆಗಳು ಇಂದು ರಾಜ್ಯಸಭೆಯಲ್ಲಿಯೂ ಸಹ ಪಾಸ್ ಆಗಿವೆ. ಮಸೂದೆಯ ತಿದ್ದುಪಡಿಯ ಪರವಾಗಿ 147 ಮತಗಳು ಬಿದ್ದರೆ ವಿರುದ್ಧವಾಗಿ ಕೇವಲ 42 ಮತಗಳು ಬಿದ್ದಿವೆ. ಈ ತಿದ್ದುಪಡಿಯಿಂದಾಗಿ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಪರಿಗಣಿಸುವ ಸ್ವಾತಂತ್ರವನ್ನು ಕೇಂದ್ರ ಸರ್ಕಾರ ಪಡೆದುಕೊಂಡಿದೆ.

ಮುಖ್ಯವಾಗಿ ತೃಣಮೂಲ ಕಾಂಗ್ರೆಸ್ಸಿನ ಮಹುವಾ ಮೋಯಿತ್ರಾ ಈ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವೇ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು, ಈ ಕಾನೂನಿನ ಬಲ ಪಡೆದು ನಡೆಸುವ ತನಿಖೆಯು ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದಿದ್ದಾರೆ. ಪ್ರತಿ ಪಕ್ಷಗಳು, ಅಲ್ಪಸಂಖ್ಯಾತರು, ಮಾನವ ಹಕ್ಕು ಹೋರಾಟಗಾರರನ್ನು ಈ ಮಸೂದೆ ಗುರಿಯಾಗಿಸಿಕೊಂಡಿದೆ. ಒಂದು ವೇಳೆ ಈ ಜನವಿರೋಧಿ ಮಸೂದೆಯನ್ನು ವಿರೋಧಿಸಿದರೆ ದೇಶದ್ರೋಹಿಗಳು ಎನ್ನುವ ಲೇಬಲ್ ಅಂಟಿಸಿಕೊಳ್ಳಬೇಕಾಗುತ್ತದೆ ಎಂಬ ಭಯದಿಂದ ಈ ಆಕ್ರಮಣವನ್ನು ಯಾರೂ ವಿರೋಧಿಸಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಯುಎಪಿಎ ಕಾಯಿದೆ ಜಾರಿಗೆ ಬಂದಲ್ಲಿ ಕೇಂದ್ರ ಸರಕಾರಕ್ಕೆ ಯಾವುದೇ ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸುವ ಅಧಿಕಾರ ಬರುತ್ತದೆ. ಬೇರೆ ಕೆಲವು ದೇಶಗಳಲ್ಲಿ ಸರಕಾರಗಳಿಗೆ ಇಂತಹ ಅಧಿಕಾರ ಇದೆಯೆಂದು ಹೇಳುವ ಮೂಲಕ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಪ್ರಕಾರ “ಭಯೋತ್ಪಾದಕ ಸಾಹಿತ್ಯ”ವನ್ನು ಮತ್ತು “ಭಯೋತ್ಪಾದಕ ತತ್ವ”ಗಳನ್ನು ಪ್ರಚಾರ ಮಾಡುವ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸಬೇಕು. ಈ ಎರಡು ಪದಗಳ ವ್ಯಾಖ್ಯಾನ ಸ್ಪಷ್ಟವಾಗಿಲ್ಲ.

ಈ ತಿದ್ದುಪಡಿಯು ಯಾವುದೇ ಸಾಕ್ಷ್ಯಾಧಾರ, ವಿಚಾರಣೆ ಅಥವಾ ನ್ಯಾಯಾಂಗದ ಕಣ್ಗಾವಲಿಲ್ಲದೆ ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡುತ್ತದೆ. ಈ ತಿದ್ದುಪಡಿ ಎಷ್ಟು ಅಸ್ಪಷ್ಟವಾಗಿದೆ ಎಂದರೆ ಯಾವುದೇ ಸಾಹಿತ್ಯವನ್ನು ಬರೆಯುವುದು, ಹೊಂದಿರುವುದು, ಯಾವುದೇ ಸಂಘಟನೆಗೆ ಸೇರುವುದು, ಒಟ್ಟಿನಲ್ಲಿ ಒಂದು ಚಿಂತನಾ ಪ್ರಕ್ರಿಯೆಯನ್ನೇ ಅಪರಾಧೀಕರಣಗೊಳಿಸಬಹುದು. ಇಂತಹ ಒಂದು ಹಣೆಪಟ್ಟಿ ಕಟ್ಟಲಾದರೆ, ಆ ಕಳಂಕವನ್ನು ಅಳಿಸುವುದು ಸಾಮಾನ್ಯ ವ್ಯಕ್ತಿಗೆ ಸಾಧ್ಯವೇ ಇಲ್ಲ. ಮೇಲ್ಮನವಿ ಪ್ರಕ್ರಿಯೆ ಅಷ್ಟು ಸಂಕೀರ್ಣವಾಗಿದೆ.

ಎನ್‍ಐಎ ತಿದ್ದುಪಡಿ ಮಸೂದೆಯು ಸೈಬರ್ ಅಪರಾಧಗಳೂ ಸೇರಿದಂತೆ ಯಾವುದೇ ಪ್ರಕರಣವು ಭಯೋತ್ಪಾದನೆಗೆ ಸಂಬಂಧಿಸಿದೆ ಎಂದು ನಿರ್ಧರಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡುತ್ತದೆ. ಅದಲ್ಲದೆ ತಾನು ಭಯೋತ್ಪಾದಕ ಎಂದು ಪರಿಗಣಿಸುವ ಯಾವುದೇ ವ್ಯಕ್ತಿಯ ಬೆನ್ನುಹತ್ತಿಹೋಗುವ ಅಧಿಕಾರವನ್ನೂ ಅದು ನೀಡುತ್ತದೆ.

ಭಾರತೀಯ ಸಂವಿಧಾನವು ವಿಧಿ 19ರ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ, ಸಭೆ ಸೇರುವ, ಸಂಘಟನೆಯ ಸ್ವಾತಂತ್ರ್ಯವನ್ನು ನೀಡಿದೆ. ವಿಧಿ 14 ಸಮಾನತೆಯ ಹಕ್ಕು ನೀಡುತ್ತದೆ. 19 ಮತ್ತು 21ನೇ ವಿಧಿಗಳು ಜೀವದ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳನ್ನು ನೀಡುತ್ತದೆ. ಇದನ್ನೇ ಸಂವಿಧಾನತಜ್ಞರು ‘ಸುವರ್ಣ ತ್ರಿಭುಜ’ ಎಂದು ಕರೆದಿದ್ದಾರೆ. ಈ ಮೂಲಭೂತ ಹಕ್ಕುಗಳನ್ನೇ ಕಸಿಯುವ ದಿಕ್ಕಿನಲ್ಲಿ ಇಟ್ಟ ಹೆಜ್ಜೆಗಳೇ ಈ ತಿದ್ದುಪಡಿಗಳು.

ಇಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಈ ಮಸೂದೆಯು ತಮ್ಮ ವಿರೋಧಿಗಳ ವಿರುದ್ಧ ದುರ್ಬಳಕೆಯಾಗುವ ಆತಂಕವನ್ನು ವ್ಯಕ್ತಪಡಿಸಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅಮಿತ್ ಶಾ ನಾಲ್ಕು ಹಂತದ ಪ್ರಕ್ರಿಯೆಯನ್ನು ಅಳವಡಿಸುತ್ತೇವೆ, ಮಾನವ ಹಕ್ಕು ಕಾರ್ಯಕರ್ತರಿಗೆ ತೊಂದರೆಯಾಗುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...